ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸರ್ಕಾರ ಪತನಗೊಂಡಿದೆ. ಆದರೆ ಸರ್ಕಾರ ರಚಿಸಲು ಬಿಜೆಪಿ ಒಪ್ಪದ ಕಾರಣಕ್ಕೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರಲಿದೆ.
ವಿಧಾನಸಭೆಯಲ್ಲಿ ವಿಶ್ವಾಸ ಮತ ಕಳೆದುಕೊಂಡ ನಂತರ ಮುಖ್ಯಮಂತ್ರಿ ವಿ ನಾರಾಯಣಸಾಮಿ ಇಂದು (ಫೆ. 22) ರಾಜೀನಾಮೆಯನ್ನು ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರ್ರಾಜನ್ ಅವರಿಗೆ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿ ಸಾಮಿನಾಥನ್, “ನಾವು ಈ ಹಂತದಲ್ಲಿ ಸರ್ಕಾರವನ್ನು ರಚಿಸಲು ಪ್ರಯತ್ನಿಸುವುದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಜನರ ಆಶೀರ್ವಾದ ಮತ್ತು ಮೋದಿಯವರ ನಾಯಕತ್ವದೊಂದಿಗೆ, ಎನ್ಡಿಎ ಮೈತ್ರಿಯ ಭಾಗವಾಗಿರುವ ಎಐಎಡಿಎಂಕೆ ಜೊತೆ ಸರ್ಕಾರ ರಚಿಸಲಿದ್ದೇವೆ. ಇದು ಪುದುಚೇರಿಯ ಜನರಿಗೆ ಉಜ್ವಲ ಭವಿಷ್ಯವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ – ಮುಖ್ಯಮಂತ್ರಿ ರಾಜೀನಾಮೆ
ಈ ಸರ್ಕಾರದ ಪತನದೊಂದಿಗೆ ಕೇಂದ್ರಾಡಳಿತ ಪ್ರದೇಶದ ಇತಿಹಾಸದಲ್ಲಿ ಕೆಟ್ಟ ಅಧ್ಯಾಯ ಕೊನೆಗೊಂಡಿದೆ ಎಂದು ಬಿಜೆಪಿ ಬಣ್ಣಿಸಿದೆ.
“ಕಳೆದ ಐದು ವರ್ಷಗಳಲ್ಲಿ ಕೇಂದ್ರಾಡಳಿತದ ಹಣಕಾಸನ್ನು ಲೂಟಿ ಮಾಡಲಾಗಿದೆ. ಉದ್ಯೋಗಗಳು, ಪಡಿತರ, ಆರೋಗ್ಯ ರಕ್ಷಣೆ, ರಸ್ತೆಗಳು ಮತ್ತು ಶಿಕ್ಷಣಕ್ಕಾಗಿ ಕೇಂದ್ರವು ಕಳುಹಿಸಿದ ಹಣವನ್ನು ದುರುಪಯೋಗಪಡಿಸಲಾಗಿದೆ” ಎಂದು ಸಾಮಿನಾಥನ್ ಆರೋಪಿಸಿದ್ದಾರೆ.
“ರಾಹುಲ್ ಗಾಂಧಿಯವರ ಭೇಟಿಯ ಸಮಯದಲ್ಲಿ ಬಡ ಮಹಿಳೆಯರು ಚಂಡಮಾರುತದ ಪರಿಣಾಮದಿಂದ ಬಳಲುತ್ತಿರುವ ಬಗ್ಗೆ ದೂರು ನೀಡಿರುವುದನ್ನು ನೀವು ಕಂಡಿದ್ದೀರಿ. ಭ್ರಷ್ಟಾಚಾರ ಮತ್ತು ಶೋಷಣೆಯ ಸಂಸ್ಕೃತಿಯನ್ನು ಮಾತ್ರ ಕಾಂಗ್ರೆಸ್ ಮತ್ತು ಡಿಎಂಕೆ ನೀಡಿದೆ. ಪುದುಚೇರಿಯ ಜನರು ಮುಂಬರುವ ಚುನಾವಣೆಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25 ರಂದು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ‘ಇದೇನಾ ಅಚ್ಚೇ ದಿನ್’- ಮುಂಬೈಯ ಬೀದಿ ಬೀದಿಗಳಲ್ಲಿ ಬ್ಯಾನರ್ ಅಳವಡಿಸಿದ ಶಿವಸೇನೆ!