ಮಿಜೋರಾಂನ ಚಂಫೈ ಜಿಲ್ಲೆಯ ಸಮೀಪವಿರುವ ಪ್ರಮುಖ ಬಂಡುಕೋರರ ತರಬೇತಿ ಶಿಬಿರವನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಯ ಸಂದರ್ಭದಲ್ಲಿ ಮಯನ್ಮಾರ್ ಸೈನ್ಯವೂ ಕಳೆದ ಮಂಗಳವಾರ ಭಾರತೀಯ ಭೂಪ್ರದೇಶದೊಳಗೆ ಬಾಂಬ್ ಅನ್ನು ಬೀಳಿಸಿದೆ ಎಂದು ಅಧಿಕಾರಿ ಮತ್ತು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ ಎಂದು Scroll.in ವರದಿ ಮಾಡಿದೆ.
ಮಯನ್ಮಾರ್ ಸೇನೆಯು ಬಂಡುಕೋರರಾದ ಚಿನ್ ರಾಷ್ಟ್ರೀಯ ಸೇನೆಯ ಪ್ರಧಾನ ಕಛೇರಿಯಾದ ವಿಕ್ಟೋರಿಯಾ ಕ್ಯಾಂಪ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದೆ. ಚಿನ್ ರಾಷ್ಟ್ರೀಯ ಸೇನೆಯು ಮಯನ್ಮಾರ್ ಸೈನ್ಯದೊಂದಿಗೆ ಸಂಘರ್ಷ ನಡೆಸುತ್ತಿದ್ದು, ಇದು ಅಲ್ಲಿನ ಜನಾಂಗೀಯ ಸಶಸ್ತ್ರ ಗುಂಪುಗಳಲ್ಲಿ ಒಂದಾಗಿದೆ. ವಿಕ್ಟೋರಿಯಾ ಕ್ಯಾಂಪ್ ಭಾರತ-ಮಯನ್ಮಾರ್ ಗಡಿಯ ಟಿಯು ನದಿಯ ಉದ್ದಕ್ಕೂ ಇದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಂಗಳವಾರ ಮಧ್ಯಾಹ್ನ 3.30 ಕ್ಕೆ ಮಯನ್ಮಾರ್ ಸೈನ್ಯದ ಜೆಟ್ಗಳಿಂದ ಬಾಂಬ್ ಸ್ಫೋಟ ಸಂಭವಿಸಿದ್ದು, ಕ್ಯಾಂಪ್ ಸಮೀಪದಲ್ಲಿರುವ ವಫೈನಲ್ಲಿರುವ ಹಳ್ಳಿಯಿಂದ ಸ್ಫೋಟಗಳು ಕೇಳಿಬರುತ್ತಿವೆ ಎಂದು ಸ್ಥಳೀಯ ನಿವಾಸಿ ಮಾಯೆಂಗಾ Scroll.in ಗೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
“ಒಂದು ಬಾಂಬ್ ಮಿಜೋರಾಂ ಭಾಗದಲ್ಲಿ ಬಿದ್ದಿದ್ದು… ಕ್ಷಿಪಣಿಯು ಭಾರತದ ಬದಿಯಲ್ಲಿರುವ ಟಿಯು ನದಿಯಿಂದ 30 ಮೀಟರ್ ದೂರದಲ್ಲಿ ಇಳಿಯಿತು” ಎಂದು ಅವರು ಹೇಳಿದ್ದಾರೆ.
ಜಿಲ್ಲೆಯ ಫರ್ಕವಾನ್ ಗ್ರಾಮದ ನಿವಾಸಿಗಳು ಮತ್ತು ನದಿಯ ಆಚೆಯ ಪ್ರದೇಶಗಳು ಕೂಡಾ ಬಾಂಬ್ ಸ್ಫೋಟದ ಶಬ್ದವನ್ನು ಕೇಳಿರಬಹುದೆಂದು ಚಂಫೈನಲ್ಲಿನ ಹಿರಿಯ ಅಧಿಕಾರಿಯೊಬ್ಬರು ಘಟನೆಯನ್ನು ಖಚಿತಪಡಿಸಿದ್ದಾರೆ.
“ಒಂದು ಕ್ಷಿಪಣಿ ಭಾರತದ ಕಡೆ ಬಿದ್ದಿದೆ ಎಂದು ನಾವು ಕೇಳಿದ್ದೇವೆ. ನಾವು ವಾಸ್ತವಾಂಶಗಳನ್ನು ಖಚಿತಪಡಿಸಿಕೊಳ್ಳಲು ಸ್ಥಳ ಪರಿಶೀಲನೆಯನ್ನು ಮಾಡುತ್ತಿದ್ದು, ವರದಿಗಳಿಗಾಗಿ ಕಾಯುತ್ತಿದ್ದೇವೆ. ಟಿಯು ನದಿಯಿಂದ ಮರಳು ಸಂಗ್ರಹಿಸಲು ಹೋದ ಭಾರತೀಯ ಟ್ರಕ್ನ ವಿಂಡ್ಶೀಲ್ಡ್ ಹಾನಿಗೊಳಗಾಗಿರುವುದು ಕಂಡುಬಂದಿದ್ದು, ಖಚಿತವಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಘಟನೆಯಿಂದಾಗಿ ಗಡಿ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಪ್ರಭಾವಿ ಸಮುದಾಯ ಸಂಘಟನೆಯಾದ ಯಂಗ್ ಮಿಜೋ ಅಸೋಸಿಯೇಷನ್ನ ಸದಸ್ಯರೂ ಆಗಿರುವ ಮಾಯೆಂಗಾ ಅವರು, ಬುಧವಾರ ಮಯನ್ಮಾರ್ ಮಿಲಿಟರಿ ಮತ್ತೆ ಎರಡು ಬಾರಿ ಬಾಂಬ್ಗಳನ್ನು ಬೀಳಿಸಿದೆ ಎಂದು ಹೇಳಿದ್ದಾರೆ.
“ನಾವು ಈಗ ಭಯಭೀತರಾಗಿದ್ದೇವೆ. ಅನೇಕ ರೈತರು ಮತ್ತು ಕಾರ್ಮಿಕರು ಭಯದಿಂದ ತಮ್ಮ ಕೆಲಸವನ್ನು ನಿಲ್ಲಿಸಿದ್ದಾರೆ … ಮಯನ್ಮಾರ್ ಮಿಲಿಟರಿ ಜೆಟ್ ಫೈಟರ್ಗಳು ಭಾರತದ ನೆಲದ ಮೇಲೆ ಬಾಂಬ್ ದಾಳಿ ಮಾಡುವುದನ್ನು ಮತ್ತು ಭಾರತೀಯ ವಾಯುಪ್ರದೇಶದ ಮೇಲೆ ಅಸಾಧ್ಯ ವೇಗದಿಂದ ಹಾರುವುದನ್ನು ತಡೆಯಲು ಭಾರತವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ತೀವ್ರವಾಗಿ ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಮಂಗಳವಾರ ನಡೆದ ವೈಮಾನಿಕ ಬಾಂಬ್ ದಾಳಿಯಲ್ಲಿ ಚಿನ್ ನ್ಯಾಷನಲ್ ಆರ್ಮಿಯ ಐವರು ಯೋಧರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತದ ಕಡೆ ಬಾಂಬ್ಗಳನ್ನು ಬೀಳಿಸಲಾಗಿದೆಯೇ ಎಂಬುದನ್ನು ಭಾರತ ಸರ್ಕಾರ ಇನ್ನೂ ಅಧೀಕೃತವಾಗಿ ಖಚಿತಪಡಿಸಿಲ್ಲ.
ನೊಬೆಲ್ ಪ್ರಶಸ್ತಿ ವಿಜೇತ ಆಂಗ್ ಸಾಂಗ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರದಿಂದ ಫೆಬ್ರವರಿ 1, 2021 ರಂದು ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮಯನ್ಮಾರ್ ಗೊಂದಲದಲ್ಲಿದೆ. ಅಧಿಕಾರಿಗಳು ಪ್ರಜಾಪ್ರಭುತ್ವದ ಪರವಾದ ಪ್ರತಿಭಟನೆಗಳಿಗೆ ಕ್ರೂರವಾಗಿ ವರ್ತಿಸುತ್ತಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಿಸಿದ್ದಾರೆ. ಮಯನ್ಮಾರ್ನಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಚಿನ್ ರಾಷ್ಟ್ರೀಯ ಸೇನೆಯು ಇತರ ಬಂಡಾಯ ಗುಂಪುಗಳೊಂದಿಗೆ ಹೋರಾಡುತ್ತಿದೆ.
#Myanmar military using two jet fighters bombed CNA Camp at 3:30 PM on Jan 10,2022. One of the bombs landed on India's soil near #Farkawn village.
CNA Camp Victoria located on just 9 km from #Mizoram's Farkawn.
The bombing shook houses at Farkawn and glasses of a truck shattered. pic.twitter.com/Q7DZnd0aYZ— miZO zEITGEIST (@mizozeitgeist) January 10, 2023