Homeಮುಖಪುಟದೇಶಕ್ಕಾಗಿ 3 ಯುದ್ಧಗಳಲ್ಲಿ ಹೋರಾಡಿದ್ದೆ; ಆದರೆ ಈಗ ನಾನು ಭಯೋತ್ಪಾದಕ ಅಂತೆ! - 80 ವರ್ಷದ...

ದೇಶಕ್ಕಾಗಿ 3 ಯುದ್ಧಗಳಲ್ಲಿ ಹೋರಾಡಿದ್ದೆ; ಆದರೆ ಈಗ ನಾನು ಭಯೋತ್ಪಾದಕ ಅಂತೆ! – 80 ವರ್ಷದ ಗುರುಮುಖ್ ಸಿಂಗ್ ವಿಷಾದ

- Advertisement -
- Advertisement -

“ದೇಶಕ್ಕಾಗಿ 3 ಯುದ್ಧಗಳಲ್ಲಿ ಹೋರಾಡಿದ್ದೇನೆ; ಆದರೆ ಈಗ ನಾನು ಭಯೋತ್ಪಾಕ ಅಂತೆ” ಎಂದು ರೈತ ಹೋರಾಟದಲ್ಲಿ ಪಾಲ್ಗೊಂಡು ಬಂಧನವಾಗಿದ್ದ 80 ವರ್ಷದ ಮಾಜಿ ಯೋಧ ಗುರುಮುಖ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ. 15 ದಿನಗಳಿಂದ ಜೈಲಿನಲ್ಲಿದ್ದ ಇವರು ಕೊನೆಗೂ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದಾರೆ.

ಪಂಜಾಬಿನ ಫತೇಗಡ ಸಾಹಿಬ್ ಗ್ರಾಮದ ನಿವಾಸಿ ಸಿಂಗ್ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು. ತರಬೇತಿಯ ಬಳಿಕ 1962, ನವಂಬರ್ ತಿಂಗಳಿನಲ್ಲಿ ಉಭಯ ದೇಶಗಳು ಕದನ ವಿರಾಮವನ್ನು ಘೋಷಿಸುವವರೆಗೆ ಸಿಕ್ಕಿಮ್ ನ ನಾಥು ಲಾ ಪಾಸ್ ನಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು. 1965ರ ಭಾರತ-ಪಾಕಿಸ್ತಾನ ಯುದ್ಧ ಮತ್ತು ಆರು ವರ್ಷಗಳ ಬಳಿಕ ಬಾಂಗ್ಲಾದೇಶ ವಿಮೋಚನಾ ಸಮರದಲ್ಲಿಯೂ ಅವರು ಹೋರಾಡಿದ್ದರು. 22 ವರ್ಷಗಳ ಸುದೀರ್ಘ ಸೇವೆಯ ಬಳಿಕ 1984ರಲ್ಲಿ ಅವರು ಸೇನೆಯಿಂದ ನಿವೃತ್ತಗೊಂಡಿದ್ದರು. ಉತ್ತಮ ಕುಸ್ತಿ ಮತ್ತು ಬಾಕ್ಸಿಂಗ್ ಪಟುವಾಗಿದ್ದ ಸಿಂಗ್ ಒಳ್ಳೆಯ ಕಬಡ್ಡಿ ಆಟಗಾರರೂ ಆಗಿದ್ದರು ಎಂದು ನ್ಯೂಸ್ ಲಾಂಡ್ರಿಯು ವರದಿ ಮಾಡಿದೆ.

ಇದನ್ನೂ ಓದಿ: ರೈತ ಹೋರಾಟ: ದೆಹಲಿ ಗಡಿಗಳಿಗೆ ಹೊರಟ ದಕ್ಷಿಣ ಭಾರತದ 140 ಕ್ಕೂ ಹೆಚ್ಚು ಹೋರಾಟಗಾರರು

“ಸೇನೆಯು ನನಗೆ ತುಂಬ ಪ್ರೀತಿ ಮತ್ತು ಗೌರವವನ್ನು ನೀಡಿತ್ತು. ಈ ದೇಶಕ್ಕಾಗಿ ಮೂರು ಯುದ್ಧಗಳಲ್ಲಿ ನಾನು ಹೋರಾಡಿದ್ದೇನೆ. 10 ಪದಕಗಳನ್ನೂ ಪಡೆದಿದ್ದೇನೆ. ಈಗ ಅವರು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಈ ಅವಮಾನವನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ” ಎಂದು ಗುರುಮುಖ್ ಸಿಂಗ್ ಹೇಳಿದ್ದಾರೆ.

ಜ.25ರಂದು ಗುರುಮುಖ್ ಸಿಂಗ್ ಗಣರಾಜ್ಯೋತ್ಸವ ದಿನದಂದು ಆಯೋಜಿಸಲಾಗಿದ್ದ ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲೆಂದು ತನ್ನ ಗ್ರಾಮದ 25 ರೈತರೊಂದಿಗೆ ದಿಲ್ಲಿ ಗಡಿಯನ್ನು ತಲುಪಿದ್ದರು. ಆದರೆ ಪ್ರಯಾಣದಿಂದ ಸುಸ್ತಾಗಿದ್ದ ಅವರು ಬುರಾರಿಯ ನಿರಂಕಾರಿ ಮೈದಾನದಲ್ಲಿಯ ಟೆಂಟ್‌ನಲ್ಲಿ ಉಳಿದುಕೊಂಡಿದ್ದರು. ಟ್ರಾಕ್ಟರ್ ರ್ಯಾಲಿಗಾಗಲೀ ಕೆಂಪು ಕೋಟೆಗಾಗಲೀ ಅವರು ಹೋಗಿರಲಿಲ್ಲ. ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಫೆ.1ರ ವೇಳೆಗೆ 122 ರೈತರನ್ನು ಪೊಲೀಸರು ಬಂಧಿಸಿದ್ದರು ಮತ್ತು ಅವರಲ್ಲಿ ಗುರುಮುಖ್ ಸಿಂಗ್ ಸೇರಿದ್ದರು.

ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್‌ ಆದ ಕಥೆ

ಟ್ರಾಕ್ಟರ್ ರ್ಯಾಲಿಯ ಮೂರು ದಿನಗಳ ಬಳಿಕ ನಿರಂಕಾರಿ ಮೈದಾನದಲ್ಲಿ ನಿಯೋಜಿತರಾಗಿದ್ದ ಪೊಲೀಸರು ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ರೈತರಿಗೆ ಬೆದರಿಕೆಯೊಡ್ಡಿದ್ದರು. ಜನವರಿ 28ರಂದು ಸಮುದಾಯ ಪಾಕಶಾಲೆಯಲ್ಲಿ ಅಡಿಗೆ ಕೆಲಸಕ್ಕೆ ನೆರವಾದ ಬಳಿಕ ಗುರುಮುಖ್ ಸಿಂಗ್ ತನ್ನ ಟೆಂಟ್‌ಗೆ ಮರಳಿದ್ದರು. ರಾತ್ರಿ 11ರ ಸುಮಾರಿಗೆ ರೈತರು ಮಲಗಲು ಸಜ್ಜಾಗುತ್ತಿದ್ದಾಗ ಏಕಾಏಕಿ ವಿದ್ಯುತ್ ನಿಲುಗಡೆಗೊಂಡಿತ್ತು. ಆಗ ಗುರುಮುಖ್ ಸಿಂಗ್ ಟೆಂಟ್‌ನಿಂದ ಹೊರಬಂದಾಗ ಅವರ ಮೇಲೆ ಮುಗಿಬಿದ್ದ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ ಎಳೆದೊಯ್ದು ಪೊಲೀಸ್ ವ್ಯಾನ್‌ನಲ್ಲಿ ತಳ್ಳಿದ್ದರು. ಅವರೊಂದಿಗೆ ಇನ್ನೂ ಕೆಲವು ರೈತರನ್ನು ಬಂಧಿಸಲಾಗಿತ್ತು ಎಂದು ನ್ಯೂಸ್‌ ಲಾಂಡ್ರಿಯು ವರದಿ ಮಾಡಿದೆ.

ಪೊಲೀಸರು ಗುರುಮುಖ್ ಸಿಂಗ್ ವಿರುದ್ಧ ದಾಖಲಿಸಿರುವ ಎಫ್ಐಆರ್ನಲ್ಲಿ ಅವರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಅವರು ಇದನ್ನು ನಿರಾಕರಿಸಿದ್ದಾರೆ.

ಜಾಮೀನು ಕೋರಿ ಗುರುಮುಖ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ತನಿಖೆಯು ಇನ್ನೂ ಪ್ರಗತಿಯಲ್ಲಿದೆ ಎಂಬ ಕಾರಣವನ್ನು ನೀಡಿ ಫೆ.9ರಂದು ನ್ಯಾಯಾಲಯವು ತಿರಸ್ಕರಿಸಿತ್ತು. ಆದಾಗ್ಯೂ ಮೂರು ದಿನಗಳ ಬಳಿಕ ಅವರ ವಯಸ್ಸು ಮತ್ತು ಅವರ ವಿರುದ್ಧ ಹಿಂದೆ ಯಾವುದೇ ಪ್ರಕರಣಗಳು ಇಲ್ಲದಿರುವುದನ್ನು ಪರಿಗಣಿಸಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.

ಗುರುಮುಖ್ ಸಿಂಗ್ ಈಗ ಸ್ವಗ್ರಾಮಕ್ಕೆ ಮರಳಿದ್ದಾರೆ. “ಪೊಲೀಸರು ನನಗೆ ಭಯೋತ್ಪಾದಕನ ಹಣೆಪಟ್ಟಿಯನ್ನು ಕಟ್ಟಿದ್ದರು. ಸೇನೆಯಲ್ಲಿ ನಾನು 22 ವರ್ಷಗಳ ಸೇವೆ ಸಲ್ಲಿಸಿದ್ದೇನೆ. ಸಾಯುವ ಮೊದಲು ಇದನ್ನು ನಾನು ಕೇಳಬೇಕಿತ್ತೇ” ಎಂದು ಸಿಂಗ್ ಪ್ರಶ್ನಿಸಿದರು.


ಇದನ್ನೂ ಓದಿ: ರೈತ ಹೋರಾಟದ ಬಿಸಿ: ಪಂಜಾಬ್, ಹರಿಯಾಣಗಳಲ್ಲಿ ಜಿಯೋ ಚಂದಾದಾರರ ಗಣನೀಯ ಕುಸಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...