Homeಚಳವಳಿಲೋಹಿಯಾ ಎಂಬ ಬದ್ಧತೆಯ ಚೈತನ್ಯ

ಲೋಹಿಯಾ ಎಂಬ ಬದ್ಧತೆಯ ಚೈತನ್ಯ

- Advertisement -
- Advertisement -

ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಅರ್ಥಶಾಸ್ತ್ರದಲ್ಲಿನ ಸಂಶೋಧನೆಯ ಸಲುವಾಗಿ ಕಳೆದ ಶತಮಾನದ ಮೂವ್ವತ್ತರ ದಶಕದ ಆದಿಭಾಗದಲ್ಲಿ (1930) ರಾಮಮನೋಹರ ಲೋಹಿಯಾ ಜರ್ಮನಿಗೆ ತೆರಳಿದರು. ಅವರು ಅಪರಿಮಿತ ಉತ್ಸಾಹದಿಂದಲೇ ಕಾರ್ಲ್‍ಮಾಕ್ರ್ಸ್‍ನ ಮಹತ್ವಪೂರ್ಣ ಬರಹಗಳನ್ನು ಅಧ್ಯಯನ ಮಾಡಿದರು. ಗಾಂಧೀಜಿಯವರ ಅಹಿಂಸೆ, ಸ್ವಾತಂತ್ರ್ಯ, ಸಮಾನತೆ, ವಿಕೇಂದ್ರೀಕರಣ ಮತ್ತು ತಾನು ಅರ್ಥೈಸಿಕೊಂಡ ರೀತಿಯಲ್ಲಿ ಜನಸಮುದಾಯದ ಹಿತಕ್ಕೆ ತನ್ನನ್ನು ಅಕ್ಷರಶಃ ತೆತ್ತುಕೊಳ್ಳುವ ಗುಣಗಳು ಲೋಹಿಯಾರಲ್ಲಿ ಹದಿಹರೆಯದಲ್ಲಿಯೇ ಮೈಗೂಡಿದ್ದವು. ಜೊತೆಗೆ ಸತ್ಯದ ಸಕಲ ಸೂಕ್ಷ್ಮಗಳಿಗೂ ಮನಸ್ಸನ್ನು ಸದಾ ಕಾಲ ತೆರೆದಿಟ್ಟುಕೊಳ್ಳಬೇಕೆನ್ನುವ ಪ್ರಜಾಸತ್ತಾತ್ಮಕ ಹಠದ ಕಾಳಜಿಗಳಿಂದ ಪ್ರಭಾವಿತರಾಗಿದ್ದ ಲೋಹಿಯಾ ತೀವ್ರ ಸಂವೇದನಾಶೀಲ ಚಿಂತಕರಾಗಿದ್ದರು. ಲೋಹಿಯಾ ಅವರು ತಮ್ಮ ಕಾಲದ ಎಲ್ಲ ಪುರೋಗಾಮಿ ಚಿಂತನೆಗಳ ಬೆಳಕಿನಲ್ಲಿ ಭಾರತದ ಸುಡುವಾಸ್ತವಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಹಾಗೂ ಅವುಗಳಿಗೆ ಮಾನವೀಯ ಅಂತಃಕರಣದ ಅಮೃತಸ್ಪರ್ಶವನ್ನು ನೀಡುವ ಬಗೆ ಯಾವುದೆಂಬ ಬಗ್ಗೆ ಕಾಲಕಾಲಕ್ಕೆ ಗಾಢವಾಗಿ ಧ್ಯಾನಿಸಿದವರು. ಹೋರಾಟದ ಹಲವಾರು ಯೋಜನೆಗಳನ್ನು ಇವರು ಭಾರತದ ಒಳಗೆ ಮತ್ತು ಹೊರಗೆ ಹಾಗೂ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಹಮ್ಮಿಕೊಳ್ಳುತ್ತಲೇ ಉದ್ದಕ್ಕೂ ಜೀವ ಸವೆಸಿದವರು. ಇಂತಹ ಮಹಾನ್ ಸಾಧಕರ ಚಿಂತನೆ, ತ್ಯಾಗ ಮತ್ತು ಜೀವಪರ ಆಲೋಚನೆಗಳು ನಮ್ಮೆಲ್ಲರ ನಡುವೆ ಚರ್ಚೆಗೆ ಒಳಗಾಗಬೇಕು. ಹಾಗೂ ಆಶಾದಾಯಕವಾದ ಜನಪರ ಚಟುವಟಿಕೆಗಳು ಸದಭಿರುಚಿಯ ಆಕಾಂಕ್ಷೆಗಳ ತುಂಬು ಚೌಕಟ್ಟಿನಲ್ಲಿ ನಿರಂತರವಾಗಿ ಎಲ್ಲೆಲ್ಲೂ ಕುಡಿಯೊಡೆಯುತ್ತಿರಬೇಕು. ಈ ಹಂಬಲದ ದ್ಯೋತಕವಾಗಿ ಅರಿವಿನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುವ ನಿಲುವಿಗೆ ಬದ್ಧರಾಗಿರುವ ಅನೇಕರನ್ನು ರಾಮಮನೋಹರ ಲೋಹಿಯಾ ಬರಹಗಳು ಪ್ರೇರೇಪಿಸುವೆ. ಲೋಹಿಯಾ ನಮ್ಮನ್ನಗಲಿ ಐದಾರು ದಶಕಗಳು ಕಳೆದ ನಂತರ ಅವರ ಬರಹಗಳು ಹಲವು ಸಂಪುಟಗಳಲ್ಲಿ ನಮ್ಮ ಕೈಸೇರಿವೆ. ನಾಡಿನ ಯಾವ ಮೂಲೆಗೆ ತೆರಳಿದರೂ ಈ ಹೊತ್ತಗೆಗಳ ಪ್ರಕಟಣೆಯ ಹಿಂದಿರುವ ಆರೋಗ್ಯಕರ ತುಡಿತಗಳನ್ನು ಕುರಿತು ಕೊಂಡಾಡುವವರು ಎಡತಾಕುತ್ತಿರುತ್ತಾರೆ. ಹಾಗೆಯೇ ಈ ಸಂಪುಟಗಳ ಹುಡುಕಾಟದಲ್ಲಿರುತ್ತಾರೆ. ನಮ್ಮ ನಡುವಣ ಕಡುಬಡವ ಶ್ರಮಜೀವಿ ಬಂಧುಗಳು ಮತ್ತು ಸಾಮಾಜಿಕ ಆರ್ಥಿಕ ಕೊರತೆಗಳ ಹಿನ್ನೆಲೆಗಳಿಂದ ಬಂದಿರುವ ಎಲ್ಲಾ ತರುಣ ತರುಣಿಯರೂ ಸಹ ಅನಾಯಾಸವಾಗಿ ಕೊಂಡು ಓದುವ ಸಂತೋಷಕ್ಕೆ ಒಳಗಾಗಲೆನ್ನುವ ಕಾರಣದಿಂದಾಗಿ ಕರ್ನಾಟಕ ಸರ್ಕಾರವು ಈ ಗ್ರಂಥಗಳನ್ನು ಅತ್ಯಂತ ಸುಲಭ ಬೆಲೆಗೆ ದೊರೆಯುವ ಸೌಲಭ್ಯವನ್ನು ಒದಗಿಸಿರುವುದು ಶ್ಲಾಘನೀಯವಾದ ಕ್ರಮವಾಗಿದೆ.
ವಿಶ್ವಮಾನವತತ್ವದ ಆಶಯಗಳಿಗೆ ಉದ್ದಕ್ಕೂ ಬದ್ಧರಾಗಿದ್ದ ಕುವೆಂಪು ಅವರು ಈ ಸಂಬಂಧದ ಅನಿಷ್ಟಕಾರಕ ಅಸಮಾನತೆಯ ಕ್ರೌರ್ಯಗಳಿಗೆ ಕಡುವಿರೋಧಿಯಾಗಿದ್ದು, ತಮ್ಮೆಲ್ಲ ಬರಹಗಳಲ್ಲಿ ಇಡೀ ಜನಸಮುದಾಯದ ಏಳಿಗೆಗಾಗಿ ಒಂದೇಸಮನೆ ತುಡಿಯುತ್ತಿರುವ ಬಗೆಗೆ ಅರಿತುಕೊಂಡಿದ್ದ ಲೋಹಿಯಾ ಅವರು ಒಮ್ಮೆ ಕರ್ನಾಟಕದ ತಮ್ಮ ಆತ್ಮೀಯ ಒಡನಾಡಿಗಳಾದ ಶಾಂತವೇರಿ ಗೋಪಾಲಗೌಡರೇ ಮುಂತಾದವರ ಜೊತೆಗೂಡಿ ಕುವೆಂಪು ಅವರನ್ನು ಕಂಡು ಸುದೀರ್ಘವಾಗಿ ಚರ್ಚಿಸಿದ್ದರು. ಲೋಹಿಯಾ ಅವರ ಮುಕ್ತಮನಸ್ಸು ಮತ್ತು ಹೋರಾಟದ ಹೆಜ್ಜೆಗಳನ್ನು ಆಳವಾಗಿ ಗಮನಿಸಿದ್ದ ಕುವೆಂಪು ಅವರು 1971ರಷ್ಟು ಹಿಂದೆಯೇ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಎಂ.ಡಿ.ನಂಜುಂಡಸ್ವಾಮಿ ಅವರು ಜೊತೆಗೂಡಿ ಅನುವಾದಿಸಿ ಸಂಪಾದಿಸಿದ್ದ “ಲೋಹಿಯಾ” ಎಂಬ ಶೀರ್ಷಿಕೆಯಲ್ಲಿ ಹೊರಬಂದ ಲೋಹಿಯಾ ಸೂಕ್ತಿಗಳ ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ಈ ಮನಸಂಪನ್ನ ಸಮಾಜವಾದಿಯ ಪ್ರಖರವಾದ ವಿಚಾರಧಾರೆಯು ಎಲ್ಲ ಭಾಷೆಗಳಲ್ಲಿಯೂ ದೊರೆಯುವಂತಾಗಬೇಕೆಂದು ಹೃದಯ ತುಂಬಿ ಹಾರೈಸಿದ್ದರು:
“ಮಹಾತ್ಮ ಗಾಂಧೀಜಿಯ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿ ಸ್ವಸುಖ, ಸ್ವಲಾಭ, ಸ್ವಾರ್ಥಗಳನ್ನೆಲ್ಲ ತ್ಯಾಗ ಮಾಡಿ, ಅಖಿಲ ಭಾರತೀಯ ಸುಪ್ರಸಿದ್ಧರಾದ ವ್ಯಕ್ತಿಗಳು ಹಲವರಿದ್ದಾರೆ. ಆದರೆ ಮತ-ಧರ್ಮ ಸಂಬಂಧವಾದ ಮೂಢ, ಅರ್ಧಮೂಢ ಭಾವನೆಗಳಿಂದ ವಿಮುಕ್ತರಾಗಿ, ತುದಿಯವರೆವಿಗೂ ವೈಜ್ಞಾನಿಕ ದೃಷ್ಟಿಯನ್ನೂ, ವೈಚಾರಿಕ ಬುದ್ಧಿಯನ್ನೂ ಮೆರೆದು, ನಾಡಿನ ತರುಣ ವರ್ಗದಲ್ಲಿ ಸ್ವಮತ, ಸ್ವಜಾತೀಯ ಮತ್ತು ಪ್ರಾದೇಶಿಕವಾದ ಸಂಕುಚಿತ ಭಾವಗಳಿಂದ ದೂರವಾಗಿ ವಿಚಾರಪರತೆಯನ್ನು ಪ್ರಚೋದಿಸಿದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ರಾಮಮನೋಹರ ಲೋಹಿಯಾ ಅವರು ಸುವಿಶೇಷ ಗಣ್ಯರೂ ಮಾನ್ಯರೂ ಆಗಿದ್ದಾರೆ. ವೈಜ್ಞಾನಿಕತೆ ಮತ್ತು ವೈಚಾರಿಕತೆಗಳಲ್ಲಿ ಜವಾಹರಲಾಲ್ ನೆಹರೂ ಅವರು, ಆನುವಂಶಿಕವಾಗಿ, ಸಂಸ್ಕಾರರೂಪವಾಗಿ, ರಕ್ತಗತವಾಗಿ ಬಂದಿದ್ದ ಶ್ರೀಮಂತಿಕೆಯ ಉಚ್ಚವರ್ಗದ ಮತ್ತು ಬೂರ್ಜುವಾ ಮನೋಧರ್ಮದ ಪ್ರಭಾವದಿಂದ ಪಾರಾಗಲು ಸಾಧ್ಯವಾಗಲಿಲ್ಲ ಎಂಬುದು ಅವರ ಸ್ವಾತಂತ್ರ್ಯೋತ್ತರ ಜೀವಿತದಲ್ಲಿ ಸುವ್ಯಕ್ತವಾಗುತ್ತದೆ. ಅಲ್ಲದೆ ಮಹಾಪ್ರಧಾನಿಯ ಪಟ್ಟದಲ್ಲಿ ಸುಸ್ಥಿರರಾಗಿ ಅಧಿಕಾರರೂಢರಾದ ಮೇಲೆ ಹಿಂದಿನ ತಮ್ಮ ತ್ಯಾಗ ಜೀವನದ ಪ್ರತೀಕಾರ ಸ್ವರೂಪವಾಗಿ ಸಮಗೈಯಾಗಿ ಸರಿದೂಗುವಷ್ಟರಮಟ್ಟಿಗೆ ಭೋಗ ಜೀವನದ ಸುಖಪರತೆಗೆ ವಶರಾಗಿ ಮಹಾತ್ಮಾಜಿಯವರ ಸರಳ ಜೀವನಮಾರ್ಗದಿಂದ ದೂರವಾಗುತ್ತಾ ಹೋದರು. ವೈಯಕ್ತಿಕ ಜೀವನದಲ್ಲಿಯೂ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿಯೂ ಲೋಹಿಯಾ ಅವರಾದರೋ ಭೋಗಜೀವನಕ್ಕಾಗಲಿ ಅಧಿಕಾರ ಲಾಲಸೆಗಾಗಲಿ ಸಿಲುಕದೆ, ತಾವು ಪಾಶ್ಚಾತ್ಯ ಅರ್ಥಶಾಸ್ತ್ರ ಮತ್ತು ರಾಜಕೀಯಶಾಸ್ತ್ರಗಳಿಂದ ಕಲಿತ ತತ್ವಗಳನ್ನು ಗಾಂಧೀಜಿಯ ಸತ್ಯ, ಅಹಿಂಸೆ ಮತ್ತು ಸರ್ವೋದಯ ತತ್ವಗಳಿಂದ ಶೋಧಿಸಿ, ತಮ್ಮದೇ ಆದ ಒಂದು ವಿಶಿಷ್ಟ ಭಾರತೀಯ ಸಮಾಜವಾದವನ್ನು ರೂಪಿಸಿಕೊಂಡು, ಅದರ ಸ್ಥಾಪನೆಗಾಗಿ ಹೋರಾಟವನ್ನು ಮುಂದುವರಿಸಿ, ಸ್ವಾತಂತ್ರ್ಯೋತ್ತರದಲ್ಲಿಯೂ ಸ್ವಾತಂತ್ರ್ಯಪೂರ್ವದ ಕ್ಲೇಶ ಕಷ್ಟಗಳನ್ನೇ ಅನುಭವಿಸುತ್ತಾ ಆಹುತಿಯಾದರು, ತಾನೇ ಹೊತ್ತಿಸಿದ ಯಜ್ಞಾಗ್ನಿ ಜ್ವಾಲೆಯಲ್ಲಿ!
ಅವರು ಸತತವೂ ಸಕ್ರಿಯ ರಾಜಕೀಯರಂಗದ ಹೋರಾಟದಲ್ಲಿ ಮುಂಚೂಣಿಯ ಯೋಧರಾಗಿರುತ್ತಿದ್ದರೂ ಹಿಂದಿಯಲ್ಲಿಯೂ ಇಂಗ್ಲೀಷ್‍ನಲ್ಲಿಯೂ ಅನೇಕ ಶಾಸ್ತ್ರೀಯವೂ ವೈಜ್ಞಾನಿಕದೃಷ್ಟಿಪೂರ್ಣವೂ ಆಗಿರುವ ಪ್ರೌಢಗ್ರಂಥಗಳನ್ನು ರಚಿಸಿ ಹೋಗಿದ್ದಾರೆ. ರಾಜಕೀಯ ರಂಗದ ಅಸೂಯಾ, ಈಷ್ರ್ಯಾ, ದ್ವೇಷ ಕಾರಣಗಳಿಂದಾಗಿಯೂ ಅವರು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕೈಗೊಂಡ ನಿಷ್ಠುರಸಮರ ಕಾರಣದಿಂದಾಗಿಯೂ, ಇಂಗ್ಲೀಷ್ ವಿಚಾರದಲ್ಲಿ ಅವರು ತಾಳಿದ ದಿಟ್ಟ ಭಂಗಿಯಿಂದ ಕುಪಿತಗೊಂಡ ದಾಸ್ಯಮನೋಧರ್ಮದ ಇಂಗ್ಲೀಷ್ ಪತ್ರಿಕೆಗಳ ಮೌನಪಿತೂರಿಯಿಂದಲೂ, ಮತಮೌಢ್ಯದ ವಿಚಾರವಾಗಿ ಅವರು ಬೀಸುತ್ತಿದ್ದ ವಿಚಾರಖಡ್ಗಾಘಾತಕ್ಕೆ ಸಿಲುಕಿದವರ ಶಿಖಂಡಿಕ್ರೋಧದ ದೆಸೆಯಿಂದಲೂ ಅವರ ವಿಚಾರಧಾರೆಗೆ ಸಾಕಷ್ಟು ಪ್ರಕಟಣೆ ಪ್ರಚಾರಗಳು ದೊರೆಯಲಿಲ್ಲ. ಇನ್ನು ಮುಂದಾದರೂ ಅವು ಎಲ್ಲ ಭಾಷೆಗಳಲ್ಲಿಯೂ ದೊರೆಯುವಂತಾಗಿ ಮುಂದಿನ ಪೀಳಿಗೆಯ ತರುಣರು ವೈಜ್ಞಾನಿಕ ದೃಷ್ಟಿಸಂಪನ್ನರಾಗಿ ವಿಚಾರ ಮಾರ್ಗದಲ್ಲಿ ದೇಶ ಸೇವೆಗೆ ಮುಂಬರಿಯುವಂತಾಗಲಿ”.
ಭಾರತದ ಅವಕಾಶವಿಹೀನ ಜನವರ್ಗಗಳ ನಿತ್ಯಧ್ಯಾನದಲ್ಲಿಯೇ ಬದುಕಿದ್ದು, ಭೂಮಿತಾಯಿಯ ಮಡಿಲ ಮಕ್ಕಳೆಲ್ಲರೂ ಯಾವುದೇ ಆತಂಕಕಾರಕ ಗಡಿಗೆರೆಗಳ ಹಂಗಿಲ್ಲದೆ ಇಡೀ ವಿಶ್ವದ ಆರೋಗ್ಯಪೂರ್ಣ ಪ್ರಜೆಗಳಾಗಿ ಎಲ್ಲ ಬಗೆಯ ಮುಕ್ತಚಿಂತನೆಯ ಬೆಳಕಿನಲ್ಲಿ ನೆಲೆಗೊಳ್ಳಬೇಕೆನ್ನುವ ಲೋಹಿಯಾ ಅವರ ಕನಸುಗಳು ಮಾವನ ಜೀವನದಲ್ಲಿ ಎಷ್ಟು ಮಹತ್ವಪೂರ್ಣವಾದವುಗಳೆಂಬುದನ್ನು ಮೇಲಿನ ಮಾತುಗಳಲ್ಲಿ ಕುವೆಂಪು ಅವರು ಸ್ಪಷ್ಟವಾಗಿ ಹಿಡಿದಿಟ್ಟಿದ್ದಾರೆ. ಪಂಚಭೂತಗಳ ವಂಚನೆರಹಿತ ಗುಣಧರ್ಮದ ವಿಶಾಲ ಚೌಕಟ್ಟಿನಲ್ಲಿ ಉದಾರವಾದ ಮನಸ್ಸಿನಿಂದ ಬದುಕಬೇಕಾಗಿರುವ ನಾವೆಲ್ಲ ಸಂಕುಚಿತವಾದ ಆಲೋಚನೆಯ ಯಾವುದೇ ಒಂದು ಜಾತಿ, ಧರ್ಮ, ವರ್ಗ, ಲಿಂಗ, ಭಾಷೆ, ಪ್ರದೇಶಗಳ ಹಂಗಿಲ್ಲದೆ ನಿರಾಳವಾಗಿದ್ದು, ಪರಸ್ಪರ ಪ್ರೀತ್ಯಾದರಗಳ ಹೊಳೆಯಲ್ಲಿ ಮಿಂದುಮಡಿಯಾಗಿರುವ ಜನಸಮುದಾಯವಾಗಿದ್ದು, ನೈತಿಕಧೈರ್ಯದ ಸಾಕ್ಷಾತ್ ಪ್ರತಿರೂಪಗಳಂತೆ ಚೈತನ್ಯವಂತರಾಗಿ ಜೀವಿಸುವ ಅಮೃತಕ್ಷಣಗಳ ನಿರಂತರ ಹಾರೈಕೆಯಲ್ಲಿದ್ದ ರಾಮಮನೋಹರರು ಸದಭಿರುಚಿಯ ಬದುಕಿಗೆ ಬದ್ಧರಾಗಿದ್ದರು. ಕರ್ನಾಟಕದಲ್ಲಿ ಐವತ್ತು, ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಸಮಾಜವಾದಿ ಚಳವಳಿಯು ಸಾಕಷ್ಟು ಪರಿಣಾಮಕಾರಿಯಾಗಿದ್ದು, ಹೆಚ್ಚು ಕ್ರಿಯಾಶೀಲವಾಗಿದ್ದ ಅವಧಿಯಲ್ಲಿ ಶಿವಮೊಗ್ಗ ಭಾಗದಿಂದ ಬಂದ ಪ್ರತಿಭಾವಂತ ಸಾಹಿತಿಗಳಾದ ಅನಂತಮೂರ್ತಿ, ಲಂಕೇಶ್, ತೇಜಸ್ವಿ ಮುಂತಾದವರು ತಮ್ಮ ಹದಿಹರೆಯದ ದಿನಗಳಿಂದಲೇ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿದ್ದು, ಹೊಸ ಸಾಂಸ್ಕøತಿಕ ಬದುಕಿನ ಆಶಯಗಳನ್ನು ತೀವ್ರವಾಗಿ ಪ್ರತಿಪಾದಿಸತೊಡಗಿದರು. ಇದರ ಪರಿಣಾಮವಾಗಿ ಸಂವೇದನಾಶೀಲ ತರುಣ ಲೇಖಕರೆಲ್ಲರೂ ಲೋಹಿಯಾ ಸಮಾಜವಾದದಲ್ಲಿ ತೀವ್ರವಾದ ಆಸಕ್ತಿಯನ್ನು ಬೆಳೆಸಿಕೊಂಡು ಕ್ರಿಯಾಶೀಲರಾದರು. ಹಾಗೆಯೇ – ಮಾಕ್ರ್ಸ್, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ಫುಲೆ, ನಾರಾಯಣಗುರು ಮುಂತಾದ ಜನಪರ ಕಾಳಜಿಗಳ ಚಿಂತಕರು ಹಾಗೂ ಹೋರಾಟಗಾರರ ಬದುಕು ಮತ್ತು ಸಾಧನೆಯನ್ನು ಕುರಿತ ಅಧ್ಯಯನಕ್ಕೆ ಹೆಚ್ಚಿನ ಒತ್ತು ದೊರೆಯಿತು. ಈ ಸಂಬಂಧದ ಬರಹಗಳು ಅಲ್ಲಲ್ಲಿ ಪ್ರಕಟವಾಗತೊಡಗಿದ್ದವು. ಅಂಬೇಡ್ಕರ್ ಲೇಖನಗಳ ಎಲ್ಲಾ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಹಾಗೂ ಆಸಕ್ತರೆಲ್ಲರಿಗೂ ತಲುಪಿಸುವ ಸ್ವಾಗತಾರ್ಹವಾದ ನಿರ್ಧಾರವನ್ನು ಕರ್ನಾಟಕ ಸರ್ಕಾರವು ಕೈಗೊಂಡಿತು. ಇದರ ಬೆನ್ನಲ್ಲಿಯೇ ಲೋಹಿಯಾ ಬರಹಗಳ ವಿವಿಧ ಸಂಪುಟಗಳನ್ನು ಕನ್ನಡ ಓದುಗರಿಗೆ ಇದೇ ರೀತಿಯಲ್ಲಿ ಉಡುಗೊರೆಯಾಗಿ ನೀಡಿರುವ ಸರ್ಕಾರದ ತೀರ್ಮಾನವು ಶ್ಲಾಘನೀಯವಾದುದು. ಅಂಬೇಡ್ಕರ್ ಮತ್ತು ಲೋಹಿಯಾ ಅವರ ಬರಹಗಳು ಸಮರ್ಥವಾಗಿ ಕಟ್ಟಿಕೊಡುವ ಭಾರತದ ಸುಡುವಾಸ್ತವಗಳ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಎಲ್ಲ ಭಾರತೀಯ ಭಾಷೆಗಳಲ್ಲಿಯೂ ದೊರೆಯುವಂತೆ ಆದಾಗ ಇಡೀ ರಾಷ್ಟ್ರದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರಭಾವದ ಆದರ್ಶಗಳ ಸಾಂಸ್ಕøತಿಕ ಆಂದೋಲನವೊಂದು ಕ್ರಮೇಣ ರೂಪುಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

– ಪ್ರೊ. ಕಾಳೇಗೌಡ ನಾಗವಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....