ಕ್ಯಾಟಗರಿ 2ಎ ಮೀಸಲಾತಿಗೆ ಒತ್ತಾಯಿಸಿ ಬೃಹತ್ ಪಾದಯಾತ್ರೆ ನಡೆಸಿರುವ ಲಿಂಗಾಯತ ಪಂಚಮಸಾಲಿ ಸಮುದಾಯವು ಬೆಂಗಳೂರಿನಲ್ಲಿ ಭಾನುವಾರ ಮಹಾರ್ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಲಿದೆ. ಈ ರ್ಯಾಲಿಯಲ್ಲಿ ಸಮುದಾಯದ ಸುಮಾರು 10 ಲಕ್ಷ ಜನ ಸೇರಬಹುದು ಎಂದು ಮುಖಂಡರು ಅಂದಾಜಿಸಿದ್ದಾರೆ.
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ 38 ದಿನಗಳ ಪಾದಯಾತ್ರೆ ಶನಿವಾರ ಅಂತಿಮ ಘಟ್ಟಕ್ಕೆ ಬಂದಿದ್ದು, ಇಂದು (ಪೆ. 21) ಬೆಂಗಳೂರಿನ ಅರಮನೆ ಮೈದಾನದಲ್ಲಿ 21ರಂದು ಮಹಾರ್ಯಾಲಿ ಮೂಲಕ ಮುಕ್ತಾಯಗೊಳ್ಳಲಿದೆ.
2 ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿದ್ದು, ಇದಕ್ಕಿಂತ ಹೆಚ್ಚು ಜನ ಸೇರಿದರೂ ಕುಳಿತುಕೊಳ್ಳಲು ತೊಂದರೆಯಾಗದಂತೆ ಮ್ಯಾಟ್ಗಳನ್ನು ಹಾಕಲಾಗಿದೆ. ಒಟ್ಟು ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಮಧ್ಯದಲ್ಲಿ ಅತಿಗಣ್ಯರಿಗೆ ಅಂದರೆ ಜನಪ್ರತಿನಿಧಿಗಳಿಗೆ, ಬಲ ಮತ್ತು ಎಡಭಾಗದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಪದಾಧಿಕಾರಿಗಳಿಗೆ ಮೀಸಲಿಡಲಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!
“ಮಹಾರ್ಯಾಲಿಯಲ್ಲಿ ಹತ್ತು ಲಕ್ಷ ಜನ ಸೇರಿದರೂ ಊಟದ ಕೊರತೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಉತ್ತರ ಕರ್ನಾಟಕದಿಂದ ನಮ್ಮ ಸಮಾಜದವರು 2.5 ಲಕ್ಷ ರೊಟ್ಟಿ ತಂದಿದ್ದಾರೆ. ಜೊತೆಗೆ ಪಲಾವ್ ಮತ್ತು ಮಜ್ಜಿಗೆ ನೀಡಲಾಗುತ್ತದೆ. 18 ಜಿಲ್ಲೆಗಳಿಂದ 10 ಲಕ್ಷಕ್ಕೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆಯಿದೆ” ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಘಟಕದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, “ಸುಮಾರು 600 ಕಿ.ಮೀ. ಪಾದಯಾತ್ರೆಯು ಮುಕ್ತಾಯವಾಗಿದೆ. ಆದರೂ ಬೇಡಿಕೆ ಈಡೇರಿಸುವ ಬಗ್ಗೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮೀಸಲಾತಿಗಾಗಿ ಮಹಾರ್ಯಾಲಿಯಲ್ಲಿ ಮತ್ತೊಮ್ಮೆ ಒತ್ತಾಯಿಸಲಾಗುವುದು. ನಂತರ ವಿಧಾನಸೌಧದವರೆಗೆ ತೆರಳಿ ಧರಣಿ ನಡೆಸಲಾಗುವುದು. ಸರ್ಕಾರಕ್ಕೆ ಮಾರ್ಚ್ 4ರವರೆಗೆ ಗಡುವು ನೀಡುತ್ತೆವೆ. ಒಪ್ಪದಿದ್ದರೆ ಮಾರ್ಚ್ 5ರಿಂದ ವಿಧಾನಸೌಧ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್ ಬರಹ


