Homeಕರ್ನಾಟಕಜನವಾಹಿನಿಯ ನೆನಪು -ಭಾಗ-2 : ಹಲವು ಪ್ರಶ್ನೆಗಳನ್ನು ಎಬ್ಬಿಸಿದ ಕ್ವೆಶ್ಚನ್ ಮಾರ್ಕ್ ಪತ್ರಿಕೆ!

ಜನವಾಹಿನಿಯ ನೆನಪು -ಭಾಗ-2 : ಹಲವು ಪ್ರಶ್ನೆಗಳನ್ನು ಎಬ್ಬಿಸಿದ ಕ್ವೆಶ್ಚನ್ ಮಾರ್ಕ್ ಪತ್ರಿಕೆ!

- Advertisement -
- Advertisement -

ಜನವಾಹಿನಿ ನೆನಪು : ಭಾಗ-2

ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ

ಕಳೆದ ಕಂತಿನಲ್ಲಿ ವಿವರಿಸಿದಂತೆ ‘ಜನವಾಹಿನಿ’ ಎಂಬ ಹೆಸರು ಎಲ್ಲರಿಗೂ ಇಷ್ಟವಾಗಿದ್ದರೂ, ಆ ಟೈಟಲ್ ನಮ್ಮ ಕೈಗೆ ಬಂದಿರಲಿಲ್ಲ. ಅದು ಬೇರೆ ಯಾರದ್ದೋ ಕೈಯಲ್ಲಿತ್ತು. ಅದಕ್ಕಾಗಿ ಪ್ರಭಾಕರ್ ಎಂಬವರ ಸಹಾಯದಿಂದ ಅದನ್ನು ಮೂಲ ಮಾಲಕರಿಂದ ಪಡೆಯಲು ಪ್ರಯತ್ನ ನಡೆಯುತ್ತಿತ್ತು. ನನಗೆ ಈ ಬಗ್ಗೆ ಹೆಚ್ಚು ಗೊತ್ತಿಲ್ಲ! ಆದರೆ, ತಕ್ಷಣವೇ ಒಂದು ಮಾದರಿ ಪತ್ರಿಕೆಯನ್ನು ಪ್ರಚಾರದ ದೃಷ್ಟಿಯಿಂದ ಹೊರತರುವುದು ನಮ್ಮ ಯೋಜನೆಯಾಗಿತ್ತು. ಆದಕ್ಕಾಗಿ ನಾವು ಇಟ್ಟ ಹೆಸರು ‘?????’ -ಐದು ಪ್ರಶ್ನಾರ್ಥಕ ಚಿಹ್ನೆಗಳು! ಅಂದರೆ ಐದು ಅಕ್ಷರಗಳ ಹೆಸರು. ನನಗೆ ಹಠಾತ್ ಹೊಳೆದ ಐಡಿಯಾ ಇದು. ಈ ಕುರಿತು ತಿಳಿಸಿದಾಗ, ಹೆಸರು ಬಂದಾಗ ಯೋಚಿಸೋಣ, ಈಗ ಇದೇ ಇರಲಿ ಎಂದು ನಮ್ಮ ಸಂಸ್ಧೆಯ ಅಡಳಿತ ನಿರ್ದೇಶಕರಾಗಿದ್ದ ಸ್ಯಾಮ್ಯುಯೆಲ್ ಸಿಕ್ವೇರಾ ಹೇಳಿದರು. ಹಾಗೆ ಕ್ವೆಶ್ಚನ್ ಮಾರ್ಕ್ ಪತ್ರಿಕೆಯೊಂದನ್ನು ಹೊರತಂದೆವು. ಇದೇ ಕ್ವೆಶ್ಚನ್ ಮಾರ್ಕ್ ಮುಂದೆ ಜನರಲ್ಲಿಯೂ ಮತ್ತು ಸ್ಥಾಪಿತ ಪತ್ರಿಕೆಗಳ ಆಡಳಿತ ವರ್ಗಗಳಲ್ಲಿಯೂ ಹಲವು ಪ್ರಶ್ನೆಗಳನ್ನು ಹುಟ್ಟಿಸುವುದು ಎಂಬ ಕಲ್ಪನೆಯೇ ನಮಗಿರಲಿಲ್ಲ!

ಒಂದು ಕಡೆಯಲ್ಲಿ ಬಂಡವಾಳ ಸಂಗ್ರಹದ ಕೆಲಸ ನಡೆಯುತ್ತಿತ್ತು. ಇದು ಎಷ್ಟು ದೊಡ್ಡ ಮಟ್ಟದ ಪತ್ರಿಕೆ, ಎಷ್ಟು ಬಂಡವಾಳ ಬೇಕಾಗಬಹುದು ಎಂಬ ಕಲ್ಪನೆ ನನಗಂತೂ ಇರಲಿಲ್ಲ. ಇದು ‘ಮುಂಗಾರು’ ಪತ್ರಿಕೆಯಂತೆ ಒಂದು ಸಾರ್ವಜನಿಕ ಬಂಡವಾಳದ ಪತ್ರಿಕೆ ಎಂದು ಗೆಳೆಯ ಎನ್.ಎ.ಎಂ ಇಸ್ಮಾಯಿಲ್ ಹೇಳಿದ್ದರು. ‘ಮುಂಗಾರು’ ಪತನಕ್ಕೆ ಕಾರಣಗಳನ್ನು ಕಣ್ಣಾರೆ ಕಂಡಿದ್ದ ನನಗೆ ಒಂದಿಷ್ಟು ಆತಂಕವೂ ಇರಲಿಲ್ಲ. ಮ್ಯಾನೇಜ್‌ಮೆಂಟ್ ನಮ್ಮ ವಿಷಯವಲ್ಲ; ಪತ್ರಕರ್ತರಾಗಿ ಪ್ರಾಮಾಣಿಕವಾಗಿ ದುಡಿಯುವುದು ಮತ್ತು ಜನರ ಹಿತಕ್ಕಾಗಿ ಬರೆಯುವುದು ಮಾತ್ರ ನಮ್ಮ ಕೆಲಸ ಎಂದು ಆ ಕಾಲದ ಎಲ್ಲಾ ಪತ್ರಕರ್ತರಂತೆ ನಾನೂ ಭಂಡ ಧೈರ್ಯದಿಂದ ನಂಬಿದ್ದೆ! ಅದರ ಎಲ್ಲಾ ಜವಾಬ್ದಾರಿ ಸ್ಯಾಮ್ಯುಯೆಲ್ ಸಿಕ್ವೇರಾ ಮತ್ತು ಅವರ ತಂಡದ ಮೇಲಿತ್ತು. ನಾವ್ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಅದು ಎಷ್ಟು ದೊಡ್ಡ ಜವಾಬ್ದಾರಿ ಆಗಿತ್ತೆಂದು ನನಗೆ ಈಗ ಅಚ್ಚರಿ ಆಗುತ್ತಿದೆ. ಅಷ್ಟಲ್ಲದೇ ನಮ್ಮ ಭಂಡ ಧೈರ್ಯದ ಬಗ್ಗೆ ಇಮ್ಮಡಿ ಅಚ್ಚರಿ ಆಗುತ್ತಿದೆ! ಪರಸ್ಪರ ವಿಶ್ವಾಸ, ಒಬ್ಬರನ್ನು ಇನ್ನೊಬ್ಬರು ಆಧರಿಸುವ ಗುಣ, ಸಹಜ ಉತ್ಸಾಹ, ಉತ್ತಮ ನಾಯಕತ್ವದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಆ ದಿನಗಳಲ್ಲಿ ನಾನು ಕಲಿತೆ!

ಆಗ ನಮ್ಮ ತಂಡವಾದರೂ ಏನಾಗಿತ್ತು!? ಸಾಮ್ಯುಯೆಲ್ ಸಿಕ್ವೇರಾ ಅವರ ನಾಯಕತ್ವದ ಗುಣದ ಪರಿಚಯವಾಗಲು ಅರಂಭವಾಗಿತ್ತು. ಸಂಪಾದಕ ಬಾಲಕೃಷ್ಣ ಗಟ್ಟಿಯವರು ಕಾಲೇಜು ದಿನಗಳಿಂದ ನನಗೆ ಪರಿಚಯದವರು ಮತ್ತು ಗೌರವಾರ್ಹರಾಗಿದ್ದರು. ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಕಲಿಸುತ್ತಿದ್ದವರು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್  ಹೆರಾಲ್ಡ್’ ಪತ್ರಿಕೆಗಳಿಗೆ ಬಂಟ್ವಾಳದ ಪ್ರತಿನಿಧಿಯಾಗಿ ಹವ್ಯಾಸಿ ಪತ್ರಕರ್ತರಾಗಿ ಕೆಲವು ವರ್ಷ ಕೆಲಸ ಮಾಡಿದವರು. ಪೂರ್ಣಕಾಲಿಕ ಪತ್ರಕರ್ತರಾಗಿ ಕೆಲಸ ಮಾಡಿದವರಲ್ಲ. ನಿವೃತ್ತಿ ಬಳಿಕ ‘ನೇತ್ರಾವತಿ ವಾರ್ತೆ’ ಒಂದು ದಿನಪತ್ರಿಕೆ ಆರಂಭಿಸಿ ಉಳಿಸಲು ವಿಫಲ ಪ್ರಯತ್ನ ನಡೆಸಿದವರು. ಆ ಪತ್ರಿಕೆಯಲ್ಲಿ ಇದ್ದ ಇಸ್ಮಾಯಿಲ್ ಸಂಜೆ ದಿನಪತ್ರಿಕೆಯಲ್ಲಿ ಕೆಲಸ ಮಾಡಿದವರು. ಉತ್ತಮ ಓದು ಮತ್ತು ವಿಚಾರ ಹೊಂದಿದ್ದವರು. ನಾನು ‘ಮುಂಗಾರು’ ಪತ್ರಿಕೆಯಲ್ಲಿ ಕೆಲಸ ಬಿಟ್ಟ ನಂತರ ‘ಕರಾವಳಿ ಆಲೆ’, ‘ಕನ್ನಡ ಜನ ಅಂತರಂಗ’, ‘ಹೊಸಸಂಜೆ’ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೆ. ಗೆಳೆಯ ವಿಲ್ಫ್ರೆಡ್ ಡಿಸೋಜಾ ಅವರಿಗೆ ದೈನಿಕದ ಅನುಭವ ಇರದಿದ್ದರೂ ‘ಪಟ್ಟಾಂಗ’ ಎಂಬ ವಾರಪತ್ರಿಕೆ ನಡೆಸಿ ಅನುಭವ ಇದ್ದವರು. ಎಡಪಂಥೀಯ ಸಾಮಾಜಿಕ ಕಾರ್ಯಕರ್ತರಾಗಿ ಪಳಗಿದ್ದವರು. ಕೇಶವ ಕುಂದರ್ ಮತ್ತು ರವೀಂದ್ರ ಶೆಟ್ಟಿ ದಿನಪತ್ರಿಕೆಯ ಅನುಭವ ಹೊಂದಿದ್ದವರು. ಬಿ.ಬಿ ಶೆಟ್ಟಿಗಾರ್ ‘ಮುಂಗಾರು’ ಪತ್ರಿಕೆಯಲ್ಲಿ ಸಾಕಷ್ಟು ಅನುಭವ ಪಡೆದಿದ್ದ ಹಿರಿಯರು. ಕ್ರೀಡಾ ವಿಭಾಗದ ತಜ್ಞರು. ಇದಿಷ್ಟೇ ಸಂಪಾದಕೀಯ ವಿಭಾಗದಲ್ಲಿ ನಮಗಿದ್ದ ಬಂಡವಾಳ!
ಪ್ರಸರಣ ವಿಭಾಗದಲ್ಲಿ ಸ್ಟ್ಯಾನ್ಲಿ ಸೆರಾವೋ ಅತ್ಯಂತ ಉತ್ಸಾಹಿ ಮತ್ತು ಹೊಸಹೊಸ ಯೋಚನೆಗಳನ್ನು ಹೊಂದಿದ್ದರು. ಜಾಹೀರಾತು ವಿಭಾಗದಲ್ಲಿ ವರ್ಗೀಸ್ ಅವರು ಮಲಯಾಳಂ ‘ದೀಪಿಕಾ’ ಪತ್ರಿಕೆಯ ಜಾಹೀರಾತು ವ್ಯವಸ್ಥಾಪಕರಾಗಿ ಇದ್ದವರು.

ಇನ್ನೊಂದು ಕಡೆಯಲ್ಲಿ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಮುದ್ರಣಾಲಯಕ್ಕೆ ಬೃಹತ್ ಕಟ್ಟಡ ನಿರ್ಮಾಣದ ಕೆಲಸ, ಯಂತ್ರ ಸ್ಥಾಪನೆ ಕೆಲಸಗಳು ಭರದಿಂದ ಸಾಗುತ್ತಿದ್ದವು. ನಮಗೆ ಆಗ ಅಲ್ಲಿನ ಸಿಬ್ಬಂದಿಯ ಪರಿಚಯ ಇಲ್ಲದಿದ್ದರೂ, ಒಂದೆರಡು ಸಲ ಭೇಟಿ ನೀಡಿ ಬೆರಗಾಗಿದ್ದೆವು. ಹತ್ತಿರವೇ ಇದ್ದ ‘ಮುಂಗಾರು’ ಪತ್ರಿಕೆಯ ಹಳೆಯ ಪಾಳುಬಿದ್ದ ಕಟ್ಟಡ ನಮ್ಮನ್ನು ಎಚ್ಚರಿಸುತ್ತಾ ಹಲವು ಸಂದೇಶಗಳನ್ನು ರವಾನಿಸುತ್ತಿತ್ತು! ಇದೀಗ ‘ವಾರ್ತಾಭಾರತಿ’ ಪ್ರೆಸ್ ಕೂಡಾ ಹತ್ತಿರದಲ್ಲೇ ಇದೆ ಎಂಬುದೊಂದು ವಿಶೇಷ.

ಅಂತೂ ಇಂತೂ ಪತ್ರಿಕೆಯ ಪುಟಗಳನ್ನು ಸಿದ್ಧಪಡಿಸಿದೆವು. ಕೆಲವು ವಿಶೇಷ ವರದಿಗಳೂ ಇದ್ದವು. ಬಣ್ಣದ ಪತ್ರಿಕೆ ಎಂದು ಮೊದಲೇ ನಿರ್ಧಾರವಾಗಿತ್ತು. ಕನ್ನಡದ ಮೊದಲ ಬಣ್ಣದ ದಿನಪತ್ರಿಕೆ! ಆದರೆ ನಮಗೆ ತಾಂತ್ರಿಕ ಮಾಹಿತಿ ಎಳ್ಳಷ್ಟೂ ಇರಲಿಲ್ಲ! ನಮ್ಮ ಪ್ರೆಸ್ ಸಿದ್ಧವಾಗದೇ ಇದ್ದುದರಿಂದ ಕಾಂಞಗಾಡಿನ ‘ದೀಪಿಕಾ’ ಪ್ರೆಸ್‌ನಲ್ಲಿ ಮುದ್ರಿಸುವುದೆಂದು ನಿರ್ಧಾರವಾಗಿತ್ತು. ಅಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಪೌಲೋಸ್ ಅವರದ್ದೇ ಪಾರುಪತ್ಯ. ಒಂದು ಬೆಳ್ಳಂಬೆಳಗ್ಗೆ ಕಾರಿನಲ್ಲಿ ಹೊರಟೆವು. ಅಲ್ಲಿ ತಲಪಿದಾಗ ಅತ್ಯಂತ ಆತ್ಮೀಯ ಸ್ವಾಗತ ಸಿಕ್ಕಿತು. ಪತ್ರಕರ್ತರು ಒಂದೇ ಕುಲ ಎಂಬಂತಹ ಸ್ವಾಗತವದು! ಅರೆಬರೆ ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಚರ್ಚೆ, ಅನುಭವ ಹಂಚಿಕೆ. ಅಲ್ಲಿ ಹಳೆಯದೇ ವ್ಯವಸ್ಥೆ! ಒಂದು ದೊಡ್ಡ ಇಡೀ ಕೋಣೆಯನ್ನೇ ತುಂಬಿದ ಸಂಪಾದಕೀಯ ಡೆಸ್ಕು! ಸುತ್ತಲೂ ಪತ್ರರ್ತರು! ನಾವು ಯೋಚಿಸಿದ್ದ ಸಂಪೂರ್ಣ ಕಂಪ್ಯೂಟರೀಕೃತ ವ್ಯವಸ್ಥೆಗೆ ಯಾವ ಸಾಮ್ಯವೂ ಇಲ್ಲ!

ಅದರೆ, ಅವರ ದಿನನಿತ್ಯದ ಚಟುವಟಿಕೆ ನೋಡಿ ನಮಗೆ ಬೆರಗು! ಇರುವೆಗಳಂತೆ ವರದಿಗಾರರು ವರದಿಗಳನ್ನು ತರುತ್ತಲೇ ಇದ್ದಾರೆ. ನಮಗೆ ವಿವರಿಸುತ್ತಲೇ ಇದ್ದಾರೆ. ಅವರ ಉತ್ಸಾಹ ನಮ್ಮ ಸಂಕಲ್ಪವನ್ನು ಇಮ್ಮಡಿಗೊಳಿಸಿತು. ಮಧ್ಯಾಹ್ನ ಸಿಬ್ಬಂದಿ ಲೆಕ್ಕದಲ್ಲೇ ಅವರ ಕ್ಯಾಂಟನ್‌ನಲ್ಲಿ ನಮಗೆ ಭರ್ಜರಿ ಊಟ. ತರಕಾರಿ ಆಗಿದ್ದರೂ ಅವರ ಆತಿಥ್ಯದಿಂದಲೇ ಇವತ್ತಿಗೂ ನೆನಪಿರುವಂತದ್ದು!

ಅದರೆ, ನಮ್ಮ ಸಮಸ್ಯೆ ಬೇರೆಯೇ ಇತ್ತು! ಬಣ್ಣದ ಮುದ್ರಣದ ಅನುಭವ ಇಲ್ಲದ ನಾವು ತಯಾರಿಸಿದ್ದ ಪುಟಗಳಲ್ಲಿ ದೋಷವಿತ್ತು. ಕಲರ್ ಸೆಪರೇಷನ್ ಬಗ್ಗೆ ನಮಗೆ ಗೊತ್ತಿದ್ದದ್ದು, ಹಗಲಿನ ಚಂದ್ರನಷ್ಟು ಮಾತ್ರ! ಆದರೆ, ಅಲ್ಲಿನ ತಾಂತ್ರಿಕ ಸಿಬ್ಬಂದಿ ನಮಗೆ ಒಂದಿಷ್ಟೂ ಅವಮಾನ ಮಾಡದೇ ಎಲ್ಲವನ್ನೂ ಸರಿಪಡಿಸಿ, ಒಂದಷ್ಟನ್ನು ಹೇಳಿಕೊಟ್ಟು ನಮ್ಮ ಜ್ಞಾನ ಹೆಚ್ಚಿಸಿದರು.

ಆದರೆ ಪ್ರಿಂಟಿಂಗ್ ಮುಗಿಯುವಾಗ ತಡರಾತ್ರಿಯಾಗಿತ್ತು. ಇನ್ನೊಂದು ಸಮಸ್ಯೆ ಎದುರಾಗಿತ್ತು. ಪತ್ರಿಕೆಗಳ ಕಟ್ಟುಗಳನ್ನು ಜೀಪಿನಲ್ಲಿ ತುಂಬಿಸಿದ ಮೇಲೆ ನಮಗೆ ಸಾಕಷ್ಟು ಜಾಗ ಇರಲಿಲ್ಲ. ನಾವೂ ಪೇಪರ್ ಕಟ್ಟುಗಳ ನಡುವೆ ಕಟ್ಟುಗಳಾಗಿ ಬಿದ್ದುಕೊಂಡೆವು. ದಾರಿಯಲ್ಲಿ ಊಟ ಮಾಡೋಣ ಎಂದುಕೊಂಡು ಹೊರಟಿದ್ದೆವು. ದಾರಿಯಲ್ಲಿ ಊಟವೂ ಸಿಗಲಿಲ್ಲ! ಮಧ್ಯರಾತ್ರಿ ಕಳೆದ ಬಳಿಕ ಹಿಂದೆ ಹೇಳಿದಂತೆ ನಮ್ಮ ತಾತ್ಕಾಲಿಕ ಕಚೇರಿಯಾಗಿದ್ದ ಬಿಷಪ್ಸ್ ಹೌಸ್ ತಲಪಿದ ನಾವು ಪತ್ರಿಕೆ ಇಳಿಸಿದೆವು. ಹಿಂದಿನ ರಾತ್ರಿಯೂ ನಿದ್ದೆ ಇಲ್ಲದ ನಾವು ಬಳಲಿ ಬೆಂಡಾಗಿದ್ದೆವು. ಸಿಕ್ಕ ಸಿಕ್ಕಲ್ಲಿ ಪೇಪರ್ ಹಾಸಿ ಯಮನಿದ್ದೆ ಮಾಡಿದೆವು. ಬೆಳಿಗ್ಗೆ ಅಲ್ಲಿನ ಸಿಬ್ಬಂದಿ ಕೆಲಸಕ್ಕೆ ಬಂದಾಗಲೇ ಎಚ್ಚರ. ಅರೆಬರೆ ಕಣ್ಣು ಬಿಟ್ಟಾಗ ಸುಸ್ತು ಕಾಣಲಿಲ್ಲ! ಮಹಾ ಸಾಧನೆ ಮಾಡಿದ ತೃಪ್ತಿ! ವಿಶ್ವಾಸ! ಈ ಪತ್ರಿಕೆಯನ್ನು ಕಟ್ಟಿ ನಿಲ್ಲಿಸುತ್ತೇವೆಂಬ ಛಲ! ಮುಂದೆ ಇನ್ನಷ್ಟು ಸವಾಲುಗಳನ್ನು ಎದುರಿಸಬೇಕಿತ್ತು! ಆ ಕುರಿತು ಮುಂದಿನ ಸಂಚಿಕೆಗಳಲ್ಲಿ ನೋಡೋಣ!

ಮತಿ ಕೆಡಿಸಿದ ತಪ್ಪು!

ಬಹುಶಃ ‘ಜನವಾಹಿನಿ’ ಆನ್‌ಲೈನ್ ಎಡಿಟಿಂಗ್ ಅರಂಭಿಸಿದ ಮೊದಲ ಕನ್ನಡ ಪತ್ರಿಕೆ. ಅದಕ್ಕಾಗಿ ಎಲ್ಲರಿಗೂ ತರಬೇತಿ ನೀಡಲಾಗಿದ್ದು, ಕೆಲವರಿಗೆ ಟೈಪ್ ಮಾಡಲು ಮಾತ್ರ ಗೊತ್ತಿತ್ತು! ದಿನವೂ ಹೊಸ ಹೊಸ ತಾಂತ್ರಿಕ ವಿಚಾರಗಳನ್ನು ಕಲಿಯುತ್ತಲೇ ಇದ್ದೆವು.

ಮೊದಲಿಗೇ ಯಾರಿಗೂ ಶ್ರೀ, ಶ್ರೀಮತಿ ಬಳಸಬಾರದೆಂದೂ, ಧಾರ್ಮಿಕ ನಾಯಕರಿಗೆ ಮೂರು ಶ್ರೀ ಬದಲು ಒಂದು ಶ್ರೀ ಮಾತ್ರ ಪ್ರದಾನ ಮಾಡುವುದೆಂದು ಉದಾರವಾಗಿ ಒಪ್ಪಲಾಗಿತ್ತು! ಅವು ಅರಂಭದ ದಿನಗಳು. ಒಂದಿಬ್ಬರು ಶ್ರೀ ಬಳಸಿರುವುದು ಗಮನಕ್ಕೆ ಬಂದು ತೆಗೆಯಲು ಹೇಳಿದೆ. ಒಂದೊಂದನ್ನೇ ಹುಡುಕಿ ಬದಲಾಯಿಸುವುದು ತಲೆನೋವಿನ ಕೆಲಸ! ಆಗ ತಾಂತ್ರಿಕ ವಿಭಾಗದಲ್ಲಿ ಆಗ್ನೆಲ್ ಮತ್ತು ಸಂತೋಷ್ ಎಂಬ ಇಬ್ಬರು ಗೆಳೆಯರಿದ್ದರು! ಅವರು ಬಂದು ಈಗಿನ ತಂತ್ರಜ್ಞಾನದಲ್ಲಿ ಅದೆಲ್ಲ ಸುಲಭವೆಂದೂ, ಫೈಂಡ್ ಎಂಡ್ ರಿಪ್ಲೇಸ್ ಆಪ್ಷನ್‌ನಲ್ಲಿ ಸುಲಭವಾಗಿ ಮಾಡಬಹುದೆಂದು ಹೇಳಿದರು. ಶ್ರೀ ಉಪಯೋಗಿಸಿದ್ದವರಿಗೆ ಹಾಗೆ ಮಾಡುವುದು ಹೇಗೆ ಎಂದು ಹೇಳಿಕೊಡಲಾಯಿತು! ಎಲ್ಲರೂ ಹಾಗೆಯೇ ಮಾಡಿದರು!

ಮರುದಿನ ಪತ್ರಿಕೆ ಓದಿದಾಗ ಮತಿ ತಪ್ಪಿ ಬೀಳುವುದು ಬಾಕಿ! ಶ್ರೀ ಮಾಯವಾಗಿತ್ತು ಹೌದು! ಜೊತೆಗೆ ಶ್ರೀಧರ, ಶ್ರೀನಿವಾಸರು ಬರೇ ಧರ ಮತ್ತು ನಿವಾಸರಾಗಿಬಿಟ್ಟಿದ್ದರು! ಅಷ್ಟು ಮಾತ್ರವಲ್ಲ! ಎಲ್ಲಾ ಶ್ರೀಮತಿಗಳ ಮತಿ ಮಾತ್ರ ಉಳಿದುಕೊಂಡಿತ್ತು! ಶ್ರೀಮತಿ ಮಾಲತಿ ಮತಿ ಮಾಲತಿ ಆಗಿದ್ದರು! ಮತಿಕೆಟ್ಟು ಹೋಗಿತ್ತು ಅದನ್ನು ನೋಡಿ!

ಅಗ ತಕ್ಷಣ ಒಂದು ವಿಚಾರ ಹೊಳೆಯಿತು! ನಮ್ಮ ಸಿಬ್ಬಂದಿಗಳಲ್ಲಿ ಹುಡುಗಿಯರೇ ಹೆಚ್ಚಿದ್ದರೂ (ಹೌದು! ಒಬ್ಬರನ್ನು ಬಿಟ್ಟು ಉಳಿದವರೆಲ್ಲಾ ಅವಿವಾಹಿತ ಹುಡುಗಿಯರು! ಅಷ್ಟು ಎಳೆಯ ತಂಡ!) ಯಾರೂ ಈ ಶ್ರೀಗಳ ನಡುವೆ ಶ್ರೀಮತಿಯರೂ ಇರಬಹುದೆಂದು ಯೋಚಿಸಿರಲೇ ಇಲ್ಲ! ಬೇಸರದ ವಿಷಯವಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....