Homeಅಂಕಣಗಳುಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ.

- Advertisement -
- Advertisement -

ಕ್ರಿಕೆಟ್‌ನಲ್ಲಿ ಮೀಸಲಾತಿ ನಿಯಮ ಬಂದರೆ ಹೇಗಿರುತ್ತೆ?

* ದಲಿತ ಆಟಗಾರರಿಗೆ ಬೌಂಡರಿ ಲೈನ್ 15 ಗಜ ಕಡಿಮೆ ಇರುತ್ತೆ.

* ಬೌಂಡರಿಗಳನ್ನು ಸಿಕ್ಸರ್ ಎಂದು ಪರಿಗಣಿಸಲಾಗುತ್ತೆ.

* ಸಿಕ್ಸರ್‌ಗಳನ್ನು 8 ರನ್ ಎಂದು ಪರಿಗಣಿಸಲಾಗುತ್ತೆ.

* ದಲಿತ ಬೌಲರ್‌ಗಳಿಗೆ ಒಂದು ಓವರ್‌ನಲ್ಲಿ ಆರು ಬಾಲ್‌ಗಳ ಬದಲಾಗಿ ಐದು ಬಾಲ್‌ಗಳಿರುತ್ತವೆ.

* ದಲಿತ ಫೀಲ್ಡರ್‌ಗಳು ಪಿಚ್ ಕ್ಯಾಚ್ ಹಿಡಿಯಬಹುದು.

ಇಂತಹದ್ದೊಂದು SMS ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಹಲವರು ಆನಂದಿಸುತ್ತಿದ್ದಾರೆ ಕೂಡ. ಆದರೆ ಈ SMSನಲ್ಲಿ ಮೇಲ್ವರ್ಗದವರಿಗೆ ದಲಿತರ ಬಗ್ಗೆ, ಹಿಂದುಳಿದವರ ಬಗ್ಗೆ ಎಂತಹ ತಾತ್ಸಾರ ಇದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ SMSನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ’ದಲಿತರಲ್ಲಿ ಯಾವುದೇ ರೀತಿಯ ಪ್ರತಿಭೆ ಇಲ್ಲ; ಅವರಿಗೆ ಭಾರತದ ಕ್ರಿಕೆಟ್ ಟೀಮ್‌ನಲ್ಲಿ ಮೀಸಲಾತಿ ಕೊಟ್ಟು ಜಾಗ ಕಲ್ಪಿಸಿದರೂ ಅವರಿಗೆ ವಿಶೇಷ ರಿಯಾಯಿತಿಗಳನ್ನು ತೋರಿಸಬೇಕು’ ಎಂಬುದೇ ಆಗಿದೆ.

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ. ಇವರ ನಿಲುವು ಅಮಾನವೀಯ ಜಾತಿಪದ್ಧತಿಯನ್ನು ಪೊರೆಯುವುದರಿಂದ ನಮ್ಮ ಸಂವಿಧಾನದ ವಿರುದ್ಧವೂ ಆಗಿದೆ-ಅಂದರೆ ಸಂವಿಧಾನಬಾಹಿರವೂ, ದೇಶದ್ರೋಹದ ಕೃತ್ಯವೂ ಆಗಿದೆ.

ಒಂದುಕ್ಷಣ ಶತಮಾನಗಳ ಕಾಲದಿಂದ ಈ ದೇಶವನ್ನು ಆಳುತ್ತಿರುವ ಮೇಲುಜಾತಿ ಮತ್ತು ಮೇಲುವರ್ಗದವರಲ್ಲೇ ಪ್ರತಿಭೆ ಇದೆ ಎಂದು ಭಾವಿಸೋಣ. ಅದು ಸತ್ಯವಾಗಿದ್ದರೆ ಯಾಕೆ ನಮ್ಮ ಈ ಬೃಹತ್ ದೇಶ ಬ್ರಿಟಿಷರ ವಶವಾಯಿತು? ಯಾಕೆ ಇವತ್ತು ಭಾರತ ಅತಿ ಭ್ರಷ್ಟ ರಾಷ್ಟ್ರಗಳಲ್ಲಿ ಒಂದಾಗಿದೆ? ಯಾಕೆ ಇಲ್ಲಿ ಇನ್ನೂ ಬಡತನ, ಅನಾರೋಗ್ಯ, ಹಸಿವು ತಾಂಡವವಾಡುತ್ತಿದೆ? ಇದಕ್ಕೆಲ್ಲ ಕಾರಣ ಮೇಲುಜಾತಿ, ಮೇಲುವರ್ಗದವರಲ್ಲಿ ಕಿಂಚಿತ್ತೂ ಪ್ರತಿಭೆ ಇಲ್ಲದಿರುವುದು ಎಂದು ತರ್ಕಿಸಬಹುದಲ್ಲವೇ? ತಾವೇ ಉತ್ತಮರು, ಪ್ರತಿಭಾವಂತರು ಎಂಬ ಮೇಲುವರ್ಗದವರ ಕಲ್ಪನೆ ಈ ವಾಸ್ತವಾಂಶಗಳ ಎದುರು ಇನ್ನು ಜೀವಂತವಾಗಿರುವುದೇ ಅವರ ಒಣ ತಿಮಿರಿಗೆ ಸಾಕ್ಷಿ.

ಇತಿಹಾಸದಲ್ಲೂ ಅಷ್ಟೆ. ವೇದ, ಪುರಾಣ ಇತ್ಯಾದಿ ನಿರುಪಯುಕ್ತ ಜ್ಞಾನಗಳ ಭಂಡಾರಗಳಾಗಿದ್ದ ಬ್ರಾಹ್ಮಣಶಾಹಿ ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಮಾಡಿದ್ದೇನು? ಧೀರ ಯೋಧರಾದ ಕ್ಷತ್ರಿಯರು ಈ ದೇಶವನ್ನು ವಸಾಹತುಗಳಿಂದ ರಕ್ಷಿಸಿದ ಪರಿ ಎಂತಹದ್ದು? ಲೆಕ್ಕಾಚಾರದಲ್ಲಿ ನಿಸ್ಸೀಮರಾದ ವೈಶ್ಯರು ಇಲ್ಲಿನ ಜನರ ಸ್ವಾವಲಂಬನೆಗೆ ಕಡಿದಿದ್ದಾದರೂ ಏನನ್ನು? ವೇದಗಳ ಹೆಸರಲ್ಲಿ ಜನರ ಶೋಷಣೆ, ರಕ್ಷಣೆ ಹೆಸರಲ್ಲಿ ದಳ್ಳುರಿ, ವ್ಯವಹಾರದ ಹೆಸರಲ್ಲಿ ಜನರಿಗೆ ಮೋಸ ಇದೇ ಈ ಪ್ರತಿಭಾವಂತರ ಆಸಲಿ ಕೊಡುಗೆ!

ಪ್ರತಿಭೆ ದಕ್ಕುವುದು ಜಾತಿಯಿಂದ ಎಂಬುದಂತೂ ಶುದ್ಧ ಸುಳ್ಳು, ಬದಲಾಗಿ ಬೌದ್ಧಿಕ-ಭೌತಿಕ ಸಂಪನ್ಮೂಲಗಳನ್ನು ಪಡೆಯುವುದರಿಂದ ಪ್ರತಿಭೆ ಅರಳುತ್ತದೆ. ಆದರೆ ಹಿಂದೆ ಈ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಸಿಗದಂತೆ ನೋಡಿಕೊಳ್ಳುವುದಕ್ಕೆ ಜಾತಿವ್ಯವಸ್ಥೆ ಇದ್ದರೆ, ಇವತ್ತಿಗೂ ಆ ಜಾತಿವ್ಯವಸ್ಥೆಯ ’ಸ್ವಹಿತಾಸಕ್ತಿಗಳು’ ಇವೆ. ಆದ್ದರಿಂದಲೇ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇವತ್ತಿಗೂ ಮೀಸಲಾತಿಯ ಅವಕಾಶವನ್ನು ಪಡೆದು ಮೇಲೆ ಬಂದವರ ಪ್ರಮಾಣ ಅತಿಕಡಿಮೆ ಇದೆ. ಸರ್ಕಾರವೇನೋ ತನ್ನ ಕಚೇರಿಗಳಲ್ಲಿ, ಸಾರ್ವಜನಿಕ ಉದ್ಯಮಗಳಲ್ಲಿ ಹಿಂದುಳಿದವರಿಗೆ, ದಲಿತರಿಗೆ ಮೀಸಲಾತಿ ಆಧಾರದ ಮೇಲೆ ಹುದ್ದೆಗಳನ್ನು ನೀಡುತ್ತೆ. ಆದರೆ ಈಗಲೂ ಸರ್ಕಾರಿ ಕಚೇರಿಗಳಲ್ಲಿ ಶೇ.50 ರಷ್ಟು ಹುದ್ದೆಗಳು, ಸಾರ್ವಜನಿಕ ಉದ್ಯಮಗಳಲ್ಲಿ ಶೇ.80ರಷ್ಟು ಮೀಸಲು ಹುದ್ದೆಗಳು ಖಾಲಿ ಬಿದ್ದಿರುತ್ತ. ಅಂದರೆ ಏನರ್ಥ? ಆರ್ಥ ಇಷ್ಟೇ: ಮೀಸಲಾತಿ ಆಧಾರದ ಮೇಲೆ ಕೆಲಸ ನೀಡಬಹುದು, ಆದರೆ ಆ ಕೆಲಸಕ್ಕೆ ಸೇರಲು ಅವರಿಗೆ ಬೇಕಾದ ಶಿಕ್ಷಣವನ್ನು, ಆ ಶಿಕ್ಷಣವನ್ನು ಪಡೆಯುವಷ್ಟು ಸೌಲತ್ತುಗಳನ್ನು ಸರ್ಕಾರ ಅವರಿಗೆ ನೀಡಿಲ್ಲ. ಆದು ದಲಿತ, ಹಿಂದುಳಿದವರ ತಪ್ಪಲ್ಲ, ಬದಲಾಗಿ ವ್ಯವಸ್ಥೆ ಎಸಗಿರುವ ಘೋರ ಅಪರಾಧ. ಇದನ್ನು ಅರಿಯದ ಮೇಲುವರ್ಗ ಹಿಂದುಳಿದವರ ವಿರುದ್ಧ ಕೆಂಡ ಕಾರುತ್ತಿದೆ.

ಮೊನ್ನೆ, ಮೀಸಲಾತಿಯನ್ನು ವಿರೋಧಿಸುವ ಆಧ್ಯಾಪಕಿಯೊಬ್ಬರು (ಅವರೂ ಮೇಲ್ಜಾತಿ ಲಿಂಗವಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ) ತಮ್ಮ ಭಂಡ ವಾದವನ್ನು ಮಂಡಿಸುತ್ತಾ “ನಾವ್ಯಾಕ್ರಿ ಅವರಿಗೆ ಬಿಟ್ಟುಕೊಡಬೇಕು? ಪ್ರತಿಭೆ ಇದ್ದರೆ ಅವರೇ ಮುಂದೆ ಬರುತ್ತಾರೆ” ಎಂದರು. ಅಷ್ಟೇ ಅಲ್ಲ “ವಿಶ್ವೇಶ್ವರಯ್ಯ ಬಡವರಾಗಿದ್ದರೂ ಬೀದಿದೀಪದ ಅಡಿ ಓದುತ್ತಾ ಮುಂದೆ ಬರಲಿಲ್ಲವೇ?” ಅಂತ ಪ್ರಶ್ನಿಸಿದರು. “ನಿಮಗೆ ಉತ್ತರವಾಗಿ ನಮ್ಮ ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣನ್ ಹಾಗೂ ಅಬ್ದುಲ್ ಕಲಾಂರವರ ಉದಾಹರಣೆ ನೀಡಬಲ್ಲೆ. ಈ ದಲಿತ, ಮುಸ್ಲಿಮರಲ್ಲೂ ಪ್ರತಿಭೆ ಇದ್ದದ್ದಕ್ಕೇ ಅವರು ಮುಂದೆ ಬಂದಿದ್ದು. ಆದರೆ ಆ ವರ್ಗದವರಲ್ಲಿ ಪ್ರತಿಭೆ ಇಲ್ಲ ಅಂತ ಹೇಗೆ ಹೇಳುತ್ತೀರಿ? ಸೂಕ್ತ ಅವಕಾಶಗಳನ್ನು ನೀಡಿದರೆ, ಲಕ್ಷಾಂತರ ನಾರಾಯಣ್‌ಗಳೂ, ಕಲಾಂಗಳೂ ಬೆಳಕಿಗೆ ಬರುತ್ತಾರೆ. ಮೇಲುಜಾತಿಯವರ ಆಳ್ವಿಕೆಯಲ್ಲಿ ಈ ದೇಶ ಉದ್ಧಾರ ಆಗಿದ್ದು ಅಷ್ಟಕಷ್ಟೇ. ಈಗ ಇವರಿಗೆ ಅವಕಾಶ ಕೊಟ್ಟು ನೋಡೋಣ. ಆವರಾದರೂ ಈ ದೇಶವನ್ನು ಉಳಿಸಬಹುದು” ಅಂದೆ. “ನಾವ್ಯಾಕೆ ಕೊಡಬೇಕು” ಎಂದು ಹೇಳಿದ್ದ ಅವರಲ್ಲಿ “ನಾವು” ಎಂಬ ಸರ್ವಾಧಿಕಾರಿ ಧೋರಣೆ ಮತ್ತು “ಕೊಡಬೇಕು” ಎಂಬ ಪದದಲ್ಲಿ ಅಸಡ್ಡೆ ಎಷ್ಟಿತ್ತೆಂದರೆ ಅವರೊಂದಿಗೆ ವಾದ ಮಾಡುವುದೂ ನಿರರ್ಥಕ ಎನ್ನಿಸಿ ಸುಮ್ಮನಾದೆ.

ಈ ವರ್ಗದ ಧಿಮಾಕು ಎಂತಹದ್ದೆಂದರೆ, ಅವರಿಗಿಂತಲೂ ಆಪಾರ ಸಂಖ್ಯೆಯಲ್ಲಿರುವ ಹಿಂದುಳಿದವರು ಮತ್ತು ದಲಿತರಿಂದ ತೆರಿಗೆ ಪಡೆಯುವ ಸರ್ಕಾರ ಅವರಿಗೆ ತನ್ನ ಶಾಲಾ, ಕಾಲೇಜುಗಳಲ್ಲಿ ಮೀಸಲಾತಿ ನೀಡಿದರೆ ವಿರೋಧಿಸುತ್ತಾರೆ. “ಪ್ರತಿಭೆ ಇಲ್ಲದವರಿಗೆ ಇಲ್ಲಿ ಯಾಕೆ ಜಾಗ?” ಎಂದು ಕೆಂಡ ಕಾರುತ್ತಾರೆ. ಆದರೆ, ಅವರ ವರ್ಗಕ್ಕೇ ಸೇರಿರುವ ಜನ ಬಡವರ ಭೂಮಿ ದೋಚಿ, ಸರ್ಕಾರದ ಸವಲತ್ತುಗಳನ್ನು ಪಡೆದು ಕ್ಯಾಪಿಟೇಶನ್ ಕಾಲೇಜಿನ ಹೆಸರಲ್ಲಿ ಪ್ರತಿಭೆ ಇಲ್ಲದ ಹಣವಂತರಿಗೆ ಸೀಟು ಕೊಡುವುದನ್ನು ಒಮ್ಮೆಯೂ ಪ್ರಶ್ನಿಸುವುದಿಲ್ಲ. “ಏನ್ರೀ, ಪ್ರತಿಭೆ ಇಲ್ಲದವರೆಲ್ಲ ಈ ಶಿಕ್ಷಣ ಅಂಗಡಿಗಳಲ್ಲಿ ಡಾಕ್ಟರ್‌ರರೂ, ಇಂಜಿನಿಯರೂ ಆಗ್ತಿದ್ದಾರಲ್ರಿ?” ಎಂದು ಪ್ರತಿಭಟಿಸುವುದೂ ಇಲ್ಲ.

ಇಲ್ಲಿ ಕರ್ನಾಟಕದ ರಾಜಕೀಯ ವಲಯದಲ್ಲಿನ ಒಂದೆರಡು ಉದಾಹರಣೆಗಳನ್ನು ಕೊಡಬಹುದು, ಎಲ್ಲರಿಗೂ ಗೊತ್ತಿರುವಂತೆ ಈ ರಾಜ್ಯ ಹೆಚ್ಚು ಲಿಂಗಾಯತ, ಹಲವು ಒಕ್ಕಲಿಗ, ಎರಡು ಬ್ರಾಹ್ಮಣ ಮತ್ತು ಕೆಲವು ಹಿಂದುಳಿದ ವರ್ಗದಿಂದ ಬಂದ ಮುಖ್ಯಮಂತ್ರಿಗಳನ್ನು ಕಂಡಿದೆ. ಅವರಲ್ಲೆಲ್ಲಾ ಸಾಮಾಜಿಕ ನ್ಯಾಯಕ್ಕಾಗಿ ದಕ್ಷತೆಯಿಂದ ದುಡಿದವರೆಂದರೆ ಹಿಂದುಳಿದ ವರ್ಗದ ದೇವರಾಜ ಅರಸು ಮತ್ತು ವೀರಪ್ಪ ಮೊಯ್ಲಿ ಮಾತ್ರ. ಹಾಗೆಯೇ ರಾಮಕೃಷ್ಣ ಹೆಗಡೆ ಅಧಿಕಾರಾವಧಿಗೆ ವರ್ಚಸ್ಸು ತಂದು ಕೊಟ್ಟವರು ಮುಸ್ಲಿಮರಾಗಿದ್ದ ನಜೀರ್ ಸಾಬರು. ಮಿಕ್ಕಂತೆ ಎಲ್ಲಾ ಮೇಲುವರ್ಗದ, ಮೇಲುಜಾತಿಯ ಮುಖ್ಯಮಂತ್ರಿಗಳು ಮಾಡಿದ್ದು ಬರೀ ತೌಡು ಕುಟ್ಟುವ ಕೆಲಸ!

ಆದ್ದರಿಂದ, ಹಿಂದುಳಿದ-ದಲಿತ ಜಾತಿಗಳಿಗೆ ಪ್ರತಿಭೆ ಇಲ್ಲ ಎಂದು ಹೇಳುವುದು ಎಷ್ಟು ಸುಳ್ಳೋ, ಹಾಗೆಯೇ ಈ ದೇಶದಲ್ಲಿ ಜಾತಿ ಆಧಾರದಲ್ಲಿ ಸಾಮಾಜಿಕ ಆರ್ಥಿಕ ವಂಚನೆ ನಡೆಯುತ್ತಿದೆ ಎಂಬುದೂ ಅಷ್ಟೇ ಸತ್ಯ. ಮೀಸಲಾತಿ ಎಂಬ ಸಾಧನದ ಮೂಲಕ ಈ ಜಾತಿ ಆಧಾರಿತ ತಾರತಮ್ಯಗಳನ್ನು ನಿವಾರಿಸುವ ಪ್ರಯತ್ನ ಇದೆಯೇ ಹೊರತು ಪ್ರತಿಭೆ ಇಲ್ಲದಿದ್ದರೂ ನೀಡುವ ವಿಶೇಷ ಸವಲತ್ತೇನಲ್ಲ.

(ಇದು ಮೇ 17, 2016ರಂದು ಗೌರಿ ಲಂಕೇಶ್‌ರವರು ಬರೆದ ಕಂಡಹಾಗೆ ಅಂಕಣದ ಆಯ್ದ ಭಾಗ)


ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....