Homeಮುಖಪುಟಪಗಡಿ ಸಂಭಲ್ ದಿನ: ಸಿಂಘು ಗಡಿಗೆ ಹುತಾತ್ಮ ಭಗತ್ ಸಿಂಗ್ ಸಂಬಂಧಿಕರ ಭೇಟಿ, ರೈತ ಹೋರಾಟಕ್ಕೆ...

ಪಗಡಿ ಸಂಭಲ್ ದಿನ: ಸಿಂಘು ಗಡಿಗೆ ಹುತಾತ್ಮ ಭಗತ್ ಸಿಂಗ್ ಸಂಬಂಧಿಕರ ಭೇಟಿ, ರೈತ ಹೋರಾಟಕ್ಕೆ ಬೆಂಬಲ

ರೈತ ಹೋರಾಟದ ಸ್ಫೂರ್ತಿಗಳಾದ ಸಹಜಾನಂದ್‌ ಸರಸ್ವತಿ ಮತ್ತು ಸರ್ದಾರ್‌ ಅಜಿತ್‌ ಸಿಂಗ್‌ರ ನೆನಪಿನಲ್ಲಿ ದೆಹಲಿ ಗಡಿಗಳಲ್ಲಿ ಪಗಡಿ ಸಂಭಾಲ್‌ ದಿನ ಆಚರಣೆ ಇಂದು ನಡೆಯುತ್ತಿದೆ.

- Advertisement -
- Advertisement -

ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ 91ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಂಯುಕ್ತ ಕಿಸಾನ್ ಮೋರ್ಚಾ ‘ಪಗಡಿ ಸಂಭಲ್ ದಿವಸ್’ (ಚಳವಳಿಯ ಸಂಕೇತ ಮತ್ತು ಆತ್ಮ ಪೇಟದ ದಿನ) ಆಚರಣೆಗೆ ಕರೆ ನೀಡಿತ್ತು. ಅದರ ಭಾಗವಾಗಿ ಹುತಾತ್ಮ ಕ್ರಾಂತಿಕಾರಿ ಭಗತ್‌ಸಿಂಗ್‌ ಸಂಬಂಧಿಕರು ಸಿಂಘು ಗಡಿಗೆ ಭೇಟಿ ನೀಡಿ ಹೋರಾಟ ನಿರತ ರೈತರಿಗೆ ಬೆಂಬಲ ಘೋಷಿಸಿದ್ದಾರೆ.

ಅಭಯ್ ಸಂಧು, ತೇಜಿ ಸಂಧು, ಅನುಸ್ ಪ್ರಿಯಾ ಸಂಧು ಮತ್ತು ಗುರ್ಜೀತ್ ಕೌರ್ ಸೇರಿದಂತೆ ಹುತಾತ್ಮ ಭಗತ್ ಸಿಂಗ್ ಅವರ ಕುಟುಂಬ ಸದಸ್ಯರು ಸಿಂಘು ಗಡಿಯಲ್ಲಿ ನಡೆದ ಪಗ್ಡಿ ಸಂಭಲ್ ದಿನ ಆಚರಣೆಯಲ್ಲಿ ಭಾಗಿಯಾದರು. ರೈತ ಹೋರಾಟಗಾರ ದರ್ಶನ್ ಪಾಲ್ ಸೇರಿದಂತೆ ಇತರ ಮುಖಂಡರಿಗೆ ಭಗತ್‌ಸಿಂಗ್‌ರವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲಾಯಿತು.

‘ಪಗ್ಡಿ ಸಂಭಲ್ ದಿವಸ್’ ಎಂದರೇನು?

1907 ರ ಮಾರ್ಚ್ 3 ರಂದು ಲಿಯಾಲ್‌ಪುರದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ, ‘ಜಂಗ್ ಸ್ಯಾಲ್’ ಪತ್ರಿಕೆಯ ಸಂಪಾದಕ ಬಂಕೆ ದಯಾಲ್ ಅವರು, “ಪಗ್ಡಿ ಸಂಭಲ್ ಜಟ್ಟಾ, ಪಗ್ಡಿ ಸಂಭಾಲ್ ಓಯೆ” ಹಾಡನ್ನು ಪರಿಚಯಿಸಿದರು. ಅದು ಚಳವಳಿಯ ಸಂಕೇತ ಮತ್ತು ಆತ್ಮವಾಯಿತು.

ಬ್ರಿಟಿಷರಿಗೆ ಕೃಷಿ ತೆರಿಗೆ ಪಾವತಿಸುವುದನ್ನು ವಿರೋಧಿಸಿ ಆರಂಭವಾದ ಚಳವಳಿ `ಪಗಡಿ ಸಂಭಾಲ್‌ ಜಟ್ಟ’. ಬ್ರಿಟಿಷರು ಅಂಗೀಕರಿಸಿದ್ದ ಪಂಜಾಬ್‌ ಭೂ ವಸಹಾತು ಕಾಯ್ದೆ, ದೋವಾಬ್‌ ಬಾರಿ ಕಾಯ್ದೆ ಹಾಗೂ ಪಂಜಾಬ್‌ ಭೂ ಏಲಿಯನೇಷನ್ ಕಾಯ್ದೆ ವಿರುದ್ಧ ನಡೆದ ಹೋರಾಟ ಇದಾಗಿದೆ.

ಸುಮಾರು 9 ತಿಂಗಳ ಕಾಲ ನಡೆದ ಈ ದೀರ್ಘ ಹೋರಾಟವು ಬ್ರಿಟಿಷರು ಕಾನೂನುಗಳನ್ನು ರದ್ದು ಗೊಳಿಸುವುದರೊಂದಿಗೆ ಕೊನೆಗೊಂಡಿತು.

ಈ ರೈತ ಹೋರಾಟದ ಸ್ಫೂರ್ತಿಗಳಾದ ಸಹಜಾನಂದ್‌ ಸರಸ್ವತಿ ಮತ್ತು ಸರ್ದಾರ್‌ ಅಜಿತ್‌ ಸಿಂಗ್‌ರ ನೆನಪಿನಲ್ಲಿ ದೆಹಲಿ ಗಡಿಗಳಲ್ಲಿ ಪಗಡಿ ಸಂಭಾಲ್‌ ದಿನ ಆಚರಣೆ ಇಂದು ನಡೆಯುತ್ತಿದೆ.

ಅಜಯ್ ದೇವಗನ್ ನಾಯಕ ನಟನಾಗಿ ಅಭಿನಯಿಸಿರುವ ‘ದಿ ಲೆಜೆಂಡ್ ಆಫ್ ಭಗತ್‌ ಸಿಂಗ್’ ಚಿತ್ರದಲ್ಲಿ ಇದೇ ಹಾಡನ್ನು ಬಳಸಿದ್ದು ಅದು ಭಾರತದಾದ್ಯಂತ ಪ್ರಸಿದ್ದಿಯಾಗಿದೆ.

ಸಹಜಾನಂದ ಮತ್ತು ಅಜಿತ್ ಸಿಂಗ್: ಕ್ರಾಂತಿಕಾರಿ ರೈತ ಹೋರಾಟಕ್ಕೆ ಸ್ಪೂರ್ತಿಯ ಚಿಲುಮೆಗಳು

ಉತ್ತರಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ 22 ಫೆಬ್ರವರಿ 1889 ರಂದು ಜನಿಸಿ, ಜೂನ್ 26, 1950 ರಂದು ನಿಧನರಾದ ಸಹಜಾನಂದ್ ಸರಸ್ವತಿ ಅವರ ನಿಜವಾದ ಹೆಸರು ನವರಂಗ್ ರೈ. ಹೋರಾಟ ಮನೋಭಾವದ ಸಹಜಾನಂದರು ಬಹುಮುಖ ಪ್ರತಿಭೆ. ಕ್ರಾಂತಿಕಾರಿ ರೈತ ನಾಯಕ, ಇತಿಹಾಸಕಾರ, ದಾರ್ಶನಿಕ, ಬರಹಗಾರ… ಅವರ ಮುಖ್ಯ ಬರಹ-ಕೃತಿ ಬಿಹಾರವನ್ನು ಕೇಂದ್ರೀಕರಿಸಿದೆ. ಅವರು ಬಿಹ್ತಾದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು ಮತ್ತು ಅಲ್ಲಿಂದ ತಮ್ಮ ವೃದ್ದಾಪ್ಯದ ದಿನಗಳಲ್ಲಿ ತಮ್ಮ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಿದರು.

ಸಹಜಾನಂದ್ ಸರಸ್ವತಿ

ಸಹಜಾನಂದರು 1929 ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭೆಯನ್ನು (ಬಿಪಿಕೆಎಸ್) ರಚಿಸಿದರು. ಜಮೀನ್ದಾರರಿಂದ ಭೂ ಹಿಡುವಳಿ ಕುರಿತಾಗಿ ರೈತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ರೈತರ ಕುಂದುಕೊರತೆಗಳನ್ನು ಒಟ್ಟುಗೂಡಿಸುವ ಸಲುವಾಗಿ ಈ ಸಂಘಟನೆ-ಹೋರಾಟವನ್ನು ಅವರು ಆರಂಭಿಸಿದರು. ಆ ಮೂಲಕ ಭಾರತದಲ್ಲಿ ರೈತರ ಚಳುವಳಿಗಳಿಗೆ ನಾಂದಿ ಹಾಡಿದರು. ಕ್ರಮೇಣ ರೈತ ಚಳುವಳಿ ತೀವ್ರಗೊಂಡಿತು ಮತ್ತು ಭಾರತದ ಉಳಿದ ಭಾಗಗಳಿಗೆ ಹರಡಿತು. ಇದು 1936 ರಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರಚನೆಗೆ ಕಾರಣವಾಯಿತು, ಅವರು ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಕಿಸಾನ್ ಪ್ರಣಾಳಿಕೆ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು. ಆ ಜಮೀನ್ದಾರರನ್ನು ಬ್ರಿಟಿಷ್ ಸರ್ಕಾರ ಆದಾಯ ಸಂಗ್ರಹಕ್ಕಾಗಿ ನೇಮಕ ಮಾಡಿಕೊಂಡಿತ್ತು.

ಭೂ ಮಾಲೀಕತ್ವವನ್ನು ಉಳಿಸಲು ಮತ್ತು ರೈತರ ಉಳುಮೆಯ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆದ ಈ ಚಳುವಳಿ, ಬಿಹಾರ ಮತ್ತು ಯುನೈಟೆಡ್ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರಗಳೊಂದಿಗೆ ಸಂಘರ್ಷ ಎದುರಿಸಬೇಕಾಗಿತು.

ಸಹಜಾನಂದ ಸರಸ್ವತಿ 1937-1938 ರಲ್ಲಿ ಬಿಹಾರದಲ್ಲಿ ಬಕಾಶ್ತ್ ಚಳವಳಿಯನ್ನು ಸಂಘಟಿಸಿ ಮುನ್ನಡೆಸಿದರು. ಬಕಾಶ್ತ್ ಎಂದರೆ ಸ್ವಯಂ-ಕೃಷಿ, ಸ್ವಯಂ ಉಳುಮೆ…. ಈ ಆಂದೋಲನವು ಜಮೀನ್ದಾರರ ಬಕಾಶ್ತ್ ಜಮೀನುಗಳಿಂದ ಟೆನೆಂಟ್‌ಗಳನ್ನು ಹೊರಹಾಕುವುದರ ವಿರುದ್ಧವಾಗಿತ್ತು. ಇದು ಬಿಹಾರ ಹಿಡುವಳಿ ಕಾಯ್ದೆ ಮತ್ತು ಬಕಾಶ್ತ್ ಭೂ ತೆರಿಗೆಯನ್ನು ಅಂಗೀಕರಿಸಲು ಕಾರಣವಾಯಿತು.

ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸಹಜಾನಂದರನ್ನು ಬಂಧಿಸಲಾಗಿತ್ತು.

ಅಜಿತ್ ಸಿಂಗ್, (ಭಗತ್‌ ಸಿಂಗ್‌ರವರ ಚಿಕ್ಕಪ್ಪ)

ಆ ಸಮಯದಲ್ಲಿ ಪಂಜಾಬ್‌ನ ರೈತರು ಹೊಸ ವಸಾಹತುಶಾಹಿ ಕಾನೂನುಗಳಾದ ಹೊಸ ವಸಾಹತು ಕಾಯ್ದೆ ಮತ್ತು ‘ದೋಆಬ್ ಬಾರಿ’ ಕಾಯ್ದೆಯ ವಿರುದ್ಧ ಕುದಿಯುತ್ತಿದ್ದರು. ಈ ಕಾಯ್ದೆಗಳ ಹಿನ್ನೆಲೆ ಏನೆಂದರೆ, ಬ್ರಿಟಿಷ್ ಸರ್ಕಾರವು ಚೆನಾಬ್ ನದಿಯಿಂದ ನೀರನ್ನು ಸೆಳೆಯಲು ಕಾಲುವೆಗಳನ್ನು ನಿರ್ಮಿಸಿ, ಅದನ್ನು ಜನವಸತಿ ಇಲ್ಲದ ಪ್ರದೇಶಗಳಲ್ಲಿ ವಸಾಹತುಗಳನ್ನು ಸ್ಥಾಪಿಸಲು ಲಿಯಾಲ್‌ಪುರಕ್ಕೆ (ಈಗ ಪಾಕಿಸ್ತಾನದಲ್ಲಿದೆ) ಹರಿಸತೊಡಗಿತು. ಹಲವಾರು ಸೌಕರ್ಯಗಳೊಂದಿಗೆ ಉಚಿತ ಭೂಮಿಯನ್ನು ನೀಡುವುದಾಗಿ ಭರವಸೆ ನೀಡಿದ ಬ್ರಿಟಿಷ್ ಸರ್ಕಾರ, ಜಲಂಧರ್, ಅಮೃತಸರ, ಮತ್ತು ಹೋಶಿಯಾರ್‌ಪುರದ ರೈತರು ಮತ್ತು ಮಾಜಿ ಸೈನಿಕರನ್ನು ಅಲ್ಲಿ ನೆಲೆಸಲು ಮನವೊಲಿಸಿತ್ತು.

ಈ ಜಿಲ್ಲೆಗಳ ರೈತರು ತಮ್ಮ ಮೂಲ ಭೂಮಿ ಮತ್ತು ಆಸ್ತಿಯನ್ನು ಬಿಟ್ಟು, ಹೊಸ ಪ್ರದೇಶಗಳಲ್ಲಿ ನೆಲೆಸಿದರು ಮತ್ತು ಬಂಜರು ಭೂಮಿಯನ್ನು ಕೃಷಿಗೆ ಯೋಗ್ಯವಾಗಿಸಲು ಶ್ರಮಿಸಿದರು. ಆದರೆ ಅವರು ಹಾಗೆ ಮಾಡಿದ ಕೂಡಲೇ, ಸರ್ಕಾರವು ಈ ಫಲವತ್ತಾದ ಭೂಮಿಯ ಒಡೆಯ ತಾನೇ ಎಂದು ಘೋಷಿಸಲು, ರೈತರಿಗೆ ಮಾಲೀಕತ್ವದ ಹಕ್ಕನ್ನು ನಿರಾಕರಿಸಲು ಹೊಸ ಕಾನೂನುಗಳನ್ನು ಜಾರಿಗೆ ತಂದಿತು. ರೈತರು ಈ ಜಮೀನುಗಳಲ್ಲಿ ಮರಗಳನ್ನು ಕಡಿಯಲು ಸಾಧ್ಯವಿರಲಿಲ್ಲ, ಮನೆಗಳು ಅಥವಾ ಗುಡಿಸಲುಗಳನ್ನು ನಿರ್ಮಿಸಲು ಅಥವಾ ಅಂತಹ ಭೂಮಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಅವಕಾಶವಿರಲಿಲ್ಲ್ಲ ಮತ್ತು ಹಿರಿಯ ಮಗನಿಗೆ ಮಾತ್ರ ತನ್ನ ತಂದೆಯಿಂದ ಬೇಸಾಯ ಮಾಡಿದ ಭೂಮಿಗೆ ಪ್ರವೇಶಿಸಲು ಅವಕಾಶವಿತ್ತು. ಇದರಲ್ಲಿ ಏನನ್ನಾದರೂ ಉಲ್ಲಂಘಿಸಿದರೆ, ಜಮೀನು ಸರ್ಕಾರದ ಆಸ್ತಿಯಾಗಿ ಬಿಡುತ್ತಿತ್ತು.

ಅಜಿತ್ ಸಿಂಗ್

20 ಲಕ್ಷ ಎಕರೆ ಭೂಮಿಗೆ ನೀರಾವರಿ ಮಾಡಲು ಕಾಲುವೆಗಳ ಮೇಲೆ ವಿಧಿಸಲಾಗಿದ್ದ ತೆರಿಗೆಗಳಲ್ಲಿ, ಸರ್ಕಾರವು ತನ್ನ ಆರಂಭಿಕ ಹೂಡಿಕೆಯನ್ನು ಮರಳಿ ಪಡೆಯಿತಲ್ಲದೇ, ಅಬ್ಬಾಶಿ ತೆರಿಗೆಯ ಆಧಾರದಲ್ಲಿ ವಾರ್ಷಿಕ 7 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಗಳಿಸತೊಡಗಿತು.

ಅಜಿತ್ ಸಿಂಗ್ ಮತ್ತು ಅವರ ಒಡನಾಡಿಗಳು ಈ ವಿಷಯಗಳ ಬಗ್ಗೆ ಜನಪ್ರಿಯ ಸಾಮೂಹಿಕ ಪ್ರತಿರೋಧವನ್ನು ಬೆಳೆಸಿದರು. ಈ ಆಂದೋಲನವನ್ನು ಮುನ್ನಡೆಸಲು ಕಾಂಗ್ರೆಸ್ ವಿಫಲವಾಗಿದೆ, ಮಸೂದೆಯನ್ನು ಈಗಾಗಲೇ ಕಾನೂನಾಗಿ ಅಂಗೀಕರಿಸಲಾಗಿದೆ ಎಂದು ವಾದಿಸಿದರು. ರೈತ ವಿರೋಧಿ ಕಾನೂನುಗಳಿಗೆ ನಿರ್ಭೀತ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದ ಅಜಿತ್ ಸಿಂಗ್ ಮತ್ತು ಅವರ ಭಾರತ್ ಮಾತಾ ಸಮಾಜದ ನಾಯಕತ್ವವನ್ನು ರೈತರು ಒಪ್ಪಿಕೊಂಡರು.

ಆಗ, ಲಾಹೋರ್ ಮತ್ತು ಅದರ ನೆರೆಹೊರೆಯ ಪ್ರದೇಶಗಳಲ್ಲಿ ಸಾವಿರಾರು ಜನರು ಭಾಗವಹಿಸಿದ ರ‍್ಯಾಲಿಗಳು, ಪ್ರದರ್ಶನಗಳು ಮತ್ತು ಸಾಮೂಹಿಕ ಸಮಾವೇಶಗಳ ನಿಜವಾದ ಅಲೆ ಕಾಣಿಸಿಕೊಂಡಿತು. ಈ ಸಭೆಗಳು ಈ ದಮನಕಾರಿ ಕಾನೂನುಗಳ ಬಗ್ಗೆ ಮತ್ತು ಬ್ರಿಟಿಷ್ ವಸಾಹತುಶಾಹಿಯಿಂದ ಧ್ವಂಸಗೊಂಡ ರಾಷ್ಟ್ರದ ನಿಜವಾದ ಚಿತ್ರಣದ ಬಗ್ಗೆ ಚರ್ಚಿಸಿದವು. ಅಂತಿಮವಾಗಿ ವಿದೇಶಿ ಆಡಳಿತದ ವಿರುದ್ಧ ಸಂಪೂರ್ಣ ದಂಗೆಗಾಗಿ ಪ್ರಚೋದಿಸುವ ಕರೆಯೊಂದಿಗೆ ಕೊನೆಗೊಂಡವು. ಅಜಿತ್ ಸಿಂಗ್ ಅವರ ಭಾಷಣಗಳನ್ನು ಕೇಳದಂತೆ ನಿಷೇಧ ಹೊರಡಿಸಲಾಗಿತ್ತು!

-ಎಐಕೆಎಂಎಸ್ ಪ್ರಕಟಣೆ


ಇದನ್ನೂ ಓದಿ: ದೇಶಕ್ಕಾಗಿ 3 ಯುದ್ಧಗಳಲ್ಲಿ ಹೋರಾಡಿದ್ದೆ; ಆದರೆ ಈಗ ನಾನು ಭಯೋತ್ಪಾದಕ ಅಂತೆ! – 80 ವರ್ಷದ ಗುರುಮುಖ್ ಸಿಂಗ್ ವಿಷಾದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...