ನಾರಾಯಣ ಗುರುಗಳ ಟ್ಯಾಬ್ಲೊವನ್ನು ಗಣರಾಜ್ಯೋತ್ಸವದ ಪರೇಡ್ನಲ್ಲಿ ಪ್ರದರ್ಶಿಸಲು ನಿರಾಕರಿಸಿದ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ನಡೆಯನ್ನು ವಿರೋಧಿಸಿ ಕರಾವಳಿಯ ಅವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಸ್ವಾಭಿಮಾನದ ನಡಿಗೆ’ಯ ರ್ಯಾಲಿ ಹಾಗೂ ಪಾದಯಾತ್ರೆಗೆ ಬಂಟ್ವಾಳ ತಾಲೂಕಿನಿಂದ ಮಾಜಿ ಸಚಿವ ಬಿ. ರಮಾನಾಥ ರೈ ಬುಧವಾರ ಚಾಲನೆ ನೀಡಿದ್ದಾರೆ.
ಮೋದಿ ಸರ್ಕಾರವು ದೆಹಲಿಯಲ್ಲಿ ನಡೆಯುತ್ತಿರುವ 73 ನೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೊವನ್ನು ಪ್ರದರ್ಶಿಸಲು ನಿರಾಕರಿಸಿದೆ. ಬಿಜೆಪಿ ಸರ್ಕಾರದ ಈ ನಿಲುವನ್ನು ಖಂಡಿಸಿ ಉಡುಪಿ ಮತ್ತು ದಕ್ಷಿಣ ಕನ್ನಡದ ಪ್ರತಿ ತಾಲೂಕಿನಲ್ಲಿ ಗುರುಗಳ ಟ್ಯಾಬ್ಲೊ ಮೆರವಣಿಗೆ ನಡೆಯಲಿದೆ.
ಈ ಹಿನ್ನಲೆಯಲ್ಲಿ ಬಂಟ್ವಾಳದ ಗಣದಪಡ್ಪುವಿನ ನಾರಾಯಣ ಗುರು ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಜಿ ಸಚಿವ ರಮಾನಾಥ ರೈ ಅವರು ಗುರುಗಳ ಟ್ಯಾಬ್ಲೊ ವಾಹನಕ್ಕೆ ಚಾಲನೆ ನೀಡಿದ್ದಾರೆ.
ಗುರುಗಳ ಟ್ಯಾಬ್ಲೊ ಮೆರವಣಿಯ ‘ಸ್ವಾಭಿಮಾನದ ನಡಿಗೆ’ಯ ರ್ಯಾಲಿ ಬಂಟ್ವಾಳದಿಂದ ಮದ್ಯಾಹ್ನ ಎರಡು ಗಂಟೆಗೆ ಹೊರಡಲಿದ್ದು, ಮೂರು ಗಂಟೆಗೆ ಕಂಕನಾಡಿಯ ಗರೋಡಿಗೆ ತಲುಪಲಿದೆ. ಅಲ್ಲಿ ಒಕ್ಕೂಟ ಸರ್ಕಾರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯು ಮಂಗಳೂರಿನ ಕಂಕನಾಡಿ ಗರೋಡಿಯಿಂದ ಹೊರಟು, ನಾರಾಯಣ ಗುರುಗಳು ಕಟ್ಟಿಸಿದ ಕುದ್ರೋಳಿ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ.
ಈ ವೇಳೆ ದೇವಸ್ಥಾನದಲ್ಲಿ ಬೃಹತ್ ಸಮಾವೇಶ ಕೂಡಾ ನಡೆಯಲಿದೆ ಎಂದು ಜನಾರ್ದನ ಪೂಜಾರಿ ಕಳೆದ ವಾರವೆ ತಿಳಿಸಿದ್ದರು.
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿತ್ತು. ಈ ಮೂಲಕ ಸತತ ಮೂರನೇ ಬಾರಿಗೆ ಕೇರಳ ಗಣರಾಜ್ಯೋತ್ಸವ ಪರೇಡ್ನಿಂದ ಹೊರಗುಳಿಯಲಿದ್ದು, ದೇಶದಾದ್ಯಂತ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ದೇಶದಾದ್ಯಂತ ಈ ಬಗ್ಗೆ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಆದರೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಕಾರ್ಕಾಳ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒಕ್ಕೂಟ ಸರ್ಕಾರದ ಕ್ರಮವನ್ನು ಸಮರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಿಸಿದ ದಿನ ಇಡೀ ರಾತ್ರಿ ಕಣ್ಣೀರು ಸುರಿಸಿದ್ದೆ: ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ