ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮುಖ್ಯಸ್ಥ ಶರದ್ ಪವಾರ್ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳನ್ನು ಗುರುವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ತಳ್ಳಿಹಾಕಿದ್ದು, ಶರದ್ ಪವಾರ್ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.,
ಬುಧವಾರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ ಬಳಿಕ ಈ ವದಂತಿ ಹರಡಿತ್ತು.
ಪ್ರಶಾಂತ್ ಕಿಶೋರ್, ಈ ಮೂವರೊಂದಿಗೆ ಸಭೆ ನಡೆಸಿದ ಬಳಿಕ ಹರಡಿದ ವದಂತಿಗಳಲ್ಲಿ ಹಿರಿಯ ರಾಜಕೀಯ ನಾಯಕ ಶರದ್ ಪವಾರ್ ಮುಂದಿನ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಎಂಬುದು ಕೂಡಾ ಒಂದಾಗಿತ್ತು. ಆದರೆ, ಈ ವದಂತಿಯನ್ನು ಸ್ವತಃ ಶರದ್ ಪವಾರ್ ತಳ್ಳಿಹಾಕಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿಯನ್ನು ಭೇಟಿಯಾಗುವುದಕ್ಕೂ ಮೊದಲು ಪ್ರಶಾಂತ್ ಕಿಶೋರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶರದ್ ಪವಾರ್ ಅವರನ್ನು ಎರಡು ಭಾರಿ ಭೇಟಿಯಾಗಿದ್ದರು. ಈ ಬೆನ್ನಲ್ಲೇ ರಾಷ್ಟ್ರಪತಿ ಅಭ್ಯರ್ಥಿ ಶರದ್ ಎಂಬ ವದಂತಿಗಳು ಹರಿದಾಡಿದ್ದವು.
ಇದನ್ನೂ ಓದಿ: ನರೇಂದ್ರ ಮೋದಿ ವರ್ಸಸ್ ಪ್ರಶಾಂತ್ ಕಿಶೋರ್; ಶರದ್ ಪವಾರ್ ಸಭೆಯೊಂದು ಆರಂಭಬಿಂದು ಮಾತ್ರವೇ?
“ಒಂದು ಪಕ್ಷವು (ಬಿಜೆಪಿ) 300 ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದರೆ, ಅದರ ಫಲಿತಾಂಶ ಏನೆಂದು ನನಗೆ ತಿಳಿದಿದೆ. ನಾನು ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗುವುದಿಲ್ಲ” ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಪವಾರ್ ಹೇಳಿದ್ದಾರೆ.
“ನಾನು ಕಿಶೋರ್ ಎರಡು ಬಾರಿ ಭೇಟಿಯಾಗಿದ್ದೇವೆ. ಆದರೆ, 2024 ರ ಲೋಕಸಭಾ ಚುನಾವಣೆ ಅಥವಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ನಾವು ಅವರ ಕಂಪನಿಯ ಬಗ್ಗೆ ಮಾತ್ರ ಮಾತನಾಡಿದ್ದೇವೆ. ಅವರು ಚುನಾವಣಾ ತಂತ್ರಗಳನ್ನು ರೂಪಿಸುವ ಕೆಲಸವನ್ನು ತೊರೆದಿದ್ದೇನೆ ಎಂದು ನನಗೆ ಹೇಳಿದ್ದಾರೆ” ಎಂದು ಪವಾರ್ ಹೇಳಿದರು.
“2024 ರ ಸಾರ್ವತ್ರಿಕ ಚುನಾವಣೆಗಳಾಗಲಿ ಅಥವಾ ರಾಜ್ಯ ಚುನಾವಣೆಗಳ ಬಗ್ಗೆ ಇದುವರೆಗೆ ಯಾವುದನ್ನೂ ನಿರ್ಧರಿಸಲಾಗಿಲ್ಲ, ಚುನಾವಣೆ ಇನ್ನು ದೂರದಲ್ಲಿದೆ, ರಾಜಕೀಯ ಪರಿಸ್ಥಿತಿ ಬದಲಾಗುತ್ತಲೇ ಇರುತ್ತದೆ. 2024 ರ ಚುನಾವಣೆಯಲ್ಲಿ ನಾನು ಯಾವುದೇ ನಾಯಕತ್ವವನ್ನು ವಹಿಸಿಕೊಳ್ಳುವುದಿಲ್ಲ” ಎಂದು ಸ್ಪಷ್ಟನೆ ಪವಾರ್ ನೀಡಿದ್ದಾರೆ.
ಪ್ರಶಾಂತ್ ಕಿಶೋರ್ ಮಂಗಳವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ದೆಹಲಿಯ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ಪ್ರಶಾಂತ್ ಕಿಶೋರ್ ಗಂಟೆಗಳ ಕಾಲ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಹಾಜರಿದ್ದರು. ಬುಧವಾರ ಮತ್ತೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಕಿಶೋರ್, ರಾಹುಲ್ ಗಾಂಧಿ ಭೇಟಿ-ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ