ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ನಂದಿನಿ ಸುಂದರ್ ಅವರು ಸೋಷಿಯಾಲಜಿ ಪ್ರೊಫೆಸರ್. ಮಾನವಶಾಸ್ತ್ರದ ವಿದ್ಯಾರ್ಥಿಯಾದ ಅವರು ಬಸ್ತರ್ನ ಆದಿವಾಸಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಯ ಕುರಿತು ವಿಸ್ತೃತ ಅಧ್ಯಯನ ನಡೆಸಿ ಅದರಲ್ಲೇ ಪಿಎಚ್ಡಿ ಸಹಾ ಮಾಡಿದ್ದಾರೆ. ಬಸ್ತರ್ನಲ್ಲಿ ಆದಿವಾಸಿಗಳ ಮೇಲೆ ಸರ್ಕಾರದ ಯಂತ್ರಾಂಗ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ದನಿಯೆತ್ತಿದ್ದರಿಂದ ಬಲಪಂಥೀಯರಿಂದ ಅರ್ಬನ್ ನಕ್ಸಲ್ ಹಣೆಪಟ್ಟಿ ಕಟ್ಟಿಕೊಂಡ ವಿದ್ವಾಂಸರಲ್ಲೊಬ್ಬರು. ಈ ಲೇಖನವನ್ನು ನಿಖಿಲ್ ಕೋಲ್ಪೆಯವರು, ಕನ್ನಡಕ್ಕೆ ಅನುವಾದಿಸಿದ್ದಾರೆ.

ಛತ್ತೀಸ್ಗಢದ ಬಿಜೆಪಿ ಸರಕಾರವು 2005ರಲ್ಲಿ ‘ಸಾಲ್ವ ಜುಡಂ (Salwa Judum)’ ಕುರಿತು ಹೀಗೆ ಹೇಳಿತ್ತು. ಅದು ನಕ್ಸಲ್ವಾದವನ್ನು ಕೊನೆಗೊಳಿಸುವ ಉದ್ದೇಶದಿಂದ ಹುಟ್ಟಿಕೊಂಡ ಸ್ವಯಂಪ್ರೇರಿತ ಜನಸಂಘಟನೆಯಾಗಿದ್ದು, ಸಾಲ್ವ ಜುಡಂ ಶಿಬಿರಗಳಿಗೆ ಜನರು ತಾವಾಗಿಯೇ ಮುತ್ತುತ್ತಿದ್ದಾರೆ ಮತ್ತು ಇದುವೇ ಭವಿಷ್ಯದ ಅಭಿವೃದ್ಧಿ ಮಾದರಿ ಎಂದು ಘೋಷಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಸಾಲ್ವ ಜುಡಂ ಶಿಬಿರಗಳಲ್ಲಿ ಬಲಾತ್ಕಾರವಾಗಿ ಕೊಳೆಯುವಂತೆ ಮಾಡಲಾಗಿದ್ದ ಎಲ್ಲಾ ಜನರು ಅವಕಾಶ ಸಿಕ್ಕ ಕೂಡಲೇ ತಮ್ಮ ತಮ್ಮ ಗ್ರಾಮಗಳಿಗೆ ಓಡಿಹೋದರು. ಈಗ ಹದಿನೈದು ವರ್ಷಗಳ ನಂತರ ನಕ್ಸಲ್ವಾದ ದುರ್ಬಲವಾಗಿದೆಯಾದರೂ, ಮುಗಿದಿದೆ ಎಂದು ಹೇಳುವಂತೆಯೇ ಇಲ್ಲ. ಸಾಲ್ವ ಜುಡಂ ಹಚ್ಚಿದ ಬೆಂಕಿಯಿಂದ ಮನೆ ಕಳೆದುಕೊಂಡ ಗ್ರಾಮಸ್ಥರಿಗಾಗಲೀ ಅಥವಾ ಸಂಘರ್ಷದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡವರಿಗಾಗಲೀ ಈ ತನಕ ನ್ಯಾಯ ದೊರೆತಿಲ್ಲ. ಆಳುವ ಪಕ್ಷಗಳು ಮತ್ತು ಮಾಧ್ಯಮಗಳು ಸರಬರಾಜು ಮಾಡಿದ್ದ ಸುಳ್ಳು, ಇನ್ನು ಕೂಡಾ ಸುಳ್ಳಾಗಿಯೇ ಉಳಿದಿದೆ ಎಂಬುದಕ್ಕೆ ಅವರಿಂದು ಜೀವಂತಸಾಕ್ಷಿಗಳಾಗಿದ್ದಾರೆ.
ಸಂವಿಧಾನದ ವಿಧಿ 370 ಮತ್ತು 35 ‘ಎ’ಯನ್ನು ರದ್ದುಪಡಿಸಿರುವುದರಿಂದ ಕಾಶ್ಮೀರಿಗಳು ಎಷ್ಟು ‘ಆನಂದತುದಿಲ’ರಾಗಿದ್ದಾರೆ ಎಂದು ಸರಕಾರ ಮತ್ತು ಮಾಧ್ಯಮಗಳು ಸುಳ್ಳು ಮಾತನಾಡುವುದನ್ನು ಕೇಳಿದಾಗಲೆಲ್ಲಾ, ತಮ್ಮತಮ್ಮ ಗ್ರಾಮಗಳನ್ನು ಬಿಟ್ಟುಹೋಗುವ ಕುರಿತು ಗ್ರಾಮಸ್ಥರು ಎಷ್ಟು ಸಂತೋಷದಿಂದಿದ್ದಾರೆ ಎಂದು ಹೇಳಿದ್ದ ಛತ್ತೀಸ್ಗಢ ಸರಕಾರದ ಸುಳ್ಳು ನನಗೆ ಮತ್ತೆಮತ್ತೆ ನೆನಪಾಗುತ್ತದೆ.
ಕಾಶ್ಮೀರದಂತೆಯೇ ಅಲ್ಲಿಯೂ ಸತ್ಯವನ್ನು ತಿಳಿಯುವ ಸಲುವಾಗಿ ಅಲ್ಲಿಗೆ ಭೇಟಿ ನೀಡಲು ಬಯಸಿದ್ದ ಮಾಧ್ಯಮ, ಸತ್ಯಶೋಧಕ ತಂಡಗಳು, ಅಷ್ಟೇ ಏಕೆ ಕೆಲವು ಪ್ರತಿಪಕ್ಷಗಳನ್ನು ಕೂಡಾ ಅಲ್ಲಿಗೆ ಹೋಗದಂತೆ ತಡೆಯಲಾಯಿತು. ಆದರೆ, ಜನರು ಇದೇ ರೀತಿಯ ಸಂಪರ್ಕ ದಿಗ್ಬಂಧನಕ್ಕೆ ಒಳಗಾಗಿರಲಿಲ್ಲ. ಯಾಕೆಂದರೆ, ಕಾರಣ ಸರಳ. ಕೆಲವೇ ಜನರು ದೂರವಾಣಿ ಬಳಸುತ್ತಿದ್ದರು. ಆದರೆ, ದಾರಿಯಲ್ಲಿಯೇ ಯದ್ವಾತದ್ವವಾಗಿ ಕೊಲ್ಲುವ ಅಥವಾ ಬಂಧಿಸುವ ಬೆದರಿಕೆಯಿಂದ ಜನರು ಮಾರುಕಟ್ಟೆಗಳಲ್ಲಿ ಸೇರಲು ಅಥವಾ ಪರಸ್ಪರ ಭೇಟಿಯಾಗಲು ಅವಕಾಶ ನಿರಾಕರಿಸುವ ಮೂಲಕ ವಾಸ್ತವವಾಗಿ ದಿಗ್ಬಂಧನವನ್ನು ಹೇರಲಾಗಿತ್ತು.
ಛತ್ತೀಸ್ಗಢದಲ್ಲಿ ಆಳುವ ಬಿಜೆಪಿ ಸರಕಾರ ಮತ್ತು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ನ ನಾಯಕ ಮಹೇಂದ್ರ ಕರ್ಮಾ ಜೊತೆಯಾಗಿಯೇ ಸಾಲ್ವ ಜುಡಂ ಕಾರ್ಯಾಚರಣೆ ನಡೆಸಿದಂತೆಯೇ- ಕಾಶ್ಮೀರದ ವಿಷಯದಲ್ಲಿ ಹೆಚ್ಚುಕಡಿಮೆ ಇಡೀ ಪ್ರತಿಪಕ್ಷಗಳು ದುರ್ಬಲವಾಗಿವೆ, ಮೌನವಾಗಿವೆ ಅಥವಾ ವಿಭಜನೆಗೊಂಡಿವೆ. ದಿಲ್ಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ಕೇಳುವ ಅರವಿಂದ ಕೇಜ್ರಿವಾಲ್, ಕಾಶ್ಮೀರದ ಪೂರ್ಣ ರಾಜ್ಯ ಸ್ಥಾನಮಾನವನ್ನು ಕಿತ್ತುಹಾಕಿದ್ದಕ್ಕಾಗಿ ಬಿಜೆಪಿಯನ್ನು ಅಭಿನಂದಿಸಿರುವುದು ತೀರಾ ನಾಚಿಕೆಗೇಡು.
ಇದೇ ರೀತಿಯಲ್ಲಿ ಒಂದು ದಿನ ಏಕಾಏಕಿಯಾಗಿ ರಾಷ್ಟ್ರಪತಿ ಆಡಳಿತದಲ್ಲಿ ತಮ್ಮನ್ನು ಕಂಡು, ಮರುದಿನ ಬೆಳ್ಳಂಬೆಳಗ್ಗೆ ಬದಲಾದ ಭೌಗೋಳಿಕ ನಕ್ಷೆಯನ್ನು ಕಾಣಬಹುದಾದ ಅಪಾಯದಲ್ಲಿರುವ ರಾಜ್ಯ/ ಪ್ರಾದೇಶಿಕ ಪಕ್ಷಗಳೆಲ್ಲವೂ ಬಿಜೆಪಿಯ ಅಗಾಧ ಅಸ್ತಿತ್ವದ ಪ್ರಭಾವಕ್ಕೆ ಒಳಗಾಗಿ ‘ಸ್ಟಾಕ್ಹೋಂ ಸಿಂಡ್ರೋಮ್’ (ತಮ್ಮನ್ನು ಒತ್ತೆ ಇರಿಸಿದವರನ್ನೇ ಅಲ್ಪಸ್ವಲ್ಪ ರಿಯಾಯಿತಿಗಾಗಿ ಮೆಚ್ಚುವ ಮನೋಭಾವ)ನಿಂದ ಬಳಲುತ್ತಿರುವಂತೆ ಕಾಣುತ್ತಿದೆ. ಅಥವಾ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐಯಂತಹ ಕೇಂದ್ರೀಯ ತನಿಖಾ ತಂಡಗಳ ಮೇಲೆ ಬಿಜೆಪಿಯ ಪ್ರಭಾವದ ದಯನೀಯ ಪರಿಣಾಮ ಇದೆಂದು ನಾವು ಭಾವಿಸಬಹುದೇನೋ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸರಪಂಚರನ್ನು ಬಲಗೊಳಿಸಿ ಛತ್ತೀಸ್ಗಢದ ಬಸ್ತಾರ್ನವರಂತೆ ಮಾಡಲಾಗುವುದೆಂಬ ಬಿಜೆಪಿಯ ದಾವೆಯು ಕಾಗದದ ಮೇಲೆ ಮಾತ್ರ. ಆಡಳಿತದೊಂದಿಗೆ ಕೆಲಸ ಮಾಡುವುದರಿಂದ ಜನರು ಈ ಸರಪಂಚರನ್ನು ದ್ವೇಷಿಸುತ್ತಾರೆ. ಅವರಿಗೆ ಜನರ ಬೆಂಬಲದ ಅಗತ್ಯವಿರುತ್ತದೆ. ಕೇವಲ ತಳಮಟ್ಟದಲ್ಲಿ ಮಾತ್ರ ಪ್ರಜಾಪ್ರಭುತ್ವವನ್ನು ಹೊಂದಿ, ಮೇಲು ಹಂತವನ್ನು ಜೈಲಿನಲ್ಲಿಡುವುಕ್ಕಾಗುವುದಿಲ್ಲ ಅಥವಾ ಇದರ ತದ್ವಿರುದ್ಧವೂ ಸಾಧ್ಯವಿಲ್ಲ. ಪ್ರಜಾಪ್ರಭುತ್ವವು ಎಲ್ಲರನ್ನೂ ಕೊಂಡಿಗಳಿಂದ ಜೋಡಿಸುವ ಸರಪಳಿ. ಒಂದು ಕೊಂಡಿ ಮುರಿದರೆ ಇಡೀ ಸರಪಳಿ ನಿಷ್ಪ್ರಯೋಜಕವಾಗುತ್ತದೆ.
ಮುಖ್ಯವಾಹಿನಿಯ ಮಾಧ್ಯಮಗಳು ರಾಷ್ಟ್ರೀಯ ಭದ್ರತೆಯ, ಮುಖ್ಯವಾಗಿ ಪರಿಧಿಯಲ್ಲಿರುವ (ಗಡಿ ಭಾಗದ) ವಿಷಯಗಳು ಬಂದಾಗ ಸಾಮಾನ್ಯವಾಗಿ ಸರಕಾರದ ಜೊತೆಗೆ ಸಾಗಿವೆ. ಆದುದರಿಂದ, ಮಿಜೋರಾಂ ರಾಜ್ಯವನ್ನು ಪ್ರತ್ಯೇಕಿಸಿ, ಇಡೀ ಜನಸಂಖ್ಯೆಯನ್ನೇ ಒಕ್ಕಲೆಬ್ಬಿಸಿ, ಸ್ಥಳಾಂತರ ಮಾಡಲಾಗುತ್ತಿದ್ದಾಗ, ಜನವರಿ 7, 1967ರ ‘ಇಂಡಿಯನ್ ಎಕ್ಸ್ಪ್ರೆಸ್’ ಸಂಪಾದಕೀಯ ಹೀಗೆ ಹೇಳಿದೆ: “4000 ಚದರ ಮೈಲಿಯ ಇಡೀ ಗ್ರಾಮೀಣ ಜನಸಂಖ್ಯೆಯನ್ನು ಖಾಲಿ ಮಾಡಿಸುವುದು ಒಂದು ಬೃಹತ್ ಕಾರ್ಯಾಚರಣೆ. ಇದರ ಅರ್ಥವೆಂದರೆ, ಒಂದೋ ಅಧಿಕಾರಿಗಳು ದೇಶವನ್ನು ನಂಬಿಸಬಯಸುವುದಕ್ಕಿಂತ ಪರಿಸ್ಥಿತಿಯು ಹೆಚ್ಚು ಗಂಭೀರವಾಗಿದೆ ಅಥವಾ ಬಂಡುಕೋರರ ಕೊನೆಯ ಕುರುಹುಗಳನ್ನು ತೊಡೆದುಹಾಕಲು ಹೊಸ ದೃಢ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಸ್ಥಳಾಂತರದಿಂದ ಬಂಡುಕೋರರ ಗುಂಪುಗಳನ್ನು ಪ್ರತ್ಯೇಕಿಸಿ, ಗುಡಿಸಿಹಾಕಲು ನೆರವಾಗುತ್ತದೆ. ಆದರೆ, 60,000 ಜನರಿಗೆ ಅವರ ಮನೆಗಳಿಂದ ಬಹುದೂರದಲ್ಲಿ ಪುನರ್ವಸತಿ ಕಲ್ಪಿಸುವುದು ಗಂಭೀರ ಸಮಸ್ಯೆಯನ್ನು ಒಡ್ಡಲಿದೆ. ಭದ್ರತಾ ಕಾರ್ಯಾಚರಣೆಯು ಒಂದು ಹಂತದ ಬಲಪ್ರಯೋಗದಲ್ಲಿ ತೊಡಗಬೇಕಾಗಬಹುದು.”
ಪ್ರಸ್ತುತ ಮಾಧ್ಯಮಗಳು ‘ಒಂದು ಹಂತದ ಬಲಪ್ರಯೋಗ’ವನ್ನು ಒಪ್ಪಿಕೊಳ್ಳುವುದು ಮಾತ್ರವಲ್ಲದೇ, ‘ಐತಿಹಾಸಿಕ ಕ್ಷಣ’, ‘ಭೌಗೋಳಿಕ ನಕ್ಷೆಯ ಪುನರ್ರಚನೆ’ ‘ಸರ್ಜಿಕಲ್ ಸ್ಟ್ರೈಕ್’ ಇತ್ಯಾದಿ ಶೀರ್ಷಿಕೆಯ ಮೂಲಕ ಸಕ್ರಿಯವಾಗಿ ವಿಜಯೀಭಾವವನ್ನು ಪ್ರದರ್ಶಿಸುತ್ತಿವೆ. ಬಿಜೆಪಿ ನಾಯಕ ಆಡ್ವಾಣಿ, “ಮಾಧ್ಯಮಗಳು ಕೇವಲ ಬಾಗಲು ಹೇಳಿದಾಗ ತೆವಳಿದವು” ಎಂಬ ಪ್ರಸಿದ್ಧ ಹೇಳಿಕೆ ನೀಡಿದ್ದಂತಹ ತುರ್ತುಪರಿಸ್ಥಿತಿಗಿಂತ ಇದು ಕೆಟ್ಟದಾಗಿದೆ. ಇಲ್ಲಿ ಮಾಧ್ಯಮಗಳು ಖಂಡಿಸಬೇಕಾಗಿದ್ದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿವೆ. ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದ್ದಲ್ಲಿ ಅವರು ಅದರ ವಿನಾಶಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ. ಗೌರಿ ಲಂಕೇಶ್ ಅವರಂತಹ ನಿರ್ಭೀತ ಧ್ವನಿಗಳು ಅತ್ಯಂತ ಹೆಚ್ಚು ನೆನಪಾಗುವುದು ಇಂತಹ ಸಂದರ್ಭಗಳಲ್ಲಿಯೇ.
ಇವೆಲ್ಲವುಗಳ ಮರೆಯಲ್ಲಿರುವುದು ಖಂಡಿತವಾಗಿಯೂ ಬಂಡವಾಳಶಾಹಿ ಕಾರ್ಪೋರೆಟ್ ಹಿತಾಸಕ್ತಿಗಳೇ. ವಿಧಿ 35 ‘ಎ’ಯನ್ನು ತೆಗೆದುಹಾಕುವುದರಿಂದ ಹೆಚ್ಚಿನ ಹೂಡಿಕೆಯ ಅವಕಾಶ ಸೃಷ್ಟಿಯಾಗುತ್ತದೆ ಎಂದು ಈಗ ಹೇಳಲಾಗುತ್ತಿರುವಂತೆಯೇ, 5ನೇ ಪರಿಚ್ಛೇದ ಮತ್ತು ಆದಿವಾಸಿಗಳ ಭೂಮಿ ಪರಭಾರೆಗೆ ಸಂಬಂಧಿಸಿದ ಕಾನೂನುಗಳನ್ನು ತೊಡೆದುಹಾಕುವುದರಿಂದ ಆದಿವಾಸಿಗಳಿಗೆ ಲಾಭವಾಗಲಿದೆ ಎಂಬ ಮಾತುಗಳನ್ನು ಮುಂದೆ ನಾವು ಕೇಳಲಿದ್ದೇವೆ. ಜಾರ್ಖಂಡ್ನಲ್ಲಿ ಛೋಟಾ ನಾಗಪುರ ಒಕ್ಕಲು ಕಾಯಿದೆ ಮತ್ತು ಸಂತಾಲ್ ಪರಗಣ ಒಕ್ಕಲು ಕಾಯಿದೆಗಳನ್ನು ದುರ್ಬಲಗೊಳಿಸುವ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ.
ಪರಿಧಿಯಲ್ಲಿ ನಡೆಯುವುದು ಕೇಂದ್ರ ಭಾಗದಲ್ಲಿಯೂ ನಡೆಯುವುದು. ಕಾಶ್ಮೀರದಲ್ಲಿನ ತುರ್ತು ಪರಿಸ್ಥಿತಿಯು ಬೇಗನೇ ಘೋಷಿತ ಅಖಿಲ ಭಾರತ ತುರ್ತು ಪರಿಸ್ಥಿತಿಯ ಸ್ವರೂಪ ಪಡೆಯಲಿದೆ. ಹೇಗಿದ್ದರೂ, ಅಘೋಷಿತ ತುರ್ತು ಪರಿಸ್ಥಿತಿಯು ಈಗಾಗಲೇ ನಮ್ಮ ಮೇಲಿದೆ.


