Homeಮುಖಪುಟತ್ರಿಮೂರ್ತಿ ಎಂಬ ಕನ್ನಡಿ

ತ್ರಿಮೂರ್ತಿ ಎಂಬ ಕನ್ನಡಿ

- Advertisement -
- Advertisement -

ತನ್ನ ಬದುಕಿನುದ್ದಕ್ಕೂ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡು, ಮೈಮನಸ್ಸುಗಳ ತುಂಬಾ ಕನಸುಗಳನ್ನು ಹೊತ್ತು ತಿರುಗುತ್ತಿದ್ದ ಗೆಳೆಯ ತ್ರಿಮೂರ್ತಿ ಕಣ್ಮರೆಯಾಗಿ ತಿಂಗಳಾಗಿದೆ. ಈ ನಡುವೆ ನಾವು ಬದುಕುತ್ತಿರುವ ಸಮಾಜ ಹಲವು ಹೊರಳುಗಳಿಗೆ ಪಕ್ಕಾಗಿ ಲೆಕ್ಕವಿಟ್ಟುಕೊಳ್ಳಲಾಗದಷ್ಟು ಬದಲಾಗಿದೆ. ಅಡುಗೆಗಾಗಿ ಬಳಸುವ ಗ್ಯಾಸ್ ಬೆಲೆ ಮತ್ತೊಮ್ಮೆ ಜಾಸ್ತಿಯಾಗಿದೆ; ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತರ ಮೇಲಿನ ದೌರ್ಜನ್ಯಗಳು ಸಮಾಜದ ಕುರುಡು, ಕಿವುಡನ್ನು ಎತ್ತಿ ತೋರಿಸುತ್ತಿವೆ. ತ್ರಿಮೂರ್ತಿ ಹೋದ ದಿನದಿಂದ ಈದಿನದವರೆಗೂ ಅವನು ಇದಕ್ಕೆಲ್ಲಾ ಹೇಗೆ ಪ್ರತಿಕ್ರಿಯಿಸುತ್ತಿದ್ದ ಎನ್ನುವ ಲೆಕ್ಕಾಚಾರ ಮನಸ್ಸಿನಲ್ಲಿ ಸುಳಿದು, ತನ್ನ ಅಷ್ಟಗಲ ನಗುವಿಗೆ ಕೆನ್ನೆ ಮೇಲೆ ಇನ್ವೈಟೆಡ್ ಕಾಮಾ ಹಾಕುತ್ತಿದ್ದ ಅವನ ಮುಖ ನೆನಪಾಗಿ ಪಿಚ್ಚೆನಿಸುತ್ತದೆ. ಮತ್ತೆ ಆ ಕ್ಷಣಗಳೆಲ್ಲಾ ಎದೆಯಲ್ಲಿ ಆತಂಕದ ಬೀಜ ನೆಟ್ಟ ಅನುಭವಗಳಾಗಿ ಮಾರ್ಪಾಡಾಗುತ್ತವೆ.

ಕರ್ನಾಟಕದ ಪ್ರಬಲ ಸಮುದಾಯವೊಂದರಲ್ಲಿ ಹುಟ್ಟಿದ ತ್ರಿಮೂರ್ತಿ ತನ್ನ ಸಾವಿನ ಕ್ಷಣದವರೆಗೂ ನೊಂದವರೊಂದಿಗೆ ಬದುಕಿದವನು. ಅಂದರೆ, ನೆಲದ ಕಾರುಣ್ಯವನ್ನು ಕರುಳೊಳಗಿಟ್ಟುಕೊಂಡು ಉಂಡ ತುತ್ತಿಗೆ ಲೆಕ್ಕ ಬರೆದಿಕ್ಕುವ ಹಾಗೂ ಈ ನೆಲದ ದನಿಗೆ ಮೈಯ್ಯಾನಿಸಿ ಬದುಕುವ ಕಸುವು ಕಟ್ಟಿಕೊಂಡವನು. ಬಿಎ ಓದುವಾಗಿಂದ ಹೋರಾಟದ ಬದುಕಿಗೆ ಬಿದ್ದು, ದಲಿತ, ರೈತ, ಮಹಿಳಾ, ಕಾರ್ಮಿಕ, ಅಲ್ಪಸಂಖ್ಯಾತ ಹೋರಾಟಗಳಲ್ಲಿ ಕಂಠಮಟ್ಟ ಕೆಲಸ ಮಾಡಿ ಹೆಸರಿಗೆ ಹಾತೊರೆಯದೆ, ಉಸಿರಿಗೆ ಅರ್ಥ ತಂದವನು. ದಲಿತ- ದಮನಿತರ ಹೋರಾಟ ಕುರಿತ ನಿಖರ ತಿಳಿವಳಿಕೆ, ಬಾಬಾಸಾಹೇಬ್ ಅಂಬೇಡ್ಕರರ ನೋಟಕ್ರಮದ ಆಲೋಚನಾ ವಿಧಾನ ತ್ರಿಮೂರ್ತಿಯನ್ನು ಕೊಂಚ ನಿಷ್ಠುರ ವ್ಯಕ್ತಿಯನ್ನಾಗಿ ರೂಪಿಸಿದ್ದವು. ತನ್ನ ಸುತ್ತಲಿನ ಎಲ್ಲಾ ವಿದ್ಯಮಾನಗಳಿಗೆ ಸಾವಧಾನವಾಗಿ ಸ್ಪಂದಿಸುತ್ತಿದ್ದುದಲ್ಲದೆ, ಕಾರ್ಯಪ್ರವೃತ್ತಿಯಿಂದ ವರ್ತಿಸುವ ಬದ್ಧತೆಯನ್ನು ರೂಢಿಸಿಕೊಂಡಿದ್ದವನು. ಹಲವರಂತೆ ಹಲವು ರೀತಿಯಲ್ಲಿ ಮಾತನಾಡಿ ಮುಗಿಸದೆ, ಮುಂದೆ ಮಾಡಬೇಕಾದ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟವರ ಮುಂದೆ ಮಂಡಿಸಿ ತನ್ನ ಪಾಲಿನ ಕರ್ತವ್ಯಕ್ಕಾಗಿ ಕಾಯುತ್ತಿದ್ದವನು.

ವಿದ್ಯಾರ್ಥಿ ದೆಸೆಯಲ್ಲಿ ಕರ್ನಾಟಕ ವಿಮೋಚನಾ ರಂಗದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ತ್ರಿಮೂರ್ತಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಓದಿದವನು. ತನ್ನ ಊರಿನ ಆಸ್ತಿ, ಜಾತಿಗಳ ಪ್ರಭಾವಗಳನ್ನು ಕಡೆಗಣಿಸಿ ನೊಂದವರ ಜೊತೆಯಲ್ಲಿ ಹೆಜ್ಜೆ ಹಾಕಿದ್ದಲ್ಲದೆ, ದನಿಯಿಲ್ಲದವರ ದನಿಯಾಗಲು ಹಾತೊರೆಯುತ್ತಿದ್ದನು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರೂಪಿಸಿದ ಎಲ್ಲಾ ಹೋರಾಟಗಳ ಜೊತೆಗೇ ಸಾಗಿದ ತ್ರಿಮೂರ್ತಿ, ಅಂಬೇಡ್ಕರ್ ಓದು, ಸಂವಿಧಾನದ ತಿಳಿವಳಿಕೆ, ಕನ್ನಡ ಸಾಹಿತ್ಯ ಮೊದಲಾದ ವಿಷಯಗಳ ಕುರಿತು ಆಳವಾಗಿ ಅಧ್ಯಯನಕ್ಕೆ ತೊಡಗಿದ್ದವನು.

ಇಷ್ಟೆಲ್ಲಾ ಸಹಜ ಹೋರಾಟಗಾರನಂತೆ ಬದುಕು ಸಾಗಿಸುತ್ತಿದ್ದ ತ್ರಿಮೂರ್ತಿ ಯಾರೊಟ್ಟಿಗೂ ತನ್ನ ಮನಸ್ಸಿನ ದುಗುಡಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಸದಾ ಅಂತರ್ಮುಖಿಯಾಗಿದ್ದವನು ಕಳೆದ ಹತ್ತು ವರ್ಷಗಳಲ್ಲಿ ಹಲವು ಬದಲಾವಣೆಗಳನ್ನು ಮೈಗೂಡಿಸಿಕೊಂಡಿದ್ದ. ಪ್ರೇಮ ಪದ್ಯಗಳನ್ನೂ ಬರೆಯಲು ಪ್ರಾರಂಭಿಸಿ ನಮಗೆಲ್ಲಾ ಆಶ್ಚರ್ಯ ಉಂಟುಮಾಡಿದ್ದ.

“ಜಿಂಕೆಯ ಕಣ್ಣೆಂದೆ ಅಲ್ಲವೆಂದಳು
ಹವಳದ ತುಟಿಯೆಂದೆ ಸುಳ್ಳೆಂದಳು
ಸೋತು ನಿಂತವನ ನೋಡಿ
ಮಾತಾಡು ತಲೆಯಿಂದಲ್ಲ
ಹೃದಯದಿಂದ ಎಂದಳು”

– ಈ ಪದ್ಯ ತ್ರಿಮೂರ್ತಿ ತನ್ನೊಳಗಿನ ಗಂಡುಪ್ರಜ್ಞೆಯನ್ನು ಕೊಂದುಕೊಂಡು ಮನುಷ್ಯನಾಗುವ ಪ್ರಯೋಗ. ಗಂಡು ಎನ್ನುವುದು ಒಂದು ರೋಗವೆಂದೇ ನಂಬಿದ್ದ ಅವನು ’ಪ್ರೇಮ’ ಗಂಡನ್ನು ಮನುಷ್ಯತ್ವದ ಕಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಅರಿತಿದ್ದ. ಇದ್ದಕ್ಕಿದ್ದಂತೆ ಇಂಥಾ ಪದ್ಯಗಳನ್ನು ವಾಟ್ಸಪ್ ಮಾಡಿ ಅಚ್ಚರಿ ಮೂಡಿಸುತ್ತಿದ್ದ.

“ನೂರಾರು ಮನಸುಗಳು ದುಡಿತಾವೆ ನೋವಿಗೆ ಮದ್ದನ್ನು ಅರಿತಾವೆ” ಎಂದು ಬರೆದ. ದುಡಿಮೆ ಮತ್ತು ಅರಿಮೆ ಅಥವಾ ಅರಿಯುವಿಕೆಯನ್ನು ಕೂಡಿಸಿ ಪದ್ಯ ಕಟ್ಟಲು ಪ್ರಯತ್ನಿಸಿದ್ದ ತ್ರಿಮೂರ್ತಿಗೆ ನಿಸ್ಸಂದೇಹವಾಗಿ ಕನ್ನಡ ಕಾವ್ಯದ ಆಳದ ತಿಳಿವಳಿಕೆಯಿತ್ತು.

“ಹಿಡಿ ಅಕ್ಕಿ ತಿನ್ನುವಾ ಬಾಯಿದೋ
ದುಡಿದುಣ್ಣಲು ಬಯಸುತಿದೆ.
ನನ್ನದಲ್ಲದ್ದು ನನಗೆ
ಕಾಲಕಸ ತಿಳಿದಿರಲಿ”

ಮೇಲುನೋಟಕ್ಕೆ ಹೊಸ ಕವಿಯ ಆರಂಭದ ನುಡಿಗಳಂತೆ ಕಾಣುವ ಈ ಪದ್ಯಗಳು ಭಾರತದಂತಹ ಪರಿಸರದಲ್ಲಿ ಬದುಕುವ ವ್ಯಕ್ತಿಗಳ ಹೃದಯದ ಎಕ್ಸರೇಗಳಂತೆ ಭಾಸವಾಗುತ್ತವೆ. ತ್ರಿಮೂರ್ತಿ ಅಂತಹ ಎಲ್ಲಾ ಹೃದಯಗಳ ಎಕ್ಸರೇ ಆಗಿದ್ದವನು.

ಹೋಗುವ ಮೊದಲು ನಾಲ್ಕೈದು ತಿಂಗಳು ಕಾಣೆಯಾಗಿದ್ದವನು ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಒಕ್ಕೂಟ ಹಮ್ಮಿಕೊಂಡಿದ್ದ ’ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ದ ಪ್ರಚಾರಕ್ಕಾಗಿ ನಾವು ಮಾಡಿದ್ದ ವಾಟ್ಸಾಪ್ ಗ್ರೂಪಿಗೆ ಬಂದ. ಬಂದವನೇ ನಮ್ಮೆಲ್ಲರ ಕೆಲಸಗಳನ್ನು ಒಬ್ಬನೇ ಮಾಡಿದ. ಸೋಷಿಯಲ್ ಮೀಡಿಯಾಗೆಂದು ತಂಡ ಸಿದ್ಧಪಡಿಸಿದ ಪೋಸ್ಟರ್ ಮತ್ತು ವಿಡಿಯೋಗಳನ್ನು ಹಗಲಿರುಳೆನ್ನದೆ, ಯಾವುದೇ ಬೇಸರವಿಲ್ಲದೆ ಶೇರ್ ಮಾಡಿದ. ನಾವು ಮಾಡಿದ ವಾಟ್ಸಪ್ ಗ್ರೂಪುಗಳಲ್ಲಿ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ ನಮ್ಮ ಗಮನಕ್ಕೆ ತಂದು ಅದಕ್ಕೆ ತಕ್ಷಣವೇ ಉತ್ತರಿಸುವಂತೆ ಒತ್ತಡ ಹಾಕುತ್ತಿದ್ದ. ಫೇಸ್‌ಬುಕ್ಕಿನಲ್ಲಿ ಕೆಲವರು ಸಮಾವೇಶದ ವಿರುದ್ಧ ಬರೆದಾಗ ನೊಂದುಕೊಂಡು ಅವರನ್ನೆಲ್ಲಾ ಕರೆದು ಮಾತಾಡೋಣ ಎಂದ. ಸಮಾವೇಶದ ದಿನ ವಿಮಾನನಿಲ್ದಾಣದಿಂದ ರಮಾಬಾಯಿಯವರನ್ನು ಕರೆತರುವ ಹಾಗು ಕರೆದುಕೊಂಡು ಹೋಗಿ ಬಿಡುವ ಕೆಲಸವಹಿಸಿಕೊಂಡ. ಆ ಕೆಲಸಗಳ ನಡುವೆ ಬಾಬಾಸಾಹೇಬರ ಫೋಟೋ ಇದ್ದ ಅಂಗಿ ಹಾಕಿಕೊಂಡು ಬಿಸಿಲಲ್ಲಿ ಬೇಯುತ್ತಾ ಸಮಾವೇಶದ ಕಂಟೆಂಟ್ ಕೆಲಸ ನಿರ್ವಹಿಸಿದ.

ನಾವೆಲ್ಲಾ ಮಾತನಾಡುವ ಆದರ್ಶದಂತೆಯೇ ಬದುಕಲು ಪ್ರಯತ್ನಸುತ್ತಿದ್ದ ತ್ರಿಮೂರ್ತಿ ಅದೆಲ್ಲಿ ಸೋತ ಎಂದು ಯೋಚಿಸಲುತೊಡಗಿದರೆ ಉತ್ತರ ಸುಲಭವಲ್ಲ. ಅಥವಾ ಸಾವನ್ನು ಸೋಲು ಎಂದುಕೊಳ್ಳುವ ನಮಗೆ ಸಾಮಾಜಿಕ ಬದುಕನ್ನು, ವೈಯಕ್ತಿಕ ಬದುಕನ್ನು ಅರ್ಥಮಾಡಿಕೊಳ್ಳುವ ತರಬೇತಿಯ ಕೊರತೆಯಿರಬಹುದು. ನೆನ್ನೆ ಮೊನ್ನೆ ನಮ್ಮ ಜೊತೆ ಇದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕಣ್ಮರೆಯಾದನಲ್ಲಾ ಎಂಬ ಆಘಾತ ನಮ್ಮೊಳಗೆ ಅಸಂಬದ್ಧ ತಾತ್ವಿಕ ಜಿಜ್ಞಾಸೆಗಳನ್ನು ಹುಟ್ಟುಹಾಕಬಹುದು. ಅಥವಾ ಸಾವು ಸುಲಭ ಬದುಕು ಕಷ್ಟ ಎಂಬ ಷರಾ ಬರೆದು ’ಈ ಕೆಟ್ಟ ಜಗತ್ತಿನಲ್ಲಿ ಇದ್ದು ನೋಯುವುದಕ್ಕಿಂತ ಎದ್ದು ಹೋಗುವುದೇ ಮೇಲು’ ಎಂದುಕೊಂಡು ಬದುಕಿಸಿಕೊಳ್ಳಲಾಗದ ನಮ್ಮ ಅಸಹಾಯಕತೆಗೆ ತಾತ್ವಿಕತೆಯ ಮಾಸ್ಕ್ ಹಾಕಿಬಿಡಬಹುದು. ಆದರೆ, ಇದರೆಲ್ಲದರಾಚೆಗೆ ತ್ರಿಮೂರ್ತಿ ಇಲ್ಲ ಎಂಬ ಸತ್ಯ ಅದೆಷ್ಟು ಭಯಂಕರವಾದ ಸತ್ಯವನ್ನು ನಮ್ಮೆದೆಗೆ ಎಸೆಯುತ್ತದೆಂದರೆ, ನಮ್ಮಗಳ ಜೀವಂತಿಕೆಯ ಮೇಲೆ ಗುಮಾನಿ ಹುಟ್ಟಿಸುವಷ್ಟು.

ದಶಕದ ಹಿಂದೆ ಗೆಳೆಯ ಪ್ರಶಾಂತ ಇಂಥದ್ದೇ ನಿರ್ಧಾರ ಮಾಡಿದಾಗ, ಗೆಳೆಯ ಎನ್.ಕೆ.ಹನುಮಂತಯ್ಯ ಹೀಗೇ ಎದ್ದು ಹೋದಾಗ ಅಕ್ಷರಶಃ ಅದುರಿಹೋಗಿದ್ದ ನನ್ನ ದೇಹ ಮತ್ತು ಮನಸ್ಸು ತ್ರಿಮೂರ್ತಿಯ ಸಾವಿನಿಂದ ಜಡ್ಡುಗಟ್ಟಿದಂತೆನಿಸಿ ಭಯವಾಗುತ್ತದೆ. ಅವನ ಗೈರುಹಾಜರಿಯನ್ನು ನನ್ನ ಸುತ್ತಲಿನ ಯಾರಿಗೂ ಸಹಿಸಲಾಗುತ್ತಿಲ್ಲ. ದಲಿತ ಸಂಘಟನೆಗಳ ಒಗ್ಗಟ್ಟು, ಕೋಮುವಾದದ ವಿರುದ್ಧದ ಜನರ ಸಿಟ್ಟು ಅವನನ್ನು ಉಳಿಸಬೇಕಿತ್ತು. ಅದು ಅವನ ಕನಸಾಗಿತ್ತು. ಹೊರಗೆ ಕನ್ನಡಿಯ ಹೊತ್ತು ಓಡಾಡುತ್ತಿದ್ದ ತ್ರಿಮೂರ್ತಿ ಆ ಕನ್ನಡಿಯೊಳಗೇ ಲಯವಾಗಿಬಿಟ್ಟ. ಆ ಕನ್ನಡಿಗಳೀಗ ನಮ್ಮನ್ನು ಪ್ರತಿಬಿಂಬಿಸುತ್ತಿವೆ. ಮತ್ತೆ ಅವನೇ ಬರೆದ ಸಾಲುಗಳು ಚುಚ್ಚುತ್ತಿವೆ:

“ಆ ವಾದ ಈ ವಾದ
ಸಿದ್ಧಾಂತ ಮುಗ್ದಾಂತ ಅಂತಾವೆ
ಮಕ್ ಮಕ ನೋಡ್ಕಂಡು
ಉರ್ಕಂತಾವೆ..
ಬೆನ್ ಬೆನ್‌ಗೆ ಚೂರಿನಾ
ಇರ್ಕಂತಾವೆ…”

“ಸತ್ಯವ ಹೇಳಿ ಸಿಕ್ಕಿಬಿದ್ದಿದ್ದೇನೆ
ಮನದೊಳಗೆ..
ಮುದವಿದೆ, ಭೀತಿಯಿದೆ
ಜಗದ ಹಳದಿಗಣ್ಣುಗಳ ಬಗ್ಗೆ ಭಯವಿದೆ
ಮನಸಿನಾಟವ ಹೃದಯ ಒಪ್ಪುತ್ತಿಲ್ಲ
ನಿಜವೇನೆಂದು ತಿಳಿಯುತ್ತಿಲ್ಲ”

ಹುಲಿಕುಂಟೆ ಮೂರ್ತಿ
ಕನ್ನಡ ಪಾಧ್ಯಾಪಕರು, ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...