Homeಮುಖಪುಟವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

ವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

- Advertisement -
- Advertisement -

ವಿಧಾನ ಪರಿಷತ್ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಅದರ ಭಾನಗಡಿಗಳ ಬಗ್ಗೆ ಆಕ್ರೋಶ, ಅದರ ಪ್ರಸ್ತುತ್ತೆಯ ಬಗ್ಗೆ ಚರ್ಚೆ ನಡೆಯುವುದು ಸಹಜವೇ. ಕಳೆದ ವಾರದ ಪತ್ರಿಕೆಯಲ್ಲಿ ಹೃಷಿಕೇಶ ಬಹದ್ದೂರ ದೇಸಾಯಿಯವರು “ಮೇಲ್ಮನೆ ಯಾರಿಗೆ ಬೇಕಾಗಿದೆ?” ಎಂದು ಕೇಳಿದ್ದರು. ಅದರಲ್ಲಿ ಪರಿಷತ್ತು ಹೇಗೆ ತನ್ನ ಉದ್ದೇಶ, ಮೌಲ್ಯಗಳಿಂದ ದೂರ ಸರಿಯುತ್ತಾ ಅಪ್ರಸ್ತುತವಾಗುತ್ತಿದೆ, ಕುಟುಂಬ ರಾಜಕಾರಣ, ಸೋತವರ ರೀಹ್ಯಾಬಿಲಿಟೇಷನ್ ಸೆಂಟರ್ ಮತ್ತು ಮುಖ್ಯವಾಗಿ ಮೇಲ್ಮನೆಯಲ್ಲಿ ಮೀಸಲಾತಿ ಇಲ್ಲದಿರುವುದರಿಂದ ಹೇಗೆ ಪ್ರಬಲ ಜಾತಿಗಳ ಅಡುಂಬೋಲವಾಗಿದೆ ಎಂದು ಸೋದಾಹರಣವಾಗಿ ವಿವರಿಸಿದ್ದರು. ಆದರೆ ನನಗೆ ಆ ಲೇಖನದ ಬಗ್ಗೆ ಎರಡು ಆಕ್ಷೇಪಗಳಿವೆ, ಹಾಗಾಗಿ ಇಲ್ಲಿ ಪತ್ರಿಕೆಯಲ್ಲೇ ಪ್ರತಿಕ್ರಿಯುಸುತ್ತಿದ್ದೇನೆ.

“ಮೇಲ್ಮನೆ ಯಾರಿಗೆ ಬೇಕಾಗಿದೆ?” ಎಂಬ ಪ್ರಶ್ನೆಯಲ್ಲಿ ಸದ್ಯದ ಪರಿಸ್ಥಿತಿಯ, ಅದು ತಲುಪಿರುವ ಅಧೋಗತಿಯ ಬಗ್ಗೆ ವಿಷಾದ ಇದೆ. ಇದು ನಮ್ಮ ನ್ಯಾಯಾಲಯಗಳು ಆಗಾಗ ’ಇಷ್ಟನ್ನೂ ಮಾಡಲಾಗದಿದ್ದರೆ ಏಕಿರಬೇಕು, ನಗರಪಾಲಿಕೆಯನ್ನು ಮುಚ್ಚಿಹಾಕಿಬಿಡೋಣವೆ’ ಎಂದು ರೆಟರಿಕ್ ಆಗಿ ಕೇಳುತ್ತಲ್ಲವೆ, ಹಾಗೆ ಎಂದು ನಾನು ಭಾವಿಸುತ್ತೇನೆ. ಆದರೆ ನ್ಯಾಯಾಲಯವಾದರೂ ಸರಿ, ನಾವಾದರೂ ಸರಿ, ಹೀಗೆ ಸಂಸ್ಥೆಗಳಲ್ಲಿನ ಸಮಸ್ಯೆಗಳಿಗೆ ಯಾವ ಮಟ್ಟದಲ್ಲಾದರೂ ಅದನ್ನು ಮುಚ್ಚುವ, ಬಹಿಷ್ಕರಿಸುವ ಮಾತಾಡುವುದು ಸಮಂಜಸವಲ್ಲವೆಂಬುದು ನನ್ನ ಭಾವನೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಸಂಘ ಪರಿವಾರ ಮತ್ತು ಬಿಜೆಪಿ ಬೆಂಬಲಿತ ಮಹೇಶ ಜೋಷಿ ಗೆದ್ದಾಗಲೂ ಇಂಥದ್ದೇ ಮಾತುಗಳು ಕೇಳಿಬಂದಿದ್ದವು. ಅದೂ ಯುಕ್ತವಲ್ಲ ಎಂದೇ ನನ್ನ ವಾದ. ರದ್ದು ಮಾಡುವುದೇ ಉತ್ತರವಾದರೆ ವಿಧಾನಸಭೆ, ಲೋಕಸಭೆಗಳೇನು ಕಮ್ಮಿ ಕೆಟ್ಟಿವೆಯೇ?

ಹೃಷಿಕೇಶರು ನೆರೆಯ ಆಂಧ್ರಪ್ರದೇಶದ ಉದಾಹರಣೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಯುವ ಮುಖ್ಯಮಂತ್ರಿಯ ಹೊಸ ವಿಚಾರಕ್ಕೆ ವಿರೋಧಪಕ್ಷಗಳ ಬಾಹುಳ್ಯ ಇರುವ ಪರಿಷತ್ತು ಅಡ್ಡಿ ಆಗಿದೆ, ಹಾಗಾಗಿ ಪರಿಷತ್ತನ್ನು ಬರಖಾಸ್ತು ಮಾಡುವ ಕೂಗೆದ್ದಿದೆ ಎಂದು ಹೇಳಿದ್ದಾರೆ. 175ರಲ್ಲಿ 150 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವ ಜಗನ್‌ಮೋಹನ ರೆಡ್ಡಿಯದು, ಮೋದಿಯನ್ನೂ ಮೀರಿದ ದುರಾಡಳಿತ, ಆರ್ಥಿಕ ಅಶಿಸ್ತು, ತುಘಲಕ್ ದರ್ಬಾರ್ ಮತ್ತು ದರ್ಪದ ಸರ್ವಾಧಿಕಾರ ಎಂಬುದು ನನ್ನ ಅಭಿಪ್ರಾಯ, ಇರಲಿ. ಮೂರು ರಾಜಧಾನಿಯದು ಕಾನೂನಾತ್ಮಕವಾಗಿಯೂ ಸಮಂಜಸವಾಗಿಲ್ಲ ಅಷ್ಟೇ ಅಲ್ಲ, ಅಲ್ಲಿ ಅಮರಾವತಿಯೇ ರಾಜಧಾನಿ ಆಗಿರಬೇಕೆಂದು ನಡೆಯುತ್ತಿರುವ “ನ್ಯಾಯಾಲಯಂ ನುಂಚಿ ದೇವಾಲಯಂ” ಪಾದಯಾತ್ರೆಗೆ ಲಭಿಸಿರುವ ಅಪಾರ ಜನಾದರಣೆಯನ್ನು, ಬೆಂಬಲವನ್ನೂ ನೋಡಿದರೆ ಜನಕ್ಕೂ ಮೂರು ರಾಜಧಾನಿಗಳು ಬೇಕಿಲ್ಲ ಎಂಬುದು ವಿದಿತ. ಇವತ್ತು ಇಷ್ಟು ದೊಡ್ಡ ಬಹುಮತ ಪಡೆದಿರುವ ಸರ್ಕಾರವೊಂದು ’ಗೂಳಿ’ಯಂತೆ ಮುನ್ನುಗ್ಗುವುದರಿಂದ, ಅದರ ಸರ್ವಾಧಿಕಾರಿ ಧೋರಣೆಗೆ ಇರುವ ಒಂದೇ ಅಂಕುಶ ಅಲ್ಲಿನ ಪರಿಷತ್ತು. ಇದುವರೆಗೂ ಹಲವು ರಾಜ್ಯಗಳಲ್ಲಿ ಪರಿಷತ್ತನ್ನು ರದ್ದು ಮಾಡಲಾಗಿದೆ. ಬಹುತೇಕ ಇದು ಆಳುವ ಪಕ್ಷಕ್ಕೆ ಪರಿಷತ್ತಿನಲ್ಲಿ ಬಹುಮತ ಇಲ್ಲದೇ ಇದ್ದಾಗಲೇ ಆಗಿದೆ. ಅದೇ ಅದರ ಪ್ರಸ್ತುತತೆ.

ಇನ್ನು ಸದ್ಯ ಇರುವಂತೆ ಪರಿಷತ್ತು ದಿನೇದಿನೇ ಅಪ್ರಸ್ತುತವಾಗುತ್ತಾ ಹೋಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಹೃಷಿಕೇಶರ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಆದರೆ ನಾವು ಇವತ್ತು ಅದರ ಸಂರಚನೆಯನ್ನು ಪ್ರಸ್ತುತಗೊಳಿಸಬೇಕಿದೆ. ಇವತ್ತು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಅರ್ಥವೇ ಉಳಿದಿಲ್ಲ. ಪದವೀಧರರು ವಿರಳವಾಗಿದ್ದ ಕಾಲಕ್ಕೆ ಅದು ಬೇಕಾಗಿತ್ತು, ಇವತ್ತಿಗಲ್ಲ. ಪದವೀಧರರೆಲ್ಲರೂ ಮೇಧಾವಿಗಳು, ವಿವೇಕಯುಕ್ತರು ಎಂಬಂತಿದೆ. ಇನ್ನು ಶಿಕ್ಷಕರಿಗೆ ಮಾತ್ರ ಏಕೆ ನಾಲ್ಕು ಸ್ಥಾನಗಳು? ಅವರು ಮಾತ್ರವೇ ಪ್ರಜ್ಞಾವಂತರೆಂದೋ? ಇವತ್ತು ಅನೇಕ ಇತರೆ ದನಿ ಇಲ್ಲದ, ಪ್ರಾತಿನಿಧ್ಯ ಇಲ್ಲದ ಗುಂಪುಗಳಿಗೆ ಪರಿಷತ್ತಿನಲ್ಲಿ ತಾವು ಮಾಡಿಕೊಡಬೇಕಿದೆ.

ಅಂತಹ ಗುಂಪುಗಳ ಪ್ರಾತಿನಿಧ್ಯಕ್ಕೆ ಕೆಲವು ಸಲಹೆಗಳು: ಈ ವಲಯಗಳಿಂದ ಆಯ್ಕೆ ಆಗುವ ಸದಸ್ಯರು ಕಡ್ಡಾಯವಾಗಿ ಅದೇ ವಲಯದಲ್ಲಿ ತೊಡಗಿಸಿಕೊಂಡಿರುವವರಾಗಿರಬೇಕು. ಆ ರೀತಿಯ ನಿಯಮಗಳನ್ನು ಪ್ರತಿ ವಲಯಕ್ಕೂ ತರಬೇಕು.

1. ರಾಜ್ಯದ ಮಹಿಳೆಯರು: ಅವರ 5-6 ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು, ಲೈಂಗಿಕ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ.
2. ರಾಜ್ಯದ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತರಿಗೆ ಒಂದು ಸ್ಥಾನ, ಪೌರಕಾರ್ಮಿಕರಿಗೆ ಒಂದು ಸ್ಥಾನ.
3. ರಾಜ್ಯದ ರೈತರು ಅವರ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು.
4. ರಾಜ್ಯದ ಕಾರ್ಮಿಕರಿಗೆ ಕನಿಷ್ಠ ಎರಡು ಸ್ಥಾನ
5. ಶಿಕ್ಷಕರ ಪ್ರಾತಿನಿಧ್ಯವನ್ನು ಗರಿಷ್ಠ ಎರಡಕ್ಕೆ ಮಿತಿಗೊಳಿಸುವುದು. ಇನ್ನುಳಿದ ಎರಡು ಪ್ರತಿನಿಧಿಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು.
6. ರಾಜ್ಯದ ವೈದ್ಯರು ಒಂದು ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ.
7. ರಾಜ್ಯದ ಸಹಕಾರಿ ವಲಯದಿಂದ ಕೆಲವು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ.

ಇನ್ನು ಪರಿಷತ್ತಿನಲ್ಲಿ ರಾಜ್ಯದ ಸ್ವಾಯತ್ತ ಸಂಸ್ಥೆಗಳ ನೇತೃತ್ವ ವಹಿಸಿದವರೆಲ್ಲರನ್ನೂ ex-officio ಸದಸ್ಯರನ್ನಾಗಿ ಮಾಡಬೇಕು. ಈ ಹುದ್ದೆಗಳ politicisation ತಡೆಯಲು ಅಗತ್ಯವಿದ್ದರೆ ಇವರಿಗೆ ಮತದಾನದ ಹಕ್ಕು ನೀಡದಿರುವುದು ಅಗತ್ಯವಾಗಬಹುದು. ಆದರೆ ಇವರೆಲ್ಲರೂ ಪರಿಷತ್ತಿನಲ್ಲಿ ಇದ್ದರೆ, ಈ ಸಂಸ್ಥೆಗಳ ವರದಿಗಳನ್ನು ಕಡ್ಡಾಯವಾಗಿ ಮಂಡಿಸುವಂತಾದರೆ, ಅಲ್ಲಿನ ಚರ್ಚೆಗೊಂದು ವಿಸ್ತಾರವೂ, ಸರ್ಕಾರಕ್ಕೊಂದು ಅಂಕುಶವೂ ಇರುತ್ತದೆ.

ಇವರೆಲ್ಲರೂ ex-officio ಸದಸ್ಯರಾಗಬೇಕು:

1. ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷರು
2. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು
3. ಕರ್ನಾಟಕದ ಆಡಿಟರ್ ಜನರಲ್
4. ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು
5. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು
6. ಕರ್ನಾಟಕ ಲೋಕಾಯುಕ್ತರು
7. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು
8. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
9. ಈ ನಾಡಿನ ಎಲ್ಲ ಸರ್ಕಾರೀ ವಿಶ್ವವಿದ್ಯಾಲಯಗಳ ಉಪಕುಲಪತಿಗಳು.
10. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು
11. ಕರ್ನಾಟಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು
12. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು

ಇನ್ನು ಪರಿಷತ್ತಿನಲ್ಲಿ ಈ ಕೂಡಲೇ ಮೀಸಲಾತಿ ತರಬೇಕಿದೆ. ದಿ ಹಿಂದೂ ಪತ್ರಿಕೆಯು ಈಗ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಿಲ್ಲಿಸಿರುವ ಉಮೇದುವಾರರ ಜಾತಿಗಣತಿ ನಡೆಸಿ ಎಲ್ಲ ಉಮೇದುವಾರರ ಪೈಕಿ ಶೇ.60ಕ್ಕಿಂತಲೂ ಹೆಚ್ಚು ಜನ ಒಕ್ಕಲಿಗ, ಲಿಂಗಾಯತ ಜಾತಿಗಳಿಗೆ ಸೇರಿದವರು ಎಂದು ತೋರಿಸಿದ್ದಾರೆ. ಮೀಸಲಾತಿ ಇಲ್ಲದಿದ್ದರೆ ಎಲ್ಲೆಡೆಯೂ ಇದೇ ವಾಸ್ತವ. ಇನ್ನು ಹಿರಿಯರ, ಪ್ರಾಜ್ಞರ ಮನೆಗೆ ಮೀಸಲಾತಿ ಇಲ್ಲದಿರುವುದು ಕೆಟ್ಟ ಮೆರಿಟ್ ವಾದವನ್ನು ಸರ್ಕಾರವೇ ಮಾಡಿದಂತೆ. ಈ ಕೂಡಲೇ ಪರಿಶಿಷ್ಟ ಜಾತಿ, ವರ್ಗಗಳಿಗೆ ಸಾಂವಿಧಾನಿಕ ಹಕ್ಕಾದ ಮೀಸಲಾತಿಯನ್ನು ನೀಡಬೇಕು.

ಹೀಗೆ ಇನ್ನೂ ಬೆಳೆಸಿ ಪರಿಷತ್ತನ್ನು ನಿಜಕ್ಕೂ ಮತ್ತೆ ಪ್ರಜಾಪ್ರತಿನಿಧಿ ಸಭೆ ಮಾಡಬೇಕಿದೆ. ಈ ರೀತಿಯಾಗಿ ಪ್ರತಿನಿಧಿತ್ವವನ್ನು ಸರಿಪಡಿಸಿ ವಿಧಾನ ಪರಿಷತ್ತನ್ನು ಉಳಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.


ಇದನ್ನೂ ಓದಿ: ಮೇಲ್ಮನೆ ವಿಧಾನ ಪರಿಷತ್ ಯಾರಿಗೆ ಬೇಕಾಗಿದೆ?

ಇದನ್ನೂ ಓದಿ: ನಾಯಕತ್ವ ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’: ರಾಹುಲ್ ಗಾಂಧಿ ವಿರುದ್ದ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...