ಲವ್ ಜಿಹಾದ್ ಅನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಧರ್ಮವನ್ನು ರಾಜಕೀಯ ಸಾಧನವಾಗಿ ಬಳಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಭಾರತಿಯ ಜನತಾ ಪಾರ್ಟಿ ಆಡಳಿತವಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರುವ ಕುರಿತು ಚರ್ಚೆಗಳಾಗುತ್ತಿವೆ. ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳು ಈ ಕುರಿತು ಅನೇಕ ಹೇಳಿಕೆ ನೀಡಿವೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ತಮ್ಮ ಬೆಂಬಲ ನೆಲೆಯನ್ನು ಬಲಪಡಿಸಲು ಧರ್ಮವನ್ನು ರಾಜಕೀಯ ಸಾಧನವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಳಸಿಕೊಳ್ಳುತ್ತಿದೆ ಎಂದು ನುಸ್ರತ್ ಆರೋಪಿಸಿದ್ದಾರೆ.
‘ಲವ್ ಮತ್ತು ಜಿಹಾದ್’ ಎಂಬ ಸಂಬಂಧವಿಲ್ಲದ ಎರಡು ಪ್ರತ್ಯೇಕ ವಿಷಯಗಳನ್ನು ಒಂದು ಮಾಡಿ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಲವ್ ಮತ್ತು ಜಿಹಾದ್ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಲವ್ ಜಿಹಾದ್ಗೆ ಕೌಂಟರ್: ಅಂತರ್ಧರ್ಮೀಯ ವಿವಾಹಿತರಿಗೆ ಪ್ರೋತ್ಸಾಹ ಧನ ಘೋಷಿಸಿದ ಉತ್ತರಾಖಂಡ್!
“ಪ್ರೀತಿ” ಮತ್ತು “ಜಿಹಾದ್” ಎರಡು ವಿಭಿನ್ನ ವಿಷಯಗಳು, ಅವು ಎಂದಿಗೂ ಪರಸ್ಪರ ಕೈಜೋಡಿಸುವುದಿಲ್ಲ. ಯಾರು ಯಾರೊಂದಿಗೆ ಇರಬೇಕೆಂದು ಬಯಸುತ್ತಾರೆ ಎಂಬುದು ವ್ಯಕ್ತಿಯ ವೈಯಕ್ತಿಕ ಆಯ್ಕೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.
“ಪ್ರೀತಿ ತುಂಬಾ ವೈಯಕ್ತಿಕ. ಪ್ರೀತಿ ಮತ್ತು ಜಿಹಾದ್ ಪರಸ್ಪರ ಕೈಜೋಡಿಸುವುದಿಲ್ಲ. ಬಿಜೆಪಿಗರು ಚುನಾವಣೆಗೆ ಸ್ವಲ್ಪ ದಿನ ಇರುವ ಮೊದಲು ಈ ರೀತಿಯ ವಿಷಯಗಳೊಂದಿಗೆ ಬರುತ್ತಾರೆ. ನೀವು ಯಾರೊಂದಿಗೆ ಇರಬೇಕೆಂಬುದು ವೈಯಕ್ತಿಕ ಆಯ್ಕೆಯಾಗಿದೆ. ಎಲ್ಲರು ಪ್ರೀತಿಯಲ್ಲಿರಿ ಮತ್ತು ಪರಸ್ಪರ ಪ್ರೀತಿಸಲು ಪ್ರಾರಂಭಿಸಿ. ಧರ್ಮವನ್ನು ರಾಜಕೀಯ ಸಾಧನವನ್ನಾಗಿ ಮಾಡಬೇಡಿ” ಎಂದು ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.
ಬಂಗಾಳಿ ನಟಿ, ರಾಜಕಾರಣಿ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ ಎಂಬುವವರನ್ನು ವಿವಾಹವಾಗಿದ್ದಾರೆ.
ಇದಕ್ಕೂ ಮೊದಲು, ನುಸ್ರತ್ ಜಹಾನ್, ಬಂಗಾಳಿಗರ ಅತಿದೊಡ್ಡ ಹಬ್ಬವಾದ ದುರ್ಗಾ ಪೂಜೆಯ ಉತ್ಸವಗಳಲ್ಲಿ ಭಾಗವಹಿಸಿದ್ದಕ್ಕಾಗಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ, ಇಸ್ಲಾಂ ಧರ್ಮಕ್ಕೆ ‘ಅಪಖ್ಯಾತಿ ತಂದಿದ್ದಾರೆ’ ಎಂದು ತೀವ್ರ ದಾಳಿಗೆ ಒಳಗಾಗಿದ್ದರು.
ಇತ್ತ ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಸರ್ಕಾರ ಜಾರಿಗೆ ತರಲು ಹೊರಟ ಲವ್ ಜಿಹಾದ್ ಕಾನೂನಿನ ವಿರುದ್ಧ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ್ದು, ವ್ಯಕ್ತಿ ಸ್ವಾತಂತ್ಯ್ರವನ್ನು ಸರ್ಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಹಾಗೂ ಮತಾಂತರದ ವಿರುದ್ಧದ ಕಾನೂನು ತಪ್ಪಾಗಿದೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ.