Homeಅಂತರಾಷ್ಟ್ರೀಯಗಾಝಾ ನಗರದಲ್ಲಿ ಆಕ್ರಮಣ ವಿಸ್ತರಿಸಿದ ಇಸ್ರೇಲ್: ಅಸಹಾಯಕ ನಾಗರಿಕರಿಂದ ಮಹಾ ಪಲಾಯನ

ಗಾಝಾ ನಗರದಲ್ಲಿ ಆಕ್ರಮಣ ವಿಸ್ತರಿಸಿದ ಇಸ್ರೇಲ್: ಅಸಹಾಯಕ ನಾಗರಿಕರಿಂದ ಮಹಾ ಪಲಾಯನ

- Advertisement -
- Advertisement -

ಜಾಗತಿಕ ಆಕ್ರೋಶದ ನಡುವೆಯೂ ಮಂಗಳವಾರದಿಂದ (ಸೆ.16) ಇಸ್ರೇಲ್ ತನ್ನ ನೆಲದ ಆಕ್ರಮಣವನ್ನು ( Ground Assault) ಗಾಝಾ ಪಟ್ಟಿಯ ಗಾಝಾ ನಗರದಲ್ಲಿ ವಿಸ್ತರಿಸಿದೆ. ಅಮಾಯಕ ನಾಗರಿಕರು ತಮ್ಮದೆಲ್ಲವನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಮಹಾ ಪಲಾಯನ ಹೊರಟಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಹೇಳಿಕೊಂಡಂತೆ ಗಾಝಾ ನಗರದ ಹೊರವಲಯದಿಂದ ಇಸ್ರೇಲ್ ತನ್ನ ಆಕ್ರಮಣ ಪ್ರಾರಂಭಿಸಿದೆ. ಅಲ್ಲಿ ಇಸ್ರೇಲ್ ಸೇನೆಯು ಕಳೆದ ಕೆಲ ದಿನಗಳಿಂದ ವೈಮಾನಿಕ ದಾಳಿ ಮೂಲಕ ಎತ್ತರದ ಗೋಪುರಗಳ ನಾಶವನ್ನು ಚುರುಕುಗೊಳಿಸಿತ್ತು.

“ಗಾಝಾ ಹೊತ್ತಿ ಉರಿಯುತ್ತಿದೆ” ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) “ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುತ್ತಿವೆ. ಹಮಾಸ್ ಅನ್ನು ಸೋಲಿಸಿ ಒತ್ತೆಯಾಳುಗಳ ಬಿಡುಗಡೆಗೆ ಶ್ರಮಿಸುತ್ತಿವೆ” ಎಂದಿದ್ದಾರೆ.

ಗಾಝಾ ನಗರದ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್ ಯುದ್ಧದ ‘ನಿರ್ಣಾಯಕ ಹಂತದಲ್ಲಿದೆ’ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದು, ಈಗ ದಾಳಿ ಶುರು ಮಾಡಿರುವ ಪ್ರದೇಶ ಹಮಾಸ್‌ನ ಕೊನೆಯ ಭದ್ರಕೋಟೆಗಳಲ್ಲಿ ಒಂದೆಂದು ಸರ್ಕಾರ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ಹೊಸದಾಗಿ ಶುರು ಮಾಡಿರುವ ಆಕ್ರಮಣ, ಈಗಾಗಲೇ ಹದೆಗೆಟ್ಟಿರುವ ಗಾಝಾದ ಪರಿಸ್ಥಿತಿಯನ್ನು ಇನ್ನಷ್ಟು ಭೀಕರವಾಗಿಸಲಿದೆ ಎಂದು ವಿಶ್ವಸಂಸ್ಥೆ ಸೇರಿದಂತೆ ಇನ್ನಿತರ ಮಾನವ ಹಕ್ಕು ಸಂಸ್ಥೆಗಳು ಎಚ್ಚರಿಸಿವೆ.

“ಸಾವಿರಾರು ಜನರನ್ನು ಬಾಂಬ್ ಮತ್ತು ಬಂದೂಕು ತೋರಿಸಿ ಹೆದರಿಸುವ ಮೂಲಕ ಅವರ ಸ್ವಂತ ಊರುಗಳಿಂದ ಓಡಿಸಲಾಗುತ್ತಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಇದು ‘ಭಯಾನಕವಾದುದು’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ಮಂಗಳವಾರ ಇಸ್ರೇಲ್ ಸೇನಾ ಅಧಿಕಾರಿಯೊಬ್ಬರು ಅಂದಾಜು 350,000 ಜನರು ಗಾಝಾ ನಗರದಿಂದ ಪಲಾಯನ ಮಾಡಿದ್ದಾರೆ ಎಂದಿದ್ದಾರೆ. ಆದರೆ, ಗಾಝಾದ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಾರ, 350,000 ಜನರು ನಗರದ ಮಧ್ಯಭಾಗ ಮತ್ತು ಪಶ್ಚಿಮಕ್ಕೆ ಸ್ಥಳಾಂತರಗೊಂಡಿದ್ದಾರೆ, 190,000 ಜನರು ಸಂಪೂರ್ಣವಾಗಿ ಗಾಝಾ ನಗರ ತೊರೆದಿದ್ದಾರೆ ಎಂದು ವರದಿಯಾಗಿದೆ.

ಜನರು ಪಲಾಯನ ಮಾಡುತ್ತಿದ್ದಂತೆ, ಇಸ್ರೇಲ್ ಸೇನೆಯು ವೈಮಾನಿಕ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯ ಯುದ್ಧ ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಸಜ್ಜಿತ ವಾಹನಗಳು ಗಾಝಾ ನಗರದೊಳಗೆ ನುಗ್ಗುತ್ತಿರುವುದನ್ನು ನೋಡಬಹುದು.

ಸಂಪೂರ್ಣ ಗಾಝಾ ನಗರವನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ‘ಹಲವಾರು ತಿಂಗಳುಗಳು’ ಬೇಕಾಗುತ್ತದೆ ಎಂದು ಇಸ್ರೇಲಿ ಸೇನೆ ಮಂಗಳವಾರ ಒಪ್ಪಿಕೊಂಡಿದೆ. “ಎಷ್ಟೇ ಸಮಯ ತೆಗೆದುಕೊಂಡರೂ ಪರವಾಗಿಲ್ಲ, ನಾವು ಗಾಝಾದಲ್ಲಿ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಇಸ್ರೇಲ್ ಸೇನಾ ವಕ್ತಾರ ಎಫೀ ಡೆಫ್ರಿನ್ ಹೇಳಿದ್ದಾರೆ.

“ಗಾಝಾ ಪಟ್ಟಿಯ ಕೆಲವು ಭಾಗಗಳನ್ನು ಅಧಿಕೃತವಾಗಿ ಬರಗಾಲ ಪೀಡಿತವೆಂದು ಘೋಷಿಸಲಾಗಿದೆ. ಸುಮಾರು ಒಂದು ಮಿಲಿಯನ್ ಜನರು (ಈ ಪ್ರದೇಶದ ಜನಸಂಖ್ಯೆಯ ಅರ್ಧದಷ್ಟು) ಗಾಝಾ ನಗರ ಮತ್ತು ಸುತ್ತಮುತ್ತ ವಾಸಿಸುತ್ತಿದ್ದಾರೆ. ಇಸ್ರೇಲ್ ಸ್ಥಳೀಯ ಜನರನ್ನು ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಲು ಪ್ರಯತ್ನಿಸುತ್ತಿದೆ. ಆದರೆ, ಐಡಿಎಫ್ ಹೇಳುವಂತೆ ಇಲ್ಲಿಯವರೆಗೆ ಕೇವಲ 40% ಜನರು ಮಾತ್ರ ಹೊರಟು ಹೋಗಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿಯಿಲ್ಲ” ಎಂದು ಸುದ್ದಿ ಸಂಸ್ಥೆ ಸಿಎನ್‌ಎನ್‌ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಖಂಡನೆ ಮತ್ತು ತಮ್ಮದೇ ಆದ ಭದ್ರತಾ ಅಧಿಕಾರಿಗಳ ಕಳವಳಗಳ ಹೊರತಾಗಿಯೂ, ಕಾರ್ಯಾಚರಣೆಯನ್ನು ಮುಂದುವರಿಸುವ ನೆತನ್ಯಾಹು ಅವರ ನಿರ್ಧಾರವು, ಜಾಗತಿಕ ಒತ್ತಡವನ್ನು ಧಿಕ್ಕರಿಸಿ ತಮ್ಮ ಷರತ್ತುಗಳ ಮೇಲೆ ಯುದ್ಧವನ್ನು ಮುಂದುವರಿಸುವ ಅವರ ಇಚ್ಛೆಯನ್ನು ಒತ್ತಿಹೇಳುತ್ತದೆ ಎಂದು ವರದಿ ವಿವರಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ನಿಯೋಜಿಸಿದ ಸ್ವತಂತ್ರ ತಜ್ಞರ ತಂಡವು ಇಸ್ರೇಲ್ ಗಾಝಾದಲ್ಲಿ ನರಮೇಧ ನಡೆಸುತ್ತಿದೆ ಎಂದು ಹೇಳಿದ್ದು, ಮಂಗಳವಾರ (ಸೆ.16) ಈ ಕುರಿತು ವರದಿ ಬಿಡುಗಡೆ ಮಾಡಿದೆ. ಅಂತಾರಾಷ್ಟ್ರೀಯ ಸಮುದಾಯವು ನರಮೇಧವನ್ನು ಕೊನೆಗೊಳಿಸಬೇಕು ಮತ್ತು ಅದಕ್ಕೆ ಕಾರಣರಾದವರನ್ನು ಶಿಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.

ಈ “ವಿಕೃತ ಮತ್ತು ಸುಳ್ಳು ವರದಿಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ” ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ. ವಿಶ್ವಸಂಸ್ಥೆ ತಜ್ಞರ ತಂಡವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದೆ.

2023ರಲ್ಲಿ ಇಸ್ರೇಲ್ ಆಕ್ರಮಣ ಪ್ರಾರಂಭಿಸಿದ ಬಳಿಕ ಗಾಝಾ ಪಟ್ಟಿಯ ರಫಾ ಮತ್ತು ಖಾನ್ ಯೂನಿಸ್‌ ನಗರಗಳು ಸಂಪೂರ್ಣ ನಾಶವಾಗಿವೆ. ಆದರೆ, ಅತಿದೊಡ್ಡ ನಗರ ಮತ್ತು ಆರ್ಥಿಕ ಕೇಂದ್ರವಾದ ಗಾಝಾ ನಗರದ ಮೇಲೆ ದೊಡ್ಡ ಪ್ರಮಾಣದ ಹಾನಿ ಆಗಿರಲಿಲ್ಲ. ಇದೀಗ ಇಸ್ರೇಲ್‌ ಗಾಝಾ ನಗರದಲ್ಲೂಆಕ್ರಮಣ ವಿಸ್ತರಿಸಿರುವ ಹಿನ್ನೆಲೆ ಆತಂಕ ಹೆಚ್ಚಾಗಿದೆ. ಅಮಾಯಕ ನಾಗರಿಕರಿಗೆ ದಿಕ್ಕೇ ತೋಚದಂತಾಗಿದೆ ಎಂದು ವರದಿಗಳು ಹೇಳಿವೆ.

ಮಂಗಳವಾರ, ಉತ್ತರ ಗಾಝಾವೊಂದರಲ್ಲೇ ಕನಿಷ್ಠ 93 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆಗೈದಿದೆ. ಗಾಝಾದ ಆರೋಗ್ಯ ಸಚಿವಾಲಯ ಮತ್ತು ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಸಂಪೂರ್ಣ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಜನರು ಮಂಗಳವಾರ ಸಾವನ್ನಪ್ಪಿದ್ದಾರೆ.

ಮಂಗಳವಾರ ರಾತ್ರಿಯಿಡೀ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ತತ್ತರಿಸಿದ ಗಾಝಾ ನಗರ ನಿವಾಸಿಗಳು, ಅಳಿದುಳಿದ ತಮ್ಮ ವಸ್ತುಗಳನ್ನು ಹೊತ್ತುಕೊಂಡು ಪಲಾಯನ ಹೊರಟಿದ್ದಾರೆ ಎಂದು ಸಿಎನ್‌ಎನ್‌ ತನ್ನ ವರದಿಯಲ್ಲಿ ವಿವರಿಸಿದೆ.

ಗಾಝಾ ನಗರದ ಶೇಖ್ ರಾದ್ವಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲ್‌ ದಾಳಿಯಿಂದ ಕೆಲ ಮನೆಗಳು ಭಾಗಶಃ ಇನ್ನು ಕೆಲವು ಸಂಪೂರ್ಣ ನಾಶವಾಗಿವೆ. ಜನರು ತಮ್ಮ ಚೀಲ, ಕಂಬಳಿಗಳನ್ನು ಹೊತ್ತುಕೊಂಡು ಆಶ್ರಯ ಹುಡುಕುತ್ತಾ ಕಟ್ಟಡಗಳ ಅವಶೇಷಗಳ ನಡುವೆ ದಕ್ಷಿಣದತ್ತ ಸಾಗುತ್ತಿರುವ ದೃಶ್ಯಾವಳಿಗಳನ್ನು ಸಿಎನ್ಎನ್ ತೋರಿಸಿದೆ.

ಇಸ್ರೇಲಿ ಡ್ರೋನ್‌ಗಳು ಜನರ ತಲೆಮೇಲೆ ಹಾರಾಡುತ್ತಿವೆ. ಮಂಗಳವಾರ ರಾತ್ರಿಯ ದಾಳಿ ಇದುವರೆಗೆ ಕಂಡ ಅತ್ಯಂತ ಭೀಕರ ದಾಳಿಗಳಲ್ಲಿ ಒಂದು ಎಂದು ಗಾಝಾ ನಗರದ ಸ್ಥಳೀಯರು ಹೇಳಿದ್ದಾರೆ ಎಂದು ಸಿಎನ್‌ಎನ್‌ ವರದಿ ವಿವರಿಸಿದೆ.

ಆಗಸ್ಟ್ ಆರಂಭದಲ್ಲಿ ಇಸ್ರೇಲ್‌ನ ಭದ್ರತಾ ಸಂಪುಟ ಅನುಮೋದಿಸಿದ ಕಾರ್ಯಾಚರಣೆಯ ಯೋಜನೆಯ ಪ್ರಕಾರ, ಇಸ್ರೇಲ್ ಪ್ಯಾಲೆಸ್ತೀನ್ ಜನರನ್ನು ಅಲ್-ಮವಾಸಿ ಪ್ರದೇಶಕ್ಕೆ ಸ್ಥಳಾಂತರಿಸಿದ ನಂತರವೇ ಗಾಝಾ ನಗರದ ಮೇಲಿನ ದಾಳಿ ಪ್ರಾರಂಭವಾಗಬೇಕಿತ್ತು. ಆದರೆ, ಜನರು ಸ್ಥಳಾಂತರಕ್ಕೆ ನಿರಾಕರಿಸಿದ್ದಾರೆ. ಇಸ್ರೇಲ್ ಜರನ್ನು ಸ್ಥಳಾಂತರಿಸದೆ ದಾಳಿ ಶುರು ಮಾಡಿದೆ.

ಅಲ್ಲದೆ, ಅಮೆರಿಕ ಬೆಂಬಲಿತ ವಿವಾದಾತ್ಮಕ ‘ಗಾಝಾ ಹ್ಯುಮಾನಿಟೇರಿಯನ್ ಫೌಂಡೇಶನ್ (ಜಿಎಚ್‌ಎಫ್‌) ನಡೆಸುತ್ತಿರುವ ನೆರವು ಸೌಲಭ್ಯಗಳ ಸಂಖ್ಯೆಯನ್ನು ಇಸ್ರೇಲ್ ಒಟ್ಟು 16 ತಾಣಗಳಿಗೆ ವಿಸ್ತರಿಸಬೇಕಿತ್ತು. ಆದರೆ ಈಗ ಕೇವಲ ಐದು ಸ್ಥಳಗಳಲ್ಲಿ ಮಾತ್ರ ನೆರವು ಕೇಂದ್ರಗಳು ತೆರೆದಿವೆ. ಈ ಮೂಲಕ ಪ್ಯಾಲೆಸ್ತೀನಿಯರು ತೀರಾ ಅಗತ್ಯವಿರುವ ಆಹಾರ ಮತ್ತು ಸಹಾಯವನ್ನು ಪಡೆಯಲು ಗಂಟೆಗಟ್ಟಲೆ ನಡೆಯುವಂತೆ ಮಾಡಿದೆ.

ಮಧ್ಯ ಮತ್ತು ಉತ್ತರ ಗಾಝಾದಾದ್ಯಂತ, ಪ್ಯಾಲೆಸ್ತೀನಿಯರು ತಮ್ಮ ಕೈಲಾದಷ್ಟು ವಸ್ತುಗಳನ್ನು ತುಂಬಿಕೊಂಡು ಸುರಕ್ಷಿತ ಸ್ಥಳಕ್ಕಾಗಿ ಹತಾಶ ಹುಡುಕಾಟದಲ್ಲಿ ಪಲಾಯನ ಮಾಡುತ್ತಿದ್ದಾರೆ. ಇದು ಅನೇಕರಿಗೆ ಮೊದಲ ಸ್ಥಳಾಂತರವಲ್ಲ. ಜನರು ಆಸರೆ ಹುಡುಕಿಕೊಂಡು ದಕ್ಷಿಣಕ್ಕೆ ಹೊರಟ ಹಿನ್ನೆಲೆ ಅಲ್-ರಶೀದ್ ಸ್ಟ್ರೀಟ್ ಕರಾವಳಿ ಹೆದ್ದಾರಿಯು ಮಂಗಳವಾರ ಜನಸಂದಣಿಯಿಂದ ತುಂಬಿತ್ತು ಎಂದು ಸಿಎನ್‌ಎನ್‌ ವರದಿ ಹೇಳಿದೆ.

ಪ್ಯಾಲೆಸ್ತೀನ್ ಪ್ರಾಧಿಕಾರ (ಪಿಎ) ಜಾಗತಿಕ ರಾಷ್ಟ್ರಗಳ ಮಧ್ಯಪ್ರವೇಶಕ್ಕೆ ಮನವಿ ಮಾಡಿದೆ. ಅಮೆರಿಕ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ. “ಇಡೀ ಜಗತ್ತು ಆಕ್ರಮಣದ ವಿಸ್ತರಣೆಯನ್ನು ತಿರಸ್ಕರಿಸಿದೆ. ಇದು ಮಾನವೀಯತೆಯ ವಿರುದ್ಧದ ಯುದ್ಧ ಅಪರಾಧವೆಂದು ಪರಿಗಣಿಸಿದೆ. ಇಸ್ರೇಲ್‌ನ ವಿಸ್ತರಿತ ಆಕ್ರಮಣ ಗಾಝಾ ನಗರ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆ ಮತ್ತು ಅಸ್ಥಿರತೆಗೆ ಕಾರಣವಾಗುತ್ತದೆ” ಎಂದು ಪಿಎ ಅಧ್ಯಕ್ಷರ ವಕ್ತಾರ ನಬಿಲ್ ಅಬು ರುಡೈನೆಹ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಮಾಸ್ ಗಾಝಾ ನಗರದ ಮೇಲಿನ ದಾಳಿಯನ್ನು ‘ಅನಾಗರಿಕ ಝಿಯೋನಿಷ್ಟ್ ಆಕ್ರಮಣ’ ಎಂದು ಕರೆದಿದೆ. ಈ ಮೂಲಕ ಇಸ್ರೇಲ್ “ಎಲ್ಲಾ ರೀತಿಯ ಅಂತಾರಾಷ್ಟ್ರೀಯ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಿದೆ” ಎಂದಿದೆ.

ಎರಡು ವರ್ಷಗಳ ನಿರಂತರ ಆಕ್ರಮಣದ ಮೂಲಕ ಇಸ್ರೇಲ್ ಕನಿಷ್ಠ 64,964 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ ಎಂದು ಅಲ್‌-ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದ ವಿಶ್ವಸಂಸ್ಥೆಯ ವರದಿ: ಜಾಗತಿಕ ಕ್ರಮಕ್ಕೆ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...