Homeಮುಖಪುಟನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲೆಂದು ಜರ್ಮನ್ ನೆರವು ಪಡೆಯಲು ನಾವು ಸರ್ವಥಾ ಬಯಸುವುದಿಲ್ಲ. ಸರಿಯಾಗಿ ಸಂಘಟಿಸಿದಲ್ಲಿ ಜಗತ್ತಿನ ಅತ್ಯಂತ ಹಿಂಸಾತ್ಮಕವಾದ ಎಲ್ಲಾ ಶಕ್ತಿಗಳ ಎಂತಹ ಕೂಟಕ್ಕೂ ಸರಿಸಾಟಿಯಾಗಬಲ್ಲ ಶಕ್ತಿಯನ್ನು ನಾವು ಅಹಿಂಸೆಯಲ್ಲಿ ಕಂಡುಕೊಂಡಿದ್ದೇವೆ.

- Advertisement -
- Advertisement -

1940ರಲ್ಲಿ ಎರಡನೇ ಮಹಾಯುದ್ಧದ ವೇಳೆ ಜರ್ಮನಿಯ ನಾಯಕ ಅಡಾಲ್ಫ್ ಹಿಟ್ಲರ್ ಗೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪತ್ರವೊಂದನ್ನು ಬರೆದಿದ್ದರು. ಅದನ್ನು ಹಿರಿಯ ಹೋರಾಟಗಾರರಾದ ಸಿರಿಮನೆ ನಾಗರಾಜ್ ರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.

ಆತ್ಮೀಯ ಮಿತ್ರ,

ನಾನು ನಿಮ್ಮನ್ನು ಆತ್ಮೀಯ ಮಿತ್ರನೆಂದು ಸಂಬೋಧಿಸುತ್ತಿರುವುದು ಬರೀ ಔಪಚಾರಿಕವಲ್ಲ. ನಾನು ಯಾರನ್ನೂ ಶತ್ರುವೆಂದು ತಿಳಿಯುವುದಿಲ್ಲ.

ಯಾವುದೇ ಜನಾಂಗ, ಬಣ್ಣ, ಪಂಥಗಳ ಗೊಡವೆಯಿಲ್ಲದೆ ಮನುಷ್ಯ ಕುಲದೊಂದಿಗೆ ಸ್ನೇಹ ಬೆಳೆಸಿ, ಇಡೀ ಮಾನವತೆಯನ್ನು ಮಿತ್ರನನ್ನಾಗಿ ಮಾಡಿಕೊಳ್ಳುವುದು ಕಳೆದ ಮೂವತ್ತಮೂರು ವರ್ಷಗಳಿಂದಲೂ ಬದುಕಿನಲ್ಲಿ ನನ್ನ ವೃತ್ತಿಯಾಗಿದೆ. ಇಂತಹ ಸಾರ್ವತ್ರಿಕ ವಿಶ್ವಸ್ನೇಹಿ ತತ್ವದ ಪ್ರಭಾವದಡಿ ಬದುಕುತ್ತಿರುವ ಮಾನವತೆಯ ಗಣನೀಯ ಭಾಗದ ಜನರು ನಿಮ್ಮ ಕೃತ್ಯವನ್ನು ಯಾವ ರೀತಿ ಪರಿಭಾವಿಸುತ್ತಾರೆಂಬುದನ್ನು ತಿಳಿಯಲು ಸಮಯವೂ, ಅಂತಹ ಅಪೇಕ್ಷೆಯೂ ನಿಮ್ಮಲ್ಲಿದೆ ಎಂದು ನಂಬುತ್ತೇನೆ. ನಿಮ್ಮ ಪರಾಕ್ರಮದ ಬಗೆಗಾಗಲಿ, ಮಾತೃಭೂಮಿಯನ್ನು ಕುರಿತ ನಿಮ್ಮ ನಿಷ್ಠೆಯ ಬಗೆಗಾಗಲಿ ನಮಗೆ ಯಾವುದೇ ಸಂದೇಹವೂ ಇಲ್ಲ; ಅಥವಾ ನಿಮ್ಮ ವಿರೋಧಿಗಳು ನಿಮ್ಮನ್ನು ವರ್ಣಿಸುವ ರೀತಿಯಲ್ಲಿ ನೀವೊಬ್ಬ ರಾಕ್ಷಸನೆಂದೂ ನಾವು ನಂಬುವುದಿಲ್ಲ. ಆದರೆ ನಿಮ್ಮ ಅನೇಕ ಕೃತ್ಯಗಳು ರಾಕ್ಷಸ ಸದೃಶವಾಗಿವೆ, ಮಾನವ ಘನತೆಗೆ ಒಪ್ಪುವಂತಿಲ್ಲ ಎಂಬುದನ್ನು ನಿಮ್ಮ ಹಾಗೂ ನಿಮ್ಮ ಮಿತ್ರರು ಮತ್ತು ಅಭಿಮಾನಿಗಳ ಬರಹಗಳು ಮತ್ತು ಘೋಷಣೆಗಳು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ತೋರಿಸುತ್ತಿವೆ; ವಿಶೇಷವಾಗಿ ಸಾರ್ವತ್ರಿಕ ವಿಶ್ವಸ್ನೇಹದಲ್ಲಿ ನಂಬಿಕೆಯಿರುವ ನನ್ನಂತಹ ಮನುಷ್ಯರ ದೃಷ್ಟಿಯಲ್ಲಿ ಹಾಗೆ ತೋರುತ್ತಿದೆ. ಜೆಕೊಸ್ಲೊವೇಕಿಯ, ಪೋಲೆಂಡ್ ಹಾಗೂ ಡೆನ್ಮಾರ್ಕಿನ ವಿರುದ್ಧ ನೀವೆಸಗಿದ ಅಪಮಾನ, ಸುಲಿಗೆ ಮತ್ತು ದಬ್ಬಾಳಿಕೆಗಳು ಇಂತಹ ಕೃತ್ಯಗಳಾಗಿವೆ. ಬದುಕಿನ ಬಗೆಗಿನ ನಿಮ್ಮ ದೃಷ್ಟಿಕೋನವು ಇಂತಹ ಸೂರೆಯನ್ನು ಸದ್ಗುಣವೆಂದು ಪರಿಗಣಿಸುತ್ತದೆಂಬುದು ನನಗೆ ಗೊತ್ತಿದೆ. ಆದರೆ ಅಂಥವು ಮಾನವತೆಗೆ ಕಳಂಕಪ್ರಾಯವಾದ ಕೃತ್ಯಗಳೆಂದು ಪರಿಭಾವಿಸುವುದನ್ನು ನಮಗೆ ಚಿಕ್ಕಂದಿನಿಂದಲೂ ಕಲಿಸಲಾಗಿದೆ. ಆದಕಾರಣ ನಾವು ಬಹುಶಃ ನಿಮ್ಮ ಶಸ್ತ್ರಾಸ್ತ್ರ, ತೋಳ್ಬಲಗಳಿಗೆ ಯಶಸ್ಸನ್ನು ಕೋರಲಾರೆವು. ಆದರೆ ನಮ್ಮದು ಒಂದು ಅನನ್ಯವಾದ ನಿಲುವು. ನಾವು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನೂ ನಾಜಿಸಂನಷ್ಟೇ ತೀವ್ರವಾಗಿ ವಿರೋಧಿಸುತ್ತೇವೆ.

ಇವೆರಡರ ನಡುವೆ ವ್ಯತ್ಯಾಸ ಇರುವುದಾದರೆ ಅದು ಪ್ರಮಾಣದಲ್ಲಿ ಮಾತ್ರ. ಬ್ರಿಟಿಷ್ ಆಳ್ವಿಕೆಯು ಯಾರೂ ಸಮರ್ಥಿಸಲಾಗದ ವಿಧಾನಗಳಿಂದ ಮಾನವ ಕುಲದ ಐದರಲ್ಲೊಂದು ಭಾಗವನ್ನು ತನ್ನ ಅಡಿಯಾಳಾಗಿ ಮಾಡಿಕೊಂಡಿದೆ. ಆದರೆ ಅದಕ್ಕೆ ನಮ್ಮ ವಿರೋಧವು ಬ್ರಿಟಿಷ್ ಜನತೆಗೆ ಹಾನಿ ಮಾಡುವುದಲ್ಲ. ನಾವು ಅವರನ್ನು ಪರಿವರ್ತಿಸಲು ಬಯಸುತ್ತೇವೆ, ಯುದ್ಧರಂಗದಲ್ಲಿ ಸೋಲಿಸುವುದಲ್ಲ. ನಮ್ಮದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಿಃಶಸ್ತ್ರವಾದ ಬಂಡಾಯ. ನಾವು ಅವರನ್ನು ಪರಿವರ್ತಿಸುತ್ತೇವೋ ಇಲ್ಲವೋ; ಆದರೆ ಅವರ ಆಳ್ವಿಕೆಯನ್ನು ಅಹಿಂಸಾತ್ಮಕ ಅಸಹಕಾರದ ಮೂಲಕ ಅಸಾಧ್ಯಗೊಳಿಸಲಂತೂ ದೃಢ ನಿರ್ಧಾರ ಮಾಡಿದ್ದೇವೆ. ನಮ್ಮ ಈ ವಿಧಾನವು ಸ್ವಭಾವತಃ ಸಮರ್ಥನೀಯವಾಗಿ ಕಾಣುವುದಿಲ್ಲ. ಬಲಿಪಶುವು ಒಪ್ಪಿಗೆಯಿಂದಲೋ ಅಥವಾ ಬಲವಂತದಿಂದಲೋ ಒಂದು ಮಟ್ಟಿಗಾದರೂ ಸಹಕರಿಸದಿದ್ದಲ್ಲಿ ಯಾವನೇ ಲೂಟಿಕೋರನು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ತಿಳುವಳಿಕೆ ನಮ್ಮ ಈ ವಿಧಾನಕ್ಕೆ ಆಧಾರ. ನಮ್ಮನ್ನಾಳುತ್ತಿರುವವರು ನಮ್ಮ ದೇಶವನ್ನೂ ನಮ್ಮ ದೇಹಗಳನ್ನೂ ಆಕ್ರಮಿಸಿಕೊಳ್ಳಬಹುದು, ಆದರೆ ನಮ್ಮ ಆತ್ಮಗಳನ್ನಲ್ಲ. ನಮ್ಮ ದೇಹ-ದೇಶಗಳನ್ನು ಅವರು ಪ್ರತಿಯೊಬ್ಬ ಭಾರತೀಯ ಪುರುಷ-ಮಹಿಳೆ-ಮಕ್ಕಳು ಎಲ್ಲರನ್ನೂ ನಾಶ ಮಾಡುವುದರಿಂದ ಮಾತ್ರವೇ ವಶಪಡಿಸಿಕೊಳ್ಳಲು ಸಾಧ್ಯ.

ಇದೇ ಪ್ರಮಾಣದ ಶೌರ್ಯ ಎಲ್ಲರಲ್ಲೂ ಕಾಣದಿರಬಹುದು, ಒಂದು ಮಟ್ಟಿನ ಭಯವು ಬಂಡಾಯವನ್ನು ಅಷ್ಟರಮಟ್ಟಿಗೆ ತಗ್ಗಿಸಬಹುದು ಎನ್ನುವುದು ನಿಜ. ಆದರೆ ಇದು ಮುಖ್ಯವಲ್ಲ. ಯಾಕೆಂದರೆ, ಲೂಟಿಕೋರರ ವಿರುದ್ಧ ಯಾವುದೇ ದ್ವೇಷ ಭಾವನೆಯಿಲ್ಲದ, ಆದರೆ ಅವರೆದುರು ಮಂಡಿಯೂರುವ ಬದಲು ತಮ್ಮ ಪ್ರಾಣವನ್ನೇ ಬಲಿಗೊಡಲು ಸಿದ್ಧರಿರುವ ಭಾರತೀಯ ಪುರುಷರು-ಮಹಿಳೆಯರು ಯೋಗ್ಯ ಸಂಖ್ಯೆಯಲ್ಲಿ ದೊರೆತಲ್ಲಿ ಹಿಂಸೆ, ದಬ್ಬಾಳಿಕೆಗಳಿಂದ ಸ್ವತಂತ್ರಗೊಳ್ಳುವ ಹಾದಿಯನ್ನು ಅವರು ತೋರಿಸಿಕೊಡಬಲ್ಲರು. ಭಾರತದಲ್ಲಿ ಇಂತಹ ಪುರುಷರು-ಮಹಿಳೆಯರು ನೀವು ನಿರೀಕ್ಷಿಸಿರದಷ್ಟು ದೊಡ್ಡ ಸಂಖ್ಯೆಯಲ್ಲಿ ದೊರೆಯುತ್ತಾರೆಂಬುದನ್ನು ನೀವು ನಂಬಬೇಕು. ಕಳೆದ ಇಪ್ಪತ್ತು ವರ್ಷಗಳಿಂದ ಅವರು ಅಂತಹ ತರಬೇತಿಯನ್ನು ಪಡೆಯುತ್ತಿದ್ದಾರೆ. ನಾವು ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಲು ಕಳೆದ ಅರ್ಧ ಶತಮಾನದಿಂದಲೂ ಪ್ರಯತ್ನಿಸುತ್ತಿದ್ದೇವೆ. ಸ್ವಾತಂತ್ರ್ಯ ಚಳವಳಿ ಇಂದು ಹಿಂದೆಂದೂ ಇರದಿದ್ದಷ್ಟು ಪ್ರಬಲವಾಗಿದೆ. ಅತ್ಯಂತ ಬಲಿಷ್ಠ ರಾಜಕೀಯ ಸಂಘಟನೆಯಾದ ಕಾಂಗ್ರೆಸ್ಸು ಈ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಅಹಿಂಸಾತ್ಮಕ ಪ್ರಯತ್ನದಿಂದಲೇ ನಾವು ಗಣನೀಯ ಪ್ರಮಾಣದ ಯಶಸ್ಸನ್ನು ಸಾಧಿಸಿದ್ದೇವೆ. ಜಗತ್ತಿನಲ್ಲೇ ಅತ್ಯಂತ ಸಂಘಟಿತವಾದ ಹಿಂಸೆಯನ್ನು ಪ್ರತಿನಿಧಿಸುತ್ತಿರುವ ಬ್ರಿಟಿಷ್ ಅಧಿಕಾರದ ವಿರುದ್ಧ ಹೋರಾಡಲು ಸರಿಯಾದ ವಿಧಾನಕ್ಕಾಗಿ ನಾವು ತಡಕಾಡುತ್ತಿದ್ದೆವು. ನೀವು ಅದಕ್ಕೆ ಸವಾಲು ಹಾಕಿದ್ದೀರಿ. ಜರ್ಮನ್ ಅಥವಾ ಬ್ರಿಟಿಷ್ – ಇವೆರಡರಲ್ಲಿ ಯಾವುದು ಹೆಚ್ಚು ಸುಸಂಘಟಿತವಾದ ಹಿಂಸೆ ಎಂಬುದನ್ನು ಕಾದು ನೋಡಬೇಕಿದೆ. ನಮ್ಮ ಪಾಲಿಗೆ ಹಾಗೂ ಜಗತ್ತಿನ ಇತರೆಲ್ಲ ಯೂರೋಪೇತರ ಜನಾಂಗಗಳ ಪಾಲಿಗೆ ಬ್ರಿಟಿಷ್ ದಬ್ಬಾಳಿಕೆಯೆಂದರೆ ಏನೆಂಬುದು ಅರಿವಿದೆ.

photo courtesy: Not Even Past

ಆದರೆ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲೆಂದು ಜರ್ಮನ್ ನೆರವು ಪಡೆಯಲು ನಾವು ಸರ್ವಥಾ ಬಯಸುವುದಿಲ್ಲ. ಸರಿಯಾಗಿ ಸಂಘಟಿಸಿದಲ್ಲಿ ಜಗತ್ತಿನ ಅತ್ಯಂತ ಹಿಂಸಾತ್ಮಕವಾದ ಎಲ್ಲಾ ಶಕ್ತಿಗಳ ಎಂತಹ ಕೂಟಕ್ಕೂ ಸರಿಸಾಟಿಯಾಗಬಲ್ಲ ಶಕ್ತಿಯನ್ನು ನಾವು ಅಹಿಂಸೆಯಲ್ಲಿ ಕಂಡುಕೊಂಡಿದ್ದೇವೆ. ನಾನು ಮೊದಲೇ ಹೇಳಿದಂತೆ, ಅಹಿಂಸಾ ತಂತ್ರದಲ್ಲಿ ಸೋಲು ಎಂಬುದಿಲ್ಲ. ಇರುವುದೆಲ್ಲ – ಕೊಲ್ಲದೆ ಅಥವಾ ನೋಯಿಸದೆಯೇ “ಮಾಡು ಇಲ್ಲವೆ ಮಡಿ” ಅಷ್ಟೇ. ಅದಕ್ಕೆ ಯಾವುದೇ ಖರ್ಚಿಲ್ಲ; ಅಥವಾ ಯಾವ ವಿನಾಶದ ವಿಜ್ಞಾನವನ್ನು ನೀವು ಅತ್ಯುಚ್ಚ ಮಟ್ಟಕ್ಕೆ ಬೆಳೆಸಿದ್ದೀರೋ, ಅದರ ನೆರವಿಲ್ಲದೆಯೇ ಇದನ್ನು ವಾಸ್ತವದಲ್ಲಿ ಬಳಕೆಗೆ ತರಲು ಸಾಧ್ಯ. ಇದು ಯಾರದ್ದೇ ಏಕಸ್ವಾಮ್ಯವಲ್ಲ ಎನ್ನುವುದು ನಿಮ್ಮ ಅರಿವಿಗೆ ಬಂದಿಲ್ಲ ಎನ್ನುವುದೇ ನನಗೊಂದು ಆಶ್ಚರ್ಯವಾಗಿದೆ. ಬ್ರಿಟಿಷರಲ್ಲದಿದ್ದರೆ ಮತ್ಯಾವುದೋ ಒಂದು ಶಕ್ತಿ ನಿಮ್ಮ ವಿಧಾನವನ್ನು ಇನ್ನಷ್ಟು ಸುಧಾರಿಸಿಕೊಂಡು ನಿಮ್ಮದೇ ಹತಾರದಿಂದ ನಿಮ್ಮನ್ನು ಖಂಡಿತಾ ಸೋಲಿಸುತ್ತದೆ. ಮುಂದೆ ನಿಮ್ಮ ಜನತೆ ಅಭಿಮಾನ ಪಡುವಂತಹ ಯಾವುದೇ ಉದಾತ್ತ ಪರಂಪರೆಯನ್ನೂ ನೀವು ಹುಟ್ಟುಹಾಕುತ್ತಿಲ್ಲ. ಕ್ರೂರ ಕೃತ್ಯಗಳನ್ನು ಎಷ್ಟೇ ಕೌಶಲ್ಯಪೂರ್ಣವಾಗಿ ಯೋಜಿಸಿರಲಿ, ಅವುಗಳ ವೃತ್ತಾಂತಗಳನ್ನು ವಿವರಿಸಲು ಅವರಿಗೆಂದೂ ಹೆಮ್ಮೆ ಎನ್ನಿಸುವುದು ಸಾಧ್ಯವಿಲ್ಲ.

ಆದ್ದರಿಂದ ಯುದ್ಧವನ್ನು ನಿಲ್ಲಿಸಬೇಕೆಂದು ನಾನು ಮಾನವತೆಯ ಪರವಾಗಿ ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ನಿಮಗೂ ಬ್ರಿಟಿನ್ನಿಗೂ ನಡುವಿನ ಎಲ್ಲಾ ವಿವಾದಗಳನ್ನು ನಿಮಗಿಬ್ಬರಿಗೂ ಒಪ್ಪಿಗೆಯಾಗುವ ಅಂತರರಾಷ್ಟ್ರೀಯ ನ್ಯಾಯಮಂಡಳಿಯೊಂದಕ್ಕೆ ವಹಿಸಿದಲ್ಲಿ ನಿಮಗೆ ಯಾವುದೇ ನಷ್ಟವೂ ಇಲ್ಲ. ಒಂದು ವೇಳೆ ನೀವು ಯುದ್ಧದಲ್ಲಿ ಗೆದ್ದರೂ ಸಹ ನಿಮ್ಮದು ಸರಿಯೆಂದೇನೂ ಅದರಿಂದ ಸಾಬೀತಾಗುವುದಿಲ್ಲ. ವಿನಾಶದ ನಿಮ್ಮ ಶಕ್ತಿ ಅವರದ್ದಕ್ಕಿಂತಲೂ ಮಿಗಿಲಾಗಿತ್ತು ಎಂಬುದನ್ನಷ್ಟೇ ಅದು ಸಾಬೀತು ಮಾಡುತ್ತದೆ. ಅದೇ ವೇಳೆ, ಪಕ್ಷಪಾತರಹಿತ ನ್ಯಾಯಮಂಡಳಿಯೊಂದು ನೀಡುವು ತೀರ್ಪು – ಮನುಷ್ಯರಿಗೆ ಸಾಧ್ಯವಿರುವ ಮಟ್ಟಿಗೂ – ಯಾರದ್ದು ಸರಿಯಿತ್ತೆಂಬುದನ್ನು ತೋರಿಸಿಕೊಡಬಲ್ಲದು. ಕೆಲವೇ ಸಮಯದ ಹಿಂದೆ ನಾನು ನನ್ನ ಅಹಿಂಸಾತ್ಮಕ ಪ್ರತಿರೋಧದ ವಿಧಾನವನ್ನು ಅನುಸರಿಸುವಂತೆ ಪ್ರತಿಯೊಬ್ಬ ಬ್ರಿಟನ್ನರಿಗೂ ಮನವಿ ಮಾಡಿರುವುದು ನಿಮಗೆ ಗೊತ್ತಿದೆ. ನಾನು ಒಬ್ಬ ಬಂಡಾಯಗಾರನಾದರೂ ಅವರ ಮಿತ್ರನೆಂಬುದು ಬ್ರಿಟನ್ನರಿಗೆ ಗೊತ್ತಿರುವುದರಿಂದ ನನಗೆ ಹಾಗೆ ಮನವಿ ಮಾಡಲು ಸಾಧ್ಯವಾಯಿತು. ಆದರೆ ನಿಮಗೂ ನಿಮ್ಮ ಜನತೆಗೂ ನಾನೊಬ್ಬ ಅಪರಿಚಿತ. ಪ್ರತಿಯೊಬ್ಬ ಬ್ರಿಟನ್ನರಿಗೆ ಮಾಡಿದಂಥ ಮನವಿಯನ್ನು ನಿಮಗೂ ಮಾಡಲು ನನಗೆ ಧೈರ್ಯ ಸಾಲದು. ಅದು ಬ್ರಿಟಿಷರಿಗೆ ಎಷ್ಟು ಪ್ರಬಲವಾಗಿ ಅನ್ವಯಿಸುತ್ತದೋ ಅಷ್ಟೇ ಪ್ರಮಾಣದಲ್ಲಿ ನಿಮಗೆ ಅನ್ವಯಿಸುವುದಿಲ್ಲ ಎಂದು ಇದರ ಅರ್ಥವಲ್ಲ. ಬದಲಿಗೆ ನಿಮ್ಮ ಮುಂದಿಡುತ್ತಿರುವ ನನ್ನ ಈ ಪ್ರಸ್ತಾಪವು ಅದಕ್ಕಿಂತಲೂ ಹೆಚ್ಚು ಸರಳವಾಗಿದೆ. ಯಾಕೆಂದರೆ ಇದು ಹೆಚ್ಚು ವಾಸ್ತವಿಕವೂ ಪರಿಚಿತವೂ ಆಗಿದೆ. ಯೂರೋಪಿನ ಜನತೆಯ ಹೃದಯಗಳು ಶಾಂತಿಗಾಗಿ ಹಾತೊರೆಯುತ್ತಿರುವ ಇಂದಿನ ದಿನಗಳಲ್ಲಿ ನಾವು ನಮ್ಮ ಶಾಂತಿಯುತ ಹೋರಾಟವನ್ನು ಕೂಡ ಮುಂದೂಡಿದ್ದೇವೆ. ಕೋಟ್ಯಾಂತರ ಮೂಕ ಜನರ ಕೂಗು ಕೇಳಿಸಿಕೊಳ್ಳುವುದು ನನ್ನ ಕಿವಿಗಳಿಗೆ ಅಭ್ಯಾಸವಾಗಿರುವುದರಿಂದ, ಶಾಂತಿಗಾಗಿ ಕೋಟ್ಯಾಂತರ ಯೂರೋಪಿಯನ್ನರು ಇಡುತ್ತಿರುವ ಮೂಕ ಮೊರೆ ನನಗೆ ಕೇಳಿಸುತ್ತಿದೆ. ಈ ಕಾಲಘಟ್ಟವು ವ್ಯಕ್ತಿಗತವಾಗಿ ನಿಮಗೆ ಏನೂ ಅಲ್ಲದಿರಬಹುದು, ಆದರೆ ಅದು ಇಂತಹ ಯೂರೋಪಿಯನ್ನರ ಪಾಲಿಗೆ ಬಹಳ ಗುರುತರವಾಗಿದೆ. ಇಂಥ ಹೊತ್ತಿನಲ್ಲಿ, ಶಾಂತಿಗಾಗಿ ಪ್ರಯತ್ನ ಮಾಡುವಂತೆ ನಿಮ್ಮನ್ನು ಕೋರುವುದು ಅತಿಯಾಗುತ್ತದೆಯೆ?

ನಾನು ನಿಮಗೂ ಮಾನ್ಯ ಮುಸೋಲಿನಿಯವರಿಗೂ ಒಂದು ಜಂಟಿ ಮನವಿಯನ್ನು ಮಾಡಬೇಕೆಂದು ಬಯಸಿದ್ದೆ. ನಾನು ದುಂಡು ಮೇಜಿನ ಪರಿಷತ್ತಿನ ಒಬ್ಬ ಪ್ರತಿನಿಧಿಯಾಗಿ ಇಂಗ್ಲೆಂಡಿಗೆ ಹೋದಾಗ ರೋಮ್‍ನಲ್ಲಿ ಅವರನ್ನು ಭೇಟಿಯಾಗುವ ಸದವಕಾಶವೂ ದೊರೆತಿತ್ತು. ಈಗ ಈ ಮನವಿಯನ್ನೇ ಅವರು ಅಗತ್ಯ ಮಾರ್ಪಾಡಿನೊಂದಿಗೆ ತನ್ನನ್ನೂ ಕುರಿತಿದ್ದೆಂದು ಪರಿಗಣಿಸುತ್ತಾರೆಂದು ಆಶಿಸುತ್ತೇನೆ.

ನಿಮ್ಮ ಪ್ರಾಮಾಣಿಕ ಮಿತ್ರ,

ಎಂ. ಕೆ. ಗಾಂಧಿ.

(ಈ ಪತ್ರವನ್ನು ಬ್ರಿಟಿಷ್ ಸರಕಾರ ತಡೆಹಿಡಿದಿತ್ತು)

ವಾರ್ಧಾ, ಡಿಸೆಂಬರ್ 24, 1940.


ಇದನ್ನು ಓದಿ: ಪ್ರಧಾನಿಗಳನ್ನು ನಾನು ನಂಬುತ್ತೇನೆ, ಅವರು ಹೇಳಿದ್ದೆಲ್ಲವನ್ನೂ ನಂಬುತ್ತೇನೆ – ಎಚ್ ಎಸ್ ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...