Homeಅಂತರಾಷ್ಟ್ರೀಯಇಯಾನ್ ಜಾಕ್: ಭಾರತವನ್ನು ವಿಶಿಷ್ಟವಾಗಿ ಗ್ರಹಿಸಿದ ಫಾರಿನ್ ಕರೆಸ್ಪಾಂಡೆಂಟ್

ಇಯಾನ್ ಜಾಕ್: ಭಾರತವನ್ನು ವಿಶಿಷ್ಟವಾಗಿ ಗ್ರಹಿಸಿದ ಫಾರಿನ್ ಕರೆಸ್ಪಾಂಡೆಂಟ್

- Advertisement -
- Advertisement -

ನಮ್ಮ ಊರಿನ ಬಗ್ಗೆ ಕೆಲವೊಮ್ಮೆ ಹೊಸ ಹೊಳಹುಗಳನ್ನು ನೀಡಲು ಹೊರಗಿನವರಿಗೇ ಹೆಚ್ಚು ಸಾಧ್ಯ. ನಮಗೆ ಸಹಜವಾಗಿ ರೂಢಿ ಎನಿಸಿಬಿಟ್ಟಿರುವ, ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿರುವ ಸಂಗತಿಗಳು ನಮಗೆ ಕಾಣಿಸುವುದೇ ಇಲ್ಲ. ಅದೇ ಪರ ಊರಿನವರಿಗೆ, ಭಿನ್ನ ಸಂಸ್ಕೃತಿಯಿಂದ ಬಂದವರಿಗೆ ಅವು ಸೋಜಿಗವೆನಿಸಿ, ಅವರು ಕಟ್ಟಿಕೊಡುವ ವಿವರಗಳು ನಮಗೇ ಹೊಸ ಹೊಳಹುಗಳನ್ನು ನೀಡಬಲ್ಲಷ್ಟು ಶಕ್ತವಾಗಿರಬಲ್ಲವು. ಈ ಹಿನ್ನೆಲೆಯಲ್ಲಿ ಫಾರಿನ್ ಕರೆಸ್ಪಾಂಡೆಂಟ್ಸ್‌ಗೆ ಜಗತ್ತಿನೆಲ್ಲೆಡೆ ಒಂದು ವಿಶೇಷ ಸ್ಥಾನಮಾನವಿದೆ. ಪ್ರತಿ ದೇಶದಲ್ಲಿಯೂ ಫಾರಿನ್ ಕರೆಸ್ಪಾಂಡೆಂಟ್‌ಗಳು ಬರೆಯುವ ಬರಹಗಳನ್ನು ಅಲ್ಲಿನ ಸ್ಥಳೀಯರೇ ಓದುವುದು ಹೆಚ್ಚು.

ವಸಾಹತುಶಾಹಿ ದೇಶವಾಗಿದ್ದ ಭಾರತವನ್ನು ಹೆಚ್ಚು ಆಪ್ತವಾಗಿ ಅರ್ಥ ಮಾಡಿಕೊಂಡು ಬರೆದ ವಿದೇಶಿ ಪತ್ರಕರ್ತರಲ್ಲಿ ಸಹಜವಾಗಿಯೇ ಬ್ರಿಟಿಷರು ಹೆಚ್ಚು. ಇದು ಸಮಸ್ಯಾತ್ಮಕವೂ ಹೌದು. ಅವರ ಬರವಣಿಗೆಯಲ್ಲಿ ವಸಾಹತು ಪ್ರಜ್ಞೆ ಎಷ್ಟಿರುತ್ತದೆ ಮತ್ತು ಹೊರಗಿನವರ ಸಹಜ ಸೋಜಿಗವೆಷ್ಟು ಎಂದು ಹೇಳುವುದು ದುಸ್ತರ. ಹಲವರು ಭಾರತದ ಬಗ್ಗೆ ಬಡ ಹಾವಾಡಿಗರ ದೇಶ ಎಂಬ ಸಮಸ್ಯಾತ್ಮಕ ಪೂರ್ವಾಗ್ರಹದಿಂದ ಬರೆದುದೇ ಹೆಚ್ಚು ಎಂಬುದು ದಿಟವೇ. ಆದರೆ ಇದರ ಮಧ್ಯೆ ಕೆಲವರು ಬಹುತೇಕ ಇಲ್ಲಿನವರೇ ಆಗಿ, ಪರಾನುಭೂತಿಯಿಂದ ಇಲ್ಲಿನ ಜನಜೀವನದ ಬಗ್ಗೆ ಆಸ್ಥೆಯಿಂದ ಬರೆದವರು ವಿರಳವೆನಿಸಿದರೂ ಇದ್ದಾರೆ. ಅದರಲ್ಲಿ ಇಬ್ಬರು ಮುಖ್ಯರು- ದಶಕಗಳ ಕಾಲ ಭಾರತದ ಬಿಬಿಸಿ ಕರೆಸ್ಪಾಂಡೆಂಟ್ ಆಗಿದ್ದ ಇಲ್ಲಿನವರೇ ಆಗಿ ಹೋಗಿರುವ ಸರ್ ಮಾರ್ಕ್ ಟಲ್ಲಿ ಮತ್ತು ಸ್ಕಾಂಟ್ಲೆಂಡ್ ಭಾಗದ ಇಯಾನ್ ಜಾಕ್.

ಹೆಚ್ಚು ಜನರಿಗೆ ಪರಿಚಿತರಲ್ಲದ ಇಯಾನ್ ಜಾಕ್ ಅಕ್ಟೋಬರ್ 2ರಂದು ತೀರಿಕೊಂಡರು. ಅವರ ಅಗಲಿಕೆಯ ಈ ನೆನಪಿನಲ್ಲಿಯಾದರೂ ಅವರ ಬರವಣಿಗೆಯನ್ನು ಹೆಚ್ಚು ಓದುಗರಿಗೆ ಪರಿಚಯಿಸಬಹುದೆಂಬ ಆಸೆಯಿಂದ ಈ ಲೇಖನ ಬರೆಯುತ್ತಿದ್ದೇನೆ. ಮಾರ್ಕ್ ಟಲ್ಲಿ ಅವರು ನಮ್ಮ ರಸ್ಕಿನ್ ಬಾಂಡ್ ಅವರಂತೆ ವಸಾಹತು ಭಾರತದಲ್ಲಿ ಹುಟ್ಟಿ, ಇಲ್ಲೇ ಉಳಿದವರು, ಹಾಗಾಗಿ ಒಂದು ರೀತಿ ಭಾರತೀಯರೇ ಹೌದು. ಆದರೆ ಇಯಾನ್ ಜಾಕ್ ಹಾಗಲ್ಲ. ಅವರು ಸ್ಕಾಟ್ಲೆಂಡಿನ ಸಹಜ ಕೆಳಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿ ಕಾಲೇಜು ಡಿಗ್ರಿಯನ್ನೂ ಪಡೆಯದೆ ಅಪ್ರೆಂಟಿಸ್ ಆಗಿ ಪತ್ರಿಕೋದ್ಯಮಕ್ಕೆ ಬಂದವರು; ಹಂತಹಂತವಾಗಿ ಬೆಳೆದು ತಮ್ಮ ವಿಶಿಷ್ಟ ಬರವಣಿಗೆಯ ಶೈಲಿಯನ್ನು ರೂಢಿಸಿಕೊಂಡವರು. ಅವರ ಅದೃಷ್ಟವೆಂದರೆ ಅವರು ಸಂಡೇ ಟೈಮ್ಸ್‌ನ ಉಚ್ಛ್ರಾಯ ಕಾಲಘಟ್ಟದಲ್ಲಿ ಹೆರಾಲ್ಡ್ ಇವಾನ್ಸ್ ಅವರ ಸಂಪಾದಕತ್ವದಲ್ಲಿ ಕೆಲಸ ಮಾಡಿದರು. ಅವರು ಎಮರ್ಜೆನ್ಸಿಯ ಕಾಲಘಟ್ಟದಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿಯಿತ್ತರು. ಅದು ಅವರ ಜೀವನದ ದಿಕ್ಕನ್ನೇ ಬದಲಿಸಿತು ಎನ್ನಬೇಕು. ಅಂದಿನಿಂದ ಅವರು ತಮ್ಮ ಜೀವನ ಪರ್ಯಂತ ಭಾರತದ ಬಗ್ಗೆಯೇ ಹೆಚ್ಚು ಬರೆದರು.

ಸಾಧಾರಣವಾಗಿ ವಿದೇಶೀ ಪತ್ರಕರ್ತರು ಒಂದು ದೇಶದ ರಾಜಕೀಯ, ಮಿಲಿಟರಿ, ಯುದ್ಧಗಳು ಇಂಥವುಗಳ ಬಗ್ಗೆಯೇ ಬರೆದುದು ಹೆಚ್ಚು. ಭಾರತದ ಬಗೆಗಿನ ಬರೆಹಗಳನ್ನು ನೋಡಿದರೆ, ಅನೇಕ ವಿದೇಶೀ ಬರಹಗಾರರಲ್ಲಿ, ಪತ್ರಕರ್ತರಲ್ಲಿ ಇಲ್ಲಿ ಬಡತನ, ಮೌಢ್ಯದ ಬಗ್ಗೆ ತಾವು ಮೇಲು ಎಂಬ ಭಾವದಲ್ಲಿ ಬರೆದವರೇ ಹೆಚ್ಚು, ಇಲ್ಲ ಇಲ್ಲಿನ ಸಮಾಜ, ಸಂಸ್ಕೃತಿ, ಜನ-ಜೀವನದ ಬಗ್ಗೆ ಅತ್ಯಂತ ತೆಳುವಾದ ಗ್ರಹಿಕೆಯೊಂದಿಗೆ ತೀರಾ ಅಧಿಕಾರಯುತವಾಗಿ ತೀರ್ಪಿತ್ತವರೇ ಹೆಚ್ಚು; ಇನ್ನೂ ಕೆಲವರು ವೇದಕಾಲೀನ ತಥಾಕಥಿತ ಸುವರ್ಣಯುಗಕ್ಕೆ ಮಾರುಹೋದವರೂ ಇದ್ದಾರೆ.

ಆದರೆ ಇಯಾನ್ ಜಾಕ್ ಇವೆಲ್ಲವುಗಳ ಗೊಡವೆಗೆ ಹೋದವರೇ ಅಲ್ಲ. ಅವರು ಹೆಚ್ಚು ಭಾರತದ ಸಣ್ಣಪುಟ್ಟ ನಗರಗಳನ್ನು ಇಲ್ಲಿನ ರೈಲುಗಳಲ್ಲಿ ಸುತ್ತುತ್ತಾ ಸಾಮಾನ್ಯ ಜನರ ಜೀವನದ ಬಗ್ಗೆ ಕಳಕಳಿಯಿಂದ, ಕಕ್ಕುಲಾತಿಯಿಂದ ಬರೆದರು. ಬಿಹಾರದಲ್ಲಿ ಜಾರ್ಜ್ ಆರ್ವೆಲ್ಲಿನ ಹುಟ್ಟಿದೂರು ಹುಡುಕುತ್ತಾ ಹೊರಟರು; ಕಲ್ಕತ್ತೆ, ಬಾಂಬೆಯ ಸಾಮಾನ್ಯ ಜನರ ಬಗ್ಗೆ, ಭಾಗಲ್ಪುರದ ಅಟ್ರಾಸಿಟಿಗಳ ಬಗ್ಗೆ, ಪಟ್ನಾದಲ್ಲಿ ಅಪೆಂಡಿಸೈಟಿಸ್ ಆಪರೇಷನ್ ಮಾಡಿಸಿಕೊಂಡುದರ ಬಗ್ಗೆ ಬರೆದರು.

ಇದನ್ನೂ ಓದಿ: “ಬಹಳ ಹಿಂದೆ ನಾನು ಜನರಿಗಾಗಿ ಹಲವು ಕನಸು ಕಂಡಿದ್ದೆ…”: ಬ್ರೆಜಿಲ್‌ನ ಮುಂದಿನ ಅಧ್ಯಕ್ಷ ಲೂಲಾರ…

ಇಲ್ಲಿ ಅವರನ್ನು ಎರಡು ವಿಷಯಗಳು ಸೆಳೆದವು: ಭಾರತೀಯ ರೈಲುಗಳು ಮತ್ತು ಕಲ್ಕತ್ತೆ. ಕಲ್ಕತ್ತೆಯನ್ನು ಅವರು ಕಡೆಯ ಕೈಗಾರಿಕಾ ಕ್ರಾಂತಿಯ ನಗರ ಎಂದು ಬಣ್ಣಿಸುತ್ತಿದ್ದರು ಮತ್ತು ಕಲ್ಕತ್ತೆಯಲ್ಲಿ ತನ್ನ ಬಾಲ್ಯದ ಇಂಗ್ಲೆಂಡನ್ನು ಅವರು ಕಾಣುತ್ತಿದ್ದರು. ಕಲ್ಕತ್ತೆಯಲ್ಲಿ ಅವರು ಸುಮಾರು ವರ್ಷಗಳ ಕಾಲ ನೆಲೆಸಿದ್ದರು ಕೂಡಾ. ಅವರ ಮೊದಲ ಪ್ರೇಮವೂ ಕಲ್ಕತ್ತೆಯಲ್ಲೇ. ಅವರು 1979ರಲ್ಲಿ ಅಪರ್ಣ ಬಾಗ್ಚಿಯವರನ್ನು ಮದುವೆಯಾಗಿ, ಕಲ್ಕತ್ತೆಯ ಅಳಿಯನಾದರು. ಇಯಾನ್ ಮತ್ತು ಅಪರ್ಣ 1992ರಲ್ಲಿ ಬೇರೆಯಾದರು. ಆದರೆ ಕಲ್ಕತ್ತೆಯೊಡನೆ ಅವರ ನಂಟು ಅವರ ಜೀವನದುದ್ದಕ್ಕೂ ಹಸಿರಾಗಿಯೇ ಉಳಿಸಿಕೊಂಡಿತ್ತು. ಇನ್ನೊಂದು ಇಲ್ಲಿನ ರೈಲುಗಳು. ಇಲ್ಲಿನ ರೈಲುಗಳ ಬಗ್ಗೆ ಇನ್ನಿಲ್ಲದಷ್ಟು ಬರೆದರು. ಒಂದು ರೀತಿಯಲ್ಲಿ ಹೇಳುವುದಾದರೆ ಗಾಂಧಿಯಂತೆ ಇಯಾನ್ ಜಾಕ್ ಕೂಡಾ ರೈಲುಗಳಲ್ಲಿಯೇ ಹೆಚ್ಚು ತಿರುಗಿ ಭಾರತವನ್ನು ಕಂಡರು. ಅವರು ಭಾರತದ ರೈಲುಗಳ ಬಗ್ಗೆ ಒಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದರಂತೆ; ಬರೆಯದೇ ಹೋದುದು ದುರಂತ. ಇಂದು ಇಂಗ್ಲೆಂಡಿನ ರೈಲು ಸಂಚಾರ ಖಾಸಗೀಕರಣಗೊಂಡು ಉಳ್ಳವರ ಸ್ವತ್ತಾಗಿರುವ ಕಾಲದಲ್ಲಿ ಭಾರತದ ರೈಲುಗಳು ಇಂದಿಗೂ ಜನರ ನಾಡಿಮಿಡಿತವಾಗಿರುವುದು, ಇಯಾನ್ ಜಾಕ್ ಅವರಿಗೆ ತಮ್ಮ ಬಾಲ್ಯದ ಕೈಗಾರಿಕಾ ಕ್ರಾಂತಿಯ ಇಂಗ್ಲೆಂಡಿನ ರೈಲುಗಳನ್ನು ನೆನಪಿಸುತ್ತಿತ್ತಂತೆ.

1990ರ ದಶಕದಲ್ಲಿ ಇಯಾನ್ ಜಾಕ್ ಇಂಗ್ಲೆಂಡಿನ ಜಗದ್ವಿಖ್ಯಾತ ಸಾಹಿತ್ಯ ಪತ್ರಿಕೆ ಗ್ರಾಂಟಾದ ಸಂಪಾದಕರಾದರು. 1997 ಮತ್ತು 2015ರಲ್ಲಿ ಅವರು ಭಾರತದ ಮೇಲೆ ಎರಡು ವಿಶೇಷ ಸಂಚಿಕೆಗಳನ್ನು ಹೊರತಂದಿದ್ದಾರೆ. ಇವೆರಡೂ ಸಹ ಸಂಗ್ರಹಯೋಗ್ಯವಷ್ಟೇ ಅಲ್ಲ, ಹೊಸ ಬರಹಗಾರರನ್ನು ಜಗತ್ತಿಗೆ ಪರಿಚಯಿಸುವಲ್ಲಿಯೂ ವಿಶಿಷ್ಟ ಸ್ಥಾನ ಹೊಂದಿವೆ. ಈ ಎರಡೂ ಸಂಚಿಕೆಗಳನ್ನು ಪರಿಚಯಿಸುತ್ತಾ ಇಯಾನ್ ಜಾಕ್ ಬರೆದ ಮುನ್ನುಡಿಗಳು ಈ ಕಾಲಘಟ್ಟದಲ್ಲಿ ಭಾರತದಲ್ಲಾಗುತ್ತಿದ್ದ ಪಲ್ಲಟಗಳನ್ನು ಅತ್ಯಂತ ಶಕ್ತವಾಗಿ ಹಿಡಿದಿಡುತ್ತವೆ. ಮೊದಲ ಸಂಚಿಕೆಯಲ್ಲಿ ಭಾರತದ ಬರಹಗಾರರಿಗಿಂತ ವಿದೇಶೀಯರೇ ಹೆಚ್ಚಿರುವುದನ್ನು ಒಪ್ಪುತ್ತಲೇ ಎರಡನೇ ಸಂಚಿಕೆಯ ವೇಳೆಗೆ ಭಾರತೀಯ ಬರಹಗಾರರೇ ಹೆಚ್ಚಿರುವ ಸಂಚಿಕೆಯನ್ನು ರೂಪಿಸುವ ಸೂಕ್ಷ್ಮತೆಯನ್ನು ಇಯಾನ್ ಜಾಕ್ ಹೊಂದಿದ್ದರು. 1997ರ ಸಂಚಿಕೆಯಲ್ಲಿ ಅರುಂಧತಿ ರಾಯ್ ಅವರ ’ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಕೃತಿಯ ಮೊದಲ ಆಯ್ದ ಭಾಗವನ್ನು ಪ್ರಕಟಿಸಿದವರು ಇಯಾನ್ ಜಾಕ್; ಆ ಕೃತಿ ಮುಂದೆ ಬುಕರ್ ಪ್ರಶಸ್ತಿ ಪಡೆದು ಅರುಂಧತಿ ಮನೆಮಾತಾದರು. ಇದೇ ಸಂಚಿಕೆಯಲ್ಲಿ ಊರ್ವಶಿ ಬುಟಿಯಾಲಾ ಅವರು ದೇಶವಿಭಜನೆಯ ಬಗ್ಗೆ, ಸುಕೇತು ಮೆಹ್ತಾ ಅವರು ಮುಂಬೈ ಬಗ್ಗೆ ಬರೆದಿದ್ದಾರೆ. ಇವರೀರ್ವರೂ ಮುಂದೆ ಈ ವಿಷಯಗಳ ಮೇಲೆ ಮೇರುಕೃತಿಗಳನ್ನು ರಚಿಸಿದರು. ಇನ್ನು 2015ರ ಸಂಚಿಕೆಯಲ್ಲಿ ವಿವೇಕ ಶಾನಭಾಗರ ’ಘಾಚರ್ ಘೋಚರ್’ ಕೃತಿಯ ಅನುವಾದದ ಆಯ್ದ ಭಾಗ ಮೊದಲ ಬಾರಿಗೆ ಪ್ರಕಟಗೊಂಡಿತು. ನಂತರ ಅದು ಜಗತ್ತಿನಾದ್ಯಂತ ಪ್ರಶಂಸೆಗೊಳಗಾದ ಕೃತಿಯೆನಿಸಿತು. ಹೀಗೆ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸುವ ನುರಿತ ಸಂಪಾದಕನ ಗುಣವೂ ಅವರಲ್ಲಿತ್ತು.

ಇದನ್ನೂ ಓದಿ: ಬ್ರೆಜಿಲ್, ಲುಲಾ ಮತ್ತು ಗುಲಾಬಿ ಅಲೆ 2.0; ಕತ್ತಿಯಂಚಿನ ನಡಿಗೆ

ಮಫ್ಯೂಸಿಲ್ ಜಂಕ್ಷನ್ – ಇಂಡಿಯನ್ ಎನ್ಕೌಂಟರ್ಸ್ 1977-2012 ಎಂಬ ಕೃತಿಯಲ್ಲಿ ಅವರ ಭಾರತದ ಮೇಲಿನ ಬರಹಗಳ ಒಂದು ಸಣ್ಣ ಸಂಗ್ರಹವಿದೆ. ಇನ್ನು 1997, 2015ರ ಅವರ ಸಂಪಾದಕತ್ವದ ಗ್ರಾಂಟಾದ ಭಾರತದ ಮೇಲಿನ ವಿಶೇಷ ಸಂಚಿಕೆಗಳು ಲಭ್ಯವಿವೆ. ಭಾರತದ ಜನಸಾಮಾನ್ಯರ, ಇಲ್ಲಿನ ರೈಲುಗಳ ಗೆಳೆಯನೊಬ್ಬನ ಮಾತುಕತೆಯಂತಿವೆ. ಸಾಧ್ಯವಾದರೆ ಓದಿ.

ಸೂರ್ಯ ಚಿಂತಾಮಣಿ
ಯುವ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...