Homeಮುಖಪುಟತ್ರಿಮೂರ್ತಿ ಎಂಬ ಕನ್ನಡಿ

ತ್ರಿಮೂರ್ತಿ ಎಂಬ ಕನ್ನಡಿ

- Advertisement -
- Advertisement -

ತನ್ನ ಬದುಕಿನುದ್ದಕ್ಕೂ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡು, ಮೈಮನಸ್ಸುಗಳ ತುಂಬಾ ಕನಸುಗಳನ್ನು ಹೊತ್ತು ತಿರುಗುತ್ತಿದ್ದ ಗೆಳೆಯ ತ್ರಿಮೂರ್ತಿ ಕಣ್ಮರೆಯಾಗಿ ತಿಂಗಳಾಗಿದೆ. ಈ ನಡುವೆ ನಾವು ಬದುಕುತ್ತಿರುವ ಸಮಾಜ ಹಲವು ಹೊರಳುಗಳಿಗೆ ಪಕ್ಕಾಗಿ ಲೆಕ್ಕವಿಟ್ಟುಕೊಳ್ಳಲಾಗದಷ್ಟು ಬದಲಾಗಿದೆ. ಅಡುಗೆಗಾಗಿ ಬಳಸುವ ಗ್ಯಾಸ್ ಬೆಲೆ ಮತ್ತೊಮ್ಮೆ ಜಾಸ್ತಿಯಾಗಿದೆ; ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತರ ಮೇಲಿನ ದೌರ್ಜನ್ಯಗಳು ಸಮಾಜದ ಕುರುಡು, ಕಿವುಡನ್ನು ಎತ್ತಿ ತೋರಿಸುತ್ತಿವೆ. ತ್ರಿಮೂರ್ತಿ ಹೋದ ದಿನದಿಂದ ಈದಿನದವರೆಗೂ ಅವನು ಇದಕ್ಕೆಲ್ಲಾ ಹೇಗೆ ಪ್ರತಿಕ್ರಿಯಿಸುತ್ತಿದ್ದ ಎನ್ನುವ ಲೆಕ್ಕಾಚಾರ ಮನಸ್ಸಿನಲ್ಲಿ ಸುಳಿದು, ತನ್ನ ಅಷ್ಟಗಲ ನಗುವಿಗೆ ಕೆನ್ನೆ ಮೇಲೆ ಇನ್ವೈಟೆಡ್ ಕಾಮಾ ಹಾಕುತ್ತಿದ್ದ ಅವನ ಮುಖ ನೆನಪಾಗಿ ಪಿಚ್ಚೆನಿಸುತ್ತದೆ. ಮತ್ತೆ ಆ ಕ್ಷಣಗಳೆಲ್ಲಾ ಎದೆಯಲ್ಲಿ ಆತಂಕದ ಬೀಜ ನೆಟ್ಟ ಅನುಭವಗಳಾಗಿ ಮಾರ್ಪಾಡಾಗುತ್ತವೆ.

ಕರ್ನಾಟಕದ ಪ್ರಬಲ ಸಮುದಾಯವೊಂದರಲ್ಲಿ ಹುಟ್ಟಿದ ತ್ರಿಮೂರ್ತಿ ತನ್ನ ಸಾವಿನ ಕ್ಷಣದವರೆಗೂ ನೊಂದವರೊಂದಿಗೆ ಬದುಕಿದವನು. ಅಂದರೆ, ನೆಲದ ಕಾರುಣ್ಯವನ್ನು ಕರುಳೊಳಗಿಟ್ಟುಕೊಂಡು ಉಂಡ ತುತ್ತಿಗೆ ಲೆಕ್ಕ ಬರೆದಿಕ್ಕುವ ಹಾಗೂ ಈ ನೆಲದ ದನಿಗೆ ಮೈಯ್ಯಾನಿಸಿ ಬದುಕುವ ಕಸುವು ಕಟ್ಟಿಕೊಂಡವನು. ಬಿಎ ಓದುವಾಗಿಂದ ಹೋರಾಟದ ಬದುಕಿಗೆ ಬಿದ್ದು, ದಲಿತ, ರೈತ, ಮಹಿಳಾ, ಕಾರ್ಮಿಕ, ಅಲ್ಪಸಂಖ್ಯಾತ ಹೋರಾಟಗಳಲ್ಲಿ ಕಂಠಮಟ್ಟ ಕೆಲಸ ಮಾಡಿ ಹೆಸರಿಗೆ ಹಾತೊರೆಯದೆ, ಉಸಿರಿಗೆ ಅರ್ಥ ತಂದವನು. ದಲಿತ- ದಮನಿತರ ಹೋರಾಟ ಕುರಿತ ನಿಖರ ತಿಳಿವಳಿಕೆ, ಬಾಬಾಸಾಹೇಬ್ ಅಂಬೇಡ್ಕರರ ನೋಟಕ್ರಮದ ಆಲೋಚನಾ ವಿಧಾನ ತ್ರಿಮೂರ್ತಿಯನ್ನು ಕೊಂಚ ನಿಷ್ಠುರ ವ್ಯಕ್ತಿಯನ್ನಾಗಿ ರೂಪಿಸಿದ್ದವು. ತನ್ನ ಸುತ್ತಲಿನ ಎಲ್ಲಾ ವಿದ್ಯಮಾನಗಳಿಗೆ ಸಾವಧಾನವಾಗಿ ಸ್ಪಂದಿಸುತ್ತಿದ್ದುದಲ್ಲದೆ, ಕಾರ್ಯಪ್ರವೃತ್ತಿಯಿಂದ ವರ್ತಿಸುವ ಬದ್ಧತೆಯನ್ನು ರೂಢಿಸಿಕೊಂಡಿದ್ದವನು. ಹಲವರಂತೆ ಹಲವು ರೀತಿಯಲ್ಲಿ ಮಾತನಾಡಿ ಮುಗಿಸದೆ, ಮುಂದೆ ಮಾಡಬೇಕಾದ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟವರ ಮುಂದೆ ಮಂಡಿಸಿ ತನ್ನ ಪಾಲಿನ ಕರ್ತವ್ಯಕ್ಕಾಗಿ ಕಾಯುತ್ತಿದ್ದವನು.

ವಿದ್ಯಾರ್ಥಿ ದೆಸೆಯಲ್ಲಿ ಕರ್ನಾಟಕ ವಿಮೋಚನಾ ರಂಗದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ತ್ರಿಮೂರ್ತಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಓದಿದವನು. ತನ್ನ ಊರಿನ ಆಸ್ತಿ, ಜಾತಿಗಳ ಪ್ರಭಾವಗಳನ್ನು ಕಡೆಗಣಿಸಿ ನೊಂದವರ ಜೊತೆಯಲ್ಲಿ ಹೆಜ್ಜೆ ಹಾಕಿದ್ದಲ್ಲದೆ, ದನಿಯಿಲ್ಲದವರ ದನಿಯಾಗಲು ಹಾತೊರೆಯುತ್ತಿದ್ದನು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರೂಪಿಸಿದ ಎಲ್ಲಾ ಹೋರಾಟಗಳ ಜೊತೆಗೇ ಸಾಗಿದ ತ್ರಿಮೂರ್ತಿ, ಅಂಬೇಡ್ಕರ್ ಓದು, ಸಂವಿಧಾನದ ತಿಳಿವಳಿಕೆ, ಕನ್ನಡ ಸಾಹಿತ್ಯ ಮೊದಲಾದ ವಿಷಯಗಳ ಕುರಿತು ಆಳವಾಗಿ ಅಧ್ಯಯನಕ್ಕೆ ತೊಡಗಿದ್ದವನು.

ಇಷ್ಟೆಲ್ಲಾ ಸಹಜ ಹೋರಾಟಗಾರನಂತೆ ಬದುಕು ಸಾಗಿಸುತ್ತಿದ್ದ ತ್ರಿಮೂರ್ತಿ ಯಾರೊಟ್ಟಿಗೂ ತನ್ನ ಮನಸ್ಸಿನ ದುಗುಡಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಸದಾ ಅಂತರ್ಮುಖಿಯಾಗಿದ್ದವನು ಕಳೆದ ಹತ್ತು ವರ್ಷಗಳಲ್ಲಿ ಹಲವು ಬದಲಾವಣೆಗಳನ್ನು ಮೈಗೂಡಿಸಿಕೊಂಡಿದ್ದ. ಪ್ರೇಮ ಪದ್ಯಗಳನ್ನೂ ಬರೆಯಲು ಪ್ರಾರಂಭಿಸಿ ನಮಗೆಲ್ಲಾ ಆಶ್ಚರ್ಯ ಉಂಟುಮಾಡಿದ್ದ.

“ಜಿಂಕೆಯ ಕಣ್ಣೆಂದೆ ಅಲ್ಲವೆಂದಳು
ಹವಳದ ತುಟಿಯೆಂದೆ ಸುಳ್ಳೆಂದಳು
ಸೋತು ನಿಂತವನ ನೋಡಿ
ಮಾತಾಡು ತಲೆಯಿಂದಲ್ಲ
ಹೃದಯದಿಂದ ಎಂದಳು”

– ಈ ಪದ್ಯ ತ್ರಿಮೂರ್ತಿ ತನ್ನೊಳಗಿನ ಗಂಡುಪ್ರಜ್ಞೆಯನ್ನು ಕೊಂದುಕೊಂಡು ಮನುಷ್ಯನಾಗುವ ಪ್ರಯೋಗ. ಗಂಡು ಎನ್ನುವುದು ಒಂದು ರೋಗವೆಂದೇ ನಂಬಿದ್ದ ಅವನು ’ಪ್ರೇಮ’ ಗಂಡನ್ನು ಮನುಷ್ಯತ್ವದ ಕಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಅರಿತಿದ್ದ. ಇದ್ದಕ್ಕಿದ್ದಂತೆ ಇಂಥಾ ಪದ್ಯಗಳನ್ನು ವಾಟ್ಸಪ್ ಮಾಡಿ ಅಚ್ಚರಿ ಮೂಡಿಸುತ್ತಿದ್ದ.

“ನೂರಾರು ಮನಸುಗಳು ದುಡಿತಾವೆ ನೋವಿಗೆ ಮದ್ದನ್ನು ಅರಿತಾವೆ” ಎಂದು ಬರೆದ. ದುಡಿಮೆ ಮತ್ತು ಅರಿಮೆ ಅಥವಾ ಅರಿಯುವಿಕೆಯನ್ನು ಕೂಡಿಸಿ ಪದ್ಯ ಕಟ್ಟಲು ಪ್ರಯತ್ನಿಸಿದ್ದ ತ್ರಿಮೂರ್ತಿಗೆ ನಿಸ್ಸಂದೇಹವಾಗಿ ಕನ್ನಡ ಕಾವ್ಯದ ಆಳದ ತಿಳಿವಳಿಕೆಯಿತ್ತು.

“ಹಿಡಿ ಅಕ್ಕಿ ತಿನ್ನುವಾ ಬಾಯಿದೋ
ದುಡಿದುಣ್ಣಲು ಬಯಸುತಿದೆ.
ನನ್ನದಲ್ಲದ್ದು ನನಗೆ
ಕಾಲಕಸ ತಿಳಿದಿರಲಿ”

ಮೇಲುನೋಟಕ್ಕೆ ಹೊಸ ಕವಿಯ ಆರಂಭದ ನುಡಿಗಳಂತೆ ಕಾಣುವ ಈ ಪದ್ಯಗಳು ಭಾರತದಂತಹ ಪರಿಸರದಲ್ಲಿ ಬದುಕುವ ವ್ಯಕ್ತಿಗಳ ಹೃದಯದ ಎಕ್ಸರೇಗಳಂತೆ ಭಾಸವಾಗುತ್ತವೆ. ತ್ರಿಮೂರ್ತಿ ಅಂತಹ ಎಲ್ಲಾ ಹೃದಯಗಳ ಎಕ್ಸರೇ ಆಗಿದ್ದವನು.

ಹೋಗುವ ಮೊದಲು ನಾಲ್ಕೈದು ತಿಂಗಳು ಕಾಣೆಯಾಗಿದ್ದವನು ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಒಕ್ಕೂಟ ಹಮ್ಮಿಕೊಂಡಿದ್ದ ’ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ದ ಪ್ರಚಾರಕ್ಕಾಗಿ ನಾವು ಮಾಡಿದ್ದ ವಾಟ್ಸಾಪ್ ಗ್ರೂಪಿಗೆ ಬಂದ. ಬಂದವನೇ ನಮ್ಮೆಲ್ಲರ ಕೆಲಸಗಳನ್ನು ಒಬ್ಬನೇ ಮಾಡಿದ. ಸೋಷಿಯಲ್ ಮೀಡಿಯಾಗೆಂದು ತಂಡ ಸಿದ್ಧಪಡಿಸಿದ ಪೋಸ್ಟರ್ ಮತ್ತು ವಿಡಿಯೋಗಳನ್ನು ಹಗಲಿರುಳೆನ್ನದೆ, ಯಾವುದೇ ಬೇಸರವಿಲ್ಲದೆ ಶೇರ್ ಮಾಡಿದ. ನಾವು ಮಾಡಿದ ವಾಟ್ಸಪ್ ಗ್ರೂಪುಗಳಲ್ಲಿ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ ನಮ್ಮ ಗಮನಕ್ಕೆ ತಂದು ಅದಕ್ಕೆ ತಕ್ಷಣವೇ ಉತ್ತರಿಸುವಂತೆ ಒತ್ತಡ ಹಾಕುತ್ತಿದ್ದ. ಫೇಸ್‌ಬುಕ್ಕಿನಲ್ಲಿ ಕೆಲವರು ಸಮಾವೇಶದ ವಿರುದ್ಧ ಬರೆದಾಗ ನೊಂದುಕೊಂಡು ಅವರನ್ನೆಲ್ಲಾ ಕರೆದು ಮಾತಾಡೋಣ ಎಂದ. ಸಮಾವೇಶದ ದಿನ ವಿಮಾನನಿಲ್ದಾಣದಿಂದ ರಮಾಬಾಯಿಯವರನ್ನು ಕರೆತರುವ ಹಾಗು ಕರೆದುಕೊಂಡು ಹೋಗಿ ಬಿಡುವ ಕೆಲಸವಹಿಸಿಕೊಂಡ. ಆ ಕೆಲಸಗಳ ನಡುವೆ ಬಾಬಾಸಾಹೇಬರ ಫೋಟೋ ಇದ್ದ ಅಂಗಿ ಹಾಕಿಕೊಂಡು ಬಿಸಿಲಲ್ಲಿ ಬೇಯುತ್ತಾ ಸಮಾವೇಶದ ಕಂಟೆಂಟ್ ಕೆಲಸ ನಿರ್ವಹಿಸಿದ.

ನಾವೆಲ್ಲಾ ಮಾತನಾಡುವ ಆದರ್ಶದಂತೆಯೇ ಬದುಕಲು ಪ್ರಯತ್ನಸುತ್ತಿದ್ದ ತ್ರಿಮೂರ್ತಿ ಅದೆಲ್ಲಿ ಸೋತ ಎಂದು ಯೋಚಿಸಲುತೊಡಗಿದರೆ ಉತ್ತರ ಸುಲಭವಲ್ಲ. ಅಥವಾ ಸಾವನ್ನು ಸೋಲು ಎಂದುಕೊಳ್ಳುವ ನಮಗೆ ಸಾಮಾಜಿಕ ಬದುಕನ್ನು, ವೈಯಕ್ತಿಕ ಬದುಕನ್ನು ಅರ್ಥಮಾಡಿಕೊಳ್ಳುವ ತರಬೇತಿಯ ಕೊರತೆಯಿರಬಹುದು. ನೆನ್ನೆ ಮೊನ್ನೆ ನಮ್ಮ ಜೊತೆ ಇದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕಣ್ಮರೆಯಾದನಲ್ಲಾ ಎಂಬ ಆಘಾತ ನಮ್ಮೊಳಗೆ ಅಸಂಬದ್ಧ ತಾತ್ವಿಕ ಜಿಜ್ಞಾಸೆಗಳನ್ನು ಹುಟ್ಟುಹಾಕಬಹುದು. ಅಥವಾ ಸಾವು ಸುಲಭ ಬದುಕು ಕಷ್ಟ ಎಂಬ ಷರಾ ಬರೆದು ’ಈ ಕೆಟ್ಟ ಜಗತ್ತಿನಲ್ಲಿ ಇದ್ದು ನೋಯುವುದಕ್ಕಿಂತ ಎದ್ದು ಹೋಗುವುದೇ ಮೇಲು’ ಎಂದುಕೊಂಡು ಬದುಕಿಸಿಕೊಳ್ಳಲಾಗದ ನಮ್ಮ ಅಸಹಾಯಕತೆಗೆ ತಾತ್ವಿಕತೆಯ ಮಾಸ್ಕ್ ಹಾಕಿಬಿಡಬಹುದು. ಆದರೆ, ಇದರೆಲ್ಲದರಾಚೆಗೆ ತ್ರಿಮೂರ್ತಿ ಇಲ್ಲ ಎಂಬ ಸತ್ಯ ಅದೆಷ್ಟು ಭಯಂಕರವಾದ ಸತ್ಯವನ್ನು ನಮ್ಮೆದೆಗೆ ಎಸೆಯುತ್ತದೆಂದರೆ, ನಮ್ಮಗಳ ಜೀವಂತಿಕೆಯ ಮೇಲೆ ಗುಮಾನಿ ಹುಟ್ಟಿಸುವಷ್ಟು.

ದಶಕದ ಹಿಂದೆ ಗೆಳೆಯ ಪ್ರಶಾಂತ ಇಂಥದ್ದೇ ನಿರ್ಧಾರ ಮಾಡಿದಾಗ, ಗೆಳೆಯ ಎನ್.ಕೆ.ಹನುಮಂತಯ್ಯ ಹೀಗೇ ಎದ್ದು ಹೋದಾಗ ಅಕ್ಷರಶಃ ಅದುರಿಹೋಗಿದ್ದ ನನ್ನ ದೇಹ ಮತ್ತು ಮನಸ್ಸು ತ್ರಿಮೂರ್ತಿಯ ಸಾವಿನಿಂದ ಜಡ್ಡುಗಟ್ಟಿದಂತೆನಿಸಿ ಭಯವಾಗುತ್ತದೆ. ಅವನ ಗೈರುಹಾಜರಿಯನ್ನು ನನ್ನ ಸುತ್ತಲಿನ ಯಾರಿಗೂ ಸಹಿಸಲಾಗುತ್ತಿಲ್ಲ. ದಲಿತ ಸಂಘಟನೆಗಳ ಒಗ್ಗಟ್ಟು, ಕೋಮುವಾದದ ವಿರುದ್ಧದ ಜನರ ಸಿಟ್ಟು ಅವನನ್ನು ಉಳಿಸಬೇಕಿತ್ತು. ಅದು ಅವನ ಕನಸಾಗಿತ್ತು. ಹೊರಗೆ ಕನ್ನಡಿಯ ಹೊತ್ತು ಓಡಾಡುತ್ತಿದ್ದ ತ್ರಿಮೂರ್ತಿ ಆ ಕನ್ನಡಿಯೊಳಗೇ ಲಯವಾಗಿಬಿಟ್ಟ. ಆ ಕನ್ನಡಿಗಳೀಗ ನಮ್ಮನ್ನು ಪ್ರತಿಬಿಂಬಿಸುತ್ತಿವೆ. ಮತ್ತೆ ಅವನೇ ಬರೆದ ಸಾಲುಗಳು ಚುಚ್ಚುತ್ತಿವೆ:

“ಆ ವಾದ ಈ ವಾದ
ಸಿದ್ಧಾಂತ ಮುಗ್ದಾಂತ ಅಂತಾವೆ
ಮಕ್ ಮಕ ನೋಡ್ಕಂಡು
ಉರ್ಕಂತಾವೆ..
ಬೆನ್ ಬೆನ್‌ಗೆ ಚೂರಿನಾ
ಇರ್ಕಂತಾವೆ…”

“ಸತ್ಯವ ಹೇಳಿ ಸಿಕ್ಕಿಬಿದ್ದಿದ್ದೇನೆ
ಮನದೊಳಗೆ..
ಮುದವಿದೆ, ಭೀತಿಯಿದೆ
ಜಗದ ಹಳದಿಗಣ್ಣುಗಳ ಬಗ್ಗೆ ಭಯವಿದೆ
ಮನಸಿನಾಟವ ಹೃದಯ ಒಪ್ಪುತ್ತಿಲ್ಲ
ನಿಜವೇನೆಂದು ತಿಳಿಯುತ್ತಿಲ್ಲ”

ಹುಲಿಕುಂಟೆ ಮೂರ್ತಿ
ಕನ್ನಡ ಪಾಧ್ಯಾಪಕರು, ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...