Homeಅಂತರಾಷ್ಟ್ರೀಯಗಾಝಾ ನಗರದಲ್ಲಿ ಆಕ್ರಮಣ ವಿಸ್ತರಿಸಿದ ಇಸ್ರೇಲ್: ಅಸಹಾಯಕ ನಾಗರಿಕರಿಂದ ಮಹಾ ಪಲಾಯನ

ಗಾಝಾ ನಗರದಲ್ಲಿ ಆಕ್ರಮಣ ವಿಸ್ತರಿಸಿದ ಇಸ್ರೇಲ್: ಅಸಹಾಯಕ ನಾಗರಿಕರಿಂದ ಮಹಾ ಪಲಾಯನ

- Advertisement -
- Advertisement -

ಜಾಗತಿಕ ಆಕ್ರೋಶದ ನಡುವೆಯೂ ಮಂಗಳವಾರದಿಂದ (ಸೆ.16) ಇಸ್ರೇಲ್ ತನ್ನ ನೆಲದ ಆಕ್ರಮಣವನ್ನು ( Ground Assault) ಗಾಝಾ ಪಟ್ಟಿಯ ಗಾಝಾ ನಗರದಲ್ಲಿ ವಿಸ್ತರಿಸಿದೆ. ಅಮಾಯಕ ನಾಗರಿಕರು ತಮ್ಮದೆಲ್ಲವನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಮಹಾ ಪಲಾಯನ ಹೊರಟಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಹೇಳಿಕೊಂಡಂತೆ ಗಾಝಾ ನಗರದ ಹೊರವಲಯದಿಂದ ಇಸ್ರೇಲ್ ತನ್ನ ಆಕ್ರಮಣ ಪ್ರಾರಂಭಿಸಿದೆ. ಅಲ್ಲಿ ಇಸ್ರೇಲ್ ಸೇನೆಯು ಕಳೆದ ಕೆಲ ದಿನಗಳಿಂದ ವೈಮಾನಿಕ ದಾಳಿ ಮೂಲಕ ಎತ್ತರದ ಗೋಪುರಗಳ ನಾಶವನ್ನು ಚುರುಕುಗೊಳಿಸಿತ್ತು.

“ಗಾಝಾ ಹೊತ್ತಿ ಉರಿಯುತ್ತಿದೆ” ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) “ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುತ್ತಿವೆ. ಹಮಾಸ್ ಅನ್ನು ಸೋಲಿಸಿ ಒತ್ತೆಯಾಳುಗಳ ಬಿಡುಗಡೆಗೆ ಶ್ರಮಿಸುತ್ತಿವೆ” ಎಂದಿದ್ದಾರೆ.

ಗಾಝಾ ನಗರದ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್ ಯುದ್ಧದ ‘ನಿರ್ಣಾಯಕ ಹಂತದಲ್ಲಿದೆ’ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದು, ಈಗ ದಾಳಿ ಶುರು ಮಾಡಿರುವ ಪ್ರದೇಶ ಹಮಾಸ್‌ನ ಕೊನೆಯ ಭದ್ರಕೋಟೆಗಳಲ್ಲಿ ಒಂದೆಂದು ಸರ್ಕಾರ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ಹೊಸದಾಗಿ ಶುರು ಮಾಡಿರುವ ಆಕ್ರಮಣ, ಈಗಾಗಲೇ ಹದೆಗೆಟ್ಟಿರುವ ಗಾಝಾದ ಪರಿಸ್ಥಿತಿಯನ್ನು ಇನ್ನಷ್ಟು ಭೀಕರವಾಗಿಸಲಿದೆ ಎಂದು ವಿಶ್ವಸಂಸ್ಥೆ ಸೇರಿದಂತೆ ಇನ್ನಿತರ ಮಾನವ ಹಕ್ಕು ಸಂಸ್ಥೆಗಳು ಎಚ್ಚರಿಸಿವೆ.

“ಸಾವಿರಾರು ಜನರನ್ನು ಬಾಂಬ್ ಮತ್ತು ಬಂದೂಕು ತೋರಿಸಿ ಹೆದರಿಸುವ ಮೂಲಕ ಅವರ ಸ್ವಂತ ಊರುಗಳಿಂದ ಓಡಿಸಲಾಗುತ್ತಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಇದು ‘ಭಯಾನಕವಾದುದು’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ಮಂಗಳವಾರ ಇಸ್ರೇಲ್ ಸೇನಾ ಅಧಿಕಾರಿಯೊಬ್ಬರು ಅಂದಾಜು 350,000 ಜನರು ಗಾಝಾ ನಗರದಿಂದ ಪಲಾಯನ ಮಾಡಿದ್ದಾರೆ ಎಂದಿದ್ದಾರೆ. ಆದರೆ, ಗಾಝಾದ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಾರ, 350,000 ಜನರು ನಗರದ ಮಧ್ಯಭಾಗ ಮತ್ತು ಪಶ್ಚಿಮಕ್ಕೆ ಸ್ಥಳಾಂತರಗೊಂಡಿದ್ದಾರೆ, 190,000 ಜನರು ಸಂಪೂರ್ಣವಾಗಿ ಗಾಝಾ ನಗರ ತೊರೆದಿದ್ದಾರೆ ಎಂದು ವರದಿಯಾಗಿದೆ.

ಜನರು ಪಲಾಯನ ಮಾಡುತ್ತಿದ್ದಂತೆ, ಇಸ್ರೇಲ್ ಸೇನೆಯು ವೈಮಾನಿಕ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯ ಯುದ್ಧ ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಸಜ್ಜಿತ ವಾಹನಗಳು ಗಾಝಾ ನಗರದೊಳಗೆ ನುಗ್ಗುತ್ತಿರುವುದನ್ನು ನೋಡಬಹುದು.

ಸಂಪೂರ್ಣ ಗಾಝಾ ನಗರವನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ‘ಹಲವಾರು ತಿಂಗಳುಗಳು’ ಬೇಕಾಗುತ್ತದೆ ಎಂದು ಇಸ್ರೇಲಿ ಸೇನೆ ಮಂಗಳವಾರ ಒಪ್ಪಿಕೊಂಡಿದೆ. “ಎಷ್ಟೇ ಸಮಯ ತೆಗೆದುಕೊಂಡರೂ ಪರವಾಗಿಲ್ಲ, ನಾವು ಗಾಝಾದಲ್ಲಿ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಇಸ್ರೇಲ್ ಸೇನಾ ವಕ್ತಾರ ಎಫೀ ಡೆಫ್ರಿನ್ ಹೇಳಿದ್ದಾರೆ.

“ಗಾಝಾ ಪಟ್ಟಿಯ ಕೆಲವು ಭಾಗಗಳನ್ನು ಅಧಿಕೃತವಾಗಿ ಬರಗಾಲ ಪೀಡಿತವೆಂದು ಘೋಷಿಸಲಾಗಿದೆ. ಸುಮಾರು ಒಂದು ಮಿಲಿಯನ್ ಜನರು (ಈ ಪ್ರದೇಶದ ಜನಸಂಖ್ಯೆಯ ಅರ್ಧದಷ್ಟು) ಗಾಝಾ ನಗರ ಮತ್ತು ಸುತ್ತಮುತ್ತ ವಾಸಿಸುತ್ತಿದ್ದಾರೆ. ಇಸ್ರೇಲ್ ಸ್ಥಳೀಯ ಜನರನ್ನು ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಲು ಪ್ರಯತ್ನಿಸುತ್ತಿದೆ. ಆದರೆ, ಐಡಿಎಫ್ ಹೇಳುವಂತೆ ಇಲ್ಲಿಯವರೆಗೆ ಕೇವಲ 40% ಜನರು ಮಾತ್ರ ಹೊರಟು ಹೋಗಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿಯಿಲ್ಲ” ಎಂದು ಸುದ್ದಿ ಸಂಸ್ಥೆ ಸಿಎನ್‌ಎನ್‌ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಖಂಡನೆ ಮತ್ತು ತಮ್ಮದೇ ಆದ ಭದ್ರತಾ ಅಧಿಕಾರಿಗಳ ಕಳವಳಗಳ ಹೊರತಾಗಿಯೂ, ಕಾರ್ಯಾಚರಣೆಯನ್ನು ಮುಂದುವರಿಸುವ ನೆತನ್ಯಾಹು ಅವರ ನಿರ್ಧಾರವು, ಜಾಗತಿಕ ಒತ್ತಡವನ್ನು ಧಿಕ್ಕರಿಸಿ ತಮ್ಮ ಷರತ್ತುಗಳ ಮೇಲೆ ಯುದ್ಧವನ್ನು ಮುಂದುವರಿಸುವ ಅವರ ಇಚ್ಛೆಯನ್ನು ಒತ್ತಿಹೇಳುತ್ತದೆ ಎಂದು ವರದಿ ವಿವರಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ನಿಯೋಜಿಸಿದ ಸ್ವತಂತ್ರ ತಜ್ಞರ ತಂಡವು ಇಸ್ರೇಲ್ ಗಾಝಾದಲ್ಲಿ ನರಮೇಧ ನಡೆಸುತ್ತಿದೆ ಎಂದು ಹೇಳಿದ್ದು, ಮಂಗಳವಾರ (ಸೆ.16) ಈ ಕುರಿತು ವರದಿ ಬಿಡುಗಡೆ ಮಾಡಿದೆ. ಅಂತಾರಾಷ್ಟ್ರೀಯ ಸಮುದಾಯವು ನರಮೇಧವನ್ನು ಕೊನೆಗೊಳಿಸಬೇಕು ಮತ್ತು ಅದಕ್ಕೆ ಕಾರಣರಾದವರನ್ನು ಶಿಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.

ಈ “ವಿಕೃತ ಮತ್ತು ಸುಳ್ಳು ವರದಿಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ” ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ. ವಿಶ್ವಸಂಸ್ಥೆ ತಜ್ಞರ ತಂಡವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದೆ.

2023ರಲ್ಲಿ ಇಸ್ರೇಲ್ ಆಕ್ರಮಣ ಪ್ರಾರಂಭಿಸಿದ ಬಳಿಕ ಗಾಝಾ ಪಟ್ಟಿಯ ರಫಾ ಮತ್ತು ಖಾನ್ ಯೂನಿಸ್‌ ನಗರಗಳು ಸಂಪೂರ್ಣ ನಾಶವಾಗಿವೆ. ಆದರೆ, ಅತಿದೊಡ್ಡ ನಗರ ಮತ್ತು ಆರ್ಥಿಕ ಕೇಂದ್ರವಾದ ಗಾಝಾ ನಗರದ ಮೇಲೆ ದೊಡ್ಡ ಪ್ರಮಾಣದ ಹಾನಿ ಆಗಿರಲಿಲ್ಲ. ಇದೀಗ ಇಸ್ರೇಲ್‌ ಗಾಝಾ ನಗರದಲ್ಲೂಆಕ್ರಮಣ ವಿಸ್ತರಿಸಿರುವ ಹಿನ್ನೆಲೆ ಆತಂಕ ಹೆಚ್ಚಾಗಿದೆ. ಅಮಾಯಕ ನಾಗರಿಕರಿಗೆ ದಿಕ್ಕೇ ತೋಚದಂತಾಗಿದೆ ಎಂದು ವರದಿಗಳು ಹೇಳಿವೆ.

ಮಂಗಳವಾರ, ಉತ್ತರ ಗಾಝಾವೊಂದರಲ್ಲೇ ಕನಿಷ್ಠ 93 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆಗೈದಿದೆ. ಗಾಝಾದ ಆರೋಗ್ಯ ಸಚಿವಾಲಯ ಮತ್ತು ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಸಂಪೂರ್ಣ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಜನರು ಮಂಗಳವಾರ ಸಾವನ್ನಪ್ಪಿದ್ದಾರೆ.

ಮಂಗಳವಾರ ರಾತ್ರಿಯಿಡೀ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ತತ್ತರಿಸಿದ ಗಾಝಾ ನಗರ ನಿವಾಸಿಗಳು, ಅಳಿದುಳಿದ ತಮ್ಮ ವಸ್ತುಗಳನ್ನು ಹೊತ್ತುಕೊಂಡು ಪಲಾಯನ ಹೊರಟಿದ್ದಾರೆ ಎಂದು ಸಿಎನ್‌ಎನ್‌ ತನ್ನ ವರದಿಯಲ್ಲಿ ವಿವರಿಸಿದೆ.

ಗಾಝಾ ನಗರದ ಶೇಖ್ ರಾದ್ವಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲ್‌ ದಾಳಿಯಿಂದ ಕೆಲ ಮನೆಗಳು ಭಾಗಶಃ ಇನ್ನು ಕೆಲವು ಸಂಪೂರ್ಣ ನಾಶವಾಗಿವೆ. ಜನರು ತಮ್ಮ ಚೀಲ, ಕಂಬಳಿಗಳನ್ನು ಹೊತ್ತುಕೊಂಡು ಆಶ್ರಯ ಹುಡುಕುತ್ತಾ ಕಟ್ಟಡಗಳ ಅವಶೇಷಗಳ ನಡುವೆ ದಕ್ಷಿಣದತ್ತ ಸಾಗುತ್ತಿರುವ ದೃಶ್ಯಾವಳಿಗಳನ್ನು ಸಿಎನ್ಎನ್ ತೋರಿಸಿದೆ.

ಇಸ್ರೇಲಿ ಡ್ರೋನ್‌ಗಳು ಜನರ ತಲೆಮೇಲೆ ಹಾರಾಡುತ್ತಿವೆ. ಮಂಗಳವಾರ ರಾತ್ರಿಯ ದಾಳಿ ಇದುವರೆಗೆ ಕಂಡ ಅತ್ಯಂತ ಭೀಕರ ದಾಳಿಗಳಲ್ಲಿ ಒಂದು ಎಂದು ಗಾಝಾ ನಗರದ ಸ್ಥಳೀಯರು ಹೇಳಿದ್ದಾರೆ ಎಂದು ಸಿಎನ್‌ಎನ್‌ ವರದಿ ವಿವರಿಸಿದೆ.

ಆಗಸ್ಟ್ ಆರಂಭದಲ್ಲಿ ಇಸ್ರೇಲ್‌ನ ಭದ್ರತಾ ಸಂಪುಟ ಅನುಮೋದಿಸಿದ ಕಾರ್ಯಾಚರಣೆಯ ಯೋಜನೆಯ ಪ್ರಕಾರ, ಇಸ್ರೇಲ್ ಪ್ಯಾಲೆಸ್ತೀನ್ ಜನರನ್ನು ಅಲ್-ಮವಾಸಿ ಪ್ರದೇಶಕ್ಕೆ ಸ್ಥಳಾಂತರಿಸಿದ ನಂತರವೇ ಗಾಝಾ ನಗರದ ಮೇಲಿನ ದಾಳಿ ಪ್ರಾರಂಭವಾಗಬೇಕಿತ್ತು. ಆದರೆ, ಜನರು ಸ್ಥಳಾಂತರಕ್ಕೆ ನಿರಾಕರಿಸಿದ್ದಾರೆ. ಇಸ್ರೇಲ್ ಜರನ್ನು ಸ್ಥಳಾಂತರಿಸದೆ ದಾಳಿ ಶುರು ಮಾಡಿದೆ.

ಅಲ್ಲದೆ, ಅಮೆರಿಕ ಬೆಂಬಲಿತ ವಿವಾದಾತ್ಮಕ ‘ಗಾಝಾ ಹ್ಯುಮಾನಿಟೇರಿಯನ್ ಫೌಂಡೇಶನ್ (ಜಿಎಚ್‌ಎಫ್‌) ನಡೆಸುತ್ತಿರುವ ನೆರವು ಸೌಲಭ್ಯಗಳ ಸಂಖ್ಯೆಯನ್ನು ಇಸ್ರೇಲ್ ಒಟ್ಟು 16 ತಾಣಗಳಿಗೆ ವಿಸ್ತರಿಸಬೇಕಿತ್ತು. ಆದರೆ ಈಗ ಕೇವಲ ಐದು ಸ್ಥಳಗಳಲ್ಲಿ ಮಾತ್ರ ನೆರವು ಕೇಂದ್ರಗಳು ತೆರೆದಿವೆ. ಈ ಮೂಲಕ ಪ್ಯಾಲೆಸ್ತೀನಿಯರು ತೀರಾ ಅಗತ್ಯವಿರುವ ಆಹಾರ ಮತ್ತು ಸಹಾಯವನ್ನು ಪಡೆಯಲು ಗಂಟೆಗಟ್ಟಲೆ ನಡೆಯುವಂತೆ ಮಾಡಿದೆ.

ಮಧ್ಯ ಮತ್ತು ಉತ್ತರ ಗಾಝಾದಾದ್ಯಂತ, ಪ್ಯಾಲೆಸ್ತೀನಿಯರು ತಮ್ಮ ಕೈಲಾದಷ್ಟು ವಸ್ತುಗಳನ್ನು ತುಂಬಿಕೊಂಡು ಸುರಕ್ಷಿತ ಸ್ಥಳಕ್ಕಾಗಿ ಹತಾಶ ಹುಡುಕಾಟದಲ್ಲಿ ಪಲಾಯನ ಮಾಡುತ್ತಿದ್ದಾರೆ. ಇದು ಅನೇಕರಿಗೆ ಮೊದಲ ಸ್ಥಳಾಂತರವಲ್ಲ. ಜನರು ಆಸರೆ ಹುಡುಕಿಕೊಂಡು ದಕ್ಷಿಣಕ್ಕೆ ಹೊರಟ ಹಿನ್ನೆಲೆ ಅಲ್-ರಶೀದ್ ಸ್ಟ್ರೀಟ್ ಕರಾವಳಿ ಹೆದ್ದಾರಿಯು ಮಂಗಳವಾರ ಜನಸಂದಣಿಯಿಂದ ತುಂಬಿತ್ತು ಎಂದು ಸಿಎನ್‌ಎನ್‌ ವರದಿ ಹೇಳಿದೆ.

ಪ್ಯಾಲೆಸ್ತೀನ್ ಪ್ರಾಧಿಕಾರ (ಪಿಎ) ಜಾಗತಿಕ ರಾಷ್ಟ್ರಗಳ ಮಧ್ಯಪ್ರವೇಶಕ್ಕೆ ಮನವಿ ಮಾಡಿದೆ. ಅಮೆರಿಕ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ. “ಇಡೀ ಜಗತ್ತು ಆಕ್ರಮಣದ ವಿಸ್ತರಣೆಯನ್ನು ತಿರಸ್ಕರಿಸಿದೆ. ಇದು ಮಾನವೀಯತೆಯ ವಿರುದ್ಧದ ಯುದ್ಧ ಅಪರಾಧವೆಂದು ಪರಿಗಣಿಸಿದೆ. ಇಸ್ರೇಲ್‌ನ ವಿಸ್ತರಿತ ಆಕ್ರಮಣ ಗಾಝಾ ನಗರ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆ ಮತ್ತು ಅಸ್ಥಿರತೆಗೆ ಕಾರಣವಾಗುತ್ತದೆ” ಎಂದು ಪಿಎ ಅಧ್ಯಕ್ಷರ ವಕ್ತಾರ ನಬಿಲ್ ಅಬು ರುಡೈನೆಹ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಮಾಸ್ ಗಾಝಾ ನಗರದ ಮೇಲಿನ ದಾಳಿಯನ್ನು ‘ಅನಾಗರಿಕ ಝಿಯೋನಿಷ್ಟ್ ಆಕ್ರಮಣ’ ಎಂದು ಕರೆದಿದೆ. ಈ ಮೂಲಕ ಇಸ್ರೇಲ್ “ಎಲ್ಲಾ ರೀತಿಯ ಅಂತಾರಾಷ್ಟ್ರೀಯ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಿದೆ” ಎಂದಿದೆ.

ಎರಡು ವರ್ಷಗಳ ನಿರಂತರ ಆಕ್ರಮಣದ ಮೂಲಕ ಇಸ್ರೇಲ್ ಕನಿಷ್ಠ 64,964 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ ಎಂದು ಅಲ್‌-ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದ ವಿಶ್ವಸಂಸ್ಥೆಯ ವರದಿ: ಜಾಗತಿಕ ಕ್ರಮಕ್ಕೆ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...