ತಪ್ಪುದಾರಿಯಲ್ಲಿ ಸರ್ಕಾರಿ ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಉದ್ದೇಶ ಪೂರ್ವಕವಾಗಿ ತೀರಿಸದೆ ಛದ್ಮವೇಷಧಾರಿ ಕೈಗಾರಿಕೋದ್ಯಮಿಗಳು ಇಂದು ಬ್ಯಾಂಕಿಗ್ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ. ಈ ವ್ಯವಹಾರದಲ್ಲಿ ಹೇರಳ ಭ್ರಷ್ಟಾಚಾರ ನಡೆಯುತ್ತಿದೆ.
2018ರ ಮಾರ್ಚ್ 25ರ ಲೆಕ್ಕದಂತೆ ಭಾರತೀಯ ಬ್ಯಾಂಕುಗಳಲ್ಲಿ ಸಾರ್ವಜನಿಕರು ತೊಡಗಿಸಿದ್ದ ಮೊತ್ತ 110 ಲಕ್ಷ ಕೋಟಿ. ಈ ಹಣದಲ್ಲಿ 80ಲಕ್ಷÀ ಕೋಟಿ ರೂಪಾಯಿಗಳು 21 ಸರ್ಕಾರಿ ಬ್ಯಾಂಕುಗಳಲ್ಲೇ ಇತ್ತು. ಬ್ಯಾಂಕುಗಳು ಸಾರ್ವಜನಿಕರ ಈ ಹಣವನ್ನು ಹೇಗೆ ನಿರ್ವಹಿಸಿದವು ಎಂಬುದನ್ನು ನೋಡೋಣ. 2017-18ರ ಸಾಲಿನಲ್ಲಿ ಈ 21 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 19 ಬ್ಯಾಂಕುಗಳು ನಷ್ಟದಲ್ಲಿರುವುದಾಗಿ ಸರ್ಕಾರ ಘೋಷಣೆ ಮಾಡಿತು. ನಷ್ಟದ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ 87,351 ಕೋಟಿಗಳು. ಪರಿಣಾಮವಾಗಿ ಈ ವರ್ಷ ಕೇಂದ್ರ ಸರ್ಕಾರ ಪ್ರಧಾನಿಯವರ ಯೋಜನೆಗಳಾದ ನೀರಾವರಿ, ಗ್ರಾಮೀಣ ರಸ್ತೆ, ಕುಡಿಯುವ ನೀರಿನ ಯೋಜನೆ, ಸ್ವಚ್ಛಭಾರತ ಆಂದೋಲನ, ಶಿಕ್ಷಣಗಳಿಗೆ ತೆಗೆದಿಟ್ಟಿರುವ ಹಣವನ್ನು ಈ 19 ರಾಷ್ಟ್ರೀಕೃತ ಬ್ಯಾಂಕುಗಳು ಸಾಲವಾಗಿ ಪಂಗನಾಮ ಹಾಕುವವರಿಗೆ ನೀಡಿವೆ. ಈ 19 ಬ್ಯಾಂಕುಗಳಲ್ಲಿ 9 ಬ್ಯಾಂಕುಗಳು ನೀಡಿರುವ ಒಟ್ಟು ಸಾಲದಲ್ಲಿ ಶೇ.15ರಷ್ಟು ಸಾಲ ಸುಸ್ತಿಯಲ್ಲಿದೆ; ಈ ಸಾಲಗಳು ವಸೂಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿವೆ. ಇನ್ನೂ 6 ಬ್ಯಾಂಕುಗಳು ಇನ್ನಷ್ಟು ಹಣ ವಸೂಲಾಗದ ಸಾಲಗಳ ಪಟ್ಟಿಯನ್ನು ಘೋಷಿಸುವುದರಲ್ಲಿವೆ.
ಒಟ್ಟಿನಲ್ಲಿ 21 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 17 ಬ್ಯಾಂಕುಗಳಲ್ಲಿ ವಸೂಲಾಗದ ಸಾಲ ಏರಿಕೆಯಾಗಿದೆ. ಈ ವಸೂಲಾಗದ ಸಾಲಗಳ ಪಿಡುಗು 2007ರಲ್ಲೇ ಶುರುವಾಗಿತ್ತು. ವಿಶ್ವ ಆರ್ಥಿಕ ಮುಗ್ಗಟ್ಟು, ಕಲ್ಲಿದ್ದಲು ಹಗರಣ, 2ಜಿ ಹಗರಣ ಕೂಡ ಅದೇ ಸಮಯದಲ್ಲೇ ನಡೆದರೂ ಕೂಡ ಬ್ಯಾಂಕುಗಳು ಅಲ್ಲಿಯವರೆಗೆ ತಮ್ಮ ಬಂಡವಾಳವನ್ನು ಖoಟಟouಣ ಮಾಡುತ್ತಿದ್ದವು. 2007ರಿಂದ ನುಂಗಣ್ಣಗಳ ಪಾಲಾಗುತ್ತಾ ಬಂದ ರಾಷ್ಟ್ರೀಕೃತ ಬ್ಯಾಂಕುಗಳ ಬಂಡವಾಳ 2018ರಲ್ಲಿ 9 ಲಕ್ಷ ಕೋಟಿಗಳಿಗೇರಿದೆ.
2017-18ರಲ್ಲಿ ಕಂಪೆನಿಗಳಿಂದ, ವ್ಯಕ್ತಿಗಳಿಂದ ಸಂಗ್ರಹವಾದ ಆದಾಯ ತೆರಿಗೆಗಿಂತಲೂ ಈ ನುಂಗಣ್ಣರ ಪಾಲಾದ ಮೊತ್ತ ಅಧಿಕವಾಗಿತ್ತು. ಬ್ಯಾಂಕಿನಲ್ಲಿ ತೊಡಗಿಸುವ ಠೇವಣಿ ಹಣಕ್ಕೆ ವಿಮೆ ಸೌಲಭ್ಯ ಇತ್ತು. ಅದರ ಪರಿಮಿತಿ ಒಂದುಲಕ್ಷ ಠೇವಣಿಗೆ ಮಾತ್ರ. ಒಂದುಲಕ್ಷ ಮೀರಿದ ಠೇವಣಿಗೆ ಭದ್ರತೆ ಇದೆಯೇ? ಬ್ಯಾಂಕುಗಳು ಈ ಹೊಣೆ ಹೊರುತ್ತವೆಯೇ?
ಆದರೆ ಲಕ್ಷಕ್ಕಿಂತ ಕಡಿಮೆ ಠೇವಣಿಯ ಮೊತ್ತ 30-50 ಲಕ್ಷಕೋಟಿ. ಅಂದರೆ ಉಳಿದ 70% ಇಡುಗಂಟನ್ನಿಟ್ಟವರಿಗೆ ಯಾವ ಭದ್ರತೆಯೂ ಇಲ್ಲ. ಇವರಿಟ್ಟಿರುವ ಠೇವಣಿ 72 ಲಕ್ಷಕೋಟಿ. ಜನರು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡಿ, ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವುದು ಮಕ್ಕಳ ಶಿಕ್ಷಣ, ಮದುವೆ, ಮನೆಕೊಳ್ಳುವುದು, ನಿವೃತ್ತ ಜೀವನ ಮುಂತಾದ ಕಾರಣಕ್ಕಾಗಿ. ಇವರ ಹಣದ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂದೆ ಬರಬೇಕು.ಈ 70% ಜನರ ಹಣದ ಭದ್ರತೆಗಾಗಿ ಸರ್ಕಾರ ಜ್ಞಾನಸಂಗಮ, ಇಂದ್ರಧನುಷ್, ಬ್ಯಾಂಕ್ಬೋರ್ಡ್ ಬ್ಯೂರೋ ಮುಂತಾದ ಯೋಜನೆಗಳನ್ನು ಅಸ್ತಿತ್ವಕ್ಕೆ ತಂದಿತ್ತು. ಅವುಗಳೆಲ್ಲವೂ ಈಗ ವಿಫಲಗೊಂಡಿವೆ. ಪಾಪರ್ ಚೀಟಿ ಕಾನೂನನ್ನು ಜಾರಿಗೊಳಿಸಲು ಸರ್ಕಾರ ಯೋಚನೆ ಮಾಡುತ್ತಿದೆ. ಇದು ಒಂದು ಸ್ವಾಗತಾರ್ಹ ವಿಚಾರ. ಒಂದು ವರ್ಷ ಕಳೆದ ಮೇಲೆ ಸರ್ಕಾರ ಸಾಲಕೊಟ್ಟು ಹಣ ಕಳೆದುಕೊಂಡಿರುವ 12 ಬ್ಯಾಂಕುಗಳ ಪೈಕಿ 2 ಮಾತ್ರ litigation ನಿಂದ ಪಾರಾಗಿವೆ. ಈಗಾಗಲೇ 2511 ಪಾಪರ್ ಚೀಟಿ ಕೇಸುಗಳು ದಾಖಲಾಗಿದ್ದು ಅವು ಇನ್ನಷ್ಟು ಹೆಚ್ಚಾಗಲಿವೆ. ಈ ವೇಗದಲ್ಲೇ ಕೇಸುಗಳು ದಾಖಲಾಗುವುದಾದರೆ ಬ್ಯಾಂಕುಗಳು ಸಾಲವಸೂಲಿಗೆ ಸುದೀರ್ಘ ಕಾಲ ಕಾಯಬೇಕಾಗಬಹುದು.
ಈಗ ಕೆಲವು ದಿನಗಳ ಹಿಂದೆ ಹಂಗಾಮಿ ಹಣಕಾಸು ಮಂತ್ರಿ ಪೀಯೂಷ್ ಗೋಯಲ್ ಸಾಲವಸೂಲಿಯನ್ನೂ ಸುಗಮಗೊಳಿಸಲು ಬ್ಯಾಂಕುಗಳ meಡಿgeಡಿ ಮಾಡಲಾಗುವುದೆಂದೂ ಕರಡು ಸಾಲದ ಬ್ಯಾಂಕೊಂದನ್ನು ಆರಂಭಿಸಬೇಕೆಂದೂ ವಿಚಾರ ಮಾಡಿ, ಸಮಿತಿಯೊಂದನ್ನು ರಚಿಸಿದ್ದಾರೆ. ಆದರೆ ಸಮಿತಿಗಳನ್ನು ಮಾಡುವ, ವರದಿ ತರಿಸಿಕೊಳ್ಳುವ ಸಮಯ ಈಗ ಮೀರಿಹೋಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹಣ ತುಂಬಿ ಅವುಗಳ ನಿರ್ವಹಣೆಗೆ ಹೊಸ ರೂಪ ಕೊಡಬೇಕು. ಬ್ಯಾಂಕುಗಳು ಸರ್ಕಾರದ ನೇರ ಹಿಡಿತಕ್ಕೆ ಬರಬಾರದು. ಬ್ಯಾಂಕುಗಳ ಮೇಲ್ವಿಚಾರಣೆಗೆ ಒಂದು ಸ್ವತಂತ್ರ ಆಡಳಿತ ಸಂಸ್ಥೆ ಅಸ್ತಿತ್ವಕ್ಕೆ ಬರಬೇಕು.
- – ಹೆಚ್.ಎಸ್.ದೊರೆಸ್ವಾಮಿ