ಕೊಡಗಿನ ಶನಿವಾರಸಂತೆಯಲ್ಲಿ ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಪ್ರಸಾರ ಮಾಡಿರುವುದು ಮುಸ್ಲಿಮರನ್ನು ದೇಶದ್ರೋಹಿಗಳನ್ನಾಗಿ ಚಿತ್ರಿಸುವ ಸಂಘೀ ಷಡ್ಯಂತ್ರದ ಮುಂದುವರಿದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಕಿಡಿಕಾರಿದ್ದಾರೆ.
ಶನಿವಾರಸಂತೆ ಪೊಲೀಸ್ ಠಾಣೆಯ ಮುಂದೆ ಬುರ್ಖಾಧಾರಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ‘ಅಂಬೇಡ್ಕರ್ ಝಿಂದಾಬಾದ್’ ಎಂದು ಘೋಷಣೆ ಕೂಗಿದ್ದರು. ಆದರೆ ದುಷ್ಕರ್ಮಿಗಳು ಈ ವೀಡಿಯೋವನ್ನು ತಿರುಚಿ, ‘‘ಮುಸ್ಲಿಂ ಮಹಿಳೆಯರು ಪೊಲೀಸ್ ಠಾಣೆಯ ಮುಂದೆ ‘ಪಾಕಿಸ್ತಾನ್ ಝಿಂದಾಬಾದ್’ ಕೂಗಿದ್ದಾರೆ” ಎಂದು ವೈರಲ್ ಮಾಡಿದ್ದರು. ಇದೀಗ ಈ ವಿಡಿಯೊ ತಿರುಚಿದ್ದಾರೆ ಎನ್ನಲಾಗಿರುವ ಸ್ಥಳೀಯ ಬಿಜೆಪಿ ನಾಯಕ ಗಿರೀಶ್ ಸೇರಿದಂತೆ ಕನ್ನಡ ಪ್ರಭ ಪತ್ರಕರ್ತ ಹರೀಶ್ ಹಾಗೂ ಮತ್ತೊಬ್ಬ ಸ್ಥಳೀಯ ರಾಜಕೀಯ ನಾಯಕನ ರಘು ಎಂಬವರ ವಿರುದ್ದ ಶನಿವಾರಸಂತೆ ಠಾಣಾ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ಹಿನ್ನಲೆ
ಈ ಹಿಂದೆ ಸಂಘಪರಿವಾರದಿಂದ ದಾಳಿಗೊಳಗಾದ ಮುಸ್ಲಿಮ್ ಯುವಕನ ಕುಟುಂಬವು ದೂರು ನೀಡಿದರೂ, ಪೊಲೀಸರು ಅದನ್ನು ದಾಖಲಿಸಿಲ್ಲ. ದೂರು ನೀಡಲು ತೆರಳಿದ ಮುಸ್ಲಿಮ್ ಮಹಿಳೆಯರನ್ನು ಸತಾಯಿಸಿದ್ದು ಮಾತ್ರವಲ್ಲ, ಪೊಲೀಸರು ದುಷ್ಕರ್ಮಿಗಳ ಪರವಾಗಿ ಮೃದು ಧೋರಣೆ ತಾಳಿದ್ದಾರೆ. ಪೊಲೀಸರ ಈ ತಾರತಮ್ಯ ನೀತಿಯನ್ನು ಖಂಡಿಸಿ ಮುಸ್ಲಿಮ್ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಅಂಬೇಡ್ಕರ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆದರೆ ಜಿಲ್ಲೆಯಲ್ಲಿ ಗಲಭೆ ಹರಡುವ ದುರುದ್ದೇಶದಿಂದ ಓರ್ವ ಪತ್ರಕರ್ತ ಸಹಿತ ಸಂಘಪರಿವಾರದ ಕಾರ್ಯಕರ್ತರು ಘೋಷಣೆಯನ್ನು ತಿರುಚಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದರು.
ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರು ಈ ಕಿಡಿಗೇಡಿ ಕೃತ್ಯ ನಡೆಸಿರುವುದು ಇದು ಮೊದಲೇನಲ್ಲ. ಉಜಿರೆಯಲ್ಲಿ ಎಸ್.ಡಿ.ಪಿ.ಐ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಬಿಜೆಪಿ ಕಾರ್ಯಕರ್ತರು ವಿಕೃತಿ ಮೆರೆದಿದ್ದರು. ಇದಕ್ಕೂ ಮೊದಲು ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲಾಗಿತ್ತು. ಇಂತಹ ದುಷ್ಕೃತ್ಯಗಳ ಮೂಲಕ ಮುಸ್ಲಿಮರನ್ನು ದೇಶದ್ರೋಹಿಗಳನ್ನಾಗಿ ಚಿತ್ರೀಕರಿಸಲು ವ್ಯವಸ್ಥಿತ ಪಿತೂರಿಗಳನ್ನು ನಡೆಸಲಾಗುತ್ತಿದೆ ಎಂದು ಎ.ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ, ಪೊಲೀಸರ ಪೂರ್ವಾಗ್ರಹಪೀಡಿತ ತನಿಖೆ ಮೂಲಕ ಹಲವು ಅಮಾಯಕ ಮುಸ್ಲಿಮ್ ಯುವಕರನ್ನು ವಿನಾಕಾರಣ ಬಂಧಿಸಿ ಜೈಲಿಗಟ್ಟಲಾಗಿತ್ತು. ಇದೀಗ ಮುಸ್ಲಿಮ್ ಸಂಘಟನೆಗಳ ಒತ್ತಡದ ಕಾರಣ ಪೊಲೀಸರು ನಿಷ್ಪಕ್ಷಪಾತ ಹಾಗೂ ಕೂಲಂಕಷ ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಲು ಸಾಧ್ಯವಾಗಿದೆ. ಪೊಲೀಸರು ಈ ರೀತಿಯ ಸೂಕ್ಷ್ಮ ಘಟನೆಗಳನ್ನು ಗಂಭೀರವಾಗಿ ಪರಿಶೀಲಿಸಿ ನೈಜ ಅಪರಾಧಿಗಳನ್ನು ಬಂಧಿಸಿ ಇಂತಹ ಘಟನೆಗಳು ಮರುಕಳಿಸದಂತೆ ಗಮನಹರಿಸಬೇಕು. ಶಾಂತಿ ಕದಡಿ ಗಲಭೆ ಹರಡುವ ದುಷ್ಕರ್ಮಿಗಳ ವಿರುದ್ಧ ಸರಕಾರವೂ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಹಾಗೆಯೇ ಸಂತ್ರಸ್ತ ಕುಟುಂಬ ನೀಡಿದ ದೂರು ದಾಖಲಿಸದೇ ಕರ್ತವ್ಯಲೋಪ ಎಸಗಿದ ಪೊಲೀಸರನ್ನು ಕೂಡಲೇ ಅಮಾನತುಪಡಿಸಬೇಕೆಂದು ಎ.ಕೆ.ಅಶ್ರಫ್ ಒತ್ತಾಯಿಸಿದ್ದಾರೆ.