Homeಮುಖಪುಟನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲೆಂದು ಜರ್ಮನ್ ನೆರವು ಪಡೆಯಲು ನಾವು ಸರ್ವಥಾ ಬಯಸುವುದಿಲ್ಲ. ಸರಿಯಾಗಿ ಸಂಘಟಿಸಿದಲ್ಲಿ ಜಗತ್ತಿನ ಅತ್ಯಂತ ಹಿಂಸಾತ್ಮಕವಾದ ಎಲ್ಲಾ ಶಕ್ತಿಗಳ ಎಂತಹ ಕೂಟಕ್ಕೂ ಸರಿಸಾಟಿಯಾಗಬಲ್ಲ ಶಕ್ತಿಯನ್ನು ನಾವು ಅಹಿಂಸೆಯಲ್ಲಿ ಕಂಡುಕೊಂಡಿದ್ದೇವೆ.

- Advertisement -
- Advertisement -

1940ರಲ್ಲಿ ಎರಡನೇ ಮಹಾಯುದ್ಧದ ವೇಳೆ ಜರ್ಮನಿಯ ನಾಯಕ ಅಡಾಲ್ಫ್ ಹಿಟ್ಲರ್ ಗೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪತ್ರವೊಂದನ್ನು ಬರೆದಿದ್ದರು. ಅದನ್ನು ಹಿರಿಯ ಹೋರಾಟಗಾರರಾದ ಸಿರಿಮನೆ ನಾಗರಾಜ್ ರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.

ಆತ್ಮೀಯ ಮಿತ್ರ,

ನಾನು ನಿಮ್ಮನ್ನು ಆತ್ಮೀಯ ಮಿತ್ರನೆಂದು ಸಂಬೋಧಿಸುತ್ತಿರುವುದು ಬರೀ ಔಪಚಾರಿಕವಲ್ಲ. ನಾನು ಯಾರನ್ನೂ ಶತ್ರುವೆಂದು ತಿಳಿಯುವುದಿಲ್ಲ.

ಯಾವುದೇ ಜನಾಂಗ, ಬಣ್ಣ, ಪಂಥಗಳ ಗೊಡವೆಯಿಲ್ಲದೆ ಮನುಷ್ಯ ಕುಲದೊಂದಿಗೆ ಸ್ನೇಹ ಬೆಳೆಸಿ, ಇಡೀ ಮಾನವತೆಯನ್ನು ಮಿತ್ರನನ್ನಾಗಿ ಮಾಡಿಕೊಳ್ಳುವುದು ಕಳೆದ ಮೂವತ್ತಮೂರು ವರ್ಷಗಳಿಂದಲೂ ಬದುಕಿನಲ್ಲಿ ನನ್ನ ವೃತ್ತಿಯಾಗಿದೆ. ಇಂತಹ ಸಾರ್ವತ್ರಿಕ ವಿಶ್ವಸ್ನೇಹಿ ತತ್ವದ ಪ್ರಭಾವದಡಿ ಬದುಕುತ್ತಿರುವ ಮಾನವತೆಯ ಗಣನೀಯ ಭಾಗದ ಜನರು ನಿಮ್ಮ ಕೃತ್ಯವನ್ನು ಯಾವ ರೀತಿ ಪರಿಭಾವಿಸುತ್ತಾರೆಂಬುದನ್ನು ತಿಳಿಯಲು ಸಮಯವೂ, ಅಂತಹ ಅಪೇಕ್ಷೆಯೂ ನಿಮ್ಮಲ್ಲಿದೆ ಎಂದು ನಂಬುತ್ತೇನೆ. ನಿಮ್ಮ ಪರಾಕ್ರಮದ ಬಗೆಗಾಗಲಿ, ಮಾತೃಭೂಮಿಯನ್ನು ಕುರಿತ ನಿಮ್ಮ ನಿಷ್ಠೆಯ ಬಗೆಗಾಗಲಿ ನಮಗೆ ಯಾವುದೇ ಸಂದೇಹವೂ ಇಲ್ಲ; ಅಥವಾ ನಿಮ್ಮ ವಿರೋಧಿಗಳು ನಿಮ್ಮನ್ನು ವರ್ಣಿಸುವ ರೀತಿಯಲ್ಲಿ ನೀವೊಬ್ಬ ರಾಕ್ಷಸನೆಂದೂ ನಾವು ನಂಬುವುದಿಲ್ಲ. ಆದರೆ ನಿಮ್ಮ ಅನೇಕ ಕೃತ್ಯಗಳು ರಾಕ್ಷಸ ಸದೃಶವಾಗಿವೆ, ಮಾನವ ಘನತೆಗೆ ಒಪ್ಪುವಂತಿಲ್ಲ ಎಂಬುದನ್ನು ನಿಮ್ಮ ಹಾಗೂ ನಿಮ್ಮ ಮಿತ್ರರು ಮತ್ತು ಅಭಿಮಾನಿಗಳ ಬರಹಗಳು ಮತ್ತು ಘೋಷಣೆಗಳು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ತೋರಿಸುತ್ತಿವೆ; ವಿಶೇಷವಾಗಿ ಸಾರ್ವತ್ರಿಕ ವಿಶ್ವಸ್ನೇಹದಲ್ಲಿ ನಂಬಿಕೆಯಿರುವ ನನ್ನಂತಹ ಮನುಷ್ಯರ ದೃಷ್ಟಿಯಲ್ಲಿ ಹಾಗೆ ತೋರುತ್ತಿದೆ. ಜೆಕೊಸ್ಲೊವೇಕಿಯ, ಪೋಲೆಂಡ್ ಹಾಗೂ ಡೆನ್ಮಾರ್ಕಿನ ವಿರುದ್ಧ ನೀವೆಸಗಿದ ಅಪಮಾನ, ಸುಲಿಗೆ ಮತ್ತು ದಬ್ಬಾಳಿಕೆಗಳು ಇಂತಹ ಕೃತ್ಯಗಳಾಗಿವೆ. ಬದುಕಿನ ಬಗೆಗಿನ ನಿಮ್ಮ ದೃಷ್ಟಿಕೋನವು ಇಂತಹ ಸೂರೆಯನ್ನು ಸದ್ಗುಣವೆಂದು ಪರಿಗಣಿಸುತ್ತದೆಂಬುದು ನನಗೆ ಗೊತ್ತಿದೆ. ಆದರೆ ಅಂಥವು ಮಾನವತೆಗೆ ಕಳಂಕಪ್ರಾಯವಾದ ಕೃತ್ಯಗಳೆಂದು ಪರಿಭಾವಿಸುವುದನ್ನು ನಮಗೆ ಚಿಕ್ಕಂದಿನಿಂದಲೂ ಕಲಿಸಲಾಗಿದೆ. ಆದಕಾರಣ ನಾವು ಬಹುಶಃ ನಿಮ್ಮ ಶಸ್ತ್ರಾಸ್ತ್ರ, ತೋಳ್ಬಲಗಳಿಗೆ ಯಶಸ್ಸನ್ನು ಕೋರಲಾರೆವು. ಆದರೆ ನಮ್ಮದು ಒಂದು ಅನನ್ಯವಾದ ನಿಲುವು. ನಾವು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನೂ ನಾಜಿಸಂನಷ್ಟೇ ತೀವ್ರವಾಗಿ ವಿರೋಧಿಸುತ್ತೇವೆ.

ಇವೆರಡರ ನಡುವೆ ವ್ಯತ್ಯಾಸ ಇರುವುದಾದರೆ ಅದು ಪ್ರಮಾಣದಲ್ಲಿ ಮಾತ್ರ. ಬ್ರಿಟಿಷ್ ಆಳ್ವಿಕೆಯು ಯಾರೂ ಸಮರ್ಥಿಸಲಾಗದ ವಿಧಾನಗಳಿಂದ ಮಾನವ ಕುಲದ ಐದರಲ್ಲೊಂದು ಭಾಗವನ್ನು ತನ್ನ ಅಡಿಯಾಳಾಗಿ ಮಾಡಿಕೊಂಡಿದೆ. ಆದರೆ ಅದಕ್ಕೆ ನಮ್ಮ ವಿರೋಧವು ಬ್ರಿಟಿಷ್ ಜನತೆಗೆ ಹಾನಿ ಮಾಡುವುದಲ್ಲ. ನಾವು ಅವರನ್ನು ಪರಿವರ್ತಿಸಲು ಬಯಸುತ್ತೇವೆ, ಯುದ್ಧರಂಗದಲ್ಲಿ ಸೋಲಿಸುವುದಲ್ಲ. ನಮ್ಮದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಿಃಶಸ್ತ್ರವಾದ ಬಂಡಾಯ. ನಾವು ಅವರನ್ನು ಪರಿವರ್ತಿಸುತ್ತೇವೋ ಇಲ್ಲವೋ; ಆದರೆ ಅವರ ಆಳ್ವಿಕೆಯನ್ನು ಅಹಿಂಸಾತ್ಮಕ ಅಸಹಕಾರದ ಮೂಲಕ ಅಸಾಧ್ಯಗೊಳಿಸಲಂತೂ ದೃಢ ನಿರ್ಧಾರ ಮಾಡಿದ್ದೇವೆ. ನಮ್ಮ ಈ ವಿಧಾನವು ಸ್ವಭಾವತಃ ಸಮರ್ಥನೀಯವಾಗಿ ಕಾಣುವುದಿಲ್ಲ. ಬಲಿಪಶುವು ಒಪ್ಪಿಗೆಯಿಂದಲೋ ಅಥವಾ ಬಲವಂತದಿಂದಲೋ ಒಂದು ಮಟ್ಟಿಗಾದರೂ ಸಹಕರಿಸದಿದ್ದಲ್ಲಿ ಯಾವನೇ ಲೂಟಿಕೋರನು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ತಿಳುವಳಿಕೆ ನಮ್ಮ ಈ ವಿಧಾನಕ್ಕೆ ಆಧಾರ. ನಮ್ಮನ್ನಾಳುತ್ತಿರುವವರು ನಮ್ಮ ದೇಶವನ್ನೂ ನಮ್ಮ ದೇಹಗಳನ್ನೂ ಆಕ್ರಮಿಸಿಕೊಳ್ಳಬಹುದು, ಆದರೆ ನಮ್ಮ ಆತ್ಮಗಳನ್ನಲ್ಲ. ನಮ್ಮ ದೇಹ-ದೇಶಗಳನ್ನು ಅವರು ಪ್ರತಿಯೊಬ್ಬ ಭಾರತೀಯ ಪುರುಷ-ಮಹಿಳೆ-ಮಕ್ಕಳು ಎಲ್ಲರನ್ನೂ ನಾಶ ಮಾಡುವುದರಿಂದ ಮಾತ್ರವೇ ವಶಪಡಿಸಿಕೊಳ್ಳಲು ಸಾಧ್ಯ.

ಇದೇ ಪ್ರಮಾಣದ ಶೌರ್ಯ ಎಲ್ಲರಲ್ಲೂ ಕಾಣದಿರಬಹುದು, ಒಂದು ಮಟ್ಟಿನ ಭಯವು ಬಂಡಾಯವನ್ನು ಅಷ್ಟರಮಟ್ಟಿಗೆ ತಗ್ಗಿಸಬಹುದು ಎನ್ನುವುದು ನಿಜ. ಆದರೆ ಇದು ಮುಖ್ಯವಲ್ಲ. ಯಾಕೆಂದರೆ, ಲೂಟಿಕೋರರ ವಿರುದ್ಧ ಯಾವುದೇ ದ್ವೇಷ ಭಾವನೆಯಿಲ್ಲದ, ಆದರೆ ಅವರೆದುರು ಮಂಡಿಯೂರುವ ಬದಲು ತಮ್ಮ ಪ್ರಾಣವನ್ನೇ ಬಲಿಗೊಡಲು ಸಿದ್ಧರಿರುವ ಭಾರತೀಯ ಪುರುಷರು-ಮಹಿಳೆಯರು ಯೋಗ್ಯ ಸಂಖ್ಯೆಯಲ್ಲಿ ದೊರೆತಲ್ಲಿ ಹಿಂಸೆ, ದಬ್ಬಾಳಿಕೆಗಳಿಂದ ಸ್ವತಂತ್ರಗೊಳ್ಳುವ ಹಾದಿಯನ್ನು ಅವರು ತೋರಿಸಿಕೊಡಬಲ್ಲರು. ಭಾರತದಲ್ಲಿ ಇಂತಹ ಪುರುಷರು-ಮಹಿಳೆಯರು ನೀವು ನಿರೀಕ್ಷಿಸಿರದಷ್ಟು ದೊಡ್ಡ ಸಂಖ್ಯೆಯಲ್ಲಿ ದೊರೆಯುತ್ತಾರೆಂಬುದನ್ನು ನೀವು ನಂಬಬೇಕು. ಕಳೆದ ಇಪ್ಪತ್ತು ವರ್ಷಗಳಿಂದ ಅವರು ಅಂತಹ ತರಬೇತಿಯನ್ನು ಪಡೆಯುತ್ತಿದ್ದಾರೆ. ನಾವು ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಲು ಕಳೆದ ಅರ್ಧ ಶತಮಾನದಿಂದಲೂ ಪ್ರಯತ್ನಿಸುತ್ತಿದ್ದೇವೆ. ಸ್ವಾತಂತ್ರ್ಯ ಚಳವಳಿ ಇಂದು ಹಿಂದೆಂದೂ ಇರದಿದ್ದಷ್ಟು ಪ್ರಬಲವಾಗಿದೆ. ಅತ್ಯಂತ ಬಲಿಷ್ಠ ರಾಜಕೀಯ ಸಂಘಟನೆಯಾದ ಕಾಂಗ್ರೆಸ್ಸು ಈ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಅಹಿಂಸಾತ್ಮಕ ಪ್ರಯತ್ನದಿಂದಲೇ ನಾವು ಗಣನೀಯ ಪ್ರಮಾಣದ ಯಶಸ್ಸನ್ನು ಸಾಧಿಸಿದ್ದೇವೆ. ಜಗತ್ತಿನಲ್ಲೇ ಅತ್ಯಂತ ಸಂಘಟಿತವಾದ ಹಿಂಸೆಯನ್ನು ಪ್ರತಿನಿಧಿಸುತ್ತಿರುವ ಬ್ರಿಟಿಷ್ ಅಧಿಕಾರದ ವಿರುದ್ಧ ಹೋರಾಡಲು ಸರಿಯಾದ ವಿಧಾನಕ್ಕಾಗಿ ನಾವು ತಡಕಾಡುತ್ತಿದ್ದೆವು. ನೀವು ಅದಕ್ಕೆ ಸವಾಲು ಹಾಕಿದ್ದೀರಿ. ಜರ್ಮನ್ ಅಥವಾ ಬ್ರಿಟಿಷ್ – ಇವೆರಡರಲ್ಲಿ ಯಾವುದು ಹೆಚ್ಚು ಸುಸಂಘಟಿತವಾದ ಹಿಂಸೆ ಎಂಬುದನ್ನು ಕಾದು ನೋಡಬೇಕಿದೆ. ನಮ್ಮ ಪಾಲಿಗೆ ಹಾಗೂ ಜಗತ್ತಿನ ಇತರೆಲ್ಲ ಯೂರೋಪೇತರ ಜನಾಂಗಗಳ ಪಾಲಿಗೆ ಬ್ರಿಟಿಷ್ ದಬ್ಬಾಳಿಕೆಯೆಂದರೆ ಏನೆಂಬುದು ಅರಿವಿದೆ.

photo courtesy: Not Even Past

ಆದರೆ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲೆಂದು ಜರ್ಮನ್ ನೆರವು ಪಡೆಯಲು ನಾವು ಸರ್ವಥಾ ಬಯಸುವುದಿಲ್ಲ. ಸರಿಯಾಗಿ ಸಂಘಟಿಸಿದಲ್ಲಿ ಜಗತ್ತಿನ ಅತ್ಯಂತ ಹಿಂಸಾತ್ಮಕವಾದ ಎಲ್ಲಾ ಶಕ್ತಿಗಳ ಎಂತಹ ಕೂಟಕ್ಕೂ ಸರಿಸಾಟಿಯಾಗಬಲ್ಲ ಶಕ್ತಿಯನ್ನು ನಾವು ಅಹಿಂಸೆಯಲ್ಲಿ ಕಂಡುಕೊಂಡಿದ್ದೇವೆ. ನಾನು ಮೊದಲೇ ಹೇಳಿದಂತೆ, ಅಹಿಂಸಾ ತಂತ್ರದಲ್ಲಿ ಸೋಲು ಎಂಬುದಿಲ್ಲ. ಇರುವುದೆಲ್ಲ – ಕೊಲ್ಲದೆ ಅಥವಾ ನೋಯಿಸದೆಯೇ “ಮಾಡು ಇಲ್ಲವೆ ಮಡಿ” ಅಷ್ಟೇ. ಅದಕ್ಕೆ ಯಾವುದೇ ಖರ್ಚಿಲ್ಲ; ಅಥವಾ ಯಾವ ವಿನಾಶದ ವಿಜ್ಞಾನವನ್ನು ನೀವು ಅತ್ಯುಚ್ಚ ಮಟ್ಟಕ್ಕೆ ಬೆಳೆಸಿದ್ದೀರೋ, ಅದರ ನೆರವಿಲ್ಲದೆಯೇ ಇದನ್ನು ವಾಸ್ತವದಲ್ಲಿ ಬಳಕೆಗೆ ತರಲು ಸಾಧ್ಯ. ಇದು ಯಾರದ್ದೇ ಏಕಸ್ವಾಮ್ಯವಲ್ಲ ಎನ್ನುವುದು ನಿಮ್ಮ ಅರಿವಿಗೆ ಬಂದಿಲ್ಲ ಎನ್ನುವುದೇ ನನಗೊಂದು ಆಶ್ಚರ್ಯವಾಗಿದೆ. ಬ್ರಿಟಿಷರಲ್ಲದಿದ್ದರೆ ಮತ್ಯಾವುದೋ ಒಂದು ಶಕ್ತಿ ನಿಮ್ಮ ವಿಧಾನವನ್ನು ಇನ್ನಷ್ಟು ಸುಧಾರಿಸಿಕೊಂಡು ನಿಮ್ಮದೇ ಹತಾರದಿಂದ ನಿಮ್ಮನ್ನು ಖಂಡಿತಾ ಸೋಲಿಸುತ್ತದೆ. ಮುಂದೆ ನಿಮ್ಮ ಜನತೆ ಅಭಿಮಾನ ಪಡುವಂತಹ ಯಾವುದೇ ಉದಾತ್ತ ಪರಂಪರೆಯನ್ನೂ ನೀವು ಹುಟ್ಟುಹಾಕುತ್ತಿಲ್ಲ. ಕ್ರೂರ ಕೃತ್ಯಗಳನ್ನು ಎಷ್ಟೇ ಕೌಶಲ್ಯಪೂರ್ಣವಾಗಿ ಯೋಜಿಸಿರಲಿ, ಅವುಗಳ ವೃತ್ತಾಂತಗಳನ್ನು ವಿವರಿಸಲು ಅವರಿಗೆಂದೂ ಹೆಮ್ಮೆ ಎನ್ನಿಸುವುದು ಸಾಧ್ಯವಿಲ್ಲ.

ಆದ್ದರಿಂದ ಯುದ್ಧವನ್ನು ನಿಲ್ಲಿಸಬೇಕೆಂದು ನಾನು ಮಾನವತೆಯ ಪರವಾಗಿ ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ನಿಮಗೂ ಬ್ರಿಟಿನ್ನಿಗೂ ನಡುವಿನ ಎಲ್ಲಾ ವಿವಾದಗಳನ್ನು ನಿಮಗಿಬ್ಬರಿಗೂ ಒಪ್ಪಿಗೆಯಾಗುವ ಅಂತರರಾಷ್ಟ್ರೀಯ ನ್ಯಾಯಮಂಡಳಿಯೊಂದಕ್ಕೆ ವಹಿಸಿದಲ್ಲಿ ನಿಮಗೆ ಯಾವುದೇ ನಷ್ಟವೂ ಇಲ್ಲ. ಒಂದು ವೇಳೆ ನೀವು ಯುದ್ಧದಲ್ಲಿ ಗೆದ್ದರೂ ಸಹ ನಿಮ್ಮದು ಸರಿಯೆಂದೇನೂ ಅದರಿಂದ ಸಾಬೀತಾಗುವುದಿಲ್ಲ. ವಿನಾಶದ ನಿಮ್ಮ ಶಕ್ತಿ ಅವರದ್ದಕ್ಕಿಂತಲೂ ಮಿಗಿಲಾಗಿತ್ತು ಎಂಬುದನ್ನಷ್ಟೇ ಅದು ಸಾಬೀತು ಮಾಡುತ್ತದೆ. ಅದೇ ವೇಳೆ, ಪಕ್ಷಪಾತರಹಿತ ನ್ಯಾಯಮಂಡಳಿಯೊಂದು ನೀಡುವು ತೀರ್ಪು – ಮನುಷ್ಯರಿಗೆ ಸಾಧ್ಯವಿರುವ ಮಟ್ಟಿಗೂ – ಯಾರದ್ದು ಸರಿಯಿತ್ತೆಂಬುದನ್ನು ತೋರಿಸಿಕೊಡಬಲ್ಲದು. ಕೆಲವೇ ಸಮಯದ ಹಿಂದೆ ನಾನು ನನ್ನ ಅಹಿಂಸಾತ್ಮಕ ಪ್ರತಿರೋಧದ ವಿಧಾನವನ್ನು ಅನುಸರಿಸುವಂತೆ ಪ್ರತಿಯೊಬ್ಬ ಬ್ರಿಟನ್ನರಿಗೂ ಮನವಿ ಮಾಡಿರುವುದು ನಿಮಗೆ ಗೊತ್ತಿದೆ. ನಾನು ಒಬ್ಬ ಬಂಡಾಯಗಾರನಾದರೂ ಅವರ ಮಿತ್ರನೆಂಬುದು ಬ್ರಿಟನ್ನರಿಗೆ ಗೊತ್ತಿರುವುದರಿಂದ ನನಗೆ ಹಾಗೆ ಮನವಿ ಮಾಡಲು ಸಾಧ್ಯವಾಯಿತು. ಆದರೆ ನಿಮಗೂ ನಿಮ್ಮ ಜನತೆಗೂ ನಾನೊಬ್ಬ ಅಪರಿಚಿತ. ಪ್ರತಿಯೊಬ್ಬ ಬ್ರಿಟನ್ನರಿಗೆ ಮಾಡಿದಂಥ ಮನವಿಯನ್ನು ನಿಮಗೂ ಮಾಡಲು ನನಗೆ ಧೈರ್ಯ ಸಾಲದು. ಅದು ಬ್ರಿಟಿಷರಿಗೆ ಎಷ್ಟು ಪ್ರಬಲವಾಗಿ ಅನ್ವಯಿಸುತ್ತದೋ ಅಷ್ಟೇ ಪ್ರಮಾಣದಲ್ಲಿ ನಿಮಗೆ ಅನ್ವಯಿಸುವುದಿಲ್ಲ ಎಂದು ಇದರ ಅರ್ಥವಲ್ಲ. ಬದಲಿಗೆ ನಿಮ್ಮ ಮುಂದಿಡುತ್ತಿರುವ ನನ್ನ ಈ ಪ್ರಸ್ತಾಪವು ಅದಕ್ಕಿಂತಲೂ ಹೆಚ್ಚು ಸರಳವಾಗಿದೆ. ಯಾಕೆಂದರೆ ಇದು ಹೆಚ್ಚು ವಾಸ್ತವಿಕವೂ ಪರಿಚಿತವೂ ಆಗಿದೆ. ಯೂರೋಪಿನ ಜನತೆಯ ಹೃದಯಗಳು ಶಾಂತಿಗಾಗಿ ಹಾತೊರೆಯುತ್ತಿರುವ ಇಂದಿನ ದಿನಗಳಲ್ಲಿ ನಾವು ನಮ್ಮ ಶಾಂತಿಯುತ ಹೋರಾಟವನ್ನು ಕೂಡ ಮುಂದೂಡಿದ್ದೇವೆ. ಕೋಟ್ಯಾಂತರ ಮೂಕ ಜನರ ಕೂಗು ಕೇಳಿಸಿಕೊಳ್ಳುವುದು ನನ್ನ ಕಿವಿಗಳಿಗೆ ಅಭ್ಯಾಸವಾಗಿರುವುದರಿಂದ, ಶಾಂತಿಗಾಗಿ ಕೋಟ್ಯಾಂತರ ಯೂರೋಪಿಯನ್ನರು ಇಡುತ್ತಿರುವ ಮೂಕ ಮೊರೆ ನನಗೆ ಕೇಳಿಸುತ್ತಿದೆ. ಈ ಕಾಲಘಟ್ಟವು ವ್ಯಕ್ತಿಗತವಾಗಿ ನಿಮಗೆ ಏನೂ ಅಲ್ಲದಿರಬಹುದು, ಆದರೆ ಅದು ಇಂತಹ ಯೂರೋಪಿಯನ್ನರ ಪಾಲಿಗೆ ಬಹಳ ಗುರುತರವಾಗಿದೆ. ಇಂಥ ಹೊತ್ತಿನಲ್ಲಿ, ಶಾಂತಿಗಾಗಿ ಪ್ರಯತ್ನ ಮಾಡುವಂತೆ ನಿಮ್ಮನ್ನು ಕೋರುವುದು ಅತಿಯಾಗುತ್ತದೆಯೆ?

ನಾನು ನಿಮಗೂ ಮಾನ್ಯ ಮುಸೋಲಿನಿಯವರಿಗೂ ಒಂದು ಜಂಟಿ ಮನವಿಯನ್ನು ಮಾಡಬೇಕೆಂದು ಬಯಸಿದ್ದೆ. ನಾನು ದುಂಡು ಮೇಜಿನ ಪರಿಷತ್ತಿನ ಒಬ್ಬ ಪ್ರತಿನಿಧಿಯಾಗಿ ಇಂಗ್ಲೆಂಡಿಗೆ ಹೋದಾಗ ರೋಮ್‍ನಲ್ಲಿ ಅವರನ್ನು ಭೇಟಿಯಾಗುವ ಸದವಕಾಶವೂ ದೊರೆತಿತ್ತು. ಈಗ ಈ ಮನವಿಯನ್ನೇ ಅವರು ಅಗತ್ಯ ಮಾರ್ಪಾಡಿನೊಂದಿಗೆ ತನ್ನನ್ನೂ ಕುರಿತಿದ್ದೆಂದು ಪರಿಗಣಿಸುತ್ತಾರೆಂದು ಆಶಿಸುತ್ತೇನೆ.

ನಿಮ್ಮ ಪ್ರಾಮಾಣಿಕ ಮಿತ್ರ,

ಎಂ. ಕೆ. ಗಾಂಧಿ.

(ಈ ಪತ್ರವನ್ನು ಬ್ರಿಟಿಷ್ ಸರಕಾರ ತಡೆಹಿಡಿದಿತ್ತು)

ವಾರ್ಧಾ, ಡಿಸೆಂಬರ್ 24, 1940.


ಇದನ್ನು ಓದಿ: ಪ್ರಧಾನಿಗಳನ್ನು ನಾನು ನಂಬುತ್ತೇನೆ, ಅವರು ಹೇಳಿದ್ದೆಲ್ಲವನ್ನೂ ನಂಬುತ್ತೇನೆ – ಎಚ್ ಎಸ್ ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...