Homeಕರ್ನಾಟಕಜನವಾಹಿನಿಯ ನೆನಪು -ಭಾಗ-2 : ಹಲವು ಪ್ರಶ್ನೆಗಳನ್ನು ಎಬ್ಬಿಸಿದ ಕ್ವೆಶ್ಚನ್ ಮಾರ್ಕ್ ಪತ್ರಿಕೆ!

ಜನವಾಹಿನಿಯ ನೆನಪು -ಭಾಗ-2 : ಹಲವು ಪ್ರಶ್ನೆಗಳನ್ನು ಎಬ್ಬಿಸಿದ ಕ್ವೆಶ್ಚನ್ ಮಾರ್ಕ್ ಪತ್ರಿಕೆ!

- Advertisement -
- Advertisement -

ಜನವಾಹಿನಿ ನೆನಪು : ಭಾಗ-2

ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ

ಕಳೆದ ಕಂತಿನಲ್ಲಿ ವಿವರಿಸಿದಂತೆ ‘ಜನವಾಹಿನಿ’ ಎಂಬ ಹೆಸರು ಎಲ್ಲರಿಗೂ ಇಷ್ಟವಾಗಿದ್ದರೂ, ಆ ಟೈಟಲ್ ನಮ್ಮ ಕೈಗೆ ಬಂದಿರಲಿಲ್ಲ. ಅದು ಬೇರೆ ಯಾರದ್ದೋ ಕೈಯಲ್ಲಿತ್ತು. ಅದಕ್ಕಾಗಿ ಪ್ರಭಾಕರ್ ಎಂಬವರ ಸಹಾಯದಿಂದ ಅದನ್ನು ಮೂಲ ಮಾಲಕರಿಂದ ಪಡೆಯಲು ಪ್ರಯತ್ನ ನಡೆಯುತ್ತಿತ್ತು. ನನಗೆ ಈ ಬಗ್ಗೆ ಹೆಚ್ಚು ಗೊತ್ತಿಲ್ಲ! ಆದರೆ, ತಕ್ಷಣವೇ ಒಂದು ಮಾದರಿ ಪತ್ರಿಕೆಯನ್ನು ಪ್ರಚಾರದ ದೃಷ್ಟಿಯಿಂದ ಹೊರತರುವುದು ನಮ್ಮ ಯೋಜನೆಯಾಗಿತ್ತು. ಆದಕ್ಕಾಗಿ ನಾವು ಇಟ್ಟ ಹೆಸರು ‘?????’ -ಐದು ಪ್ರಶ್ನಾರ್ಥಕ ಚಿಹ್ನೆಗಳು! ಅಂದರೆ ಐದು ಅಕ್ಷರಗಳ ಹೆಸರು. ನನಗೆ ಹಠಾತ್ ಹೊಳೆದ ಐಡಿಯಾ ಇದು. ಈ ಕುರಿತು ತಿಳಿಸಿದಾಗ, ಹೆಸರು ಬಂದಾಗ ಯೋಚಿಸೋಣ, ಈಗ ಇದೇ ಇರಲಿ ಎಂದು ನಮ್ಮ ಸಂಸ್ಧೆಯ ಅಡಳಿತ ನಿರ್ದೇಶಕರಾಗಿದ್ದ ಸ್ಯಾಮ್ಯುಯೆಲ್ ಸಿಕ್ವೇರಾ ಹೇಳಿದರು. ಹಾಗೆ ಕ್ವೆಶ್ಚನ್ ಮಾರ್ಕ್ ಪತ್ರಿಕೆಯೊಂದನ್ನು ಹೊರತಂದೆವು. ಇದೇ ಕ್ವೆಶ್ಚನ್ ಮಾರ್ಕ್ ಮುಂದೆ ಜನರಲ್ಲಿಯೂ ಮತ್ತು ಸ್ಥಾಪಿತ ಪತ್ರಿಕೆಗಳ ಆಡಳಿತ ವರ್ಗಗಳಲ್ಲಿಯೂ ಹಲವು ಪ್ರಶ್ನೆಗಳನ್ನು ಹುಟ್ಟಿಸುವುದು ಎಂಬ ಕಲ್ಪನೆಯೇ ನಮಗಿರಲಿಲ್ಲ!

ಒಂದು ಕಡೆಯಲ್ಲಿ ಬಂಡವಾಳ ಸಂಗ್ರಹದ ಕೆಲಸ ನಡೆಯುತ್ತಿತ್ತು. ಇದು ಎಷ್ಟು ದೊಡ್ಡ ಮಟ್ಟದ ಪತ್ರಿಕೆ, ಎಷ್ಟು ಬಂಡವಾಳ ಬೇಕಾಗಬಹುದು ಎಂಬ ಕಲ್ಪನೆ ನನಗಂತೂ ಇರಲಿಲ್ಲ. ಇದು ‘ಮುಂಗಾರು’ ಪತ್ರಿಕೆಯಂತೆ ಒಂದು ಸಾರ್ವಜನಿಕ ಬಂಡವಾಳದ ಪತ್ರಿಕೆ ಎಂದು ಗೆಳೆಯ ಎನ್.ಎ.ಎಂ ಇಸ್ಮಾಯಿಲ್ ಹೇಳಿದ್ದರು. ‘ಮುಂಗಾರು’ ಪತನಕ್ಕೆ ಕಾರಣಗಳನ್ನು ಕಣ್ಣಾರೆ ಕಂಡಿದ್ದ ನನಗೆ ಒಂದಿಷ್ಟು ಆತಂಕವೂ ಇರಲಿಲ್ಲ. ಮ್ಯಾನೇಜ್‌ಮೆಂಟ್ ನಮ್ಮ ವಿಷಯವಲ್ಲ; ಪತ್ರಕರ್ತರಾಗಿ ಪ್ರಾಮಾಣಿಕವಾಗಿ ದುಡಿಯುವುದು ಮತ್ತು ಜನರ ಹಿತಕ್ಕಾಗಿ ಬರೆಯುವುದು ಮಾತ್ರ ನಮ್ಮ ಕೆಲಸ ಎಂದು ಆ ಕಾಲದ ಎಲ್ಲಾ ಪತ್ರಕರ್ತರಂತೆ ನಾನೂ ಭಂಡ ಧೈರ್ಯದಿಂದ ನಂಬಿದ್ದೆ! ಅದರ ಎಲ್ಲಾ ಜವಾಬ್ದಾರಿ ಸ್ಯಾಮ್ಯುಯೆಲ್ ಸಿಕ್ವೇರಾ ಮತ್ತು ಅವರ ತಂಡದ ಮೇಲಿತ್ತು. ನಾವ್ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಅದು ಎಷ್ಟು ದೊಡ್ಡ ಜವಾಬ್ದಾರಿ ಆಗಿತ್ತೆಂದು ನನಗೆ ಈಗ ಅಚ್ಚರಿ ಆಗುತ್ತಿದೆ. ಅಷ್ಟಲ್ಲದೇ ನಮ್ಮ ಭಂಡ ಧೈರ್ಯದ ಬಗ್ಗೆ ಇಮ್ಮಡಿ ಅಚ್ಚರಿ ಆಗುತ್ತಿದೆ! ಪರಸ್ಪರ ವಿಶ್ವಾಸ, ಒಬ್ಬರನ್ನು ಇನ್ನೊಬ್ಬರು ಆಧರಿಸುವ ಗುಣ, ಸಹಜ ಉತ್ಸಾಹ, ಉತ್ತಮ ನಾಯಕತ್ವದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಆ ದಿನಗಳಲ್ಲಿ ನಾನು ಕಲಿತೆ!

ಆಗ ನಮ್ಮ ತಂಡವಾದರೂ ಏನಾಗಿತ್ತು!? ಸಾಮ್ಯುಯೆಲ್ ಸಿಕ್ವೇರಾ ಅವರ ನಾಯಕತ್ವದ ಗುಣದ ಪರಿಚಯವಾಗಲು ಅರಂಭವಾಗಿತ್ತು. ಸಂಪಾದಕ ಬಾಲಕೃಷ್ಣ ಗಟ್ಟಿಯವರು ಕಾಲೇಜು ದಿನಗಳಿಂದ ನನಗೆ ಪರಿಚಯದವರು ಮತ್ತು ಗೌರವಾರ್ಹರಾಗಿದ್ದರು. ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಕಲಿಸುತ್ತಿದ್ದವರು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್  ಹೆರಾಲ್ಡ್’ ಪತ್ರಿಕೆಗಳಿಗೆ ಬಂಟ್ವಾಳದ ಪ್ರತಿನಿಧಿಯಾಗಿ ಹವ್ಯಾಸಿ ಪತ್ರಕರ್ತರಾಗಿ ಕೆಲವು ವರ್ಷ ಕೆಲಸ ಮಾಡಿದವರು. ಪೂರ್ಣಕಾಲಿಕ ಪತ್ರಕರ್ತರಾಗಿ ಕೆಲಸ ಮಾಡಿದವರಲ್ಲ. ನಿವೃತ್ತಿ ಬಳಿಕ ‘ನೇತ್ರಾವತಿ ವಾರ್ತೆ’ ಒಂದು ದಿನಪತ್ರಿಕೆ ಆರಂಭಿಸಿ ಉಳಿಸಲು ವಿಫಲ ಪ್ರಯತ್ನ ನಡೆಸಿದವರು. ಆ ಪತ್ರಿಕೆಯಲ್ಲಿ ಇದ್ದ ಇಸ್ಮಾಯಿಲ್ ಸಂಜೆ ದಿನಪತ್ರಿಕೆಯಲ್ಲಿ ಕೆಲಸ ಮಾಡಿದವರು. ಉತ್ತಮ ಓದು ಮತ್ತು ವಿಚಾರ ಹೊಂದಿದ್ದವರು. ನಾನು ‘ಮುಂಗಾರು’ ಪತ್ರಿಕೆಯಲ್ಲಿ ಕೆಲಸ ಬಿಟ್ಟ ನಂತರ ‘ಕರಾವಳಿ ಆಲೆ’, ‘ಕನ್ನಡ ಜನ ಅಂತರಂಗ’, ‘ಹೊಸಸಂಜೆ’ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೆ. ಗೆಳೆಯ ವಿಲ್ಫ್ರೆಡ್ ಡಿಸೋಜಾ ಅವರಿಗೆ ದೈನಿಕದ ಅನುಭವ ಇರದಿದ್ದರೂ ‘ಪಟ್ಟಾಂಗ’ ಎಂಬ ವಾರಪತ್ರಿಕೆ ನಡೆಸಿ ಅನುಭವ ಇದ್ದವರು. ಎಡಪಂಥೀಯ ಸಾಮಾಜಿಕ ಕಾರ್ಯಕರ್ತರಾಗಿ ಪಳಗಿದ್ದವರು. ಕೇಶವ ಕುಂದರ್ ಮತ್ತು ರವೀಂದ್ರ ಶೆಟ್ಟಿ ದಿನಪತ್ರಿಕೆಯ ಅನುಭವ ಹೊಂದಿದ್ದವರು. ಬಿ.ಬಿ ಶೆಟ್ಟಿಗಾರ್ ‘ಮುಂಗಾರು’ ಪತ್ರಿಕೆಯಲ್ಲಿ ಸಾಕಷ್ಟು ಅನುಭವ ಪಡೆದಿದ್ದ ಹಿರಿಯರು. ಕ್ರೀಡಾ ವಿಭಾಗದ ತಜ್ಞರು. ಇದಿಷ್ಟೇ ಸಂಪಾದಕೀಯ ವಿಭಾಗದಲ್ಲಿ ನಮಗಿದ್ದ ಬಂಡವಾಳ!
ಪ್ರಸರಣ ವಿಭಾಗದಲ್ಲಿ ಸ್ಟ್ಯಾನ್ಲಿ ಸೆರಾವೋ ಅತ್ಯಂತ ಉತ್ಸಾಹಿ ಮತ್ತು ಹೊಸಹೊಸ ಯೋಚನೆಗಳನ್ನು ಹೊಂದಿದ್ದರು. ಜಾಹೀರಾತು ವಿಭಾಗದಲ್ಲಿ ವರ್ಗೀಸ್ ಅವರು ಮಲಯಾಳಂ ‘ದೀಪಿಕಾ’ ಪತ್ರಿಕೆಯ ಜಾಹೀರಾತು ವ್ಯವಸ್ಥಾಪಕರಾಗಿ ಇದ್ದವರು.

ಇನ್ನೊಂದು ಕಡೆಯಲ್ಲಿ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಮುದ್ರಣಾಲಯಕ್ಕೆ ಬೃಹತ್ ಕಟ್ಟಡ ನಿರ್ಮಾಣದ ಕೆಲಸ, ಯಂತ್ರ ಸ್ಥಾಪನೆ ಕೆಲಸಗಳು ಭರದಿಂದ ಸಾಗುತ್ತಿದ್ದವು. ನಮಗೆ ಆಗ ಅಲ್ಲಿನ ಸಿಬ್ಬಂದಿಯ ಪರಿಚಯ ಇಲ್ಲದಿದ್ದರೂ, ಒಂದೆರಡು ಸಲ ಭೇಟಿ ನೀಡಿ ಬೆರಗಾಗಿದ್ದೆವು. ಹತ್ತಿರವೇ ಇದ್ದ ‘ಮುಂಗಾರು’ ಪತ್ರಿಕೆಯ ಹಳೆಯ ಪಾಳುಬಿದ್ದ ಕಟ್ಟಡ ನಮ್ಮನ್ನು ಎಚ್ಚರಿಸುತ್ತಾ ಹಲವು ಸಂದೇಶಗಳನ್ನು ರವಾನಿಸುತ್ತಿತ್ತು! ಇದೀಗ ‘ವಾರ್ತಾಭಾರತಿ’ ಪ್ರೆಸ್ ಕೂಡಾ ಹತ್ತಿರದಲ್ಲೇ ಇದೆ ಎಂಬುದೊಂದು ವಿಶೇಷ.

ಅಂತೂ ಇಂತೂ ಪತ್ರಿಕೆಯ ಪುಟಗಳನ್ನು ಸಿದ್ಧಪಡಿಸಿದೆವು. ಕೆಲವು ವಿಶೇಷ ವರದಿಗಳೂ ಇದ್ದವು. ಬಣ್ಣದ ಪತ್ರಿಕೆ ಎಂದು ಮೊದಲೇ ನಿರ್ಧಾರವಾಗಿತ್ತು. ಕನ್ನಡದ ಮೊದಲ ಬಣ್ಣದ ದಿನಪತ್ರಿಕೆ! ಆದರೆ ನಮಗೆ ತಾಂತ್ರಿಕ ಮಾಹಿತಿ ಎಳ್ಳಷ್ಟೂ ಇರಲಿಲ್ಲ! ನಮ್ಮ ಪ್ರೆಸ್ ಸಿದ್ಧವಾಗದೇ ಇದ್ದುದರಿಂದ ಕಾಂಞಗಾಡಿನ ‘ದೀಪಿಕಾ’ ಪ್ರೆಸ್‌ನಲ್ಲಿ ಮುದ್ರಿಸುವುದೆಂದು ನಿರ್ಧಾರವಾಗಿತ್ತು. ಅಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಪೌಲೋಸ್ ಅವರದ್ದೇ ಪಾರುಪತ್ಯ. ಒಂದು ಬೆಳ್ಳಂಬೆಳಗ್ಗೆ ಕಾರಿನಲ್ಲಿ ಹೊರಟೆವು. ಅಲ್ಲಿ ತಲಪಿದಾಗ ಅತ್ಯಂತ ಆತ್ಮೀಯ ಸ್ವಾಗತ ಸಿಕ್ಕಿತು. ಪತ್ರಕರ್ತರು ಒಂದೇ ಕುಲ ಎಂಬಂತಹ ಸ್ವಾಗತವದು! ಅರೆಬರೆ ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಚರ್ಚೆ, ಅನುಭವ ಹಂಚಿಕೆ. ಅಲ್ಲಿ ಹಳೆಯದೇ ವ್ಯವಸ್ಥೆ! ಒಂದು ದೊಡ್ಡ ಇಡೀ ಕೋಣೆಯನ್ನೇ ತುಂಬಿದ ಸಂಪಾದಕೀಯ ಡೆಸ್ಕು! ಸುತ್ತಲೂ ಪತ್ರರ್ತರು! ನಾವು ಯೋಚಿಸಿದ್ದ ಸಂಪೂರ್ಣ ಕಂಪ್ಯೂಟರೀಕೃತ ವ್ಯವಸ್ಥೆಗೆ ಯಾವ ಸಾಮ್ಯವೂ ಇಲ್ಲ!

ಅದರೆ, ಅವರ ದಿನನಿತ್ಯದ ಚಟುವಟಿಕೆ ನೋಡಿ ನಮಗೆ ಬೆರಗು! ಇರುವೆಗಳಂತೆ ವರದಿಗಾರರು ವರದಿಗಳನ್ನು ತರುತ್ತಲೇ ಇದ್ದಾರೆ. ನಮಗೆ ವಿವರಿಸುತ್ತಲೇ ಇದ್ದಾರೆ. ಅವರ ಉತ್ಸಾಹ ನಮ್ಮ ಸಂಕಲ್ಪವನ್ನು ಇಮ್ಮಡಿಗೊಳಿಸಿತು. ಮಧ್ಯಾಹ್ನ ಸಿಬ್ಬಂದಿ ಲೆಕ್ಕದಲ್ಲೇ ಅವರ ಕ್ಯಾಂಟನ್‌ನಲ್ಲಿ ನಮಗೆ ಭರ್ಜರಿ ಊಟ. ತರಕಾರಿ ಆಗಿದ್ದರೂ ಅವರ ಆತಿಥ್ಯದಿಂದಲೇ ಇವತ್ತಿಗೂ ನೆನಪಿರುವಂತದ್ದು!

ಅದರೆ, ನಮ್ಮ ಸಮಸ್ಯೆ ಬೇರೆಯೇ ಇತ್ತು! ಬಣ್ಣದ ಮುದ್ರಣದ ಅನುಭವ ಇಲ್ಲದ ನಾವು ತಯಾರಿಸಿದ್ದ ಪುಟಗಳಲ್ಲಿ ದೋಷವಿತ್ತು. ಕಲರ್ ಸೆಪರೇಷನ್ ಬಗ್ಗೆ ನಮಗೆ ಗೊತ್ತಿದ್ದದ್ದು, ಹಗಲಿನ ಚಂದ್ರನಷ್ಟು ಮಾತ್ರ! ಆದರೆ, ಅಲ್ಲಿನ ತಾಂತ್ರಿಕ ಸಿಬ್ಬಂದಿ ನಮಗೆ ಒಂದಿಷ್ಟೂ ಅವಮಾನ ಮಾಡದೇ ಎಲ್ಲವನ್ನೂ ಸರಿಪಡಿಸಿ, ಒಂದಷ್ಟನ್ನು ಹೇಳಿಕೊಟ್ಟು ನಮ್ಮ ಜ್ಞಾನ ಹೆಚ್ಚಿಸಿದರು.

ಆದರೆ ಪ್ರಿಂಟಿಂಗ್ ಮುಗಿಯುವಾಗ ತಡರಾತ್ರಿಯಾಗಿತ್ತು. ಇನ್ನೊಂದು ಸಮಸ್ಯೆ ಎದುರಾಗಿತ್ತು. ಪತ್ರಿಕೆಗಳ ಕಟ್ಟುಗಳನ್ನು ಜೀಪಿನಲ್ಲಿ ತುಂಬಿಸಿದ ಮೇಲೆ ನಮಗೆ ಸಾಕಷ್ಟು ಜಾಗ ಇರಲಿಲ್ಲ. ನಾವೂ ಪೇಪರ್ ಕಟ್ಟುಗಳ ನಡುವೆ ಕಟ್ಟುಗಳಾಗಿ ಬಿದ್ದುಕೊಂಡೆವು. ದಾರಿಯಲ್ಲಿ ಊಟ ಮಾಡೋಣ ಎಂದುಕೊಂಡು ಹೊರಟಿದ್ದೆವು. ದಾರಿಯಲ್ಲಿ ಊಟವೂ ಸಿಗಲಿಲ್ಲ! ಮಧ್ಯರಾತ್ರಿ ಕಳೆದ ಬಳಿಕ ಹಿಂದೆ ಹೇಳಿದಂತೆ ನಮ್ಮ ತಾತ್ಕಾಲಿಕ ಕಚೇರಿಯಾಗಿದ್ದ ಬಿಷಪ್ಸ್ ಹೌಸ್ ತಲಪಿದ ನಾವು ಪತ್ರಿಕೆ ಇಳಿಸಿದೆವು. ಹಿಂದಿನ ರಾತ್ರಿಯೂ ನಿದ್ದೆ ಇಲ್ಲದ ನಾವು ಬಳಲಿ ಬೆಂಡಾಗಿದ್ದೆವು. ಸಿಕ್ಕ ಸಿಕ್ಕಲ್ಲಿ ಪೇಪರ್ ಹಾಸಿ ಯಮನಿದ್ದೆ ಮಾಡಿದೆವು. ಬೆಳಿಗ್ಗೆ ಅಲ್ಲಿನ ಸಿಬ್ಬಂದಿ ಕೆಲಸಕ್ಕೆ ಬಂದಾಗಲೇ ಎಚ್ಚರ. ಅರೆಬರೆ ಕಣ್ಣು ಬಿಟ್ಟಾಗ ಸುಸ್ತು ಕಾಣಲಿಲ್ಲ! ಮಹಾ ಸಾಧನೆ ಮಾಡಿದ ತೃಪ್ತಿ! ವಿಶ್ವಾಸ! ಈ ಪತ್ರಿಕೆಯನ್ನು ಕಟ್ಟಿ ನಿಲ್ಲಿಸುತ್ತೇವೆಂಬ ಛಲ! ಮುಂದೆ ಇನ್ನಷ್ಟು ಸವಾಲುಗಳನ್ನು ಎದುರಿಸಬೇಕಿತ್ತು! ಆ ಕುರಿತು ಮುಂದಿನ ಸಂಚಿಕೆಗಳಲ್ಲಿ ನೋಡೋಣ!

ಮತಿ ಕೆಡಿಸಿದ ತಪ್ಪು!

ಬಹುಶಃ ‘ಜನವಾಹಿನಿ’ ಆನ್‌ಲೈನ್ ಎಡಿಟಿಂಗ್ ಅರಂಭಿಸಿದ ಮೊದಲ ಕನ್ನಡ ಪತ್ರಿಕೆ. ಅದಕ್ಕಾಗಿ ಎಲ್ಲರಿಗೂ ತರಬೇತಿ ನೀಡಲಾಗಿದ್ದು, ಕೆಲವರಿಗೆ ಟೈಪ್ ಮಾಡಲು ಮಾತ್ರ ಗೊತ್ತಿತ್ತು! ದಿನವೂ ಹೊಸ ಹೊಸ ತಾಂತ್ರಿಕ ವಿಚಾರಗಳನ್ನು ಕಲಿಯುತ್ತಲೇ ಇದ್ದೆವು.

ಮೊದಲಿಗೇ ಯಾರಿಗೂ ಶ್ರೀ, ಶ್ರೀಮತಿ ಬಳಸಬಾರದೆಂದೂ, ಧಾರ್ಮಿಕ ನಾಯಕರಿಗೆ ಮೂರು ಶ್ರೀ ಬದಲು ಒಂದು ಶ್ರೀ ಮಾತ್ರ ಪ್ರದಾನ ಮಾಡುವುದೆಂದು ಉದಾರವಾಗಿ ಒಪ್ಪಲಾಗಿತ್ತು! ಅವು ಅರಂಭದ ದಿನಗಳು. ಒಂದಿಬ್ಬರು ಶ್ರೀ ಬಳಸಿರುವುದು ಗಮನಕ್ಕೆ ಬಂದು ತೆಗೆಯಲು ಹೇಳಿದೆ. ಒಂದೊಂದನ್ನೇ ಹುಡುಕಿ ಬದಲಾಯಿಸುವುದು ತಲೆನೋವಿನ ಕೆಲಸ! ಆಗ ತಾಂತ್ರಿಕ ವಿಭಾಗದಲ್ಲಿ ಆಗ್ನೆಲ್ ಮತ್ತು ಸಂತೋಷ್ ಎಂಬ ಇಬ್ಬರು ಗೆಳೆಯರಿದ್ದರು! ಅವರು ಬಂದು ಈಗಿನ ತಂತ್ರಜ್ಞಾನದಲ್ಲಿ ಅದೆಲ್ಲ ಸುಲಭವೆಂದೂ, ಫೈಂಡ್ ಎಂಡ್ ರಿಪ್ಲೇಸ್ ಆಪ್ಷನ್‌ನಲ್ಲಿ ಸುಲಭವಾಗಿ ಮಾಡಬಹುದೆಂದು ಹೇಳಿದರು. ಶ್ರೀ ಉಪಯೋಗಿಸಿದ್ದವರಿಗೆ ಹಾಗೆ ಮಾಡುವುದು ಹೇಗೆ ಎಂದು ಹೇಳಿಕೊಡಲಾಯಿತು! ಎಲ್ಲರೂ ಹಾಗೆಯೇ ಮಾಡಿದರು!

ಮರುದಿನ ಪತ್ರಿಕೆ ಓದಿದಾಗ ಮತಿ ತಪ್ಪಿ ಬೀಳುವುದು ಬಾಕಿ! ಶ್ರೀ ಮಾಯವಾಗಿತ್ತು ಹೌದು! ಜೊತೆಗೆ ಶ್ರೀಧರ, ಶ್ರೀನಿವಾಸರು ಬರೇ ಧರ ಮತ್ತು ನಿವಾಸರಾಗಿಬಿಟ್ಟಿದ್ದರು! ಅಷ್ಟು ಮಾತ್ರವಲ್ಲ! ಎಲ್ಲಾ ಶ್ರೀಮತಿಗಳ ಮತಿ ಮಾತ್ರ ಉಳಿದುಕೊಂಡಿತ್ತು! ಶ್ರೀಮತಿ ಮಾಲತಿ ಮತಿ ಮಾಲತಿ ಆಗಿದ್ದರು! ಮತಿಕೆಟ್ಟು ಹೋಗಿತ್ತು ಅದನ್ನು ನೋಡಿ!

ಅಗ ತಕ್ಷಣ ಒಂದು ವಿಚಾರ ಹೊಳೆಯಿತು! ನಮ್ಮ ಸಿಬ್ಬಂದಿಗಳಲ್ಲಿ ಹುಡುಗಿಯರೇ ಹೆಚ್ಚಿದ್ದರೂ (ಹೌದು! ಒಬ್ಬರನ್ನು ಬಿಟ್ಟು ಉಳಿದವರೆಲ್ಲಾ ಅವಿವಾಹಿತ ಹುಡುಗಿಯರು! ಅಷ್ಟು ಎಳೆಯ ತಂಡ!) ಯಾರೂ ಈ ಶ್ರೀಗಳ ನಡುವೆ ಶ್ರೀಮತಿಯರೂ ಇರಬಹುದೆಂದು ಯೋಚಿಸಿರಲೇ ಇಲ್ಲ! ಬೇಸರದ ವಿಷಯವಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...