Homeಅಂಕಣಗಳುಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ.

- Advertisement -
- Advertisement -

ಕ್ರಿಕೆಟ್‌ನಲ್ಲಿ ಮೀಸಲಾತಿ ನಿಯಮ ಬಂದರೆ ಹೇಗಿರುತ್ತೆ?

* ದಲಿತ ಆಟಗಾರರಿಗೆ ಬೌಂಡರಿ ಲೈನ್ 15 ಗಜ ಕಡಿಮೆ ಇರುತ್ತೆ.

* ಬೌಂಡರಿಗಳನ್ನು ಸಿಕ್ಸರ್ ಎಂದು ಪರಿಗಣಿಸಲಾಗುತ್ತೆ.

* ಸಿಕ್ಸರ್‌ಗಳನ್ನು 8 ರನ್ ಎಂದು ಪರಿಗಣಿಸಲಾಗುತ್ತೆ.

* ದಲಿತ ಬೌಲರ್‌ಗಳಿಗೆ ಒಂದು ಓವರ್‌ನಲ್ಲಿ ಆರು ಬಾಲ್‌ಗಳ ಬದಲಾಗಿ ಐದು ಬಾಲ್‌ಗಳಿರುತ್ತವೆ.

* ದಲಿತ ಫೀಲ್ಡರ್‌ಗಳು ಪಿಚ್ ಕ್ಯಾಚ್ ಹಿಡಿಯಬಹುದು.

ಇಂತಹದ್ದೊಂದು SMS ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಹಲವರು ಆನಂದಿಸುತ್ತಿದ್ದಾರೆ ಕೂಡ. ಆದರೆ ಈ SMSನಲ್ಲಿ ಮೇಲ್ವರ್ಗದವರಿಗೆ ದಲಿತರ ಬಗ್ಗೆ, ಹಿಂದುಳಿದವರ ಬಗ್ಗೆ ಎಂತಹ ತಾತ್ಸಾರ ಇದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ SMSನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ’ದಲಿತರಲ್ಲಿ ಯಾವುದೇ ರೀತಿಯ ಪ್ರತಿಭೆ ಇಲ್ಲ; ಅವರಿಗೆ ಭಾರತದ ಕ್ರಿಕೆಟ್ ಟೀಮ್‌ನಲ್ಲಿ ಮೀಸಲಾತಿ ಕೊಟ್ಟು ಜಾಗ ಕಲ್ಪಿಸಿದರೂ ಅವರಿಗೆ ವಿಶೇಷ ರಿಯಾಯಿತಿಗಳನ್ನು ತೋರಿಸಬೇಕು’ ಎಂಬುದೇ ಆಗಿದೆ.

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ. ಇವರ ನಿಲುವು ಅಮಾನವೀಯ ಜಾತಿಪದ್ಧತಿಯನ್ನು ಪೊರೆಯುವುದರಿಂದ ನಮ್ಮ ಸಂವಿಧಾನದ ವಿರುದ್ಧವೂ ಆಗಿದೆ-ಅಂದರೆ ಸಂವಿಧಾನಬಾಹಿರವೂ, ದೇಶದ್ರೋಹದ ಕೃತ್ಯವೂ ಆಗಿದೆ.

ಒಂದುಕ್ಷಣ ಶತಮಾನಗಳ ಕಾಲದಿಂದ ಈ ದೇಶವನ್ನು ಆಳುತ್ತಿರುವ ಮೇಲುಜಾತಿ ಮತ್ತು ಮೇಲುವರ್ಗದವರಲ್ಲೇ ಪ್ರತಿಭೆ ಇದೆ ಎಂದು ಭಾವಿಸೋಣ. ಅದು ಸತ್ಯವಾಗಿದ್ದರೆ ಯಾಕೆ ನಮ್ಮ ಈ ಬೃಹತ್ ದೇಶ ಬ್ರಿಟಿಷರ ವಶವಾಯಿತು? ಯಾಕೆ ಇವತ್ತು ಭಾರತ ಅತಿ ಭ್ರಷ್ಟ ರಾಷ್ಟ್ರಗಳಲ್ಲಿ ಒಂದಾಗಿದೆ? ಯಾಕೆ ಇಲ್ಲಿ ಇನ್ನೂ ಬಡತನ, ಅನಾರೋಗ್ಯ, ಹಸಿವು ತಾಂಡವವಾಡುತ್ತಿದೆ? ಇದಕ್ಕೆಲ್ಲ ಕಾರಣ ಮೇಲುಜಾತಿ, ಮೇಲುವರ್ಗದವರಲ್ಲಿ ಕಿಂಚಿತ್ತೂ ಪ್ರತಿಭೆ ಇಲ್ಲದಿರುವುದು ಎಂದು ತರ್ಕಿಸಬಹುದಲ್ಲವೇ? ತಾವೇ ಉತ್ತಮರು, ಪ್ರತಿಭಾವಂತರು ಎಂಬ ಮೇಲುವರ್ಗದವರ ಕಲ್ಪನೆ ಈ ವಾಸ್ತವಾಂಶಗಳ ಎದುರು ಇನ್ನು ಜೀವಂತವಾಗಿರುವುದೇ ಅವರ ಒಣ ತಿಮಿರಿಗೆ ಸಾಕ್ಷಿ.

ಇತಿಹಾಸದಲ್ಲೂ ಅಷ್ಟೆ. ವೇದ, ಪುರಾಣ ಇತ್ಯಾದಿ ನಿರುಪಯುಕ್ತ ಜ್ಞಾನಗಳ ಭಂಡಾರಗಳಾಗಿದ್ದ ಬ್ರಾಹ್ಮಣಶಾಹಿ ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಮಾಡಿದ್ದೇನು? ಧೀರ ಯೋಧರಾದ ಕ್ಷತ್ರಿಯರು ಈ ದೇಶವನ್ನು ವಸಾಹತುಗಳಿಂದ ರಕ್ಷಿಸಿದ ಪರಿ ಎಂತಹದ್ದು? ಲೆಕ್ಕಾಚಾರದಲ್ಲಿ ನಿಸ್ಸೀಮರಾದ ವೈಶ್ಯರು ಇಲ್ಲಿನ ಜನರ ಸ್ವಾವಲಂಬನೆಗೆ ಕಡಿದಿದ್ದಾದರೂ ಏನನ್ನು? ವೇದಗಳ ಹೆಸರಲ್ಲಿ ಜನರ ಶೋಷಣೆ, ರಕ್ಷಣೆ ಹೆಸರಲ್ಲಿ ದಳ್ಳುರಿ, ವ್ಯವಹಾರದ ಹೆಸರಲ್ಲಿ ಜನರಿಗೆ ಮೋಸ ಇದೇ ಈ ಪ್ರತಿಭಾವಂತರ ಆಸಲಿ ಕೊಡುಗೆ!

ಪ್ರತಿಭೆ ದಕ್ಕುವುದು ಜಾತಿಯಿಂದ ಎಂಬುದಂತೂ ಶುದ್ಧ ಸುಳ್ಳು, ಬದಲಾಗಿ ಬೌದ್ಧಿಕ-ಭೌತಿಕ ಸಂಪನ್ಮೂಲಗಳನ್ನು ಪಡೆಯುವುದರಿಂದ ಪ್ರತಿಭೆ ಅರಳುತ್ತದೆ. ಆದರೆ ಹಿಂದೆ ಈ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಸಿಗದಂತೆ ನೋಡಿಕೊಳ್ಳುವುದಕ್ಕೆ ಜಾತಿವ್ಯವಸ್ಥೆ ಇದ್ದರೆ, ಇವತ್ತಿಗೂ ಆ ಜಾತಿವ್ಯವಸ್ಥೆಯ ’ಸ್ವಹಿತಾಸಕ್ತಿಗಳು’ ಇವೆ. ಆದ್ದರಿಂದಲೇ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇವತ್ತಿಗೂ ಮೀಸಲಾತಿಯ ಅವಕಾಶವನ್ನು ಪಡೆದು ಮೇಲೆ ಬಂದವರ ಪ್ರಮಾಣ ಅತಿಕಡಿಮೆ ಇದೆ. ಸರ್ಕಾರವೇನೋ ತನ್ನ ಕಚೇರಿಗಳಲ್ಲಿ, ಸಾರ್ವಜನಿಕ ಉದ್ಯಮಗಳಲ್ಲಿ ಹಿಂದುಳಿದವರಿಗೆ, ದಲಿತರಿಗೆ ಮೀಸಲಾತಿ ಆಧಾರದ ಮೇಲೆ ಹುದ್ದೆಗಳನ್ನು ನೀಡುತ್ತೆ. ಆದರೆ ಈಗಲೂ ಸರ್ಕಾರಿ ಕಚೇರಿಗಳಲ್ಲಿ ಶೇ.50 ರಷ್ಟು ಹುದ್ದೆಗಳು, ಸಾರ್ವಜನಿಕ ಉದ್ಯಮಗಳಲ್ಲಿ ಶೇ.80ರಷ್ಟು ಮೀಸಲು ಹುದ್ದೆಗಳು ಖಾಲಿ ಬಿದ್ದಿರುತ್ತ. ಅಂದರೆ ಏನರ್ಥ? ಆರ್ಥ ಇಷ್ಟೇ: ಮೀಸಲಾತಿ ಆಧಾರದ ಮೇಲೆ ಕೆಲಸ ನೀಡಬಹುದು, ಆದರೆ ಆ ಕೆಲಸಕ್ಕೆ ಸೇರಲು ಅವರಿಗೆ ಬೇಕಾದ ಶಿಕ್ಷಣವನ್ನು, ಆ ಶಿಕ್ಷಣವನ್ನು ಪಡೆಯುವಷ್ಟು ಸೌಲತ್ತುಗಳನ್ನು ಸರ್ಕಾರ ಅವರಿಗೆ ನೀಡಿಲ್ಲ. ಆದು ದಲಿತ, ಹಿಂದುಳಿದವರ ತಪ್ಪಲ್ಲ, ಬದಲಾಗಿ ವ್ಯವಸ್ಥೆ ಎಸಗಿರುವ ಘೋರ ಅಪರಾಧ. ಇದನ್ನು ಅರಿಯದ ಮೇಲುವರ್ಗ ಹಿಂದುಳಿದವರ ವಿರುದ್ಧ ಕೆಂಡ ಕಾರುತ್ತಿದೆ.

ಮೊನ್ನೆ, ಮೀಸಲಾತಿಯನ್ನು ವಿರೋಧಿಸುವ ಆಧ್ಯಾಪಕಿಯೊಬ್ಬರು (ಅವರೂ ಮೇಲ್ಜಾತಿ ಲಿಂಗವಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ) ತಮ್ಮ ಭಂಡ ವಾದವನ್ನು ಮಂಡಿಸುತ್ತಾ “ನಾವ್ಯಾಕ್ರಿ ಅವರಿಗೆ ಬಿಟ್ಟುಕೊಡಬೇಕು? ಪ್ರತಿಭೆ ಇದ್ದರೆ ಅವರೇ ಮುಂದೆ ಬರುತ್ತಾರೆ” ಎಂದರು. ಅಷ್ಟೇ ಅಲ್ಲ “ವಿಶ್ವೇಶ್ವರಯ್ಯ ಬಡವರಾಗಿದ್ದರೂ ಬೀದಿದೀಪದ ಅಡಿ ಓದುತ್ತಾ ಮುಂದೆ ಬರಲಿಲ್ಲವೇ?” ಅಂತ ಪ್ರಶ್ನಿಸಿದರು. “ನಿಮಗೆ ಉತ್ತರವಾಗಿ ನಮ್ಮ ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣನ್ ಹಾಗೂ ಅಬ್ದುಲ್ ಕಲಾಂರವರ ಉದಾಹರಣೆ ನೀಡಬಲ್ಲೆ. ಈ ದಲಿತ, ಮುಸ್ಲಿಮರಲ್ಲೂ ಪ್ರತಿಭೆ ಇದ್ದದ್ದಕ್ಕೇ ಅವರು ಮುಂದೆ ಬಂದಿದ್ದು. ಆದರೆ ಆ ವರ್ಗದವರಲ್ಲಿ ಪ್ರತಿಭೆ ಇಲ್ಲ ಅಂತ ಹೇಗೆ ಹೇಳುತ್ತೀರಿ? ಸೂಕ್ತ ಅವಕಾಶಗಳನ್ನು ನೀಡಿದರೆ, ಲಕ್ಷಾಂತರ ನಾರಾಯಣ್‌ಗಳೂ, ಕಲಾಂಗಳೂ ಬೆಳಕಿಗೆ ಬರುತ್ತಾರೆ. ಮೇಲುಜಾತಿಯವರ ಆಳ್ವಿಕೆಯಲ್ಲಿ ಈ ದೇಶ ಉದ್ಧಾರ ಆಗಿದ್ದು ಅಷ್ಟಕಷ್ಟೇ. ಈಗ ಇವರಿಗೆ ಅವಕಾಶ ಕೊಟ್ಟು ನೋಡೋಣ. ಆವರಾದರೂ ಈ ದೇಶವನ್ನು ಉಳಿಸಬಹುದು” ಅಂದೆ. “ನಾವ್ಯಾಕೆ ಕೊಡಬೇಕು” ಎಂದು ಹೇಳಿದ್ದ ಅವರಲ್ಲಿ “ನಾವು” ಎಂಬ ಸರ್ವಾಧಿಕಾರಿ ಧೋರಣೆ ಮತ್ತು “ಕೊಡಬೇಕು” ಎಂಬ ಪದದಲ್ಲಿ ಅಸಡ್ಡೆ ಎಷ್ಟಿತ್ತೆಂದರೆ ಅವರೊಂದಿಗೆ ವಾದ ಮಾಡುವುದೂ ನಿರರ್ಥಕ ಎನ್ನಿಸಿ ಸುಮ್ಮನಾದೆ.

ಈ ವರ್ಗದ ಧಿಮಾಕು ಎಂತಹದ್ದೆಂದರೆ, ಅವರಿಗಿಂತಲೂ ಆಪಾರ ಸಂಖ್ಯೆಯಲ್ಲಿರುವ ಹಿಂದುಳಿದವರು ಮತ್ತು ದಲಿತರಿಂದ ತೆರಿಗೆ ಪಡೆಯುವ ಸರ್ಕಾರ ಅವರಿಗೆ ತನ್ನ ಶಾಲಾ, ಕಾಲೇಜುಗಳಲ್ಲಿ ಮೀಸಲಾತಿ ನೀಡಿದರೆ ವಿರೋಧಿಸುತ್ತಾರೆ. “ಪ್ರತಿಭೆ ಇಲ್ಲದವರಿಗೆ ಇಲ್ಲಿ ಯಾಕೆ ಜಾಗ?” ಎಂದು ಕೆಂಡ ಕಾರುತ್ತಾರೆ. ಆದರೆ, ಅವರ ವರ್ಗಕ್ಕೇ ಸೇರಿರುವ ಜನ ಬಡವರ ಭೂಮಿ ದೋಚಿ, ಸರ್ಕಾರದ ಸವಲತ್ತುಗಳನ್ನು ಪಡೆದು ಕ್ಯಾಪಿಟೇಶನ್ ಕಾಲೇಜಿನ ಹೆಸರಲ್ಲಿ ಪ್ರತಿಭೆ ಇಲ್ಲದ ಹಣವಂತರಿಗೆ ಸೀಟು ಕೊಡುವುದನ್ನು ಒಮ್ಮೆಯೂ ಪ್ರಶ್ನಿಸುವುದಿಲ್ಲ. “ಏನ್ರೀ, ಪ್ರತಿಭೆ ಇಲ್ಲದವರೆಲ್ಲ ಈ ಶಿಕ್ಷಣ ಅಂಗಡಿಗಳಲ್ಲಿ ಡಾಕ್ಟರ್‌ರರೂ, ಇಂಜಿನಿಯರೂ ಆಗ್ತಿದ್ದಾರಲ್ರಿ?” ಎಂದು ಪ್ರತಿಭಟಿಸುವುದೂ ಇಲ್ಲ.

ಇಲ್ಲಿ ಕರ್ನಾಟಕದ ರಾಜಕೀಯ ವಲಯದಲ್ಲಿನ ಒಂದೆರಡು ಉದಾಹರಣೆಗಳನ್ನು ಕೊಡಬಹುದು, ಎಲ್ಲರಿಗೂ ಗೊತ್ತಿರುವಂತೆ ಈ ರಾಜ್ಯ ಹೆಚ್ಚು ಲಿಂಗಾಯತ, ಹಲವು ಒಕ್ಕಲಿಗ, ಎರಡು ಬ್ರಾಹ್ಮಣ ಮತ್ತು ಕೆಲವು ಹಿಂದುಳಿದ ವರ್ಗದಿಂದ ಬಂದ ಮುಖ್ಯಮಂತ್ರಿಗಳನ್ನು ಕಂಡಿದೆ. ಅವರಲ್ಲೆಲ್ಲಾ ಸಾಮಾಜಿಕ ನ್ಯಾಯಕ್ಕಾಗಿ ದಕ್ಷತೆಯಿಂದ ದುಡಿದವರೆಂದರೆ ಹಿಂದುಳಿದ ವರ್ಗದ ದೇವರಾಜ ಅರಸು ಮತ್ತು ವೀರಪ್ಪ ಮೊಯ್ಲಿ ಮಾತ್ರ. ಹಾಗೆಯೇ ರಾಮಕೃಷ್ಣ ಹೆಗಡೆ ಅಧಿಕಾರಾವಧಿಗೆ ವರ್ಚಸ್ಸು ತಂದು ಕೊಟ್ಟವರು ಮುಸ್ಲಿಮರಾಗಿದ್ದ ನಜೀರ್ ಸಾಬರು. ಮಿಕ್ಕಂತೆ ಎಲ್ಲಾ ಮೇಲುವರ್ಗದ, ಮೇಲುಜಾತಿಯ ಮುಖ್ಯಮಂತ್ರಿಗಳು ಮಾಡಿದ್ದು ಬರೀ ತೌಡು ಕುಟ್ಟುವ ಕೆಲಸ!

ಆದ್ದರಿಂದ, ಹಿಂದುಳಿದ-ದಲಿತ ಜಾತಿಗಳಿಗೆ ಪ್ರತಿಭೆ ಇಲ್ಲ ಎಂದು ಹೇಳುವುದು ಎಷ್ಟು ಸುಳ್ಳೋ, ಹಾಗೆಯೇ ಈ ದೇಶದಲ್ಲಿ ಜಾತಿ ಆಧಾರದಲ್ಲಿ ಸಾಮಾಜಿಕ ಆರ್ಥಿಕ ವಂಚನೆ ನಡೆಯುತ್ತಿದೆ ಎಂಬುದೂ ಅಷ್ಟೇ ಸತ್ಯ. ಮೀಸಲಾತಿ ಎಂಬ ಸಾಧನದ ಮೂಲಕ ಈ ಜಾತಿ ಆಧಾರಿತ ತಾರತಮ್ಯಗಳನ್ನು ನಿವಾರಿಸುವ ಪ್ರಯತ್ನ ಇದೆಯೇ ಹೊರತು ಪ್ರತಿಭೆ ಇಲ್ಲದಿದ್ದರೂ ನೀಡುವ ವಿಶೇಷ ಸವಲತ್ತೇನಲ್ಲ.

(ಇದು ಮೇ 17, 2016ರಂದು ಗೌರಿ ಲಂಕೇಶ್‌ರವರು ಬರೆದ ಕಂಡಹಾಗೆ ಅಂಕಣದ ಆಯ್ದ ಭಾಗ)


ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...