Homeಮುಖಪುಟಲತಾ ಮಂಗೇಶ್ಕರ್‌ : ನಿಮಗೆ ಗೊತ್ತಿರದ ಲತಾಜಿ ಬಗ್ಗೆ ವಿಶೇಷ ಮಾಹಿತಿ ಇಲ್ಲಿವೆ

ಲತಾ ಮಂಗೇಶ್ಕರ್‌ : ನಿಮಗೆ ಗೊತ್ತಿರದ ಲತಾಜಿ ಬಗ್ಗೆ ವಿಶೇಷ ಮಾಹಿತಿ ಇಲ್ಲಿವೆ

ಕನ್ನಡದ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತು ಸೇರಿದಂತೆ ಎರಡು ಗೀತೆಗಳನ್ನು ಹಾಡಿದ್ದಾರೆ.

- Advertisement -
- Advertisement -
  • ಲತಾಜಿ ಹುಟ್ಟು ಹೆಸರು ಹೇಮಾ.
  • ಲತಾ ಹಾಡುವಾಗ ಬರಿಗಾಲಲ್ಲಿರುತ್ತಾರೆ!
  • ಲತಾಜಿ ಮೊದಲು ಕಲಿತ ರಾಗ ಪೂರಿಯಾ ಧನಶ್ರೀ
  • ಆಯೆಗಾ ಆನೆವಾಲಾ ಗೀತೆ ಲತಾಜಿಗೆ ಬ್ರೇಕ್ ಕೊಟ್ಟ ಗೀತೆ.
  • ಗ್ರಾಮಾ-ಫೋನ್ ಕಂಪನಿ ಆಲ್ ಇಂಡಿಯಾ ಲತಾ ಬದಲು ಕಾಮಿನಿ ಎಂಬ ಹೆಸರು ಪ್ರಕಟಿಸಿತ್ತು.
  • ಲತಾಜಿ ಮೊದಲು ಖ್ಯಾತ ಪಾಕಿಸ್ತಾನಿ ಗಾಯಕಿ ನೂರ್ ಜಹಾನ್ ಅವರ ಶೈಲಿಯನ್ನು ಅನುಸರಿಸುತ್ತಿದ್ದರು.
  • ಮಧುಬಾಲಾ ಚಿತ್ರಕ್ಕೆ ಲತಾ ಅವರೇ ಕಡ್ಡಾಯವಾಗಿ ಆಡಬೇಕಿತ್ತು. ಯಾಕಂದ್ರೆ ಆಯೆಗಾ ಆನೆವಾಲಾ ಗೀತೆಯ ಮೂಲಕ ಇಬ್ಬರಿಗೂ ಬ್ರೇಕ್ ಕೊಟ್ಟಿತ್ತು.
  • ಲಂಡನ್ನಿನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ (1972) ಕಾರ್ಯಕ್ರಮದ ನೀಡಿದ ಮೊದಲ ಭಾರತೀಯ ಪ್ರಜೆ.
  • 1941ರ ಡಿಸೆಂಬರ್ 16 ರಂದು ಲತಾ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ಹಾಡಿದರು. ಇದನ್ನು ಕೇಳಿದ ತಂದೆ ದೀನಾನಾಥರು ತನ್ನ ಕುಟುಂಬವನ್ನು ಅತಿ ಎತ್ತರಕ್ಕೆ ಒಯ್ಯತ್ತಾಳೆ ಎಂದು ಅಭಿಮಾನದಿಂದ ಕಣ್ಣು ತುಂಬಿಕೊಂಡಿದ್ದರು.
  • 1984ರಲ್ಲಿ ಮಧ್ಯ ಪ್ರದೇಶ ಸರ್ಕಾರ ಲತಾಜಿ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಿದೆ. ಇದುವರೆಗೆ ಅನಿಲ್ ಬಿಸ್ವಾಸ್, ನೌಷಾದ್ ಅಲಿ, ಕಿಶೋರ್ ಕುಮಾರ್, ಜೈದೇವ್, ಮನ್ನಾ ಡೇ, ಆಶಾ ಭೋಂಸ್ಲೆ ಮತ್ತು ಖಯ್ಯಾಮ್ ಅವರಿಗೆ ಈ ಪ್ರಶಸ್ತಿ ಸಂದಿದೆ.
  • ಭಿನ್ನಾಭಿಪ್ರಾಯದಿಂದಾಗಿ ಸಚಿನ್ ದೇವ್ ಬರ್ಮನ್ ಅವರೊಂದಿಗೆ 1958ರಿಂದ 1962ರವರೆಗೆ ಲತಾಜಿ ಕೆಲಸ ಮಾಡಿರಲಿಲ್ಲ.
  • ಸತ್ಯಜಿತ್ ರೇ ಬಿಟ್ಟರೆ ಭಾರತ ರತ್ನ ಮತ್ತು ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ಪಡೆದ ಮತ್ತೊಬ್ಬ ವ್ಯಕ್ತಿ ಲತಾ ಮಂಗೇಶ್ಕರ್.
  • ಕನ್ನಡದ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತು ಸೇರಿದಂತೆ ಎರಡು ಗೀತೆಗಳನ್ನು ಹಾಡಿದ್ದಾರೆ. ಈ ಚಿತ್ರದಲ್ಲಿ ಮೊಹಮ್ಮದ್ ರಫಿ ಕೂಡ ಹಾಡಿದ್ದಾರೆ.
  • ಕೆ.ಎಲ್.ಸೈಗಲ್ ಹಾಡುಗಳೆಂದರೆ ಲತಾಜಿಗೆ ಪ್ರಾಣ. ತಂದೆ ಎಂದೂ ಮನೆಯಲ್ಲಿ ಚಿತ್ರಗೀತೆಗಳನ್ನು ಹಾಡಲು ಒಪ್ಪುತ್ತಿರಲಿಲ್ಲ. ಆದರೂ ಲತಾ ಕೆ.ಎಲ್.ಸೈಗಲ್ ಹಾಡು ಹಾಡುತ್ತಿದ್ದರೆ ತಂದೆ ಸುಮ್ಮನಿರುತ್ತಿದ್ದರು.
  • ಲತಾಜಿಗೆ ರೇಡಿಯೋ ಖರೀದಿಸಿದಾಗ 18 ವರ್ಷ. ಅದನ್ನು ಆನ್ ಮಾಡುತ್ತಿದ್ದಂತೆ ಅವರು ಕೇಳಿದ್ದ ಕೆ.ಎಲ್.ಸೈಗಲ್ ಅವರು ಸಾವಿನ ಸುದ್ದಿ. ತಕ್ಷಣ ರೇಡಿಯೋವನ್ನು ಹಿಂದಿರುಗಿಸಿದ್ದರು.
  • ಲತಾಜಿ ಅವರಿಗೆ ಸೈಗಲ್ ಅವರನ್ನು ಭೇಟಿ ಮಾಡಬೇಕು ಎಂಬ ಆಸೆ ಈಡೇರಲಿಲ್ಲ.
  • ಲತಾಜಿ ಶಾಲೆಯಲ್ಲಿ ಓದಲಿಲ್ಲ. ಅವರು ಅಕ್ಷರಗಳನ್ನು ಕಲಿತಿದ್ದು ತನ್ನ ಮನೆ ಕೆಲಸದವರಿಂದ.
  • ಲತಾಜಿ ಉರ್ದು ಜ್ಞಾನದ ಬಗ್ಗೆ ದಿಲೀಪ್ ಕುಮಾರ್ ಒಮ್ಮೆ ವ್ಯಂಗ್ಯವಾಡಿದ್ದರು. ಮರಾಠಿಗರಿಗೆ ಉರ್ದು ಪದಗಳ ಉಚ್ಛಾರಣೆಯೇ ಬರುವುದಿಲ್ಲ ಎಂದು ಕಟಕಿಯಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಲತಾ ಮೌಲ್ವಿಯೊಬ್ಬರನ್ನು ತಮ್ಮ ಮನೆಗೆ ಕರೆಸಿಕೊಂಡು ಉರ್ದು ಭಾಷೆಯನ್ನು ಹೇಳಿಸಿಕೊಂಡಿದ್ದರು.

ಇದನ್ನೂ ಓದಿ: ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ (92) ನಿಧನ

ತಂದೆ ನೆನಪಿನಲ್ಲಿ ಮಂಗೇಶ್ಕರ್ ಆಸ್ಪತ್ರೆ….

1989 ರಲ್ಲಿ ಮಂಗೇಶ್ಕರ್ ಅವರು ಲತಾ ಮಂಗೇಶ್ಕರ್ ಮೆಡಿಕಲ್ -ಫೌಂಡೇಶನ್ ಸ್ಥಾಪಿಸಿದರು. ಲತಾಜಿ ತಂದೆ ಪಂಡಿತ್ ದೀನಾನಾಥರು ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ, ಆರ್ಥಿಕ ಸಮಸ್ಯೆಗಳ ಕಾರಣದಿಂದ ನಿಧನರಾದರು. ಇದರಿಂದಾಗಿ ನೊಂದಿದ್ದ ಅವರು ಕುಟುಂಬ ಜ್ಞಾನ ಪ್ರಬೋದಿನಿ ಮೆಡಿಕಲ್ ಟ್ರಸ್ಟ್ ಜತೆ ಸೇರಿ ಪುಣೆಯಲ್ಲಿ ಮಾಸ್ಟರ್ ದೀನಾನಾಥ ಮಂಗೇಶ್ಕರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದರು. ಯಾವುದೇ ರೋಗಿ ವೈದ್ಯಕೀಯ ನೆರವಿಲ್ಲದೆ ಹಿಂತಿರುಗದಂತೆ ನೋಡಿಕೊಳ್ಳುವುದು ಈ ಆಸ್ಪತ್ರೆಯ ಧ್ಯೇಯವಾಯಿತು. ಸುಮಾರು 2,70,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ 10 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಇದರಲ್ಲಿ 450 ಹಾಸಿಗೆಗಳಿವೆ. ಸಿಟಿ ಸ್ಕ್ಯಾನ್, ಬ್ಲಡ್ ಬ್ಯಾಂಕ್, ಎಂಡೋಸ್ಕೋಪಿಕ್, ಲೇಸರ್ ಶಸ್ತ್ರಚಿಕಿತ್ಸೆ, ಮೂತ್ರ ಪಿಂಡ ಮರುಜೋಡಣೆ, 65 ಬೆಡ್ಗಳಿರುವ ಐಸಿಯು, 12 ಶಸ್ತ್ರಚಿಕಿತ್ಸೆ ಕೊಠಡಿಗಳು ಈ ಆಸ್ಪತ್ರೆಯಲ್ಲಿವೆ. ನರರೋಗ, ಹೃದ್ರೋಗ, ಮೂತ್ರಪಿಂಡ ಸಂಬಂಧಿತ ರೋಗ, ನೇತ್ರ, ಮಕ್ಕಳ ವಿಭಾಗ ಸೇರಿದಂತೆ ವಿವಿಧ ವಿಶೇಷ ಚಿಕಿತ್ಸಾ ವಿಭಾಗಗಳಿವೆ. ಹೋಮಿಯೋಪತಿ ಜತೆಗೆ ಆಯುರ್ವೇದ ಚಿಕಿತ್ಸೆಯೂ ಇಲ್ಲಿ ಲಭ್ಯವಿದೆ. ಅಂದ ಹಾಗೇ ಆಸ್ಪತ್ರೆಯಲ್ಲಿ ಶೇ. 30ರಷ್ಟು ಬೆಡ್ಗಳು ಉಚಿತವಾಗಿ ಲಭ್ಯ ಇವೆ.

ಒಂದ್ಸಾರಿ…
ಸತ್ಯ ಶಿವಂ ಸುಂದರಂ ಚಿತ್ರದ ಸುನೀ ಜೊ ಉನ್ಕೆ ಆನೆ ಕಿ ಆ ಹಾಟ್ ಹಾಡಿನ ರೆಕಾರ್ಡಿಂಗ್ ನಡೆಯುತ್ತಿತ್ತು. ಹಾಡಿನ ರೆಕಾರ್ಡಿಂಗ್ ಆರಂಭಕ್ಕೂ ಮುನ್ನ ಲತಾ ಚಿತ್ರದ ನಿರ್ದೇಶಕ ರಾಜ್ ಕಪೂರ್ ಅವರಿಗೆ ಸ್ಟುಡಿಯೋದತ್ತ ಬರದಿರುವಂತೆ ಸೂಚಿಸಿಬಿಟ್ಟರು. ಕಾರಣವಿಷ್ಟೇ, ರಾಜ್ ಕಪೂರ್ ತುಂಟರು. ಹಾಡುವ ಏಕಾಗ್ರತೆ ಹಾಳು ಮಾಡುತ್ತಾರೆಂಬ ಕಾರಣಕ್ಕೆ ಸಲಿಗೆಯಿಂದಲೇ ತಾಕೀತು ಮಾಡಿದ್ದರು. ಆದರೆ ರಾಜ್ ಕಪೂರ್ ಮಾತು ಕೇಳುವವರೆ ಅಲ್ಲ. ಸ್ಟುಡಿಯೋದೊಳಕ್ಕೆ ಬೆಕ್ಕಿನಂತೆ ಬಂದ ರಾಜ್ ಸಾಬ್ ಹಾಡು ಸಿದ್ಧತೆಯಲ್ಲಿದ್ದ ಲತಾ ಪಕ್ಕೇ ಬಂದು ನಿಂತು, ಹಾಡಿಗೆ ಒಂದು ಆಲಾಪ ಸೇರಿಸಿ ಬಿಡಿ ಲತಾಜಿ ಎಂದು ಕೋರಿಕೆ ಮುಂದಿಟ್ಟರು. ಲತಾಜಿ ರೇಗಿ ಬಿಟ್ಟರು. ಕೋಪದಲ್ಲಿ, ಬರೀ ಆಲಾಪನೇ ಹಾಡಿ ರೆಕಾರ್ಡ್ ಮಾಡಿಬಿಡ್ತೀನಿ. ಅದೇ ಹಾಡನ್ನು ರಿಲೀಸ್ ಮಾಡುವಿರಂತೆ… ಅಂದ್ರು. ಸ್ಟುಡಿಯೋದಲ್ಲಿದವರೆಲ್ಲಾ ಇಡೀ ಸನ್ನಿವೇಶ ನೋಡಿ ಜೋರಾಗಿ ನಕ್ಕುಬಿಟ್ಟರು.

ಈ ಘಟನೆಯನ್ನು ನೆನಪಿಸಿಕೊಂಡವರು ಗೀತ ರಚನಕಾರ ಗುಲ್ಜಾರ್ :
ದಿಲ್ಸೆ ಚಿತ್ರದ `ಜಿಯಾ ಜಲೇ ಜಾನ್ ಜಲೇ’ ಗೀತೆಯ ರೆಕಾರ್ಡಿಂಗ್ ಸಂದರ್ಭ. ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಲತಾ ಮೊದಲ ಬಾರಿಗೆ ಹಾಡುತ್ತಿದ್ದರು. ರೆಕಾರ್ಡಿಂಗ್ ರೆಹಮಾನ್ ಸ್ಟುಡಿಯೋದಲ್ಲೇ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಲತಾಜಿ ಸ್ಟುಡಿಯೋಕ್ಕೆ ಬಂದರು. ಸ್ಟುಡಿಯೋ ಅತ್ಯಾಧುನಿಕ ಸಂಗೀತ ಸಾಧನಗಳಿಂದ ಕೂಡಿತ್ತು. ಜತೆಗೆ ಪ್ರಶಾಂತವಾಗಿತ್ತು. ಗಾಯಕರು ಹಾಡಲು ನಿಲ್ಲುವ ಸ್ಥಳ ಗಾಜಿನಿಂದ ಮಾಡಿದ ಕೋಣೆ, ಅಲ್ಲಿಂದ ಏನೂ ಕಾಣಿಸುತ್ತಿರಲಿಲ್ಲ. ಲತಾಜಿಗೆ ಅಲ್ಲಿ ನಿಂತುಹಾಡುವುದು ಕಷ್ಟವೆನಿಸಿತು. `ಇಲ್ಲಿ ನಾನು ಯಾರಿಗಾಗಿ ಹಾಡುತ್ತಿದ್ದೀನಿ’ ಎಂದು ಕೇಳಿದರು. ಇದನ್ನು ಗುಲ್ಜಾರ್ ಮುಂದೆ ಹೇಳಿದರು. ಒಬ್ಬರು ಮಾತ್ರ ನಿಂತು ಹಾಡಬಹುದಾಗಿದ್ದ ಆ ಪುಟ್ಟ ಸ್ಥಳದಲ್ಲಿ ಗುಲ್ಜಾರ್ ಒಂದು ಪುಟ್ಟ ಸ್ಟೂಲ್ ಹಾಕಿಕೊಂಡು ಕೂತರು. ಅದ್ಭುತವಾದ ಹಾಡೊಂದು ಚಿತ್ರರಂಗದಲ್ಲಿ ದಾಖಲಾಯಿತು.

ದೀನಾನಾಥರು ಬಲವಂತ್ ಸಂಗೀತ ಮಂಡಳಿ ನಡೆಸುತ್ತಿದ್ದರು. ಅಂದು ಸುಭದ್ರಾ ನಾಟಕದ ಪ್ರದರ್ಶನಕ್ಕೆ ಎಲ್ಲ ಸಿದ್ಧತೆಗಳು ಮುಗಿದು ಪ್ರದರ್ಶನಕ್ಕೆ ಸಿದ್ಧರಾಗಿದ್ದರು. ನಾರದನ ಪಾತ್ರ ಮಾಡಬೇಕಿದ್ದ ಇದ್ದಕ್ಕಿದ್ದಂತೆ ಅಸ್ವಸ್ಥನಾಗಿದ್ದಾನೆಂದು ಪಾತ್ರ ನಿರ್ವಹಿಸಲು ಸಾಧ್ಯವಿಲ್ಲವೆಂಬ ಸುದ್ದಿ ದೀನಾನಾಥರಿಗೆ ಮುಟ್ಟಿತು. ಏನು ಮಾಡಬೇಕೆಂದು ತೋಚದೆ ಕೂತ ದೀನಾನಾಥರ ಮುಂದೆ ಬಂದು ನಿಂತಿದ್ದು ಏಳು ವರ್ಷದ ಲತಾ. ನಾನು ನಾರದನ ಮಾತ್ರ ಮಾಡ್ತೀನಿ. ನಂಗೆ ಎಲ್ಲ ಮಾತು, ಹಾಡು ನೆನಪಿದೆ ಎಂದು ಅಪ್ಪನಿಗೆ ಹೇಳಿದಳು. ಲತಾಗೆ ಸಂಗೀತ ಗೊತ್ತು ಎಂಬ ಬಗ್ಗೆ ದೀನಾನಾಥರಿಗೆ ಅನುಮಾನವಿರಲಿಲ್ಲ. ಆದರೆ ನಟನೆ?

ಲತಾ ಮಂಗೇಶ್ಕರ್ ಎಲ್ಲರಂತೆ ಓದಲಿಲ್ಲ, ಶಾಲೆಗೆ ಹೋಗಲಿಲ್ಲ. ಅದಕ್ಕೆ ಎರಡು ಕಾರಣಗಳು ಚಾಲ್ತಿಯಲ್ಲಿವೆ. ಲತಾ ಮಂಗೇಶ್ಕರ್ ಶಾಲೆಗೆ ಹೋದ ದಿನವೇ ತರಗತಿಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡಲು ಶುರು ಮಾಡಿದ್ದರಂತೆ. ಸಿಟ್ಟಿಗೆದ್ದ ಮೇಷ್ಟ್ರು ಲತಾರನ್ನು ಶಾಲೆಯಿಂದ ಹೊರ ಹಾಕಿದರಂತೆ. ಇನ್ನೊಂದು; ಲತಾ, ತಮ್ಮ ತಂಗಿ ಆಶಾರನ್ನು ಬಿಟ್ಟಿರುತ್ತಿರಲಿಲ್ಲ. ಹಾಗಾಗಿ ಶಾಲೆಗೆ ಆಕೆಯನ್ನು ಜತೆಗೆ ಕರೆದೊಯ್ಯುತ್ತಿದ್ದರು. ಮೇಷ್ಟ್ರು, ಲತಾರನ್ನು ನಿಲ್ಲಿಸಿ ಒಬ್ಬರ ಶುಲ್ಕದಲ್ಲಿ ಇಬ್ಬರಿಗೆ ಪ್ರವೇಶ ಕೊಡಲು ಸಾಧ್ಯವಿಲ್ಲ ಎಂದು ಶಾಲೆಯಿಂದ ಹೊರ ಹಾಕಿದರು. ಹಾಗಾಗಿ ಲತಾಜಿ ಮತ್ತೆಂದು ಶಾಲೆ ಮೆಟ್ಟಿಲು ಹತ್ತಲೇ ಇಲ್ಲ.

ಅಂದು ತಂದೆ ದೀನಾನಾಥರ ಶ್ರಾದ್ಧ. ಪಿಂಡದಾನವಾದ ನಂತರ ಊಟ. ಹದ್ದು (ಕಾಗೆಯಲ್ಲ) ಪಿಂಡ ತಿನ್ನುವವರೆಗೆ ಯಾರೂ ಊಟ ಮಾಡುವಂತಿಲ್ಲ ಅಂತ. ತುಂಬಾ ಹೊತ್ತು ಕಾದರು ಹದ್ದು ಬರುವುದಿಲ್ಲ. ಆಗ ಪುರೋಹಿತರು ನೀವು ಏನೋ ಪಾಪ ಮಾಡಿರಬೇಕು. ಅದಕ್ಕೇ ಪಿಂಡದಾನ ಆಗುತ್ತಿಲ್ಲ ಎಂದರು. ಆತ ಲತಾ ಮತ್ತು ಸೋದರಿ ಮಾಡಿದ ಪ್ರತಿಜ್ಞೆಗಳು ಇವು : ನಾವೆಲ್ಲರೂ ಪ್ರತಿ ದಿನ ತಪ್ಪದೇ ಸಂಗೀತಾಭ್ಯಾಸ ಮಾಡುತ್ತೇವೆ. ಬಾಬಾ ಶ್ರಾದ್ಧವನ್ನು ಪ್ರತಿ ವರ್ಷ ತಪ್ಪದೇ ಮಾಡುತ್ತೇವೆ. ಪ್ರತಿ ವರ್ಷ ಬಾಬಾ ಪುಣ್ಯತಿಥಿ ದಿನ ಸಂಗೀತ ಕಾರ್ಯಕ್ರಮ ನೀಡುತ್ತೇವೆ. ನಾವೆಲ್ಲರೂ ಸಂಗೀತವನ್ನಲ್ಲದೆ ಬೇರೆ ಯಾವುದೇ ವೃತ್ತಿಯನ್ನು ಕೈಗೊಳ್ಳುವುದಿಲ್ಲ . ನಂತರ ಹದ್ದು ಬಂದು ಪಿಂಡದತ್ತ ಹಾರಿ ಬಂತು.

ಒಮ್ಮೆ ಕೋರಸ್ನಲ್ಲಿ ಹಾಡಿದ್ದರು!

ಬಾಲಿವುಡ್ ಮಧುರಗೀತೆಗಳ ರಾಣಿ, ಭಾರತದ ನೈಟಿಂಗೇಲ್, ಸಹಸ್ರಾರು ಗೀತೆಗಳ ರಾಣಿ ಲತಾ ಮಂಗೇಶ್ಕರ್ ಕೋರಸ್ ಹಾಡಿದ್ದರೆ? ಹೌದು. ಒಂದು ದಿನ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮುಗಿಸಿ ಹೊರಬರುತ್ತಿದ್ದಂತೆ ಮುಂದೆ ಅನಿಲ್ ಬಿಸ್ವಾಸ್ ಅವರ ಸಂಗೀತ ನಿರ್ದೇಶನದ ಗೀತೆಯೊಂದರ ರೆಕಾರ್ಡಿಂಗ್ ನಡೆಯುತ್ತಿದೆ ಎಂದು ಲತಾರಿಗೆ ಗೊತ್ತಾಯಿತು. ಅನಿಲ್ ಲತಾ ಅವರ ಮೆಚ್ಚಿನ ನಿರ್ದೇಶಕರು. ಅನಿಲ್ ಅವರು ಲತಾರನ್ನು `ಲತಿಕೆ ‘ ಎಂದು ಕರೆಯುವಷ್ಟು ಆಪ್ತರಾಗಿದ್ದರು. ಹಾಗಾಗಿ ಅವರನ್ನೊಮ್ಮೆ ಮಾತಾಡಿಸಿಕೊಂಡು ಹೋಗೋಣವೆಂದು ಲತಾ ಸ್ಟುಡಿಯೋಗೆ ಬಂದರು. ಸ್ಟುಡಿಯೋದಲ್ಲಿ ಬಡೀ ಬಹು ಚಿತ್ರದ ’ದುನಿಯಾ ಸೆ ನ್ಯಾರಿ ಗೋರಿ ತೋರಿ ನಸುರಾಲ್’ ಗೀತೆಯ ರೆಕಾರ್ಡಿಂಗ್ ನಡೆಯುತ್ತಿತ್ತು. ರೆಕಾರ್ಡಿಂಗ್ ಇನ್ನೇನು ಶುರುವಾಗಬೇಕು ಲತಾ ಸ್ಟುಡಿಯೋ ಪ್ರವೇಶಿಸಿದರು. ಅನಿಲ್ ಅವರನ್ನು ನೋಡುತ್ತಿದ್ದಂತೆ, ` ಲತಿಕೆ ಇಲ್ಲೇಕೆ ನಿಂತಿದ್ದೀಯಾ? ಬಾ ಕೋರಸ್ ಸೇರಿಸಿಕೋ.. ನೀನು ಅವರ ಜತೆಗೆ ಹಾಡು..’ ಎಂದರು.
ಲತಾ ಅದೇ ಮೊದಲ ಬಾರಿಗೆ ಕೋರಸ್ನಲ್ಲಿ ಹಾಡಿದರು. ಅದೇ ಕೊನೆಯ ಬಾರಿಯೂ ಆಯಿತು.

ಇದನ್ನೂ ಓದಿ: ಭಾರತದ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಅಗ್ರ ಸ್ಥಾನ

ಅಪ್ಪನಂತೆ ಮಗಳು!

ಪಂಡಿತ್ ದೀನಾನಾಥ ಅವರ ಪ್ರಭಾವ ಲತಾ ಮಂಗೇಶ್ಕರ್ ಅವರ ಮೇಲೆ ಅಪಾರ. ದೀನಾನಾಥರು ಶಾಸ್ತ್ರೀಯ ಯ ಕಲಿತು ಸಂಗೀತ ಕಾರ್ಯಕ್ರಮಗಳನ್ನು, ಬಾಲ್ ಮಂಗೇಶ್ವರ್ ನಾಟಕ ಮಂಡಳಿಯನ್ನು ನಡೆಸುತ್ತಾ ವೃತ್ತಿಯಲ್ಲಿ ವೈಯಕ್ತಿಕ ಜೀವನದಲ್ಲಿ ಉನ್ನತಿಯನ್ನು ಕಂಡರು. ದೀನಾನಾಥರು ಅತ್ಯಂತ ಪ್ರತಿಭಾವಂತರು, ಹಲವು ಆಸಕ್ತಿಗಳನ್ನು ಹೊಂದಿದ್ದ ಅಪಾರ ಕ್ರಿಯಾಶೀಲರಾಗಿದ್ದ ವ್ಯಕ್ತಿ. ಈ ವ್ಯಕ್ತಿತ್ವ ಲತಾರ ಮೇಲೆ ಪ್ರಭಾವ ಬೀರಿತು. ಹಿರಿಯ ಮಗಳಾದ ಲತಾಳನ್ನು ದೀನಾನಾಥ ಮಗನಂತೆ ಬೆಳೆಸಿದರು. ದೀನಾನಾಥರೆ ಲತಾಜಿಯ ಮೊದಲ ಗುರು. ಪೂರಿಯಾ ಧನಶ್ರೀ ರಾಗವನ್ನು ತಂದೆಯಿಂದಲೇ ಕಲಿತರು. ಪ್ರತಿ ದಿನ ಬೆಳಗ್ಗೆ 5 ಗಂಟೆಗೆ ಎದ್ದು ಬಿಡುತ್ತಿದ್ದ ದೀನಾನಾಥರು ಲತಾ ಮತ್ತು ಮತ್ತೊಬ್ಬ ಮಗಳಾದ ಮೀನಾರನ್ನು ಎಬ್ಬಿಸುತ್ತಿದ್ದರು. ಪ್ರಾತರ್ವಿತೆಗಳನ್ನು ಪೂರೈಸಿಗೆ ಅಭ್ಯಾಸಕ್ಕೆ ಕೂರುತ್ತಿದ್ದರು. ದೀನಾನಾಥರು ತಮ್ಮದೇ ಆದ ರಚನೆಯನ್ನು ಈ ಸಂದರ್ಭದಲ್ಲಿ ಹೇಳಿಕೊಡುತ್ತಿದ್ದರು. ತುಂಬಾ ವರ್ಷಗಳ ನಿರಂತರವಾಗಿ ತಂದೆಯ ಮಾರ್ಗದರ್ಶನದಲ್ಲಿ ಲತಾ ಸಂಗೀತಾಭ್ಯಾಸ ನಡೆಸಿದರು. ದೀನಾನಾಥರ ನಿಧನನಾಂತರ ಬೇರೆ ಸಂಗೀತಗಾರರ ಬಳಿ ಕಲಿಯಲು ಲತಾ ಹಿಂದೇಟು ಹಾಕಿದ್ದರು. ತಂದೆ ಕಲಿಸಿದ್ದು ಮರೆತು ಹೋದೀತೆಂಬ ಕಾರಣಕ್ಕೆ! ವೃತ್ತಿ ಜೀವನದಲ್ಲಿ ಕುಸಿತ ಕಾಣುತ್ತಿದ್ದ ಹೊತ್ತಿನಲ್ಲಿ ಲತಾ ಅವರೇ ಅಪ್ಪನಿಗೆ ಹೆಗಲು ಕೊಟ್ಟು ಅವರಿಗೆ ಧೈರ್ಯ ತುಂಬಿದ್ದರು. ಆಕೆಯ ವ್ಯಕ್ತಿತ್ವವನ್ನು ಹುಟ್ಟುವ ಮೊದಲೇ ಮನಗಂಡಿದ್ದ ದೀನಾನಾಥರು ಲತಾ ತುಂಬಾ ಎತ್ತರಕ್ಕೆ ಬೆಳೆಯುತ್ತಾಳೆ ಎಂದು ಯಾವಾಗಲೂ ಹೇಳುತ್ತಿದ್ದರು.
ತಂದೆ ಹಲವು ಗುಣಗಳು ಲತಾರಿಗೆ ಬಳುವಳಿಯಾಗಿ ಬಂದಿತ್ತು. ದೀನಾನಾಥರಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ಹಾಗೆಯೇ ದೀನಾನಾಥರು ತಿಂಡಿಪೋತರು. ಲತಾ ಕೂಡ ತಿಂಡಿಪೋತರು.

ನೆಹರು ಕಣ್ಣೀರು ಹಾಕಿದ್ದರು…!

1963 ಜನವರಿ 27. ಇಂಡೋ ಚೀನಾ ಯುದ್ಧದಲ್ಲಿ ಮಡಿದ ಯೋಧರ ಗೌರವಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಜವಾಹರ್ ಲಾಲ್ ನೆಹರು ಇದ್ದರು. ಲತಾ ಮಂಗೇಶ್ಕರ್ ಈ ಕಾರ್ಯಕ್ರಮದಲ್ಲಿ ಪ್ರದೀಪ್ ಅವರು ಬರೆದ, ಸಿ.ರಾಮಚಂದ್ರ ಅವರು ಸಂಗೀತ ಸಂಯೋಜಿಸಿದ್ದ`ಏ ಮೇರೆ ವತನ್ ಕೆ ಲೋಗೋ..’ ಗೀತೆಯನ್ನು ಹಾಡಿದ್ದರು. ಎಂದಿನಂತೆ ನೆರೆದ ಸಭಿಕರೆಲ್ಲಾ ಹುತಾತ್ಮರಾದ ಯೋಧರ ನೆನೆದು ರೋಮಾಂಚನಗೊಂಡರು. ಅದು ಲತಾಜಿ ಹಾಡಿನಿಂದಾದ ಮ್ಯಾಜಿಕ್. ಇನ್ನೇನು ವೇದಿಕೆಯಿಂದೆಳೆದು ಹೊರಡುವವರಿದ್ದ ಲತಾಜಿಯನ್ನು ನಿರ್ಮಾಪಕ ಮೆಹಬೂಬ್ ಖಾನ್ `ಒಂದು ನಿಮಿಷ ಬನ್ನಿ’ ಎಂದು ಸೀದಾ ಪಂಡಿತ್ ನೆಹರೂ ಅವರ ಬಳಿ ಕರೆದೊಯ್ದರು. ನೆಹರು ಗದ್ಗಿತರಾಗಿದ್ದರು. ಕಣ್ಣು ತುಂಬಿದ್ದವು.  ’ಎಂಥ ನಿರಭಿಮಾನಿಯ ಹೃದಯದಲ್ಲೂ ದೇಶಪ್ರೇಮ ಬಡಿದೆಬ್ಬಿಸುವ ಗೀತೆ. ನೀವದನ್ನು ತುಂಬಾ ಸುಂದರವಾಗಿ ಹಾಡಿದಿರಿ’ ಎಂದರು. ತಮ್ಮ ಬದುಕಿನ ಅತ್ಯಂತ ಶ್ರೇಷ್ಠ ಗಳಿಗೆ ಇದಾಗಿತ್ತು ಎಂದು ಲತಾಜಿ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು.

ಕುಮಾರಿ ಲತಾ ಮಂಗೇಶ್ಕರ್!

ಹೌದು ಲತಾಜಿ ಮದುವೆಯಾಗಿರಲಿಲ್ಲ. ಈ ಬಗ್ಗೆ ಹಲವು ಸಂದರ್ಭಗಳಲ್ಲಿ ಪತ್ರಕರ್ತರು, ಚಿತ್ರ ಜಗತ್ತಿನ ಆಪ್ತರು ಲತಾಜಿಯನ್ನು ಪ್ರಶ್ನಿಸಿದ್ದರು. ಲತಾ ಮಂಗೇಶ್ಕರ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಗಾಳಿ ಸುದ್ದಿಗಳು ಒಂದು ಕಾಲದಲ್ಲಿ ಚಾಲ್ತಿಯಲ್ಲಿದ್ದವು. ಆದರೆ ಈ ಬಗ್ಗೆ ಒಮ್ಮೆ ಸ್ಪಷ್ಟನೆ ಕೊಟ್ಟಿದ್ದರು. `ಮದುವೆ ನನ್ನ ಹಣೆಬರಹದಲ್ಲಿ ಇರಲಿಲ್ಲ ಅಷ್ಟೆ. ಚಿಕ್ಕವಳಿದ್ದಾಗ ಇಡೀ ಕುಟುಂಬವನ್ನು ಸಾಕಬೇಕಾದ ಬಹುದೊಡ್ಡ ಹೊಣೆಗಾರಿಕೆ ನನ್ನ ಮೇಲಿತ್ತು. ಅನಂತರ ಹೀಗೆ ಕಾಲ ಸರಿದು ಹೋಯಿತು. ಮೊದಲೇ ಹೇಳಿದೆನಲ್ಲ ಕೆಲವು ವಿಷಯಗಳು ನಮ್ಮ ಕೈಯಲ್ಲಿರುವುದಿಲ್ಲ. ಎಲ್ಲಾ ವಿಧಿಯಾಟ’. ಆದರೆ ಅವರಿಗೆ ಕುಜದೋಷವಿತ್ತು. ಹಾಗಾಗಿ ಕಂಕಣ ಬಲ ಕೂಡಿ ಬರಲಿಲ್ಲ ಎಂದು ಒಂದು ವಾದ ಹೇಳುತ್ತದೆ.

ಹರ್ಡೇಕರ್ ಮಂಗೇಶ್ಕರ್ ಆಗಿದ್ದು..

ಲತಾ ಮಂಗೇಶ್ಕರ್ ಅವರು ಲತಾ ಹರ್ಡೇಕರ್ ಎಂದೇ ಜನಪ್ರಿಯರಾಗಬೇಕಿತ್ತು. ತಂದೆ ದೀನಾನಾಥರು ಹೆಸರು ಅದಕ್ಕೆ ಅವಕಾಶ ಕೊಡಲಿಲ್ಲ. ದೀನಾನಾಥರು ಸ್ವತಂತ್ರ ಮನೋಭಾವದ ವ್ಯಕ್ತಿ. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಆಪಾರ ಹೆಸರು ಗಳಿಸಿಕೊಂಡ ದೀನಾನಾಥರು ತಮ್ಮ ತಂದೆಯ ಹೆಸರಿನೊಂದಿಗೆ ಹರ್ಡೇಕರ್ ಕುಟುಂಬದ ಹೆಸರನ್ನೇ ಉಳಿಸಿಕೊಂಡಿದ್ದರು. ತಮ್ಮದೇ ಗುರುತನ್ನು ಉಳಿಸಿಹೋಗಬೇಕೆಂದು ನಿರ್ಧರಿಸಿದ ದೀನಾನಾಥರು ಬೇರೆ ಹೆಸರನ್ನು ತಮ್ಮ ಹೆಸರಿನೊಂದಿಗೆ ಜೋಡಿಸಿಕೊಳ್ಳಲು ನಿರ್ಧರಿಸಿದರು.
ಗೋವಾದ ಮಂಗೇಶ ದೀನಾನಾಥರ ಹುಟ್ಟೂರು, ಮಂಗೇಶಿ ಅವರ ಕುಲದೇವರು. ಹಾಗಾಗಿ ಅದನ್ನೇ ತಮ್ಮ ಹೆಸರಿನೊಂದಿಗೆ ಜೋಡಿಸಿಕೊಳ್ಳಲು ನಿರ್ಧರಿಸಿ ದೀನಾನಾಥ ಹರ್ಡೇಕರ್ ಎಂದಿದ್ದ ಹೆಸರನ್ನು ದೀನಾನಾಥ ಮಂಗೇಶ್ಕರ್ ಎಂದು ಬದಲಿಸಿಕೊಂಡರು.

ಗಿನ್ನೆಸ್ ದಾಖಲೆ ವಿವಾದ…

ಅತಿ ಹೆಚ್ಚು ಹಾಡುಗಳನ್ನು ಹಾಡಿದವರು ಯಾರು? ಮಹಮ್ಮದ್ ರಫಿನಾ? ಲತಾ ಮಂಗೇಶ್ಕರಾ?
1974ರಲ್ಲಿ ಲತಾ ಮಂಗೇಶ್ಕರ್ ಹೆಸರು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಯಿತು. 1948 ರಿಂದ 1974ರ ಅವಧಿಯಲ್ಲಿ ಭಾರತದ 20 ಭಾಷೆಗಳಲ್ಲಿ 25 ಸಾವಿರ ಹಾಡುಗಳನ್ನು ಹಾಡಿದ್ದಾರೆಂದು ಗಿನ್ನೆಸ್ ಸಂಸ್ಥೆ ಪ್ರಮಾಣ ಪತ್ರ ನೀಡಿತು. ಭಾರತ ಚಿತ್ರರಂಗದಲ್ಲಿ ಇಷ್ಟು ಸಂಖ್ಯೆಗಳನ್ನು ಯಾರೂ ಹಾಡಿಲ್ಲವೆಂದು ಗಿನ್ನೆಸ್ ಸಂಸ್ಥೆ ಘೋಷಿಸಿತು. ಇದಕ್ಕೆ ಗಾಯಕ ಮಹಮ್ಮದ್ ರಫಿ ಅವರಿಂದ ತಕರಾರು ವ್ಯಕ್ತವಾಯಿತು. ತಾನು 28 ಸಾವಿರ ಹಾಡುಗಳನ್ನು ಹಾಡಿರುವುದಾಗಿ ರಫಿ ಅವರು ವಾದಿಸಿದರು. ರಫಿ ನಿಧನಾನಂತರ 1984 ಆವೃತ್ತಿಗೆ ಗಿನ್ನೆಸ್ 1987ರ ವರೆಗೆ 30 ಸಾವಿರ ಹಾಡುಗಳನ್ನು ಹಾಡಿದ ಗಾಯಕಿ ಲತಾಜಿ ಎಂದು ಪ್ರಕಟಿಸಿತು. ಜತೆಗೆ ರಫಿ ಅವರ ಹೇಳಿಕೆಯನ್ನು ದಾಖಲಿಸಿತು. ಆದರೆ 1991ರವರಗೆ ಇದು ಗಿನ್ನೆಸ್ ಪುಸ್ತಕದಲ್ಲಿ ಪ್ರಕಟವಾಗಿರಲಿಲ್ಲ.

ಸಾವಿರಾರು ಹಾಡುಗಳು

ಲತಾ ಮಂಗೇಶ್ಕರ್ ಹಾಡುಗಳಿಗೆ ಲೆಕ್ಕವಿಲ್ಲ. ಕನ್ನಡದ ಸಂಗೊಳ್ಳಿ ರಾಯಣ್ಣ ಚಿತ್ರದ ಬೆಳ್ಳನೆ ಬೆಳಗಾಯಿತು ಗೀತೆ ಸೇರಿದಂತೆ ಭಾರತದ 20 ಭಾಷೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಈ ಪೈಕಿ ನೂರಾರು ಹಾಡುಗಳು ಎಂದಿಗೂ ಮರೆಯದ ಗೀತೆಗಳ ಸಾಲಿನಲ್ಲಿವೆ. ಅಂಥ ಗೀತೆಗಳ ಪೈಕಿ ಕೆಲವು ಇಲ್ಲಿವೆ..

ಆಯೆಗಾ ಆನೆವಾಲಾ… ಮಹಲ್ (1949)
ಆಜಾ ರೇ ಪರದೇಸಿ… ಮಧುಮತಿ (1958)
ಪ್ಯಾರ್ ಕಿಯಾ ತೊ ಡರ್ನಾ ಕ್ಯಾ… ಮುಗಲ್ ಏ ಆಜಂ (1960)
ಅಲ್ಲಾ ತೇರೋ ನಾಮ್… ಹಮ್ ದೋನೋ (1961)
ಕಹೀ ದೀಪ್ ಜಲೆ…ಬೀಸ್ ಸಾಲ್ ಬಾದ್ (1962)
ಆಪ್ ಕಿ ನಝರೋನೆ ಸಮ್ಝಾ…ಅನ್ಪಡ್ (1962)
ಲಗ್ ಜಾ ಗಲೇ…. ವೋ ಕೌನ್ ಥಿ (1964)
ಆಜ್ ಫಿರ್ ಜೀನೆ ಕಿ ತಮನ್ನಾ… ಗೈಡ್ (1965)
ತೂ ಜಹಾ ಜಹಾ ಚಲೇಗಾ… ಮೇರಾ ಸಾಯಾ(1966)
ಹೋಂಟೋ ಪೆ ಐಸಿ ಬಾತ್… ಜ್ಯೂಯೆಲ್ ತೀ (1967)
ಬಿಂದಿಯಾ ಚಮ್ಕೇಗಿ… ದೋ ರಾಸ್ತೆ (1969)
ಇನ್ಹಿ ಲೋಗೋನೆ… ಪಾಕಿಝಾ (1971)
ಚಲ್ತೇ ಚಲ್ತೇ… ಪಾಕಿಝಾ (1971)
ಖಿಲ್ತೇ ಹೈ ಗುಲ್ ಯಹಾ.. ಶರ್ಮೀಲಿ(1971)
ಪಿಹಾ ಬಿನಾ… ಅಭಿಮಾನ್ (1973)
ಬೀತಿ ನ ಬಿತಾಯಿ ರೈನಾ… ಪರಿಚಯ್ (1975)
ಸತ್ಯಂ ಶಿವಂ ಸುಂದರಂ…ಸತ್ಯಂ ಶಿವಂ ಸುಂದರಂ (1981)
ಮೈ ಸೋಲಾ ಬರಸ್ ಕಿ.. ಏಕ್ ದುಜೆ ಕೇಲಿಯೇ(1981)
ಜಿಯಾ ಜಲೇ… ದಿಲ್ ಸೆ
ಇಕ್ ತು ಹೀ ಭರೋಸಾ… ಪುಕಾರ್
ಏ ಮುಲಕಾತ್ ಇಕ್ ಬಹಾನಾ ಹೈ…
ಆ.. ಜಾನೇ ಜಾ..
ಆಜ್ ಮದ್ ಹೋಶ್ ಹುವಾ..
ಅಜೀಬ್ ದಾಸ್ತಾ ಹೈ ಏ…
ಚಂದನ್ ಸ ಬದನ್…
ದಿಲ್ತೋ ಹೈ ದಿಲ್ …
ಖಿಲ್ ಥೆ ಗುಲ್ ಯಹಾ..
ಮೇರೆ ನೈನಾ.. ಸಾವನ್ ಬಾಧೊ…
ಯಾದ್ ಕಿಯಾ ದಿಲ್ ನೆ ಕಹಾ ಹೋ..
ಯಾದ್ ಆ ರಹಾ ಹೈ..
ಮೆಹಂದಿ ಲಗಾಕೆ ರಖ್ ನಾ..
ಜಬ್ ಹಮ್ ಜವಾ ಹೋಂಗೆ…
ದುಶ್ಮನ್ ನ ಕರೆ ದೋಸ್ತ್ ನೆ..
ದಿಲ್ ತೊ ಪಾಗಲ್ ಹೈ..


ಇದನ್ನೂ ಓದಿ: ನುಡಿ ನೆನಪು; ಕಪ್ಪು ಮೊಗದ ಸುಂದರ – ಸಿಡ್ನಿ ಪಾಟಿಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...