ಕಳೆದ ವರ್ಷ ದಾಖಲೆಗಳಿಲ್ಲದೆ ಕೆನಡಾದಿಂದ ಅಮೆರಿಕಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಭಾರತೀಯ ಕುಟುಂಬದ ನಾಲ್ವರು ಕೊರೆವ ಚಳಿಯಲ್ಲಿ ಸಿಲುಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಕಳೆದ ವರ್ಷ ಜನವರಿ 19ರಂದು ಕೆನಡಾದ ಪೊಲೀಸರು ಗಡಿ ಪಟ್ಟಣವಾದ ಎಮರ್ಸನ್ ಬಳಿ ನಾಲ್ವರು ಭಾರತೀಯರ ಶವಗಳನ್ನು ಪತ್ತೆ ಹಚ್ಚಿದ್ದರು. ಅವರನ್ನು ಜಗದೀಶ್ ಪಟೇಲ್ (39), ವೈಶಾಲಿ ಪಟೇಲ್ (37), ವಿಹಂಗಿ ಪಟೇಲ್ (11) ಮತ್ತು ಧಾರ್ಮಿಕ್ ಪಟೇಲ್ (3) ಎಂದು ಗುರುತಿಸಲಾಗಿದೆ.
ಕೆನಡಾ-ಯುಎಸ್ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಹನ್ನೊಂದು ವ್ಯಕ್ತಿಗಳಲ್ಲಿ ಗುಜರಾತ್ನ ಈ ಕುಟುಂಬವೂ ಸೇರಿತ್ತು. ಇತರ ಏಳು ಮಂದಿಯನ್ನು ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು ಗಡಿ ದಾಟಿದ ನಂತರ ಬಂಧಿಸಿದ್ದರು.
ಅಹಮದಾಬಾದ್ ಕ್ರೈಂ ಬ್ರಾಂಚ್ ಅಧಿಕಾರಿಗಳು ಅಹಮದಾಬಾದ್ ಮತ್ತು ಗಾಂಧಿನಗರದ ಕಲೋಲ್ ನಗರದಲ್ಲಿ ಇಬ್ಬರು ವಲಸೆ ಏಜೆಂಟ್ಗಳನ್ನು ಬಂಧಿಸಿದ್ದಾರೆ. ಕುಟುಂಬವು ಯುನೈಟೆಡ್ ಸ್ಟೇಟ್ಸ್ಗೆ ಅಕ್ರಮ ಪ್ರವೇಶ ಪಡೆಯಲು ಈ ಆರೋಪಿಗಳು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರಲಾಗಿದೆ.
“ಆರೋಪಿಗಳು [ಏಜೆಂಟರು] 11 ಜನರನ್ನು ಅಕ್ರಮವಾಗಿ ಯುಎಸ್-ಕೆನಡಾ ಗಡಿಯನ್ನು ದಾಟಿಸುವ ಪ್ರಯತ್ನ ಮಾಡಿದ್ದರು. ಕೊರೆವ ಹಿಮದಲ್ಲಿ ನಡೆಯುವಂತೆ ಒತ್ತಾಯಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿಟಿ ಕ್ರೈಮ್ ಬ್ರಾಂಚ್ ಪ್ರಕರಣ ದಾಖಲಿಸಿದೆ. ಈ ಘಟನೆಯಲ್ಲಿ ಭಾರತೀಯ ಕುಟುಂಬದ ನಾಲ್ವರು ಸದಸ್ಯರು ಸಾಯಲು ಕಾರಣವಾಯಿತು” ಎಂದು ಪೊಲೀಸ್ ಉಪ ಆಯುಕ್ತ (ಅಪರಾಧ ವಿಭಾಗ) ಚೈತನ್ಯ ಮಾಂಡ್ಲಿಕ್ ಹೇಳಿದ್ದಾರೆ.
ಪಟೇಲ್ ಕುಟುಂಬವನ್ನು ಮೊದಲು ಕೆನಡಾದ ಟೊರೊಂಟೊಗೆ ಮತ್ತು ನಂತರ ವ್ಯಾಂಕೋವರ್ಗೆ ಕರೆದೊಯ್ಯಲಾಯಿತು ಎಂದು ಮಾಂಡ್ಲಿಕ್ ಹೇಳಿದ್ದಾರೆ. “ಏಜೆಂಟರು ನಂತರ ಅವರನ್ನು ಮ್ಯಾನಿಟೋಬಾ ಪ್ರಾಂತ್ಯದ ವಿನ್ನಿಪೆಗ್ನಲ್ಲಿ ಬಿಟ್ಟರು. ಅವರು ತಾವಾಗಿಯೇ ಯುಎಸ್ ದಾಟಲು ಸೂಚಿಸಿದ್ದರು” ಎಂದು ಚೈತನ್ಯ ವಿವರಿಸಿದ್ದಾರೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ನ ಇಬ್ಬರು ವ್ಯಕ್ತಿಗಳನ್ನು ‘ವಾಂಟೆಡ್ ವ್ಯಕ್ತಿ’ಗಳೆಂದು ಪೊಲೀಸರು ಘೋಷಿಸಿದ್ದಾರೆ. ತಲಾ 60 ಲಕ್ಷದಿಂದ 65 ಲಕ್ಷ ರೂಪಾಯಿಗಳನ್ನು ‘ಕ್ರಾಸಿಂಗ್ ಏಜೆಂಟರು’ ಪಡೆಯಲಿದ್ದರು” ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪಟೇಲ್ ಕುಟುಂಬವು ಶೀತ ಹವಾಮಾನಕ್ಕೆ ಸಿಲುಕಿದ ಕಾರಣ ಸಾವನ್ನಪ್ಪಿದೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಕಳೆದ ವರ್ಷ ಜನವರಿಯಲ್ಲಿ ಹೇಳಿದ್ದರು. ಆ ಸಮಯದಲ್ಲಿ ಸದರಿ ಭಾಗದಲ್ಲಿ ತಾಪಮಾನವು ಮೈನಸ್ 35 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜನವರಿ 12ರಂದು ಕುಟುಂಬವು ಟೊರೊಂಟೊಗೆ ಆಗಮಿಸಿತ್ತು ಎಂದು ಕೆನಡಾದ ಪೊಲೀಸರು ತಿಳಿಸಿದ್ದಾರೆ.
“ಟೊರೊಂಟೊದಿಂದ ಕುಟುಂಬವು ಎಮರ್ಸನ್ಗೆ ಜನವರಿ 18, 2022ರಂದು ಹೊರಟಿತು” ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆನಡಾದ ಗಡಿ ಭಾಗದಲ್ಲಿ ಯಾವುದೇ ವಾಹನ ಇರಲಿಲ್ಲ. ಯಾರೋ ಈ ಕುಟುಂಬವನ್ನು ಗಡಿಗೆ ಕರೆತಂದರು” ಎಂದು ಮಾಹಿತಿ ನೀಡಿದ್ದಾರೆ.