Homeಮುಖಪುಟಗ್ರಾಮೀಣ ಭಾರತಕ್ಕೆ ಬೇಕಿದೆ ಹೊಸ ’ಎಂಎಸ್‌ಪಿ’ - ’ಗರಿಷ್ಠ ಬೆಂಬಲ ನೀತಿ’

ಗ್ರಾಮೀಣ ಭಾರತಕ್ಕೆ ಬೇಕಿದೆ ಹೊಸ ’ಎಂಎಸ್‌ಪಿ’ – ’ಗರಿಷ್ಠ ಬೆಂಬಲ ನೀತಿ’

- Advertisement -
- Advertisement -

ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿರುವುದು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಹೊಂದಾಣಿಕೆತನ, ಕಟಿಬದ್ಧತೆ ಮತ್ತು ಪ್ರಾಮಾಣಿಕತೆ ಯಶಸ್ಸು ಸಾಧಿಸಿರುವುದು ಒಂದು ಚಾರಿತ್ರಿಕ ವಿದ್ಯಮಾನವೇ ಸರಿ. ಈ ಆರಂಭಿಕ, ಗಮನಾರ್ಹ ಗೆಲುವು ಮುಂದೆ ಹೇಗೆ ಪೂರ್ಣ ರೂಪದಲ್ಲಿ ತೆರೆದುಕೊಳ್ಳುತ್ತದೆ ಹಾಗೂ ಅದು ಕೃಷಿ ನೀತಿಗಳ ಮೇಲೆ ಮಾತ್ರವಲ್ಲದೆ ಪ್ರಜಾತಂತ್ರ ಮತ್ತು ಬಂಡವಾಳವಾದಗಳ ನಡುವಿನ ಜಿದ್ದಾಜಿದ್ದಿನ ಸಂಘರ್ಷದ ಮೇಲೆ ಕೂಡ ಏನು ಪ್ರಭಾವ ಉಂಟುಮಾಡುತ್ತದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಇದು, ಈ ಚಳವಳಿಯು ಮೂರು ಕೃಷಿ ಕಾಯ್ದೆಗಳ ಬದಲು ಏನನ್ನು ಡಿಮ್ಯಾಂಡ್ ಮಾಡುತ್ತದೆ ಎಂಬುದನ್ನು ಅವಲಂಬಿಸಿದೆ. ಬಹುಮುಖ್ಯ ಕೃಷಿ ಉತ್ಪನ್ನಗಳಿಗೆ ’ಕನಿಷ್ಠ ಬೆಂಬಲ ಬೆಲೆ’(ಎಂಎಸ್‌ಪಿ)ಯ ಬೇಡಿಕೆಯು ಚಳವಳಿ ಮತ್ತು ಸರ್ಕಾರದ ನಡುವಿನ ’ಮಾತುಕತೆ’ಗಳ ಉದ್ದಕ್ಕೂ ಬಗೆಹರಿಯದೆ ಉಳಿದಿದ್ದ ಒಂದು ಕಗ್ಗಂಟು ಆಗಿತ್ತು; ಎಂಎಸ್‌ಪಿಯನ್ನು ಕಾಯ್ದೆಬದ್ಧಗೊಳಿಸಬೇಕು, ಇನ್ನೂ ವಿಸ್ತರಿಸಬೇಕು ಹಾಗೂ ಹೆಚ್ಚು ಮಾಡಬೇಕು ಎಂದು ಚಳವಳಿಯ ನಾಯಕರು ಆಗ್ರಹಿಸುತ್ತಾ ಬಂದರೆ, ಸರ್ಕಾರವು ಇಂಥ ಯಾವುದೇ ಕೇಳಿಕೆಯನ್ನು ಸಾರಾಸಗಟು ತಳ್ಳಿಹಾಕಿತ್ತು. ಎಂಎಸ್‌ಪಿ ವಿಚಾರವು ಪ್ರಧಾನವಾಗಿ ವೆಚ್ಚಕ್ಕನುಗುಣವಾಗಿ ಬೆಲೆ ನಿರ್ಧರಿಸುವುದಕ್ಕೆ ಸಂಬಂಧಿಸಿದ್ದು; ಒಂದು ಉದ್ಯಮ, ವಹಿವಾಟು ಅಥವಾ ಜೀವನೋಪಾಯವಾಗಿ ಕೃಷಿಯ ಮೌಲ್ಯಮಾಪನಕ್ಕೆ ಇದೇ ಆಧಾರವಾಗಿರಬೇಕಾದುದು ಸೂಕ್ತವಾದದ್ದು. ಜೊತೆಗೆ ಅದರಾಚೆಗೂ ಯೋಚಿಸುವುದು ಅಗತ್ಯವಿದೆ.

ಬಹುತೇಕ ಗ್ರಾಮೀಣ ಭಾರತವು ಪರಸ್ಪರ ವೈರುಧ್ಯಗಳಿಂದ ಕೂಡಿದ ಕೃಷಿ ನೀತಿಗಳ ಕಹಿ ಫಲವನ್ನು ಅನುಭವಿಸುತ್ತಾ ಬಂದಿದ್ದು, ಗ್ರಾಮೀಣವನ್ನು ಆರ್ಥಿಕವಾಗಿ ಬಹುಪಾಲು ಕಡೆಗಣಿಸಿ ರಾಜಕೀಯವಾಗಿ ಓಟಿಗೋಸ್ಕರ ಮಾತ್ರ ಬೇಕಾದಂತೆ ಬಳಸಿಕೊಳ್ಳಲಾಗಿದೆ. ಆದ್ದರಿಂದ ’ಗರಿಷ್ಠ ಬೆಂಬಲ ನೀತಿ’ಯ ಪ್ಯಾಕೇಜನ್ನು ಕೇಳಲು ಇದೀಗ ಸಕಾಲವಾಗಿದೆ. ಅದೇ ಹೊತ್ತಿನಲ್ಲಿ, ಒಟ್ಟಾರೆ ರಾಜಕೀಯಾರ್ಥಿಕ ನೀತಿಗಳು ಗ್ರಾಮೀಣ ಭಾರತದ ಮೇಲೆ ಹೇರಿರುವ ಬಹುಬಗೆಯ ಕಾಯಿಲೆಗಳಿಗೆಲ್ಲ ಕೃಷಿ ಉತ್ಪನ್ನಗಳ ಬೆಲೆ ನಿಗದಿ, ಮಾರಾಟ ಮತ್ತು ವಿತರಣೆ ಎನ್ನುವುದು ಸಿದ್ಧೌಷಧವಾಗಲು ಸಾಧ್ಯವಿಲ್ಲ ಎಂಬ ಗ್ರಹಿಕೆಯ ಜೊತೆಗೇ ಇದು ಮೂಡಿಬರಬೇಕಿದೆ. ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಅಸಮಾನತೆಗಳು, ಸಾಂಸ್ಥಿಕ ಮತ್ತು ಆಡಳಿತಾತ್ಮಕ ಕೊರತೆಗಳು ಹಾಗೂ ಗ್ರಾಮೀಣ ಭಾರತವನ್ನು ರಾಜಕೀಯವಾಗಿ ವಿರೂಪಗೊಳಿಸಿರುವ ನೀತಿಗಳು-ನಡೆಗಳು – ಇವೆಲ್ಲವನ್ನೂ ಸಮಗ್ರವಾಗಿ, ಸರ್ವಾಂಗೀಣವಾಗಿ ಅಡ್ರೆಸ್ ಮಾಡುವಂಥ ನೀತಿಗಳು ಮಾತ್ರವೇ ಗ್ರಾಮೀಣ ಭಾರತಕ್ಕೊಂದು ಹೊಸ ಜೀವದಾನ ನೀಡಬಲ್ಲ ಉತ್ತರವಾಗಲು ಸಾಧ್ಯ.

ಮೊದಲಿಗೆ, ಸಬ್ಸಿಡಿ ಆಧಾರಿತವಾಗಿ ಕೈಗಾರಿಕಾ-ರಾಸಾಯನಿಕ ಕೃಷಿಯನ್ನು ಉತ್ತೇಜಿಸುವ ’’ಹಸಿರು ಕ್ರಾಂತಿ’ಯ ಒಟ್ಟಾರೆ ಮಾದರಿಯಿಂದ ಹಂತಹಂತವಾಗಿ, ಆದರೆ ಸಾಕಷ್ಟು ಪ್ರಮಾಣದಲ್ಲಿ ಹಿಂದೆ ಸರಿಯುವುದು ಆಗಬೇಕು. ಆದರೆ, ’ಸುಸ್ಥಿರ’ ಕೃಷಿಗೆ ಪಲ್ಲಟಗೊಳ್ಳುವ ಮಾತು ಅಥವಾ ಪ್ರಯತ್ನವು ಪ್ರಧಾನಿಯವರು (ತನ್ನ ಭಾಷಣದಲ್ಲಿ) ಪ್ರಸ್ತಾಪಿಸಿದ ’ಝೀರೋ ಬಜೆಟ್ ಸಹಜ ಕೃಷಿ’ಯ ಮೂಲಕ ಆಗಲು ಸಾಧ್ಯವಾ ಎಂಬ ಬಗ್ಗೆ ಜಾಗರೂಕವಾಗಿ ಆಲೋಚಿಸಬೇಕು. ಭಾರತದ ಕೃಷಿ-ವಾತಾವರಣ-ಸಂಸ್ಕೃತಿಯ ವಲಯ(ಜ಼ೋನ್)ಗಳು ಬಹಳ ವೈವಿಧ್ಯಪೂರ್ಣವಾದಂಥವು; ’ಸಹಜ ಕೃಷಿ’ಯ ಯಾವುದೇ ಏಕೈಕ ಮಾದರಿಯು ಅವೆಲ್ಲಕ್ಕೂ ಸೂಕ್ತವಾಗುವುದು ಸಾಧ್ಯವಿಲ್ಲ. ಅದರ ಬದಲು, ಪ್ರಾದೇಶಿಕವಾಗಿ ವಿಕಾಸಗೊಂಡು ರೂಢಿಗತವಾಗಿರುವ ಸುಸ್ಥಿರ ಕೃಷಿ-ಸಂಸ್ಕೃತಿಗಳನ್ನು ಉಳಿಸಿಕೊಂಡು, ಅವುಗಳೊಳಗಿರುವ ಜೀತ, ಗೇಣಿ ಮುಂತಾದ ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಿ, ಹೊಸ ವಾತಾವರಣದ ಪ್ರವೃತ್ತಿಗಳಿಗೆ ಸರಿಹೊಂದುವಂತೆ ರೂಪಿಸುವ ಒಂದು ಕಾಂಬಿನೇಶನ್ ಅಗತ್ಯವಿದೆ.

ಸಣ್ಣ, ಅತಿ ಸಣ್ಣ ರೈತರ ಬಗೆಗಿನ ಪ್ರಧಾನಿಯ ಕಳಕಳಿ ನೈಜವಾದುದೇ ಆಗಿದ್ದಲ್ಲಿ, ಭೂಮಿಯ ಸಮಾನ ಹಂಚಿಕೆ ಮಾತ್ರವಲ್ಲದೆ ನೀರಿನ ಸಂಪನ್ಮೂಲದ ಸಮಾನ ಹಂಚಿಕೆಯೂ ಆಗುವಂತೆ ನೋಡಿಕೊಳ್ಳಬೇಕು; ಅಷ್ಟೇ ಅಲ್ಲ, ನಾನಾ ಬಗೆಯ ಪರ್ಯಾಯ ಆರ್ಥಿಕ ವಿಧಾನಗಳು ಮತ್ತು ಬೆಂಬಲ ರಚನೆಗಳೂ ಸಮಾನವಾಗಿ ದಕ್ಕುವಂತಹ ನೀತಿಗಳನ್ನು ಸಹ ರೂಪಿಸಬೇಕು. (ಸಾಮಾನ್ಯವಾಗಿ ಗ್ರಾಮೀಣೇತರ ಫಲಾನುಭವಿಗಳ ಪಾಲಾಗುವ) ಸಬ್ಸಿಡಿಗಳು, ಸಾಲ ಮರುಪಾವತಿಯ ಮುಂದೂಡಿಕೆ, ಚುನಾವಣಾ ಸಮಯಗಳಲ್ಲಿ ಘೋಷಿಸುವ ಒಂದಷ್ಟು ಪುಕ್ಕಟೆ ಸವಲತ್ತುಗಳು ಮುಂತಾದುವುಗಳ ಬದಲು, ಮಣ್ಣು, ನೀರು, ಬೀಜ ಮತ್ತು ಕೃಷಿ-ಜೀವವೈವಿಧ್ಯಗಳನ್ನು ಪುನರುಜ್ಜೀವನಗೊಳಿಸುವಂಥ ’ಪುನರುಜ್ಜೀವನ ಕೃಷಿ’ಯ ವಿಸ್ತರಣೆಗೆ ಹಣಕಾಸು ಒದಗಿಸುವುದು ಅತ್ಯಗತ್ಯ. ಈ ಅಂಶಗಳನ್ನಾಧರಿಸಿ ಒಂದು ಸಮಗ್ರ ಕಾರ್ಯಕ್ರಮ ರೂಪಿಸಿದಲ್ಲಿ ಅದರಿಂದ ಸುಸ್ಥಿರ ಕೃಷಿಗೆ ಹೊರಳಿಕೊಳ್ಳುವುದರ ಜೊತೆಗೆ, ಹವಾಮಾನದ ವೈಪರೀತ್ಯ ಬದಲಾವಣೆಯನ್ನು ಕಡಿಮೆಗೊಳಿಸುವಂತಹ ಮತ್ತು ಅದಕ್ಕೆ ಹೊಂದಿಕೊಳ್ಳುವಂತಹ ವಿಧಾನಗಳನ್ನು ಅಭಿವೃದ್ಧಿಪಡಿಸಲೂ ಗ್ರಾಮೀಣ ಜನರಿಗೆ ಸಹಾಯಕವಾಗುತ್ತದೆ.

ಸಂಪನ್ಮೂಲಗಳು, ಶ್ರಮ, ಕೌಶಲ ಹಾಗೂ ಅನುಭವ-ಜ್ಞಾನಗಳನ್ನು ಪೂಲ್ ಮಾಡಿ, ಅದನ್ನೆಲ್ಲ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ವ್ಯವಸ್ಥೆಯ ಸುಧಾರಣೆಗೆ ಬಳಸಲು ಸಾಧ್ಯವಾಗುವಂತೆ ಕೃಷಿ ಸಹಕಾರಿಗಳನ್ನು ರಚಿಸಿಕೊಳ್ಳಲು ರೈತರಿಗೆ ಬೆಂಬಲ ನೀಡಬೇಕು; ರೈತರಿಗೆ ಲಾಭ ಅಥವಾ ಉತ್ತಮ ಆದಾಯ ಗಗನ ಕುಸುಮವಾಗುವಂತೆ ಮಾಡಿರುವ ಎಲ್ಲಾ ಕಾರಣಗಳನ್ನು ಅಡ್ರೆಸ್ ಮಾಡುವಲ್ಲಿ ಇದು ಬಹಳಷ್ಟು ನೆರವಾಗಲಿದೆ. ಪರಿಸರಕ್ಕೆ ಸೂಕ್ತವಾದ ಬೆಳೆ ಪದ್ಧತಿಯನ್ನು ಪುನರುಜ್ಜೀವನಗೊಳಿಸುವಿಕೆ, ಸ್ಥಳೀಯವಾಗಿ ಸಂಗ್ರಹ ಮತ್ತು ವಿತರಣೆ, ಅಪೌಷ್ಟಿಕತೆಯನ್ನು ಹೋಗಲಾಡಿಸುವಂಥ ಸ್ಥಳೀಯ ಆಹಾರ ಪದ್ಧತಿಗಳನ್ನು ಉಳಿಸಿಕೊಳ್ಳುವಿಕೆ ಇವುಗಳ ದೃಷ್ಟಿಯಿಂದಲೂ ಸಹ ಕೃಷಿಯ ಪ್ಲಾನಿಂಗ್‌ಅನ್ನು ಪ್ರಜಾತಾಂತ್ರಿಕಗೊಳಿಸುವುದು ಮತ್ತು ವಿಕೇಂದ್ರೀಕರಿಸುವುದು ಅಗತ್ಯವಿದೆ. ಸ್ಥಳೀಯ ’ಬೀಜ ಬ್ಯಾಂಕ್’ಗಳ ಸ್ಥಾಪನೆಯು ಬಹಳ ಸಮಸ್ಯಾತ್ಮಕವಾಗಿರುವ ವ್ಯಾಪಾರೀ ಬೀಜೋದ್ಯಮದಿಂದ ರೈತರು ಬಚಾವಾಗುವುದಕ್ಕೆ ಮೂಲಾಧಾರವಾಗಲಿದೆ.

ಗ್ರಾಮೀಣ ಕೃಷಿ ಬದುಕಿಗೂ, ನಗರದ ಕೈಗಾರಿಕೆ ಆಧಾರಿತ ಬದುಕಿಗೂ ನಡುವಿನ ಬಹುಕಾಲದ ಕಂದರ ಇನ್ನೂ ಮುಂದುವರಿಯುವುದು ಸರ್ವಥಾ ಸಮರ್ಥನೀಯವಲ್ಲ. ಗ್ರಾಮೀಣ ಸಂಪನ್ಮೂಲಗಳು, ಕೌಶಲಗಳು ಹಾಗೂ ಉದ್ಯೋಗಗಳನ್ನು ಕಾಪಾಡಿಕೊಳ್ಳಬಲ್ಲ ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಸಂಸ್ಕರಣ ಕೇಂದ್ರಗಳನ್ನು ಉತ್ತೇಜಿಸುವುದು ನಿರುದ್ಯೋಗ ಮತ್ತು ವಲಸೆಯ ಕಠಿಣ ಸಮಸ್ಯೆಗೆ ಉತ್ತರವಾಗುತ್ತದೆ. ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯಗಳ ದುರವಸ್ಥೆ ಗ್ರಾಮೀಣ ಭಾರತದ ಹೆಗ್ಗುರುತಾಗಿದೆ; ಇದಕ್ಕೆ ಕಾರಣವಾದ ಹಳೆಯ ತಪ್ಪುಗಳನ್ನು ಮತ್ತು ನಿರ್ಲಕ್ಷ್ಯದಿಂದ ಉಂಟಾಗಿರುವ ಅಸಮಾಧಾನಗಳನ್ನು ಅಡ್ರೆಸ್ ಮಾಡಬಲ್ಲ ಹೊಸ ಆರ್ಥಿಕ ಏರ್ಪಾಡೊಂದನ್ನು ಗ್ರಾಮೀಣ ಭಾರತಕ್ಕೆ ನೀಡಬೇಕು. ಪಂಚಾಯತಿಗಳು, ಅಂಗನವಾಡಿಗಳು, ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಂಥ ಪ್ರಮುಖ ಸಾರ್ವಜನಿಕ ಸಂಸ್ಥೆಗಳಿಗೆ ತುರ್ತಾಗಿ ಕಾಯಕಲ್ಪ ನೀಡಿ, ಅವುಗಳನ್ನು ಪರಿಣಾಮಕಾರಿ ಮತ್ತು ಜನತೆಗೆ ಹೊಣೆಗಾರರಾದ ಸಾರ್ವಜನಿಕ ಸಂಸ್ಥೆಗಳನ್ನಾಗಿ ಮಾಡಬೇಕು.

ಈ ಹೊಸ ಗುರಿಗಳನ್ನೂ ಸಾಧ್ಯತೆಗಳನ್ನೂ ಸಾಕಾರಗೊಳಿಸಬೇಕಿದ್ದಲ್ಲಿ ಆಡಳಿತಾತ್ಮಕ ಮತ್ತು ಸರ್ಕಾರಿ ಯಂತ್ರಾಂಗದ ತುರ್ತು ಸುಧಾರಣೆ ಆಗಬೇಕು; ಆ ಮೂಲಕ ಪ್ರಭುತ್ವಕ್ಕೂ ಪ್ರಜೆಗಳಿಗೂ ನಡುವಿನ ವ್ಯವಹಾರವನ್ನು ಅಧಿಕಾರಶಾಹಿಯಿಂದ ಮುಕ್ತವಾಗಿಸಿ, ಗ್ರಾಮೀಣ ಜನತೆಯನ್ನು ’ಅರ್ಜಿ ಹಿಡಿದುಕೊಂಡು, ಬೇಡಿಕೆ ಮುಂದಿಟ್ಟುಕೊಂಡು ಕಚೇರಿ ಅಲೆಯುವವರಂತೆ’ ನೋಡದೆ, ನಾಗರಿಕರಂತೆ ಕಾಣುವ ವಾತಾವರಣವನ್ನು ರೂಪಿಸಬೇಕು. ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಅಸಮಾನತೆಗಳು ಮತ್ತು ಅನಾನುಕೂಲತೆಗಳಿಂದ ಉಂಟಾಗಿರುವ ಸಾಲುಸಾಲು ಸಮಸ್ಯೆಗಳಿಗೆ ಮುಲಾಮು ಹಚ್ಚುವ ಧೋರಣೆ ಕೈಬಿಟ್ಟು, ಜಾತಿ, ಜನಾಂಗೀಯ, ಜೆಂಡರ್ ಮತ್ತು ವರ್ಗ ಅಸಮಾನತೆಗಳ ಮೂಲ ಕಾರಣಗಳನ್ನು ಅಡ್ರೆಸ್ ಮಾಡುವಂತಹ ನೀತಿಗಳನ್ನು ರೂಪಿಸಿ ಜಾರಿಗೊಳಿಸುವ ಅಗತ್ಯವಿದೆ.

ಇಂದಿನ ಆಳುವ ಸರ್ಕಾರವು ಹಳೆಯ ನಂಬಿಕೆಗಳನ್ನು ಸಮ್ಮತಗೊಳಿಸಲು ಸಂಸ್ಕೃತಿ-ಪರಂಪರೆಗಳನ್ನು ವೈಭವೀಕರಿಸಿ ಬಳಕೆ ಮಾಡುತ್ತಿರುವುದರಿಂದ, ವೈವಿಧ್ಯಮಯವೂ ಶ್ರೀಮಂತವೂ ಆದ ನಮ್ಮ ಕೃಷಿ-ಸಂಸ್ಕೃತಿಗಳು ನಮ್ಮ ನಾಗರಿಕತೆಯ ಅಸ್ಮಿತೆಯ ತಳಹದಿಗಳಾಗಿದ್ದವು ಮತ್ತು ಈಗಲೂ ಆಗಬಲ್ಲವು ಎಂಬುದನ್ನು ಆಳುವ ಸರ್ಕಾರ ಮಾತ್ರವಲ್ಲ, ನಾವು ಕೂಡ ಮಾನ್ಯ ಮಾಡುವುದು ಸೂಕ್ತವೇ ಆಗುತ್ತದೆ. ಕಾರ್ಪೊರೆಟೀಕೃತ, ಕೈಗಾರಿಕೀಕೃತ ವಿದೇಶೀ ಕೃಷಿ ಮಾದರಿಗಳ ವಿನಾಶಕಾರಿ ಪರಿಣಾಮಗಳು ಜಗತ್ತಿನಾದ್ಯಂತ ವ್ಯಾಪಕವಾದ ದುರಂತಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ; ನಾವು ಸಹ ಅವುಗಳನ್ನೇ ಅಳವಡಿಸಿಕೊಳ್ಳುವುದಕ್ಕಿಂತಲೂ, ನಮ್ಮ ವೈವಿಧ್ಯಮಯವಾದ ಕೃಷಿ-ಸಂಸ್ಕೃತಿಗಳ ಜ್ಞಾನ ಪರಂಪರೆಯನ್ನು (ಅದರೊಳಗಿನ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯನ್ನು ದೂರ ಮಾಡಿ) ಮತ್ತೆ ನಮ್ಮದಾಗಿಸಿಕೊಂಡಲ್ಲಿ ಅದು ನಮ್ಮ ಬಗೆಬಗೆಯ ರಾಷ್ಟ್ರೀಯ ಸಮಸ್ಯೆಗಳಿಗೆ ಉತ್ತರವಾಗಬಲ್ಲದು.

ರೈತರು ಮತ್ತು ಸರ್ಕಾರದ ನಡುವಿನ ವರ್ಷಾವಧಿ ಸಂಘರ್ಷದಲ್ಲಿ ರೈತ ಆಂದೋಲನದ ವಿಜಯವನ್ನು ಕವಿ-ಚಿಂತಕ ಶಿವಸುಂದರ್ “ಟ್ರಾಕ್ಟರುಗಳು ಟ್ಯಾಂಕ್‌ಗಳ ವಿರುದ್ಧ ವಿಜಯ ಸಾಧಿಸಿವೆ” ಎಂದು ವರ್ಣಿಸುತ್ತಾರೆ. ಇದು ನಿಜವಿದ್ದಲ್ಲಿ, ಶಾಂತಿಯುತ ವಿಧಾನಗಳಿಂದಲೇ ಪ್ರಜಾತಂತ್ರಕ್ಕೆ ಹಿಂದಿರುಗುವುದು ಸಾಧ್ಯವೆಂಬ ಆಶಾವಾದವು ಗ್ರಾಮೀಣ ಕೃಷಿ ಭಾರತಕ್ಕಾಗಿ ’ಗರಿಷ್ಠ ಬೆಂಬಲ ನೀತಿ’ಗಳನ್ನು (maximum support policies) ಪ್ರೋತ್ಸಾಹಿಸಲು ನಮ್ಮನ್ನು ಪ್ರೇರೇಪಿಸಬೇಕಿದೆ. ಈ ನಿಟ್ಟಿನಲ್ಲಿ, ಮುಂಬರುವ ಸಂಸತ್ ಅಧಿವೇಶನವು ಮೂರು ಕೃಷಿ ಕಾಯ್ದೆಗಳನ್ನು ಪುನಃ ಜಾರಿಗೊಳಿಸುವತ್ತ ಹೆಜ್ಜೆಯಿಡುವ ಬದಲು, ಗ್ರಾಮೀಣ ಭಾರತಕ್ಕೆ ಅತ್ಯುತ್ತಮವಾದುದನ್ನು ಸಾಕಾರಗೊಳಿಸುವ ಪ್ರಯತ್ನಗಳಿಗೆ ಮುಂದಾಗುವಂತೆ ಪ್ರಯತ್ನಿಸಬೇಕಿದೆ. ನಮ್ಮನಮ್ಮ ಎಂಪಿಗಳಿಗೆ ಮನವಿ ಸಲ್ಲಿಸುವುದರಿಂದ ನಮ್ಮ ಪ್ರಯತ್ನಗಳು ಆರಂಭವಾಗಬೇಕಿದೆ.

ಅನುವಾದ: ಸಿರಿಮನೆ ನಾಗರಾಜ್

ಡಾ. ಎ.ಆರ್.ವಾಸವಿ

ಡಾ. ಎ.ಆರ್.ವಾಸವಿ
ಸಾಮಾಜಿಕ ಮಾನವಶಾಸ್ತ್ರಜ್ಞೆ, ಪುನರ್ಚಿತ್ ಕಲೆಕ್ಟಿವ್.


ಇದನ್ನೂ ಓದಿ: ಎಂಎಸ್‌ಪಿ ಕಾನೂನು ಜಾರಿಗೆ ಸಮಿತಿ ರಚಿಸಲು ಕೇಂದ್ರ ನಿರ್ಧಾರ: 5 ಜನ ರೈತ ಪ್ರತಿನಿಧಿಗಳಿರಲು ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....