HomeUncategorizedಸುದ್ದಿಯೇನೇ ಮನೋಲ್ಲಾಸಿನಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-1

ಸುದ್ದಿಯೇನೇ ಮನೋಲ್ಲಾಸಿನಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-1

- Advertisement -
- Advertisement -

ಆವಾಗಾವಾಗ ಕೆಲ ವ್ಯಕ್ತಿಗಳು, ಸ್ಥಳಗಳು, ವಿಷಯಗಳು ನಮ್ಮ ಮಾಧ್ಯಮಗಳಿಗೆ ಪ್ರಿಯವಾಗಿಬಿಡ್ತಾವ. ಬರೆ ಬರೆ ಅವೇ ಸುದ್ದಿ ಬರಲಿಕ್ಕೆ ಹತ್ತಿಬಿಡ್ತಾವು. ಒಬ್ಬರು ಬರಿತಾರ ಅಂತ ಇನ್ನೊಬ್ಬರು ಬರಿತಾರ. ಟ್ರೆಂಡ್ ಪ್ರಕಾರ ಸುದ್ದಿ ಮಾಡದೇ ಹೋದರೆ ಯಾರು ಏನು ತಿಳ್ಕೋತಾರೋ ಅಂತ ಎಲ್ಲಾರೂ ಕದ್ದು ಮುಚ್ಚಿ ಸುರುಮಾಡಿ ಆಮ್ಯಾಲೆ ಖುಲ್ಲಂ ಖುಲ್ಲಾ ಆಗಿ ಬರಿತಾರ.

ಇಂಥವರಿಗೆ ಮೀಡಿಯಾ ಡಾರ್ಲಿಂಗ್ ಅಂತ ಕರಿತಾರ. ಕನ್ನಡದೊಳಗ ಮಾಧ್ಯಮ ನಲ್ಲ ಅನ್ನಬಹುದೇನೋ. ಈಗ ಸದ್ಯಕ್ಕ ರಾಷ್ಟ್ರ ಮಟ್ಟದ ಮಾಧ್ಯಮ ನಲ್ಲ ಯಾರಪಾ ಅಂದ್ರ ಇಕ್ಬಾಲ್ ಸಿಂಗ್ ಚಹಲ್. ಮುಂಬೈ ಶಹರದೊಳಗ ಕೋವಿಡ್ ಮಹಾಮಾರಿಯನ್ನ ನಿಯಂತ್ರಣ ಮಾಡಿದ ಕೀರ್ತಿ ಇವರಿಗೆ ಹೋಗ್ತದ.

ಮೊದಲಿಗೆ ಈ ಮುಂಬಯಿ ಮೂಲದ ಐಎಎಸ್ ಅಧಿಕಾರಿಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲಾ. ಎಂದಿನಂತೆ ನಮ್ಮ ರಾಷ್ಟ್ರಮಟ್ಟದ ಮಾಧ್ಯಮಗಳು ಅವರ ಕೆಲಸ ನೋಡಿದ್ದಿಲ್ಲಾ, ಸುದ್ದಿ ಮಾಡಿದ್ದಿಲ್ಲ. ಅವ್ರ ಕೆಲಸದ ಬಗ್ಗೆ ಅಂತರ ರಾಷ್ಟ್ರೀಯ ಮಾಧ್ಯಮದೊಳಗ ಬಂದಮ್ಯಾಲೆ ಯಾವನಲೇ ಇವ, ನಮಗ ಗೊತ್ತಿರಲಾರದ ಹಂಗ ಮುಂಬೈದಾಗ್ ಇರೋವ, ಅಂತ್ ಹೇಳಿ, ನಮ್ಮ ಪತ್ರಿಕೆಯವರು ಆ ಅಧಿಕಾರಿಯನ್ನ ಹುಡುಕಿಕೊಂಡು ಹೋಗಿ, ಮಾತಾಡಿ, ಸುದ್ದಿ ಮಾಡಿದರು. ಅದನ್ನು ನೋಡಿದ ಪಂಥ ಪ್ರಧಾನ ಸೇವಕರು ಹಾಗು ಅರ್ಥ ಸಚಿವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋ ಖಾಸಗಿ ಕಂಪನಿಯ ಪ್ರಸಾಧನ ತಜ್ಞರು ಆ ಸುದ್ದಿಯ ಜಾಡನ್ನು ಆಧರಿಸಿ ಪ್ರಧಾನ ಮಂತ್ರಿಯವರು, ಹಣಕಾಸು ಸಚಿವರು ಇಕ್ಬಾಲ್ ಸಿಂಗ್ ಅವರಿಗೆ ಅಭಿನಂದನೆ ಕೋರಿದ ಹಾಗೆ ಟ್ವೀಟ್ ಮಾಡಿದರು. ಆಮ್ಯಾಲೆ ಸುರುವಾತು, ಸುದ್ದಿಯ ಮ್ಯಾಲೆ ಸುದ್ದಿ. ಅದು ಸೋಶಿಯಲ್ ಮೀಡಿಯಾದೊಳಗೂ ಬಂತು, ಆಂಟಿಸೋಶಿಯಲ್ ಮೀಡಿಯಾದೊಳಗೂ ಬಂತು. ಕೆಲವರು ಇದನ್ನು ಮುಂಬೈ ಯಶಸ್ಸು ಅಂತ ಬರೆದರು, ಇನ್ನು ಕೆಲವರು ಮಹಾರಾಷ್ಟ್ರದ ಹೆಮ್ಮೆಯ ಪುತ್ರ ಅಂತ ಹಂಚಿಕೊಂಡರು. ಇನ್ನೂ ಕೆಲವರು ‘ಇಷ್ಟು ಒಳ್ಳೆ ಮನುಷ್ಯಾ ಇವಾ ಆಗಿದ್ದರ, ಇವನ ಹೆಸರು ಇಕ್ಬಾಲ್ ಅಂತ್ ಯಾಕ್ ಐತಿ? ಅವ್ರ ಅಪ್ಪಾ ಅವ್ವಗ ಹೆಸರು ಇಡುವ ಮುಂದ ತಿಳಿಯಲಿಲ್ಲೇನೋ ಅಂತ ಮುಗ್ಧ ಪ್ರಶ್ನೆ ಕೇಳಿಕೊಂಡರು.

ನಮ್ಮನ್ನು ನೋಡಿ ನಗುತ್ತಿದ್ದರೆ, ‘ಮುಂಬೈ ಮಾದರಿ’ಯನ್ನು ಹೇಗೆ ಹಂಚಿಕೊಳ್ಳುವುದು: ಮುಂಬೈ ಆಯುಕ್ತ

ಇಷ್ಟಾಗಿಯೂ ಈ ಅಧಿಕಾರಿ ಮಾಡಿದ ಮ್ಯಾಜಿಕ್ ಏನು? ಕೋವಿಡ್ ರೋಗಿಗಳನ್ನು ಅವರವರ ಮನೆಬೀದಿ-ಬಡಾವಣೆಗಳಲ್ಲಿಯೇ ಪತ್ತೆ ಮಾಡಿ, ಅದರಲ್ಲಿ ಶೇ.90 ಜನ ತಮ್ಮ ತಮ್ಮ ಮನೆಯಲ್ಲಿಯೇ ಉಪಚಾರ ಪಡೆದು, ಇತರರು ಆಯಾ ವಾರ್ಡ್‌ನ ಕೋವಿಡ್ ಕಾಳಜಿ ಕೇಂದ್ರದೊಳಗ ಇರೋ ಹಂಗ ಮಾಡಿ, ಅದರೊಳಗೆ ಭಾರಿ ಭಯಾನಕ ಪ್ರಕರಣ ಮಾತ್ರ ಅಸ್ಪತ್ರೆಗೆ ಹೋಗೋ ಹಂಗ್ ನೋಡಿಕೊಂಡುಬಿಟ್ಟರು. ತಮ್ಮ ಕಚೇರಿಯ ವಾತ-ಪಿತ್ತ ಅನುಕೂಲಿತ ಕುರ್ಚೆ ಬಿಟ್ಟು ಏಳದ ಸರಕಾರಿ ಅಧಿಕಾರಿವೈದ್ಯರನ್ನ ರೋಗಿಗಳ ಮನೆಗೆ ಹೋಗುವ ಹಂಗ ಮಾಡಿದರು. ರಾಜ್ಯ-ಜಿಲ್ಲೆತಾಲೂಕು-ಗ್ರಾಮಮಟ್ಟದ ಕೆಲಸಗಳು ಆಯಾ ಮಟ್ಟದಲ್ಲಿಯೇ ಆಗ್ಬೇಕು. ಅರೋಗ್ಯ ಸೇವೆ ಸಹಿತ, ಗ್ರಾಮಮಟ್ಟದಿಂದ ಆರಂಭವಾಗಿ ತಾಲೂಕು-ಜಿಲ್ಲೆರಾಜ್ಯಮಟ್ಟಗಳಿಗೆ ಮುಟ್ಟಬೇಕು, ಅನಗತ್ಯವಾಗಿ ಯಾವ ಹಳ್ಳಿಯ ರೋಗಿಯೂ ಸಹಿತ ಜಿಲ್ಲೆ ಅಥವಾ ರಾಜ್ಯ ಮಟ್ಟದ ಆಸ್ಪತ್ರೆಗೆ ಹೋಗೋ ಪ್ರಸಂಗ ಬರಬಾರದು ಅಂತ ನೋಡಿಕೊಂಡರು. ನಮ್ಮ ರಾಜ್ಯದಲ್ಲೇ ಇದು ಸಾಧ್ಯ ಅದ ಏನು? ಹಳ್ಳಿಯ ಆಸ್ಪತ್ರೆಯೊಳಗ ರೈತರಿಗೆ ಒಂದು ಹಾವುಚೇಳು ಕಚ್ಚಿದರ ಕೊಡೋ ಔಷಧ ಇರೋದಿಲ್ಲ. ಎಲ್ಲದಕ್ಕೂ ದೊಡ್ಡಾಸ್ಪತ್ರೆಗೆ ಕಳಿಸೋ ದೊಡ್ಡ ರೋಗ ಹಳ್ಳಿ-ತಾಲೂಕು-ಜಿಲ್ಲಾ ಆಸ್ಪತ್ರೆ ವೈದ್ಯರಿಗೆ ಇರತದ.

ನಮ್ಮ ಸರಕಾರ ರೋಗಿಗಳನ್ನ ಗುಣ ಮಾಡೋ ಮೊದಲು ಇಂಥಹ ಆಸ್ಪತ್ರೆ ಹಾಗೂ ವೈದ್ಯರಿಗೆ ಔಷಧಿ ಕೊಡಬೇಕು. ‘ಎಲ್ಲಾ ರೋಗಕ್ಕೂ ಬೆಂಗಳೂರಿನಾಗ ಮಾತ್ರ ಔಷಧಿ ಅಂತ ನಂಬಿರುವ ಅಧಿಕಾರಿಮಂತ್ರಿಗಳನ್ನು ಮೊದಲಿಗೆ ಹಳ್ಳಿಯ ಆಸ್ಪತ್ರೆ ನೋಡಲಿಕ್ಕೆ ಕಳಿಸಬೇಕು.

ಇಲ್ಲೇ ಒಂದು ಸ್ವಲ್ಪ ಪಕ್ಕಕ್ಕೆ ಸರಿದು ಕರ್ಮಸಿದ್ಧಾಂತ ನೆನಪು ಮಾಡಿಕೊಳ್ಳೋಣ. ಭಾರತೀಯ ದರ್ಶನದ ಅನುಸಾರ ಒಂದು ಕೆಲಸವನ್ನು ‘ಯಾರು ಮಾಡಿದರು? ಅನ್ನುವುದು ಮುಖ್ಯ ಅಲ್ಲ. ‘ಯಾವ ಕೆಲಸ ಆತು?, ಅದರಿಂದ ಯಾರಿಗೆ ಅನುಕೂಲ ಆತು?, ಯಾರಿಗೆ ಅನಾನುಕೂಲ ಆತು? ಅನ್ನೋದು ಮುಖ್ಯ.

ಆದರೆ, ಪ್ರತಿ ಸಾರಿ ಆಗುವಂತೆ, ನಮ್ಮ ಮಾಧ್ಯಮಗಳು ಯಾರನ್ನೋ ಹೀರೋ ಮಾಡಲಿಕ್ಕೆ ಹೋಗಿ ‘ಯಾರು ಅನ್ನುವುದನ್ನು ದೊಡ್ಡದು ಮಾಡಿ, ‘ಏನು ಅನ್ನುವುದನ್ನು ಸಣ್ಣದು ಮಾಡಿಬಿಟ್ಟವು.

ಇಕ್ಬಾಲ್ ಸಿಂಗ್ ಅವರು ಮಾಡಿದ ಕೆಲಸ ಯಾವುದು? ಅದರ ಹಿಂದಿನ ನೀತಿ-ನಿಯಮ ಯಾವುವು? ಅವುಗಳಿಂದ ಬೇರೆ ಯಾರು ಯಾವ ಪಾಠ ಕಲಿಯಬಹುದು? ಮುಂಬೈಯಲ್ಲಿ ಸಲ್ಲಿದ್ದು ಇನ್ನೆಲ್ಲಿ ಸಲ್ಲುವುದು ಅನ್ನುವುದನ್ನು ವಿಚಾರ ಮಾಡಲಿಕ್ಕೆ ಹೋಗಲೇ ಇಲ್ಲ.

ಇಷ್ಟಕ್ಕೂ ಅವರು ಮಾಡಿದ್ದೂ ಮ್ಯಾಜಿಕ್ ಅಲ್ಲ. ಅದು ನಮ್ಮ ಸಂವಿಧಾನದ ಮೂಲ ತತ್ವ ಗಳಲ್ಲಿ ಒಂದು. ಅದನ್ನು ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು, ನೀತಿ ನಿರೂಪಕರು, ಜಾರಿ ಮಾಡುವ ಸಿಬ್ಬಂದಿಗಳು, ಎಲ್ಲರೂ ಪಾಲಿಸಲೇಬೇಕಾದದ್ದು. ಈ ದಂಡಪಿಂಡಗಳು ಉಪಯೋಗಿಸಬೇಕಾಗಿದ್ದ, ಆದರೆ ಬಳಸದೆ ಬಿಟ್ಟ ಮಂತ್ರ ದಂಡದ ಹೆಸರು ‘ವಿಕೇಂದ್ರೀಕರಣ.

‘ಹಿಂಗ ಅಂದ್ರ ಅದರಾಗ ಹೊಸಾದು ಏನು ಐತಿ? ನಮ್ಮ ಮಧ್ಯದ ‘ಗೋಡ್ಬೋಲೆ ಅಂದ್ರೆ ಬರೀ ಒಳ್ಳೊಳ್ಳೆ ಮಾತಾಡುವ ಕೆ.ಎಸ್ ಈಶ್ವರಪ್ಪ ಅವರು ಹಿರೆತನ ಮಾಡುವ ಸಚಿವಾಲಯ ಅದೇ ಅಲ್ಲವೇ? ವಿಕೇಂದ್ರೀಕರಣ ಅಂದ್ರೆ ಈ ಉದ್ಯೋಗ ಖಾತ್ರಿ ಯೋಜನೆ, ಗ್ರಾಮ ಪಂಚಾಯತಿಯವರು ಮನೆ ಹಂಚುವುದು, ಊರ ಹೊರಗಡೆ ದೊಡ್ಡ ದೊಡ್ಡ ಸ್ವಾಗತ ಕಮಾನು ಕಟ್ಟುವುದು, ಅಷ್ಟೇ ಅಲ್ಲವೇ? ಅಂತ ನೀವು ಕೇಳಬಹುದು.

ಇದು ವಿಕೇಂದ್ರೀಕರಣ ಅನ್ನುವ ವಿಚಾರದ ಕೇವಲ ಒಂದು ಭಾಗ ಅಷ್ಟೇ. ಇದನ್ನು ಹಂತಹಂತವಾಗಿ, ಸರಿಯಾಗಿ ತಿಳಿದುಕೊಳ್ಳೋಣ. ಇದರ ಮೊದಲ ಭಾಗವಾಗಿ ಬೇರೆ ಬೇರೆ ದೇಶಗಳಲ್ಲಿ, ಅಂದ್ರೆ ಉದ್ಯೋಗ ಖಾತ್ರಿಯಂಥಾ ಯೋಜನೆಗಳು ಇರಲಾರದ ದೇಶಗಳಲ್ಲಿ, ಮನೆ ಹಂಚಿಕೆ ಮಾಡದ, ಸ್ವಾಗತ ಕಮಾನು ಕಟ್ಟಲಾರದ ದೇಶಗಳಲ್ಲಿ ಈ ಪರಿಸ್ಥಿತಿ ಹೆಂಗ್ ಐತಿ? ಇದನ್ನ ನೋಡೋಣ.

ನಮ್ಮ ದೋಸ್ತ್ ಡೊನಾಲ್ಡ್ ಕೆಂಪಣ್ಣನವರು ಅಮೆರಿಕ ಅಧ್ಯಕ್ಷರಾಗಿದ್ದ ಕಾಲದಲ್ಲಿ ಒಂದು ಮುಂಜಾವಿನಲ್ಲಿ ಎದ್ದು ಕತ್ತಿ ಝಳಪಿಸಿ ಒಂದು ಮಾತು ಹೇಳಿದರು. ಇಂಗ್ಲಂಡ್‌ನಿಂದ ಬಂದ ವಲಸಿಗರು ಕಟ್ಟಿದ ಈ ದೇಶದಲ್ಲಿ, ಜಗತ್ತಿನ 220 ದೇಶಗಳಿಂದ ಕೆಲಸಗಾರರು ಬಂದು ದುಡಿದು ಶ್ರೀಮಂತಗೊಳಿಸಿದ ಅಮೆರಿಕ ದೇಶದ ಒಳಗೆ ೨೫ ದೇಶಗಳಿಂದ ವಲಸಿಗರು ಬರಬಾರದು ಅಂತ ನಾನು ಒಂದು ಅಭೂತಪೂರ್ವ ಆದೇಶ ಜಾರಿ ಮಾಡಿಬಿಡ್ತೇನೆ ಅಂತ ಹೂಂಕರಿಸಿದರು. ಆ ನನ್‌ಮಗ ಒಬಾಮ ಎಡಗೈನಲ್ಲಿ ಸಹಿ ಮಾಡ್ತಾ ಇದ್ದ, ಅದಕ್ಕೆ ನಾನು ಬಲಗೈನಲ್ಲಿ ಸಹಿ ಮಾಡಿಬಿಡ್ತೇನೆ, ಅಂತ ಮಾಡೇಬಿಟ್ಟರು.

ಅವು ಬಹುತೇಕ ಮುಸ್ಲಿಂ ದೇಶಗಳು ಇದ್ದವು. ಹೀಗಾಗಿ ಮುಸಲ್ಮಾನರ ಮೇಲೆ ದ್ವೇಷ ಇದ್ದ ಅನೇಕರಿಗೆ ಡೊನಾಲ್ಡ್ ಅಪ್ಪನವರು ರಾತ್ರೋ ರಾತ್ರಿ ಹೀರೋ ಆಗಿ ಬಿಟ್ಟರು. ಕೆಲವರು ಅತೀವ ಆಸಕ್ತರು ಉತ್ತರ ಭಾರತದ ಹಳ್ಳಿ ಒಂದರ ಹೆಸರು ಬದಲಿ ಮಾಡಿ ಡೊನಾಲ್ಡ್ ಅಪ್ಪನವರ ಹೆಸರು ಇಟ್ಟರು. ಅವರ ಹೆಸರಿನಲ್ಲಿ ಪೂಜೆ, ಪುನಸ್ಕಾರ ಎಲ್ಲಾ ಮಾಡಿಸಿಬಿಟ್ಟರು.

ಆದ್ರೆ ಈ ಆದೇಶ ಹೊರಬಿದ್ದ ಒಂದೇ ತಿಂಗಳಿನಲ್ಲಿ ಅದು ರದ್ದು ಆಗಿಹೋತು. ಅದನ್ನ ರದ್ದು ಮಾಡಿದ್ದೂ ಯಾರಪ ಅಂದರ, ಒಬ್ಬ ಜಿಲ್ಲಾ ನ್ಯಾಯಾಧೀಶರು. ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯದ ಜಡ್ಜ್ ಸಾಹೇಬರು ಅಲ್ಲ. ಬರೆ ಕೌಂಟಿ ಅಂದ್ರ ಜಿಲ್ಲಾ ನ್ಯಾಯಾಧೀಶರು. ಅನೇಕರ ಕನಸಿನ ನಾಡಾದ ಅಮೆರಿಕದಾಗ ಅಧಿಕಾರದ ಶಾಖೆ ಪ್ರಶಾಖೆಗಳು ಹೆಂಗ ಹಬ್ಬಿಕೊಂಡುಬಿಟ್ಟಾವು ಅನ್ನೋದು ಇದರಿಂದ ಸ್ವಲ್ಪ ತಿಳಿಯಬಹುದು.

ಅಲ್ಲವೇ ಮನೋಲ್ಲಾಸಿನಿ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...

‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...