Homeಅಂಕಣಗಳುಸಹಬಾಳ್ವೆ-ಸಾಮರಸ್ಯ; ಸ್ಪಷ್ಟತೆಯ ಹಾದಿಯಲ್ಲಿ ಸಂಕಷ್ಟದ ಕಲ್ಲುಮುಳ್ಳುಗಳು

ಸಹಬಾಳ್ವೆ-ಸಾಮರಸ್ಯ; ಸ್ಪಷ್ಟತೆಯ ಹಾದಿಯಲ್ಲಿ ಸಂಕಷ್ಟದ ಕಲ್ಲುಮುಳ್ಳುಗಳು

- Advertisement -
- Advertisement -

ಉಡುಪಿಯ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶಕ್ಕೆ ರಂಗ ಸಜ್ಜಾಗಿದೆ. ಸಹಪಂಕ್ತಿ ಭೋಜನವನ್ನು ಇನ್ನೂ ಮೈಗೂಡಿಸಿಕೊಳ್ಳದ, ಆದರೆ ದೇಶದ ರಾಜಕೀಯದಲ್ಲಿ ಅಧಿಕಾರಯುತವಾದ ಸ್ಥಾನ ಹೊಂದಿರುವ ಮಠ ನೆಲೆಸಿರುವ, ಮಡಿಮೈಲಿಗೆಗಳನ್ನು, ತಾರತಮ್ಯವನ್ನು ಸಿದ್ಧಾಂತವನ್ನಾಗಿಸಿ-ತತ್ವಶಾಸ್ತ್ರವನ್ನಾಗಿಸಿ ದೊಡ್ಡಮಟ್ಟದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸೆಕ್ಟ್ ಒಂದು ಪ್ರಭಾವಿಯಾಗಿರುವ, ರಾಜ್ಯದಲ್ಲಿ ಕೋಮು ವಿಷಮತೆಯ ಪ್ರಯೋಗಶಾಲೆಯಾಗಿರುವ ನೆಲದಿಂದ ಇಂತಹ ಸೌಹಾರ್ದತೆ ಸಾರುವ ಸಮಾವೇಶ ಈಗ ಮತ್ತೊಮ್ಮೆ ಚಾಲನೆ ಪಡೆದುಕೊಳ್ಳುತ್ತಿದೆ. ಈಗಿನ ಬಹುಸಂಖ್ಯಾತವಾದದಲ್ಲಿ ಮೂಲೆಗುಂಪಾಗುವ-ದೌರ್ಜನ್ಯಕ್ಕೆ ಒಳಗಾಗುವ ಅಪಾಯ ಎದುರಿಸುತ್ತಿರುವ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಮತಧರ್ಮಗಳ ಕೆಲವು ವರ್ಗಗಳಲ್ಲಿ ಕೂಡ ಅವರವರ ಮತಧರ್ಮದ ಶ್ರೇಷ್ಠತೆಯನ್ನು ಮಾತ್ರ ಪ್ರತಿಪಾದಿಸುವ ವ್ಯಕ್ತಿಗಳು-ಗುಂಪುಗಳು ಇಲ್ಲವೆಂದಲ್ಲ. ಆದರೆ, ಸಮಾನತೆಯ ತಳಹದಿಯಲ್ಲಿ ಹೊಂದಾಣಿಕೆ-ಕೂಡುಬಾಳ್ವೆಯೆಡೆಗೆ ಇಲ್ಲಿಯವರೆಗೂ ಸಾಧಿಸಲು ಸಾಧ್ಯವಾಗಿದ್ದ ಚಲನೆಯನ್ನು ಇಂದು ನೆಲೆಸಿರುವ ದ್ವೇಷದ ರಾಜಕೀಯ ವಾತಾವರಣ ಮಣ್ಣುಮುಕ್ಕಿಸಿ, ಅಲ್ಪಸಂಖ್ಯಾತರನ್ನು ಅನ್ಯರನ್ನಾಗಿಸಿ ಎರಡನೇ ದರ್ಜೆಯ ನಾಗರಿಕರನ್ನಾಗಿಸಲು ಹೊರಟಿರುವಾಗ, ಈ ಸಾಮರಸ್ಯ-ಸಹಬಾಳ್ವೆಯ ಪರಿಕಲ್ಪನೆಗಳಿಗೆ ಸಂದರ್ಭಾನುಸಾರ ವಿಶಾಲ ಅರ್ಥಗಳು ದೊರಕುವುದು ಸಹಜ.

ಸದರಿ ಸಮಾವೇಶದ ಬಗ್ಗೆ ಕೆಲವರು ಎತ್ತಿರುವ ಪ್ರಾಮಾಣಿಕ ಮತ್ತು ಕಾಳಜಿಯ ಪ್ರಶ್ನೆಗಳಿಗೆ ಮತ್ತು ಕುಹಕದ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಳ್ಳುವುದರ ಮೂಲಕ ನಮ್ಮ ಗುರಿಯನ್ನು ಹೆಚ್ಚು ಸ್ಪಷ್ಟತೆಯಿಂದ ತಲುಪಲು ಪ್ರಯತ್ನಿಸಬಹುದೇನೋ! ಸಾಮರಸ್ಯದ ಪರಿಕಲ್ಪನೆಯನ್ನೇ ತೆಗೆದುಕೊಂಡರೆ, ಅದನ್ನು ಹಲವು ಸಂದರ್ಭಗಳಲ್ಲಿ ಸಮಾನತೆಯ ವಿರುದ್ಧವಾಗಿ ಪ್ರತಿಪಾದಿಸಿರುವುದನ್ನು ನಾವು ನೋಡಬಹುದು. ಆರ್‌ಎಸ್‌ಎಸ್‌ನ ಸಂಸ್ಥಾಪಕ ಗೋಲ್ವಾಲ್ಕರ್ ಹೇಳುವ ಮಾತು ಹೀಗಿದೆ: “ನಮ್ಮ ಧರ್ಮ ಕಮ್ಯುನಿಸ್ಟರು ಹೇಳುವ ಸಮಾನತ್ವ (ಇಕ್ವಾಲಿಟಿ) ಅಲ್ಲ, ಸಾಮರಸ್ಯ (ಹಾರ್ಮೊನಿ). ಪ್ರತಿಯೊಬ್ಬನೂ ತನ್ನ ಸ್ವಧರ್ಮವನ್ನು (ಅದು ಬಾಂಡಲಿ ಹೊರುವುದಾಗಲೂ, ಕಾರಿನಲ್ಲಿ ಕುಳಿತು ತಿರುಗುವುದಾಗಲೀ) ನಿರ್ವಹಿಸುತ್ತಾ ಹೋದರೆ ಎಲ್ಲವೂ ಪ್ರಶಾಂತವಾಗಿ ಸಾಮರಸ್ಯದಿಂದ ಇರುತ್ತದೆ”. ಹೀಗೆ ಸಾಮರಸ್ಯದ ಕಲ್ಪನೆಯನ್ನು ಈ ನೆಲದ ಮುಖ್ಯ ಗುಣವಾಗಿದ್ದ ತಾರತಮ್ಯವನ್ನು ಸಮರ್ಥಿಸಿಕೊಳ್ಳಲು ಬಳಸಲಾಗಿತ್ತು. ಇಂತಹ ಕೃತಕ ಸಾಮರಸ್ಯವನ್ನು ಇಂದಿಗೂ ಪ್ರತಿಪಾದಿಸುವ ಸಂಘ ಪರಿವಾರದ ಸಿದ್ಧಾಂತಿಗಳಿಗೆ ಬರವೇನಿಲ್ಲ. ಆದರೆ ಸದರಿ ಸಮಾವೇಶ ಸಮಾನತೆಯನ್ನು ಪ್ರತಿಪಾದಿಸುವ, ಜಾತಿ-ಧರ್ಮ ಪ್ರೇರಿತ ತಾರತಮ್ಯವನ್ನು ಹೋಗಲಾಡಿಸುವ ಇರಾದೆ ಹೊಂದಿರುವ ಸಂವಿಧಾನವನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಕನಿಷ್ಠ ಅಂತಹ ನಂಬಿಕೆಯುಳ್ಳ ಮುಖಂಡರು ಈ ಸಮಾವೇಶದ ಅಂತರಂಗವಾಗಿದ್ದಾರೆ. ಆ ನಿಟ್ಟಿನಲ್ಲಿ ಬಾಹ್ಯ ಪ್ರಾತಿನಿಧ್ಯಕ್ಕೂ ಸಮಾನತೆಯ ಮೂಲಕ ಸಾಮರಸ್ಯ ಕಂಡುಕೊಳ್ಳುವ ಹಾದಿ ಹಿಡಿದಿರುವವರನ್ನು ಒಳಗೊಳ್ಳಲು ಸಮಾವೇಶ ಶ್ರಮಿಸುತ್ತಿದೆ. ಯಾರ ಬಗ್ಗೆ ಅಪಸ್ವರ ಬಂದಿದೆಯೋ ಅಂತಹವರ ಬಗ್ಗೆ ಮರುಚಿಂತನೆ ನಡೆಸುವುದಾಗಿ ಕೂಡ ಸಂಘಟಕರು ವಿನಮ್ರವಾಗಿ ಹೇಳಿದ್ದಾರೆ.

ಇದೇ ನೆಲೆಯಲ್ಲಿ ಏಳುವ ಮತ್ತೊಂದು ಪ್ರಶ್ನೆ, ಹಲವು ಧರ್ಮಗುರುಗಳದ್ದು. ಈ ದೇಶದ ಪ್ರತಿಯೊಬ್ಬ ನಿವಾಸಿಗೂ ತನ್ನ ಇಚ್ಛೆಯ ಧರ್ಮವನ್ನು ಅನುಸರಿಸುವುದಕ್ಕೆ, ಪ್ರಸರಿಸುವುದಕ್ಕೆ ನಮ್ಮ ಸಂವಿಧಾನ ಅವಕಾಶವನ್ನಂತೂ ನೀಡಿದೆ. ಈ ಸಮಯದಲ್ಲಿ ವಿವಿಧ ಜಾತಿ ಮತಗಳಿಗೆ ಸೇರಿದ ಧರ್ಮಗುರುಗಳ ಪಾತ್ರವೇನು? ಎಷ್ಟೋ ಜಾತಿ-ಧರ್ಮಗುರುಗಳು ವೇದಿಕೆಗೆ ತಕ್ಕಂತೆ ಮಾತನಾಡುವವರು. ಬಾಬ್ರಿಮಸೀದಿ ಕೆಡವಿದ ಜಾಗದಲ್ಲಿ ರಾಮಮಂದಿರ ಕಟ್ಟಲೇಬೆಕೆಂದು ಕರೆನೀಡುವ, ಮತ್ತೊಂದು ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ರಂಗುರಂಗಾಗಿ ಬಣ್ಣಿಸುವ ಸ್ವಾಮಿಗಳು ಹಲವರು ಇದ್ದಾರೆ. ಸಾಮಾನ್ಯವಾಗಿ ಯಾವುದೇ ಜಾತಿ ಮತಗಳ ಧರ್ಮಗುರುಗಳು ಯಥಾಸ್ಥಿತಿಗೆ ಪುಷ್ಠಿ ನೀಡುವವರು. ಜಾತಿ-ಧರ್ಮ ಪಾರಮ್ಯವನ್ನು ಮೆರೆಯುವವರು. ಪ್ರಗತಿಯನ್ನು ತುಸು ಅನುಸರಿಸುವವರು ಕೆಲವರು ಇದ್ದಾರಾದರೂ, ಅವರ ತರಬೇತಿಯ ಕಾರಣಕ್ಕೆ, ತಮ್ಮ ಪರಂಪರೆಯನ್ನು ಸುಲಭವಾಗಿ ತ್ಯಜಿಸಲಾಗದ ಅವರ ಕೆಲಸದ ಸ್ವಭಾವದ ಕಾರಣಕ್ಕೆ ಅವರು ಎಲ್ಲ ಜನರ ಒಳಿತಿನ ಕಾಳಜಿಗಾಗಿ ದುಡಿಯಲಾರರು; ಪ್ರತಿ ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಇಂಟಲೆಕ್ಚುಯಲ್ ಪಾತ್ರವನ್ನು ಅವರು ವಹಿಸಿರುವುದು ವಿರಳಾತಿ ವಿರಳ. ಆದರೂ ಜನಪ್ರಿಯ ವೇದಿಕೆಗಳನ್ನು ಸೃಷ್ಟಿಸುವಾಗ, ಹಲವು ರೀತಿಯಲ್ಲಿ ಜನರನ್ನು ಪ್ರಭಾವಿಸಬಲ್ಲ ಜನಪ್ರಿಯ ವ್ಯಕ್ತಿಗಳನ್ನು ಕರೆತರುವುದೂ ಮುಖ್ಯವಾದೀತು. ಆ ಮುಖಾಂತರ ಸಹಬಾಳ್ವೆಯ ಪ್ರಾಥಮಿಕ ಪಾಠಗಳನ್ನು ಈ ಕರಾಳ ದಿನಗಳಲ್ಲಿ ಮತ್ತೆಮತ್ತೆ ನೆನಪಿಸುವ ಕೆಲಸಕ್ಕೆ ಸಮಾವೇಶ ಮುಂದಾಗಬಹುದು.

ಇಂದು ಯಾವುದೇ ಸುಳ್ಳು ಸಮರ್ಥನೆಗಳೂ ಬೇಕಾಗದೆ, ಸಮಾಜದಲ್ಲಿ ಕೋಮುಗಳ ನಡುವೆ ದ್ವೇಷ ಮೂಡಿಸಲು ಸಾಧ್ಯವಾಗುತ್ತಿರುವಂತಹ ಸನ್ನಿವೇಶದಲ್ಲಿ, ಎಲ್ಲ ಆಯಾಮಗಳಲ್ಲಿ ’ಪರ್ಫೆಕ್ಟ್’ ಅಲ್ಲದೆ ಇರಬಹುದಾದರೂ ಜನಪ್ರಿಯ ಸಂಸ್ಕೃತಿ ಮಾದರಿಯ ಚಿಂತನೆಗಳನ್ನೂ ಹರಿದುಬಿಡಬೇಕಾದ ತುರ್ತಿನಲ್ಲಿ ನಾವಿದ್ದೇವೆ. ಆ ನಿಟ್ಟಿನಲ್ಲಿ ಪಾರ್ಕ್‌ಗಳಾಗಲೀ, ಸಿನಿಮಾ ಮಂದಿರಗಳಾಗಲೀ, ಬೀಚ್ ಇನ್ನಿತರ ಸಾರ್ವಜನಿಕ ಪ್ರದೇಶಗಳು ಸೆಕ್ಯುಲರ್ ಆದ ಚಹರೆಯನ್ನು ಹೊಂದಿವೆ ಎನ್ನುವ ಮಾತುಗಳನ್ನು ಪದೇಪದೆ ನೆನಪಿಸಬೇಕಾಗುತ್ತದೆ. ಊರಹಬ್ಬಗಳು ಇಂದಿಗೂ ಕಟ್ಟಕಡೆಯ ದಮನಿತನನ್ನು ಒಳಗೊಳ್ಳದೆ ಹೋಗಿರುವ, ದೇವಸ್ಥಾನ ಪ್ರವೇಶಕ್ಕೆ ಇನ್ನೂ ಮುಕ್ತ ಅವಕಾಶ ನೀಡದಿರುವ ನೀಚ ತರತಮವನ್ನು ಮರೆಯದೆಯೂ, ಅಂತಹ ಹಬ್ಬಗಳಲ್ಲಿ ಹಲವು ಕೋಮುಗಳು ಸ್ವಲ್ಪಮಟ್ಟಿಗಾದರೂ ತರತಮತೆಯನ್ನು ತಗ್ಗಿಸಿಕೊಂಡು ಕೂಡಿ ಸಂಭ್ರಮಿಸುವ ಸಂಗತಿಯನ್ನು ಗುರುತಿಸಬೇಕಾಗಿದೆ ಅಲ್ಲವೇ? ಅಲ್ಲಿಂದ ಕನಿಷ್ಠ ಪಕ್ಷ ಇನ್ನೂ ಹಿಂದಕ್ಕೆ ಚಲಿಸದಂತೆ, ಇನ್ನಷ್ಟು ಪ್ರಗತಿಯತ್ತ ದಾಪುಗಾಲು ಇರಿಸಲು ಅನುವಾಗುವಂತೆ ಕೆಲಸಗಳಾಗಬೇಕಿವೆ.

ಇದೇ ಹಿನ್ನೆಲೆಯಲ್ಲಿ ಉಡುಪಿಯ ಸಮಾವೇಶವನ್ನೂ ಕಾಣಬಹುದೇ? ವೈಚಾರಿಕತೆಯಿಂದ ಜೀವನ ದೃಷ್ಟಿಯನ್ನು ಕಟ್ಟಿಕೊಂಡವನೊಬ್ಬನಿಗೆ ಹತ್ತಾರು ಸ್ವಾಮೀಜಿಗಳ ಉಪಸ್ಥಿತಿ ಕಸಿವಿಸಿಯನ್ನುಂಟುಮಾಡಬಲ್ಲದು. ಇಂತಹ ಸಾಮರಸ್ಯ ತೀವ್ರ ಮೇಲ್ಮಟ್ಟದ್ದು ಎಂಬ ಕಳವಳ ಉಂಟಾಗಬಹುದು. ಆದರೆ ಇಂತಹ ಸಮ್ಮೇಳನಗಳು ಕೂಡ ಜನಸಾಮಾನ್ಯರಲ್ಲಿ ಜನಪ್ರಿಯ ಮಟ್ಟದಲ್ಲಿ ಭರವಸೆ ತುಂಬಬಲ್ಲವು (ಇಂದಿನ ಮತೀಯ ಧ್ರುವೀಕರಣದಲ್ಲಿ ಶೋಷಣೆಗೆ ಒಳಗಾಗುತ್ತಿರುವವರಿಗೆ) ಮತ್ತು ವಿವೇಕವನ್ನೂ (ದ್ವೇಷ ಸಿದ್ಧಾಂತಕ್ಕೆ ಮರುಳಾಗುತ್ತಿರುವವರಿಗೆ). ಸಮಾಜದಲ್ಲಿ ಒಟ್ಟಾರೆಯಾಗಿ ಒಳಿತಿನ ಚಲನೆಯ ಕಡೆಗೆ ಒಲವಿರುವವರು ಎತ್ತುವ ಆಕ್ಷೇಪಗಳ ಜೊತೆಗೇ, ಅವುಗಳನ್ನೂ ಸಾಧ್ಯವಾದಷ್ಟು ಅಡ್ರೆಸ್ ಮಾಡುವುದರ ಜೊತೆಗೆ, ಈ ಸಹಬಾಳ್ವೆ ಸಮಾವೇಶ ಯಾವ ಗುರಿಯನ್ನು ಇಟ್ಟುಕೊಂಡಿದೆಯೋ ಅದನ್ನು ಸಾಧಿಸಬೇಕಿದೆ. ಆ ಗುರಿ, ಆಳುವ ಪ್ರಭುತ್ವ ಮತ್ತು ಅದರ ಸೈದ್ಧಾಂತಿಕ ಜತೆಗಾರರು ಸೃಷ್ಟಿಸುವ ಒಡಕಿಗೆ, ಧ್ರುವೀಕರಣಕ್ಕೆ ಇಲ್ಲಿನ ಸಾಮಾನ್ಯ ಜನ ಸಮ್ಮತಿಸುವುದಿಲ್ಲವೆಂದು ತೋರಿಸುವುದು. ಅವರ ಗುರಿಯಾಗಿರುವ ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಇತರ ಸಮುದಾಯಗಳ ಜೊತೆಗೆ ನಾವಿದ್ದೇವೆ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸುವುದು ಮತ್ತು ಕೃತಕವಾಗಿ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಲಾಗುತ್ತಿರುವ ಈ ಕೋಮುಗಳ ನಡುವೆ ಒಡನಾಟ, ಪರಸ್ಪರ ಬಳಕೆ ಮುಂದಿನ ದಿನಗಳಲ್ಲಿ ಹೆಚ್ಚಾಗುವಂತೆ ಮಾಡಲು ಕಾರ್ಯಪ್ರವೃತ್ತರಾಗುವುದು. ಇದಕ್ಕಾಗಿ ಎಲ್ಲರ ಒಳಿತಿಗೆ ತುಡಿಯುವ ನಾಡಿನ ಪ್ರಜ್ಞಾವಂತರೆಲ್ಲರೂ ಕೈಜೋಡಿಸಿದಲ್ಲಿ ಕಷ್ಟವಾಗಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...