ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಭೂಪತಿನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡದ ಮೇಲೆ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ತೃಣಮೂಲ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ 2022ರ ಸ್ಫೋಟ ಪ್ರಕರಣದ ತನಿಖೆಗಾಗಿ ತೆರಳಿದ್ದ ಎನ್ಐಎ ಅಧಿಕಾರಿಗಳ ಕಾರಿನ ಮೇಲೆ ಇಟ್ಟಿಗೆಗಳನ್ನು, ಕಲ್ಲುಗಳನ್ನು ಎಸೆಯಲಾಗಿದೆ. ಈ ವೇಳೆ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರಿನ ವಿಂಡ್ಸ್ಕ್ರೀನ್ಗೆ ಹಾನಿಯುಂಟಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗಳಾಗಿರುವ ಬಗ್ಗೆ ಈವೆರೆಗೆ ಮಾಹಿತಿ ಲಭ್ಯವಾಗಿಲ್ಲ. ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಡಿಸೆಂಬರ್ 3, 2022ರಂದು, ಭೂಪತಿನಗರದಲ್ಲಿ ಹುಲ್ಲಿನ ಮೇಲ್ಛಾವಣಿಯ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದರು. ಕಳೆದ ತಿಂಗಳು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ 8 ತೃಣಮೂಲ ಕಾಂಗ್ರೆಸ್ ನಾಯಕರನ್ನು ವಿಚಾರಣೆಗೆ ಕರೆಸಿತ್ತು.
ಎನ್ಐಎ ಕ್ರಮವನ್ನು ಬಿಜೆಪಿ ಪಿತೂರಿ ಎಂದು ಟಿಎಂಸಿ ಆರೋಪಿಸಿದೆ. ಮಾರ್ಚ್ 28ರಂದು ನ್ಯೂ ಟೌನ್ನಲ್ಲಿರುವ ಎನ್ಐಎ ಕಚೇರಿಗೆ ಭೇಟಿ ನೀಡುವಂತೆ ಸೂಚಿಸಿದ ಹಿಂದಿನ ಸಮನ್ಸ್ಗಳನ್ನು ತಪ್ಪಿಸಿದ ನಂತರ ಕೇಂದ್ರ ತನಿಖಾ ಸಂಸ್ಥೆ ಎಂಟು ಮಂದಿಯನ್ನು ತನ್ನ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಕೇಳಿಕೊಂಡಿತ್ತು. ಈ ಕ್ರಮದ ಹಿಂದೆ ಪ್ರತಿಪಕ್ಷ ಭಾರತೀಯ ಜನತಾ ಪಕ್ಷದ ಕೈವಾಡವಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಆರೋಪಿಸಿದ್ದಾರೆ. ಬಿಜೆಪಿಯು, ಪುರ್ಬಾ ಮೇದಿನಿಪುರ ಜಿಲ್ಲೆಯ ಟಿಎಂಸಿ ನಾಯಕರ ಪಟ್ಟಿಯನ್ನು ಎನ್ಐಎಗೆ ಒದಗಿಸಿದ್ದು, ಅವರನ್ನು ಬಂಧಿಸಲು ತಂತ್ರ ರೂಪಿಸಿದೆ ಎಂದು ಘೋಷ್ ಹೇಳಿದ್ದಾರೆ.
ಇತ್ತೀಚೆಗೆ ಪ್ರಸ್ತುತ ಬಂಧನದಲ್ಲಿರುವ ಪ.ಬಂಗಾಳ ರಾಜ್ಯದ ಆಹಾರ ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಷಹಜಹಾನ್ ಶೇಖ್ ಅವರ ಮನೆ ಮೇಲೆ ದಾಳಿ ನಡೆಸಲು ಹೋದಾಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡದ ಮೇಲೆ ಜನರ ಗುಂಪು ದಾಳಿ ನಡೆಸಿತ್ತು. ಇದಾದ ಎರಡು ತಿಂಗಳ ಬಳಿಕ ಎನ್ಐಎ ಅಧಿಕಾರಿಗಳ ತಂಡದ ಮೇಲೆ ದಾಳಿ ನಡೆದಿದೆ. ‘ಇಡಿ’ ತಂಡದ ಜೊತೆಗಿದ್ದ ಕೇಂದ್ರ ಪಡೆ ಸಿಬ್ಬಂದಿ ಮೇಲೂ ದಾಳಿ ನಡೆಸಲಾಗಿತ್ತು, ಮೂವರು ‘ಇಡಿ’ ಅಧಿಕಾರಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ‘ಇಡಿ’ ತಂಡದೊಂದಿಗೆ ಬಂದಿದ್ದ ಸಿಆರ್ಪಿಎಫ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಜನ ಸಮೂಹದ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು.
#WATCH | West Bengal: NIA officers had to face protesters in Bhupatinagar while they were carrying out an investigation in connection with the Bhupatinagar, East Medinipur blast case. People allegedly tried to stop the NIA team from taking the accused persons along with them.… pic.twitter.com/KKL33S4Plm
— ANI (@ANI) April 6, 2024


