ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸಲಾಗುತ್ತಿದೆ. ತರಗತಿಗಳು ಆರಂಭವಾಗಿ ಸುಮಾರು ಒಂದು ತಿಂಗಳ ಬಳಿಕ ಸರ್ಕಾರ ಎನ್ಇಪಿಯ ಪಠ್ಯಕ್ರಮವನ್ನು ಬದಲಾಯಿಸಿದೆ ಎಂದು ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿದರು.
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ) ನೇತೃತ್ವದಲ್ಲಿ ಕಾಲೇಜು ಕ್ಯಾಂಪಸ್ನಲ್ಲಿ ಸೇರಿದ ವಿದ್ಯಾರ್ಥಿಗಳು ಸರ್ಕಾರ ಹಾಗೂ ಮೈಸೂರು ವಿವಿಯ ನೂತನ ಸುತ್ತೋಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಏನಿದು ಹೊಸ ಸುತ್ತೋಲೆ? ವಿದ್ಯಾರ್ಥಿಗಳ ವಿರೋಧವೇಕೆ?
‘ಓಪನ್ ಎಲೆಕ್ಟಿವ್’ (ಮುಕ್ತ ಐಚ್ಛಿಕ) ವಿಷಯದ ಕುರಿತು ಮಾಡಿರುವ ಸುತ್ತೋಲೆ ಆತಂಕ ಸೃಷ್ಟಿಸಿದೆ. “ಕಲಾ ವಿದ್ಯಾರ್ಥಿಗಳು- ‘ಓಪನ್ ಎಲೆಕ್ಟಿವ್’ ವಿಷಯವನ್ನು ‘ವಾಣಿಜ್ಯ’ ಅಥವಾ ‘ವಿಜ್ಞಾನ’ ವಿಷಯಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಿಕೊಳ್ಳಬೇಕು. ವಾಣಿಜ್ಯ ವಿದ್ಯಾರ್ಥಿಗಳು- ಕಲಾ ಅಥವಾ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ವಿಜ್ಞಾನ ವಿದ್ಯಾರ್ಥಿಗಳು- ಕಲಾ ಅಥವಾ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು” ಎಂದು ಸರ್ಕಾರ ಸೂಚಿಸಿದೆ. ಅದರನ್ವಯ ಮೈಸೂರು ವಿಶ್ವವಿದ್ಯಾನಿಲಯ ನೀಡಿರುವ ಹೊಸ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳು ಆತಂಕ ಹೊರಹಾಕಿದ್ದಾರೆ.
ಇಲ್ಲಿಯವರೆಗೆ ವಿದ್ಯಾರ್ಥಿಗಳು ಬಹುಶಿಸ್ತೀಯ ಪಠ್ಯಕ್ರಮದಲ್ಲಿ ಅಧ್ಯಯನ ಮಾಡಿದವರಲ್ಲ. ಪಿಯುಸಿಯಲ್ಲಿ ಕಲಾ ವಿಷಯವೆಂದರೆ ಕಲಾ ವಿಷಯವನ್ನಷ್ಟೇ ಓದಿಕೊಂಡು ಬಂದಿದ್ದೇವೆ. ವಿಜ್ಞಾನ, ವಾಣಿಜ್ಯ ವಿಷಯದ ವಿದ್ಯಾರ್ಥಿಗಳೂ ತಮ್ಮ ಆಯ್ಕೆಗಳಿಗೆ ಸೀಮಿತವಾಗಿದ್ದಾರೆ. ಎನ್ಇಪಿಯಿಂದಾಗಿ ಏಕಾಏಕಿ ಬಹುಶಿಸ್ತೀಯ ಪಠ್ಯಕ್ರಮಕ್ಕೆ ಹೋಗಬೇಕಾಗಿದೆ. ವಾಣಿಜ್ಯ ಹಾಗೂ ಸೈನ್ಸ್ ವಿದ್ಯಾರ್ಥಿಗಳು ಸುಲಭವಾಗಿ ಆರ್ಟ್ಸ್ ತೆಗೆದುಕೊಂಡು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶಗಳಿವೆ. ಆದರೆ ಕಲಾ ವಿದ್ಯಾರ್ಥಿಗಳು ವಿಜ್ಞಾನ ಅಥವಾ ವಾಣಿಜ್ಯ ವಿಷಯವನ್ನು ತೆಗೆದುಕೊಂಡು ಓದುವುದು ಕಷ್ಟವಾಗುತ್ತದೆ ಎಂಬುದು ಪ್ರತಿಭಟನೆಗೆ ಕಾರಣ.
ಎಐಡಿಎಸ್ಒ ಸಂಘಟನೆಯ ಉಪಾಧ್ಯಕ್ಷರಾದ ಆಸಿಯಾ ಮಾತನಾಡಿ, “ಐಚ್ಛಿಕ ವಿಷಯ ಎಂದರೆ ಏನು? ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವಂತಹದ್ದು. ಓಪನ್ ಎಲೆಕ್ಟಿವ್ ಅಂದ ಮೇಲೆ ಇವರು ಕಡ್ಡಾಯವೆಂದು ಬೇರೆ ವಿಷಯ ತೆಗೆದುಕೊಳ್ಳಿ ಎನ್ನುವುದು ಸರಿಯೇ? ವಿದ್ಯಾರ್ಥಿಗಳಿಗೆ ಹೇಳೋದೊಂದು ಮಾಡೋದೊಂದು ಆಗುವುದಿಲ್ಲವೆ? ಇವರು ವಿದ್ಯಾರ್ಥಿಗಳ ಪರವೋ? ಪಾಲಿಸಿಗಳನ್ನು ಮಾಡುವುದಕ್ಕಾಗಿಯೇ ಬಂದಿದ್ದಾರೋ? ಇಂತಹ ಪಾಲಿಸಿಗಳನ್ನು ಏತಕ್ಕಾಗಿ ತರುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.
“ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ಕುಲಪತಿಯವರು ಕೇಳಲು ಬಂದಿಲ್ಲ. ವಿದ್ಯಾರ್ಥಿಗಳು ತರಗತಿ ಬಿಟ್ಟು ಕುಳಿತ್ತಿದ್ದಾರೆ. ವಿದ್ಯಾರ್ಥಿಗಳ ಪರ ಇರಬೇಕಾದ ಸರ್ಕಾರಗಳು, ಕುಲಪತಿಗಳು ಕಿವಿಮುಚ್ಚಿ ಕುಳಿತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020: ಹಿಂದು-ಮುಂದು
ಓಪನ್ ಎಲೆಕ್ಟಿವ್ (ಮುಕ್ತ ಐಚ್ಛಿಕ) ವಿಷಯವು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು. ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳಬೇಕಲ್ಲವೇ? ಆದರೆ ಸರ್ಕಾರ ಮುಕ್ತ ಐಚ್ಛಿಕ ವಿಷಯವನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ. ಮುಖ್ಯವಾಗಿ ಎನ್ಇಪಿ ಜಾರಿಯಾಗುತ್ತಿರುವುದು ಕೊರೊನಾದಿಂದಾಗಿ ಸುಮಾರು ಒಂದೂವರೆ ವರ್ಷ ಮನೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಎಂಬುದು ತಜ್ಞರ ಅಭಿಪ್ರಾಯ.
ಎನ್ಇಪಿ ವಿದ್ಯಾರ್ಥಿ ಸ್ನೇಹಿ ಎಂಬುದಕ್ಕೆ ಅರ್ಥವಿಲ್ಲ. ಈಗಾಗಲೇ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವು ಕಡೆ ಬಿ.ಎ. ವಿದ್ಯಾರ್ಥಿಗಳು ಬಿ.ಕಾಂ.ನಿಂದ ಓಪನ್ ಎಲೆಕ್ಟಿವ್ ಅಥವಾ ವಿಜ್ಞಾನದ ಓಪನ್ ಎಲೆಕ್ಟಿವ್ ತೆಗೆದುಕೊಂಡಿದ್ದಾರೆ. ಆದರೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂಬ ಒತ್ತಾಯವಿರಲಿಲ್ಲ. ದುರಂತವೆಂದರೆ ಹೀಗೆ ಒತ್ತಾಯಪೂರ್ವಕವಾಗಿ ಹೇರಿದಾಗ ಹೈರಾಣುಗುತ್ತೇವೆ ಎಂಬುದು ತಜ್ಞರ ಆತಂಕ.
ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಎಐಡಿಎಸ್ಒ ಜಿಲ್ಲಾಧ್ಯಕ್ಷ ಸುಭಾಷ್, ಉಪಾಧ್ಯಕ್ಷರಾದ ಆಸಿಯಾ, ಕಾರ್ಯದರ್ಶಿ ಚಂದ್ರಕಲಾ ಹಾಜರಿದ್ದರು.
ಇದನ್ನೂ ಓದಿರಿ: ಈ ಎನ್ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್ ಹೇಳುವುದೇನು?
ಎನ್ಇಪಿ ಜಾರಿಯಲ್ಲಿ ಹೆಚ್ಚು ಧಾವಂತದಲ್ಲಿರುವ ವಿವಿಗಳಲ್ಲಿ ಮೈಸೂರು ವಿವಿಯೂ ಒಂದು. ಸರ್ಕಾರದ ಹೊಸ ನಿಯಮವನ್ನು ಜಾರಿಗೊಳಿಸುವಂತೆ ಮೈಸೂರು ವಿವಿ ಸುತ್ತೋಲೆ ಹೊರಡಿಸಿರುವ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್, “ಪ್ರಥಮ ವರ್ಷದ ಪ್ರವೇಶಾತಿ ಡಿ.2ರಂದು ಆರಂಭವಾಗಿದೆ. ಈವರೆಗೆ ಕಾಲೇಜುಗಳು ಆರಂಭವಾಗಿರಲಿಲ್ಲ. ಹೀಗಾಗಿ ಈ ಸುತ್ತೋಲೆಯಿಂದ ತೊಂದರೆಯಾಗದು” ಎಂದರು.
‘ಗ್ರಾಮಾಂತರ ವಿದ್ಯಾರ್ಥಿಗಳ ಕಷ್ಟಕ್ಕೆ ಪರಿಹಾರವೇನು?’ ಎಂದು ಕೇಳಿದಾಗ, “ಎಲ್ಲಿಲ್ಲಿ ಇದು ಜಾರಿಗೆ ಸಾಧ್ಯವಿಲ್ಲವೋ ಅಲ್ಲಿ ಬಿಟ್ಟುಬಿಡಿ ಎಂದು ಸರ್ಕಾರ ಹೇಳಿದೆ. ಆರ್ಟ್ಸ್ ಇರುವ ಕಡೆ ಕಾಮರ್ಸ್ ಇದ್ದೇ ಇರುತ್ತದೆ. ಕಾಮರ್ಸ್ ವಿದ್ಯಾರ್ಥಿಗಳು ಆರ್ಟ್ಸ್ ವಿಷಯವನ್ನು, ಆರ್ಟ್ಸ್ ವಿದ್ಯಾರ್ಥಿಗಳು ಕಾಮರ್ಸ್ ತೆಗೆದುಕೊಳ್ಳಬಹುದು. ಎನ್ಇಪಿಯ ಮುಖ್ಯ ಉದ್ದೇಶ ಬಹುಶಿಸ್ತೀಯ ಪಠ್ಯಕ್ರಮ. ಕಲಾ ವಿದ್ಯಾರ್ಥಿ ವಾಣಿಜ್ಯದ ಒಂದು ವಿಷಯವನ್ನು, ವಿಜ್ಞಾನದ ಒಂದು ವಿಷಯವನ್ನು ತೆಗೆದುಕೊಂಡರೆ ಕೌಶಲ ವೃದ್ಧಿಯಾಗುತ್ತದೆ” ಎಂದು ತಿಳಿಸಿದರು.
‘ವಿದ್ಯಾರ್ಥಿಗಳಿಗೆ ಕಷ್ಟವಾಗುವಂತೆ ಐಚ್ಛಿಕ ವಿಷಯವನ್ನು ಹೇರುವುದು ಸರಿಯೇ?’ ಎಂದು ಪ್ರಶ್ನಿಸಿದಾಗ, “ಐಚ್ಛಿಕ ವಿಷಯಗಳು ಕಷ್ಟವಾಗಿರುವುದಿಲ್ಲ. ಪ್ರಾಥಮಿಕ ವಿಷಯಗಳನ್ನಷ್ಟೇ ಪರಿಚಯಿಸಲಾಗುತ್ತದೆ. ಉದ್ಯೋಗ ಕೇಂದ್ರಿತ ವಿಷಯಕ್ಕೆ ಐಚ್ಛಿಕ ಆಯ್ಕೆ ಆದ್ಯತೆ ನೀಡುತ್ತದೆ” ಎಂದರು. ಐಚ್ಛಿಕ ವಿಷಯ ಕಷ್ಟವಾಗಿರುವುದಿಲ್ಲ ಆದರೆ ಉದ್ಯೋಗ ದೊರಕಿಸಿಕೊಡುತ್ತದೆ ಎಂಬುದು ಕುಲಪತಿಯವರ ಅಭಿಪ್ರಾಯ. ಆದರೆ ಬೋಧಕರ ಪ್ರಕಾರ, ಈ ಐಚ್ಛಿಕ ವಿಷಯಗಳು ವಿದ್ಯಾರ್ಥಿಗಳಿಗೆ ತಲೆಬಿಸಿಯಾಗುವಂತಿವೆ.
ಈ ವಿಚಾರವಾಗಿ ಮೈಸೂರು ವಿವಿ ಕುಲಪತಿಯವರು ಅರ್ಧಸತ್ಯಗಳನ್ನು ಹೇಳುತ್ತಿದ್ದಾರೆ ಎಂಬುದನ್ನು ‘ನಾನುಗೌರಿ.ಕಾಂ’ ವರದಿ ಮಾಡಿದೆ (ಪೂರ್ಣ ವಿವರಗಳಿಗೆ ‘ದಿಢೀರ್ ಪಠ್ಯ ಬದಲಾವಣೆ ಸುತ್ತೋಲೆ: ಎನ್ಇಪಿಯಿಂದ ವಿದ್ಯಾರ್ಥಿಗಳು ಹೈರಾಣು’ ವರದಿ ಓದಿರಿ)
ಇದನ್ನೂ ಓದಿರಿ: ದಿಢೀರ್ ಪಠ್ಯ ಬದಲಾವಣೆ ಸುತ್ತೋಲೆ: ಎನ್ಇಪಿಯಿಂದ ವಿದ್ಯಾರ್ಥಿಗಳು ಹೈರಾಣು