ತೀವ್ರ ವಿರೋಧಗಳ ನಡುವೆಯೇ 80 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಾದಾತ್ಮಕ ಗ್ರೇಟ್ ನಿಕೋಬಾರ್ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ಸೋಮವಾರ (ಫೆ.16) ಹಸಿರು ನಿಶಾನೆ ತೋರಿದೆ.
ಆರು ಸದಸ್ಯರ ಎನ್ಜಿಟಿಯ ವಿಶೇಷ ಪೀಠವು ಯೋಜನೆಯಲ್ಲಿ ಮಧ್ಯಪ್ರವೇಶಿಸಲು ಅಥವಾ ತಡೆ ನೀಡಲು ಯಾವುದೇ ಕಾರಣಗಳಿಲ್ಲ. ಯೋಜನೆಯ ಪರಿಸರ ಅನುಮತಿಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಹೇಳಿದೆ.
ಯೋಜನೆಯ ಪರಿಸರ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪೀಠ ವಜಾಗೊಳಿಸಿದೆ. ಪರಿಸರ ಅನುಮತಿಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಮತ್ತು ರಕ್ಷಣಾತ್ಮಕ ಕ್ರಮಗಳನ್ನು ನಿರ್ದೇಶಿಸಲಾಗಿದೆ ಎಂದಿದೆ. ಉನ್ನತ ಮಟ್ಟದ ಸಮಿತಿಯು ಈ ಹಿಂದಿನ ಕಳವಳಗಳನ್ನು ಪರೀಕ್ಷಿಸಿ ಪರಿಹರಿಸಿದೆ ಎಂದು ಹೇಳಿದೆ. ರಾಷ್ಟ್ರದ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಸಮರ್ಥಿಸಿಕೊಂಡಿದೆ. ಯೋಜನೆಯ ಅನುಷ್ಠಾನದ ವೇಳೆ ಕಟ್ಟುನಿಟ್ಟಾದ ಪರಿಸರ ನಿಯಮಗಳ ಪಾಲನೆಯನ್ನು ಮೇಲ್ವಿಚಾರಣೆ ಮಾಡಲು ಸೂಚಿಸಿದೆ.
ವಿದೇಶಿ ಶಕ್ತಿಗಳಿಂದ ಹೆಚ್ಚುತ್ತಿರುವ ಒತ್ತಡದ ನಡುವೆ, ಈ ಯೋಜನೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಸುಮಾರು 166 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿರುವ ಈ ಯೋಜನೆಗಾಗಿ 130 ಚದರ ಕಿಲೋಮೀಟರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಒಂದು ಪ್ರಮುಖ ಸರಕು ವರ್ಗಾವಣೆ ಬಂದರು ಹಾಗೂ ನಾಗರಿಕ ಮತ್ತು ಮಿಲಿಟರಿ ಎರಡೂ ಉದ್ದೇಶಗಳಿಗೆ ಬಳಸಬಹುದಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಪೂರಕ ಯೋಜನೆಗಳನ್ನು ನಿರ್ಮಿಸಲಾಗುವುದು ಎಂದಿದೆ.
ಮಲಕ್ಕಾ ಜಲಸಂಧಿಯಂತಹ ಪ್ರಮುಖ ಜಾಗತಿಕ ಹಡಗು ಮಾರ್ಗಗಳ ಸಮೀಪವಿರುವುದರಿಂದ, ಇದು ಭಾರತದ ಕಡಲ ಭದ್ರತೆ ಮತ್ತು ವ್ಯಾಪಾರಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ. ಅಂತಾರಾಷ್ಟ್ರೀಯ ಕಂಟೇನರ್ ಟರ್ಮಿನಲ್ ಜೊತೆಗೆ ಹೊಸ ಪಟ್ಟಣ ಮತ್ತು 450 ಎಂವಿಎ ಸಾಮರ್ಥ್ಯದ ಅನಿಲ ಹಾಗೂ ಸೌರಶಕ್ತಿ ಆಧಾರಿತ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಅರಣ್ಯ ನಾಶದ ಬಗ್ಗೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರೂ, ಎನ್ಜಿಟಿ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.


