Homeಕರ್ನಾಟಕಶರಾವತಿ ಕಣಿವೆಯ ಕೂಗು

ಶರಾವತಿ ಕಣಿವೆಯ ಕೂಗು

ಏನದು ಯೋಜನೆ? ಯಾಕೆ ಈ ಮಟ್ಟದ ವಿರೋಧ

- Advertisement -
- Advertisement -

ಕಳೆದ ಒಂದು ವಾರದಿಂದ ಶರಾವತಿ ಕಣಿವೆ ಕದಲುತ್ತಿದೆ. ಉಪಮುಖ್ಯಮಂತ್ರಿ ಡಾಜಿ.ಪರಮೇಶ್ವರ್ ಅವರು ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ನಿಭಾಯಿಸಲು ಶರಾವತಿ ನದಿಯ ನೀರನ್ನು ತರುವ 12,500 ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದಕ್ಕೆ ಡಿಪಿಆರ್ ತಯಾರಿಸಲು ಆದೇಶ ನೀಡಲಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದೇ ತಡ ಶರಾವತಿಯ ಎಡ ಬಲಗಳ ಊರುಗಳ ಜನರೆಲ್ಲ ಕೆಂಡಾಮಂಡಲವಾಗಿದ್ದಾರೆ. ಅವರು ಹಾಗೆ ಹೇಳಿದ ಎರಡೇ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜನಾಂದೋಲನವೊಂದು ಶುರುವಾಗಿ ಈಗ ಜಿಲ್ಲೆಯ ಪ್ರತಿ ತಾಲ್ಲೂಕು ಪ್ರತಿ ಹೋಬಳಿ ಹಾಗೂ ಪ್ರತಿ ಊರಿನಲ್ಲೂ ಪ್ರತಿಧ್ವನಿಸತೊಡಗಿದೆ. ಚಳವಳಿಗಳ ತವರೂರೆಂದೇ ಹೆಸರಾಗಿರುವ ಶಿವಮೊಗ್ಗ ಜಿಲ್ಲೆ ಹಲವಾರು ವರ್ಷಗಳ ನಂತರ ಬೃಹತ್ ಮಟ್ಟದ ಹೋರಾಟವೊಂದಕ್ಕೆ ಸಾಕ್ಷಿಯಾಗಿದ್ದು ಜುಲೈ 10ನೇ ತಾರೀಖಿನಂದು ಕರೆನೀಡಿರುವ ಶಿವಮೊಗ್ಗ ಜಿಲ್ಲೆ ಬಂದ್ ಬಹುತೇಕ ಯಶಸ್ವಿಗೊಳ್ಳುವುದು ಖಚಿತವಾಗಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್- ಜೆಡಿಎಸ್ ಸರ್ಕಾರ ಭಾರೀ ಮುಖಭಂಗಕ್ಕೊಳಗಾಗಲಿರುವುದೂ ನಿಜ. ಮಾತ್ರವಲ್ಲ ಈ ವಿಷಯ ವಿರೋಧ ಪಕ್ಷವಾಗಿರುವ ಬಿಜೆಪಿಗೂ ಮಲೆನಾಡಿನಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೇಳಿ ಮಾಡಿಸಿದಂತಿದೆ. ಈಗಾಗಲೇ ಈ ಭಾಗದ ಹಲವು ಕಾಂಗ್ರೆಸ್-ಜೆಡಿಎಸ್ ನಾಯಕರು, ಕಾರ್ಯಕರ್ತರು ಸರ್ಕಾರವನ್ನು ಸಮರ್ಥಿಸಿಕೊಳ್ಳಲಾಗದ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.


ಏನದು ಯೋಜನೆ?
ಯಾಕೆ ಈ ಮಟ್ಟದ ವಿರೋಧ
2031ನೇ ಇಸವಿಗೆ ಬೆಂಗಳೂರು ಎದುರಿಸುವ ಕುಡಿಯುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು 2010ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಿವೃತ್ತ ಚೀಫ್ ಎಂಜಿನಿಯರ್ ತ್ಯಾಗರಾಜ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಅದು 2014ರಲ್ಲಿ ವರದಿ ಸಲ್ಲಿಸಿ ಇರುವ ಎಲ್ಲಾ ಮಾರ್ಗಗಳ ಪೈಕಿ ಶರಾವತಿ ನದಿಯಿಂದ ನೀರು ತರುವುದೇ ಉತ್ತಮ ಮಾರ್ಗ ಎಂದು ಶಿಫಾರಸು ನೀಡಿತ್ತು. ಆದರೆ 2014ಲ್ಲೇ ಈ ವರದಿ ಪ್ರಾಯೋಗಿಕವಲ್ಲ ಎಂಬ ಅಭಿಪ್ರಾಯಗಳು ತಜ್ಞ ವಲಯದಿಂದ ಬಂದಿದ್ದವು. ಇದರ ನಂತರ 2016ರಲ್ಲಿ ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷ ಎ.ಕೆ. ಬಜಾಜ್ ನೇತೃತ್ವದ ಸಮಿತಿಯೊಂದನ್ನು ನೇಮಿಸಲಾಗಿತ್ತು.

ಆದರೆ ಹಾಲಿ ಸರ್ಕಾರ 2014ರ ತ್ಯಾಗರಾಜ್ ಸಮಿತಿ ವರದಿಯನ್ನೇ ಹಠ ಹಿಡಿದು ಜಾರಿಗೊಳಿಸಲು ಹೊರಟಿರುವುದು ತೀವ್ರ ಟೀಕೆಗೆ, ಜನವಿರೋಧಕ್ಕೆ ಕಾರಣವಾಗುವುದು ಮಾತ್ರವಲ್ಲ ಅನುಮಾನಗಳಿಗೂ ಕಾರಣವಾಗಿದೆ. 12 ಸಾವಿರ ಕೋಟಿ ರೂಪಾಯಿಗಳ ಯೋಜನೆಯನ್ನು ಡಿಸಿಎಂ ಘೋಷಿಸುವುದರ ಹಿಂದೆ ಬೆಂಗಳೂರಿಗೆ ನೀರು ತರುವುದಕ್ಕಿಂತಲೂ ಹೆಚ್ಚಾಗಿ ತಮ್ಮ ತಿಜೋರಿ ಭರ್ತಿ ಮಾಡಿಕೊಳ್ಳುವ ಉದ್ದೇಶವೇ ಇರಬಹುದೆ ಎಂದು ಗುಮಾನಿ ಎದ್ದಿದೆ. ಈಗಗಲೇ 18 ಸಾವಿರ ಕೋಟಿ ವೆಚ್ಚದ ಇಂತಹುವೇ ಒಂದು ಅಪ್ರಾಯೋಗಿಕ ಫ್ಲಾಪ್ ಯೋಜನೆಯನ್ನು ಎತ್ತಿನಹೊಳೆ ಹೆಸರಲ್ಲಿ ಜಾರಿಗೊಳಿಸಿ, ಅತ್ತ ನದಿ ಒರತೆಗಳೂ ಬತ್ತಿ ಇತ್ತ ನೀರೂ ಇಲ್ಲದ ಸ್ಥಿತಿ ಉಂಟಾಗಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವಾಗಲೇ ಅಂತಹುದ್ದೇ ಮತ್ತೊಂದು ಯೋಜನೆ ಘೋಷಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಶರಾವತಿ ಕಣಿವೆಯ ಜನತೆ ಈ ಮಟ್ಟದಲ್ಲಿ ಪ್ರತಿಕ್ರಿಯಿಸಲು ಕಳೆದ ಎಂಟು ದಶಕಗಳಿಂದಲೂ ಪದೇ ಪದೇ ಅಭಿವೃದ್ಧಿ ಹೆಸರಿನ ಯೋಜನೆಗಳಿಗೆ ಅವರು ತಲೆ ಕೊಟ್ಟುಕೊಂಡು ಬಂದಿರುವುದೇ ಆಗಿದೆ. 1940ರ ದಶಕದಷ್ಟು ಹಿಂದೆಯೇ ಹಿರೇಭಾಸ್ಕರ ಜಲಾಶಯಕ್ಕಾಗಿ ಮನೆ ಮಠ ತೊರೆದು ಬೀದಿಗೆ ಬಿದ್ದವರು ಮತ್ತೆ 1964ರಲ್ಲಿ ಲಿಂಗನಮಕ್ಕಿ ಅಣೆಕಟ್ಟೆಯಾದಾಗ, ನಂತರ ತಲಕಳಲೆ ಅಣೆಕಟ್ಟೆಯಾದಾಗ ಮತ್ತೆ ಮತ್ತೆ ಬೀದಿಗೆ ಬಿದ್ದರು. ವಾರಾಹಿ ನದಿಗೆ ಅಡ್ಡಲಾಗಿ ಮಾಣಿ, ಚಕ್ರಾ ನದಿಗೆ ಸಾವೆಹಕ್ಲು ಅಣೆಕಟ್ಟೆ ಕಟ್ಟುವಾಗ ಕತ್ತಲಿಗೆ ತಳ್ಳಲ್ಪಟ್ಟ ಲಕ್ಷಾಂತರ ಜನರ ಬದುಕು ಇಷ್ಟು ದಶಕಗಳಾದರೂ ಬೆಳಕು ಕಾಣಲೇ ಇಲ್ಲ. ನಾಡಿಗೇ ಬೆಳಕು ಕೊಟ್ಟ ಶರಾವತಿ, ವಾರಾಹಿಯರ ಮಕ್ಕಳ ಬದುಕು ಕತ್ತಲಲ್ಲೇ ಉಳಿಯಿತು. ಸರ್ಕಾರಗಳು ನೀಡಿದ್ದು ಪುಗಸಟ್ಟೆ ಭರವಸೆಗಳನ್ನು ಮಾತ್ರವೇ ಹೊರತು ಪುಡಿಗಾಸಿನ ಪರಿಹಾರವೂ ದೊರೆಯಲಿಲ್ಲ. ಇಂತಹ ಸನ್ನಿವೇಶದಲ್ಲಿ ಶರಾವತಿ ಮಕ್ಕಳ ಪ್ರಶ್ನೆ ಇದು- ರಾಜ್ಯವನ್ನು ಏಳಿಗೆ ಮಾಡಲು ಜಾರಿ ಮಾಡಿದ ಯೋಜನೆಗಳ ಮೂಲಕ ನಮ್ಮ ಬದುಕುಗಳನ್ನೇ ಮುಳುಗಡೆ ಮಾಡಿರುವ ನೀವು ಇನ್ನೂ ನಮ್ಮ ಮೇಲೆ ಎಷ್ಟು ಸಲ ದೌರ್ಜನ್ಯ ನಡೆಸುತ್ತೀರಿ ಎಂದು ಅವರೀಗ ತಿರುಗಿ ಬಿದ್ದಿದ್ದಾರೆ.

ಸಮುದ್ರಕ್ಕೆ ಪೋಲಾಗಿ ಹೋಗುವ ನೀರು?

ಶರಾವತಿ ನದಿಯನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ಕುರಿತು ಸುದ್ದಿ ಮಾಧ್ಯಮಗಳೆದುರು ಮಾತಾಡಿರುವ ಮಾನ್ಯ ಉಪಮುಖ್ಯಮಂತ್ರಿಗಳು “ಸಮುದ್ರಕ್ಕೆ ಪೋಲಾಗಿ ಹೋಗುವ ನೀರನ್ನು ಬೆಂಗಳೂರಿಗೆ ತರಿಸುತ್ತೇವೆ” ಎಂದು ಆಡಿರುವ ಮಾತು ಈ ಭಾಗದ ಜನರಿಗೆ ಆಕ್ರೋಶವನ್ನೇ ತರಿಸಿದೆ. ಜೋಗ ಜಲಪಾತದ ನಂತರದಲ್ಲಿ ಶರಾವತಿಯ ಟೇಲ್‍ಎಂಡ್‍ನಲ್ಲಿ ಈ ನದಿಯ ಹರಿವನ್ನೇ ಆಶ್ರಯಿಸಿ ಬದುಕುತ್ತಿರುವ ನೂರಾರು ಎಷ್ಟೋ ಹಳ್ಳಿಗಳ ಸಾವಿರಾರು ಮೀನುಗಾರರ, ಕೃಷಿಕರ ಮಾನವ ಹಕ್ಕಿನ ಉಲ್ಲಂಘನೆಯ ಮಾತೂ ಹೌದಾಗಿದೆ. ಈ ನೀರನ್ನೇ ಆಶ್ರಯಿಸಿರುವ ಅಸಂಖ್ಯಾತ ಜಲಚರಗಳ, ವನ್ಯಜೀವಿಗಳ ಪಾಲಿನ ಮರಣಶಾಸನವೂ ಹೌದು. ಅಷ್ಟಕ್ಕೂ ಕಳೆದ ಕೆಲವು ದಶಕಗಳಲ್ಲಿ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗಿ ನದೀಪಾತ್ರವೇ ಕಿರಿದಾಗಿ ಹೋಗಿರುವ ಬಗ್ಗೆ ಇವರಿಗೇನಾದರೂ ಕಾಳಜಿ ಇದೆಯೇ? ಲಿಂಗನಮಕ್ಕಿ ಅಣೆಕಟ್ಟೆ ಪೂರ್ತಿ ತುಂಬಿದಾಗ 155 ಟಿಎಂಸಿ ನೀರು ಹಿಡಿದಿಡುತ್ತದೆ ಎನ್ನಲಾಗಿದೆ. ಆದರೆ ಈಗ ಡ್ಯಾಮಿನಲ್ಲ್ಲಿ ಶೇಕಡಾ 40ರಷ್ಟು ಹೂಳು ತುಂಬಿಕೊಂಡಿದೆ. ಕಳೆದ ಒಂದು ದಶಕದಲ್ಲಿ ಅಣೆಕಟ್ಟೆ ಪೂರ್ತಿ ತುಂಬಿರುವುದು ಕೇವಲ ಎರಡು ಸಲ ಮಾತ್ರ. ಉಳಿದ ವರ್ಷಗಳಲ್ಲಿ ಮಳೆಯ ಕೊರತೆಯಿಂದಾಗಿ ಅರ್ಧ ಮಟ್ಟವನ್ನೂ ತುಂಬಿರುವುದಿಲ್ಲ. ಈ ಸ್ಥಿತಿಯಲ್ಲಿ 30 ಟಿಎಂಸಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಮಾತೆಷ್ಟು ಅವಿವೇಕತನದ್ದು ಎಂಬುದು ಸ್ಪಷ್ಟವಾಗಿದೆ.

ಕಾವೇರಿದ ಶರಾವತಿ ಕಣಿವೆ

ಶರಾವತಿಯಿಂದ ಬೆಂಗಳೂರಿಗೆ ನೀರು ಒಯ್ಯುವ ಯೋಜನೆಗೆ ನಮ್ಮ ಒಪ್ಪಿಗೆ ಇಲ್ಲ. ಪ್ರಾಣ ಕೊಟ್ಟೇವು ಶರಾವತಿ ಬಿಡೆವು ಎಂಬ ಘೋಷಣೆಗಳು ಈಗ ಈ ಭಾಗದ ಹಳ್ಳಿಹಳ್ಳಿಗಳಲ್ಲಿ ಮೊಳಗತೊಡಗಿವೆ. ಕಾಂಗ್ರೆಸ್ ಜೆಡಿಎಸ್‍ಗಳನ್ನೂ ಒಳಗೊಂಡಂತೆ ಈ ಭಾಗದ ರಾಜಕೀಯ ಮುಖಂಡರು ಯೋಜನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾದ್ಯಂತ ಹರಳುಗಟ್ಟುತ್ತಿರುವ ಆಂದೋಲನಕ್ಕೆ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ನಾಯಕತ್ವ ನೀಡುತ್ತಿದೆ. ನಾಡಿನ ಹಿರಿಯ ಸಾಹಿತಿ ನಾ ಡಿಸೋಜಾ ಇದರ ಗೌರವಾಧ್ಯಕ್ಷರಾಗಿ ತಮ್ಮ 86ರ ಇಳಿ ವಯಸ್ಸಿನಲ್ಲಿಯೂ ಹಳ್ಳಿಗಳಿಗೆ ಹೋಗಿ ಸಭೆಗಳಲ್ಲಿ ಭಾಗವಹಿಸುತ್ತಾ ಯುವಕರಿಗೆಲ್ಲಾ ಪ್ರೇರಣೆಯಾಗಿದ್ದಾರೆ. ಸಾಗರ ತಾಲ್ಲೂಕಿನ ಆವಿನಹಳ್ಳಿ, ತುಮರಿ, ತ್ಯಾಗತಿ, ಆನಂದಪುರ, ಹೊಸನಗರ, ರಿಪ್ಪನ್ ಪೇಟೆ, ಬಿದನೂರು-ನಗರ, ಶಿರಾಳಕೊಪ್ಪ, ಸೊರಬದ ಎಲ್ಲ ಹೋಬಳಿ ಕೇಂದ್ರಗಳು ಹೀಗೆ ಎಲ್ಲಾ ಕಡೆಗಳಲ್ಲಿ ಇದುವರೆಗೆ ನೂರಾರು ಸಭೆಗಳು ನಡೆದಿವೆ, ಸ್ಥಳೀಯವಾಗಿ ಸಣ್ಣ, ದೊಡ್ಡ ಪ್ರತಿಭಟನೆಗಳು ದಿನನಿತ್ಯ ನಡೆಯುತ್ತಿವೆ.
ಒಟ್ಟಿನಲ್ಲಿ ಜುಲೈ 10ರಂದು ಇಡೀ ಶಿವಮೊಗ್ಗ ಜಿಲ್ಲೆಯ ವ್ಯಾಪಾರ-ವಹಿವಾಟು, ಮತ್ತೆಲ್ಲ ಆರ್ಥಿಕ ಶೈಕ್ಷಣಿಕ ಚಟುವಟಿಕೆಗಳು ಸ್ತಬ್ದಗೊಳ್ಳುವುದಂತೂ ಖಚಿತವಾಗಿದೆ. ಒಂದೊಮ್ಮೆ ಇದಕ್ಕೂ ಸರ್ಕಾರ ಬಗ್ಗದಿದ್ದರೆ ಇಡೀ ಮಲೆನಾಡು ವ್ಯಘ್ರಗೊಳ್ಳಲೂಬಹುದು… ಸರ್ಕಾರಕ್ಕೆ ಜವಾಬ್ದಾರಿ, ಜನರ ಆತಂಕಗಳನ್ನು ಕೇಳಿಸಿಕೊಳ್ಳುವ ಮನಸ್ಸು ಇರುವುದೇ ನಿಜವಾದರೆ ಯಾವುದೇ ಅನಾಹುತಗಳಿಗೆ ಮೊದಲು ಈ ಯೋಜನೆ ಕೈ ಬಿಡಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...