Homeಕರ್ನಾಟಕನಕಲಿ ಇತಿಹಾಸದ ಉರಿಗೌಡ, ನಂಜೇಗೌಡರ ಹೆಸರಲ್ಲಿ ಮಹಾದ್ವಾರ; ನಗೆಪಾಟಲಿಗೀಡಾದ ಸಂಘಪರಿವಾರ

ನಕಲಿ ಇತಿಹಾಸದ ಉರಿಗೌಡ, ನಂಜೇಗೌಡರ ಹೆಸರಲ್ಲಿ ಮಹಾದ್ವಾರ; ನಗೆಪಾಟಲಿಗೀಡಾದ ಸಂಘಪರಿವಾರ

ಒಕ್ಕಲಿಗರಿಗೆ ದೇಶದ್ರೋಹ ಪಟ್ಟ ಕಟ್ಟಲು ಸಂಘಪರಿವಾರ ಯತ್ನಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ

- Advertisement -
- Advertisement -

ಬೆಂಗಳೂರು ಮೈಸೂರು ನಡುವೆ ನಿರ್ಮಿಸಿರುವ 118 ಕಿಲೋ ಮೀಟರ್‌ ಉದ್ದದ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಬರಲಿರುವ ಸಂದರ್ಭದಲ್ಲಿ ನಕಲಿ ಇತಿಹಾಸದ ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಿರುವ ಸಂಘ ಪರಿವಾರ ನಗೆಪಾಟಲಿಗೀಡಾಗಿದೆ.

ಟಿಪ್ಪು ಹತ್ಯೆ ಮಾಡಿದ್ದು ಉರಿಗೌಡ, ನಂಜೇಗೌಡ ಎಂದು ವಾಟ್ಸ್‌ಅಪ್‌ನಲ್ಲಿ ಬಂದ ಸುಳ್ಳನ್ನೇ ಸತ್ಯವೆಂದು ನಂಬಿಸಲು ಹೊರಟಿರುವ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಮಂಡ್ಯದ ಹೆದ್ದಾರಿಯಲ್ಲಿ ಹಾಕಲಾಗಿರುವ ‘ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರ’ವನ್ನು ತೆರವುಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಕೈಯಲ್ಲಿ ಖಡ್ಗವಿಡಿದು ನಿಂತಿರುವ ತಮಿಳುನಾಡಿನ ವೀರರ ಚಿತ್ರವನ್ನೇ ಉರಿಗೌಡ, ನಂಜೇಗೌಡ ಎಂದು ಹರಿಬಿಟ್ಟಿರುವುದು ಈಗಾಗಲೇ ಬಯಲಾಗಿದೆ. ಆ ಚಿತ್ರಗಳನ್ನೇ ಇಲ್ಲಿನ ಮಹಾದ್ವಾರದಲ್ಲೂ ಹಾಕಿಕೊಳ್ಳಲಾಗಿದೆ.

ಮರುದು ಪಾಂಡ್ಯರು (ಪೆರಿಯ ಮರುದು ಮತ್ತು ಚಿನ್ನ ಮರುದು) 18ನೇ ಶತಮಾನದ ಅಂತ್ಯದಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯದಲ್ಲಿ ಪ್ರಸಿದ್ಧರಾಗಿದ್ದರು ಎಂದು ಲಭ್ಯವಿರುವ ಮಾಹಿತಿಗಳು ಹೇಳುತ್ತವೆ. ಈ ಇಬ್ಬರು ಸಹೋದರರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ಇವರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಅವರ ಚಿತ್ರವನ್ನೇ ‘ಉರಿಗೌಡ, ನಂಜಗೌಡ’ ಎಂಬ ಕಾಲ್ಪನಿಕ ಕತೆಗೆ ಬಳಸಿಕೊಳ್ಳಲಾಗಿದೆ.

ಕವಿ ರಾಜೇಂದ್ರ ಪ್ರಸಾದ್ ಈ ಕುರಿತು ಪೋಸ್ಟ್ ಮಾಡಿದ್ದು, “ಪ್ರಧಾನಿಯವರು ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ‘ ಉರಿಗೌಡ & ನಂಜೇಗೌಡ’ ಹೆಸರುಗಳಲ್ಲಿ ಹಾಕಿರುವ ಫ್ಲೆಕ್ಸ್ ಗಳನ್ನು ಕೂಡಲೇ ತೆರೆವು ಗೊಳಿಸಿ ಎಲ್ಲವೂ ಶಾಂತಿಯುತವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಸದರಿ ಫ್ಲೆಕ್ಸ್ ಬೋರ್ಡ್‌ನಲ್ಲಿ ಕೋಮು ಪ್ರಚೋದಿತ ಸುಳ್ಳು ಮತ್ತು ಅಶಾಂತಿ ಹರಡುವ ಉದ್ದೇಶಗಳು ಇರುವ ಕಾರಣ ಅದನ್ನ ಹಾಕಲು ಜಿಲ್ಲಾಡಳಿತವು ಅವಕಾಶ ನೀಡಬಾರದಿತ್ತು. ಸರ್ಕಾರದ ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ಇಂತಹ ಕೋಮುವಾದಿ ಮತ್ತು ಸುಳ್ಳಿನ ಪೋಸ್ಟರ್ ಗಳನ್ನು ಬಳಸುವುದು, ಪ್ರಚಾರ ಮಾಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ” ಎಂದು ತಿಳಿಸಿದ್ದಾರೆ.

“ತಾವು ಸಂಜೆಯೊಳಗೆ ಈ ವಿವಾದಾತ್ಮಕ ಫ್ಲೆಕ್ಸ್ ಬೋರ್ಡ್‌ಗಳನ್ನು ತೆರೆವುಗೊಳಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್, ಜೆಡಿಎಸ್, ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ರಾಜಕೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂತಹ ಕೇಡಿನ ಕೆಲಸಗಳ ವಿರುದ್ದ ತೀವ್ರವಾದ ಪ್ರತಿಭಟನೆಯನ್ನ ನಾಳೆ ಹಮ್ಮಿಕೊಳ್ಳಲು ಕಾರಣವಾಗುತ್ತದೆ. ತಾವು ಇದಕ್ಕೆ ಅವಕಾಶ ಕೊಡದೇ ಯಾವುದೇ ಮುಲಾಜುಗಳಿಗೆ ಒಳಗಾಗದೇ ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ (ಬಿ.ಜಿ ದಾಸೇಗೌಡ ವೃತ್ತ) ಫ್ಲೆಕ್ಸ್ ಬೋರ್ಡ್‌‌ಗಳನ್ನು ತೆರೆವು ಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಸಿಪಿಐಎಂ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಟಿ.ಎಲ್. ಪ್ರತಿಕ್ರಿಯಿಸಿದ್ದು, “ಹಾಕಿರುವ ಫ್ಲೆಕ್ಸ್‌ಗಳನ್ನು ಕೂಡಲೇ ತೆರೆವುಗೊಳಿಸಿ ಜಿಲ್ಲೆಯನ್ನು ಕೋಮು ದಳ್ಳುರಿಗೆ ತಳ್ಳುವ ಬಿಜೆಪಿಯ ಪ್ರಯತ್ನಗಳನ್ನು ವಿಫಲಗೊಳಿಸಬೇಕು ಎಂದು ಮಂಡ್ಯ ಜಿಲ್ಲಾಡಳಿತವನ್ನು CPIM ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ” ಎಂದಿದ್ದಾರೆ.

“ಉರೀಗೌಡ ಮತ್ತು ದೊಡ್ಡ ನಂಜೇಗೌಡ ಎಂಬ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಅವರು ಟಿಪ್ಪುವನ್ನು ಕೊಂದ ಸೈನಿಕರು ಎಂದು ಸುಳ್ಳು ಕತೆ ಕಟ್ಟಿ ಒಕ್ಕಲಿಗರನ್ನು ಟಿಪ್ಪು ವಿರುದ್ಧ ಹೋರಾಡಿ ಬ್ರಿಟೀಷರಿಗೆ ಸಹಾಯ ಮಾಡಿದರು ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರು ಎಂದು ಅವಮಾನಿಸುವ ಕೆಲಸವನ್ನು ಬಿಜೆಪಿ ಮತ್ತು ಸಂಘ ಪರಿವಾರ ಮಾಡುತ್ತಿದೆ. ಇದರ ಮುಂದವರಿಕೆಯಾಗಿ ಪ್ರಧಾನಿಯೊಬ್ಬರ ಬೇಟಿಯ ಘನತೆಯನ್ನೂ ಮಣ್ಣು ಪಾಲು ಮಾಡಿ ತನ್ನ ಸುಳ್ಳಿನ, ವಿಕೃತಿಯ ಪ್ರಚಾರದಲ್ಲಿ ಬಿಜೆಪಿ ನಿರತವಾಗಿದೆ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿರಿ: ‘ಉರಿಗೌಡ, ನಂಜೇಗೌಡ’ರು ಜೀವಿಸಿದ್ದ ಯಾವುದೇ ಕುರುಹು ಇಲ್ಲ: ಆದರೂ ಸುಳ್ಳು ಹೇಳುತ್ತಿರುವ ಬಿಜೆಪಿ

ಲೇಖಕ ಚಂದ್ರಪ್ರಭ ಕಟಾರಿ ಪ್ರತಿಕ್ರಿಯಿಸಿದ್ದು, “ವಾಟ್ಸಪ್ ಯೂನಿವರ್ಸಿಟಿ ಹುಟ್ಟಿ(ಸಿ)ದ ಉರಿಗೌಡ ಮತ್ತು ನಂಜೇಗೌಡರು ಬ್ರಿಟಿಷರ ಪರವಾಗಿ ಯುದ್ಧ ಮಾಡಿದರು ಎಂಬ ಕಟ್ಟುಕತೆ ಈಗ ಅಕ್ಷರಶಃ ಬೀದಿಯಲ್ಲಿ ರಾರಾಜಿಸುತ್ತಿದೆ. ಸಂಘಿಗಳು ವ್ಯವಸ್ಥಿತವಾಗಿ ತಮ್ಮ ರಾಜಕೀಯ ಲಾಭಕ್ಕಾಗಿ ಇಂಥ ದೇಶದ್ರೋಹದ ಅಪವಾದವನ್ನು ಒಕ್ಕಲಿಗ ಸಮುದಾಯದ ಹಣೆಗೆ ಕಟ್ಟಲು ಪಣ ತೊಟ್ಟಂತಿದೆ. ಅಪಾರ ಕನ್ನಡಾಭಿಮಾನದ ಒಕ್ಕಲಿಗರು ಇದನ್ನು ಪ್ರತಿಭಟಿಸಿ, ಈ ಕಟ್ಟುಕತೆ ಮುಂದುವರೆಯದಂತೆ ನೋಡಿಕೊಳ್ಳುವ ಅನಿವಾರ್ಯತೆ ಈಗ ಅವರ ಹೆಗಲಿಗೇರಿದೆ. ಪಕ್ಷಾತೀತವಾಗಿ ಇದನ್ನು ಈಗಲೇ ಚಿವುಟಿ ಹಾಕದಿದ್ದರೆ, ಒಕ್ಕಲಿಗ ಸಮುದಾಯವು ಬ್ರಿಟಿಷರ ಪರವಾಗಿತ್ತು ಎಂಬ ಕಪೋಲಕಲ್ಪಿತ ಕತೆಯು ಮುಂದಿನ ಪೀಳಿಗೆಯ ಜನಮಾನಸದಲ್ಲಿ ಶಾಶ್ವತವಾಗಿ ಉಳಿದು, ದೇಶದ್ರೋಹದ ಪಟ್ಟದ ಅಪಾಯವಂತೂ ಕಟ್ಟಿಟ್ಟ ಬುತ್ತಿ” ಎಂದು ಎಚ್ಚರಿಸಿದ್ದಾರೆ.

ಪತ್ರಕರ್ತ ನವೀನ್ ಸೂರಿಂಜೆ ಅವರ ಪೋಸ್ಟ್‌ಅನ್ನು ಲೇಖಕ ನಾಗೇಗೌಡ ಕೀಲಾರ ಹಂಚಿಕೊಂಡಿದ್ದಾರೆ. “ಮಂಡ್ಯ ಎನ್ನುವುದು ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡ ಹೆಸರು. ಬ್ರಿಟೀಷರ ಎದೆ ನಡುಗಿಸಿದ ಸ್ವಾತಂತ್ರ್ಯ ಚಳವಳಿ ಈ ನೆಲದಲ್ಲಿ ನಡೆದಿತ್ತು. ಇಂತಹ ಮಂಡ್ಯಕ್ಕೆ ಈ ದೇಶದ ಪ್ರಧಾನಿ ಆಗಮಿಸುವಾಗ ಸ್ವಾಗತ ದ್ವಾರ ನಿರ್ಮಿಸಲು ಒಬ್ಬ ಅಸಲೀ ಸ್ವಾತಂತ್ರ್ಯ ಹೋರಾಟಗಾರನ ಹೆಸರು ನೆನಪಿಗೆ ಬರಲಿಲ್ಲವೇ ? ಪ್ರಧಾನಿ ಬಿಜೆಪಿಯೇ ಆಗಲಿ, ಸುಳ್ಳುಕೋರನೇ ಆಗಲೀ. ಅವರು ಜಿಲ್ಲೆಗೆ ಬಂದಿದ್ದರು ಎಂಬುದು ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಅಂತಹ ಇತಿಹಾಸದ ಪುಟದಲ್ಲಿ ಒಕ್ಕಲಿಗರ ಅವಹೇಳನ ಸೇರ್ಪಡೆಗೊಳ್ಳುವುದು ಸರಿಯೇ?” ಎಂದು ಸೂರಿಂಜೆ ಪ್ರಶ್ನಿಸಿದ್ದಾರೆ.

ಹೋರಾಟಗಾರರು ಹಾಗೂ ವೈದ್ಯರೂ ಆದ ಎಚ್.ವಿ.ವಾಸು ಅವರು ಪ್ರತಿಕ್ರಿಯಿಸಿ, “ಇದು ಮಂಡ್ಯ ಜಿಲ್ಲೆಗೆ ಮಾಡುತ್ತಿರುವ ಅವಮಾನವೆಂಬುದರಲ್ಲಿ ಸಂದೇಹವಿಲ್ಲ. ಮಂಡ್ಯದ ಕುರಿತು ಹೊರಗೆ ಹಲವು ಪೂರ್ವಗ್ರಹಗಳಿವೆ. ಅವರು ತೀರಾ ‘Mandya centred’, ಜಾತಿ ಕೇಂದ್ರಿತ ಮನೋಭಾವ ಇರುವವರು, ಮಂಡ್ಯ ಕುರಿತಂತೆ ದುರಭಿಮಾನ ಹೊಂದಿರುವವರು ಇತ್ಯಾದಿ. ಮಂಡ್ಯದ ಜೊತೆ ಕಳೆದ 23 ವರ್ಷಗಳ ಒಡನಾಟ, 12 ವರ್ಷಗಳ ಕಾಲ ಅಲ್ಲಿಯೇ ವಾಸ ಮಾಡಿದ್ದುದರ ಆಧಾರದ ಮೇಲೆ ಹೇಳುವುದಾದರೆ ಅವೆಲ್ಲವೂ ಸುಳ್ಳು… ಒಂದು ಸಹಜ ವಿಶಾಲ ಮನೋಭಾವ, ನೆಲಮೂಲದ ವಿವೇಕವನ್ನು ಹೊಂದಿರುವ ಸಮುದಾಯ ಅಲ್ಲಿದೆ. (ಎಲ್ಲಾ ಕಡೆ ಇರುವ ಸಮಸ್ಯೆಗಳು, ಕೆಡುಕು ಅಲ್ಲೂ ಇದೆ; ಇರುತ್ತದೆ)” ಎಂದು ವಿವರಿಸಿದ್ದಾರೆ.

“ಯಾವ ಸಂದೇಹವೂ ಇಲ್ಲದೇ ಹೇಳಬಹುದಾದ ಸಂಗತಿಯೆಂದರೆ – ಇಂದು ಮಂಡ್ಯದಲ್ಲಿ ದ್ವಾರದಲ್ಲಿ ಹೆಸರಿಸಲಾಗಿರುವ ಎರಡು ಫೇಕ್ ಪಾತ್ರಗಳು ಒಕ್ಕಲಿಗ ಸಮುದಾಯಕ್ಕೂ, ಮಂಡ್ಯಕ್ಕೂ ದೊಡ್ಡ ಅವಮಾನವಲ್ಲದೇ ಬೇರೇನೂ ಅಲ್ಲ. ಇಂದಿಗೂ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ.ಸಿ.ಬಂದೀಗೌಡರು, ನಮ್ಮೆಲ್ಲರನ್ನು ಪೊರೆದ ಹಿರಿಯ ಜೀವ ಪ್ರೊ.ಎಚ್.ಎಲ್.ಕೇಶವಮೂರ್ತಿ, ದಸಂಸದ ಹಿರಿಯ ನಾಯಕ ನಾರಾಯಣ್ ಇಂಥವರನ್ನು ನೆನೆದರೇನೇ ಮನಸ್ಸಿನಲ್ಲಿ ಗೌರವ, ಪ್ರೀತಿ ಉಕ್ಕುತ್ತದೆ. ಹಾಗೆಯೇ ನಾವು ದಾರಿ ತಪ್ಪಬಾರದು ಎಂಬ ಎಚ್ಚರ ಮೂಡುತ್ತದೆ. ಅವರಂಥವರ ಸಹವಾಸದಲ್ಲಿ ಒಂದೆರಡು ದಶಕಗಳ ಕಾಲ ಇದ್ದ ನಾವುಗಳು ಮಂಡ್ಯಕ್ಕೆ ಈ ಅವಮಾನ ಆಗದಂತೆ ನೋಡಿಕೊಳ್ಳಬೇಕು. ಇದು ನಮ್ಮ ಕರ್ತವ್ಯ” ಎಂದು ನೆನಪಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಪೊಲೀಸರಿಂದ ಬೈಕ್ ಸೀಝ್‌; ಠಾಣೆ ಮುಂದೆ ಬೆಂಕಿ ಹಚ್ಚಿಕೊಂಡ ‘ಗಿಗ್’ ಕಾರ್ಮಿಕ

ಪೊಲೀಸರು ತನ್ನ ಬೈಕ್‌ ವಶಪಡಿಸಿಕೊಂಡ ನಂತರ 32 ವರ್ಷದ ಗಿಗ್ ಕಾರ್ಮಿಕನೊಬ್ಬ ಠಾಣೆಯ ಹೊರಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಕ್ಷಯ್ ಕಶ್ಯಪ್ ಎಂದು ಗುರುತಿಸಲ್ಪಟ್ಟ ಯುವಕನಿಗೆ ದೇಹದ...

ಎಪ್‌ಸ್ಟೀನ್ ಫೈಲ್ಸ್ ನಲ್ಲಿ ಹೆಸರು ಪ್ರಸ್ತಾಪ; ಗೇಟ್ಸ್ ಫೌಂಡೇಶನ್ ಸಿಬ್ಬಂದಿಗೆ ಕ್ಷಮೆಯಾಚಿಸಿದ ಬಿಲ್ ಗೇಟ್ಸ್: ವರದಿ 

ನ್ಯೂಯಾರ್ಕ್: ಅಮೆರಿಕದ ತಂತ್ರಜ್ಞಾನ ಉದ್ಯಮಿ ಬಿಲ್ ಗೇಟ್ಸ್, ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ನೊಂದಿಗಿನ ಹಳೆಯ ಸಂಪರ್ಕಕ್ಕಾಗಿ ಗೇಟ್ಸ್ ಫೌಂಡೇಶನ್ ಸಿಬ್ಬಂದಿಗೆ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಫೌಂಡೇಶನ್‌ನ ಟೌನ್...

ಕೆಎಸ್‌ಯು-ಐಯುಎಂಎಲ್ ಪ್ರತಿಭಟನೆಯಲ್ಲಿ ಘರ್ಷಣೆ; ಗಾಯಗೊಂಡ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್

ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ಬುಧವಾರ ಪೊಲೀಸರು ಮತ್ತು ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು)-ಐಯುಎಂಎಲ್ ಯುವ ಘಟಕದ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕುತ್ತಿಗೆ ಮತ್ತು ಕೈಗೆ ಗಾಯಗಳಾಗಿದೆ. ಕಾಂಗ್ರೆಸ್-ಕೆಎಸ್‌ಯು...

ಉತ್ತರಾಖಂಡ| ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ನಮಾಜ್; ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ

ಉತ್ತರಾಖಂಡದ ಜಗತ್ಪುರದ ಅತ್ರಿಯ ದೇವಸ್ಥಾನದ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ನಮಾಜ್ ಮಾಡಿದ ನಂತರ ಶಾಹಿದ್ ಎಂದು ಗುರುತಿಸಲಾದ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಧಾರ್ಮಿಕ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು...

ಮುಝಫ್ಫರ್‌ನಗರ ಗಲಭೆ ಪ್ರಕರಣ : 37 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಉತ್ತರ ಪ್ರದೇಶದ ಮುಝಫ್ಫರ್‌ನಗರದ ನ್ಯಾಯಾಲಯ 2013ರ ಕೋಮು ಗಲಭೆಗೆ ಸಂಬಂಧಿಸಿದ ಎಂಟು ಜನರ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ 37 ಆರೋಪಿಗಳನ್ನು ಮಂಗಳವಾರ (ಫೆ.25) ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ. ತೀರ್ಪು ಪ್ರಕಟಿಸಿದ ಹೆಚ್ಚುವರಿ...

ಇಸ್ರೇಲ್ ಸಂಸತ್ತಿನಲ್ಲಿ ಭಾಷಣದ ವೇಳೆ ಪ್ರಧಾನಿ ಮೋದಿ ಗಾಝಾ ನರಮೇಧ ಉಲ್ಲೇಖಿಸಲಿ : ಪ್ರಿಯಾಂಕಾ ಗಾಂಧಿ ಆಗ್ರಹ

ಇಸ್ರೇಲ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ತಾದ ನೆಸೆಟ್ ಅನ್ನು ಉದ್ದೇಶಿಸಿ ಮಾತನಾಡುವಾಗ ಗಾಝಾ ನರಮೇಧವನ್ನು ಉಲ್ಲೇಖಿಸಿ ನ್ಯಾಯಕ್ಕಾಗಿ ಆಗ್ರಹಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ...

ಕೇಂದ್ರ ಸಚಿವರ ಸಮ್ಮುಖದಲ್ಲಿ ‘ಮುಸ್ಲಿಂ ವಿರೋಧಿ ಹೇಳಿಕೆ’ ನೀಡಿದ ಹಿಂದುತ್ವವಾದಿ ವ್ಯಕ್ತಿ

ಉತ್ತರಾಖಂಡದಲ್ಲಿ ನಡೆದ ಸಾರ್ವಜನಿಕ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ, ಕೇಂದ್ರ ಸಚಿವರ ಸಮ್ಮುಖದಲ್ಲಿಯೇ ಹಿಂದುತ್ವವಾದಿ ಮುಖಂಡನೊಬ್ಬ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದು ರಾಜಕೀಯ ಮತ್ತು ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ. ಇದು ಪೊಲೀಸ್ ಕ್ರಮ...

ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ವಿಷಯಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಕಟಿಸಿದ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ "ನ್ಯಾಯಾಂಗದಲ್ಲಿನ ಭ್ರಷ್ಟಾಚಾರ" ಎಂಬ ವಿಷಯ ಉಲ್ಲೇಖಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಫೆ.25) ತೀವ್ರ...

ಮಧ್ಯಪ್ರದೇಶ: ಡಾ. ಹರಿಸಿಂಗ್ ಗೌರ್ ವಿವಿಯಲ್ಲಿ ಎಬಿವಿಪಿ-ಆರ್‌ಎಸ್‌ಎಸ್‌ ದುಷ್ಕರ್ಮಿಗಳಿಂದ ವಿದ್ಯಾರ್ಥಿಗಳ ಮೇಲೆ ದಾಳಿ, ಜೀವಬೆದರಿಕೆ;  ಎಫ್‌ಐಆರ್ ದಾಖಲು

ಮಧ್ಯಪ್ರದೇಶದ ಸಾಗರ್‌ನಲ್ಲಿರುವ ಡಾ. ಹರಿ ಸಿಂಗ್ ಗೌರ್ ವಿಶ್ವವಿದ್ಯಾಲಯದಲ್ಲಿ ನಡೆದ ಸರಣಿ ಹಿಂಸಾತ್ಮಕ ಘಟನೆಗಳು ಕ್ಯಾಂಪಸ್ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡಿವೆ. ಐದು ದಿನಗಳಲ್ಲಿ ಎಬಿವಿಪಿ-ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವ್ಯಕ್ತಿಗಳಿಂದ ಎರಡು ಜೀವ...

ಅಜೀಂ ಪ್ರೇಮ್‌ ಜಿ ವಿವಿಯಲ್ಲಿ ದಾಂಧಲೆ : ಎಬಿವಿಪಿ ಸದಸ್ಯರ ವಿರುದ್ಧ ಕಠಿಣ ಕ್ರಮಕ್ಕೆ ಕೆವಿಎಸ್‌ ಆಗ್ರಹ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ ಎಬಿವಿಪಿ ಸದಸ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್‌) ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ರಾಜ್ಯ...