ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯ ಕೋಮು ಸೂಕ್ಷ್ಮ ಊರುಗಳೆಂಬ ಆತಂಕ ಎರಡು-ಮೂರು ದಶಕದಿಂದ ಕಾಡುತ್ತಿದೆ. ವೈಯಕ್ತಿಕ ಸಣ್ಣ-ಪುಟ್ಟ ಗಲಾಟೆ ನೋಡು-ನೋಡುತ್ತಿದ್ದಂತೆ ಕೋಮು ಕಲಹವಾಗಿ ಊರೂರೆ ಹೊತ್ತಿ ಉರಿವ ಸ್ವಭಾವದ ತಾಲೂಕುಗಳಿವು! ಇಲ್ಲಿ ನಡೆದ ದೊಂಬಿ-ಗಲಭೆಗೆ ಲೆಕ್ಕವೇ ಇಲ್ಲ. ಇಂಥ ಹಿನ್ನಲೆಯ ಪುತ್ತೂರು-ಸುಳ್ಯದಲ್ಲಿ ಇದ್ದಕ್ಕಿದ್ದಂತೆ ಅನೈತಿಕ ಪೊಲೀಸ್ಗಿರಿ ಬಿರುಸುಗೊಂಡಿರುವುದು ಜನಸಾಮಾನ್ಯರನ್ನು ಕಂಗಾಲಾಗಿಸಿಬಿಟ್ಟಿದೆ. ಹತ್ತಿರದಲ್ಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ರಂಗತಾಲೀಮು ಇದೆಂಬ ಶಂಕೆ ಶುರುವಾಗಿದೆ. ಕೋವಿಡ್-19ರ ಸತತ ಲಾಕ್ಡೌನ್ನಿಂದ ತುತ್ತು ಕೂಳಿಗೂ ತತ್ವಾರ ಬಂದಿರುವ ಈ ಸಂದರ್ಭದಲ್ಲಿ ಕೋಮು ಗಲಭೆಯೆನಾದರೂ ಆಗಿಬಿಟ್ಟರೆ ಬದುಕು ಬರ್ಬಾದ್ ಎಂಬ ಆತಂಕದಲ್ಲಿವೆ ದುಡಿದು ತಿನ್ನುವ ಜೀವಗಳು..
ಪುತ್ತೂರು ಮತ್ತು ಸುಳ್ಯದಲ್ಲಿ ಕಳೆದೊಂದು ವಾರದಲ್ಲಿ ಒಂದರ ಹಿಂದೊಂದರಂತೆ ಎರಡು ಮತಾಂಧ ಸಂಘರ್ಷಗಳು ಆಗಿಹೋಗಿವೆ. ಈ ದುರ್ಘಟನೆ ನಂತರ ಮುಂದೇನು ಕಾದಿದೆಯೋ ಎಂಬ ಭಯಕ್ಕೆ ಜನರು ಬಿದ್ದಿದ್ದಾರೆ. ಆಗಸ್ಟ್ 15ರಂದು ಪುತ್ತೂರಿನ ಕಬಕ ಎಂಬಲ್ಲಿ ಸಂಘಪರಿವಾರಿಗಳು ಹಾಗು ಎಸ್ಡಿಪಿಐ ಬಳಗದ ನಡುವೆ ಗಲಾಟೆಯಾಗಿದೆ. ಕಬಕದ ಬಿಜೆಪಿ ಆಡಳಿತದ ಗ್ರಾಮ ಪಂಚಾಯತ್ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ-ಮನೆಗೆ ಸ್ವಾತಂತ್ರ್ಯ ಸಂದೇಶ ತಲುಪಿಸುವ ಹೆಸರಲ್ಲಿ ರಥಯಾತ್ರೆ ಆಯೋಜಿಸಿತ್ತು. ಈ ರಥದಲ್ಲಿ ಆರ್ಎಸ್ಎಸ್ ದಿಗ್ಗಜನಾಗಿದ್ದ ಸಾರ್ವರ್ಕರ್ ಪೋಟೋ ಇಡಲಾಗಿತ್ತು. ಈ ರಥ ಯಾತ್ರೆ ಕಬಕದಾಚೆಯ ಪುತ್ತೂರು ನಗರದಲ್ಲೂ ಸುತ್ತಾಡಿಸುವ ಪ್ಲಾನು ಸಂಘಪರಿವಾರದವರು ಹಾಕಿಕೊಂಡಿದ್ದರು.
ಇದು ಕಬಕ-ಪುತ್ತೂರು ಭಾಗದಲ್ಲಿ ಒಂದಿಷ್ಟು ಬೇರು ಬಿಟ್ಟಿರುವ ಎಸ್ಡಿಪಿಐ ಕಾರ್ಯಕರ್ತರನ್ನು ಕೆರಳಿಸಿದೆ. ಸಾರ್ವರ್ಕರ್ ಪೋಟೋ ರಥದಿಂದ ತೆಗೆಯುವಂತೆ ಹಠಹಿಡಿದಿದ್ದಾರೆ. “ಸಾರ್ವರ್ಕರ್ ಬ್ರಿಟೀಶರಿಗೆ ಶರಣಾಗಿದ್ದ ಹೇಡಿ. ಇಂಥವನ ಬದಲಿಗೆ ದೇಶ ಭಕ್ತ ಟಿಪ್ಪುಸುಲ್ತಾನ್ ಭಾವಚಿತ್ರ ಹಾಕುವಂತೆ” ಒತ್ತಾಯಿಸಿದ್ದಾರೆ. ಎರಡು ಕಡೆಯವರಿಗೆ ಕೈಕೈ ಮಿಲಾಯಿಸುವ ಜಗಳ ನಡೆದಿದೆ. ಪೊಲೀಸರ ಪ್ರವೇಶವಾಗಿ ಎರಡು -ಮೂರು ಎಸ್ಡಿಪಿಐ ಮುಂದಾಳುಗಳ ಬಂಧಿಸಲಾಯಿತು. ಆ ಬಳಿಕ ಆ ರಥ ಊರೆಲ್ಲ ಸುತ್ತು ಹಾಕಿ ಪುತ್ತೂರು ಪೇಟೆಯಲ್ಲಿ ಸಂಚಾರ ನಡೆಸಿದೆ. ಇತ್ತ ಎಸ್ಡಿಪಿಐ ಪೊಲೀಸ್ ಠಾಣೆಗೆ ಮತ್ತಿಗೆ ಹಾಕಿತು. ಸಂಸದ-ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರ್ ಎಸ್ಡಿಪಿಐಗೆ ಬುದ್ದಿ ಕಲಿಸುವುದಾಗಿ ಹೇಳಿಕೆ ಕೊಟ್ಟರು. ಬಿಜೆಪಿಗರು ಎಸ್ಡಿಪಿಐ ನಿಶೇಧಿಸುವಂತೆ ಆಗ್ರಹಿಸಿದರು. ಕೇಂದ್ರ-ರಾಜ್ಯ ಎರಡು ಬಿಜೆಪಿಯೇ ಅಧಿಕಾರದಲ್ಲಿರುವಾಗ ಆ ಪಾರ್ಟಿಯ ದೊಡ್ಡವರೆ ಎಸ್ಡಿಪಿಐ ನಿಷೇಧಿಸವಂತೆ ಹೇಳುವುದು ಹಾಸ್ಯಾಸ್ಪದವೆಂದು ಜನರು ನಗುತ್ತಿದ್ದಾರೆ.
ಬಂಧಿತ ಎಸ್ಡಿಪಿಐ ನಾಯಕರು ಒಂದೇ ದಿನದಲ್ಲಿ ಜಾಮೀನಲ್ಲಿ ಹೋರಬಂದರು; ಅವರಿಗೆ ಎಸ್ಡಿಪಿಐ ಸಂಘಟನೆ ವೀರೋಚಿತ ಸ್ವಾಗತ ನೀಡಿತು; ಎಸ್ಡಿಪಿಐ ಪ್ರತಿಭಟನಾ ಮೆರವಣಿಗೆ ಮಾಡಿತು. ಕೆಲ ಖಟ್ಟರ್ ಹಿಂದೂತ್ವವಾದಿಗಳು ತಮ್ಮ ನಾಯಕರ ದೌರ್ಬಲ್ಯದಿಂದ ಎಸ್ಡಿಪಿಐ ಕಾರ್ಯಕರ್ತರ ಮೇಲೆ ದುರ್ಬಲ ಕೇಸು ಬೀಳುವಂತಾಯಿತೆಂದು ಟ್ರೋಲ್ ಮಾಡಿ ಆಕ್ರೋಶ ಹೊರಹಾಕಿದರು. ಇಲ್ಲಿ ಸಹಜವಾದ ಎರಡು ಪ್ರಶ್ನೆಗಳೆದ್ದು ಪ್ರಜ್ಞಾವಂತರ ತಲೆತಿನ್ನುತ್ತಿದೆ! ಗಡಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕೋವಿಡ್ ಶಿಷ್ಟಾಚಾರದ ನಿರ್ಬಂಧವಿರುವಾಗ ಬಿಜೆಪಿಗರಿಗೆ ರಥ ಸಂಚಾರಕ್ಕೆ ಪರವಾನಗಿ ಕೊಟ್ಟಿದ್ಯಾರು? ಅದು ಕಬಕ ದಾಟಿ ಪುತ್ತೂರು ಪ್ರವೇಶಿಸಲು ಪೊಲೀಸರು ಅವಕಾಶ ಹೇಗೆ ಕೊಟ್ಟರು? ಎಸ್ಡಿಪಿಐ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಸಿಕಿದ್ದು ಹೇಗೆ? ಈ ಪ್ರಶ್ನೆಗಳೆಲ್ಲ ಉತ್ತರವಿಲ್ಲದೆ ಹಾಗೆ ಉಳಿದುಕೊಂಡಿದ್ದು, ಜಿಲ್ಲಾಡಳಿತದ ವೈಫಲ್ಯ ಪತ್ತೂರಿಗೆ ಗಂಡಾಂತಕಾರಿಯಾಗಿದೆಯೆಂದು ವಿಶ್ಲೇಷಿಸಲಾಗುತ್ತಿದೆ!
ಪುತ್ತೂರಿನ ಸ್ಥಿತಿ ಬೂದಿ ಮಚ್ಚಿದ ಕೆಂಡದಂತಿರುವಾಗಲೆ ಪಕ್ಕದ ಸುಳ್ಯದಲ್ಲಿ ಅನೈತಿಕ ಪೂಲೀಸ್ಗಿರಿಯ ಅಟ್ಟಹಾಸ ನಡೆದಿದೆ! ಹಿಂದು ಜಾಗರಣಾ ವೇದಿಕೆಯ ನೈತಿಕ ಪಾಠ ಬೋಧನೆಯ ಆರ್ಭಟಕ್ಕೆ ಅಮಾಯಕ ಹಿಂದು ಹುಡುಗಿಯರಿಬ್ಬರಿಗೆ ಕಿರುಕುಳ ಮತ್ತು ಮುಸ್ಲಿಮ್ ಹುಡುಗನ ಪ್ರಾಣ ಸಂಕಟಕ್ಕೀಡಾಗಿತ್ತೆಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾವುದೋ ಕೆಲಸಕ್ಕೆಂದು ಪುತ್ತೂರಿಗೆ ಬಂದಿದ್ದ ಬೆಂಗಳೂರಿನ ಹುಡುಗಿಯರು ವಾಪಸಾಗುತ್ತಿದ್ದರು. ಪುತ್ತೂರಿಂದ ಬೆಂಗಳೂರಿಗೆ ಹೊರಟಿದ್ದ ಈ ಸರ್ಕಾರಿ ಬಸ್ನಲ್ಲಿ ಕುಂಬ್ರಕ್ಕೆ ಮುಸ್ಲಿಂ ಹುಡುನೊಬ್ಬ ಕುಂಬ್ರಕ್ಕೆ ಹೋಗುತ್ತಿದ್ದ. ಬೆಂಗಳೂರಿಂದ ಕರೆಬಂದಿದ್ದರಿಂದ ಆತ ಕುಂಬ್ರದಲ್ಲಿ ಇಳಿಯದೆ ಬೆಂಗಳೂರಿಗೆ ಟಿಕೆಟ್ ಪಡೆದಿದ್ದಾನೆ. ಸಂದರ್ಭೋಚಿತವಾಗಿ ಆ ಹುಡುಗ ಹಾಗು ಹುಡುಗಿಯರ ಒಂದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾರೆ.
#Bajrangdal members stops govt bus accusing a #Muslim man Naushad of having an affair with a Hindu girl travelling from #Puttur, #DakshinKannada to #Bangalore. Local cops after questioning Naushad and examining phones of Naushad and the girls. It was found the news was false. pic.twitter.com/GtLPjidgB2
— Imran Khan (@ImranTheJourno) August 21, 2021
ಇದನ್ನು ಬಸ್ನಲ್ಲಿದ್ದ ಹಿಂದು ಜಾಗರಣಾ ವೇದಿಕೆಯ ಸದಸ್ಯನೊಬ್ಬ ಸಂಶಯದಿಂದಲೇ ನೋಡುತ್ತಿದ್ದ. ತಕ್ಷಣ ಆತ ತನ್ನ ಸಹಚರರಿಗೆ ತಾನು ಅರ್ಥೈಸಿಕೊಡ್ಡದ್ದನ್ನು ಪೋನ್ನಲ್ಲಿ ವಿವರಿಸಿದ್ದಾನೆ. ಹಿಂದು ಜಾಗರಣಾ ವೇದಿಕೆ, ಬಜರಂಗದಳದ ಕಾರ್ಯಕರ್ತರು ಆನೆಗುಂಡಿ ಎಂಬಲ್ಲಿ ಬಸ್ ಅಡ್ಡ ಹಾಕಿದ್ದಾರೆ. ಹಿಂದು ಜಾಗರಣಾ ವೇದಿಕೆಯ ದೊಡ್ಡ ಗುಂಪು ಆ ಹುಡುಗ-ಹುಡುಗಿಯರಿಗೆ ಮುತ್ತಿಗೆ ಹಾಕಿ ರಂಪವೆಬ್ಬಿಸಿದಾರೆ. ಬಸ್ನಲ್ಲಿದ್ದ ಪ್ರಯಾಣಿಕರು, ಬಸ್ ಕಂಡಕ್ಟರ್ ಮತ್ತು ಚಾಲಕ ಅವರು ಅಪರಿಚಿತರು, ಒಟ್ಟಾಗಿ ಪ್ರಯಾಣಿಸುತ್ತಿಲ್ಲವೆಂದು ತಿಳಿಹೇಳಿದರು ಆವೇಶದಲ್ಲಿದ್ದ ಹಿಂಜಾವೆ ತಂಡ ಕೇಳಲಿಲ್ಲ. ಇದು ಅನೈತಿಕ ಟ್ರಿಪ್ ಎಂದು ದಾಂಧಲೆ ಎಬ್ಬಿಸಿಬಿಟ್ಟರು ಆ ನಡು ರಾತ್ರಿಯಲ್ಲಿ!ಬಸ್ ಪೊಲೀಸ್ ಠಾಣೆಗೆ ಒಯ್ಯುವಂತೆ ಬಲವಂತಪಡಿಸಿದರು. ಬಸ್ಸು ಠಾಣೆಯತ್ತ ತೆರಳುತ್ತಿದ್ದಾಗ ಹಿಂಜಾವೆ ತಂಡ ಕಾರಲ್ಲಿ ಹಿಂಬಾಲಿಸಿದೆ.
ಬಸ್ ನಲ್ಲಿದ್ದ ಮುಸ್ಲಿಂ ಹುಡುಗ ಪೈಜಾರಿನಲ್ಲಿ ಇಳಿದು ತನ್ನವರಿಗೆ ಸುದ್ದಿ ಮುಟ್ಟಿಸಿದ್ದಾನೆ. ಇದ್ದಕ್ಕಿದ್ದಂತೆ ಮುಸ್ಲಿಮರ ದೊಡ್ಡ ಗುಂಪು ಜಮೆಯಾಗಿಬಿಟ್ಟಿತು. ವಾತಾವರಣ ಬಿಗಡಾಯಿಸಿ ಸಂಘರ್ಷ ಶುರುವಾಗಿಯಿತು. ಅಷ್ಟರಲ್ಲಿ ಪೊಲೀಸರಿಗೆ ವಿಷಯ ಗೊತ್ತಾಗಿತ್ತು. ಪೊಲೀಸರು ಬಂದು ಬಸ್ ಠಾಣೆಗೆ ಒಯ್ದರು. ಯುವಕ ಯುವತಿಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ; ಅವರ ಮೋಬೈಲ್ ಪರಿಶೀಲಿಸಿದ್ದಾರೆ. ಕಂಡಕ್ಟರ್-ಡ್ರೈವರ್ರ ಪ್ರಶ್ನಿಸಿದ್ದಾರೆ. ಹುಡುಗ ಮತ್ತು ಯುವತಿಯರಿಗೆ ಯಾವುದೆ ಸ್ನೇಹ-ಸಂಬಂಧ ಇಲ್ಲವೆಂಬುದು ಪಕ್ಕಾ ಆಗಿದೆ. ನಂತರವಷ್ಟೇ ಹುಡುಗಿಯನ್ನು ಅದೇ ಬಸ್ಸಿನಲ್ಲಿ ಮತ್ತು ಹುಡುಗನನ್ನು ಬೇರೆ ಬಸ್ಸಿನಲ್ಲಿ ಬೆಂಗಳೂರಿಗೆ ಕಳಿಸಲಾಯಿತು.
ಇದರಿಂದ ಹಿಂಜಾವೆಯವರಿಗೆ ಸಮಾಧಾನವಾಗಲಿಲ್ಲ. ಹುಡುಗನ ಮೇಲೆ ಕೇಸು ಹಾಕಿ, ನಾಲ್ಕು ಬೆತ್ತ ಹಾಕಲು ಒತ್ತಡ ಹಾಕಲಾಯಿತೆನ್ನಲಾಗಿದೆ. ಆದರೆ ಉದ್ದೇಶ ಈಡೇರದೆ ಹಿಂಜಾವೆಯವರು ಪೊಲೀಸರ ಮೇಲೆಯೆ ತಿರುಗಿಬಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆಡಳಿತ ಪಕ್ಷದ ಬೆಂಬಲಿಗರಾದ್ದರಿಂದ ಮುಲಾಜಿಗೆಬಿದ್ದ ಪೊಲೀಸರು ಮತ್ತೆ ಹಿಂಜಾವೆಯವರನ್ನು ಕರೆದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರು ಹಿಂಜಾವೆ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸುತ್ತ ಹೋದರೆನ್ನಲಾಗಿದ್ದು, ಸಾರ್ವಜನಿಕರಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಸಂಘಪರಿವಾರದವರು ವರ್ತಿಸಿದ ರೀತಿ-ನೀತಿಯ ಬಗ್ಗೆ ಅಸಹ್ಯ-ಆಕ್ರೋಶ ಮೂಡಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: 18 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ, ಪ್ರಕರಣ ದಾಖಲು