Homeಮುಖಪುಟಗ್ರಾಮೀಣ ಭಾರತಕ್ಕೆ ಬೇಕಿದೆ ಹೊಸ ’ಎಂಎಸ್‌ಪಿ’ - ’ಗರಿಷ್ಠ ಬೆಂಬಲ ನೀತಿ’

ಗ್ರಾಮೀಣ ಭಾರತಕ್ಕೆ ಬೇಕಿದೆ ಹೊಸ ’ಎಂಎಸ್‌ಪಿ’ – ’ಗರಿಷ್ಠ ಬೆಂಬಲ ನೀತಿ’

- Advertisement -
- Advertisement -

ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿರುವುದು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಹೊಂದಾಣಿಕೆತನ, ಕಟಿಬದ್ಧತೆ ಮತ್ತು ಪ್ರಾಮಾಣಿಕತೆ ಯಶಸ್ಸು ಸಾಧಿಸಿರುವುದು ಒಂದು ಚಾರಿತ್ರಿಕ ವಿದ್ಯಮಾನವೇ ಸರಿ. ಈ ಆರಂಭಿಕ, ಗಮನಾರ್ಹ ಗೆಲುವು ಮುಂದೆ ಹೇಗೆ ಪೂರ್ಣ ರೂಪದಲ್ಲಿ ತೆರೆದುಕೊಳ್ಳುತ್ತದೆ ಹಾಗೂ ಅದು ಕೃಷಿ ನೀತಿಗಳ ಮೇಲೆ ಮಾತ್ರವಲ್ಲದೆ ಪ್ರಜಾತಂತ್ರ ಮತ್ತು ಬಂಡವಾಳವಾದಗಳ ನಡುವಿನ ಜಿದ್ದಾಜಿದ್ದಿನ ಸಂಘರ್ಷದ ಮೇಲೆ ಕೂಡ ಏನು ಪ್ರಭಾವ ಉಂಟುಮಾಡುತ್ತದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಇದು, ಈ ಚಳವಳಿಯು ಮೂರು ಕೃಷಿ ಕಾಯ್ದೆಗಳ ಬದಲು ಏನನ್ನು ಡಿಮ್ಯಾಂಡ್ ಮಾಡುತ್ತದೆ ಎಂಬುದನ್ನು ಅವಲಂಬಿಸಿದೆ. ಬಹುಮುಖ್ಯ ಕೃಷಿ ಉತ್ಪನ್ನಗಳಿಗೆ ’ಕನಿಷ್ಠ ಬೆಂಬಲ ಬೆಲೆ’(ಎಂಎಸ್‌ಪಿ)ಯ ಬೇಡಿಕೆಯು ಚಳವಳಿ ಮತ್ತು ಸರ್ಕಾರದ ನಡುವಿನ ’ಮಾತುಕತೆ’ಗಳ ಉದ್ದಕ್ಕೂ ಬಗೆಹರಿಯದೆ ಉಳಿದಿದ್ದ ಒಂದು ಕಗ್ಗಂಟು ಆಗಿತ್ತು; ಎಂಎಸ್‌ಪಿಯನ್ನು ಕಾಯ್ದೆಬದ್ಧಗೊಳಿಸಬೇಕು, ಇನ್ನೂ ವಿಸ್ತರಿಸಬೇಕು ಹಾಗೂ ಹೆಚ್ಚು ಮಾಡಬೇಕು ಎಂದು ಚಳವಳಿಯ ನಾಯಕರು ಆಗ್ರಹಿಸುತ್ತಾ ಬಂದರೆ, ಸರ್ಕಾರವು ಇಂಥ ಯಾವುದೇ ಕೇಳಿಕೆಯನ್ನು ಸಾರಾಸಗಟು ತಳ್ಳಿಹಾಕಿತ್ತು. ಎಂಎಸ್‌ಪಿ ವಿಚಾರವು ಪ್ರಧಾನವಾಗಿ ವೆಚ್ಚಕ್ಕನುಗುಣವಾಗಿ ಬೆಲೆ ನಿರ್ಧರಿಸುವುದಕ್ಕೆ ಸಂಬಂಧಿಸಿದ್ದು; ಒಂದು ಉದ್ಯಮ, ವಹಿವಾಟು ಅಥವಾ ಜೀವನೋಪಾಯವಾಗಿ ಕೃಷಿಯ ಮೌಲ್ಯಮಾಪನಕ್ಕೆ ಇದೇ ಆಧಾರವಾಗಿರಬೇಕಾದುದು ಸೂಕ್ತವಾದದ್ದು. ಜೊತೆಗೆ ಅದರಾಚೆಗೂ ಯೋಚಿಸುವುದು ಅಗತ್ಯವಿದೆ.

ಬಹುತೇಕ ಗ್ರಾಮೀಣ ಭಾರತವು ಪರಸ್ಪರ ವೈರುಧ್ಯಗಳಿಂದ ಕೂಡಿದ ಕೃಷಿ ನೀತಿಗಳ ಕಹಿ ಫಲವನ್ನು ಅನುಭವಿಸುತ್ತಾ ಬಂದಿದ್ದು, ಗ್ರಾಮೀಣವನ್ನು ಆರ್ಥಿಕವಾಗಿ ಬಹುಪಾಲು ಕಡೆಗಣಿಸಿ ರಾಜಕೀಯವಾಗಿ ಓಟಿಗೋಸ್ಕರ ಮಾತ್ರ ಬೇಕಾದಂತೆ ಬಳಸಿಕೊಳ್ಳಲಾಗಿದೆ. ಆದ್ದರಿಂದ ’ಗರಿಷ್ಠ ಬೆಂಬಲ ನೀತಿ’ಯ ಪ್ಯಾಕೇಜನ್ನು ಕೇಳಲು ಇದೀಗ ಸಕಾಲವಾಗಿದೆ. ಅದೇ ಹೊತ್ತಿನಲ್ಲಿ, ಒಟ್ಟಾರೆ ರಾಜಕೀಯಾರ್ಥಿಕ ನೀತಿಗಳು ಗ್ರಾಮೀಣ ಭಾರತದ ಮೇಲೆ ಹೇರಿರುವ ಬಹುಬಗೆಯ ಕಾಯಿಲೆಗಳಿಗೆಲ್ಲ ಕೃಷಿ ಉತ್ಪನ್ನಗಳ ಬೆಲೆ ನಿಗದಿ, ಮಾರಾಟ ಮತ್ತು ವಿತರಣೆ ಎನ್ನುವುದು ಸಿದ್ಧೌಷಧವಾಗಲು ಸಾಧ್ಯವಿಲ್ಲ ಎಂಬ ಗ್ರಹಿಕೆಯ ಜೊತೆಗೇ ಇದು ಮೂಡಿಬರಬೇಕಿದೆ. ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಅಸಮಾನತೆಗಳು, ಸಾಂಸ್ಥಿಕ ಮತ್ತು ಆಡಳಿತಾತ್ಮಕ ಕೊರತೆಗಳು ಹಾಗೂ ಗ್ರಾಮೀಣ ಭಾರತವನ್ನು ರಾಜಕೀಯವಾಗಿ ವಿರೂಪಗೊಳಿಸಿರುವ ನೀತಿಗಳು-ನಡೆಗಳು – ಇವೆಲ್ಲವನ್ನೂ ಸಮಗ್ರವಾಗಿ, ಸರ್ವಾಂಗೀಣವಾಗಿ ಅಡ್ರೆಸ್ ಮಾಡುವಂಥ ನೀತಿಗಳು ಮಾತ್ರವೇ ಗ್ರಾಮೀಣ ಭಾರತಕ್ಕೊಂದು ಹೊಸ ಜೀವದಾನ ನೀಡಬಲ್ಲ ಉತ್ತರವಾಗಲು ಸಾಧ್ಯ.

ಮೊದಲಿಗೆ, ಸಬ್ಸಿಡಿ ಆಧಾರಿತವಾಗಿ ಕೈಗಾರಿಕಾ-ರಾಸಾಯನಿಕ ಕೃಷಿಯನ್ನು ಉತ್ತೇಜಿಸುವ ’’ಹಸಿರು ಕ್ರಾಂತಿ’ಯ ಒಟ್ಟಾರೆ ಮಾದರಿಯಿಂದ ಹಂತಹಂತವಾಗಿ, ಆದರೆ ಸಾಕಷ್ಟು ಪ್ರಮಾಣದಲ್ಲಿ ಹಿಂದೆ ಸರಿಯುವುದು ಆಗಬೇಕು. ಆದರೆ, ’ಸುಸ್ಥಿರ’ ಕೃಷಿಗೆ ಪಲ್ಲಟಗೊಳ್ಳುವ ಮಾತು ಅಥವಾ ಪ್ರಯತ್ನವು ಪ್ರಧಾನಿಯವರು (ತನ್ನ ಭಾಷಣದಲ್ಲಿ) ಪ್ರಸ್ತಾಪಿಸಿದ ’ಝೀರೋ ಬಜೆಟ್ ಸಹಜ ಕೃಷಿ’ಯ ಮೂಲಕ ಆಗಲು ಸಾಧ್ಯವಾ ಎಂಬ ಬಗ್ಗೆ ಜಾಗರೂಕವಾಗಿ ಆಲೋಚಿಸಬೇಕು. ಭಾರತದ ಕೃಷಿ-ವಾತಾವರಣ-ಸಂಸ್ಕೃತಿಯ ವಲಯ(ಜ಼ೋನ್)ಗಳು ಬಹಳ ವೈವಿಧ್ಯಪೂರ್ಣವಾದಂಥವು; ’ಸಹಜ ಕೃಷಿ’ಯ ಯಾವುದೇ ಏಕೈಕ ಮಾದರಿಯು ಅವೆಲ್ಲಕ್ಕೂ ಸೂಕ್ತವಾಗುವುದು ಸಾಧ್ಯವಿಲ್ಲ. ಅದರ ಬದಲು, ಪ್ರಾದೇಶಿಕವಾಗಿ ವಿಕಾಸಗೊಂಡು ರೂಢಿಗತವಾಗಿರುವ ಸುಸ್ಥಿರ ಕೃಷಿ-ಸಂಸ್ಕೃತಿಗಳನ್ನು ಉಳಿಸಿಕೊಂಡು, ಅವುಗಳೊಳಗಿರುವ ಜೀತ, ಗೇಣಿ ಮುಂತಾದ ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಿ, ಹೊಸ ವಾತಾವರಣದ ಪ್ರವೃತ್ತಿಗಳಿಗೆ ಸರಿಹೊಂದುವಂತೆ ರೂಪಿಸುವ ಒಂದು ಕಾಂಬಿನೇಶನ್ ಅಗತ್ಯವಿದೆ.

ಸಣ್ಣ, ಅತಿ ಸಣ್ಣ ರೈತರ ಬಗೆಗಿನ ಪ್ರಧಾನಿಯ ಕಳಕಳಿ ನೈಜವಾದುದೇ ಆಗಿದ್ದಲ್ಲಿ, ಭೂಮಿಯ ಸಮಾನ ಹಂಚಿಕೆ ಮಾತ್ರವಲ್ಲದೆ ನೀರಿನ ಸಂಪನ್ಮೂಲದ ಸಮಾನ ಹಂಚಿಕೆಯೂ ಆಗುವಂತೆ ನೋಡಿಕೊಳ್ಳಬೇಕು; ಅಷ್ಟೇ ಅಲ್ಲ, ನಾನಾ ಬಗೆಯ ಪರ್ಯಾಯ ಆರ್ಥಿಕ ವಿಧಾನಗಳು ಮತ್ತು ಬೆಂಬಲ ರಚನೆಗಳೂ ಸಮಾನವಾಗಿ ದಕ್ಕುವಂತಹ ನೀತಿಗಳನ್ನು ಸಹ ರೂಪಿಸಬೇಕು. (ಸಾಮಾನ್ಯವಾಗಿ ಗ್ರಾಮೀಣೇತರ ಫಲಾನುಭವಿಗಳ ಪಾಲಾಗುವ) ಸಬ್ಸಿಡಿಗಳು, ಸಾಲ ಮರುಪಾವತಿಯ ಮುಂದೂಡಿಕೆ, ಚುನಾವಣಾ ಸಮಯಗಳಲ್ಲಿ ಘೋಷಿಸುವ ಒಂದಷ್ಟು ಪುಕ್ಕಟೆ ಸವಲತ್ತುಗಳು ಮುಂತಾದುವುಗಳ ಬದಲು, ಮಣ್ಣು, ನೀರು, ಬೀಜ ಮತ್ತು ಕೃಷಿ-ಜೀವವೈವಿಧ್ಯಗಳನ್ನು ಪುನರುಜ್ಜೀವನಗೊಳಿಸುವಂಥ ’ಪುನರುಜ್ಜೀವನ ಕೃಷಿ’ಯ ವಿಸ್ತರಣೆಗೆ ಹಣಕಾಸು ಒದಗಿಸುವುದು ಅತ್ಯಗತ್ಯ. ಈ ಅಂಶಗಳನ್ನಾಧರಿಸಿ ಒಂದು ಸಮಗ್ರ ಕಾರ್ಯಕ್ರಮ ರೂಪಿಸಿದಲ್ಲಿ ಅದರಿಂದ ಸುಸ್ಥಿರ ಕೃಷಿಗೆ ಹೊರಳಿಕೊಳ್ಳುವುದರ ಜೊತೆಗೆ, ಹವಾಮಾನದ ವೈಪರೀತ್ಯ ಬದಲಾವಣೆಯನ್ನು ಕಡಿಮೆಗೊಳಿಸುವಂತಹ ಮತ್ತು ಅದಕ್ಕೆ ಹೊಂದಿಕೊಳ್ಳುವಂತಹ ವಿಧಾನಗಳನ್ನು ಅಭಿವೃದ್ಧಿಪಡಿಸಲೂ ಗ್ರಾಮೀಣ ಜನರಿಗೆ ಸಹಾಯಕವಾಗುತ್ತದೆ.

ಸಂಪನ್ಮೂಲಗಳು, ಶ್ರಮ, ಕೌಶಲ ಹಾಗೂ ಅನುಭವ-ಜ್ಞಾನಗಳನ್ನು ಪೂಲ್ ಮಾಡಿ, ಅದನ್ನೆಲ್ಲ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ವ್ಯವಸ್ಥೆಯ ಸುಧಾರಣೆಗೆ ಬಳಸಲು ಸಾಧ್ಯವಾಗುವಂತೆ ಕೃಷಿ ಸಹಕಾರಿಗಳನ್ನು ರಚಿಸಿಕೊಳ್ಳಲು ರೈತರಿಗೆ ಬೆಂಬಲ ನೀಡಬೇಕು; ರೈತರಿಗೆ ಲಾಭ ಅಥವಾ ಉತ್ತಮ ಆದಾಯ ಗಗನ ಕುಸುಮವಾಗುವಂತೆ ಮಾಡಿರುವ ಎಲ್ಲಾ ಕಾರಣಗಳನ್ನು ಅಡ್ರೆಸ್ ಮಾಡುವಲ್ಲಿ ಇದು ಬಹಳಷ್ಟು ನೆರವಾಗಲಿದೆ. ಪರಿಸರಕ್ಕೆ ಸೂಕ್ತವಾದ ಬೆಳೆ ಪದ್ಧತಿಯನ್ನು ಪುನರುಜ್ಜೀವನಗೊಳಿಸುವಿಕೆ, ಸ್ಥಳೀಯವಾಗಿ ಸಂಗ್ರಹ ಮತ್ತು ವಿತರಣೆ, ಅಪೌಷ್ಟಿಕತೆಯನ್ನು ಹೋಗಲಾಡಿಸುವಂಥ ಸ್ಥಳೀಯ ಆಹಾರ ಪದ್ಧತಿಗಳನ್ನು ಉಳಿಸಿಕೊಳ್ಳುವಿಕೆ ಇವುಗಳ ದೃಷ್ಟಿಯಿಂದಲೂ ಸಹ ಕೃಷಿಯ ಪ್ಲಾನಿಂಗ್‌ಅನ್ನು ಪ್ರಜಾತಾಂತ್ರಿಕಗೊಳಿಸುವುದು ಮತ್ತು ವಿಕೇಂದ್ರೀಕರಿಸುವುದು ಅಗತ್ಯವಿದೆ. ಸ್ಥಳೀಯ ’ಬೀಜ ಬ್ಯಾಂಕ್’ಗಳ ಸ್ಥಾಪನೆಯು ಬಹಳ ಸಮಸ್ಯಾತ್ಮಕವಾಗಿರುವ ವ್ಯಾಪಾರೀ ಬೀಜೋದ್ಯಮದಿಂದ ರೈತರು ಬಚಾವಾಗುವುದಕ್ಕೆ ಮೂಲಾಧಾರವಾಗಲಿದೆ.

ಗ್ರಾಮೀಣ ಕೃಷಿ ಬದುಕಿಗೂ, ನಗರದ ಕೈಗಾರಿಕೆ ಆಧಾರಿತ ಬದುಕಿಗೂ ನಡುವಿನ ಬಹುಕಾಲದ ಕಂದರ ಇನ್ನೂ ಮುಂದುವರಿಯುವುದು ಸರ್ವಥಾ ಸಮರ್ಥನೀಯವಲ್ಲ. ಗ್ರಾಮೀಣ ಸಂಪನ್ಮೂಲಗಳು, ಕೌಶಲಗಳು ಹಾಗೂ ಉದ್ಯೋಗಗಳನ್ನು ಕಾಪಾಡಿಕೊಳ್ಳಬಲ್ಲ ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಸಂಸ್ಕರಣ ಕೇಂದ್ರಗಳನ್ನು ಉತ್ತೇಜಿಸುವುದು ನಿರುದ್ಯೋಗ ಮತ್ತು ವಲಸೆಯ ಕಠಿಣ ಸಮಸ್ಯೆಗೆ ಉತ್ತರವಾಗುತ್ತದೆ. ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯಗಳ ದುರವಸ್ಥೆ ಗ್ರಾಮೀಣ ಭಾರತದ ಹೆಗ್ಗುರುತಾಗಿದೆ; ಇದಕ್ಕೆ ಕಾರಣವಾದ ಹಳೆಯ ತಪ್ಪುಗಳನ್ನು ಮತ್ತು ನಿರ್ಲಕ್ಷ್ಯದಿಂದ ಉಂಟಾಗಿರುವ ಅಸಮಾಧಾನಗಳನ್ನು ಅಡ್ರೆಸ್ ಮಾಡಬಲ್ಲ ಹೊಸ ಆರ್ಥಿಕ ಏರ್ಪಾಡೊಂದನ್ನು ಗ್ರಾಮೀಣ ಭಾರತಕ್ಕೆ ನೀಡಬೇಕು. ಪಂಚಾಯತಿಗಳು, ಅಂಗನವಾಡಿಗಳು, ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಂಥ ಪ್ರಮುಖ ಸಾರ್ವಜನಿಕ ಸಂಸ್ಥೆಗಳಿಗೆ ತುರ್ತಾಗಿ ಕಾಯಕಲ್ಪ ನೀಡಿ, ಅವುಗಳನ್ನು ಪರಿಣಾಮಕಾರಿ ಮತ್ತು ಜನತೆಗೆ ಹೊಣೆಗಾರರಾದ ಸಾರ್ವಜನಿಕ ಸಂಸ್ಥೆಗಳನ್ನಾಗಿ ಮಾಡಬೇಕು.

ಈ ಹೊಸ ಗುರಿಗಳನ್ನೂ ಸಾಧ್ಯತೆಗಳನ್ನೂ ಸಾಕಾರಗೊಳಿಸಬೇಕಿದ್ದಲ್ಲಿ ಆಡಳಿತಾತ್ಮಕ ಮತ್ತು ಸರ್ಕಾರಿ ಯಂತ್ರಾಂಗದ ತುರ್ತು ಸುಧಾರಣೆ ಆಗಬೇಕು; ಆ ಮೂಲಕ ಪ್ರಭುತ್ವಕ್ಕೂ ಪ್ರಜೆಗಳಿಗೂ ನಡುವಿನ ವ್ಯವಹಾರವನ್ನು ಅಧಿಕಾರಶಾಹಿಯಿಂದ ಮುಕ್ತವಾಗಿಸಿ, ಗ್ರಾಮೀಣ ಜನತೆಯನ್ನು ’ಅರ್ಜಿ ಹಿಡಿದುಕೊಂಡು, ಬೇಡಿಕೆ ಮುಂದಿಟ್ಟುಕೊಂಡು ಕಚೇರಿ ಅಲೆಯುವವರಂತೆ’ ನೋಡದೆ, ನಾಗರಿಕರಂತೆ ಕಾಣುವ ವಾತಾವರಣವನ್ನು ರೂಪಿಸಬೇಕು. ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಅಸಮಾನತೆಗಳು ಮತ್ತು ಅನಾನುಕೂಲತೆಗಳಿಂದ ಉಂಟಾಗಿರುವ ಸಾಲುಸಾಲು ಸಮಸ್ಯೆಗಳಿಗೆ ಮುಲಾಮು ಹಚ್ಚುವ ಧೋರಣೆ ಕೈಬಿಟ್ಟು, ಜಾತಿ, ಜನಾಂಗೀಯ, ಜೆಂಡರ್ ಮತ್ತು ವರ್ಗ ಅಸಮಾನತೆಗಳ ಮೂಲ ಕಾರಣಗಳನ್ನು ಅಡ್ರೆಸ್ ಮಾಡುವಂತಹ ನೀತಿಗಳನ್ನು ರೂಪಿಸಿ ಜಾರಿಗೊಳಿಸುವ ಅಗತ್ಯವಿದೆ.

ಇಂದಿನ ಆಳುವ ಸರ್ಕಾರವು ಹಳೆಯ ನಂಬಿಕೆಗಳನ್ನು ಸಮ್ಮತಗೊಳಿಸಲು ಸಂಸ್ಕೃತಿ-ಪರಂಪರೆಗಳನ್ನು ವೈಭವೀಕರಿಸಿ ಬಳಕೆ ಮಾಡುತ್ತಿರುವುದರಿಂದ, ವೈವಿಧ್ಯಮಯವೂ ಶ್ರೀಮಂತವೂ ಆದ ನಮ್ಮ ಕೃಷಿ-ಸಂಸ್ಕೃತಿಗಳು ನಮ್ಮ ನಾಗರಿಕತೆಯ ಅಸ್ಮಿತೆಯ ತಳಹದಿಗಳಾಗಿದ್ದವು ಮತ್ತು ಈಗಲೂ ಆಗಬಲ್ಲವು ಎಂಬುದನ್ನು ಆಳುವ ಸರ್ಕಾರ ಮಾತ್ರವಲ್ಲ, ನಾವು ಕೂಡ ಮಾನ್ಯ ಮಾಡುವುದು ಸೂಕ್ತವೇ ಆಗುತ್ತದೆ. ಕಾರ್ಪೊರೆಟೀಕೃತ, ಕೈಗಾರಿಕೀಕೃತ ವಿದೇಶೀ ಕೃಷಿ ಮಾದರಿಗಳ ವಿನಾಶಕಾರಿ ಪರಿಣಾಮಗಳು ಜಗತ್ತಿನಾದ್ಯಂತ ವ್ಯಾಪಕವಾದ ದುರಂತಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ; ನಾವು ಸಹ ಅವುಗಳನ್ನೇ ಅಳವಡಿಸಿಕೊಳ್ಳುವುದಕ್ಕಿಂತಲೂ, ನಮ್ಮ ವೈವಿಧ್ಯಮಯವಾದ ಕೃಷಿ-ಸಂಸ್ಕೃತಿಗಳ ಜ್ಞಾನ ಪರಂಪರೆಯನ್ನು (ಅದರೊಳಗಿನ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯನ್ನು ದೂರ ಮಾಡಿ) ಮತ್ತೆ ನಮ್ಮದಾಗಿಸಿಕೊಂಡಲ್ಲಿ ಅದು ನಮ್ಮ ಬಗೆಬಗೆಯ ರಾಷ್ಟ್ರೀಯ ಸಮಸ್ಯೆಗಳಿಗೆ ಉತ್ತರವಾಗಬಲ್ಲದು.

ರೈತರು ಮತ್ತು ಸರ್ಕಾರದ ನಡುವಿನ ವರ್ಷಾವಧಿ ಸಂಘರ್ಷದಲ್ಲಿ ರೈತ ಆಂದೋಲನದ ವಿಜಯವನ್ನು ಕವಿ-ಚಿಂತಕ ಶಿವಸುಂದರ್ “ಟ್ರಾಕ್ಟರುಗಳು ಟ್ಯಾಂಕ್‌ಗಳ ವಿರುದ್ಧ ವಿಜಯ ಸಾಧಿಸಿವೆ” ಎಂದು ವರ್ಣಿಸುತ್ತಾರೆ. ಇದು ನಿಜವಿದ್ದಲ್ಲಿ, ಶಾಂತಿಯುತ ವಿಧಾನಗಳಿಂದಲೇ ಪ್ರಜಾತಂತ್ರಕ್ಕೆ ಹಿಂದಿರುಗುವುದು ಸಾಧ್ಯವೆಂಬ ಆಶಾವಾದವು ಗ್ರಾಮೀಣ ಕೃಷಿ ಭಾರತಕ್ಕಾಗಿ ’ಗರಿಷ್ಠ ಬೆಂಬಲ ನೀತಿ’ಗಳನ್ನು (maximum support policies) ಪ್ರೋತ್ಸಾಹಿಸಲು ನಮ್ಮನ್ನು ಪ್ರೇರೇಪಿಸಬೇಕಿದೆ. ಈ ನಿಟ್ಟಿನಲ್ಲಿ, ಮುಂಬರುವ ಸಂಸತ್ ಅಧಿವೇಶನವು ಮೂರು ಕೃಷಿ ಕಾಯ್ದೆಗಳನ್ನು ಪುನಃ ಜಾರಿಗೊಳಿಸುವತ್ತ ಹೆಜ್ಜೆಯಿಡುವ ಬದಲು, ಗ್ರಾಮೀಣ ಭಾರತಕ್ಕೆ ಅತ್ಯುತ್ತಮವಾದುದನ್ನು ಸಾಕಾರಗೊಳಿಸುವ ಪ್ರಯತ್ನಗಳಿಗೆ ಮುಂದಾಗುವಂತೆ ಪ್ರಯತ್ನಿಸಬೇಕಿದೆ. ನಮ್ಮನಮ್ಮ ಎಂಪಿಗಳಿಗೆ ಮನವಿ ಸಲ್ಲಿಸುವುದರಿಂದ ನಮ್ಮ ಪ್ರಯತ್ನಗಳು ಆರಂಭವಾಗಬೇಕಿದೆ.

ಅನುವಾದ: ಸಿರಿಮನೆ ನಾಗರಾಜ್

ಡಾ. ಎ.ಆರ್.ವಾಸವಿ

ಡಾ. ಎ.ಆರ್.ವಾಸವಿ
ಸಾಮಾಜಿಕ ಮಾನವಶಾಸ್ತ್ರಜ್ಞೆ, ಪುನರ್ಚಿತ್ ಕಲೆಕ್ಟಿವ್.


ಇದನ್ನೂ ಓದಿ: ಎಂಎಸ್‌ಪಿ ಕಾನೂನು ಜಾರಿಗೆ ಸಮಿತಿ ರಚಿಸಲು ಕೇಂದ್ರ ನಿರ್ಧಾರ: 5 ಜನ ರೈತ ಪ್ರತಿನಿಧಿಗಳಿರಲು ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...