Homeಕರ್ನಾಟಕನಕಲಿ ಇತಿಹಾಸದ ಉರಿಗೌಡ, ನಂಜೇಗೌಡರ ಹೆಸರಲ್ಲಿ ಮಹಾದ್ವಾರ; ನಗೆಪಾಟಲಿಗೀಡಾದ ಸಂಘಪರಿವಾರ

ನಕಲಿ ಇತಿಹಾಸದ ಉರಿಗೌಡ, ನಂಜೇಗೌಡರ ಹೆಸರಲ್ಲಿ ಮಹಾದ್ವಾರ; ನಗೆಪಾಟಲಿಗೀಡಾದ ಸಂಘಪರಿವಾರ

ಒಕ್ಕಲಿಗರಿಗೆ ದೇಶದ್ರೋಹ ಪಟ್ಟ ಕಟ್ಟಲು ಸಂಘಪರಿವಾರ ಯತ್ನಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ

- Advertisement -
- Advertisement -

ಬೆಂಗಳೂರು ಮೈಸೂರು ನಡುವೆ ನಿರ್ಮಿಸಿರುವ 118 ಕಿಲೋ ಮೀಟರ್‌ ಉದ್ದದ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಬರಲಿರುವ ಸಂದರ್ಭದಲ್ಲಿ ನಕಲಿ ಇತಿಹಾಸದ ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಿರುವ ಸಂಘ ಪರಿವಾರ ನಗೆಪಾಟಲಿಗೀಡಾಗಿದೆ.

ಟಿಪ್ಪು ಹತ್ಯೆ ಮಾಡಿದ್ದು ಉರಿಗೌಡ, ನಂಜೇಗೌಡ ಎಂದು ವಾಟ್ಸ್‌ಅಪ್‌ನಲ್ಲಿ ಬಂದ ಸುಳ್ಳನ್ನೇ ಸತ್ಯವೆಂದು ನಂಬಿಸಲು ಹೊರಟಿರುವ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಮಂಡ್ಯದ ಹೆದ್ದಾರಿಯಲ್ಲಿ ಹಾಕಲಾಗಿರುವ ‘ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರ’ವನ್ನು ತೆರವುಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಕೈಯಲ್ಲಿ ಖಡ್ಗವಿಡಿದು ನಿಂತಿರುವ ತಮಿಳುನಾಡಿನ ವೀರರ ಚಿತ್ರವನ್ನೇ ಉರಿಗೌಡ, ನಂಜೇಗೌಡ ಎಂದು ಹರಿಬಿಟ್ಟಿರುವುದು ಈಗಾಗಲೇ ಬಯಲಾಗಿದೆ. ಆ ಚಿತ್ರಗಳನ್ನೇ ಇಲ್ಲಿನ ಮಹಾದ್ವಾರದಲ್ಲೂ ಹಾಕಿಕೊಳ್ಳಲಾಗಿದೆ.

ಮರುದು ಪಾಂಡ್ಯರು (ಪೆರಿಯ ಮರುದು ಮತ್ತು ಚಿನ್ನ ಮರುದು) 18ನೇ ಶತಮಾನದ ಅಂತ್ಯದಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯದಲ್ಲಿ ಪ್ರಸಿದ್ಧರಾಗಿದ್ದರು ಎಂದು ಲಭ್ಯವಿರುವ ಮಾಹಿತಿಗಳು ಹೇಳುತ್ತವೆ. ಈ ಇಬ್ಬರು ಸಹೋದರರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ಇವರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಅವರ ಚಿತ್ರವನ್ನೇ ‘ಉರಿಗೌಡ, ನಂಜಗೌಡ’ ಎಂಬ ಕಾಲ್ಪನಿಕ ಕತೆಗೆ ಬಳಸಿಕೊಳ್ಳಲಾಗಿದೆ.

ಕವಿ ರಾಜೇಂದ್ರ ಪ್ರಸಾದ್ ಈ ಕುರಿತು ಪೋಸ್ಟ್ ಮಾಡಿದ್ದು, “ಪ್ರಧಾನಿಯವರು ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ‘ ಉರಿಗೌಡ & ನಂಜೇಗೌಡ’ ಹೆಸರುಗಳಲ್ಲಿ ಹಾಕಿರುವ ಫ್ಲೆಕ್ಸ್ ಗಳನ್ನು ಕೂಡಲೇ ತೆರೆವು ಗೊಳಿಸಿ ಎಲ್ಲವೂ ಶಾಂತಿಯುತವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಸದರಿ ಫ್ಲೆಕ್ಸ್ ಬೋರ್ಡ್‌ನಲ್ಲಿ ಕೋಮು ಪ್ರಚೋದಿತ ಸುಳ್ಳು ಮತ್ತು ಅಶಾಂತಿ ಹರಡುವ ಉದ್ದೇಶಗಳು ಇರುವ ಕಾರಣ ಅದನ್ನ ಹಾಕಲು ಜಿಲ್ಲಾಡಳಿತವು ಅವಕಾಶ ನೀಡಬಾರದಿತ್ತು. ಸರ್ಕಾರದ ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ಇಂತಹ ಕೋಮುವಾದಿ ಮತ್ತು ಸುಳ್ಳಿನ ಪೋಸ್ಟರ್ ಗಳನ್ನು ಬಳಸುವುದು, ಪ್ರಚಾರ ಮಾಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ” ಎಂದು ತಿಳಿಸಿದ್ದಾರೆ.

“ತಾವು ಸಂಜೆಯೊಳಗೆ ಈ ವಿವಾದಾತ್ಮಕ ಫ್ಲೆಕ್ಸ್ ಬೋರ್ಡ್‌ಗಳನ್ನು ತೆರೆವುಗೊಳಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್, ಜೆಡಿಎಸ್, ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ರಾಜಕೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂತಹ ಕೇಡಿನ ಕೆಲಸಗಳ ವಿರುದ್ದ ತೀವ್ರವಾದ ಪ್ರತಿಭಟನೆಯನ್ನ ನಾಳೆ ಹಮ್ಮಿಕೊಳ್ಳಲು ಕಾರಣವಾಗುತ್ತದೆ. ತಾವು ಇದಕ್ಕೆ ಅವಕಾಶ ಕೊಡದೇ ಯಾವುದೇ ಮುಲಾಜುಗಳಿಗೆ ಒಳಗಾಗದೇ ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ (ಬಿ.ಜಿ ದಾಸೇಗೌಡ ವೃತ್ತ) ಫ್ಲೆಕ್ಸ್ ಬೋರ್ಡ್‌‌ಗಳನ್ನು ತೆರೆವು ಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಸಿಪಿಐಎಂ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಟಿ.ಎಲ್. ಪ್ರತಿಕ್ರಿಯಿಸಿದ್ದು, “ಹಾಕಿರುವ ಫ್ಲೆಕ್ಸ್‌ಗಳನ್ನು ಕೂಡಲೇ ತೆರೆವುಗೊಳಿಸಿ ಜಿಲ್ಲೆಯನ್ನು ಕೋಮು ದಳ್ಳುರಿಗೆ ತಳ್ಳುವ ಬಿಜೆಪಿಯ ಪ್ರಯತ್ನಗಳನ್ನು ವಿಫಲಗೊಳಿಸಬೇಕು ಎಂದು ಮಂಡ್ಯ ಜಿಲ್ಲಾಡಳಿತವನ್ನು CPIM ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ” ಎಂದಿದ್ದಾರೆ.

“ಉರೀಗೌಡ ಮತ್ತು ದೊಡ್ಡ ನಂಜೇಗೌಡ ಎಂಬ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಅವರು ಟಿಪ್ಪುವನ್ನು ಕೊಂದ ಸೈನಿಕರು ಎಂದು ಸುಳ್ಳು ಕತೆ ಕಟ್ಟಿ ಒಕ್ಕಲಿಗರನ್ನು ಟಿಪ್ಪು ವಿರುದ್ಧ ಹೋರಾಡಿ ಬ್ರಿಟೀಷರಿಗೆ ಸಹಾಯ ಮಾಡಿದರು ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರು ಎಂದು ಅವಮಾನಿಸುವ ಕೆಲಸವನ್ನು ಬಿಜೆಪಿ ಮತ್ತು ಸಂಘ ಪರಿವಾರ ಮಾಡುತ್ತಿದೆ. ಇದರ ಮುಂದವರಿಕೆಯಾಗಿ ಪ್ರಧಾನಿಯೊಬ್ಬರ ಬೇಟಿಯ ಘನತೆಯನ್ನೂ ಮಣ್ಣು ಪಾಲು ಮಾಡಿ ತನ್ನ ಸುಳ್ಳಿನ, ವಿಕೃತಿಯ ಪ್ರಚಾರದಲ್ಲಿ ಬಿಜೆಪಿ ನಿರತವಾಗಿದೆ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿರಿ: ‘ಉರಿಗೌಡ, ನಂಜೇಗೌಡ’ರು ಜೀವಿಸಿದ್ದ ಯಾವುದೇ ಕುರುಹು ಇಲ್ಲ: ಆದರೂ ಸುಳ್ಳು ಹೇಳುತ್ತಿರುವ ಬಿಜೆಪಿ

ಲೇಖಕ ಚಂದ್ರಪ್ರಭ ಕಟಾರಿ ಪ್ರತಿಕ್ರಿಯಿಸಿದ್ದು, “ವಾಟ್ಸಪ್ ಯೂನಿವರ್ಸಿಟಿ ಹುಟ್ಟಿ(ಸಿ)ದ ಉರಿಗೌಡ ಮತ್ತು ನಂಜೇಗೌಡರು ಬ್ರಿಟಿಷರ ಪರವಾಗಿ ಯುದ್ಧ ಮಾಡಿದರು ಎಂಬ ಕಟ್ಟುಕತೆ ಈಗ ಅಕ್ಷರಶಃ ಬೀದಿಯಲ್ಲಿ ರಾರಾಜಿಸುತ್ತಿದೆ. ಸಂಘಿಗಳು ವ್ಯವಸ್ಥಿತವಾಗಿ ತಮ್ಮ ರಾಜಕೀಯ ಲಾಭಕ್ಕಾಗಿ ಇಂಥ ದೇಶದ್ರೋಹದ ಅಪವಾದವನ್ನು ಒಕ್ಕಲಿಗ ಸಮುದಾಯದ ಹಣೆಗೆ ಕಟ್ಟಲು ಪಣ ತೊಟ್ಟಂತಿದೆ. ಅಪಾರ ಕನ್ನಡಾಭಿಮಾನದ ಒಕ್ಕಲಿಗರು ಇದನ್ನು ಪ್ರತಿಭಟಿಸಿ, ಈ ಕಟ್ಟುಕತೆ ಮುಂದುವರೆಯದಂತೆ ನೋಡಿಕೊಳ್ಳುವ ಅನಿವಾರ್ಯತೆ ಈಗ ಅವರ ಹೆಗಲಿಗೇರಿದೆ. ಪಕ್ಷಾತೀತವಾಗಿ ಇದನ್ನು ಈಗಲೇ ಚಿವುಟಿ ಹಾಕದಿದ್ದರೆ, ಒಕ್ಕಲಿಗ ಸಮುದಾಯವು ಬ್ರಿಟಿಷರ ಪರವಾಗಿತ್ತು ಎಂಬ ಕಪೋಲಕಲ್ಪಿತ ಕತೆಯು ಮುಂದಿನ ಪೀಳಿಗೆಯ ಜನಮಾನಸದಲ್ಲಿ ಶಾಶ್ವತವಾಗಿ ಉಳಿದು, ದೇಶದ್ರೋಹದ ಪಟ್ಟದ ಅಪಾಯವಂತೂ ಕಟ್ಟಿಟ್ಟ ಬುತ್ತಿ” ಎಂದು ಎಚ್ಚರಿಸಿದ್ದಾರೆ.

ಪತ್ರಕರ್ತ ನವೀನ್ ಸೂರಿಂಜೆ ಅವರ ಪೋಸ್ಟ್‌ಅನ್ನು ಲೇಖಕ ನಾಗೇಗೌಡ ಕೀಲಾರ ಹಂಚಿಕೊಂಡಿದ್ದಾರೆ. “ಮಂಡ್ಯ ಎನ್ನುವುದು ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡ ಹೆಸರು. ಬ್ರಿಟೀಷರ ಎದೆ ನಡುಗಿಸಿದ ಸ್ವಾತಂತ್ರ್ಯ ಚಳವಳಿ ಈ ನೆಲದಲ್ಲಿ ನಡೆದಿತ್ತು. ಇಂತಹ ಮಂಡ್ಯಕ್ಕೆ ಈ ದೇಶದ ಪ್ರಧಾನಿ ಆಗಮಿಸುವಾಗ ಸ್ವಾಗತ ದ್ವಾರ ನಿರ್ಮಿಸಲು ಒಬ್ಬ ಅಸಲೀ ಸ್ವಾತಂತ್ರ್ಯ ಹೋರಾಟಗಾರನ ಹೆಸರು ನೆನಪಿಗೆ ಬರಲಿಲ್ಲವೇ ? ಪ್ರಧಾನಿ ಬಿಜೆಪಿಯೇ ಆಗಲಿ, ಸುಳ್ಳುಕೋರನೇ ಆಗಲೀ. ಅವರು ಜಿಲ್ಲೆಗೆ ಬಂದಿದ್ದರು ಎಂಬುದು ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಅಂತಹ ಇತಿಹಾಸದ ಪುಟದಲ್ಲಿ ಒಕ್ಕಲಿಗರ ಅವಹೇಳನ ಸೇರ್ಪಡೆಗೊಳ್ಳುವುದು ಸರಿಯೇ?” ಎಂದು ಸೂರಿಂಜೆ ಪ್ರಶ್ನಿಸಿದ್ದಾರೆ.

ಹೋರಾಟಗಾರರು ಹಾಗೂ ವೈದ್ಯರೂ ಆದ ಎಚ್.ವಿ.ವಾಸು ಅವರು ಪ್ರತಿಕ್ರಿಯಿಸಿ, “ಇದು ಮಂಡ್ಯ ಜಿಲ್ಲೆಗೆ ಮಾಡುತ್ತಿರುವ ಅವಮಾನವೆಂಬುದರಲ್ಲಿ ಸಂದೇಹವಿಲ್ಲ. ಮಂಡ್ಯದ ಕುರಿತು ಹೊರಗೆ ಹಲವು ಪೂರ್ವಗ್ರಹಗಳಿವೆ. ಅವರು ತೀರಾ ‘Mandya centred’, ಜಾತಿ ಕೇಂದ್ರಿತ ಮನೋಭಾವ ಇರುವವರು, ಮಂಡ್ಯ ಕುರಿತಂತೆ ದುರಭಿಮಾನ ಹೊಂದಿರುವವರು ಇತ್ಯಾದಿ. ಮಂಡ್ಯದ ಜೊತೆ ಕಳೆದ 23 ವರ್ಷಗಳ ಒಡನಾಟ, 12 ವರ್ಷಗಳ ಕಾಲ ಅಲ್ಲಿಯೇ ವಾಸ ಮಾಡಿದ್ದುದರ ಆಧಾರದ ಮೇಲೆ ಹೇಳುವುದಾದರೆ ಅವೆಲ್ಲವೂ ಸುಳ್ಳು… ಒಂದು ಸಹಜ ವಿಶಾಲ ಮನೋಭಾವ, ನೆಲಮೂಲದ ವಿವೇಕವನ್ನು ಹೊಂದಿರುವ ಸಮುದಾಯ ಅಲ್ಲಿದೆ. (ಎಲ್ಲಾ ಕಡೆ ಇರುವ ಸಮಸ್ಯೆಗಳು, ಕೆಡುಕು ಅಲ್ಲೂ ಇದೆ; ಇರುತ್ತದೆ)” ಎಂದು ವಿವರಿಸಿದ್ದಾರೆ.

“ಯಾವ ಸಂದೇಹವೂ ಇಲ್ಲದೇ ಹೇಳಬಹುದಾದ ಸಂಗತಿಯೆಂದರೆ – ಇಂದು ಮಂಡ್ಯದಲ್ಲಿ ದ್ವಾರದಲ್ಲಿ ಹೆಸರಿಸಲಾಗಿರುವ ಎರಡು ಫೇಕ್ ಪಾತ್ರಗಳು ಒಕ್ಕಲಿಗ ಸಮುದಾಯಕ್ಕೂ, ಮಂಡ್ಯಕ್ಕೂ ದೊಡ್ಡ ಅವಮಾನವಲ್ಲದೇ ಬೇರೇನೂ ಅಲ್ಲ. ಇಂದಿಗೂ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ.ಸಿ.ಬಂದೀಗೌಡರು, ನಮ್ಮೆಲ್ಲರನ್ನು ಪೊರೆದ ಹಿರಿಯ ಜೀವ ಪ್ರೊ.ಎಚ್.ಎಲ್.ಕೇಶವಮೂರ್ತಿ, ದಸಂಸದ ಹಿರಿಯ ನಾಯಕ ನಾರಾಯಣ್ ಇಂಥವರನ್ನು ನೆನೆದರೇನೇ ಮನಸ್ಸಿನಲ್ಲಿ ಗೌರವ, ಪ್ರೀತಿ ಉಕ್ಕುತ್ತದೆ. ಹಾಗೆಯೇ ನಾವು ದಾರಿ ತಪ್ಪಬಾರದು ಎಂಬ ಎಚ್ಚರ ಮೂಡುತ್ತದೆ. ಅವರಂಥವರ ಸಹವಾಸದಲ್ಲಿ ಒಂದೆರಡು ದಶಕಗಳ ಕಾಲ ಇದ್ದ ನಾವುಗಳು ಮಂಡ್ಯಕ್ಕೆ ಈ ಅವಮಾನ ಆಗದಂತೆ ನೋಡಿಕೊಳ್ಳಬೇಕು. ಇದು ನಮ್ಮ ಕರ್ತವ್ಯ” ಎಂದು ನೆನಪಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಗಾಜಿಯಾಬಾದ್ ಮೂವರು ಸಹೋದರಿಯರ ಆತ್ಮಹತ್ಯೆ’: ಕೊರಿಯನ್ ಮೂಲದ ಆನ್ ಲೈನ್ ಆಟದಿಂದ ಸಾವನ್ನಪ್ಪಿರುವ ಶಂಕೆ 

ಗಾಜಿಯಾಬಾದ್‌ನಲ್ಲಿ ಬುಧವಾರ ತಡರಾತ್ರಿ 12, 14 ಮತ್ತು 16 ವರ್ಷ ವಯಸ್ಸಿನ ಮೂವರು ಸಹೋದರಿಯರು ತಮ್ಮ ವಸತಿ ಕಟ್ಟಡದ ಟೆರೇಸ್‌ನಿಂದ ಹಾರಿ ಸಾವನ್ನಪ್ಪಿದ್ದಾರೆ. ಈ ಕೃತ್ಯವು ಕೊರಿಯನ್ ಮೂಲದ ಆನ್‌ಲೈನ್ ಆಟಕ್ಕೆ ಸಂಬಂಧಿಸಿರಬಹುದು...

‘ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು’: ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಮನವಿ ಪತ್ರ ಸಲ್ಲಿಸಿದ ಲಕ್ಷದ್ವೀಪ ವಿದ್ಯಾರ್ಥಿಗಳ  ಸಂಘ 

ಲಕ್ಷದ್ವೀಪ ವಿದ್ಯಾರ್ಥಿ ಸಂಘವು, ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಮಧ್ಯಪ್ರವೇಶಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಒತ್ತಾಯಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ...

ಪ.ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ, ಅಸ್ಸಾಂನಲ್ಲಿ ಎಸ್‌ಐಆರ್‌ ಏಕಿಲ್ಲ? : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಫೆ.4) ಆರೋಪಿಸಿದ್ದು, ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಏಕೆ ಎಸ್‌ಐಆರ್ ನಡೆಸುತ್ತಿಲ್ಲ ಎಂಬುವುದಾಗಿ...

ತಮಿಳುನಾಡು| ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಅನುಮಾನಾಸ್ಪದ ಸಾವು; ಮರ್ಯಾದೆಗೇಡು ಹತ್ಯೆ ಶಂಕೆ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಸಾವು ಮರ್ಯಾದಾ ಹತ್ಯೆಯ ಗಂಭೀರ ಆರೋಪಗಳನ್ನು ಹುಟ್ಟುಹಾಕಿದೆ. ಸಾವಿನ ಆರಂಭಿಕ ತನಿಖೆಯು ಆತ್ಮಹತ್ಯೆಯತ್ತ ಬೊಟ್ಟು ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ಅಂತಿಮ ಕಾರಣ...

‘ರಾಜ್ಯವನ್ನು ನಿರ್ಲಕ್ಷಿಸಲಾಗಿದೆ’ : ಕೇಂದ್ರ ಬಜೆಟ್‌ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ವಿರುದ್ದ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದು, ರಾಜ್ಯವನ್ನು 'ನಿರ್ಲಕ್ಷಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ಕೇರಳದ ದೀರ್ಘಕಾಲದ ಬೇಡಿಕೆಗಳನ್ನು ಪರಿಗಣಿಸದೆ ಇರುವುದು ಮತ್ತು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ...

ದೇವಾಲಯ-ಶಾಲೆಗಳ ಬಳಿ ಇರುವ ಮಾಂಸ ಮಳಿಗೆಗಳ ಕುರಿತು ಏಕರೂಪ ನೀತಿ ರೂಪಿಸಿ: ತೆಲಂಗಾಣ ಹೈಕೋರ್ಟ್

ಸಾರ್ವಜನಿಕ ಭಾವನೆ, ನೈರ್ಮಲ್ಯ, ಸಂಚಾರ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಕಳವಳಗಳನ್ನು ಉಲ್ಲೇಖಿಸಿ, ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದ 100 ಮೀಟರ್ ಒಳಗೆ ಮಾಂಸ ಮತ್ತು ಮಾಂಸಾಹಾರಿ ಆಹಾರ ಮಾರಾಟವನ್ನು...

ಎಸ್‌ಐಆರ್ ಅರ್ಜಿ ವಿಚಾರಣೆ : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ದ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ (ಫೆ.4) ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ ಮಾಡುತ್ತಿದ್ದಾರೆ....

ಆರ್‌ಕಾಮ್ ಬ್ಯಾಂಕ್ ವಂಚನೆ ತನಿಖೆ: ಇಡಿ, ಸಿಬಿಐಗೆ ಸುಪ್ರೀಂ ಕೋರ್ಟ್ ಛೀಮಾರಿ; ದೇಶ ಬಿಟ್ಟು ಹೋಗದಂತೆ ಅನಿಲ್ ಅಂಬಾನಿಗೆ ತಾಕೀತು 

ರಿಲಯನ್ಸ್ ಕಮ್ಯುನಿಕೇಷನ್ಸ್, ಅದರ ಸಮೂಹ ಕಂಪನಿಗಳು ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಒಳಗೊಂಡ ಬೃಹತ್ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಜಾರಿ...

ಅಸ್ಸಾಂ ಮುಖ್ಯಮಂತ್ರಿಯಿಂದ ‘100 ಪ್ರಕರಣಗಳ ಬೆದರಿಕೆ’: ‘ಇದು ಮಾನವ ಹಕ್ಕುಗಳ ರಕ್ಷಕರನ್ನು ಮೌನಗೊಳಿಸುವ ಪ್ರಯತ್ನ’ ಎಂದ ಹರ್ಷ್ ಮಂದರ್ 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾನವ ಹಕ್ಕುಗಳ ಹೋರಾಟಗಾರ ಹರ್ಷ್ ಮಂದರ್ ಅವರ ವಿರುದ್ಧ "ಕನಿಷ್ಠ 100 ಪ್ರಕರಣಗಳು" ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾನವ ಹಕ್ಕುಗಳ...

ಅದಾನಿ–ಲಿಯೊನಾರ್ಡೊ ಒಪ್ಪಂದ| ಹೊಸ ರೂಪದಲ್ಲಿ ಭಾರತಕ್ಕೆ ಮರಳಿದ ಕಪ್ಪುಪಟ್ಟಿಗೆ ಸೇರಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್!

ಅದಾನಿ ಡಿಫೆನ್ಸ್ ಆಂಡ್ ಏರೋಸ್ಪೇಸ್ ಮತ್ತು ಇಟಲಿಯ ಲಿಯೊನಾರ್ಡೊ ಕಂಪನಿಗಳು ಮಂಗಳವಾರ (ಫೆ.3) ಕಾರ್ಯತಂತ್ರದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಭಾರತದ ಹೆಲಿಕಾಪ್ಟರ್ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ...