ಮೈಸೂರು ಜಿಲ್ಲಾಡಳಿತದ ಆದೇಶದಂತೆ ಇತ್ತೀಚೆಗೆ ಎರಡು ದೇವಸ್ಥಾನಗಳನ್ನು ದ್ವಂಸ ಮಾಡಲಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ವೇಳೆ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಉರ್ದು ಪತ್ರಿಕೆಯೊಂದರ ಮುಸ್ಲಿಂ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.
ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದ ಜಾಗರಣ ವೇದಿಕೆಯ ಕಾರ್ಯದರ್ಶಿ ಜಗದೀಶ್ ಕಾರಂತ ಅವರ ಭಾಷಣವನ್ನು, ಸ್ಥಳೀಯ ಉರ್ದು ಪತ್ರಿಕೆ ‘ದಿ ಡೈಲಿ ಕೌಸರ್’ ನ ಮುಖ್ಯ ಸಂಪಾದಕ ಮೊಹಮ್ಮದ್ ಸಫ್ದರ್ ಕೈಸರ್ ಅವರು ವಿಡಿಯೊ ರೆಕಾರ್ಡ್ ಮಾಡುತ್ತಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿದ್ದ ಸಂಘಟನೆಯ ಸದಸ್ಯರು, ರೆಕಾರ್ಡಿಂಗ್ ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದು, ನಂತರ ಅವರನ್ನು ನಿಂದಿಸಿ ಧಳಿಸಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶ: ಮಸೀದಿ ಮೇಲೆ ಕೇಸರಿ ಧ್ವಜ ನೆಟ್ಟು ಹಿಂಸಾಚಾರ ನಡೆಸಿದ ಸಂಘ ಪರಿವಾರದ ಬೆಂಬಲಿಗರು
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪತ್ರಕರ್ತನ ರಕ್ಷಣೆಗೆ ಧಾವಿಸಿದ್ದರು. ಅವರನ್ನು ಮೈಸೂರು ಅರಮನೆ ಆವರಣದ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಕೊಠಡಿಯೊಳಗೆ ಕರೆದೊಯ್ದಿದ್ದಾರೆ. ಆದರೆ ಉದ್ರಿಕ್ತಗೊಂಡಿದ್ದ ದುಷ್ಕರ್ಮಿಗಳು ಈ ವೇಳೆ ಕೂಡಾ ಪತ್ರಕರ್ತನಿಗೆ ಕೋಲಿನಿಂದ ಥಳಿಸಿದ್ದಾರೆ.
ದೇವಸ್ಥಾನಗಳನ್ನು ದ್ವಂಸ ಮಾಡಿದ್ದರ ವಿರೋಧಿಸಿ ಪ್ರತಿಭಟಿಸುತ್ತಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಮೈಸೂರು ಮೂಲದ ಉರ್ದು ಪತ್ರಿಕೆಯ ಪತ್ರಕರ್ತನ ಮೇಲೆ ಥಳಿಸಿರುವ ಘಟನೆ ಗುರುವಾರ ನಡೆದಿದೆ.#NaanuGauri #Taliban #Mysure pic.twitter.com/EYHaVc5E90
— Naanu Gauri (@naanugauri) September 18, 2021
ಘಟನೆಯ ಬಗ್ಗೆ ಪತ್ರಕರ್ತ ಮೊಹಮ್ಮದ್ ಸಫ್ದರ್ ಅವರು ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಗುಂಪು ಹಲ್ಲೆ ಸರಣಿ ಮುಂದುವರಿಕೆ – ‘ಲವ್ ಜಿಹಾದ್’ ಆರೋಪದಲ್ಲಿ ಅಪ್ರಾಪ್ತ ಹಿಂದೂ ಬಾಲಕನಿಗೆ ಥಳಿತ
ಪತ್ರಕರ್ತನ ಮೇಲಿನ ದಾಳಿಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ (ಎಂಡಿಜೆಎ) ಅಧ್ಯಕ್ಷ ಎಸ್ ಟಿ ರವಿಕುಮಾರ್ ಅವರು ಖಂಡಿಸಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಈ ರೀತಿಯ ಪ್ರತಿಭಟನೆಗಳಲ್ಲಿ ಪತ್ರಕರ್ತರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಒತ್ತಾಯಿಸಿದ್ದಾರೆ.
“ನಾನು ಪ್ರತಿಭಟನೆಯನ್ನು ವರದಿ ಮಾಡಲು ಅಲ್ಲಿಗೆ ತೆರಳಿದ್ದು, ಇತರ ವರದಿಗಾರರಂತೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದೆ. ಕೆಲವು ಪ್ರತಿಭಟನಾಕಾರರು ನನ್ನ ಗುರುತಿನ ಚೀಟಿ ಕೇಳಿದರು. ಇದಕ್ಕೆ, ನನ್ನನ್ನು ಮಾತ್ರ ಏಕೆ ಕೇಳುತ್ತಿದ್ದೀರಿ ಎಂದು ಅವರನ್ನು ಕೇಳಿದೆ. ಆದರೆ ಅವರು ನನ್ನ ಮಾತನ್ನು ಕೇಳದೆ, ನನ್ನ ಮೇಲೆ ದಾಳಿಗೆ ಇಳಿದಿದ್ದಾರೆ. ಯಾವುದೇ ಕಾರಣವಿಲ್ಲದೆ ಅವರು ನನ್ನ ಮೇಲೆ ದಾಳಿ ಮಾಡಿದ್ದು, ಈ ವೇಳೆ ಆಘಾತಕ್ಕೊಳಗಾದೆ” ಎಂದು ಮೊಹಮ್ಮದ್ ಸಫ್ದರ್ ಹೇಳಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ನನ್ನನ್ನು ರಕ್ಷಿಸಿದರು. ಇದಕ್ಕಾಗಿ ನಾನು ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬಗ್ಗೆ ದೂರು ಸಲ್ಲಿಸಿದ್ದು, ಒಬ್ಬ ಮಾಧ್ಯಮದ ವ್ಯಕ್ತಿಯಾಗಿ ಅಲ್ಲಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಅಯೋಧ್ಯೆ ಕಾರ್ಯಕ್ರಮ ಬೇಕೆ?; ಬಂಗಾಳಿ ವಿದ್ಯಾರ್ಥಿಗೆ ಥಳಿತ