Homeಅಂಕಣಗಳುಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಧರ್ಮೋನ್ಮಾದದ ದುರಂತವು ಎಲ್ಲ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ.

- Advertisement -
- Advertisement -

ರಾಷ್ಟ್ರೀಯತೆ ಎನ್ನುವುದು ಬಹು ದೊಡ್ಡ ಅಪಾಯವಾಗಬಹುದು. ‘ಒಬ್ಬ ವ್ಯಕ್ತಿ ತಾನು ಪ್ರಬಲನಾಗಲು ಎಂತಹ ಅನೈತಿಕ ಕೆಲಸಗಳನ್ನು ಮಾಡಬಲ್ಲನೋ ಹಾಗೆ ಒಂದು ಸಮುದಾಯ ತಾನು ಪ್ರಬಲವಾಗಲು ಅನೈತಿಕವಾಗಿ ವರ್ತಿಸಬಲ್ಲದು’ ಎಂದಿದ್ದರು ರವೀಂದ್ರನಾಥ ಠಾಗೋರ್.

ನನ್ನ ದೇಶದಲ್ಲೀಗ ರಾಷ್ಟ್ರೀಯತೆಯ ಹೆಸರಿನಲ್ಲಿ ಮತೀಯ ಉನ್ಮಾದ ಹೆಚ್ಚುತ್ತಿದೆ. ರಾಷ್ಟ್ರ ಮತ್ತು ಧರ್ಮಗಳನ್ನು ಒಂದಾಗಿಸುವ ಪ್ರಯತ್ನದಲ್ಲಿ ಬಹುತ್ವದ ಬೇರು ಕತ್ತರಿಸಲಾಗುತ್ತಿದೆ. ಗಾಂಧೀಜಿ ತಮ್ಮ ಹಿಂದ್ ಸ್ವರಾಜ್‍ನಲ್ಲಿ ಯಾವ ಧರ್ಮಾಧಾರಿತ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರೋ ಅದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹರಡಲು ಯತ್ನಿಸುತ್ತಿದೆ. ಒಂದೇ ಧರ್ಮವಿದ್ದರೆ ಒಂದು ರಾಷ್ಟ್ರ ಎನ್ನುವುದು ಸರಿಯಾದದ್ದಲ್ಲ, ಪ್ರತಿಯೊಂದು ಪ್ರಬಲ ಧರ್ಮವೂ ಪ್ರತ್ಯೇಕ ರಾಷ್ಟ್ರದ ತುಡಿತ ಹೊಂದಿದರೆ ಮುಂದೇನು? ಎಂದು ಪ್ರಶ್ನಿಸಿದ್ದರು. ಧರ್ಮ ಬೇರೆಯಿದೆ ಎಂದ ಕ್ಷಣ ಯಾರೂ ವೈರಿಗಳಾಗುವುದಿಲ್ಲ ಎಂದಿದ್ದರು.

ಗಾಂಧೀ ಹತ್ಯೆ ವಾರಸುದಾರರು ಗಾಂಧೀ ಸಾಮರಸ್ಯದ ಚಿಂತನೆಯ ಹತ್ಯಾರರಾಗಿ ಬೆಳೆಯತೊಡಗಿದರು. ಭಾರತಮಾತೆಯ ಜಾಗದಲ್ಲೀಗ ಶ್ರೀರಾಮ ಬಂದು ಕೂತಿದ್ದಾನೆ. ಪ್ರಭುತ್ವದ ಸಂಗೋಪನೆಗಾಗಿ ಎದುರಾದ ಬಿಕ್ಕಟ್ಟುಗಳನ್ನು ನಿವಾರಿಸಲು ಚಾರಿತ್ರಿಕ ತಪ್ಪುಗಳನ್ನು ಮಾಡಿದ್ದ ಶ್ರೀರಾಮ ಆ ನಂತರದಲ್ಲಿ ತನ್ನ ಕೃತ್ಯಗಳಿಗಾಗಿ ಪರಿತಪಿಸಿದವನು. ಮರಣ ಮುಖದಲ್ಲಿದ್ದ ವಾಲಿಯ ಎದುರು ಮೊಣಕಾಲೂರಿ ತಪ್ಪೊಪ್ಪಿಕೊಂಡವನು. ಆ ಶ್ರೀರಾಮನನ್ನು ಕರೆತಂದು ಇತ್ತೀಚೆಗೆ ಜೈಶ್ರೀರಾಮ್ ಘೋಷಣೆ ಕೂಗದ ಕಾರಣಕ್ಕೆ ಹಲ್ಲೆಗೀಡಾಗಿ ಶವವಾಗಿದ್ದ ಮಗನ ಪಕ್ಕ ಶೂನ್ಯ ದಿಟ್ಟಿಸುತ್ತಾ ಕೂತಿದ್ದ ಅಪ್ಪನ ಎದುರು ತಂದು ನಿಲ್ಲಿಸಬೇಕು. ಈ ತಂದೆಯ ದಿಗ್ಭ್ರಾಂತ ದೈನ್ಯಕ್ಕೆ ಶ್ರೀರಾಮ ಏನೆನ್ನಬಹುದು? ಖಂಡಿತ, ಮಗನ ಅಗಲಿಕೆಯ ನೋವಿನ ತೀವ್ರತೆಯನ್ನು ತಾಳದೆ ಮರಣಿಸಿದ ಅಪ್ಪ ದಶರಥನ ಕಣ್ಣಾಳದಲ್ಲಿ ಹೆಪ್ಪುಗಟ್ಟಿದ ಮಮತೆಯ ಸೆಳೆಯನ್ನವನಿಲ್ಲಿ ಕಾಣುತ್ತಿದ್ದನು. ಕರುಣಾಳು ರಾಘವನಿಗೆ ಖಂಡಿತ ಆ ಕಾಣ್ಕಿಯಿತ್ತು.

ಧರ್ಮೋನ್ಮಾದದ ದುರಂತವು ಎಲ್ಲೋ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಜೈಶ್ರೀರಾಮ್ ಘೋಷಣೆ ಕೂಗಿಲ್ಲದ ಕಾರಣಕ್ಕೆ ಜಾರ್ಖಂಡ್‍ನಲ್ಲಿ ಯುವಕನ ಹತ್ಯೆಯಾಗಿದೆ. ಜಾರ್ಖಂಡ್‍ನ ಮುಸ್ಲಿಂ ಶಾಸಕರೊಬ್ಬರಿಗೆ ಈ ಘೋಷಣೆ ಕೂಗಲು ಒತ್ತಾಯಿಸುವ ವಿಡಿಯೋ ವೈರಲ್ ಆಗಿದೆ. ಕಲ್ಕತ್ತದಲ್ಲಿ ಶಿಕ್ಷಕರೊಬ್ಬರನ್ನು ರೈಲು ಪ್ರಯಾಣದಲ್ಲಿ ಹೀಗೆ ಪೀಡಿಸಲಾಗಿದೆ. ವರದಿಯಾಗಿರುವ ಘಟನೆಗಳನ್ನು ಗಮನಿಸಿದರೆ ದೇಶವೀಗ ಕುದಿಯುತ್ತಿದೆ. ದೇವರು ಧರ್ಮ ಎಂಬ ಜೀವಪ್ರೇಮದ ಸಂಕೇತಗಳನ್ನು ದ್ವೇಷದ ಕಾರಣವಾಗಿ ಬದಲಿಸುವುದು ಎಂದರೆ ಜೀವಪೋಷಕ ಜಲವನ್ನು ವಿನಾಶಕ್ಕೆ ಉದ್ದೀಪಿಸಿದಂತೆ.

ಈ ಉನ್ಮತ್ತತೆ ಎಳೆಎಳೆಯ ಯುವಕರ ಬೆನ್ನಿನ ಮೇಲೆ ‘. . . . .ಹುಲಿ ಮುಟ್ಟಿದರೆ ಬಲಿ’ ಎಂಬ ಹಿಂಸಾಶಾಸನವಾಗಿ ರಾರಾಜಿಸುತ್ತಿದೆ. ಇಂತಹ ಸಂದರ್ಭಗಳನ್ನು ತಹಬಂದಿಗೆ ತರಬೇಕಾದ ನಿಷ್ಠುರ ಕಾನೂನು ರಕ್ಷಣೆಯೂ ಕಾಣುತ್ತಿಲ್ಲ. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ 15 ವರ್ಷದ ಬಾಲಕ ಇದೇ ಹಿಂಸೆಯಿಂದ ಆಸ್ಪತ್ರೆ ಸೇರಿ ಪೊಲೀಸರು ಬಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಾಲಕನ ಮಾತುಗಳು ಆಸ್ಪತ್ರೆಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಆದರೆ ಪೊಲೀಸರು ‘ಬಾಲಕ ವ್ಯತಿರಿಕ್ತ ಹೇಳಿಕೆಗಳನ್ನು ಕೊಡುತ್ತಿದ್ದಾನೆ. ಅವನೂ ಅವನ ತಾಯಿಯೂ ಒತ್ತಡಕ್ಕೆ ಮಣಿಯುತ್ತಿದ್ದಾರೆ’ ಎನ್ನುತ್ತಿದ್ದಾರೆ. ಪೊಲೀಸರ ಈ ಪಕ್ಷಪಾತ ವರ್ತನೆಯ ಕಾರಣಗಳು ಸ್ಪಷ್ಟ. ಅವರು ಆರೋಪಿಗಳ ರಕ್ಷಕರಾಗಿರುವ ಪ್ರಭುತ್ವದ ಪರವಾಗಿರಲು ಯತ್ನಿಸುತ್ತಾರೆ. ಇಂತಹ ಘಟನೆಗಳು ಯಾವ ದೇಶದ ಆಂತರಿಕ ವಿಕಾಸಕ್ಕೂ ತಕ್ಕುದಲ್ಲ. ಆದರೇನು? ಪ್ರಜಾಪ್ರಭುತ್ವವನ್ನೇ ಆರಾಣೆ-ಬಾರಾಣೆಗೆ ಮಾರಿಕೊಳ್ಳಲು ನಿಂತ ಮೇಲೆ ಅದರ ಘನತೆಯ ಮಾತೇನು?

ನಾವೀಗ ಚಲಾವಣೆಗೆ ತಂದುಕೊಂಡಿರುವುದು ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು. ಇದರಲ್ಲಿ ಪ್ರಜಾಪ್ರಭುತ್ವದ ಆಶಯಗಳು ಕ್ವಚಿತ್ತಾಗಿ ಆಕಸ್ಮಿಕವಾಗಿ ನಡೆಯುತ್ತವೆ. ಬಂಡವಾಳಶಾಹಿ ಹಿತಾಸಕ್ತಿಗಳೇ ಕಾರ್ಯರೂಪದಲ್ಲಿರುತ್ತವೆ. ನಮ್ಮ ಚುನಾವಣೆಗಳು ಬಹುಕೋಟಿ ಹೂಡಿಕೆಯ ಉದ್ಯಮವಾಗಿದೆ. ನಮ್ಮ ಸಂಸತ್ತುಗಳಲ್ಲಿ ಪ್ರವೇಶ ಪಡೆಯುವವರು ಕೋಟ್ಯಾಧಿಪತಿಗಳೂ, ಕ್ರಿಮಿನಲ್ ಹಿನ್ನೆಲೆಯವರೂ ಆಗಿರುವುದನ್ನು ಸಹಜ ಎಂದು ಒಪ್ಪಿಕೊಳ್ಳುತ್ತಿದ್ದೇವೆ. ಬಂಡವಾಳಪರ ರಾಜಕಾರಣ ಉಗ್ರ ಬಲಪಂಥೀಯ ರಾಷ್ಟ್ರೀಯವಾದವನ್ನು ಬೆಳೆಸುತ್ತದೆ. ಸಾದತ್ ಹಸನ್ ಮಾಂಟೋ ಕಥೆ ‘ಕಾರ್ಯಾಚರಣೆ’ ಈ ಮತೀಯ ಉನ್ಮಾದ ಮತ್ತು ಬಂಡವಾಳೋದ್ಯಮದ ಬಿಗಿತವನ್ನು ಹೇಳುತ್ತದೆ. ಈ ಕಥೆ ಹೀಗಿದೆ ‘ರಾತ್ರಿಯೆಲ್ಲ ಆ ಓಣಿ ಬೆಂಕಿಯಲ್ಲಿ ಬೆಂದುಹೋಯಿತು. ಒಂದು ಅಂಗಡಿ ಸುಡದೇ ಉಳಿದಿತ್ತು. ಬೆಳಗ್ಗೆ ಅಂಗಡಿಯ ಮುಂದಿನ ಬೋರ್ಡಿನಲ್ಲಿ ಇಲ್ಲಿ ಮನೆ ರಿಪೇರಿಯ ಸಾಮಗ್ರಿಗಳು ಮಾರಾಟಕ್ಕಿದೆ ಎಂದು ಬರೆದಿತ್ತು.’ ಮತೀಯ ಹಿಂಸೆ ಮತ್ತು ಬಂಡವಾಳದ ಬೆರಕೆಯನ್ನು ಇನ್ನೂ ಸಂಕೀರ್ಣ ರೂಪಕದಲ್ಲಿಡಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟುತ್ತದೆ. ‘ಜೈಶ್ರೀರಾಮ್’ ಘೋಷಣೆಯನ್ನೂ ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಎಂದು ದೇಶದ ಗೃಹಮಂತ್ರಿಗಳು ಹೇಳಲು ಸಾಧ್ಯವಾಗುತ್ತದೆ.

ವಾಲ್ಮೀಕಿ ಹೇಳುವ ರಾಮಕಥೆಯೊಂದು ಹೀಗಿದೆ. ‘ರಾಮ ಸೀತೆಯರು ವನವಾಸದ ಸೌಖ್ಯದಲ್ಲಿದ್ದ ಕಾಲ. ಅರೆ ಸಂಜೆ ಕಲ್ಲು ಬಂಡೆಯ ಮೇಲೆ ಕುಳಿತು ಹರಟೆ. ರಾಮಧನಸ್ಸು ನೆಲಕ್ಕೆ ಚುಚ್ಚಿತ್ತು. ಎದ್ದು ಹೊರಟು ಬಿಲ್ಲು ಎತ್ತಿದರೆ, ಬಿಲ್ಲಿನ ಮೊನೆಗೆ ಚುಚ್ಚಿದ್ದ ಮಂಡೂಕ ಜಟ್ಟಿಯಾಗಿ ವಿಲಗೂಡುತ್ತಿತ್ತು. ಸೀತೆ ಗಾಬರಿಯಿಂದ ಕೇಳಿದಳಂತೆ ಯಾಕೆ ಸುಮ್ಮನಿದ್ದೆ? ಕೂಗಬಾರದೆ? ಮಂಡೂಕ ವಿಷಾದದಿಂದ ಉಸುರಿತಂತೆ. ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ?’ ಈ ಘಟನೆ ಸೀತೆಗೆ ಅವಳ ಮುಂದಿನ ದಿನಗಳಲ್ಲಿ ಪದೇಪದೇ ನೆನಪಾಗುತ್ತದೆ. ರಾಮನನ್ನು ಪ್ರೀತಿಸಿದ ಭಾರತೀಯ ಮನಸ್ಸೀಗ ಈ ಸ್ಥಿತಿಯಲ್ಲಿಯೇ ಇದೆಯೇ?

ಇದೀಗ ಪ್ರತಿರೋಧವನ್ನು ಉಸುರುವುದೂ ಅಪರಾಧವಾಗಿದೆ. ‘ಜೈರಾಮ್ ಘೋಷಣೆ ಯುದ್ಧದ ಘೋಷಣೆಯಂತೆ ಬಳಕೆಯಾಗುತ್ತಿದೆ. ರಾಮನ ಹೆಸರು ಅಪವಿತ್ರಗೊಳ್ಳುತ್ತಿದೆ’ ಎಂದು ದೇಶದ 49 ಚಿಂತಕರು, ಸೃಜನಶೀಲರು ಪ್ರಧಾನಮಂತ್ರಿಯವರಿಗೊಂದು ಪತ್ರ ಬರೆದರು. ಅದರೀಗ ಅವರ ಕಳಕಳಿಯನ್ನೇ ತಪ್ಪೆಂದು ಸಾಧಿಸುವ ಪ್ರಯತ್ನ ನಡೆಯುತ್ತಿದೆ. 62 ಸೆಲೆಬ್ರಿಟಿಗಳಿಂದ ‘ಈ ಪತ್ರ ದೇಶದ್ರೋಹ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂದು ಮರುಪತ್ರ ಹೋಯಿತು. ಇದರ ಆಧಾರದಿಂದ ಬಿಹಾರದ ಕೋರ್ಟಿನಲ್ಲಿ ಪ್ರಕರಣ ದಾಖಲಿಸಲಾಯಿತು. ದೇಶಪ್ರೇಮದ ನಿಜವಾದ ಆಯಾಮವನ್ನು ದ್ರೋಹವೆಂದು ತಿರುಚುವ ಸ್ಥಿತಿಯಿದು.

ಕೇರಳದ ಬಿಜೆಪಿಯವರು ತಮ್ಮ ನಾಡಿನ ಹೆಮ್ಮೆಯಾದ ಪದ್ಮವಿಭೂಷಣ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಆಡೂರರಿಗೆ ಭಾರತ ಬಿಟ್ಟು ಚಂದ್ರಗ್ರಹಕ್ಕೆ ಹೋಗುವಂತೆ ಹೀನಾಯಿಸಿದರು. ಪಶ್ಚಿಮ ಬಂಗಾಳದಲ್ಲಿ ನಟ ಕೌಶಿಕ್ ಸೇನರಿಗೆ ಜೀವಬೆದರಿಕೆಯ ಕರೆಗಳು ಬಂದವು. ಏನಾಗುತ್ತಿದೆ ನಮ್ಮ ದೇಶಕ್ಕೆ? ರಾಷ್ಟ್ರಧ್ವಜದ ಕೆಳಗೆ ನಿಂತು ಜನಗಣಮನ ಹಾಡುವಾಗ ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ. ಈ ದುರಂತದಲ್ಲಿ ನನ್ನ ಪಾಲೆಷ್ಟು?

ಯಾವ ವ್ಯಕ್ತಿಗೂ ಯಾವ ನೆಪದಿಂದಲೂ ಇನ್ನೊಬ್ಬರ ವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸುವ ಹಕ್ಕಿಲ್ಲ – ಎಂದಿದ್ದರು ಶಿವರಾಮ ಕಾರಂತರು. ಬೇಂದ್ರೆಯವರು ಓರಿಯೆಂಟಲ್ ಹಿಸ್ಟರಿಯ ವಿರುದ್ಧ ಜನಕಥನಕ್ಕೆ ಕಿವಿಗೊಡಿ ಎಂದಿದ್ದರು.
ಭರತಖಂಡ ಬದನಿಕಾಯಿ,
ಭರತಾ ಮಾಡಬ್ಯಾಡ ತಮ್ಮಾ
ಸುರತದ ಕಲಹ ಮೆತ್ತಬ್ಯಾಡ,
ಒಮ್ಮನವಿರದೆ ನಮ್ಮ ನಿಮ್ಮ
ಎಂದು ತಿಳಿಸಿದ್ದರು.

ನವೋದಯದ ಸಾಹಿತ್ಯದಲ್ಲಿ ದೇಶಪ್ರೇಮ ತೊಟ್ಟಿಕ್ಕುತ್ತದೆ. ದೇಶವಿಭಜನೆಯ ಹಿಂಸೆಯಲ್ಲಿ ದೇಶಪ್ರೇಮದ ಬೆಳಕಿನ ಕಿರಣದ ಶೋಧನೆಯಿದೆ. ದೇಶಪ್ರೇಮ ಮತ್ತು ಮತೀಯ ಉನ್ಮಾದಗಳು ಪರಸ್ಪರ ವಿಮುಖವಾದದೆಂಬ ತಿಳಿವಿದ್ದ ಕಾಲವದು. ಆದರೀಗ ದೇಶಪ್ರೇಮವು ಉನ್ಮಾದವನ್ನು ಉದ್ದೀಪಿಸುವ ಸರಕಾಗಿದೆ. ಅದರೊಳಗಿದ್ದ ಮತಧರ್ಮ ಪ್ರೇಮವು ಚರ್ಮಕಿತ್ತು ಹೊರಗಿಣುಕುತ್ತಿದೆ. ರಾಷ್ಟ್ರಭಕ್ತಿ–ರಾಷ್ಟ್ರ ಚಾರಿತ್ರ್ಯದ ವಿಷಯದಲ್ಲಿ ತಪ್ಪು ಕಲಿತು, ತಪ್ಪು ಬೆಳೆಸಿ, ತಪ್ಪು ವಿಜೃಂಭಿಸುತ್ತಿರುವ ವರ್ತಮಾನವಿದು ಕವಿ ಆರ್.ವಿ.ಭಂಡಾರಿಯವರ ‘ಇತಿಹಾಸ’ ಪದ್ಯ ನೆನಪಾಗುತ್ತಿದೆ.
ನೇಗಿಲ ಮೊನೆಯಿಂದ ಇತಿಹಾಸ ಕೊರೆಯಲ್ಪಟ್ಟಿತು
ಕಿರೀಟದ ವಜ್ರದ ಮೊನೆಯಿಂದ ಎಂದು ಕಲಿಸಿದರು
ಗೆಯ್ಮೆಯ ಕೈಯಿಂದ ಇತಿಹಾಸ ನಿರ್ಮಾಣವಾಯಿತು
ಆದರೆ ಪುರೋಹಿತರ ಮಂತ್ರದಿಂದ ಎಂದು ಕಲಿಸಿದರು.
ನಮ್ಮನ್ನು ತಪ್ಪಾಗಿ ಕಲಿಸಿದ ಪಾಠಗಳಿಂದ ಬಿಡುಗಡೆಗೊಂಡು, ನಿಜದ ಬೆಳಕಿನಲ್ಲಿ ಇತಿಹಾಸ -ವರ್ತಮಾನಗಳನ್ನು ಕಾಣುವ, ಸತ್ಯದ ವಿಷದ ಬಟ್ಟಲುಗಳಲ್ಲಿ ನಮ್ಮ ಪಾಲೂ ಇರಲಿ ಎಂದು ಧ್ವಜಕ್ಕೆ ನಮಿಸುವಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...