Homeಮುಖಪುಟತ್ರಿಮೂರ್ತಿ ಎಂಬ ಕನ್ನಡಿ

ತ್ರಿಮೂರ್ತಿ ಎಂಬ ಕನ್ನಡಿ

- Advertisement -
- Advertisement -

ತನ್ನ ಬದುಕಿನುದ್ದಕ್ಕೂ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡು, ಮೈಮನಸ್ಸುಗಳ ತುಂಬಾ ಕನಸುಗಳನ್ನು ಹೊತ್ತು ತಿರುಗುತ್ತಿದ್ದ ಗೆಳೆಯ ತ್ರಿಮೂರ್ತಿ ಕಣ್ಮರೆಯಾಗಿ ತಿಂಗಳಾಗಿದೆ. ಈ ನಡುವೆ ನಾವು ಬದುಕುತ್ತಿರುವ ಸಮಾಜ ಹಲವು ಹೊರಳುಗಳಿಗೆ ಪಕ್ಕಾಗಿ ಲೆಕ್ಕವಿಟ್ಟುಕೊಳ್ಳಲಾಗದಷ್ಟು ಬದಲಾಗಿದೆ. ಅಡುಗೆಗಾಗಿ ಬಳಸುವ ಗ್ಯಾಸ್ ಬೆಲೆ ಮತ್ತೊಮ್ಮೆ ಜಾಸ್ತಿಯಾಗಿದೆ; ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತರ ಮೇಲಿನ ದೌರ್ಜನ್ಯಗಳು ಸಮಾಜದ ಕುರುಡು, ಕಿವುಡನ್ನು ಎತ್ತಿ ತೋರಿಸುತ್ತಿವೆ. ತ್ರಿಮೂರ್ತಿ ಹೋದ ದಿನದಿಂದ ಈದಿನದವರೆಗೂ ಅವನು ಇದಕ್ಕೆಲ್ಲಾ ಹೇಗೆ ಪ್ರತಿಕ್ರಿಯಿಸುತ್ತಿದ್ದ ಎನ್ನುವ ಲೆಕ್ಕಾಚಾರ ಮನಸ್ಸಿನಲ್ಲಿ ಸುಳಿದು, ತನ್ನ ಅಷ್ಟಗಲ ನಗುವಿಗೆ ಕೆನ್ನೆ ಮೇಲೆ ಇನ್ವೈಟೆಡ್ ಕಾಮಾ ಹಾಕುತ್ತಿದ್ದ ಅವನ ಮುಖ ನೆನಪಾಗಿ ಪಿಚ್ಚೆನಿಸುತ್ತದೆ. ಮತ್ತೆ ಆ ಕ್ಷಣಗಳೆಲ್ಲಾ ಎದೆಯಲ್ಲಿ ಆತಂಕದ ಬೀಜ ನೆಟ್ಟ ಅನುಭವಗಳಾಗಿ ಮಾರ್ಪಾಡಾಗುತ್ತವೆ.

ಕರ್ನಾಟಕದ ಪ್ರಬಲ ಸಮುದಾಯವೊಂದರಲ್ಲಿ ಹುಟ್ಟಿದ ತ್ರಿಮೂರ್ತಿ ತನ್ನ ಸಾವಿನ ಕ್ಷಣದವರೆಗೂ ನೊಂದವರೊಂದಿಗೆ ಬದುಕಿದವನು. ಅಂದರೆ, ನೆಲದ ಕಾರುಣ್ಯವನ್ನು ಕರುಳೊಳಗಿಟ್ಟುಕೊಂಡು ಉಂಡ ತುತ್ತಿಗೆ ಲೆಕ್ಕ ಬರೆದಿಕ್ಕುವ ಹಾಗೂ ಈ ನೆಲದ ದನಿಗೆ ಮೈಯ್ಯಾನಿಸಿ ಬದುಕುವ ಕಸುವು ಕಟ್ಟಿಕೊಂಡವನು. ಬಿಎ ಓದುವಾಗಿಂದ ಹೋರಾಟದ ಬದುಕಿಗೆ ಬಿದ್ದು, ದಲಿತ, ರೈತ, ಮಹಿಳಾ, ಕಾರ್ಮಿಕ, ಅಲ್ಪಸಂಖ್ಯಾತ ಹೋರಾಟಗಳಲ್ಲಿ ಕಂಠಮಟ್ಟ ಕೆಲಸ ಮಾಡಿ ಹೆಸರಿಗೆ ಹಾತೊರೆಯದೆ, ಉಸಿರಿಗೆ ಅರ್ಥ ತಂದವನು. ದಲಿತ- ದಮನಿತರ ಹೋರಾಟ ಕುರಿತ ನಿಖರ ತಿಳಿವಳಿಕೆ, ಬಾಬಾಸಾಹೇಬ್ ಅಂಬೇಡ್ಕರರ ನೋಟಕ್ರಮದ ಆಲೋಚನಾ ವಿಧಾನ ತ್ರಿಮೂರ್ತಿಯನ್ನು ಕೊಂಚ ನಿಷ್ಠುರ ವ್ಯಕ್ತಿಯನ್ನಾಗಿ ರೂಪಿಸಿದ್ದವು. ತನ್ನ ಸುತ್ತಲಿನ ಎಲ್ಲಾ ವಿದ್ಯಮಾನಗಳಿಗೆ ಸಾವಧಾನವಾಗಿ ಸ್ಪಂದಿಸುತ್ತಿದ್ದುದಲ್ಲದೆ, ಕಾರ್ಯಪ್ರವೃತ್ತಿಯಿಂದ ವರ್ತಿಸುವ ಬದ್ಧತೆಯನ್ನು ರೂಢಿಸಿಕೊಂಡಿದ್ದವನು. ಹಲವರಂತೆ ಹಲವು ರೀತಿಯಲ್ಲಿ ಮಾತನಾಡಿ ಮುಗಿಸದೆ, ಮುಂದೆ ಮಾಡಬೇಕಾದ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟವರ ಮುಂದೆ ಮಂಡಿಸಿ ತನ್ನ ಪಾಲಿನ ಕರ್ತವ್ಯಕ್ಕಾಗಿ ಕಾಯುತ್ತಿದ್ದವನು.

ವಿದ್ಯಾರ್ಥಿ ದೆಸೆಯಲ್ಲಿ ಕರ್ನಾಟಕ ವಿಮೋಚನಾ ರಂಗದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ತ್ರಿಮೂರ್ತಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಓದಿದವನು. ತನ್ನ ಊರಿನ ಆಸ್ತಿ, ಜಾತಿಗಳ ಪ್ರಭಾವಗಳನ್ನು ಕಡೆಗಣಿಸಿ ನೊಂದವರ ಜೊತೆಯಲ್ಲಿ ಹೆಜ್ಜೆ ಹಾಕಿದ್ದಲ್ಲದೆ, ದನಿಯಿಲ್ಲದವರ ದನಿಯಾಗಲು ಹಾತೊರೆಯುತ್ತಿದ್ದನು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರೂಪಿಸಿದ ಎಲ್ಲಾ ಹೋರಾಟಗಳ ಜೊತೆಗೇ ಸಾಗಿದ ತ್ರಿಮೂರ್ತಿ, ಅಂಬೇಡ್ಕರ್ ಓದು, ಸಂವಿಧಾನದ ತಿಳಿವಳಿಕೆ, ಕನ್ನಡ ಸಾಹಿತ್ಯ ಮೊದಲಾದ ವಿಷಯಗಳ ಕುರಿತು ಆಳವಾಗಿ ಅಧ್ಯಯನಕ್ಕೆ ತೊಡಗಿದ್ದವನು.

ಇಷ್ಟೆಲ್ಲಾ ಸಹಜ ಹೋರಾಟಗಾರನಂತೆ ಬದುಕು ಸಾಗಿಸುತ್ತಿದ್ದ ತ್ರಿಮೂರ್ತಿ ಯಾರೊಟ್ಟಿಗೂ ತನ್ನ ಮನಸ್ಸಿನ ದುಗುಡಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಸದಾ ಅಂತರ್ಮುಖಿಯಾಗಿದ್ದವನು ಕಳೆದ ಹತ್ತು ವರ್ಷಗಳಲ್ಲಿ ಹಲವು ಬದಲಾವಣೆಗಳನ್ನು ಮೈಗೂಡಿಸಿಕೊಂಡಿದ್ದ. ಪ್ರೇಮ ಪದ್ಯಗಳನ್ನೂ ಬರೆಯಲು ಪ್ರಾರಂಭಿಸಿ ನಮಗೆಲ್ಲಾ ಆಶ್ಚರ್ಯ ಉಂಟುಮಾಡಿದ್ದ.

“ಜಿಂಕೆಯ ಕಣ್ಣೆಂದೆ ಅಲ್ಲವೆಂದಳು
ಹವಳದ ತುಟಿಯೆಂದೆ ಸುಳ್ಳೆಂದಳು
ಸೋತು ನಿಂತವನ ನೋಡಿ
ಮಾತಾಡು ತಲೆಯಿಂದಲ್ಲ
ಹೃದಯದಿಂದ ಎಂದಳು”

– ಈ ಪದ್ಯ ತ್ರಿಮೂರ್ತಿ ತನ್ನೊಳಗಿನ ಗಂಡುಪ್ರಜ್ಞೆಯನ್ನು ಕೊಂದುಕೊಂಡು ಮನುಷ್ಯನಾಗುವ ಪ್ರಯೋಗ. ಗಂಡು ಎನ್ನುವುದು ಒಂದು ರೋಗವೆಂದೇ ನಂಬಿದ್ದ ಅವನು ’ಪ್ರೇಮ’ ಗಂಡನ್ನು ಮನುಷ್ಯತ್ವದ ಕಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಅರಿತಿದ್ದ. ಇದ್ದಕ್ಕಿದ್ದಂತೆ ಇಂಥಾ ಪದ್ಯಗಳನ್ನು ವಾಟ್ಸಪ್ ಮಾಡಿ ಅಚ್ಚರಿ ಮೂಡಿಸುತ್ತಿದ್ದ.

“ನೂರಾರು ಮನಸುಗಳು ದುಡಿತಾವೆ ನೋವಿಗೆ ಮದ್ದನ್ನು ಅರಿತಾವೆ” ಎಂದು ಬರೆದ. ದುಡಿಮೆ ಮತ್ತು ಅರಿಮೆ ಅಥವಾ ಅರಿಯುವಿಕೆಯನ್ನು ಕೂಡಿಸಿ ಪದ್ಯ ಕಟ್ಟಲು ಪ್ರಯತ್ನಿಸಿದ್ದ ತ್ರಿಮೂರ್ತಿಗೆ ನಿಸ್ಸಂದೇಹವಾಗಿ ಕನ್ನಡ ಕಾವ್ಯದ ಆಳದ ತಿಳಿವಳಿಕೆಯಿತ್ತು.

“ಹಿಡಿ ಅಕ್ಕಿ ತಿನ್ನುವಾ ಬಾಯಿದೋ
ದುಡಿದುಣ್ಣಲು ಬಯಸುತಿದೆ.
ನನ್ನದಲ್ಲದ್ದು ನನಗೆ
ಕಾಲಕಸ ತಿಳಿದಿರಲಿ”

ಮೇಲುನೋಟಕ್ಕೆ ಹೊಸ ಕವಿಯ ಆರಂಭದ ನುಡಿಗಳಂತೆ ಕಾಣುವ ಈ ಪದ್ಯಗಳು ಭಾರತದಂತಹ ಪರಿಸರದಲ್ಲಿ ಬದುಕುವ ವ್ಯಕ್ತಿಗಳ ಹೃದಯದ ಎಕ್ಸರೇಗಳಂತೆ ಭಾಸವಾಗುತ್ತವೆ. ತ್ರಿಮೂರ್ತಿ ಅಂತಹ ಎಲ್ಲಾ ಹೃದಯಗಳ ಎಕ್ಸರೇ ಆಗಿದ್ದವನು.

ಹೋಗುವ ಮೊದಲು ನಾಲ್ಕೈದು ತಿಂಗಳು ಕಾಣೆಯಾಗಿದ್ದವನು ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಒಕ್ಕೂಟ ಹಮ್ಮಿಕೊಂಡಿದ್ದ ’ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ದ ಪ್ರಚಾರಕ್ಕಾಗಿ ನಾವು ಮಾಡಿದ್ದ ವಾಟ್ಸಾಪ್ ಗ್ರೂಪಿಗೆ ಬಂದ. ಬಂದವನೇ ನಮ್ಮೆಲ್ಲರ ಕೆಲಸಗಳನ್ನು ಒಬ್ಬನೇ ಮಾಡಿದ. ಸೋಷಿಯಲ್ ಮೀಡಿಯಾಗೆಂದು ತಂಡ ಸಿದ್ಧಪಡಿಸಿದ ಪೋಸ್ಟರ್ ಮತ್ತು ವಿಡಿಯೋಗಳನ್ನು ಹಗಲಿರುಳೆನ್ನದೆ, ಯಾವುದೇ ಬೇಸರವಿಲ್ಲದೆ ಶೇರ್ ಮಾಡಿದ. ನಾವು ಮಾಡಿದ ವಾಟ್ಸಪ್ ಗ್ರೂಪುಗಳಲ್ಲಿ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ ನಮ್ಮ ಗಮನಕ್ಕೆ ತಂದು ಅದಕ್ಕೆ ತಕ್ಷಣವೇ ಉತ್ತರಿಸುವಂತೆ ಒತ್ತಡ ಹಾಕುತ್ತಿದ್ದ. ಫೇಸ್‌ಬುಕ್ಕಿನಲ್ಲಿ ಕೆಲವರು ಸಮಾವೇಶದ ವಿರುದ್ಧ ಬರೆದಾಗ ನೊಂದುಕೊಂಡು ಅವರನ್ನೆಲ್ಲಾ ಕರೆದು ಮಾತಾಡೋಣ ಎಂದ. ಸಮಾವೇಶದ ದಿನ ವಿಮಾನನಿಲ್ದಾಣದಿಂದ ರಮಾಬಾಯಿಯವರನ್ನು ಕರೆತರುವ ಹಾಗು ಕರೆದುಕೊಂಡು ಹೋಗಿ ಬಿಡುವ ಕೆಲಸವಹಿಸಿಕೊಂಡ. ಆ ಕೆಲಸಗಳ ನಡುವೆ ಬಾಬಾಸಾಹೇಬರ ಫೋಟೋ ಇದ್ದ ಅಂಗಿ ಹಾಕಿಕೊಂಡು ಬಿಸಿಲಲ್ಲಿ ಬೇಯುತ್ತಾ ಸಮಾವೇಶದ ಕಂಟೆಂಟ್ ಕೆಲಸ ನಿರ್ವಹಿಸಿದ.

ನಾವೆಲ್ಲಾ ಮಾತನಾಡುವ ಆದರ್ಶದಂತೆಯೇ ಬದುಕಲು ಪ್ರಯತ್ನಸುತ್ತಿದ್ದ ತ್ರಿಮೂರ್ತಿ ಅದೆಲ್ಲಿ ಸೋತ ಎಂದು ಯೋಚಿಸಲುತೊಡಗಿದರೆ ಉತ್ತರ ಸುಲಭವಲ್ಲ. ಅಥವಾ ಸಾವನ್ನು ಸೋಲು ಎಂದುಕೊಳ್ಳುವ ನಮಗೆ ಸಾಮಾಜಿಕ ಬದುಕನ್ನು, ವೈಯಕ್ತಿಕ ಬದುಕನ್ನು ಅರ್ಥಮಾಡಿಕೊಳ್ಳುವ ತರಬೇತಿಯ ಕೊರತೆಯಿರಬಹುದು. ನೆನ್ನೆ ಮೊನ್ನೆ ನಮ್ಮ ಜೊತೆ ಇದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕಣ್ಮರೆಯಾದನಲ್ಲಾ ಎಂಬ ಆಘಾತ ನಮ್ಮೊಳಗೆ ಅಸಂಬದ್ಧ ತಾತ್ವಿಕ ಜಿಜ್ಞಾಸೆಗಳನ್ನು ಹುಟ್ಟುಹಾಕಬಹುದು. ಅಥವಾ ಸಾವು ಸುಲಭ ಬದುಕು ಕಷ್ಟ ಎಂಬ ಷರಾ ಬರೆದು ’ಈ ಕೆಟ್ಟ ಜಗತ್ತಿನಲ್ಲಿ ಇದ್ದು ನೋಯುವುದಕ್ಕಿಂತ ಎದ್ದು ಹೋಗುವುದೇ ಮೇಲು’ ಎಂದುಕೊಂಡು ಬದುಕಿಸಿಕೊಳ್ಳಲಾಗದ ನಮ್ಮ ಅಸಹಾಯಕತೆಗೆ ತಾತ್ವಿಕತೆಯ ಮಾಸ್ಕ್ ಹಾಕಿಬಿಡಬಹುದು. ಆದರೆ, ಇದರೆಲ್ಲದರಾಚೆಗೆ ತ್ರಿಮೂರ್ತಿ ಇಲ್ಲ ಎಂಬ ಸತ್ಯ ಅದೆಷ್ಟು ಭಯಂಕರವಾದ ಸತ್ಯವನ್ನು ನಮ್ಮೆದೆಗೆ ಎಸೆಯುತ್ತದೆಂದರೆ, ನಮ್ಮಗಳ ಜೀವಂತಿಕೆಯ ಮೇಲೆ ಗುಮಾನಿ ಹುಟ್ಟಿಸುವಷ್ಟು.

ದಶಕದ ಹಿಂದೆ ಗೆಳೆಯ ಪ್ರಶಾಂತ ಇಂಥದ್ದೇ ನಿರ್ಧಾರ ಮಾಡಿದಾಗ, ಗೆಳೆಯ ಎನ್.ಕೆ.ಹನುಮಂತಯ್ಯ ಹೀಗೇ ಎದ್ದು ಹೋದಾಗ ಅಕ್ಷರಶಃ ಅದುರಿಹೋಗಿದ್ದ ನನ್ನ ದೇಹ ಮತ್ತು ಮನಸ್ಸು ತ್ರಿಮೂರ್ತಿಯ ಸಾವಿನಿಂದ ಜಡ್ಡುಗಟ್ಟಿದಂತೆನಿಸಿ ಭಯವಾಗುತ್ತದೆ. ಅವನ ಗೈರುಹಾಜರಿಯನ್ನು ನನ್ನ ಸುತ್ತಲಿನ ಯಾರಿಗೂ ಸಹಿಸಲಾಗುತ್ತಿಲ್ಲ. ದಲಿತ ಸಂಘಟನೆಗಳ ಒಗ್ಗಟ್ಟು, ಕೋಮುವಾದದ ವಿರುದ್ಧದ ಜನರ ಸಿಟ್ಟು ಅವನನ್ನು ಉಳಿಸಬೇಕಿತ್ತು. ಅದು ಅವನ ಕನಸಾಗಿತ್ತು. ಹೊರಗೆ ಕನ್ನಡಿಯ ಹೊತ್ತು ಓಡಾಡುತ್ತಿದ್ದ ತ್ರಿಮೂರ್ತಿ ಆ ಕನ್ನಡಿಯೊಳಗೇ ಲಯವಾಗಿಬಿಟ್ಟ. ಆ ಕನ್ನಡಿಗಳೀಗ ನಮ್ಮನ್ನು ಪ್ರತಿಬಿಂಬಿಸುತ್ತಿವೆ. ಮತ್ತೆ ಅವನೇ ಬರೆದ ಸಾಲುಗಳು ಚುಚ್ಚುತ್ತಿವೆ:

“ಆ ವಾದ ಈ ವಾದ
ಸಿದ್ಧಾಂತ ಮುಗ್ದಾಂತ ಅಂತಾವೆ
ಮಕ್ ಮಕ ನೋಡ್ಕಂಡು
ಉರ್ಕಂತಾವೆ..
ಬೆನ್ ಬೆನ್‌ಗೆ ಚೂರಿನಾ
ಇರ್ಕಂತಾವೆ…”

“ಸತ್ಯವ ಹೇಳಿ ಸಿಕ್ಕಿಬಿದ್ದಿದ್ದೇನೆ
ಮನದೊಳಗೆ..
ಮುದವಿದೆ, ಭೀತಿಯಿದೆ
ಜಗದ ಹಳದಿಗಣ್ಣುಗಳ ಬಗ್ಗೆ ಭಯವಿದೆ
ಮನಸಿನಾಟವ ಹೃದಯ ಒಪ್ಪುತ್ತಿಲ್ಲ
ನಿಜವೇನೆಂದು ತಿಳಿಯುತ್ತಿಲ್ಲ”

ಹುಲಿಕುಂಟೆ ಮೂರ್ತಿ
ಕನ್ನಡ ಪಾಧ್ಯಾಪಕರು, ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...