ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೆಹಲಿಯ ಗಣರಾಜ್ಯೋತ್ಸವದ ಪರೇಡ್ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ಮಾಡಿರುವುದು ನನಗೆ ತುಂಬಾ ನೋವುಂಟು ಮಾಡಿದ್ದು, ಆ ದಿನ ಇಡೀ ರಾತ್ರಿ ನಾನು ಕಣ್ಣೀರು ಸುರಿಸಿದ್ದೆ ಎಂದು ಒಕ್ಕೂಟ ಸರ್ಕಾರದ ಮಾಜಿ ಸಚಿವ, ಹಿರಿಯ ನಾಯಕ ಬಿ. ಜನಾರ್ಧನ ಪೂಜಾರಿ ಹೇಳಿದ್ದರೆ. ಬಿಜೆಪಿ ಸರ್ಕಾರದ ಧೋರಣೆ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಗುರುಗಳ ಟ್ಯಾಬ್ಲೊ ಮೆರವಣಿಗೆ ಮಾಡುವುದಾಗಿ ಅವರು ಹೇಳಿದ್ದಾರೆ.
ವಿಡಿಯೊ ಸಂದೇಶದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, “ಜನವರಿ 26 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ನಿರಾಕರಣೆ ಮಾಡಿದ್ದು ನನಗೆ ತುಂಬಾ ನೋವುಂಟು ಮಾಡಿದೆ. ಆ ದಿನ ನಾನು ನಿದ್ದೆಯೆ ಮಾಡಿಲ್ಲ, ಇಡೀ ರಾತ್ರಿ ಕಣ್ಣೀರು ಸುರಿಸಿದ್ದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ವಿವಾದ: ಸುಳ್ಳು ಹೇಳಿದ ಸಚಿವ ಸುನಿಲ್ ಕುಮಾರ್?
“ನಾರಾಯಣ ಗುರುಗಳು ಯಾವು ಜಾತಿಗೂ, ಯಾವ ಸಮಾಜಕ್ಕೂ, ಯಾವೊಂದು ಧರ್ಮಕ್ಕೂ ಸೇರಿದವರಲ್ಲ. ಅವರು ಎಲ್ಲಾ ಸಮಾಜಕ್ಕೆ, ಎಲ್ಲಾ ಧರ್ಮದವರಿಗೆ ಹಾಗೂ ಎಲ್ಲರಿಗೂ ಸೇರಿದ ಮಹಾನ್ ವ್ಯಕ್ತಿ. ಸರ್ಕಾರದ ಈ ದುಷ್ಕೃತ್ಯವನ್ನು ಖಂಡನೆ ಮಾಡಿ ಜನವರಿ 26ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಚಿತ್ರವನ್ನು ನಾನೇ ತಲೆಯಲ್ಲಿ ಹೊತ್ತುಕೊಂಡು ಮಂಗಳೂರಿನ ಕಂಕನಾಡಿ ಗರೋಡಿಯಿಂದ ಹೊರಟು ನಾರಾಯಣ ಗುರುಗಳು ಕಟ್ಟಿಸಿದ ಕುದ್ರೋಳಿ ದೇವಸ್ಥಾನದಲ್ಲಿ ಸೇರುತ್ತೇವೆ. ಈ ಮೆರವಣಿಗೆಯಲ್ಲಿ ಜಾತಿ, ಮತ,ಧರ್ಮ ಯಾವುದನ್ನೂ ಲೆಕ್ಕಿಸದೆ ಇದರಲ್ಲಿ ಭಾಗವಹಿಸಬೇಕು” ಎಂದು ಅವರು ಹೇಳಿದ್ದಾರೆ.
ಅವಳಿ ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳ ಆಯೋಜನೆಯಿಂದ ಜಿಲ್ಲೆಗಳ ಪ್ರತಿ ತಾಲೂಕುಗಳಲ್ಲಿ ಗುರುಗಳ ಟ್ಯಾಬ್ಲೊ ಆಯೋಜನೆ ಮಾಡಲಾಗಿದೆ. ಜನವರಿ 26 ರ ಸಂಜೆ ಕುದ್ರೋಳಿ ದೇವಸ್ಥಾನದಲ್ಲಿ ಸಮಾವೇಶ ನಡೆಸಿ, ಗುರುಗಳ ತತ್ವದಂತೆ ಸಂಘರ್ಷ ರಹಿತವಾಗಿ ನಾವು ನಮ್ಮ ಹಕ್ಕುಗಳನ್ನು ಮಂಡಿಸಲಿದ್ದೇವೆ. ಗುರುವಿಗಾದ ಅವಮಾನದ ವಿರುದ್ಧ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸೆಟೆದು ನಿಲ್ಲೋಣ ಎಂದು ಸಮಾವೇಶದ ಪರವಾಗಿ ಹೊರಡಿಸಲಾಗಿರುವ ಪೋಸ್ಟರ್ ಹೇಳಿದೆ.
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿತ್ತು. ಈ ಮೂಲಕ ಸತತ ಮೂರನೇ ಬಾರಿಗೆ ಕೇರಳ ಗಣರಾಜ್ಯೋತ್ಸವ ಪರೇಡ್ನಿಂದ ಹೊರಗುಳಿಯಲಿದ್ದು, ದೇಶದಾದ್ಯಂತ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ದೇಶದಾದ್ಯಂತ ಈ ಬಗ್ಗೆ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಆದರೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಕಾರ್ಕಾಳ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒಕ್ಕೂಟ ಸರ್ಕಾರದ ಕ್ರಮವನ್ನು ಸಮರ್ಥಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಜನವರಿ 26 ಗಣರಾಜ್ಯೋತ್ಸವ ಸಮಾರಂಭದಲ್ಲಿ ಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ವನ್ನು ನಿರಾಕರಿಸಿ ರುವುದು, ಮನುವಾದಿ ಗಳು ಹಿಂದುಳಿದ ಸಮಾಜವನ್ನು ಕಡೆಗಣಿಸುವಂತಿದೆ.