ಧರ್ಮನಿಂದನೆಯ ಆರೋಪದ ಮೇಲೆ ಶ್ರೀಲಂಕಾದ ವ್ಯಕ್ತಿಯನ್ನು ಪಾಕಿಸ್ತಾನದಲ್ಲಿ ಗುಂಪು ಹತ್ಯೆ (ಮಾಬ್ ಲಿಂಚಿಂಗ್) ಮಾಡಲಾಗಿದ್ದು, ಸಾರ್ವಜನಿಕವಾಗಿ ಸುಟ್ಟು ವಿಕೃತಿ ಮೆರೆಯಲಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ಕೋಟ್ ಜಿಲ್ಲೆಯಲ್ಲಿ ಶುಕ್ರವಾರ ಶ್ರೀಲಂಕಾದ ವ್ಯಕ್ತಿಯೊಬ್ಬರನ್ನು ಹತ್ಯೆಗೈದು ಅವರ ದೇಹವನ್ನು ದುಷ್ಕರ್ಮಿಗಳ ಗುಂಪು ಸಾರ್ವಜನಿಕವಾಗಿ ಸುಟ್ಟು ಹಾಕಿದೆ ಎಂದು ಎಪಿ ವರದಿ ಮಾಡಿದೆ. ಕೊಲೆಯಾದ ವ್ಯಕ್ತಿಯು ಪ್ರವಾದಿ ಮುಹಮ್ಮದ್ ಅವರ ಹೆಸರಿನ ಪೋಸ್ಟರ್ಗಳನ್ನು ಅಪವಿತ್ರಗೊಳಿಸಿದ್ದರು ಎಂದು ಆರೋಪಿಸಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಪ್ರಿಯಾಂತ ಕುಮಾರ ಎಂದು ಗುರುತಿಸಲಾಗಿದೆ.
ಧಾರ್ಮಿಕ ವ್ಯವಹಾರಗಳು ಮತ್ತು ಸರ್ವಧರ್ಮ ಸೌಹಾರ್ದತೆಯ ವಿಶೇಷ ಪ್ರತಿನಿಧಿ ಹಫೀಜ್ ತಾಹಿರ್ ಮೆಹಮೂದ್ ಅಶ್ರಫಿ ಮಾತನಾಡಿ, “ಇದುವರೆಗೆ 50 ಜನರನ್ನು ಬಂಧಿಸಲಾಗಿದೆ, ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹೆಚ್ಚಿನ ಮಾಹಿತಿಗಳನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ” ಎಂದು ಹೇಳಿರುವುದಾಗಿ ಪಾಕಿಸ್ತಾನದ ಮಾಧ್ಯಮ ‘ಡಾನ್’ ವರದಿ ಮಾಡಿದೆ.
ದುಷ್ಕರ್ಮಿಗಳ ಗುಂಪು ಶ್ರೀಲಂಕಾದ ವ್ಯಕ್ತಿಯನ್ನು ಕ್ರೀಡಾ ಸಲಕರಣೆಗಳ ಕಾರ್ಖಾನೆಯಿಂದ ಬೀದಿಗೆ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಕೊಲೆಯಾದ ವ್ಯಕ್ತಿಯು ಕಾರ್ಖಾನೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದನು. ಅವರನ್ನು ಕಾರ್ಖಾನೆಯಿಂದ ಹೊರಗೆ ಎಳೆತಂದು ನೂರಾರು ಜನರ ಹರ್ಷೋದ್ಗಾರ ನಡುವೆ ಅವರಿಗೆ ಬೆಂಕಿಹಚ್ಚಲಾಯಿತು ಎಂದು ವರದಿಗಳಾಗಿವೆ.
ಇದನ್ನೂ ಓದಿರಿ: ಎನ್ಇಪಿ: ಅವೈಜ್ಞಾನಿವಾಗಿ ಪಠ್ಯಕ್ರಮ ದಿಢೀರ್ ಬದಲು, ಮಹಾರಾಜ ವಿದ್ಯಾರ್ಥಿಗಳಿಂದ ಭಾರೀ ಪ್ರತಿಭಟನೆ
“ನಾವು ಸತ್ಯಾಂಶಗಳನ್ನು ಪರಿಶೀಲಿಸುತ್ತಿದ್ದೇವೆ. ಪೊಲೀಸರಿಂದ ಯಾವುದೇ ರೀತಿಯ ವಿಳಂಬವಾಗಿದೆಯೇ ಎಂದು ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೇವೆ” ಎಂದು ಪಂಜಾಬ್ ಇನ್ಸ್ಪೆಕ್ಟರ್ ಜನರಲ್ ರಾವ್ ಸರ್ದಾರ್ ಅಲಿ ಖಾನ್ ಹೇಳಿದ್ದಾರೆ. “ಈ ಘಟನೆಯು ಸೂಕ್ಷ್ಮ ಮತ್ತು ದುರದೃಷ್ಟಕರವಾಗಿದೆ” ಎಂದು ಡಾನ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಲಂಕಾದ ವ್ಯಕ್ತಿಯನ್ನು ಕೊಲ್ಲಲು ಈ ಗುಂಪನ್ನು ಏಕೆ ಪ್ರೇರೇಪಿಸಿತು ಎಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಮೃತ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಇನ್ಸ್ ಪೆಕ್ಟರ್ ಜನರಲ್ಗೆ ಸೂಚನೆ ನೀಡಿರುವುದಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ತಿಳಿಸಿದ್ದಾರೆ.
ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. “ಈ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಸುಮ್ಮನೆ ಬಿಡಲಾಗುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಘಟನೆಯನ್ನು ಪಾಕಿಸ್ತಾನದ ಹಲವಾರು ನಾಯಕರು ಖಂಡಿಸಿದ್ದಾರೆ. ಧಾರ್ಮಿಕ ವ್ಯವಹಾರಗಳು ಮತ್ತು ಸರ್ವಧರ್ಮೀಯ ಸೌಹಾರ್ದತೆಯ ವಿಶೇಷ ಪ್ರತಿನಿಧಿ ಹಫೀಜ್ ತಾಹಿರ್ ಮೆಹಮೂದ್ ಅಶ್ರಫಿ ಅವರು, “ಸಾರ್ವಜನಿಕ ಹತ್ಯೆಯು ಇಸ್ಲಾಂ ಧರ್ಮವನ್ನು ಅಪವಿತ್ರಗೊಳಿಸಿದೆ” ಎಂದು ವಿಷಾದಿಸಿರುವುದಾಗಿ ಡಾನ್ ವರದಿ ಮಾಡಿದೆ.
“ಘಟನೆಯಲ್ಲಿ ಒಳಗೊಂಡಿರುವ ಅಂಶಗಳು ಇಸ್ಲಾಮಿಕ್ ಕಾನೂನುಗಳು ಮತ್ತು ಬೋಧನೆಗಳಿಗೆ ಹಾನಿ ಮಾಡಲು ಪ್ರಯತ್ನಿಸಿವೆ” ಎಂದು ಅಭಿಪ್ರಾಯಪಟ್ಟಿರುವ ಅವರು, “ಅನಾಗರಿಕತೆಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ” ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿಯವರು ಈ ಹತ್ಯೆಯನ್ನು “ಭಯಾನಕ ಮತ್ತು ಖಂಡನೀಯ” ಎಂದು ಕರೆದಿದ್ದಾರೆ. “ಎಲ್ಲಾ ಅಪರಾಧಗಳಿಗೆ ಕಾನೂನಿನಲ್ಲಿ ಶಿಕ್ಷೆ ಇದೆ. ಯಾವುದೇ ಸಂದರ್ಭದಲ್ಲೂ ಗುಂಪು ಹಿಂಸಾಚಾರವನ್ನು ಒಪ್ಪಿಕೊಳ್ಳಲಾಗುವುದಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ. “ಪಾಕಿಸ್ತಾನದ ಪಂಜಾಬ್ ಸರ್ಕಾರದ ಕ್ರಮವು ದೃಢವಾಗಿರಬೇಕು ಮತ್ತು ನಿಸ್ಸಂದಿಗ್ಧವಾಗಿರಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿರಿ: ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ ಪರ ಘೋಷಣೆ ಎಂದು ತಿರುಚಿದ ಪ್ರಕರಣ: ಪಿಎಫ್ಐ ಖಂಡನೆ
ದರ್ಮದ ಅಫೀಮನ್ನು ತಲೆಗೇರಿಸಿಕೊಂಡವರ ಈ ದುಶ್ಕೃತ್ಯ ಕಂಡನಾರ್ಹ.