Homeಮುಖಪುಟತ್ರಿಮೂರ್ತಿ ಎಂಬ ಕನ್ನಡಿ

ತ್ರಿಮೂರ್ತಿ ಎಂಬ ಕನ್ನಡಿ

- Advertisement -
- Advertisement -

ತನ್ನ ಬದುಕಿನುದ್ದಕ್ಕೂ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡು, ಮೈಮನಸ್ಸುಗಳ ತುಂಬಾ ಕನಸುಗಳನ್ನು ಹೊತ್ತು ತಿರುಗುತ್ತಿದ್ದ ಗೆಳೆಯ ತ್ರಿಮೂರ್ತಿ ಕಣ್ಮರೆಯಾಗಿ ತಿಂಗಳಾಗಿದೆ. ಈ ನಡುವೆ ನಾವು ಬದುಕುತ್ತಿರುವ ಸಮಾಜ ಹಲವು ಹೊರಳುಗಳಿಗೆ ಪಕ್ಕಾಗಿ ಲೆಕ್ಕವಿಟ್ಟುಕೊಳ್ಳಲಾಗದಷ್ಟು ಬದಲಾಗಿದೆ. ಅಡುಗೆಗಾಗಿ ಬಳಸುವ ಗ್ಯಾಸ್ ಬೆಲೆ ಮತ್ತೊಮ್ಮೆ ಜಾಸ್ತಿಯಾಗಿದೆ; ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತರ ಮೇಲಿನ ದೌರ್ಜನ್ಯಗಳು ಸಮಾಜದ ಕುರುಡು, ಕಿವುಡನ್ನು ಎತ್ತಿ ತೋರಿಸುತ್ತಿವೆ. ತ್ರಿಮೂರ್ತಿ ಹೋದ ದಿನದಿಂದ ಈದಿನದವರೆಗೂ ಅವನು ಇದಕ್ಕೆಲ್ಲಾ ಹೇಗೆ ಪ್ರತಿಕ್ರಿಯಿಸುತ್ತಿದ್ದ ಎನ್ನುವ ಲೆಕ್ಕಾಚಾರ ಮನಸ್ಸಿನಲ್ಲಿ ಸುಳಿದು, ತನ್ನ ಅಷ್ಟಗಲ ನಗುವಿಗೆ ಕೆನ್ನೆ ಮೇಲೆ ಇನ್ವೈಟೆಡ್ ಕಾಮಾ ಹಾಕುತ್ತಿದ್ದ ಅವನ ಮುಖ ನೆನಪಾಗಿ ಪಿಚ್ಚೆನಿಸುತ್ತದೆ. ಮತ್ತೆ ಆ ಕ್ಷಣಗಳೆಲ್ಲಾ ಎದೆಯಲ್ಲಿ ಆತಂಕದ ಬೀಜ ನೆಟ್ಟ ಅನುಭವಗಳಾಗಿ ಮಾರ್ಪಾಡಾಗುತ್ತವೆ.

ಕರ್ನಾಟಕದ ಪ್ರಬಲ ಸಮುದಾಯವೊಂದರಲ್ಲಿ ಹುಟ್ಟಿದ ತ್ರಿಮೂರ್ತಿ ತನ್ನ ಸಾವಿನ ಕ್ಷಣದವರೆಗೂ ನೊಂದವರೊಂದಿಗೆ ಬದುಕಿದವನು. ಅಂದರೆ, ನೆಲದ ಕಾರುಣ್ಯವನ್ನು ಕರುಳೊಳಗಿಟ್ಟುಕೊಂಡು ಉಂಡ ತುತ್ತಿಗೆ ಲೆಕ್ಕ ಬರೆದಿಕ್ಕುವ ಹಾಗೂ ಈ ನೆಲದ ದನಿಗೆ ಮೈಯ್ಯಾನಿಸಿ ಬದುಕುವ ಕಸುವು ಕಟ್ಟಿಕೊಂಡವನು. ಬಿಎ ಓದುವಾಗಿಂದ ಹೋರಾಟದ ಬದುಕಿಗೆ ಬಿದ್ದು, ದಲಿತ, ರೈತ, ಮಹಿಳಾ, ಕಾರ್ಮಿಕ, ಅಲ್ಪಸಂಖ್ಯಾತ ಹೋರಾಟಗಳಲ್ಲಿ ಕಂಠಮಟ್ಟ ಕೆಲಸ ಮಾಡಿ ಹೆಸರಿಗೆ ಹಾತೊರೆಯದೆ, ಉಸಿರಿಗೆ ಅರ್ಥ ತಂದವನು. ದಲಿತ- ದಮನಿತರ ಹೋರಾಟ ಕುರಿತ ನಿಖರ ತಿಳಿವಳಿಕೆ, ಬಾಬಾಸಾಹೇಬ್ ಅಂಬೇಡ್ಕರರ ನೋಟಕ್ರಮದ ಆಲೋಚನಾ ವಿಧಾನ ತ್ರಿಮೂರ್ತಿಯನ್ನು ಕೊಂಚ ನಿಷ್ಠುರ ವ್ಯಕ್ತಿಯನ್ನಾಗಿ ರೂಪಿಸಿದ್ದವು. ತನ್ನ ಸುತ್ತಲಿನ ಎಲ್ಲಾ ವಿದ್ಯಮಾನಗಳಿಗೆ ಸಾವಧಾನವಾಗಿ ಸ್ಪಂದಿಸುತ್ತಿದ್ದುದಲ್ಲದೆ, ಕಾರ್ಯಪ್ರವೃತ್ತಿಯಿಂದ ವರ್ತಿಸುವ ಬದ್ಧತೆಯನ್ನು ರೂಢಿಸಿಕೊಂಡಿದ್ದವನು. ಹಲವರಂತೆ ಹಲವು ರೀತಿಯಲ್ಲಿ ಮಾತನಾಡಿ ಮುಗಿಸದೆ, ಮುಂದೆ ಮಾಡಬೇಕಾದ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟವರ ಮುಂದೆ ಮಂಡಿಸಿ ತನ್ನ ಪಾಲಿನ ಕರ್ತವ್ಯಕ್ಕಾಗಿ ಕಾಯುತ್ತಿದ್ದವನು.

ವಿದ್ಯಾರ್ಥಿ ದೆಸೆಯಲ್ಲಿ ಕರ್ನಾಟಕ ವಿಮೋಚನಾ ರಂಗದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ತ್ರಿಮೂರ್ತಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಓದಿದವನು. ತನ್ನ ಊರಿನ ಆಸ್ತಿ, ಜಾತಿಗಳ ಪ್ರಭಾವಗಳನ್ನು ಕಡೆಗಣಿಸಿ ನೊಂದವರ ಜೊತೆಯಲ್ಲಿ ಹೆಜ್ಜೆ ಹಾಕಿದ್ದಲ್ಲದೆ, ದನಿಯಿಲ್ಲದವರ ದನಿಯಾಗಲು ಹಾತೊರೆಯುತ್ತಿದ್ದನು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರೂಪಿಸಿದ ಎಲ್ಲಾ ಹೋರಾಟಗಳ ಜೊತೆಗೇ ಸಾಗಿದ ತ್ರಿಮೂರ್ತಿ, ಅಂಬೇಡ್ಕರ್ ಓದು, ಸಂವಿಧಾನದ ತಿಳಿವಳಿಕೆ, ಕನ್ನಡ ಸಾಹಿತ್ಯ ಮೊದಲಾದ ವಿಷಯಗಳ ಕುರಿತು ಆಳವಾಗಿ ಅಧ್ಯಯನಕ್ಕೆ ತೊಡಗಿದ್ದವನು.

ಇಷ್ಟೆಲ್ಲಾ ಸಹಜ ಹೋರಾಟಗಾರನಂತೆ ಬದುಕು ಸಾಗಿಸುತ್ತಿದ್ದ ತ್ರಿಮೂರ್ತಿ ಯಾರೊಟ್ಟಿಗೂ ತನ್ನ ಮನಸ್ಸಿನ ದುಗುಡಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಸದಾ ಅಂತರ್ಮುಖಿಯಾಗಿದ್ದವನು ಕಳೆದ ಹತ್ತು ವರ್ಷಗಳಲ್ಲಿ ಹಲವು ಬದಲಾವಣೆಗಳನ್ನು ಮೈಗೂಡಿಸಿಕೊಂಡಿದ್ದ. ಪ್ರೇಮ ಪದ್ಯಗಳನ್ನೂ ಬರೆಯಲು ಪ್ರಾರಂಭಿಸಿ ನಮಗೆಲ್ಲಾ ಆಶ್ಚರ್ಯ ಉಂಟುಮಾಡಿದ್ದ.

“ಜಿಂಕೆಯ ಕಣ್ಣೆಂದೆ ಅಲ್ಲವೆಂದಳು
ಹವಳದ ತುಟಿಯೆಂದೆ ಸುಳ್ಳೆಂದಳು
ಸೋತು ನಿಂತವನ ನೋಡಿ
ಮಾತಾಡು ತಲೆಯಿಂದಲ್ಲ
ಹೃದಯದಿಂದ ಎಂದಳು”

– ಈ ಪದ್ಯ ತ್ರಿಮೂರ್ತಿ ತನ್ನೊಳಗಿನ ಗಂಡುಪ್ರಜ್ಞೆಯನ್ನು ಕೊಂದುಕೊಂಡು ಮನುಷ್ಯನಾಗುವ ಪ್ರಯೋಗ. ಗಂಡು ಎನ್ನುವುದು ಒಂದು ರೋಗವೆಂದೇ ನಂಬಿದ್ದ ಅವನು ’ಪ್ರೇಮ’ ಗಂಡನ್ನು ಮನುಷ್ಯತ್ವದ ಕಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಅರಿತಿದ್ದ. ಇದ್ದಕ್ಕಿದ್ದಂತೆ ಇಂಥಾ ಪದ್ಯಗಳನ್ನು ವಾಟ್ಸಪ್ ಮಾಡಿ ಅಚ್ಚರಿ ಮೂಡಿಸುತ್ತಿದ್ದ.

“ನೂರಾರು ಮನಸುಗಳು ದುಡಿತಾವೆ ನೋವಿಗೆ ಮದ್ದನ್ನು ಅರಿತಾವೆ” ಎಂದು ಬರೆದ. ದುಡಿಮೆ ಮತ್ತು ಅರಿಮೆ ಅಥವಾ ಅರಿಯುವಿಕೆಯನ್ನು ಕೂಡಿಸಿ ಪದ್ಯ ಕಟ್ಟಲು ಪ್ರಯತ್ನಿಸಿದ್ದ ತ್ರಿಮೂರ್ತಿಗೆ ನಿಸ್ಸಂದೇಹವಾಗಿ ಕನ್ನಡ ಕಾವ್ಯದ ಆಳದ ತಿಳಿವಳಿಕೆಯಿತ್ತು.

“ಹಿಡಿ ಅಕ್ಕಿ ತಿನ್ನುವಾ ಬಾಯಿದೋ
ದುಡಿದುಣ್ಣಲು ಬಯಸುತಿದೆ.
ನನ್ನದಲ್ಲದ್ದು ನನಗೆ
ಕಾಲಕಸ ತಿಳಿದಿರಲಿ”

ಮೇಲುನೋಟಕ್ಕೆ ಹೊಸ ಕವಿಯ ಆರಂಭದ ನುಡಿಗಳಂತೆ ಕಾಣುವ ಈ ಪದ್ಯಗಳು ಭಾರತದಂತಹ ಪರಿಸರದಲ್ಲಿ ಬದುಕುವ ವ್ಯಕ್ತಿಗಳ ಹೃದಯದ ಎಕ್ಸರೇಗಳಂತೆ ಭಾಸವಾಗುತ್ತವೆ. ತ್ರಿಮೂರ್ತಿ ಅಂತಹ ಎಲ್ಲಾ ಹೃದಯಗಳ ಎಕ್ಸರೇ ಆಗಿದ್ದವನು.

ಹೋಗುವ ಮೊದಲು ನಾಲ್ಕೈದು ತಿಂಗಳು ಕಾಣೆಯಾಗಿದ್ದವನು ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಒಕ್ಕೂಟ ಹಮ್ಮಿಕೊಂಡಿದ್ದ ’ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ದ ಪ್ರಚಾರಕ್ಕಾಗಿ ನಾವು ಮಾಡಿದ್ದ ವಾಟ್ಸಾಪ್ ಗ್ರೂಪಿಗೆ ಬಂದ. ಬಂದವನೇ ನಮ್ಮೆಲ್ಲರ ಕೆಲಸಗಳನ್ನು ಒಬ್ಬನೇ ಮಾಡಿದ. ಸೋಷಿಯಲ್ ಮೀಡಿಯಾಗೆಂದು ತಂಡ ಸಿದ್ಧಪಡಿಸಿದ ಪೋಸ್ಟರ್ ಮತ್ತು ವಿಡಿಯೋಗಳನ್ನು ಹಗಲಿರುಳೆನ್ನದೆ, ಯಾವುದೇ ಬೇಸರವಿಲ್ಲದೆ ಶೇರ್ ಮಾಡಿದ. ನಾವು ಮಾಡಿದ ವಾಟ್ಸಪ್ ಗ್ರೂಪುಗಳಲ್ಲಿ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ ನಮ್ಮ ಗಮನಕ್ಕೆ ತಂದು ಅದಕ್ಕೆ ತಕ್ಷಣವೇ ಉತ್ತರಿಸುವಂತೆ ಒತ್ತಡ ಹಾಕುತ್ತಿದ್ದ. ಫೇಸ್‌ಬುಕ್ಕಿನಲ್ಲಿ ಕೆಲವರು ಸಮಾವೇಶದ ವಿರುದ್ಧ ಬರೆದಾಗ ನೊಂದುಕೊಂಡು ಅವರನ್ನೆಲ್ಲಾ ಕರೆದು ಮಾತಾಡೋಣ ಎಂದ. ಸಮಾವೇಶದ ದಿನ ವಿಮಾನನಿಲ್ದಾಣದಿಂದ ರಮಾಬಾಯಿಯವರನ್ನು ಕರೆತರುವ ಹಾಗು ಕರೆದುಕೊಂಡು ಹೋಗಿ ಬಿಡುವ ಕೆಲಸವಹಿಸಿಕೊಂಡ. ಆ ಕೆಲಸಗಳ ನಡುವೆ ಬಾಬಾಸಾಹೇಬರ ಫೋಟೋ ಇದ್ದ ಅಂಗಿ ಹಾಕಿಕೊಂಡು ಬಿಸಿಲಲ್ಲಿ ಬೇಯುತ್ತಾ ಸಮಾವೇಶದ ಕಂಟೆಂಟ್ ಕೆಲಸ ನಿರ್ವಹಿಸಿದ.

ನಾವೆಲ್ಲಾ ಮಾತನಾಡುವ ಆದರ್ಶದಂತೆಯೇ ಬದುಕಲು ಪ್ರಯತ್ನಸುತ್ತಿದ್ದ ತ್ರಿಮೂರ್ತಿ ಅದೆಲ್ಲಿ ಸೋತ ಎಂದು ಯೋಚಿಸಲುತೊಡಗಿದರೆ ಉತ್ತರ ಸುಲಭವಲ್ಲ. ಅಥವಾ ಸಾವನ್ನು ಸೋಲು ಎಂದುಕೊಳ್ಳುವ ನಮಗೆ ಸಾಮಾಜಿಕ ಬದುಕನ್ನು, ವೈಯಕ್ತಿಕ ಬದುಕನ್ನು ಅರ್ಥಮಾಡಿಕೊಳ್ಳುವ ತರಬೇತಿಯ ಕೊರತೆಯಿರಬಹುದು. ನೆನ್ನೆ ಮೊನ್ನೆ ನಮ್ಮ ಜೊತೆ ಇದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕಣ್ಮರೆಯಾದನಲ್ಲಾ ಎಂಬ ಆಘಾತ ನಮ್ಮೊಳಗೆ ಅಸಂಬದ್ಧ ತಾತ್ವಿಕ ಜಿಜ್ಞಾಸೆಗಳನ್ನು ಹುಟ್ಟುಹಾಕಬಹುದು. ಅಥವಾ ಸಾವು ಸುಲಭ ಬದುಕು ಕಷ್ಟ ಎಂಬ ಷರಾ ಬರೆದು ’ಈ ಕೆಟ್ಟ ಜಗತ್ತಿನಲ್ಲಿ ಇದ್ದು ನೋಯುವುದಕ್ಕಿಂತ ಎದ್ದು ಹೋಗುವುದೇ ಮೇಲು’ ಎಂದುಕೊಂಡು ಬದುಕಿಸಿಕೊಳ್ಳಲಾಗದ ನಮ್ಮ ಅಸಹಾಯಕತೆಗೆ ತಾತ್ವಿಕತೆಯ ಮಾಸ್ಕ್ ಹಾಕಿಬಿಡಬಹುದು. ಆದರೆ, ಇದರೆಲ್ಲದರಾಚೆಗೆ ತ್ರಿಮೂರ್ತಿ ಇಲ್ಲ ಎಂಬ ಸತ್ಯ ಅದೆಷ್ಟು ಭಯಂಕರವಾದ ಸತ್ಯವನ್ನು ನಮ್ಮೆದೆಗೆ ಎಸೆಯುತ್ತದೆಂದರೆ, ನಮ್ಮಗಳ ಜೀವಂತಿಕೆಯ ಮೇಲೆ ಗುಮಾನಿ ಹುಟ್ಟಿಸುವಷ್ಟು.

ದಶಕದ ಹಿಂದೆ ಗೆಳೆಯ ಪ್ರಶಾಂತ ಇಂಥದ್ದೇ ನಿರ್ಧಾರ ಮಾಡಿದಾಗ, ಗೆಳೆಯ ಎನ್.ಕೆ.ಹನುಮಂತಯ್ಯ ಹೀಗೇ ಎದ್ದು ಹೋದಾಗ ಅಕ್ಷರಶಃ ಅದುರಿಹೋಗಿದ್ದ ನನ್ನ ದೇಹ ಮತ್ತು ಮನಸ್ಸು ತ್ರಿಮೂರ್ತಿಯ ಸಾವಿನಿಂದ ಜಡ್ಡುಗಟ್ಟಿದಂತೆನಿಸಿ ಭಯವಾಗುತ್ತದೆ. ಅವನ ಗೈರುಹಾಜರಿಯನ್ನು ನನ್ನ ಸುತ್ತಲಿನ ಯಾರಿಗೂ ಸಹಿಸಲಾಗುತ್ತಿಲ್ಲ. ದಲಿತ ಸಂಘಟನೆಗಳ ಒಗ್ಗಟ್ಟು, ಕೋಮುವಾದದ ವಿರುದ್ಧದ ಜನರ ಸಿಟ್ಟು ಅವನನ್ನು ಉಳಿಸಬೇಕಿತ್ತು. ಅದು ಅವನ ಕನಸಾಗಿತ್ತು. ಹೊರಗೆ ಕನ್ನಡಿಯ ಹೊತ್ತು ಓಡಾಡುತ್ತಿದ್ದ ತ್ರಿಮೂರ್ತಿ ಆ ಕನ್ನಡಿಯೊಳಗೇ ಲಯವಾಗಿಬಿಟ್ಟ. ಆ ಕನ್ನಡಿಗಳೀಗ ನಮ್ಮನ್ನು ಪ್ರತಿಬಿಂಬಿಸುತ್ತಿವೆ. ಮತ್ತೆ ಅವನೇ ಬರೆದ ಸಾಲುಗಳು ಚುಚ್ಚುತ್ತಿವೆ:

“ಆ ವಾದ ಈ ವಾದ
ಸಿದ್ಧಾಂತ ಮುಗ್ದಾಂತ ಅಂತಾವೆ
ಮಕ್ ಮಕ ನೋಡ್ಕಂಡು
ಉರ್ಕಂತಾವೆ..
ಬೆನ್ ಬೆನ್‌ಗೆ ಚೂರಿನಾ
ಇರ್ಕಂತಾವೆ…”

“ಸತ್ಯವ ಹೇಳಿ ಸಿಕ್ಕಿಬಿದ್ದಿದ್ದೇನೆ
ಮನದೊಳಗೆ..
ಮುದವಿದೆ, ಭೀತಿಯಿದೆ
ಜಗದ ಹಳದಿಗಣ್ಣುಗಳ ಬಗ್ಗೆ ಭಯವಿದೆ
ಮನಸಿನಾಟವ ಹೃದಯ ಒಪ್ಪುತ್ತಿಲ್ಲ
ನಿಜವೇನೆಂದು ತಿಳಿಯುತ್ತಿಲ್ಲ”

ಹುಲಿಕುಂಟೆ ಮೂರ್ತಿ
ಕನ್ನಡ ಪಾಧ್ಯಾಪಕರು, ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ...

ಉತ್ತರಾಖಂಡ: ಮೇಲ್ಜಾತಿ ಯುವತಿ ಜೊತೆ ಸ್ನೇಹ ಬೆಳೆಸಿದ 18 ವರ್ಷದ ದಲಿತ ಯುವಕನ ಹತ್ಯೆ, ಸ್ನೇಹಿತನ ಮೇಲೂ ಮಾರಣಾಂತಿಕ ಹಲ್ಲೆ 

ದೇಶದಲ್ಲಿ ಜಾತಿ ವ್ಯವಸ್ಥೆಯ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಉತ್ತರಾಖಂಡದ ನ್ಯೂ ತೆಹ್ರಿ ಜಿಲ್ಲೆಯ ಪ್ರತಾಪ್ ನಗರ ಬ್ಲಾಕ್ ವ್ಯಾಪ್ತಿಯಲ್ಲಿ ಮೇಲ್ಜಾತಿಯ ಅಪ್ರಾಪ್ತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ 18 ವರ್ಷದ ದಲಿತ ಹದಿಹರೆಯದ...

ಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸುಮಾರು 20 ಲೋಕಸಭಾ ಸಂಸದರು ಪಕ್ಷದಿಂದ ಬೇರ್ಪಟ್ಟು ಪ್ರತ್ಯೇಕ ಗುಂಪು ರಚಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳ ನಡುವೆ, ಕೇವಲ ಮೂರನೇ ಎರಡರಷ್ಟು ಸಂಸದರ ಬೆಂಬಲ ಹೊಂದಿರುವುದರಿಂದ ಮಾತ್ರ...

ಕಚ್ಚಿದ ಸೇಬನ್ನು ಅಭಿಮಾನಿಗಳತ್ತ ಎಸೆದ ಸಿಎಂ ಡಿ.ಕೆ. ಶಿವಕುಮಾರ್: ವಿಡಿಯೋ ವೈರಲ್

ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ....