HomeಮುಖಪುಟNEET ಗೇಟ್; ಮೆರಿಟ್ ಹೆಸರಿನಲ್ಲಿ ಹೊರದಬ್ಬುವುದೇ ಮುಖ್ಯ ಉದ್ದೇಶ

NEET ಗೇಟ್; ಮೆರಿಟ್ ಹೆಸರಿನಲ್ಲಿ ಹೊರದಬ್ಬುವುದೇ ಮುಖ್ಯ ಉದ್ದೇಶ

- Advertisement -
- Advertisement -

ಐದು ಮಕ್ಕಳ ಗುಂಪೊಂದು ನಾಟಕವಾಡೋಣ ಎಂದು ತೀರ್ಮಾನಿಸುತ್ತದೆ. ಅದರಲ್ಲಿದ್ದ ಪುಟಾಣಿ ಹುಡುಗಿ ನನಗೇನು ಪಾತ್ರವಿಲ್ಲ ಎಂದು ಅಳತೊಡಗಿದಾಗ ಸಭೆಯ ತೀರ್ಮಾನ ಹೀಗಾಗುತ್ತದೆ: ನಿನಗೂ ಒಂದು ಪಾತ್ರವಿದೆ, ಆದರೆ ನೀನು ಇನ್ನೂ ಹುಟ್ಟಿಲ್ಲದ ಮಗು! ಪಾತ್ರ ಕೊಟ್ಟಂತೂ ಆಗಬೇಕು, ನಾಟಕದಿಂದ ಹೊರದಬ್ಬಿದಂತೆಯೂ ಆಗಬೇಕು ಎನ್ನುವುದು ’ಸಭೆಯ ಉದ್ದೇಶ’. ಒಳಗೊಳ್ಳುವಿಕೆ ಅಥವಾ ಹೊರದಬ್ಬುವಿಕೆ, ಹೊರನೋಟಕ್ಕೆ ಎಲ್ಲವೂ ನಾಜೂಕಾಗಿ ಕಾಣಬಹುದು ಮತ್ತು ಒಳಗಿಂದೊಳಗೆ ಒಂದು ಕಾನೂನಿನ ಮೂಲಕವೋ ಅಥವಾ ಯಾವುದೋ ಒಂದು ವ್ಯವಸ್ಥೆಯ ಮೂಲಕವೋ, ಹೊರಗಿರುವವರನ್ನು ಹೊರಗೇ ಇಡುವಂತೆ ಮಾಡಬಹುದು.

ಇದಕ್ಕೆ ಹಣಕಾಸು, ಜಾತಿ, ಧರ್ಮ, ಭಾಷೆ – ಈ ರೀತಿ ಯಾವುದಾದರೊಂದನ್ನು ತಂತ್ರವಾಗಿ ಬಳಸಿ ವಾಸ್ತವ ಸ್ಥಿತಿಯನ್ನು ಕಾಪಾಡಿಕೊಳ್ಳುವಂತಾಗಬಹುದು. ಎರಡನೇ ಮಹಾಯುದ್ಧದ ನಂತರ ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್ ತನ್ನ ದೇಶಕ್ಕೆ ಹೊಸ ಶಿಕ್ಷಣ ನೀತಿಯೊಂದನ್ನು ರೂಪಿಸಿ ಇದು ಸಾಧಾರಣ ಮನುಷ್ಯನಿಗೆ ಅಸಾಧಾರಣ ಶಿಕ್ಷಣವನ್ನು ಒದಗಿಸುವ ವ್ಯವಸ್ಥೆ (uncommon education for common man) ಎಂದಿದ್ದ. ಅಮೇರಿಕದ ಶ್ರೇಷ್ಠ ತತ್ವಶಾಸ್ತ್ರಜ್ಞ ಜಾನ್ ರಾಲ್ಸ್ ’ನ್ಯಾಯವೆಂದರೆ ಕಟ್ಟಕಡೆಯ ಮನುಷ್ಯನ ಹಾದಿಯನ್ನು ಸುಗಮಗೊಳಿಸುವುದು’ (Advantage for most disadvantaged) ಎಂದಿದ್ದ.

ಇಂದು ಅನೇಕ ಸಾರ್ವಜನಿಕ ವ್ಯವಸ್ಥೆಗಳು ಖಾಸಗೀಕಣಗೊಂಡಿರುವ ಕಾಲ. ಅದು ಆರೋಗ್ಯವಿರಬಹುದು ಅಥವಾ ಶಿಕ್ಷಣವಿರಬಹುದು. ಪತ್ರಕರ್ತ ಶಂಕರ್‌ಅಯ್ಯರ್ ’ಗೇಟೆಡ್ ರಿಪಬ್ಲಿಕ್’ ಎನ್ನುವ ಪುಸ್ತಕವನ್ನು ಈ ವ್ಯವಸ್ಥೆಯನ್ನು ವಿವರಿಸುವುದಕ್ಕಾಗಿಯೇ ಬರೆದಿದ್ದಾರೆ. ಹಾಗೆಯೇ ಆನಂದ ತೇಲ್ತುಂಬ್ಡೆ ಅವರ ’ರಿಪಬ್ಲಿಕ್ ಆಫ್ ಕಾಸ್ಟ್’ ಎನ್ನುವ ಪುಸ್ತಕವನ್ನು ಗಮನಿಸಬಹುದು. ಇದೇ ನಿಟ್ಟಿನಲ್ಲಿ ಮೈಕಲ್ ಸ್ಯಾಂಡಲ್ ತನ್ನ ’ಟಿರನಿ ಆಫ್ ಮೆರಿಟ್’ ಎನ್ನುವ ಪುಸ್ತಕದಲ್ಲಿ ಈ ಅರ್ಹತೆಯ ಅಹಂಕಾರ ಮತ್ತು ದಬ್ಬಾಳಿಕೆಯನ್ನು ವಿವರಿಸುತ್ತಾನೆ. ಹೊರನೋಟಕ್ಕೆ ಅದು ಅರ್ಹತೆ ಎಂದು ಕಂಡುಬಂದರೂ ಅದರ ಹಿಂದೆ ಇರುವ ಕೈಚಳಕ ಪರಂಪರಾಗತವಾಗಿ ಬಂದ ಶ್ರೀಮಂತ ಕುಟುಂಬಗಳು ಮತ್ತು ಅವರ ಪರವಾಗಿ ನಿಲ್ಲುವ ವ್ಯವಸ್ಥೆ ಹೇಗೆ ಮೇಲಿರುವವರನ್ನು ಮೇಲಕ್ಕೆತ್ತುತ್ತಾ, ಕೆಳಗಿರುವವರನ್ನು ತುಳಿಯುತ್ತಾ ಬಂದಿದೆ ಎನ್ನುವುದನ್ನು ಆತ ವಿವರಿಸುತ್ತಾನೆ.

ಸೋತವನು ಅನರ್ಹ, ಅಯೋಗ್ಯ ಎಂದೆಲ್ಲ ಹಣೆಪಟ್ಟಿ ಕಟ್ಟಿ ಹೀಗಳೆಯುವಂತಾಗುತ್ತದೆ. ವಾಸ್ತವವಾಗಿ ಸೋಲಿಗೆ ವ್ಯವಸ್ಥೆಯಲ್ಲಿರುವ ಕಾರಣವನ್ನು ಗಮನಿಸುವುದಿಲ್ಲ. ಹೀಗಾಗಿ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಕೆಳವರ್ಗದವರು ಶೇ.23ರಷ್ಟು ಮಾತ್ರ ಪಾಲ್ಗೊಳ್ಳುವುದಾದರೆ ಇತರರು ಶೇ.32ರಷ್ಟು ಸೇರುವುದಾಗಿದೆ. ಒಟ್ಟು ಉನ್ನತ ಶಿಕ್ಷಣಕ್ಕೆ ಹೋಗುವವರೇ ಶೇ.28ರಷ್ಟಿದ್ದು ಜಗತ್ತಿನ ಸರಾಸರಿ ಶೇ.38ಕ್ಕೆ ಹೋಲಿಸಿದರೆ ಅಥವಾ ಚೈನಾದ ಶೇ.53ಕ್ಕೆ ಹೋಲಿಸಿದರೆ ಭಾರತ ಕಳಪೆ ಸ್ಥಾನದಲ್ಲಿರುವುದನ್ನು ಗಮನಿಸಬಹುದು. ಅದರಲ್ಲೂ ದಲಿತರು ಮತ್ತು ಅಲ್ಪಸಂಖ್ಯಾತರಲ್ಲಿ ಈ ಅನುಪಾತ ಸುಮಾರು ಶೇ.20ರಷ್ಟಿದ್ದು, ಸಮಾಜ-ಆಡಳಿತ ವ್ಯವಸ್ಥೆ ಆ ಸಮುದಾಯ ಹಿಂದೆ ಬಿದ್ದಿರುವದನ್ನು ಸರಿಪಡಿಸಲು ಹೆಚ್ಚೇನೂ ಕೆಲಸ ಮಾಡಿಲ್ಲ ಎಂಬುದನ್ನು ಗಮನಿಸಬಹುದು.

ಇತ್ತೀಚೆಗೆ ತಮಿಳುನಾಡು ಸರ್ಕಾರ ವೈದ್ಯಕೀಯ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನಡೆಸುವ ಏಕರೂಪದ NEET ಪರೀಕ್ಷೆಯನ್ನು ರದ್ದುಗೊಳಿಸುವ ನಡಾವಳಿಯನ್ನು ವಿಧಾನಸಭೆಯಲ್ಲಿ ಮಂಡಿಸಿತು. ಕಾರಣ NEET ಪರೀಕ್ಷೆ ಆರಂಭಗೊಂಡ ನಂತರ ತಮಿಳು ಮಾಧ್ಯಮದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಸಂಖ್ಯೆ ಶೇ.15ರಿಂದ ಶೇ.2ಕ್ಕೆ ಇಳಿಯಲ್ಪಟ್ಟಿತು ಹಾಗೂ ರಾಜ್ಯ ಸರ್ಕಾರದ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳ ಸಂಖ್ಯೆ ಶೇ.98ರಿಂದ ಶೇ.60ಕ್ಕೆ ಇಳಿಯಲ್ಪಟ್ಟಿತು. ಹಾಗೆಯೇ ಗ್ರಾಮಾಂತರದ ವಿದ್ಯಾರ್ಥಿಗಳ ಸಂಖ್ಯೆ ಶೇ.65ರಿಂದ ಶೇ.50ಕ್ಕೆ ಇಳಿಯಲ್ಪಟ್ಟಿತು. ಅದೇ ಸಮಯದಲ್ಲಿ ಕೇಂದ್ರ ಪಠ್ಯಕ್ರಮದಲ್ಲಿ ಓದಿ ಕಲಿತ ವಿದ್ಯಾರ್ಥಿಗಳ ಸಂಖ್ಯೆ ಶೇ.1ರಿಂದ ಶೇ.39ಕ್ಕೆ ಏರಿಕೆಯಾಯಿತು. ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾದದ್ದು ಗ್ರ್ರಾಮಾಂತರ ಮಕ್ಕಳ ಸಮಸ್ಯೆ. ಇಂಗ್ಲಿಷ್ ಭಾಷೆಯಲ್ಲಿ ಕಲಿಯದಿದ್ದುದು ಮತ್ತು ರಾಜ್ಯದ ಪಠ್ಯಕ್ರಮದಲ್ಲಿ ಕಲಿತದ್ದು, ಅವರ ವಿರುದ್ಧ ಕೆಲಸ ಮಾಡಿ, ಅವರನ್ನು ಹೊರದಬ್ಬುವಂತೆ ಮಾಡಿತು. ತಮಿಳಿನಲ್ಲಿ ಉತ್ತಮ ಅಂಕಗಳನ್ನು ಪಡೆದರೂ NEET ಗೇಟಿನಿಂದ ಹೊರಗುಳಿಯಬೇಕಾಯಿತು. ಇದು ಅರ್ಹತೆ ಅಥವಾ ಜ್ಞಾನದ ಆಧಾರದ ಮೇಲೆ ಎಂದು ಪರಿಗಣಿಸಲಾಗದು. ಗುರುತ್ವಾಕರ್ಷಣೆ ಎಂದು ಗೊತ್ತಿದೆ, ಆದರೆ ಗ್ರಾವಿಟಿ ಗೊತ್ತಿಲ್ಲವೆಂದರೆ ವಿಷಯ ಗೊತ್ತಿಲ್ಲವೆಂದಲ್ಲ. ಭಾಷೆಯ ತೊಡಕಷ್ಟೇ ಎನ್ನುವುದನ್ನು ಗಮನಿಸತಕ್ಕದ್ದು. ಭಾರತದಲ್ಲಿ ಅನೇಕರು ಹೇಳುವಂತೆ ಇಂಗ್ಲಿಷ್ ಬರುವವರೆಲ್ಲಾ ತತ್ವಶಾಸ್ತ್ರಜ್ಞರಾಗಿಬಿಡುತ್ತಾರೆ.

ಇದಲ್ಲದೆ ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಇರತಕ್ಕದ್ದು. ಆದರೆ NEET ಪರೀಕ್ಷೆಯೆಂಬ ಕಾನೂನಿನಿಂದ ಕೇಂದ್ರ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತಾಯಿತು. ಇತ್ತೀಚೆಗೆ ಪಂಚಾಯತ್‌ರಾಜ್‌ನಿಂದ ಹಿಡಿದು ಸಹಕಾರಿ ಬ್ಯಾಂಕ್‌ಗಳನ್ನು ಹಲವು ಕಾನೂನುಗಳ ಮೂಲಕ ಕೇಂದ್ರ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ.

ಇಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲು ಸಾವಿರಾರು ಕೋಟಿಯ ಕೋಚಿಂಗ್ ಉದ್ಯಮ ತಲೆಯೆತ್ತಿ ನಿಂತಿದೆ. ರಾಜಸ್ಥಾನದ ಕೋಟಾದಲ್ಲಿರುವ ಕೋಚಿಂಗ್ ಉದ್ಯಮ ಸುಮಾರು ಮೂರು ಸಾವಿರ ಕೋಟಿಯದು ಎನ್ನುತ್ತಾರೆ. ನಮ್ಮ ಆರ್ಥಿಕ ಮಾಪನಗಳ ವಿಪರ್ಯಾಸವೆಂದರೆ ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠಮಾಡದೆ ಖಾಸಗಿಯಾಗಿ ಟ್ಯೂಷನ್ ತೆಗೆದುಕೊಂಡರೆ ಜಿಡಿಪಿ ಬೆಳೆಯುತ್ತದೆ, ಅಭಿವೃದ್ಧಿ ಆಗುತ್ತದೆ ಎಂದು ತೋರಿಕೊಳ್ಳುತ್ತದೆ. ಇತ್ತೀಚೆಗೆ ಚೈನಾ ದೇಶ ಇಡೀ ಕೋಚಿಂಗ್ ಉದ್ಯಮವನ್ನು ಮಟ್ಟ ಹಾಕಿದೆ.

ನಮ್ಮ ದೇಶದಲ್ಲಿ, ವಂಚಿತ ಸಮುದಾಯಗಳು ತಮ್ಮ ಕೆಳಸ್ತರದಿಂದ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆಬರುವುದು ಅಷ್ಟು ಸುಲಭವಲ್ಲ. ’ವರ್ಲ್ಡ್ ಎಕನಾಮಿಕ್ ಫೋರಂ’ ಹೊರತರುವ ತನ್ನ ಸೋಷಿಯಲ್ ಮೊಬಿಲಿಟಿ ಇಂಡೆಕ್ಸ್ ಎನ್ನುವ ಮಾಪನದಲ್ಲಿ ಜಗತ್ತಿನ 84 ದೇಶಗಳಲ್ಲಿ ಭಾರತ 76ನೇ ಸ್ಥಾನದಲ್ಲಿದೆ. ಯಾವುದೇ ವ್ಯಕ್ತಿ ತನ್ನ ಸ್ಥಾನಮಾನವನ್ನು ಉತ್ತಮಪಡಿಸಿಕೊಂಡು ಮುಂದುವರಿಯಲು ಅತ್ಯಂತ ಹೆಚ್ಚು ತಡೆಗೋಡೆಗಳು ಭಾರತದಲ್ಲಿವೆ ಎನ್ನುವುದೇ ಇದರ ಅರ್ಥ.

ಕೆ.ಸಿ. ರಘು

ಕೆ.ಸಿ. ರಘು
ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು, ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರಿಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: NEET ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿಲುವಳಿ ಅಂಗೀಕಾರ; ಕಾರಣಗಳೇನು?

ಇದನ್ನೂ ಓದಿ: ಬಹುಪಾಲು ವಿದ್ಯಾರ್ಥಿಗಳಿಗೆ ‘ನೀಟ್‌‌’ ಬೇಡ: ನ್ಯಾಯಮೂರ್ತಿ ರಾಜನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾಜಿ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಇಡಿ ಒತ್ತಡ : ತನ್ನ ಹೊಸ ಪುಸ್ತಕದಲ್ಲಿ ಸಂಜಯ್ ರಾವುತ್ ಆರೋಪ

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಮೋದಿ ಸರ್ಕಾರದ ವಿರುದ್ಧ ಕೈಗೊಂಡ ಸ್ವತಂತ್ರ ರಾಜಕೀಯ ನಡೆಗಳಿಗೆ ಪ್ರತಿಯಾಗಿ, ಜಾರಿ ನಿರ್ದೇಶನಾಲಯದ (ಇಡಿ) ಒತ್ತಡಕ್ಕೆ ಮಣಿದು 2025ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು...

ಯುಎನ್‌ಐ ಮಾಧ್ಯಮ ಕಚೇರಿಗೆ ಬೀಗ : ಪೊಲೀಸರ ವರ್ತನೆಗೆ ಪತ್ರಿಕಾ ಸಂಘಗಳು, ವಿಪಕ್ಷ ನಾಯಕರಿಂದ ತೀವ್ರ ಖಂಡನೆ

ಶುಕ್ರವಾರ (ಮಾ.20) ರಾತ್ರಿ ದೆಹಲಿ ಪೊಲೀಸರು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್‌ಐ) ಸುದ್ದಿ ಸಂಸ್ಥೆಯ ಕಚೇರಿಗೆ ಬೀಗ ಜಡಿದ ರೀತಿಗೆ ಪತ್ರಕರ್ತರ ಸಂಘಗಳು ಮತ್ತು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೆಹಲಿಯ...

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್: ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್

ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರ ತೀವ್ರ ವಿರೋಧದ ನಡುವೆಯೂ ಕೃಷಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್ ಅವರ...

ಕೇರಳ ವಿಧಾನಸಭೆ ಚುನಾವಣೆ : ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಕೇಸ್!

ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ. ಸುರೇಂದ್ರನ್ ಮೇಲೆ ಬರೋಬ್ಬರಿ 242 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈ ಮಾಹಿತಿ ಶನಿವಾರ...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಆರು ಮಂದಿ ಶಾಸಕರನ್ನು ಅಮಾನತುಗೊಳಿಸಿದ ಬಿಜೆಡಿ

ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಮಂದಿ ಶಾಸಕರನ್ನು ಒಡಿಶಾದ ಬಿಜು ಜನತಾದಳ (ಬಿಜೆಡಿ) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಒಟ್ಟು 8 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ....

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರ ಪ್ರದರ್ಶನಕ್ಕೆ ಭಾರತದಲ್ಲಿ ನಿರ್ಬಂಧ!

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ಳನ್ನು ಇಸ್ರೇಲಿ ಸೈನಿಕರು ಸುಮಾರು 300 ಸುತ್ತು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವ ಕಥೆಯನ್ನು ಹೇಳುವ, 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರದ ಪ್ರದರ್ಶನಕ್ಕೆ...

ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಕೊಲ್ಲಂ: ಆಸ್ಪತ್ರೆಯಲ್ಲಿ ನಡೆದ ಡಾ. ವಂದನಾ ದಾಸ್ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ ಜಿ. ಸಂದೀಪ್ ಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ...

ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್: ಕೇರಳ ಸಿಎಂ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿದ್ದಾರೆ.   ಕೇಂದ್ರೀಯ ಸಂಸ್ಥೆಗಳು ಕೇರಳ...

‘ಬಿಜೆಪಿ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ, ಕೊನೆಯವರೆಗೂ ಹೋರಾಡುತ್ತೇವೆ’; ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಜನರ "ಮತದಾನದ ಹಕ್ಕನ್ನು ಕಸಿದುಕೊಳ್ಳಲು" ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  "ಮೋದಿ ಜಿ...

ಏಳು ವರ್ಷಗಳ ನಂತರ ಯುಎಪಿಎ ಪ್ರಕರಣದಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲದ ನಂತರ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟ ಇಬ್ಬರು ಕಾಶ್ಮೀರಿ ಯುವಕರನ್ನು ಗುರುವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಮತ್ತು ದೆಹಲಿ ಪೊಲೀಸರು...