ರಾಜ್ಯದಲ್ಲಿ ಅಕ್ಟೋಬರ್ 30 ರಂದು ನಡೆಯಲಿರುವ ಉಪಚುನಾವಣೆಗಳ ಉಸ್ತುವಾರಿಗಳ ಪಟ್ಟಿಯಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ, ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ಬಿಜೆಪಿ ಕೈಬಿಟ್ಟಿತ್ತು. ಈ ಬಗ್ಗೆ ವಿಜಯೇಂದ್ರ ಅವರ ಅಭಿಮಾನಿಗಳು ಬಿಜೆಪಿ ನಾಯಕತ್ವದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ಅವರನ್ನು ಉಸ್ತುವಾರಿಗಳ ಪಟ್ಟಿಗೆ ಅವರ ಹೆಸರನ್ನು ಸೋಮವಾರ ಸೇರಿಸಿದೆ.
ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಹಾನಗಲ್, ಸಿಂದಗಿ ಉಪಚುನಾವಣೆಗೆ ದಿನಾಂಕ ಘೋಷಣೆ: ಕಸರತ್ತು ಆರಂಭಿಸಿದ ಪಕ್ಷಗಳು
ವಿಜಯೇಂದ್ರ ಅವರ ಹೆಸರು ಬಿಜೆಪಿ ಕೈಬಿಟ್ಟ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಪಕ್ಷದ ಉನ್ನತ ನಾಯಕತ್ವದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಅವರು ಟ್ವಿಟರ್ನಲ್ಲಿ ಖಂಡಿಸಿದ್ದರು. “ಪಕ್ಷದ ತೀರ್ಮಾನದಂತೆ, ನಮ್ಮ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಕಾರ್ಯನಿರ್ವಹಿಸೋಣ. ಪಕ್ಷಕ್ಕೆ ಮುಜುಗರ ತರುವ ಯಾವುದೇ ವಿಷಯಕ್ಕೂ ನನ್ನ ಸಮ್ಮತಿಯಿಲ್ಲ” ಎಂದು ಹೇಳಿದ್ದರು.
ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದೂ ಸೇರಿದಂತೆ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಕಟಿಬದ್ಧನಾಗಿದ್ದೇನೆ. ಪಕ್ಷದ ಗೆಲುವೇ ನಮಗೆ ಮುಖ್ಯ, ಇನ್ನ್ಯಾವುದೂ ಅಲ್ಲ. ಭಿನ್ನಾಭಿಪ್ರಾಯದ ಧ್ವನಿಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ, ವಿಪಕ್ಷಗಳಿಗೆ ಪರೋಕ್ಷ ನೆರವು ನೀಡಿದಂತಾಗುತ್ತದೆ. (2/3)
— Vijayendra Yeddyurappa (@BYVijayendra) October 4, 2021
ಇದನ್ನೂ ಓದಿ: ಬಿಜೆಪಿ ಗೆಲ್ಲಿಸಲು ಮುಸ್ಲಿಮರಿಗೆ ಜೆಡಿಎಸ್ ಟಿಕೆಟ್- ಸಿದ್ದರಾಮಯ್ಯ; ಎಚ್ಡಿಕೆ ಪ್ರತಿಕ್ರಿಯೆ
ಪಕ್ಷವು ಅಕ್ಟೋಬರ್ 1 ರಂದು ಘೋಷಿಸಿದ್ದ ಉಸ್ತುವಾರಿಗಳ ಗುಂಪಿನಲ್ಲಿ ಬಿಜೆಪಿ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಅವರ ಹೆಸರು ಇರಲಿಲ್ಲ. ಅವರ ಅಭಿಮಾನಿಗಳ ಆಕ್ರೊಶ ವ್ಯಕ್ತವಾದ ನಂತರ, ಸೋಮವಾರ ಪಕ್ಷವು ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಹಾನಗಲ್ ಉಸ್ತುವಾರಿಯಾಗಿ ಅವರನ್ನು ಸೇರಿಸಿದ್ದಾರೆ. ಅವರ ಜೊತೆಗೆ ಸಚಿವರಾದ ಮುರುಗೇಶ್ ನಿರಾಣಿ, ಜೆ ಸಿ ಮಾಧುಸ್ವಾಮಿ, ಬಿ ಸಿ ಪಾಟೀಲ್, ಶಿವರಾಮ ಹೆಬ್ಬಾರ್ ಮತ್ತು ಸಂಸತ್ ಸದಸ್ಯ ಶಿವಕುಮಾರ ಉದಾಸಿ ಸೇರಿದಂತೆ ಒಟ್ಟು 13 ಉಸ್ತುವಾರಿಗಳನ್ನು ನೇಮಿಸಲಾಗಿದೆ.
ಸಿಂದಗಿ ಕ್ಷೇತ್ರದಲ್ಲಿ ಉಸ್ತುವಾರಿಯಾಗಿ, ಸಚಿವರಾದ ಗೋವಿಂದ್ ಕಾರಜೋಲ್, ವಿ ಸೋಮಣ್ಣ, ಸಿ ಸಿ ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಪಟ್ಟಿಯಲ್ಲಿ ಇದ್ದಾರೆ.
ಸಿಂದಗಿಯಲ್ಲಿ ಜೆಡಿ(ಎಸ್) ಶಾಸಕರಾದ ಎಂ.ಸಿ. ಮನಗೂಳಿ ಮತ್ತು ಹಾನಗಲ್ನಲ್ಲಿ ಬಿಜೆಪಿಯ ಸಿ. ಎಂ. ಉದಾಸಿ ಅವರ ಮರಣದಿಂದಾಗಿ ಉಪಚುನಾವಣೆಗಳು ನಡೆಯುತ್ತಿದೆ.
ಕೆ.ಆರ್. ಪೇಟೆ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ವಿಜಯೇಂದ್ರ ಅವರೇ ಹಾನಗಲ್ ಅಭ್ಯರ್ಥಿ ಎಂದು ಊಹಿಸಲಾಗಿತ್ತು.
ಇದನ್ನೂ ಓದಿ: ಬೈಎಲೆಕ್ಷನ್: ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ; ಕಾಂಗ್ರೆಸ್, ಬಿಜೆಪಿ ಟಿಕೆಟ್ ಯಾರಿಗೆ?
ಮೂಲಗಳ ಪ್ರಕಾರ, ಹಾನಗಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯಲ್ಲಿ ದಿವಂಗತ ಮಾಜಿ ಶಾಸಕ ಸಿ.ಎಂ. ಉದಾಸಿಯವರ ಸೊಸೆ, ಹಾವೇರಿ-ಗದಗ ಸಂಸದ ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಉದಾಸಿ, ಕಲ್ಯಾಣ್ ಕುಮಾರ್ ಶೆಟ್ಟರ್ ಮತ್ತು ಶಿವರಾಜ್ ಸಜ್ಜನರ್ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಸಿಂದಗಿಯಲ್ಲಿ, 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಭೂಸನೂರ್, ಅಶೋಕ್ ಅಲ್ಲಾಪುರ, ಶಂಬುಲಿಂಗ ಕಕ್ಕಲಮೇಲಿ, ಸಿದ್ದು ಬಿರಾದಾರ್ ಮತ್ತು ಸಂಗನಗೌಡ ಪಾಟೀಲ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಜೆಡಿ(ಎಸ್) ಈಗಾಗಲೇ ನಾಜಿಯಾ ಶಕೀಲಾ ಅಂಗಡಿ ಅವರನ್ನು ಸಿಂದಗಿಯಲ್ಲಿ ಮತ್ತು ನಿಯಾಜ್ ಶೇಖ್ ಅವರನ್ನು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನಾಗಿ ಹೆಸರಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ದಿವಂಗತ ಎಂ.ಸಿ. ಮನಗೂಳಿ ಅವರ ಮಗ ಅಶೋಕ್ ಮನಗೂಳಿ ಅವರನ್ನು ಸಿಂದಗಿಯಿಂದ ಅಭ್ಯರ್ಥಿಯಾಗಿ ಅಂತಿಮಗೊಳಿಸಿದೆ. ಹಾನಗಲ್ನಲ್ಲಿ ಮಾಜಿ ಎಂಎಲ್ಸಿ ಶ್ರೀನಿವಾಸ್ ಮಾನೆ ಅವರನ್ನು ಅಭ್ಯರ್ಥಿಯಾಗಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಸಿಂದಗಿ ದಲಿತ ಯುವಕನ ಹತ್ಯೆ: ಬಿಜೆಪಿ ನೀಡುತ್ತಿರುವ ಬೆಂಬಲವೇ ಕೃತ್ಯಕ್ಕೆ ಕಾರಣವೆಂದ ಸಿದ್ದರಾಮಯ್ಯ


