Homeಮುಖಪುಟಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

- Advertisement -
- Advertisement -

ಜನವರಿ 10ರಂದು ನಾನು ಓದಿದ ಹೈಸ್ಕೂಲ್‌ನ ಕಾರ್ಯಕ್ರಮವೊಂದಕ್ಕೆ ಹೋಗಿ, ಅಲ್ಲಿ ಸಮೀಪದ ನನ್ನ ತವರು ಮನೆಗೆ ಹೋಗಿ ಬಂದೆ. ಅಲ್ಲಿ ಏರ್‌ಟೆಲ್ ಸಿಗ್ನಲ್ ಇಲ್ಲ. ಮನೆಗೆ ಹಿಂದಿರುಗಿ ಫೇಸ್ಬುಕ್ ತೆಗೆದು ನೋಡಿದರೆ, ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ತೀರಿಹೋದ ಸುದ್ದಿ. ಸಾರಾ ಅಬೂಬಕ್ಕರ್ ಅವರ ಆರೋಗ್ಯ ಕೆಲವು ತಿಂಗಳಿಂದ ಚೆನ್ನಾಗಿರಲಿಲ್ಲ. ಕಳೆದ ವರ್ಷವೇ ಅವರಿಗೆ ಮರೆವು ಆವರಿಸಿತ್ತು ಎಂದು ತಿಳಿದಿತ್ತು.

ಎರಡು ವರ್ಷಗಳ ಕೆಳಗೆ, ಸಾರಾ ಕನ್ನಡಕ್ಕೆ ಅನುವಾದಿಸಿದ, ಗುಜರಾತ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪೊಲೀಸ್ ಅಧಿಕಾರಿ ಶ್ರೀಕುಮಾರ್ (ಕೆಲವು ತಿಂಗಳ ಕೆಳಗೆ ತೀಸ್ತಾ ಅವರ ಜೊತೆಗೆ ಬಂಧನಕ್ಕೆ ಒಳಪಟ್ಟಿದ್ದರು) ಅವರ ’ಧರ್ಮದ ಹೆಸರಿನಲ್ಲಿ’ ಪುಸ್ತಕದ ಪ್ರತಿಗಳು ಬೇಕು ಎಂದು ಕೇಳಿದ್ದಾಗ, ಈಗ ಮರು ಮುದ್ರಣ ಮಾಡಲು ತಮಗೆ ಕಷ್ಟ ಎಂದಿದ್ದರು. ನವಕರ್ನಾಟಕ ಪ್ರಕಾಶನದವರಿಗೆ ಕೊಟ್ಟರೆ ಪ್ರಕಟಿಸುತ್ತಾರೆ ಅಂದೆ. ಅವರು ಉತ್ಸಾಹ ತೋರಿಸಲಿಲ್ಲ. ಅವರ ಪುಸ್ತಕಗಳಿಗೆ ಅವರೇ ಪ್ರಕಾಶಕರು. ’ಚಂದ್ರಗಿರಿ’ ಅವರ ಪ್ರಕಾಶನ ಸಂಸ್ಥೆಯ ಹೆಸರು. ಪ್ರತಿ ಪುಸ್ತಕದ ಎರಡು ಪ್ರತಿಗಳನ್ನು ಕಳಿಸುತ್ತಿದ್ದರು. ಲೈಬ್ರರಿಗೆ ಮತ್ತು ನನಗೆ. 1984ರಿಂದ ಬರೆಯಲು ತೊಡಗಿದ ಅವರು, ಎಂಟು ಕಾದಂಬರಿಗಳು, ಆರು ಕಥಾ ಸಂಕಲನಗಳು, ಐದು ಭಾಷಾಂತರ ಕೃತಿಗಳು, ಮೂರು ಲೇಖನ ಸಂಗ್ರಹಗಳು, ಒಂದು ಪ್ರವಾಸ ಕಥನ, ಒಂದು ನಾಟಕ ಸಂಕಲನ ಪ್ರಕಟಿಸಿದ್ದಾರೆ. ’ಹೊತ್ತು ಕಂತುವ ಮುನ್ನ’ ಅವರ ಆತ್ಮಚರಿತ್ರೆ, ’ಚಂದ್ರಗಿರಿ’ ಅವರ ಅಭಿನಂದನಾ ಗ್ರಂಥ. ಅವರ ಮೊದಲ ಕಾದಂಬರಿ ’ಚಂದ್ರಗಿರಿ ತೀರದಲ್ಲಿ’ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿದೆ ಮತ್ತು ಚಲನಚಿತ್ರವಾಗಿದೆ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ನಾಡೋಜ ಪ್ರಶಸ್ತಿಯವರೆಗೆ ಹಲವು ಪ್ರಶಸ್ತಿಗಳು, ಗೌರವಗಳು ಅವರಿಗೆ ಲಭಿಸಿವೆ.

ನಮ್ಮ ಕಾಲೇಜಿನ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಲು ಎರಡು ಸಲ ಅವರು ತೀರ್ಥಹಳ್ಳಿಗೆ ಬಂದಿದ್ದರು. ಒಮ್ಮೆ ನಮ್ಮ ಮನೆಗೆ ಬಂದು ಊಟ ಮಾಡಿ ಹೋಗಿದ್ದರು. ಎರಡು ಸಲವೂ ಮಂಗಳೂರಿನಿಂದ ಮಿನಿ ಬಸ್‌ನಲ್ಲಿ ಅವರು ಬಂದಿದ್ದು. ಬಸ್‌ನಲ್ಲಿ ಪ್ರಯಾಣಿಸುವುದನ್ನು ಅವರು ಕೊನೆಯವರೆಗೂ ರೂಢಿಸಿಕೊಂಡಿದ್ದರು. ಅವರ ಜತೆ ನಾಲ್ಕು ಐದು ಸಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ನೆನಪಿದೆ: ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮ, ಗಿರೀಶ ಕಾರ್ನಾಡ ರಂಗಶಂಕರದಲ್ಲಿ ನಡೆಸಿಕೊಟ್ಟ ಲೇಖಕಿಯರ ಪ್ರೋಗ್ರಾಂನಲ್ಲಿ ಹೀಗೆ. ಅರವಿಂದ ಆಶ್ರಮದ ಗೆಸ್ಟ್ ಹೌಸ್‌ನಲ್ಲಿ ಸಾರಾ ಅಬೂಬಕ್ಕರ್ ಜತೆ ಒಂದೇ ಕೋಣೆಯಲ್ಲಿ ಉಳಿದ ಸವಿನೆನಪು. ಅದೇ ಕೊಠಡಿಯಲ್ಲಿ ಕತೆಗಾರ್ತಿ ನಾಗವೇಣಿ ಸಹ ನಮ್ಮ ಜತೆ ಇದ್ದರು. ಈ ಎಲ್ಲ ಸಂದರ್ಭದಲ್ಲಿ ನಾನು ಗಮನಿಸಿದಂತೆ ಸಾರಾ ಅವರು ತುಂಬಾ ಸರಳ ಮತ್ತು ನಿಗರ್ವಿ. ಅವರ ಬರಹದಂತೆ ನೇರ, ತೆರೆದ ಮನಸ್ಸು. ಅವರ ಅಭಿನಂದನಾ ಗ್ರಂಥಕ್ಕೆ ಅವರ ಸಾಹಿತ್ಯ ಕೃತಿಗಳ ಕುರಿತು ಲೇಖನ ಕೇಳಿದಾಗ ಬರೆದುಕೊಟ್ಟ ಸಂತಸ ನನ್ನದಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ರಿಫ್ರೆಷರ್ ಕೋರ್ಸ್ ಅಭ್ಯರ್ಥಿಗಳಿಗೆ ಸಾರಾ ಅಬೂಬಕ್ಕರ್ ಅವರ ಎಲ್ಲ ಕೃತಿಗಳ ಕುರಿತು ಉಪನ್ಯಾಸ ನೀಡಿದ್ದೇನೆ. ಸಾರಾ ಅವರ ಕೃತಿಗಳ ಮೂಲಕ ನಮ್ಮ ಜತೆಗೆ ಸದಾ ಉಳಿಯುತ್ತಾರೆ ಮತ್ತು ಸ್ಫೂರ್ತಿಯಾಗುತ್ತಾರೆ.

ಅವರ ಆತ್ಮ ಚರಿತ್ರೆ ’ಹೊತ್ತು ಕಂತುವ ಮುನ್ನ’ ಪುಸ್ತಕದಲ್ಲಿ, ಅವರು ತಮ್ಮ ಕೌಟುಂಬಿಕ ಬದುಕಿನ ಜತೆಗೆ ಬರಹದ ಬದುಕಿನ ಸವಾಲುಗಳನ್ನು ಕುರಿತೂ ಬರೆದಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಸ್ತ್ರೀಯರಿಗಿದ್ದ ಧಾರ್ಮಿಕ ಸ್ವಾತಂತ್ರ್ಯದ ಮಿತಿಗಳನ್ನು ಕುರಿತು ಬರೆದಾಗ ಅವರದೇ ಸಮುದಾಯದ ಜನ ವಿರೋಧಿಸಿದರು. ಬೆಂಗಳೂರಿನ ಲೇಖಕಿ ಒಬ್ಬರು ಸಾರಾ ಅಬೂಬಕ್ಕರ್ ಲೇಖಕಿ ಆದರೆ ನಾನು ಲೇಖಕಿ ಅಲ್ಲ ಅಂದರಂತೆ. ಮೂವತ್ತೈದು ವರ್ಷಗಳ ಹಿಂದಿನ ಮಾತು ಇದು. ಸಾರಾ ಅವರ ಮಾತುಗಳನ್ನು ಅಲ್ಲಲ್ಲೇ ಬಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಬೆಳೆದರು. ಇನ್ನೊಬ್ಬರು ಸಾರಾ ಲಂಕೇಶ್ ಪತ್ರಿಕೆಯಲ್ಲಿ ಬರೆಯುವುದನ್ನು ಇಷ್ಟಪಡದೆ ಟೀಕಿಸಿದರು. ಹೀಗೆ ಹಲವು ಕಹಿಮಾತುಗಳನ್ನು ಕೇಳಿ ಅರಗಿಸಿಕೊಂಡು ಬದುಕಿ ಬರೆದವರು ಸಾರಾ.

ಇದನ್ನೂ ಓದಿ: ಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ’ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

ಸಾರಾ ಅಬೂಬಕ್ಕರ್ ಕೇವಲ ಮುಸ್ಲಿಂ ಜಗತ್ತಿನ ಕುರಿತು ಬರೆದಿಲ್ಲ. ’ತಳ ಒಡೆದ ದೋಣಿಯಲಿ’ ಎಂಬ ಅವರ ಕಾದಂಬರಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಭ್ರಷ್ಟಾಚಾರದ ಕುರಿತ ಚಿತ್ರಣ ಇದೆ. ಒಬ್ಬರು ರಾಜಕಾರಣಿಗೆ ಲಂಚ ತೆಗೆದುಕೊಳ್ಳಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಹಿರಿಯ ಎಂಜಿನಿಯರ್ ಆಗಿದ್ದ ಅವರ ಪತಿ ಅಬೂಬಕ್ಕರ್ ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗುತ್ತದೆ. ನೀರಾವರಿ ಇಲಾಖೆಯ ಭ್ರಷ್ಟಾಚಾರದ ಕತೆಯೇ ’ತಳ ಒಡೆದ ದೋಣಿಯಲಿ’. ಸಾರಾ ಈ ಕಾದಂಬರಿ ಬರೆದಿದ್ದು 1997ರಲ್ಲಿ. ಇವತ್ತು ಕೂಡ ಈ ಎಡದಂಡೆ ಕಾಲುವೆ ರಿಪೇರಿ ಆಗುತ್ತಲೇ ಇದೆ. ಒಡೆದು ಹೋಗುತ್ತಲೇ ಇದೆ. ’ತಳ ಒಡೆದ ದೋಣಿಯಲಿ’ ಒಂದು ಮುಖ್ಯ ಕಾದಂಬರಿ. ಸಾರಾ ತಮ್ಮ ಕೃತಿಗಳಲ್ಲೆಲ್ಲಾ ಸಾಮಾಜಿಕ ಸಮಸ್ಯೆಗಳ ಚಿತ್ರಣಕ್ಕೆ ಒತ್ತು ನೀಡಿ ಬರೆದಿದ್ದಾರೆ.

ಇಪ್ಪತ್ತೈದು ಪುಸ್ತಕಗಳನ್ನು ಬರೆದಿರುವ ಸಾರಾ ಅವರಿಗೆ ಕೇವಲ ಕಲಾತ್ಮಕ ಅಭಿವ್ಯಕ್ತಿ ಮಾತ್ರವೇ ಮುಖ್ಯವಲ್ಲ. ತನ್ನದೇ ಅಂತರಂಗದ ಅಭಿವ್ಯಕ್ತಿ ಅಥವಾ ಆತ್ಮ ನಿವೇದನೆಯೂ ಮುಖ್ಯವಲ್ಲ. ತಾನು ನೋಡಿದ ಅನುಭವಿಸಿದ ಸಂಪ್ರದಾಯದ ನಂಬಿಕೆಗಳು, ಧಾರ್ಮಿಕ ನಂಬಿಕೆಗಳು, ಅದರ ಪರಿಣಾಮವಾಗಿ ನಿರಂತರ ನೋವು ಅನುಭವಿಸುತ್ತಿರುವ ಸ್ತ್ರೀ ಸಮುದಾಯ- ಇವು ನಿರಂತರವಾಗಿ ಲೇಖಕಿಯನ್ನು ಕಾಡಿದ ಸಂಗತಿಗಳು. ಕೇರಳದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಯ ಸುತ್ತಮುತ್ತಲಿನ ಪರಿಸರ ಸಾರಾ ಅವರ ಕಥೆ ಕಾದಂಬರಿಗಳ ಕಾರ್ಯಕ್ಷೇತ್ರ. ಮಲಯಾಳಂನ ಪ್ರಮುಖ ಲೇಖಕರಲ್ಲಿ ಒಬ್ಬರಾದ ವೈಕಂ ಮಹಮ್ಮದ್ ಬಶೀರ್ ಅವರ ಕಥೆ ಕಾದಂಬರಿಗಳಲ್ಲಿ ಚಿತ್ರಿತವಾದ ಮುಸ್ಲಿಂ ಕೌಟುಂಬಿಕ ಪರಿಸರಕ್ಕಿಂತ ಸಾರಾ ಅವರ ಬರವಣಿಗೆ ಭಿನ್ನ. ರವೀಂದ್ರನಾಥ ಟ್ಯಾಗೋರರ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಆದಂತೆ ತನ್ನದೂ ಒಂದು ಕಿರು ಪ್ರಯತ್ನ ಎಂದು ಹೇಳುತ್ತಾರೆ ಅವರು.

ಸಾರಾ ಅಬೂಬಕ್ಕರ್ ಅವರ ಕೃತಿಗಳಲ್ಲಿ ಮತ್ತೊಂದು ಹೆಗ್ಗಳಿಕೆಯೆಂದರೆ, ಮೊದಲ ಬಾರಿಗೆ ಕನ್ನಡ ಲೇಖಕಿಯರ ಕೃತಿಗಳಲ್ಲಿ ಮಾಂಸ, ಮೀನುಗಳ ಅಡಿಗೆಯ ವಿವರ ಬರುವುದು. ನಫೀಸ ಎಂಬ ಎಳೆಯ ಗೃಹಿಣಿ ತೆಳ್ಳನೆಯ ಅಕ್ಕಿ ರೊಟ್ಟಿ ಮಾಡಿ ಕಾಯಿಹಾಲು ಹಚ್ಚಿ ಮಾಡಿದ ರೊಟ್ಟಿಯನ್ನು ಅವಿಭಕ್ತ ಕುಟಂಬದಲ್ಲಿ ಅವಳ ಗಂಡನಿಗೆ ಇನ್ಯಾರೋ ಬಡಿಸುತ್ತಾರೆ. ಅವನು ರುಚಿಯನ್ನು ಮೆಚ್ಚಿ ತಿನ್ನುತ್ತಾನೆ. ಆದರೆ ಅದು ತನ್ನ ಹೆಂಡತಿ ಮಾಡಿದ್ದು ಎಂದು ತಿಳಿಯುವುದಿಲ್ಲ. ಅವಳ ಒಳ್ಳೆಯ ಗುಣಗಳು ಅವಳ ಗಂಡನಿಗೆ ಕೊನೆಗೂ ತಿಳಿಯದೆ ಅವಳ ಬದುಕು ದುರಂತವಾಗುತ್ತದೆ. ತಮ್ಮ ಹೆಚ್ಚಿನ ಕೃತಿಗಳಲ್ಲಿ, ತಲಾಖ್, ಬಹುಪತ್ನಿತ್ವ, ಘೋಶಾದ ತೊಂದರೆಗಳು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮಹತ್ವ ಇಲ್ಲದೆ ಇರುವುದು- ಇವುಗಳನ್ನು ಚಿತ್ರಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ’ಚಂದ್ರಗಿರಿ ತೀರದಲ್ಲಿ’ ಕಾದಂಬರಿಯಲ್ಲಿ ನಾದಿರ ಮಸೀದಿಯ ಕೊಳದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಶಕ್ತವಾಗಿ ಪ್ರತಿಭಟನೆ ಮಾಡಿದ್ದರೆ, ’ನಿಯಮ ನಿಯಮಗಳ ನಡುವೆ’ ಎಂಬ ಕತೆಯಲ್ಲಿ ಪ್ರಕೃತಿ ನಿಯಮ ಮತ್ತು ಮನುಷ್ಯ ನಿರ್ಮಿತ ಧಾರ್ಮಿಕ ನಿಯಮಗಳ ನಡುವೆ ಸಿಲುಕಿ ನಲಗುವ ಹೆಣ್ಣಿನ ಕಥೆಯನ್ನು ಮನಕಲುಕುವಂತೆ ನಿರೂಪಿಸಿದ್ದಾರೆ. ಈ ಕಥೆ ಪಿಯು ತರಗತಿಗೆ ಪಠ್ಯವಾಗಿತ್ತು. ಅಧ್ಯಾಪಕರ ಕಾರ್ಯಾಗಾರ ಒಂದರಲ್ಲಿ ಈ ಕಥೆಯನ್ನು ಕುರಿತು ನಾನು ಮಾತನಾಡಬೇಕಿತ್ತು. ಕಥೆಯ ಕುರಿತು ವಿಶ್ಲೇಷಣೆಗೆ ತೊಡಗಿದಾಗ ಹಲವು ಜನ ಪುರುಷ ಅಧ್ಯಾಪಕರು, ಈ ಕಥೆಯನ್ನು ಪಠ್ಯವಾಗಿರಿಸಿದ್ದರ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿದರು. ಬಸಿರು, ಮುಟ್ಟು ಇತ್ಯಾದಿ ಸಂಗತಿಗಳ ಕುರಿತು ತರಗತಿಯಲ್ಲಿ ಹೇಗೆ ಹೇಳುವುದು, ಇದೆಂತಹ ಕಥೆ ಎಂದು ಕೂಗಾಡಿದರು. ಅವರ ಅಜ್ಞಾನಕ್ಕೆ ಮರುಗಬೇಕಾಯಿತು. ಹೀಗೆ ಸಾರಾ ಪುರುಷ ಅಹಂಗೆ ಹಲವು ರೀತಿಯಲ್ಲಿ ಸವಾಲಾಗಿದ್ದರು. ಹಾಗೆಯೇ ಎಲ್ಲಾ ಧರ್ಮಗಳ ಮೂಲಭೂತವಾದಿಗಳಿಗೂ! ಅವರು ಅನುವಾದಿಸಿದ ’ಧರ್ಮದ ಹೆಸರಿನಲ್ಲಿ’ ಪುಸ್ತಕದ ಕುರಿತು ಮರು ಚರ್ಚೆ ಆಗಬೇಕಿದೆ. ಅದು ಮರುಮುದ್ರಣ ಕಾಣಬೇಕಿದೆ.

ವಾಸ್ತವಕ್ಕೆ ದೂರವಾದ ಕಲ್ಪಿತ ಕಥೆ ಕಾದಂಬರಿಗಳ ಹಿಂಸೆ ಕ್ರೌರ್ಯವನ್ನು ಸಂಪ್ರದಾಯಸ್ಥ ಜನ ಪ್ರಶ್ನಿಸುವುದಿಲ್ಲ. ಆದರೆ ನಿಜವಾಗಿ ಸಮಾಜದಲ್ಲಿರುವ ಹೆಣ್ಣಿನ ಶೋಷಣೆಯನ್ನು ಕುರಿತು ಬರೆದರೆ ಸಂಪ್ರದಾಯಸ್ಥರಿಗೆ ಸಹಿಸಲು ಆಗುವುದಿಲ್ಲ. ಇದು ನಮ್ಮ ಸದ್ಯದ ಸಾಮಾಜಿಕ ಪರಿಸ್ಥಿತಿ. ಸಾರಾ ಅಬೂಬಕ್ಕರ್ ತರಹದ ಲೇಖಕಿಯರು ಮತ್ತೆ ಹುಟ್ಟಿ ಬರಬೇಕು. ಅವರಿಗೆ ಹೃದಯಪೂರ್ವಕ ನಮನಗಳು.

ಡಾ. ಎಲ್.ಸಿ ಸುಮಿತ್ರಾ
ಬರಹಗಾರ್ತಿ, ತೀರ್ಥಹಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...