Homeಚಳವಳಿಲೋಹಿಯಾ ಎಂಬ ಬದ್ಧತೆಯ ಚೈತನ್ಯ

ಲೋಹಿಯಾ ಎಂಬ ಬದ್ಧತೆಯ ಚೈತನ್ಯ

- Advertisement -
- Advertisement -

ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಅರ್ಥಶಾಸ್ತ್ರದಲ್ಲಿನ ಸಂಶೋಧನೆಯ ಸಲುವಾಗಿ ಕಳೆದ ಶತಮಾನದ ಮೂವ್ವತ್ತರ ದಶಕದ ಆದಿಭಾಗದಲ್ಲಿ (1930) ರಾಮಮನೋಹರ ಲೋಹಿಯಾ ಜರ್ಮನಿಗೆ ತೆರಳಿದರು. ಅವರು ಅಪರಿಮಿತ ಉತ್ಸಾಹದಿಂದಲೇ ಕಾರ್ಲ್‍ಮಾಕ್ರ್ಸ್‍ನ ಮಹತ್ವಪೂರ್ಣ ಬರಹಗಳನ್ನು ಅಧ್ಯಯನ ಮಾಡಿದರು. ಗಾಂಧೀಜಿಯವರ ಅಹಿಂಸೆ, ಸ್ವಾತಂತ್ರ್ಯ, ಸಮಾನತೆ, ವಿಕೇಂದ್ರೀಕರಣ ಮತ್ತು ತಾನು ಅರ್ಥೈಸಿಕೊಂಡ ರೀತಿಯಲ್ಲಿ ಜನಸಮುದಾಯದ ಹಿತಕ್ಕೆ ತನ್ನನ್ನು ಅಕ್ಷರಶಃ ತೆತ್ತುಕೊಳ್ಳುವ ಗುಣಗಳು ಲೋಹಿಯಾರಲ್ಲಿ ಹದಿಹರೆಯದಲ್ಲಿಯೇ ಮೈಗೂಡಿದ್ದವು. ಜೊತೆಗೆ ಸತ್ಯದ ಸಕಲ ಸೂಕ್ಷ್ಮಗಳಿಗೂ ಮನಸ್ಸನ್ನು ಸದಾ ಕಾಲ ತೆರೆದಿಟ್ಟುಕೊಳ್ಳಬೇಕೆನ್ನುವ ಪ್ರಜಾಸತ್ತಾತ್ಮಕ ಹಠದ ಕಾಳಜಿಗಳಿಂದ ಪ್ರಭಾವಿತರಾಗಿದ್ದ ಲೋಹಿಯಾ ತೀವ್ರ ಸಂವೇದನಾಶೀಲ ಚಿಂತಕರಾಗಿದ್ದರು. ಲೋಹಿಯಾ ಅವರು ತಮ್ಮ ಕಾಲದ ಎಲ್ಲ ಪುರೋಗಾಮಿ ಚಿಂತನೆಗಳ ಬೆಳಕಿನಲ್ಲಿ ಭಾರತದ ಸುಡುವಾಸ್ತವಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಹಾಗೂ ಅವುಗಳಿಗೆ ಮಾನವೀಯ ಅಂತಃಕರಣದ ಅಮೃತಸ್ಪರ್ಶವನ್ನು ನೀಡುವ ಬಗೆ ಯಾವುದೆಂಬ ಬಗ್ಗೆ ಕಾಲಕಾಲಕ್ಕೆ ಗಾಢವಾಗಿ ಧ್ಯಾನಿಸಿದವರು. ಹೋರಾಟದ ಹಲವಾರು ಯೋಜನೆಗಳನ್ನು ಇವರು ಭಾರತದ ಒಳಗೆ ಮತ್ತು ಹೊರಗೆ ಹಾಗೂ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಹಮ್ಮಿಕೊಳ್ಳುತ್ತಲೇ ಉದ್ದಕ್ಕೂ ಜೀವ ಸವೆಸಿದವರು. ಇಂತಹ ಮಹಾನ್ ಸಾಧಕರ ಚಿಂತನೆ, ತ್ಯಾಗ ಮತ್ತು ಜೀವಪರ ಆಲೋಚನೆಗಳು ನಮ್ಮೆಲ್ಲರ ನಡುವೆ ಚರ್ಚೆಗೆ ಒಳಗಾಗಬೇಕು. ಹಾಗೂ ಆಶಾದಾಯಕವಾದ ಜನಪರ ಚಟುವಟಿಕೆಗಳು ಸದಭಿರುಚಿಯ ಆಕಾಂಕ್ಷೆಗಳ ತುಂಬು ಚೌಕಟ್ಟಿನಲ್ಲಿ ನಿರಂತರವಾಗಿ ಎಲ್ಲೆಲ್ಲೂ ಕುಡಿಯೊಡೆಯುತ್ತಿರಬೇಕು. ಈ ಹಂಬಲದ ದ್ಯೋತಕವಾಗಿ ಅರಿವಿನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುವ ನಿಲುವಿಗೆ ಬದ್ಧರಾಗಿರುವ ಅನೇಕರನ್ನು ರಾಮಮನೋಹರ ಲೋಹಿಯಾ ಬರಹಗಳು ಪ್ರೇರೇಪಿಸುವೆ. ಲೋಹಿಯಾ ನಮ್ಮನ್ನಗಲಿ ಐದಾರು ದಶಕಗಳು ಕಳೆದ ನಂತರ ಅವರ ಬರಹಗಳು ಹಲವು ಸಂಪುಟಗಳಲ್ಲಿ ನಮ್ಮ ಕೈಸೇರಿವೆ. ನಾಡಿನ ಯಾವ ಮೂಲೆಗೆ ತೆರಳಿದರೂ ಈ ಹೊತ್ತಗೆಗಳ ಪ್ರಕಟಣೆಯ ಹಿಂದಿರುವ ಆರೋಗ್ಯಕರ ತುಡಿತಗಳನ್ನು ಕುರಿತು ಕೊಂಡಾಡುವವರು ಎಡತಾಕುತ್ತಿರುತ್ತಾರೆ. ಹಾಗೆಯೇ ಈ ಸಂಪುಟಗಳ ಹುಡುಕಾಟದಲ್ಲಿರುತ್ತಾರೆ. ನಮ್ಮ ನಡುವಣ ಕಡುಬಡವ ಶ್ರಮಜೀವಿ ಬಂಧುಗಳು ಮತ್ತು ಸಾಮಾಜಿಕ ಆರ್ಥಿಕ ಕೊರತೆಗಳ ಹಿನ್ನೆಲೆಗಳಿಂದ ಬಂದಿರುವ ಎಲ್ಲಾ ತರುಣ ತರುಣಿಯರೂ ಸಹ ಅನಾಯಾಸವಾಗಿ ಕೊಂಡು ಓದುವ ಸಂತೋಷಕ್ಕೆ ಒಳಗಾಗಲೆನ್ನುವ ಕಾರಣದಿಂದಾಗಿ ಕರ್ನಾಟಕ ಸರ್ಕಾರವು ಈ ಗ್ರಂಥಗಳನ್ನು ಅತ್ಯಂತ ಸುಲಭ ಬೆಲೆಗೆ ದೊರೆಯುವ ಸೌಲಭ್ಯವನ್ನು ಒದಗಿಸಿರುವುದು ಶ್ಲಾಘನೀಯವಾದ ಕ್ರಮವಾಗಿದೆ.
ವಿಶ್ವಮಾನವತತ್ವದ ಆಶಯಗಳಿಗೆ ಉದ್ದಕ್ಕೂ ಬದ್ಧರಾಗಿದ್ದ ಕುವೆಂಪು ಅವರು ಈ ಸಂಬಂಧದ ಅನಿಷ್ಟಕಾರಕ ಅಸಮಾನತೆಯ ಕ್ರೌರ್ಯಗಳಿಗೆ ಕಡುವಿರೋಧಿಯಾಗಿದ್ದು, ತಮ್ಮೆಲ್ಲ ಬರಹಗಳಲ್ಲಿ ಇಡೀ ಜನಸಮುದಾಯದ ಏಳಿಗೆಗಾಗಿ ಒಂದೇಸಮನೆ ತುಡಿಯುತ್ತಿರುವ ಬಗೆಗೆ ಅರಿತುಕೊಂಡಿದ್ದ ಲೋಹಿಯಾ ಅವರು ಒಮ್ಮೆ ಕರ್ನಾಟಕದ ತಮ್ಮ ಆತ್ಮೀಯ ಒಡನಾಡಿಗಳಾದ ಶಾಂತವೇರಿ ಗೋಪಾಲಗೌಡರೇ ಮುಂತಾದವರ ಜೊತೆಗೂಡಿ ಕುವೆಂಪು ಅವರನ್ನು ಕಂಡು ಸುದೀರ್ಘವಾಗಿ ಚರ್ಚಿಸಿದ್ದರು. ಲೋಹಿಯಾ ಅವರ ಮುಕ್ತಮನಸ್ಸು ಮತ್ತು ಹೋರಾಟದ ಹೆಜ್ಜೆಗಳನ್ನು ಆಳವಾಗಿ ಗಮನಿಸಿದ್ದ ಕುವೆಂಪು ಅವರು 1971ರಷ್ಟು ಹಿಂದೆಯೇ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಎಂ.ಡಿ.ನಂಜುಂಡಸ್ವಾಮಿ ಅವರು ಜೊತೆಗೂಡಿ ಅನುವಾದಿಸಿ ಸಂಪಾದಿಸಿದ್ದ “ಲೋಹಿಯಾ” ಎಂಬ ಶೀರ್ಷಿಕೆಯಲ್ಲಿ ಹೊರಬಂದ ಲೋಹಿಯಾ ಸೂಕ್ತಿಗಳ ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ಈ ಮನಸಂಪನ್ನ ಸಮಾಜವಾದಿಯ ಪ್ರಖರವಾದ ವಿಚಾರಧಾರೆಯು ಎಲ್ಲ ಭಾಷೆಗಳಲ್ಲಿಯೂ ದೊರೆಯುವಂತಾಗಬೇಕೆಂದು ಹೃದಯ ತುಂಬಿ ಹಾರೈಸಿದ್ದರು:
“ಮಹಾತ್ಮ ಗಾಂಧೀಜಿಯ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿ ಸ್ವಸುಖ, ಸ್ವಲಾಭ, ಸ್ವಾರ್ಥಗಳನ್ನೆಲ್ಲ ತ್ಯಾಗ ಮಾಡಿ, ಅಖಿಲ ಭಾರತೀಯ ಸುಪ್ರಸಿದ್ಧರಾದ ವ್ಯಕ್ತಿಗಳು ಹಲವರಿದ್ದಾರೆ. ಆದರೆ ಮತ-ಧರ್ಮ ಸಂಬಂಧವಾದ ಮೂಢ, ಅರ್ಧಮೂಢ ಭಾವನೆಗಳಿಂದ ವಿಮುಕ್ತರಾಗಿ, ತುದಿಯವರೆವಿಗೂ ವೈಜ್ಞಾನಿಕ ದೃಷ್ಟಿಯನ್ನೂ, ವೈಚಾರಿಕ ಬುದ್ಧಿಯನ್ನೂ ಮೆರೆದು, ನಾಡಿನ ತರುಣ ವರ್ಗದಲ್ಲಿ ಸ್ವಮತ, ಸ್ವಜಾತೀಯ ಮತ್ತು ಪ್ರಾದೇಶಿಕವಾದ ಸಂಕುಚಿತ ಭಾವಗಳಿಂದ ದೂರವಾಗಿ ವಿಚಾರಪರತೆಯನ್ನು ಪ್ರಚೋದಿಸಿದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ರಾಮಮನೋಹರ ಲೋಹಿಯಾ ಅವರು ಸುವಿಶೇಷ ಗಣ್ಯರೂ ಮಾನ್ಯರೂ ಆಗಿದ್ದಾರೆ. ವೈಜ್ಞಾನಿಕತೆ ಮತ್ತು ವೈಚಾರಿಕತೆಗಳಲ್ಲಿ ಜವಾಹರಲಾಲ್ ನೆಹರೂ ಅವರು, ಆನುವಂಶಿಕವಾಗಿ, ಸಂಸ್ಕಾರರೂಪವಾಗಿ, ರಕ್ತಗತವಾಗಿ ಬಂದಿದ್ದ ಶ್ರೀಮಂತಿಕೆಯ ಉಚ್ಚವರ್ಗದ ಮತ್ತು ಬೂರ್ಜುವಾ ಮನೋಧರ್ಮದ ಪ್ರಭಾವದಿಂದ ಪಾರಾಗಲು ಸಾಧ್ಯವಾಗಲಿಲ್ಲ ಎಂಬುದು ಅವರ ಸ್ವಾತಂತ್ರ್ಯೋತ್ತರ ಜೀವಿತದಲ್ಲಿ ಸುವ್ಯಕ್ತವಾಗುತ್ತದೆ. ಅಲ್ಲದೆ ಮಹಾಪ್ರಧಾನಿಯ ಪಟ್ಟದಲ್ಲಿ ಸುಸ್ಥಿರರಾಗಿ ಅಧಿಕಾರರೂಢರಾದ ಮೇಲೆ ಹಿಂದಿನ ತಮ್ಮ ತ್ಯಾಗ ಜೀವನದ ಪ್ರತೀಕಾರ ಸ್ವರೂಪವಾಗಿ ಸಮಗೈಯಾಗಿ ಸರಿದೂಗುವಷ್ಟರಮಟ್ಟಿಗೆ ಭೋಗ ಜೀವನದ ಸುಖಪರತೆಗೆ ವಶರಾಗಿ ಮಹಾತ್ಮಾಜಿಯವರ ಸರಳ ಜೀವನಮಾರ್ಗದಿಂದ ದೂರವಾಗುತ್ತಾ ಹೋದರು. ವೈಯಕ್ತಿಕ ಜೀವನದಲ್ಲಿಯೂ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿಯೂ ಲೋಹಿಯಾ ಅವರಾದರೋ ಭೋಗಜೀವನಕ್ಕಾಗಲಿ ಅಧಿಕಾರ ಲಾಲಸೆಗಾಗಲಿ ಸಿಲುಕದೆ, ತಾವು ಪಾಶ್ಚಾತ್ಯ ಅರ್ಥಶಾಸ್ತ್ರ ಮತ್ತು ರಾಜಕೀಯಶಾಸ್ತ್ರಗಳಿಂದ ಕಲಿತ ತತ್ವಗಳನ್ನು ಗಾಂಧೀಜಿಯ ಸತ್ಯ, ಅಹಿಂಸೆ ಮತ್ತು ಸರ್ವೋದಯ ತತ್ವಗಳಿಂದ ಶೋಧಿಸಿ, ತಮ್ಮದೇ ಆದ ಒಂದು ವಿಶಿಷ್ಟ ಭಾರತೀಯ ಸಮಾಜವಾದವನ್ನು ರೂಪಿಸಿಕೊಂಡು, ಅದರ ಸ್ಥಾಪನೆಗಾಗಿ ಹೋರಾಟವನ್ನು ಮುಂದುವರಿಸಿ, ಸ್ವಾತಂತ್ರ್ಯೋತ್ತರದಲ್ಲಿಯೂ ಸ್ವಾತಂತ್ರ್ಯಪೂರ್ವದ ಕ್ಲೇಶ ಕಷ್ಟಗಳನ್ನೇ ಅನುಭವಿಸುತ್ತಾ ಆಹುತಿಯಾದರು, ತಾನೇ ಹೊತ್ತಿಸಿದ ಯಜ್ಞಾಗ್ನಿ ಜ್ವಾಲೆಯಲ್ಲಿ!
ಅವರು ಸತತವೂ ಸಕ್ರಿಯ ರಾಜಕೀಯರಂಗದ ಹೋರಾಟದಲ್ಲಿ ಮುಂಚೂಣಿಯ ಯೋಧರಾಗಿರುತ್ತಿದ್ದರೂ ಹಿಂದಿಯಲ್ಲಿಯೂ ಇಂಗ್ಲೀಷ್‍ನಲ್ಲಿಯೂ ಅನೇಕ ಶಾಸ್ತ್ರೀಯವೂ ವೈಜ್ಞಾನಿಕದೃಷ್ಟಿಪೂರ್ಣವೂ ಆಗಿರುವ ಪ್ರೌಢಗ್ರಂಥಗಳನ್ನು ರಚಿಸಿ ಹೋಗಿದ್ದಾರೆ. ರಾಜಕೀಯ ರಂಗದ ಅಸೂಯಾ, ಈಷ್ರ್ಯಾ, ದ್ವೇಷ ಕಾರಣಗಳಿಂದಾಗಿಯೂ ಅವರು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕೈಗೊಂಡ ನಿಷ್ಠುರಸಮರ ಕಾರಣದಿಂದಾಗಿಯೂ, ಇಂಗ್ಲೀಷ್ ವಿಚಾರದಲ್ಲಿ ಅವರು ತಾಳಿದ ದಿಟ್ಟ ಭಂಗಿಯಿಂದ ಕುಪಿತಗೊಂಡ ದಾಸ್ಯಮನೋಧರ್ಮದ ಇಂಗ್ಲೀಷ್ ಪತ್ರಿಕೆಗಳ ಮೌನಪಿತೂರಿಯಿಂದಲೂ, ಮತಮೌಢ್ಯದ ವಿಚಾರವಾಗಿ ಅವರು ಬೀಸುತ್ತಿದ್ದ ವಿಚಾರಖಡ್ಗಾಘಾತಕ್ಕೆ ಸಿಲುಕಿದವರ ಶಿಖಂಡಿಕ್ರೋಧದ ದೆಸೆಯಿಂದಲೂ ಅವರ ವಿಚಾರಧಾರೆಗೆ ಸಾಕಷ್ಟು ಪ್ರಕಟಣೆ ಪ್ರಚಾರಗಳು ದೊರೆಯಲಿಲ್ಲ. ಇನ್ನು ಮುಂದಾದರೂ ಅವು ಎಲ್ಲ ಭಾಷೆಗಳಲ್ಲಿಯೂ ದೊರೆಯುವಂತಾಗಿ ಮುಂದಿನ ಪೀಳಿಗೆಯ ತರುಣರು ವೈಜ್ಞಾನಿಕ ದೃಷ್ಟಿಸಂಪನ್ನರಾಗಿ ವಿಚಾರ ಮಾರ್ಗದಲ್ಲಿ ದೇಶ ಸೇವೆಗೆ ಮುಂಬರಿಯುವಂತಾಗಲಿ”.
ಭಾರತದ ಅವಕಾಶವಿಹೀನ ಜನವರ್ಗಗಳ ನಿತ್ಯಧ್ಯಾನದಲ್ಲಿಯೇ ಬದುಕಿದ್ದು, ಭೂಮಿತಾಯಿಯ ಮಡಿಲ ಮಕ್ಕಳೆಲ್ಲರೂ ಯಾವುದೇ ಆತಂಕಕಾರಕ ಗಡಿಗೆರೆಗಳ ಹಂಗಿಲ್ಲದೆ ಇಡೀ ವಿಶ್ವದ ಆರೋಗ್ಯಪೂರ್ಣ ಪ್ರಜೆಗಳಾಗಿ ಎಲ್ಲ ಬಗೆಯ ಮುಕ್ತಚಿಂತನೆಯ ಬೆಳಕಿನಲ್ಲಿ ನೆಲೆಗೊಳ್ಳಬೇಕೆನ್ನುವ ಲೋಹಿಯಾ ಅವರ ಕನಸುಗಳು ಮಾವನ ಜೀವನದಲ್ಲಿ ಎಷ್ಟು ಮಹತ್ವಪೂರ್ಣವಾದವುಗಳೆಂಬುದನ್ನು ಮೇಲಿನ ಮಾತುಗಳಲ್ಲಿ ಕುವೆಂಪು ಅವರು ಸ್ಪಷ್ಟವಾಗಿ ಹಿಡಿದಿಟ್ಟಿದ್ದಾರೆ. ಪಂಚಭೂತಗಳ ವಂಚನೆರಹಿತ ಗುಣಧರ್ಮದ ವಿಶಾಲ ಚೌಕಟ್ಟಿನಲ್ಲಿ ಉದಾರವಾದ ಮನಸ್ಸಿನಿಂದ ಬದುಕಬೇಕಾಗಿರುವ ನಾವೆಲ್ಲ ಸಂಕುಚಿತವಾದ ಆಲೋಚನೆಯ ಯಾವುದೇ ಒಂದು ಜಾತಿ, ಧರ್ಮ, ವರ್ಗ, ಲಿಂಗ, ಭಾಷೆ, ಪ್ರದೇಶಗಳ ಹಂಗಿಲ್ಲದೆ ನಿರಾಳವಾಗಿದ್ದು, ಪರಸ್ಪರ ಪ್ರೀತ್ಯಾದರಗಳ ಹೊಳೆಯಲ್ಲಿ ಮಿಂದುಮಡಿಯಾಗಿರುವ ಜನಸಮುದಾಯವಾಗಿದ್ದು, ನೈತಿಕಧೈರ್ಯದ ಸಾಕ್ಷಾತ್ ಪ್ರತಿರೂಪಗಳಂತೆ ಚೈತನ್ಯವಂತರಾಗಿ ಜೀವಿಸುವ ಅಮೃತಕ್ಷಣಗಳ ನಿರಂತರ ಹಾರೈಕೆಯಲ್ಲಿದ್ದ ರಾಮಮನೋಹರರು ಸದಭಿರುಚಿಯ ಬದುಕಿಗೆ ಬದ್ಧರಾಗಿದ್ದರು. ಕರ್ನಾಟಕದಲ್ಲಿ ಐವತ್ತು, ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಸಮಾಜವಾದಿ ಚಳವಳಿಯು ಸಾಕಷ್ಟು ಪರಿಣಾಮಕಾರಿಯಾಗಿದ್ದು, ಹೆಚ್ಚು ಕ್ರಿಯಾಶೀಲವಾಗಿದ್ದ ಅವಧಿಯಲ್ಲಿ ಶಿವಮೊಗ್ಗ ಭಾಗದಿಂದ ಬಂದ ಪ್ರತಿಭಾವಂತ ಸಾಹಿತಿಗಳಾದ ಅನಂತಮೂರ್ತಿ, ಲಂಕೇಶ್, ತೇಜಸ್ವಿ ಮುಂತಾದವರು ತಮ್ಮ ಹದಿಹರೆಯದ ದಿನಗಳಿಂದಲೇ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿದ್ದು, ಹೊಸ ಸಾಂಸ್ಕøತಿಕ ಬದುಕಿನ ಆಶಯಗಳನ್ನು ತೀವ್ರವಾಗಿ ಪ್ರತಿಪಾದಿಸತೊಡಗಿದರು. ಇದರ ಪರಿಣಾಮವಾಗಿ ಸಂವೇದನಾಶೀಲ ತರುಣ ಲೇಖಕರೆಲ್ಲರೂ ಲೋಹಿಯಾ ಸಮಾಜವಾದದಲ್ಲಿ ತೀವ್ರವಾದ ಆಸಕ್ತಿಯನ್ನು ಬೆಳೆಸಿಕೊಂಡು ಕ್ರಿಯಾಶೀಲರಾದರು. ಹಾಗೆಯೇ – ಮಾಕ್ರ್ಸ್, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ಫುಲೆ, ನಾರಾಯಣಗುರು ಮುಂತಾದ ಜನಪರ ಕಾಳಜಿಗಳ ಚಿಂತಕರು ಹಾಗೂ ಹೋರಾಟಗಾರರ ಬದುಕು ಮತ್ತು ಸಾಧನೆಯನ್ನು ಕುರಿತ ಅಧ್ಯಯನಕ್ಕೆ ಹೆಚ್ಚಿನ ಒತ್ತು ದೊರೆಯಿತು. ಈ ಸಂಬಂಧದ ಬರಹಗಳು ಅಲ್ಲಲ್ಲಿ ಪ್ರಕಟವಾಗತೊಡಗಿದ್ದವು. ಅಂಬೇಡ್ಕರ್ ಲೇಖನಗಳ ಎಲ್ಲಾ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಹಾಗೂ ಆಸಕ್ತರೆಲ್ಲರಿಗೂ ತಲುಪಿಸುವ ಸ್ವಾಗತಾರ್ಹವಾದ ನಿರ್ಧಾರವನ್ನು ಕರ್ನಾಟಕ ಸರ್ಕಾರವು ಕೈಗೊಂಡಿತು. ಇದರ ಬೆನ್ನಲ್ಲಿಯೇ ಲೋಹಿಯಾ ಬರಹಗಳ ವಿವಿಧ ಸಂಪುಟಗಳನ್ನು ಕನ್ನಡ ಓದುಗರಿಗೆ ಇದೇ ರೀತಿಯಲ್ಲಿ ಉಡುಗೊರೆಯಾಗಿ ನೀಡಿರುವ ಸರ್ಕಾರದ ತೀರ್ಮಾನವು ಶ್ಲಾಘನೀಯವಾದುದು. ಅಂಬೇಡ್ಕರ್ ಮತ್ತು ಲೋಹಿಯಾ ಅವರ ಬರಹಗಳು ಸಮರ್ಥವಾಗಿ ಕಟ್ಟಿಕೊಡುವ ಭಾರತದ ಸುಡುವಾಸ್ತವಗಳ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಎಲ್ಲ ಭಾರತೀಯ ಭಾಷೆಗಳಲ್ಲಿಯೂ ದೊರೆಯುವಂತೆ ಆದಾಗ ಇಡೀ ರಾಷ್ಟ್ರದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರಭಾವದ ಆದರ್ಶಗಳ ಸಾಂಸ್ಕøತಿಕ ಆಂದೋಲನವೊಂದು ಕ್ರಮೇಣ ರೂಪುಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

– ಪ್ರೊ. ಕಾಳೇಗೌಡ ನಾಗವಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...