ಬಿಹಾರ ಮೋತಿಹಾರಿ ಮೂಲದ ದಿವ್ಯಾಂಶು ಸಿಂಗ್ ಎಂಬ ವಿದ್ಯಾರ್ಥಿ ಉಕ್ರೇನ್ನಿಂದ ಹಂಗೇರಿ ಮೂಲಕ ಗುರುವಾರ ಮಧ್ಯಾಹ್ನ ದೆಹಲಿಗೆ ಬಂದಿಳಿದಿದ್ದು ಅವರನ್ನು ಗುಲಾಬಿಯೊಂದಿಗೆ ಸ್ವಾಗತಿಸಲಾಗಿತ್ತು. ಈ ವೇಳೆ ಒಕ್ಕೂಟ ಸರ್ಕಾರವು ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು “ಉಕ್ರೇನ್ನಿಂದ ನಾಗರಿಕರನ್ನು ರಕ್ಷಿಸಲು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳದೆ ಹೂವುಗಳನ್ನು ವಿತರಿಸುವುದು ಅರ್ಥಹೀನ” ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ನಿಮಗೆ ಸಹಾಯ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, “ನಾವು ಹಂಗೇರಿಗೆ ಗಡಿ ದಾಟಿದ ನಂತರವೇ ನಮಗೆ ಸಹಾಯ ಸಿಕ್ಕಿತು. ಅದಕ್ಕೂ ಮೊದಲು ಯಾವುದೇ ಸಹಾಯ ಮಾಡಲಿಲ್ಲ. ನಾವಾಗಿಯೆ ಬಂದಿದ್ದು, ನಮ್ಮ ಹತ್ತು ಮಂದಿಯ ಗುಂಪು ರೈಲಿನಲ್ಲಿ ಹತ್ತಿ ಬಂದಿದ್ದೇವೆ. ಆ ರೈಲು ತುಂಬಿ ತುಳುಕುತ್ತಿತ್ತು” ಎಂದು ಹೇಳಿದ್ದಾರೆ.
ರೈಲು ಹತ್ತಲು ಅಥವಾ ಗಡಿ ದಾಟಲು ಪ್ರಯತ್ನಿಸುವಾಗ ಭಾರತೀಯ ವಿದ್ಯಾರ್ಥಿಗಳು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಈಗಾಗಲೆ ಹಲವು ವರದಿಗಳಾಗಿದೆ. ಆದರೆ ದಿವ್ಯಾಂಶು ಸಿಂಗ್ ಅವರು ಸ್ಥಳೀಯರಿಂದ ಸಹಾಯ ಪಡೆದಿದ್ದಾಗಿ ಹೇಳಿದ್ದಾರೆ.
“ಸ್ಥಳೀಯ ಜನರು ನಮಗೆ ಸಹಾಯ ಮಾಡಿದ್ದಾರೆ, ಯಾರೂ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ಪೋಲೆಂಡ್ ಗಡಿಯಲ್ಲಿ ಕೆಲವು ವಿದ್ಯಾರ್ಥಿಗಳು ಕಿರುಕುಳ ಎದುರಿಸಿದ್ದು ನಿಜ, ಅದಕ್ಕೆ ನಮ್ಮ ಸರ್ಕಾರವೇ ಹೊಣೆ. ಸರಿಯಾದ ಸಮಯದಲ್ಲಿ ಕ್ರಮ ಕೈಗೊಂಡಿದ್ದರೆ, ನಮಗೆ ಇಷ್ಟು ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ತನ್ನ ನಾಗರಿಕರು ಉಕ್ರೇನ್ನಿಂದ ಹೊರಹೋಗುವಂತೆ ಕೇಳಿಕೊಂಡ ಮೊದಲ ದೇಶ ಅಮೆರಿಕ ಆಗಿದೆ” ಎಂದು ಅವರು ಹೇಳಿದ್ದಾರೆ.
ದೆಹಲಿಗೆ ಬಂದಿಳಿದ ನಂತರ ಅವರಿಗೆ ನೀಡಿದ ಗುಲಾಬಿಯನ್ನು ಹಿಡಿದುಕೊಂಡು ಮಾತನಾಡಿದ ಅವರು, “ನಾವೀಗ ಇಲ್ಲಿದ್ದೇವೆ, ಇದನ್ನು ನಮಗೆ ನೀಡಲಾಗುತ್ತಿದೆ. ಆದರೆ ಇದರಿಂದ ಪ್ರಯೋಜನ ಏನು? ಇದನ್ನು ನಾವು ಏನು ಮಾಡಲು ಸಾಧ್ಯ? ಅಲ್ಲಿ ನಮಗೆ ಏನಾದರೂ ಆಗಿದ್ದರೆ ನಮ್ಮ ಕುಟುಂಬಗಳು ಮಾಡಬಹುದಿತ್ತು?” ಎಂದು ಅವರು ಹೇಳಿದ್ದಾರೆ.
ತಾನು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿರುವುದರಿಂದ ಕಡಿಮೆ ತೊಂದರೆಗಳನ್ನು ಎದುರಿಸಿದೆ ಎಂದು ದಿವ್ಯಾಂಶು ಸಿಂಗ್ ಹೇಳಿದ್ದಾರೆ. ಸರಕಾರ ಸಕಾಲದಲ್ಲಿ ಕ್ರಮಕೈಗೊಂಡಿದ್ದರೆ ಈಗ ಹೂವು ವಿತರಿಸುವ ಅಗತ್ಯವಿರಲಿಲ್ಲ ಎಂದು ಹೇಳಿದ ಅವರು, “ಸಕಾಲಿಕ ಕ್ರಮಗಳನ್ನು ಮಾಡಿದ್ದರೆ, ಇಂತಹ ಪ್ರದರ್ಶನಗಳ ಅಗತ್ಯವಿರುವುದಿಲ್ಲ. ನಮ್ಮ ಕುಟುಂಬಗಳು ತುಂಬಾ ಚಿಂತಿತರಾಗಿದ್ದರು” ಎಂದು ಹೇಳಿದ್ದಾರೆ.
ಎಂಟು ವಿಮಾನಗಳಲ್ಲಿ 3,726 ಭಾರತೀಯರನ್ನು ಇಂದು ಭಾರತಕ್ಕೆ ವಾಪಾಸು ಕರೆತರಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
798 ಭಾರತೀಯರೊಂದಿಗೆ ನಾಲ್ಕು ವಾಯುಪಡೆಯ ವಿಮಾನಗಳು ಇಂದು ದೆಹಲಿ ಬಳಿಯ ಹಿಂಡನ್ ವಾಯುನೆಲೆಗೆ ಬಂದಿಳಿದಿವೆ. ಬುಕಾರೆಸ್ಟ್ನಿಂದ 183 ಭಾರತೀಯರೊಂದಿಗೆ ಮುಂಬೈಗೆ ಒಂದು ವಿಮಾನ ಬಂದಿಳಿದಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರೊಂದಿಗೆ ರಷ್ಯಾ ಅಧ್ಯಕ್ಷ ಸಂವಾದ ನಡೆಸಿಲ್ಲ!
Why always against Modi govt. Why always against Brahmins. What is wrong with you people.