Homeಮುಖಪುಟಕುಟುಂಬದೊಳಗಿನ ರಚನೆಗೂ, ಸಮಾಜದ ಒಡಕುಗಳಿಗೂ ಇರುವ ನಿಕಟ ಸಂಬಂಧ ಶೋಧಿಸುವ ಮೂನಿಯಾ ಅಕ್ಲ್‌ಳ ’ಕಾಸ್ಟ ಬ್ರಾವ,...

ಕುಟುಂಬದೊಳಗಿನ ರಚನೆಗೂ, ಸಮಾಜದ ಒಡಕುಗಳಿಗೂ ಇರುವ ನಿಕಟ ಸಂಬಂಧ ಶೋಧಿಸುವ ಮೂನಿಯಾ ಅಕ್ಲ್‌ಳ ’ಕಾಸ್ಟ ಬ್ರಾವ, ಲೆಬನಾನ್’

- Advertisement -
- Advertisement -

ಈಬಾರಿ ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಲವಾರು ಕಾರಣಗಳಿಂದ ಬಹಳ ನಿರಾಶಾದಾಯಕವಾಗಿತ್ತು. ಸಿನಿಮಾ ಪ್ರದರ್ಶನಕ್ಕಿಂತ ಎರಡು ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಿತ್ತು. ಮೊದಲೆರಡು ದಿನ ಕೋವಿಡ್ ಮಾರ್ಗಸೂಚಿ ಪ್ರಕಾರ ಕೇವಲ 50% ಆಸನಗಳಿಗಷ್ಟೆ ಅವಕಾಶ ಇದ್ದುದ್ದರಿಂದ ಬುಕ್ಕಿಂಗ್‌ಗೆ ಹೆಚ್ಚು ಅವಕಾಶ ಇರಲಿಲ್ಲ. ಬುಕ್ಕಿಂಗ್ ಇಲ್ಲದವರಿಗೆ ಸರದಿಯಲ್ಲಿ ಕಾಯ್ದರೂ ಸಿನಿಮಾ ನೋಡಲು ಅವಕಾಶ ಕಲ್ಪಿಸಿರಲಿಲ್ಲ. ಹಲವಾರು ಕೆಟಗರಿಗಳ ಕಾರಣವಾಗಿ ಪ್ರಪಂಚದ ಸಮಕಾಲೀನ ಸಿನಿಮಾಗಳು ಹೆಚ್ಚು ಇರಲಿಲ್ಲ. ಈ ನಿರಾಶೆಗಳ ನಡುವೆಯೂ ಒಂದಷ್ಟು ಸಿನಿಮಾಗಳು ಹೊಸ ಅನುಭವವನ್ನ ನೀಡಿದವು. ಅಂಥವುಗಳಲ್ಲಿ ಒಂದು ಲೆಬನಾನ್ ನಿರ್ದೇಶಕಿ ಮೂನಿಯಾ ಅಕ್ಲ್ ಅವರ ’ಕಾಸ್ಟ ಬ್ರಾವ, ಲೆಬನಾನ್’ (Costa Brava, Lebanon).

ವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ನಮ್ಮನ್ನಾಳುವ ಪ್ರಭುತ್ವದ ವಿರುದ್ಧ ಪ್ರತಿನಿತ್ಯ ನಾವು ನಮ್ಮ ಧ್ವನಿಯನ್ನು ದಾಖಲಿಸಿರುತ್ತೇವೆ. ಆದರೆ, ಇದೇ ಮೌಲ್ಯಗಳು ನಮ್ಮ ಕುಟುಂಬದೊಳಗೆ ಇದೆಯೇ ಎಂದು ಒಮ್ಮೆ ನೋಡಿಕೊಂಡರೆ ಹೇಗಿರುತ್ತೆ? ಭಾರತದಂತ ದೇಶದಲ್ಲಿ ಪುರುಷ ಪ್ರಧಾನ ಮೌಲ್ಯಗಳು ಆಳವಾಗಿ ಬೇರೂರಿರುವ ಸಮಾಜದೊಳಗೆ ಈ ರೀತಿಯ ವೈರುಧ್ಯ ಬಹಳ ಸಹಜ ಅಂತ ನಾವು ಭಾವಿಸಿಬಿಟ್ಟಿದ್ದೇವೆಯೇ? ನಾವು ಯಾವುದನ್ನು ಕುಟುಂಬದಿಂದಾಚೆ ಪ್ರತಿಪಾದಿಸುತ್ತಿರುತ್ತೇವೆ ಅದು ನಮ್ಮ ಕುಟುಂಬದ ಒಳಗೂ ಇರಬೇಕಲ್ಲವೇ? ಇಲ್ಲವಾದರೆ ಆ ಮೌಲ್ಯಗಳನ್ನ ನಾವು ಸರಿಯಾಗಿ ಗ್ರಹಿಸಿಲ್ಲ ಅಥವಾ ಆ ಮೌಲ್ಯಗಳಲ್ಲಿ ನಮಗೆ ಆಳವಾದ ನಂಬಿಕೆಯೇ ಇಲ್ಲವೆಂದೆ ಅರ್ಥ. ಕುಟುಂಬದೊಳಗಿನ ರಚನೆಯನ್ನು ಸರಿಯಾಗಿ ಗ್ರಹಿಸಬಹುದಾಗಿದ್ದರೆ ನಾವು ಸಮಾಜದ ಒಡಕುಗಳನ್ನು ಅರ್ಥ ಮಾಡಿಕೊಳ್ಳಬಹುದು.

ಮೂನಿಯಾ ಅಕ್ಲ್

ಮೂನಿಯಾ ಅಕ್ಲ್ ತಮ್ಮ ’ಕಾಸ್ಟ ಬ್ರಾವ, ಲೆಬನಾನ್’ನಲ್ಲಿ ವೈಯಕ್ತಿಕ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ವಿರುದ್ಧವಾಗಿ ನಮ್ಮ ಬದುಕಿನಲ್ಲಿ ಪ್ರಭುತ್ವ ಹೇಗೆ ನಡೆದುಕೊಳ್ಳುತ್ತದೆ ಎಂದು ಹೇಳಲು ಪ್ರಾರಂಭಿಸಿ ಇದೇ ಸಂಗತಿಗಳು ಕುಟುಂಬದ ಒಳಗೆ ಉಂಟು ಮಾಡುವ ಸಂಘರ್ಷಗಳನ್ನು ಬಹಳ ಪರಿಣಾಮಕಾರಿಯಾಗಿ
ಮತ್ತು ಮನಮುಟ್ಟುವಂತೆ ದೃಶ್ಯಗಳಲ್ಲಿ ಕಟ್ಟಿಕೊಡುತ್ತಾರೆ. ಮೂನಿಯಾ ಅಕ್ಲ್ ಅವರ ಈ ಸಿನಿಮಾವನ್ನ ಫ್ರೆಂಚ್ ನಿರ್ದೇಶಕಿ ಚಂಟಲ್ ಅಕರ್ಮೆನ್ ಅವರ ಅಥವಾ ಜಾರ್ಜಿಯಾದ ನಾನ ಇಕೇವ್‌ಟಿಮಿಶ್‌ವಿಲಿ ಅವರ ಸಿನಿಮಾಗಳಲ್ಲಿ ಬರುವ ಅಸ್ತಿತ್ವದ ಬಗೆಗಿನ ಆಳದ ತಾತ್ವಿಕ ಸಂಘರ್ಷಗಳ ಅಭಿವ್ಯಕ್ತಿಗೆ ಹೋಲಿಸುವುದು ಎಷ್ಟು ಸಮಂಜಸವೋ ತಿಳಿಯದು. ಅಕ್ಲ್ ಇವರಷ್ಟು ಆಳವಾಗಿ ನಮ್ಮನ್ನು ಕಲಕದೇ ಇದ್ದರೂ ಅಲೋಚನೆಗೆ ಪ್ರೇರೇಪಿಸುವುದಂತು ಸತ್ಯ.

ಲೆಬನಾನ್ ರಾಜಧಾನಿ ಬೆರೂಟ್ ನಗರದಲ್ಲಿ 2015ರಲ್ಲಿ ಉಂಟಾಗಿದ್ದ ಕಸ ವಿಲೇವಾರಿಗೆ ಸಂಬಂಧಿಸಿದ ಬಿಕ್ಕಟ್ಟು ಸಿನಿಮಾದ ಕಥಾವಸ್ತು. ಅಕ್ಲ್ ಅವರ ಮಾತುಗಳಲ್ಲೆ ಹೇಳುವುದಾದರೆ ’ನಾನು ಬೆಳೆದದ್ದು ಸುದೀರ್ಘ 15 ವರ್ಷಗಳ ಸಿವಿಲ್ ವಾರ್ ನಂತರದ ಪರಿಸರದಲ್ಲಿ. ಇಲ್ಲಿ ನಾವು ಯಾವಾಗಲು ಕೆಲವು ವ್ಯಕ್ತಿಗಳನ್ನೋ ಅಥವಾ ಕೆಲವು ರಾಜಕೀಯ ಪಕ್ಷಗಳನ್ನೋ ಹಿಂಬಾಲಿಸುವುದು ಮುಖ್ಯವಾಗುತ್ತಿತ್ತು. ಆದರೆ ನಾನು ಇದಕ್ಕೆ ಅಂಟಿಕೊಳ್ಳಲಿಲ್ಲ. ನನಗಿನ್ನೂ ನೆನಪಿದೆ, ಈ ನಗರದಲ್ಲಿ ಉಂಟಾದ ಕಸದ ಬಿಕ್ಕಟ್ಟು ನನಗೆ ಈ ರಸ್ತೆಗಳು ನಮ್ಮ ತಲೆಮಾರಿಗೆ ಸೇರಿದ್ದು ಅನಿಸಿತು. ದೇಶದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಬಹಳ ಇದು ದೊಡ್ಡ ರೂಪಕ. ಇದು ಕೇವಲ ಪರಿಸರದ ವಿಪತ್ತು ಮಾತ್ರವೇ ಅಲ್ಲ ಇದು ನಮ್ಮ ದೇಶದ ಪರಿಸ್ಥಿತಿಯ ಪ್ರತಿಬಿಂಬ’.

ಒಂದು ಕಾಲದಲ್ಲಿ ರಾಜಕೀಯ ಚಳವಳಿಗಾರರಾಗಿದ್ದ ಮತ್ತು ಆ ಕಾರಣವಾಗಿ ಭೇಟಿಯಾಗಿ ಪ್ರೀತಿಸಿ ವಿವಾಹವಾಗಿದ್ದ ವಾಲಿದ್ ಮತ್ತು ಸೊರಯರಿಗೆ ಇಬ್ಬರು ಮಕ್ಕಳು ತಾಲ ಮತ್ತು ರಿಮ್. ಇವರ ಜತೆಗೆ ವಾಲಿದ್‌ನ ತಾಯಿ ಸಿನಿಮಾದ ಪ್ರಮುಖ ಪಾತ್ರಧಾರಿಗಳು. ವಾಲಿದ್ ಬೆರೂಟ್ ನಗರದ ಕೆಟ್ಟ ಪರಿಸರದಿಂದ ಬೇಸತ್ತಿರುವುದರಿಂದ, ತಾಲ ಹುಟ್ಟಿದ ಮೇಲೆ ಕುಟುಂಬವನ್ನು ನಗರದಿಂದ ಬಹಳ ದೂರದಲ್ಲಿರುವ, ತನ್ನ ತಂಗಿಯ ವಾರಸುದಾರಿಕೆಯಲ್ಲಿದ್ದ ಒಂದು ನಿರ್ಜನ ಪ್ರದೇಶಕ್ಕೆ ಕರೆತಂದು ನೆಲೆಸುತ್ತಾನೆ. ಸಮಾಜಕ್ಕೆ ದೂರವಾಗಿ ತಮ್ಮದೇ ಫಾರ್ಮ್ ಹೌಸ್‌ನಲ್ಲಿ ಕೃಷಿ, ಪ್ರಾಣಿ ಸಾಕಾಣಿಕೆ ಇನ್ನೂ ಹಲವು ಹವ್ಯಾಸಗಳೊಂದಿಗೆ ಬಹಳ ಸ್ವತಂತ್ರವಾಗಿ ಎಲೈಟ್ ಮನೋಭಾವದಿಂದ ಬದುಕುತ್ತಿದ್ದಾರೆ. ಇಲ್ಲಿನ ಅವರ ಕ್ರಿಯೆಗಳು ಪ್ರತಿಯೊಬ್ಬರಿಗೂ ತಮ್ಮದೇ ಸ್ವಾತಂತ್ರ್ಯವಿದೆ ಎಂದು ತಿಳಿಸುತ್ತದೆ. ತುಂಬಾ ಕಿರಿಯವಳಾದ ರಿಮ್‌ಗೂ ಕೂಡ. ಆದರೆ ಯಾವಾಗ ಸರ್ಕಾರ ಬ್ಯೂರತ್ ನಗರದ ತ್ಯಾಜ್ಯವನ್ನೆಲ್ಲಾ ಮೂಟೆಕಟ್ಟಿ ವಾಲಿದ್ ಕುಟುಂಬ ಬದುಕುತ್ತಿದ್ದ ಫಾರ್ಮ್ ಹೌಸಿನ ಪಕ್ಕದಲ್ಲೆ ತಂದು ಸುರಿಯಲು ಶುರು ಮಾಡುತ್ತದೋ, ಅಲ್ಲಿಗೆ ಕುಟುಂಬದೊಳಗೆ ಸಂಘರ್ಷ ಮೊಳಕೆಯೊಡೆಯುತ್ತದೆ. ಕುಟುಂಬದೊಳಗೆ ಇರಬೇಕಾದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಯಾವ ಮಾದರಿಯದು ಎಂಬುದನ್ನು ಇಲ್ಲಿಂದ ಮುಂದೆ ನಿರ್ದೇಶಕಿ ಅಕ್ಲ್ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಇಲ್ಲಿ ಛಾಯಾಗ್ರಾಹಣದ ಚಾಕಚಕ್ಯತೆಯೂ ನಿರೂಪಣೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುತ್ತೆ.

ವಾಲಿದ್ ಈ ಬಂಡವಾಳಶಾಹಿ ಮತ್ತು ಅತಿಯಾದ ನಗರೀಕರಣದಿಂದ ಎಷ್ಟು ಬೇಸತ್ತಿದ್ದಾನೆ ಮತ್ತು ಅದನ್ನು ಎಷ್ಟು ದ್ವೇಷಿಸುತ್ತಾನೆ ಅಂದರೆ ಬಂಡವಾಳಶಾಹಿ ವಿರೋಧಿ ಮಾತುಗಳು ವಾಲಿದ್‌ನ ಕೊನೆ ಮಗಳು ರಿಮ್‌ನಿಂದಲೂ ಕೇಳುತ್ತವೆ. ವಾಲಿದ್‌ನ ಈ ತರಹದ ನೈತಿಕ ಪ್ರಜ್ಞೆ ಮತ್ತು ಆತನ ಕ್ರಿಯೆಗಳು ಸಿನಿಮಾ ಪ್ರಾರಂಭದಲ್ಲಿ ಐಡಿಯಲ್ ಅನಿಸಿದರೂ, ನಿರ್ದೇಶಕಿ ಅಕ್ಲ್ ಇವುಗಳನ್ನು ಮುಂದಿನ ಘಟನೆಗಳ ಚಿತ್ರಣದ ದೃಶ್ಯಗಳಲ್ಲಿ ಮುರಿಯುತ್ತಾಳೆ. ಅದು ವಾಲಿದ್ ಹೆಂಡತಿ ಸೊರಯ ಪಾತ್ರದಿಂದ. ಸೊರಯ ಒಂದು ಕಾಲಕ್ಕೆ ಬಹಳ ಪ್ರಸಿದ್ಧಿ ಪಡೆದ ಸಂಗೀತಗಾರ್ತಿ. ತನ್ನ ಹಾಡುಗಳನ್ನು ಜನಪರ ಚಳವಳಿಗಳ ಧ್ವನಿಯಾಗಿಸಿಕೊಂಡು ಸಮುದಾಯದ ಭಾಗವಾಗಿ ಬೆರೂಟ್ ನಗರದಲ್ಲಿ ಬದುಕುತ್ತಿದ್ದವಳು. ವಾಲಿದ್ ತೀರ್ಮಾನವೊ ಅಥವಾ ಪರಿಸ್ಥಿತಿಯ ಅನಿವಾರ್ಯವೋ, ತಾವು ತೆಗೆದುಕೊಂಡ ತೀರ್ಮಾನದಿಂದ ಈಗ ನಾಗರಿಕ ಜನವಸತಿಯಿಂದ ದೂರವಾಗಿ ಬದುಕುತ್ತಿದ್ದಾರೆ. ಇದೇ ಕಾರಣಕ್ಕೆ, ಆ ನಂತರ ಸೊರಯ ಹಾಡುವುದನ್ನೆ ನಿಲ್ಲಿಸಿರುತ್ತಾಳೆ. ತನ್ನ ಇಬ್ಬರು ಮಕ್ಕಳಿಗೂ ತಾಯಿ ಸಂಗೀತಗಾರ್ತಿ ಎಂಬುವುದೇ ತಿಳಿದಿಲ್ಲ. ಆದರೆ ಸೊರಯಳ ಕಿವಿಯಲ್ಲಿ ಬೆರೂಟ್ ನಗರ, ಜನ, ಚಳವಳಿಯ ಕೂಗುಗಳು ಯಾವಾಗಲೂ ಪ್ರತಿಧ್ವನಿಸುತ್ತಿರುತ್ತವೆ. ಗಂಡನನ್ನು ಅದಮ್ಯವಾಗಿ ಪ್ರೀತಿಸುವ ಸೊರಯ ಅವನ ಆದರ್ಶದ ನಿರ್ಧಾರಗಳಿಗೂ ಒಪ್ಪಿರುತ್ತಾಳೆ.

ಮನೆ ಪಕ್ಕದಲ್ಲಿ ಬಂದು ಬೀಳುತ್ತಿರುವ ಇಡೀ ಬೆರೂಟ್ ನಗರದ ತ್ಯಾಜ್ಯ ವಾಲಿದ್ ಮನೆಯ ಭೌತಿಕ ಮತ್ತು ಮಾನಸಿಕ ಪರಿಸರ ಎರಡನ್ನೂ ಹಾಳು ಮಾಡುತ್ತಿದೆ. ಇದನ್ನು ಗ್ರಹಿಸಿದ ಸೊರಯ ಮತ್ತೆ ತಮ್ಮ ಬೆರೂಟ್‌ನ ಹಳೆ ಮನೆಗೆ ಮರಳಲು ಗಂಡನನ್ನು ಒಲೈಸಲು ಪ್ರಯತ್ನಿಸುತ್ತಾಳೆ. ಆದರೆ, ವಾಲಿದ್ ವ್ಯಗ್ರನಾಗುತ್ತಾನೆ. ಸೊರಯಳ ಸಲಹೆ ವಾಲಿದ್‌ಗೆ ಸ್ವಾರ್ಥದ್ದು ಅನಿಸುತ್ತದೆ. ತನ್ನ ಹಿರಿ ಮಗಳ ವಯೋಸಹಜವಾದ ಆಕರ್ಷಣೆಯೂ ಅವನಿಗೆ ತಪ್ಪಾಗಿ ಕಾಣಿಸುತ್ತದೆ. ತಾಯಿಯ ಸಾವು ಕೂಡ ವಾಲಿದ್‌ನ ನಿರ್ಧಾರವನ್ನು ಬದಲಾಯಿಸುವುದಿಲ್ಲ. ಸಿನಿಮಾ ಪ್ರಾರಂಭದಲ್ಲಿ ವಾಲಿದ್ ಕುಟುಂಬದ್ದು ಒಂದು ಐಡಿಯಲ್ ಬದುಕು ಎಂದು
ಅಂದುಕೊಳ್ಳುವ ಹೊತ್ತಿಗೆ, ವಾಲಿದ್ ಆದರ್ಶ ತನ್ನ ಕುಟುಂಬ ಸದಸ್ಯರ ವೈಯಕ್ತಿಕ ಸ್ವಾತಂತ್ರವನ್ನೇ ನಿರಾಕರಿಸುತ್ತಿರುತ್ತದೆ. ಸೊರಯಳದು ಗಂಡನಿಗೆ ಕೊನೆಗೆ ಕೇಳುವುದು ಒಂದೇ ಪ್ರಶ್ನೆ: ’ವಾಸ್ತವ ಪ್ರಪಂಚ ಮತ್ತು ಸಮುದಾಯದಿಂದ ಎಲ್ಲಿ ತಾನೆ ಹೋಗಿ ಬದುಕಲು ಸಾಧ್ಯ? ಇದು ತಲೆಮರೆಸಿಕೊಂಡಂತೆ ಅಲ್ಲವೇ?’

ಮೂನಿಯಾ ಅಕ್ಲ್ ತಮ್ಮ32ನೆಯ ವಯಸ್ಸಿಗೇನೇ ಬಹಳ ಸಂಕೀರ್ಣವಾದ ವಸ್ತುವನ್ನು ಬಹಳ ಸರಳವಾಗಿ ಅಷ್ಟೇ ಅದ್ಭುತವಾಗಿ ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇವಳ 2016ರ ಸಿನಿಮಾ ಸಬ್‌ಮೆರೀನ್ ಕಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿತ್ತು. ಪ್ರಸಕ್ತ ಸಿನಿಮಾ ಕೂಡ ಈಗಾಗಲೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ಈ ಸಿನಿಮಾದಲ್ಲಿ ಸೊರಯ ಪಾತ್ರದಲ್ಲಿ ನಟಿಸಿರುವುದು ಲೆಬನಾನ್‌ನ ಪ್ರಖ್ಯಾತ ನಿರ್ದೇಶಕಿ, ’ಕ್ಯಾರೆಮೆಲ್, ’ವೇರ್ ಡು ವಿ ಗೊ ನೌ’, ’ಕ್ಯಾಪರೆನಮ್’ ಖ್ಯಾತಿಯ ನಾಡಿನ್ ಲಬಕಿ. ವಾಲಿದ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಲ್ಹೆ ಬಕ್ರಿ ನಟನೆ ಕೂಡ ಅದ್ಭುತವಾಗಿದೆ. ವಾಲಿದ್ ತಾಯಿ ಪಾತ್ರ ಝೇನಿಯಾದಲ್ಲಿ ನಟಿಸಿರುವ ಲಿಲೈನ್ ಕೌರ್ ನಟನೆ ಲವಲವಿಕೆಯದು. ಬಹಳ ಸೋಜಿಗದ ಸಂಗತಿ ಎಂದರೆ ವಾಲಿದ್ ಮತ್ತು ಸೊರಯರ ಕೊನೆಯ ಮಗಳು ರಿಮ್ ಪಾತ್ರದಲ್ಲಿ ನಟಿಸಿರುವುದು ಒಬ್ಬ ಬಾಲ ನಟಿ ಅಲ್ಲ. ಅದು ಇಬ್ಬರು ಸಿಆನಾ ರೆಸ್ಟೋಮ್ ಮತ್ತು ಜಿಆನಾ ರೆಸ್ಟೋಮ್ ಎಂಬ ಅವಳಿ ಸಹೋದರಿಯರು. ಆ ಪಾತ್ರ ಕೂಡ ನೆನಪಿನಲ್ಲಿ ಉಳಿಯುವಂಥದ್ದು.

ನಮ್ಮ ಬೆಂಗಳೂರಲ್ಲೂ ಕಸವಿಲೇವಾರಿಯ ಬಿಕ್ಕಟ್ಟು ಇದೆ. ಕುಟುಂಬದೊಳಗೂ ಮತ್ತು ಪ್ರಜಾಪ್ರಭುತ್ವದೊಳಗೂ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬಿಕ್ಕಟ್ಟಿನಲ್ಲಿರುವ ಈ ದೇಶದ ಫ್ಯೂಡಲ್ ಪರಿಸರದಲ್ಲಿ ಬೆಳೆದ ನಮ್ಮಂಥವರಿಗೆ ಈ ಸಿನಿಮಾ ಹಲವು ಪ್ರಶ್ನೆಗಳನ್ನು ಎತ್ತುವಂತೆ ಪ್ರೇರೇಪಿಸುತ್ತದೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ಗರುಡ ಗಮನ ವೃಷಭ ವಾಹನ: ಶತಮಾನಗಳ ಜಾನಪದ ಹಾಡಿನ ಸಾಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬದಲಾಯಿಸುವುದು ಸರಿಯೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...