ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ವಿಶ್ವ ಮಹಿಳಾ ದಿನಾಚರಣೆಯ ದಿನದಂದು ದೂರದರ್ಶನದ ಸಹಾಯಕ ನಿರ್ದೇಶಕಿ ನಿರ್ಮಲಾ ಎಲಿಗಾರ್ ಅವರನ್ನು ಕಸಾಪ ಸದಸ್ಯತ್ವದಿಂದ ಅಮಾನತು ಮಾಡುವ ಮೂಲಕ ಸರ್ವಾಧಿಕಾರತ್ವ ಪ್ರದರ್ಶಿಸಿದ್ದಾರೆ.
ರಾಜ್ಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ದಿನದಂದು ಕೋಲಾರದ ಸಂಸದ ಎಸ್.ಮುನಿಸ್ವಾಮಿ ಕುಂಕುಮ ಇಟ್ಟುಕೊಳ್ಳದ ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸುವ ಮೂಲಕ ತನ್ನ ಅಜ್ಞಾನ ಮತ್ತು ಸ್ತ್ರೀ ದ್ವೇಷದ ನಡೆಯನ್ನು ತೋರಿದ್ದಾರೆ. ಮತ್ತೊಂದೆಡೆ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಮಹೇಶ ಜೋಶಿ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಲೇಖಕಿಯರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು ಪ್ರಶ್ನಿಸಿದ್ದಕ್ಕೆ ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ಮಹಿಳಾ ದಿನಾಚರಣೆಯಂದು ರದ್ದುಗೊಳಿಸುವ ಮೂಲಕ ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಹಾವೇರಿಯಲ್ಲಿ ನಡೆದ 8ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಮಲಾ ಸಿ. ಎಲಿಗಾರ್ ಅವರು, ವಸತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಅಧ್ಯಕ್ಷರೊಂದಿಗೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದ್ದರು. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ಕಸಾಪ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದರು. ಇದು ಮಹೇಶ್ ಜೋಶಿಯವರ ಕಣ್ಣು ಕೆಂಪಾಗಲು ಕಾರಣವಾಗಿದೆ.
ಜೋಶಿ ನೇತೃತ್ವದ ಕಸಾಪ ಕಾರ್ಯಕಾರಿ ಸಮಿತಿಯು, ‘ಪರಿಷತ್ತಿನ ಘನತೆ ಗೌರವ ಮತ್ತು ಧ್ಯೇಯೋದೇಶಗಳಿಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ’ ಎಂದು ಪರಿಷತ್ತಿನ ನಿಯಮ 8) 7) ಅಡಿಯಲ್ಲಿನ ಅಧಿಕಾರ ಬಳಸಿ ನಿರ್ಮಲಾ ಸಿ. ಎಲಿಗಾರ್ ಅವರ ಕಸಾಪ ಸದಸ್ಯತ್ವವನ್ನು ಅಮಾನತುಗೊಳಿಸಿದೆ. ಇದೇ ವೇಳೆ 2022ನೇ ಸಾಲಿನಲ್ಲಿ ನಿರ್ಮಲಾ ಎಲಿಗಾರ್ ಅವರಿಗೆ ನೀಡಲಾಗಿದ್ದ ‘ಪಂಕಜಶ್ರೀ ಸಾಹಿತ್ಯ ಪ್ರಶಸ್ತಿ’ಯನ್ನೂ ಹಿಂಪಡೆದಿದ್ದಾರೆ.
ಏಕಾಏಕಿ ಸದ್ಯಸತ್ವದ ಅಮಾನತು ಮತ್ತು ಪ್ರಶಸ್ತಿ ಹಿಂಪಡೆಯುವಿಕೆಯು ಕಸಾಪ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ಕಳೆದ ಒಂದು ವರ್ಷದಿಂದ ಹಲವು ನಡೆಗಳಲ್ಲಿ ವಿವಾದಕ್ಕೀಡಾಗಿರುವ ಕಸಾಪ, ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಕಸಾಪ ನೂತನ ಅಧ್ಯಕ್ಷರಾದ ಮಹೇಶ್ ಜೋಶಿ ಬಿಜೆಪಿ ಬೆಂಬಲಿತರು ಎಂಬುದಕ್ಕೆ ಇಲ್ಲಿದೆ ಪುರಾವೆ!
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಸರ್ವಧಿಕಾರದ ಈ ನಡೆಯನ್ನು ಪ್ರಶ್ನಿಸಿ ಕವಿ, ಹೋರಾಟಗಾರ ಬಸವರಾಜ ಸೂಳಿಬಾವಿ ಅವರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
”ಸರ್ವಾಧಿಕಾರಿಯೇ ಕಸಾಪಕ್ಕೆ ಅಧ್ಯಕ್ಷ.. ವಿಶ್ವ ಮಹಿಳಾ ದಿನಾಚರಣೆಯ ದಿನವೇ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಮಹೇಶ ಜೋಶಿ ಅವರು, ನಿರ್ಮಲಾ ಎಲಿಗಾರ ಅವರ ಸದಸ್ಯತ್ವ ರದ್ದುಗೊಳಿಸಿ ಅವರು ಪುರಸ್ಕೃತರಾದ ಪ್ರಶಸ್ತಿಯೊಂದನ್ನು ಹಿಂಪಡೆವ ಆದೇಶ ಹೊರಡಿಸಿ ತಮ್ಮ ಸರ್ವಾಧಿಕಾರವನ್ನು ಡಾಳಾಗಿ ಪ್ರದರ್ಶನ ಮಾಡಿದ್ದಾರೆ. ಪ್ರಾಯಶಃ ಇಷ್ಟು ದಿನದವರೆಗೆ ಎಂಥೆಂಥವರನ್ನೋ ಅಧ್ಯಕ್ಷರಾಗಿ ಕಂಡ ಕಸಾಪ ಇಂಥ ಪ್ರಜಾಪ್ರಭುತ್ವ ವಿರೋಧಿಯಾದ ಸರ್ವಾಧಿಕಾರಿಯನ್ನು ಕಂಡಿರಲಿಲ್ಲ. ಇದರಿಂದ ಸಮಸ್ತ ಸಾಹಿತ್ಯ ವಲಯವನ್ನು ಅವಮಾನಿಸುವ ಕೆಲಸ ನಡೆಯುತ್ತಿವೆ. ನಾವಿದನ್ನು ತೀವ್ರವಾಗಿ ವಿರೋಧಿಸದಿದ್ದರೆ ಕಸಾಪ ಶಾಶ್ವತವಾಗಿ ಮುಳುಗಿಯೇ ಹೋಗುತ್ತದೆ.”
”ದೂರದರ್ಶನದ ನಿರ್ದೇಶಕರಾದ ಒಂದಷ್ಟು ಬರವಣಿಗೆ ಮಾಡಿರುವ ನಿರ್ಮಲಾ ಎಲಿಗಾರ ಅವರು ಹಾವೇರಿ ಸಮ್ಮೇಳನದಲ್ಲಿ ಆಹ್ವಾನಿತರಾಗಿದ್ದರು. ಉತ್ತರ ಕರ್ನಾಟಕದ ಈ ಜವಾರಿ ಹೆಣ್ಣುಮಗಳು ತಮಗೆ ಸರಿಯಾದ ವಸತಿ ವ್ಯವಸ್ಥೆ ಮಾಡದಿರುವುದು ಮಹಿಳೆಯೊಬ್ಬಳಿಗಾದ ಅವಮಾನ ಎಂದೇ ಪ್ರತಿಭಟಿಸಿದ್ದರು. ತಮಗಾದ ಈ ಅನ್ಯಾಯವನ್ನು ಮುಕ್ತವಾಗಿಯೇ ಸಮ್ಮೇಳನದ ಸಂದರ್ಭದಲ್ಲಿ ಹೊರಹಾಕಿದ್ದರು. ಅವರ ಈ ಪ್ರತಿಭಟನೆ ಪ್ರಜಾಸತ್ತಾತ್ಮಕವಾಗಿಯೇ ಇತ್ತು. ಅದನ್ನೇ ನೆಪ ಮಾಡಿಕೊಂಡು, ಅವರ ಆಜೀವ ಸದಸ್ಯತ್ವವನ್ನು ಅಧ್ಯಕ್ಷ ಮಹೇಶ ಜೋಶಿ ರದ್ದು ಮಾಡಿದ್ದಾರಲ್ಲದೆ ಅವರಿಗೆ ದೊರತ ಪ್ರಶಸ್ತಿಯೊಂದನ್ನು ಹಿಂಪಡೆದಿದ್ದಾರೆ. ಆ ಮೂಲಕ ಕಸಾಪದ ಸಂವಿಧಾನವನ್ನೇ ಅವಮಾನಿಸಿ ಪ್ರಜಾಪ್ರಭುತ್ವದ ವಿರೋಧಿತನ ತೋರಿಸಿದ್ದಾರೆ. ಇದು ಖಂಡನೀಯ. ಅಮಾನತ್ತು ಆದೇಶವನ್ನು ಹಿಂಪಡೆದು ಕ್ಷಮೆ ಯಾಚಿಸುವಂಥ ವಾತಾವರಣವನ್ನು ನಾಡಿನ ಸಾಹಿತಿಗಳು ವಿಚಾರವಂತರು ಮಾಡಬೇಕಿದೆ” ಎಂದು ಹೇಳಿದ್ದಾರೆ.
”ಇದೇ ರವಿವಾರ 12 ರಂದು ಬೆಂಗಳೂರಿನಲ್ಲಿ ಕಸಾಪದ ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭ ಇದೆ. ಅನೇಕ ಜನ ವಿವೇಕವುಳ್ಳ ಮಹಿಳಾ ಸಾಹಿತಿಗಳು ಪುರುಷರು ಪ್ರಶಸ್ತಿ ಸ್ವೀಕರಿಸಲು ಹೋಗಲಿದ್ದಾರೆ. ಅವರಲ್ಲಿ ಜಾಗೃತ ಮನಸಿನ ಕೆಲವರಾದರೂ ಈ ಸರ್ವಾಧಿಕಾರವನ್ನು ಪ್ರತಿಭಟಿಸಬಹುದೆ?” ಎಂದು ಕೇಳಿದ್ದಾರೆ.
”ಎಲ್ಲಕ್ಕಿಂತ ಮುಖ್ಯವಾಗಿ ಈ ಸಮಾರಂಭದಲ್ಲಿ ನಾವು ಇಷ್ಟು ವರ್ಷ ಬಂಡಾಯದ ಸಾಕ್ಷಿ ಪ್ರಜ್ಞೆ ಎಂದು ಹೇಳಿಕೊಂಡು ಬರಲಾದ ಕಾಳೇಗೌಡ ನಾಗವಾರ ಅವರ ಹೆಸರು ಪ್ರಶಸ್ತಿ ಪ್ರದಾನ ಮಾಡುವಲ್ಲಿ ಇದೆ. ಸಂವೇದನಾಶೀಲ ಕಾಳೇಗೌಡ ನಾಗವಾರ ಅವರು ಯಾವ ನಿರ್ಧಾರ ತಗೋಬಹುದು? ಎನ್ನುವ ಬಗ್ಗೆ ನನಗೆ ಕುತೂಹಲ ಇದೆ. ಬಹುಶಃ ಅವರ ಬದುಕಿನಲ್ಲಿ ಇಂಥ ಸರ್ವಾಧಿಕಾರಿಯನ್ನು ಸಹಿಸಿದ ಚರಿತ್ರೆ ಇಲ್ಲ. ಈಗ ನೋಡಬೇಕು, ಸರ್ವಾಧಿಕಾರಿ ತೊಲಗಲು ಕೂಗು ಹಾಕಿಯಾರೆ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮಹೇಶ ಜೋಶಿ ಅವರ ಈ ನಡಾವಳಿ ಹಾಗೂ ಪ್ರಜಾಪ್ರಭುತ್ವ ವಿರೋಧಿತನವನ್ನು ವಿರೋಧಿಸಿ ಬಂಡಾಯದ ಮನಸುಗಳು ಜನ ಸಾಹಿತ್ಯ ಸಮಾವೇಶವನ್ನು ಇತ್ತೀಚಿಗಷ್ಟೇ ಮಾಡಿದ ನೆನಪು ಇನ್ನು ಹಸಿರಾಗಿರುವಾಗಲೇ ಇಂತಹ ಸರ್ವಾಧಿಕಾರಿ ನಡೆ ಜೋಶಿ ತೋರಿದ್ದಾರೆ.


