Homeಅಂಕಣಗಳುಮರೀಚಿಕೆಯಾಗಿರುವ ಪೊಲೀಸ್ ಸುಧಾರಣೆ; ನಾಗರಿಕ ಸಮಾಜದ ಒಕ್ಕೊರಲಿನ ದನಿ ಬೇಕಿದೆ..

ಮರೀಚಿಕೆಯಾಗಿರುವ ಪೊಲೀಸ್ ಸುಧಾರಣೆ; ನಾಗರಿಕ ಸಮಾಜದ ಒಕ್ಕೊರಲಿನ ದನಿ ಬೇಕಿದೆ..

- Advertisement -
- Advertisement -

ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಘಟನೆಯ ವಿಡಿಯೋ ದೊಡ್ಡಮಟ್ಟದಲ್ಲಿ ಸದ್ದು ಮಾಡಲೇ ಇಲ್ಲ. ಅದು ಜನರ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗದೇ ಇದ್ದರೂ ಒಂದು ಸಣ್ಣ ಅಫರ್ಮೆಟಿವ್ ಆಕ್ಷನ್‌ಗೆ ಎಡೆಮಾಡಿಕೊಟ್ಟಿದೆ. ಮಹಿಳೆಯೊಬ್ಬಳು ತನ್ನ ಮೇಲೆ ಕಲ್ಲು ಎಸೆದಳು ಎಂದು ಆರೋಪಿಸಿದ ಒಬ್ಬ ಟ್ರಾಫಿಕ್ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್, ಆಕೆಗೆ ಒದೆಯುವ, ಜುಟ್ಟು ಹಿಡಿದು ಎಳೆಯುವ, ಅತಿ ಕೆಟ್ಟ ಬೈಗುಳಗಳನ್ನು ಬಳಸಿ ನಿಂದಿಸುವ ವಿಡಿಯೋ ಅದು. ಆ ಮಹಿಳೆ ಅಂಗವಿಕಲರಾಗಿದ್ದಾರೆ ಎಂಬುದನ್ನು ಕೂಡ ಲಕ್ಷಿಸದೆ ನಡೆಯುವ ಈ ದೌರ್ಜನ್ಯ ನಾಗರಿಕ ಸಮಾಜವೊಂದು ತಲೆತಗ್ಗಿಸಬೇಕಾದ ದುರಂತ ಎಂದೇ ಹೇಳಬಹುದು. ಆ ಮಹಿಳೆ ಒಂದು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು ಕೂಡ ಆತ ಮಾಡಿದ್ದು ಅತ್ಯಂತ ಹೀನಾಯವಾದ ಕೆಲಸ. ಇದು ಯಾವುದೋ ಒಂದು ಬಿಡಿ ಘಟನೆಯೇನಲ್ಲ. ಇಂತಹ ನೂರಾರು ಘಟನೆಗಳು ದೇಶದಾದ್ಯಂತ ನಡೆಯುತ್ತಲೇ ಇರುತ್ತವೆ!

ಅದಕ್ಕೂ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡದ ಕೊರಗ ಸಮುದಾಯದ ಒಂದು ಕುಟುಂಬದ ಮದುವೆ ಸಮಾರಂಭದಲ್ಲಿ ಡಿಜೆ ಹಾಕಿ ಸಂಭ್ರಮಿಸುತ್ತಿದ್ದಾಗ ಅವರ ಮೇಲೆ ಪೊಲೀಸರು ದಾಳಿ ಮಾಡಿದ ಪ್ರಕರಣ ತುಸು ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಕೊರೊನಾ ಮೊದಲ ಲಾಕ್‌ಡೌನ್ ಸಮಯದಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಂತಾನ್‌ಕುಳಂ ಪೊಲೀಸರು ಜಯರಾಜ್-ಬೆನಿಕ್ಸ್ (ಅಪ್ಪ-ಮಗ) ಅವರನ್ನು ಅರೆಸ್ಟ್ ಮಾಡಿ, ಲಾಕ್‌ಅಪ್‌ನಲ್ಲಿ ನಡೆದ ಹಲ್ಲೆಯ ಕಾರಣಕ್ಕೆ ಅವರಿಬ್ಬರೂ ಮೃತರಾಗಿದ್ದರು. ಮದ್ರಾಸ್ ಹೈಕೋರ್ಟ್ ಆರೋಪಿತ ಪೊಲೀಸರ ವಿರುದ್ಧ ಸುಮೋಟೋ ದೂರು ದಾಖಲಿಸಿದ ಮೇಲಷ್ಟೇ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈಗ ಸಿಬಿಐ ತನಿಖೆಯಾಗಿ ನ್ಯಾಯಾಲಯ ವಿಚಾರಣೆಯ ಹಂತದಲ್ಲಿದೆ. ಹೀಗೆ ಪೊಲೀಸರ ಹೈಹ್ಯಾಂಡೆಡ್‌ನೆಸ್ ತನಿಖೆಯಾಗುವ, ಮಾಡಿದ ತಪ್ಪಿಗೆ ಶಿಕ್ಷೆಯಾಗುವ ಪ್ರಕರಣಗಳು ವಿರಳಾತಿವಿರಳ. ಇನ್ನೂ ಈ ದೇಶದಲ್ಲಿ ಪೊಲೀಸಿಂಗ್ ಸುಧಾರಣೆ ಆಗಬೇಕೆಂಬ ಕೂಗಿಗೆ ಮನ್ನಣೆ ದೊರೆತದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ದೇಶದ ಬಹುಪಾಲು ಜನ ಸದ್ಯದ ಪೊಲೀಸ್ ವ್ಯವಸ್ಥೆಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಉಪಟಳಕ್ಕೆ ಒಳಗಾಗಿದ್ದರೂ ಅದರ ಸುಧಾರಣೆಯ ವಿರುದ್ಧ ಒಂದು ಒಗ್ಗಟ್ಟಿನ ಧ್ವನಿ ಎದ್ದಿಲ್ಲ ಅಥವಾ ಅದು ಸಾಧ್ಯವಾಗದ ಹಾಗೆ ಇಂದಿನ ವ್ಯವಸ್ಥೆ ನೋಡಿಕೊಂಡು ಬಂದಿದೆ.

ಇಂಗ್ಲಿಷ್ ಪದಗಳಾದ Police, Polite, Politics – ಗ್ರೀಕ್ ಪದ polisನಿಂದ ಹುಟ್ಟಿರುವಂತವು. ಅಲ್ಲಿ ಅದಕ್ಕೆ ಅರ್ಥ ಸಿಟಿ ಅಥವಾ ನಗರ. ಇದರ ಲ್ಯಾಟಿನ್ ಸಮಾನಾರ್ಥಕ civitas. ಇದರಿಂದ ಹುಟ್ಟಿರುವುದು ಸಿವಿಲಟಿ, ಸಿವಿಕ್ ಇತ್ಯಾದಿ ಪದಗಳು. ಇದು ಸಿವಿಲೈಸೇಶನ್ ಅಥವಾ ನಾಗರಿಕತೆ ಪದಗಳ ಮೂಲ. ಬುಡಕಟ್ಟು ಸಮುದಾಯ ಜೀವನದಿಂದ ನಗರೀಕರಣದ ನಾಗರಿಕ ಜೀವನವನ್ನೂ ಅದು ಸೂಚಿಸುತ್ತದೆ. ಹೆಚ್ಚು ಕಡಿಮೆ ನಾಗರಿಕರನ್ನು ಹದ್ದುಬಸ್ತಿನಲ್ಲಿಡುವ ಪರಿಕಲ್ಪನೆಗಳಾಗಿ ಇವುಗಳು ಬದಲಾಗಿ ಹೋಗಿರುವುದು ಸೋಜಿಗ ಮತ್ತು ಅದೇ ಸಮಯದಲ್ಲಿ ದುರಂತದ್ದಾಗಿದೆ. ಕೆಲವು ದೇಶಗಳು ಇದಕ್ಕೆ ಸುಧಾರಣೆಯನ್ನು ಕಂಡುಕೊಳ್ಳಲು ಶ್ರಮಿಸುತ್ತಿದ್ದರೆ ಭಾರತದಲ್ಲಿ ಇವಿನ್ನೂ ನಾಗರಿಕರನ್ನು ಭಯಬೀತಿಗೊಳಿಸುವ ನಿಟ್ಟಿನಲ್ಲಿಯೇ ಇವೆ.

ವಸಾಹತು ಪ್ರಜ್ಞೆಯಿಂದ ಬಿಡಿಸಿಕೊಳ್ಳದ ಪೊಲೀಸ್ ವ್ಯವಸ್ಥೆ

ಬ್ರಿಟಿಷ್ ಆಡಳಿತದಲ್ಲಿ ಜಾರಿಯಾದ ಪೊಲೀಸ್ ವ್ಯವಸ್ಥೆ, ಅಂದಿನ ಸರ್ಕಾರದ ವಿರುದ್ಧ ಜಾರಿಯಲ್ಲಿದ್ದ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಿ ಭಾರತೀಯರನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ರೂಪುಗೊಂಡಿದ್ದು. ಇಂದಿಗೂ ಪೊಲೀಸ್ ವ್ಯವಸ್ಥೆ ಪ್ರಭುತ್ವದ ಆಜ್ಞೆಯನ್ನು ಪಾಲಿಸುವ, ನಾಗರಿಕರ ವಿಶಾಲ ಸಂಕಟಗಳಿಗೆ ಸ್ಪಂದಿಸದೆ ವಸಾಹತುಶಾಹಿ ಪಳೆಯುಳಿಕೆ ಕಾನೂನುಗಳನ್ನು ಪಾಲಿಸುವ ವ್ಯವಸ್ಥೆಯಾಗಿಯೇ ಉಳಿದುಕೊಂಡು ಬಂದಿದೆ. ಇನ್ನು ಅದರಲ್ಲಿನ ಶ್ರೇಣೀಕರಣ ಇದನ್ನೆಲ್ಲಾ ಪೊರೆಯುವಂಥದ್ದು.

ಭಾರತದಲ್ಲಿ ಸೆಡಿಶನ್ ಅಥವಾ ದೇಶದ್ರೋಹಿ ಕಾನೂನನ್ನು ಪರಿಚಯಿಸಿದ ಬ್ರಿಟಿಷ್ ಆಡಳಿತ ತನ್ನ ದೇಶದಲ್ಲಿ ಆ ಕಾನೂನನ್ನು ಇಲ್ಲವಾಗಿಸಿದೆ. ಇಲ್ಲಿ ದಮನಕಾರಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿದ ವಸಾಹತು ಬ್ರಿಟಿಷ್ ತನ್ನ ದೇಶದಲ್ಲಿ ಇದ್ದುದರಲ್ಲಿ ಜನಸ್ನೇಹಿ ಎನ್ನಲಾದ ಪೀಲಿಯನ್ ತತ್ತ್ವಗಳ ಮೇಲೆ ತನ್ನ ಪೊಲೀಸಿಂಗ್‌ಅನ್ನು ರೂಪಿಸಿಕೊಂಡಿದೆ. 1800ರಲ್ಲಿ ರಾಬರ್ಟ್ ಪೀಲ್ ಎಂಬ ಸರ್ಕಾರದ ಆಡಳಿತದಲ್ಲಿದ್ದ ವ್ಯಕ್ತಿ ನೀಡಿದ ತತ್ತ್ವಗಳ ಆಧಾರದಲ್ಲಿ, ಪೊಲೀಸರು ಸಮವಸ್ತ್ರ ಧರಿಸಿದ ನಾಗರಿಕರು ಎಂಬ ಅರ್ಥದಲ್ಲಿ ಅದು ಅಲ್ಲಿ ರೂಪುಗೊಂಡಿದೆ. ’ಪೊಲೀಸಿಂಗ್ ಬೈ ಕನ್ಸೆಂಟ್’ – ಒಪ್ಪಿಗೆಯ ಆಧಾರದಲ್ಲಿ ಪೊಲೀಸಿಂಗ್ ಎಂಬ ತತ್ತ್ವ ತನ್ನೆಲ್ಲಾ ಕಾನೂನು ಪಾಲನೆಯಲ್ಲಿ ನಾಗರಿಕರನ್ನು ಸಾಧ್ಯವಾದಷ್ಟು ತೊಡಗಿಸಿಕೊಳ್ಳಲು ಶ್ರಮಿಸುತ್ತದೆ. ಇಂತಹ ಸುಧಾರಣೆಗಳನ್ನು ಭಾರತದ ಪೊಲೀಸಿಂಗ್ ನಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾವುದೇ ರಾಜಕೀಯ ನಾಯಕತ್ವವಾಗಲೀ ಮನಸ್ಸು ಮಾಡಿಲ್ಲ. ನಾಗರಿಕ ಸಮಾಜಕ್ಕೂ ಒತ್ತಡ ಹೇರಲು ಸಾಧ್ಯವಾಗಿಲ್ಲ.

ಕೋವಿಡ್ ಸಮಯದಲ್ಲಿ ಕಣ್ಣಿಗೆ ರಾಚಿದ ಕಾನೂನು ಪಾಲನೆಯ ಕ್ರೌರ್ಯ!

ಕೋವಿಡ್ ಮೊದಲ ಲಾಕ್‌ಡೌನ್ ಸಮಯದಲ್ಲಿ ಜನ ಜೀವನೋಪಾಯಗಳನ್ನು ಕಳೆದುಕೊಂಡು ಕಿಲೋಮೀಟರ್‌ಗಟ್ಟಲೆ ಹಸಿವಿನಿಂದ ನಡೆದು ಹೋಗಬೇಕಾದರೆ, ಅವರನ್ನು ಅಲ್ಲಲ್ಲಿ ತಡೆಗಟ್ಟಿ ಹೊಡೆಯುವ, ಕಿರುಕುಳ ನೀಡುವ ಪೊಲೀಸ್ ದೌರ್ಜನ್ಯಗಳ ವಿಡಿಯೋಗಳು ಒಂದರಮೇಲೊಂದರಂತೆ ಬಂದವು. ಅಲ್ಲಲ್ಲಿ ಜನರಿಗೆ ಸಹಾಯ ಮಾಡಿದ ಪೊಲೀಸ್ ವ್ಯಕ್ತಿಗಳು ಬಿಡಿಬಿಡಿಯಾಗಿ ಇರಲಿಲ್ಲವೆಂದಲ್ಲ. ಆದರೆ ಒಂದು ವ್ಯವಸ್ಥೆಯಾಗಿ ಬಡಜನರ, ದೀನರ ಬಗ್ಗೆ ಹೆಚ್ಚು ಸಂಯಮದಿಂದ, ಕರುಣೆಯಿಂದ ನಡೆದುಕೊಳ್ಳಬೇಕಿದ್ದ ಪೊಲೀಸ್ ವ್ಯವಸ್ಥೆಯ ಬಹುತೇಕ ಮಂದಿ ಹೀಗೆ ಒರಟಾಗಿ, ಹೃದಯಶೂನ್ಯವಾಗಿ ನಡೆದುಕೊಂಡಿದ್ದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ಹಾಗೆಯೇ, ಟ್ರಾಫಿಕ್ ಸುವ್ಯವಸ್ಥೆಯ ನೆಪದಲ್ಲಿ ಜನಸಾಮಾನ್ಯರಿಗೆ ಗೋಳು ಹೊಯ್ದುಕೊಳ್ಳುವ ದೂರುಗಳು ಸಾರ್ವಕಾಲಿಕ. ಇತ್ತೀಚೆಗೆ ಡೆಲಿವರಿ ಕೆಲಸ ಮಾಡುವ ಒಬ್ಬ ವ್ಯಕ್ತಿಯ ಬೈಕ್‌ಅನ್ನು ನಿರ್ದಾಕ್ಷಿಣ್ಯವಾಗಿ ಎಳೆದೊಯ್ಯುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಟೋಯಿಂಗ್ ಕಾಂಟ್ರ್ಯಾಕ್ಟ್ ನೌಕರರ ದುರ್ವರ್ತನೆಯ ವಿಡಿಯೋ ಮನಕಲಕುವಂತಿತ್ತು. ಇವೆಲ್ಲಾ, ಇರುವ ಬೆಟ್ಟದಷ್ಟು ಸಮಸ್ಯೆಗಳಲ್ಲಿ, ಪ್ರಕರಣಗಳಲ್ಲಿ ಕಾಣಿಸಿಕೊಳ್ಳುವ ಬೆರಳೆಣಿಕೆಯ ಸಂಗತಿಗಳಷ್ಟೇ.

ಯಾವುದೇ ಸಮಯದಲ್ಲಿ ಪೊಲೀಸರನ್ನು ಕಾಣಲು ಜನಸಾಮಾನ್ಯರು ಹಿಂಜರಿಯುವ ಪರಿಸ್ಥಿತಿ ಇಂದಿಗೂ ಸಾಮಾನ್ಯವಾದುದಲ್ಲವೇ? ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಕಾಣುತ್ತಿರುವ ಈ ಸಮಯದಲ್ಲಿಯೂ, ನಮ್ಮದೇ ಪೊಲೀಸ್ ವ್ಯವಸ್ಥೆಯನ್ನು ಕಂಡು ಜನ ಹೆದರುವ ಪರಿಸ್ಥಿತಿ ನಿರ್ಮಾಣವಾಗಿರುವುದೇಕೇ? 2006ರ ಪ್ರಕರಣದ ವಿಚಾರಣೆಯೊಂದರಲ್ಲಿ ಪೊಲೀಸ್ ವ್ಯವಸ್ಥೆಯ ಸುಧಾರಣೆಗೆ ಸುಪ್ರೀಂ ಕೋರ್ಟ್ ಕೆಲವು ನಿರ್ದೇಶನಗಳನ್ನು ನೀಡಿದ್ದರೂ ಅವುಗಳು ಜಾರಿಯಾಗಿರುವ ಉದಾಹರಣೆ ಯಾವ ರಾಜ್ಯದಲ್ಲಿಯೂ ಇಲ್ಲ.

ಇನ್ನು ಪ್ರಭುತ್ವಗಳು ಜನರ ಹೋರಾಟಗಳನ್ನು, ಪ್ರತಿಭಟನೆಗಳನ್ನು ನಿಯಂತ್ರಿಸಲು, ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡ ನೂರಾರು ಉದಾಹರಣೆಗಳಿವೆ. ಯಾವುದೇ ರಾಜಕೀಯ ಪಕ್ಷಕ್ಕೆ ನಿಷ್ಠೆ ತೋರದೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಂತೆ, ಬಡಜನ, ದೀನ ದಲಿತರು ಮತ್ತು ಮಹಿಳೆಯರ ಜೊತೆಗೆ ವರ್ತಿಸುವಾಗ ಸೂಕ್ಷ್ಮತೆ ತೋರುವಂತೆ, ತಾವೂ ನಾಗರಿಕರೇ ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂತೆ ತರಬೇತು ನೀಡುವ ಮತ್ತು ಸಮಗ್ರ ಸುಧಾರಣೆಯನ್ನು ತರುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.

ಕೆಲವೇ ದಿನಗಳ ಹಿಂದೆ ಅಂಗವಿಕಲ ಮಹಿಳೆಗೆ ಒದ್ದ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಾನುಗೌರಿ ಸೇರಿದಂತೆ ವಿವಿಧ ಜನಪರ ಮಾಧ್ಯಮಗಳು ಒತ್ತಡ ಹೇರಿದ ಮೇಲೆ, ಆ ಎಎಸ್‌ಐಅನ್ನು ಸಸ್ಪೆಂಡ್ ಮಾಡಲಾಗಿದೆ. ಅದಷ್ಟೇ ಸಾಕೇ? ಆತನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕಲ್ಲವೇ? ವಾಹನಗಳ ಟೋಯಿಂಗ್ ಅನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಆದರೆ ಅದು ಮುಂದೊಂದು ದಿನ ಬೇರೊಂದು ರೀತಿಯಲ್ಲಿ ಬರಬಹುದು. ಇದರ ಬದಲು ನಾಗರಿಕರಿಗೆ ಬೇಕಾದ ರೀತಿಯಲ್ಲಿ ಕಾನೂನು ಪಾಲನೆ ಮಾಡುವ, ನಾಗರಿಕರನ್ನು ಒಳಗೊಂಡಂತೆ ಪೊಲೀಸ್ ವ್ಯವಸ್ಥೆ ಸೃಷ್ಟಿಸಿಕೊಳ್ಳಲು ಸಮಗ್ರ ಸುಧಾರಣೆಯ ಅಗತ್ಯವಿದೆ. ಇದಕ್ಕಾಗಿ ನಾಗರಿಕ ಸಮಾಜ ತನಗಿರುವ ಪ್ರಭಾವವನ್ನು ಬಳಸಿ ಒತ್ತಡ ಹೇರಬೇಕಿದೆ.


ಇದನ್ನೂ ಓದಿ: ’ಪ್ರಾಮಾಣಿಕತೆ’ ಕುಚೋದ್ಯಕ್ಕೆ ಒಳಗಾಗುತ್ತಿರುವ ಕಾಲದಲ್ಲಿ ನೆನೆಯಬೇಕಿರುವ ಬಿ.ಜಿ ಹಾರ್ನಿಮನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...