Homeಚಳವಳಿನಂಜುಂಡಸ್ವಾಮಿ, ಶರದ್ ಜೋಷಿ, ಟಿಕಾಯತ್ ಫೆನಾಮೆನನ್

ನಂಜುಂಡಸ್ವಾಮಿ, ಶರದ್ ಜೋಷಿ, ಟಿಕಾಯತ್ ಫೆನಾಮೆನನ್

- Advertisement -
- Advertisement -

ಹಸಿರು ಕ್ರಾಂತಿಯ ಹಿನ್ನೆಲೆಯಲ್ಲಿ ಸ್ಫೋಟಿಸಿದ ರೈತ ಚಳವಳಿಗಳನ್ನು ಬೇರೆಬೇರೆಯಾಗಿ ಕಾಣುವುದರಿಂದ ಅವುಗಳನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ. ಒಂದೇ ಮರದ ರೆಂಬೆಗಳಲ್ಲಿ ಒಂದೊಂದನ್ನೂ ಪ್ರತ್ಯೇಕ ಮರವೆಂಬಂತೆ ಪರಿಗಣಿಸಿದರೆ ಆ ರೆಂಬೆಯೂ, ಅದರ ಹೂ, ಫಲಗಳ ಬಗ್ಗೆಯೂ ಸರಿಯಾಗಿ ತಿಳಿಯಲಾಗುವುದಿಲ್ಲ. ಮರವನ್ನೂ ಅರಿಯಲಾಗುವುದಿಲ್ಲ ಅಲ್ಲವೇ! ಆ ಕಾಲದ ರೈತ ಚಳವಳಿಗಳ ನಡುವಣ ಸಾಮ್ಯತೆ, ಭಿನ್ನತೆಗಳ ತುಲಾನಾತ್ಮಕ ಅಧ್ಯಯನ ಮಾಡುವುದರ ಮೂಲಕ ಮಾತ್ರ ನಂಜುಂಡಸ್ವಾಮಿಯವರನ್ನೂ ಕರ್ನಾಟಕ ರಾಜ್ಯ ರೈತಸಂಘವನ್ನೂ ವಿಶ್ಲೇಷಣೆಗೊಳಪಡಿಸಲು ಸಾಧ್ಯ ಎಂಬ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಗಮನ ಸೆಳೆದಿದ್ದೇನೆ.

ಕೈಗೆತ್ತಿಕೊಂಡ ಕೃಷಿಯ ಸಮಸ್ಯೆಗಳು

ಈ ಎಲ್ಲ ರೈತಸಂಘಟನೆಗಳೂ ಕೈಗೆತ್ತಿಕೊಂಡ ಸಮಸ್ಯೆಗಳು ಸರಿಸುಮಾರು ಒಂದೇ ರೀತಿಯವು. ಅವೆಲ್ಲವೂ ಬೆಳೆಗಳ ಮತ್ತು ಫಸಲಿನ ಸಮಸ್ಯೆಗಳಾಗಿದ್ದವು. ಈ ಎಲ್ಲ ಸಂಘಟನೆಗಳ ಹೋರಾಟಗಳ ಪ್ರಧಾನ ಹೂರಣ ಫಸಲುಗಳ ಬೆಲೆ. ಅದರಲ್ಲೂ ಬಹುಹೆಚ್ಚು ಗಮನವನ್ನು ಸೆಳೆದದ್ದು ಕಬ್ಬಿನ ಬೆಲೆ. ಇದರ ಜೊತೆಗೆ ಭತ್ತ, ಹತ್ತಿ, ಈರುಳ್ಳಿ ಮತ್ತಿತರ ಬೆಳೆಗಳ ಬೆಲೆಯ ಪ್ರಶ್ನೆ ಕೂಡಾ ಬೇರೆಬೇರೆ ಸಮಯದಲ್ಲಿ ಹೋರಾಟದ ಪ್ರಶ್ನೆಯಾಯಿತು.

ಕರ್ನಾಟಕ ರಾಜ್ಯ ರೈತ ಸಂಘವನ್ನು ಸ್ಥಾಪಿಸುವ ಮೊದಲೇ ಅಸ್ತಿತ್ವದಲ್ಲಿದ್ದುದು ಎಚ್.ಎಸ್.ರುದ್ರಪ್ಪನವರ ನೇತೃತ್ವದ ಶಿವಮೊಗ್ಗ ಕಬ್ಬು ಬೆಳೆಗಾರರ ಸಂಘ. ಕಬ್ಬಿನ ಬೆಲೆ, ಸಕ್ಕರೆ ಕಾರ್ಖಾನೆಗಳು ಸರಬರಾಜು ಮಾಡಿದ ಕಬ್ಬಿನ ಹಣ ನೀಡದೇ ವರ್ಷಗಟ್ಟಲೇ ಬಾಕಿ ಉಳಿಸಿಕೊಳ್ಳುವುದು, ಮತ್ತಿತರ ಕಬ್ಬು ಬೆಳೆಯ ಸಮಸ್ಯೆಗಳೇ ಅದಕ್ಕೆ ಮುಖ್ಯವಾಗಿದ್ದವು. ರಾಜ್ಯ ರೈತ ಸಂಘ ಸ್ಥಾಪನೆಯಾದ ನಂತರ ಇದು ಶಿವಮೊಗ್ಗ ಮಾತ್ರವಲ್ಲದೆ ಮಂಡ್ಯ, ಬಳ್ಳಾರಿ, ಕೊಪ್ಪಳ, ಬೆಳಗಾಂ ಮೊದಲಾದ ಜಿಲ್ಲೆಗಳ ಕಬ್ಬು ಬೆಳೆಗಾರರ ಸಮಸ್ಯೆಗಳನ್ನೂ ಸೇರಿಸಿ ಕೈಗೆತ್ತಿಕೊಳ್ಳಲಾಯಿತು. 1982ರಲ್ಲಿ ಕಾಳಮುದ್ದನದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಮುಂದೆ, ಮೈಸೂರು ರಸ್ತೆಯ ಗೆಜ್ಜಲಗೆರೆಯಲ್ಲಿ ತೀವ್ರ ಹೋರಾಟಗಳಾದವು. ಈ ಸಮಯದಲ್ಲಿ ಗುಂಡೇಟಿನಿಂದ ಇಬ್ಬರು ರೈತರ ಹತ್ಯೆಯಾಯಿತು ಎಂದರೆ ಈ ಸಮಸ್ಯೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬಹುದು. ಇದೇ ಪ್ರಶ್ನೆಯ ಮೇಲೆ ವಿಧಾನಸೌಧದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹಗಳು ನಡೆದವು. ನಂತರ ವಿಧಾನಸೌಧದೊಳಗೆ ಹೆಗಡೆ ಸರ್ಕಾರದೊಡನೆ ನಡೆದ ಮಾತುಕತೆ ವಿಫಲವಾದಾಗ ವಿಧಾನಸೌಧದ ಸಮ್ಮೇಳನ ಸಭಾಂಗಣದೊಳಗೇ 1983ರ ಆಗಸ್ಟ್ 3ರಿಂದ 9ರವರೆಗೆ 7 ದಿನಗಳ ಧರಣಿ ಎಂಬಂತಹ ಗಂಭೀರ ಸ್ವರೂಪವನ್ನು ಕಬ್ಬಿನ ಬೆಲೆಯ ಹೋರಾಟ ಪಡೆದುಕೊಂಡಿತು. ನಂತರವೂ ಹತ್ತಾರು ಬಾರಿ ಕಬ್ಬಿನ ಬೆಲೆಗಾಗಿ ಹೋರಾಟಗಳನ್ನು ಸಂಘಟಿಸಲಾಯಿತು.

ನಂಜುಂಡಸ್ವಾಮಿಯವರು ರೈತಸಂಘಕ್ಕೆ ಬರುವ ಮೊದಲೇ ಲೆವಿ ಪ್ರಶ್ನೆಯನ್ನು ಎತ್ತಿದ್ದರು. ಲೆವಿ ಎಂದರೆ ಬರಗಾಲ ಮತ್ತು ಆಹಾರ ಕೊರತೆಯನ್ನು ನೀಗಿಸಲು ರೂಪಿಸಿದ ಪಡಿತರ ವ್ಯವಸ್ಥೆಗೆ ಆಹಾರ ಧಾನ್ಯಗಳನ್ನು ಪೂರೈಸಲು ಸರ್ಕಾರ ಭತ್ತದ ಬೆಳೆಗಾರರಿಂದ ಕಡಿಮೆ ಬೆಲೆಗೆ ಕೊಳ್ಳುತ್ತಿದ್ದ ಪದ್ಧತಿ. ಲೆವಿಯ ಜೊತೆಗೆ ಆಹಾರ ಧಾನ್ಯಗಳ ಬೆಲೆ ನಿಯಂತ್ರಣದಲ್ಲಿಡಲು ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ಹೊರಕ್ಕೆ ಸಾಗಾಟ ಮಾಡಲಾಗದಂತೆ ನಿರ್ಬಂಧಗಳನ್ನು ಹೇರಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಈ ಸಮಸ್ಯೆಗಳನ್ನು ಹಲವು ಬಾರಿ ಕೈಗೆತ್ತಿಕೊಂಡು ಹೋರಾಟ ರೂಪಿಸಿತು.

ಆಗಾಗ್ಗೆ ಗಮನ ನೀಡಿದ ಮತ್ತೊಂದು ಬೆಳೆ ಎಂದರೆ ಹತ್ತಿ. ಆದರೆ ಕಬ್ಬು ಮತ್ತು ಭತ್ತದ ಬೆಲೆ ಪ್ರಶ್ನೆ ಪಡೆದುಕೊಂಡಷ್ಟು ಪ್ರಾಮುಖ್ಯತೆಯನ್ನು ಹತ್ತಿ ಪಡೆದುಕೊಳ್ಳಲಿಲ್ಲ. ಉಳಿದ ಕೆಲವು ಬೆಳೆಗಳ ಪ್ರಶ್ನೆಗಳು ಸ್ಥಳೀಯ ಮಟ್ಟದಲ್ಲಿನ ಹೋರಾಟಗಳಿಗೇ ಸೀಮಿತವಾದವು.

ಈ ಅಂಶವೇ ರಾಜ್ಯ ರೈತ ಸಂಘದ ಪ್ರಧಾನ ನೆಲೆ ಕಬ್ಬು, ಭತ್ತ ಬೆಳೆಯುವ ಪ್ರದೇಶಗಳಿಗೆ ಸೀಮಿತಗೊಂಡ ವಾಸ್ತವಕ್ಕೆ ಕಾರಣವನ್ನು ನೀಡುತ್ತದೆ.

ಸಾಲ ವಸೂಲಿ, ಆಸ್ತಿ ಜಪ್ತಿ, ಅಧಿಕಾರಿಗಳ ಗ್ರಾಮ ಪ್ರವೇಶಕ್ಕೆ ತಡೆ

ಬೆಳೆಗಳ ಬೆಲೆ ಪ್ರಶ್ನೆಯ ನಂತರ ಸಾಲ, ಕಂದಾಯ ವಸೂಲಾತಿ ಮತ್ತು ಅದಕ್ಕಾಗಿ ಕಂದಾಯಾಧಿಕಾರಿಗಳು ರೈತರ ಮನೆಗೆ ನುಗ್ಗಿ ಅವರ ಆಸ್ತಿಗಳನ್ನು ಜಪ್ತಿ ಮಾಡುವ ಸಮಸ್ಯೆ ರಾಜ್ಯ ರೈತ ಸಂಘದಲ್ಲಿ ಗಣನೀಯ ಪ್ರಾಮುಖ್ಯತೆಯನ್ನು ಪಡೆಯಿತು. ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ತಲಾಟಿಯಿಂದ ತಹಸೀಲ್ದಾರ್‌ವರೆಗೆ ಅಧಿಕಾರಿಗಳು ರೈತರ ಮನೆಗೆ ನುಗ್ಗಿ ಬದುಕಿನ ದೈನಂದಿನ ಅಗತ್ಯಗಳೂ ಸೇರಿದಂತೆ ರೈತರ ಆಸ್ತಿಗಳನ್ನು ಜಪ್ತಿ ಮಾಡುತ್ತಿದ್ದರು. ಇದರ ವಿರುದ್ಧವಾಗಿ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಸಾಲ ವಸೂಲಾತಿಗಾಗಿ ಸರಕಾರ ಭೂಮಿ ಹರಾಜು ಕೈಗೊಳ್ಳಲು ಮುಂದಾಗುತ್ತಿತ್ತು. ಈ ಸಂದರ್ಭದಲ್ಲಿ ರೈತರ್‍ಯಾರೂ ಹರಾಜಿನಲ್ಲಿ ಭಾಗವಹಿಸಿ ಸಾಲ ಬಾಕಿಯುದಿಳಿದ್ದ ರೈತರ ಭೂಮಿಯನ್ನು ಕೊಳ್ಳಬಾರದೆಂದು ಕರೆ ನೀಡಲಾಯಿತು.

ನಂತರ ರೈತರ ಆಸ್ತಿಯನ್ನು ಜಪ್ತಿ ಮಾಡಿಟ್ಟುಕೊಂಡಿದ್ದ ಕಡೆಗೆ ಹೋಗಿ ಅವುಗಳನ್ನು ಮರುಜಪ್ತಿ ಮಾಡಿ ರೈತರಿಗೆ ಹಿಂದಿರುಗಿಸುವ ಕ್ರಮ ಕೈಗೊಳ್ಳಲಾಯಿತು. ಅಧಿಕಾರಿಗಳ ವಿರುದ್ಧ ಪ್ರತಿಕ್ರಮವಾಗಿ ಭ್ರಷ್ಟಾಚಾರದಿಂದ ಗಳಿಸಿದ ಆಸ್ತಿಯನ್ನು ರೈತ ಸಂಘದ ಕಾರ್ಯಕರ್ತರು ಜಪ್ತಿ ಮಾಡುವುದು. ಈ ಕ್ರಮಗಳು ಹೆಚ್ಚಾಗಿ ಶಿವಮೊಗ್ಗ ಜಿಲ್ಲೆಗೆ ಸೀಮಿತವಾದವು. ಇತರ ಜಿಲ್ಲೆಗಳಲ್ಲಿ ಕೆಲವು ಕಡೆ ಮಾತ್ರ ಇಷ್ಟು ಸ್ಫೂರ್ತಿಯಿಂದ ಇಂತಹ ಪ್ರತಿಕ್ರಮಗಳಿಗೆ ಕೈ ಹಾಕಲಾಯಿತು. ಆದರೆ ಹೆಚ್ಚು ಜನಪ್ರಿಯವಾದದ್ದು ಗ್ರಾಮಗಳಿಗೆ ಅಧಿಕಾರಿಗಳು ಪ್ರವೇಶಿಸಬಾರದು ಎಂದು ಹಳ್ಳಿಗಳ ಮುಂದೆ ರೈತರು ಬೋರ್ಡ್ ಹಾಕುವ ಕ್ರಮ.

ಇಂತಹ ಕ್ರಮಗಳು ನಂಜುಂಡಸ್ವಾಮಿಯವರಿಗೆ ಜನಪ್ರಿಯತೆಯನ್ನು ತಂದುಕೊಟ್ಟವು. ಪತ್ರಿಕೆಗಳಲ್ಲಿ ಈ ಕ್ರಮಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ನಂಜುಂಡಸ್ವಾಮಿಯವರ ಹೇಳಿಕೆಗಳು ಹೆಚ್ಚು ಪ್ರಚಾರವನ್ನು ಪಡೆದವು.

ಸಾಲ ವಸೂಲಿಗೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಸ್ವರೂಪ ಪಡೆದ ಒಂದು ಹೋರಾಟ 301 (ಸಿ) ಕಲಂ ತಿದ್ದುಪಡಿ ವಿರುದ್ಧದ್ದು. ರಾಮಕೃಷ್ಣ ಹೆಗಡೆ ಸರ್ಕಾರ ಒಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಸಹಕಾರಿ ಸಂಘಗಳ ಕಾನೂನಿಗೆ ತಂದ ಆ ತಿದ್ದುಪಡಿ ಸಾಲ ಬಾಕಿ ವಸೂಲಿಗೆ ರೈತರ ಭೂಮಿಯನ್ನು ಹರಾಜಿಗಿಟ್ಟಾಗ ರೈತರ್‍ಯಾರೂ ಹರಾಜಿನಲ್ಲಿ ಭಾಗವಹಿಸದಿದ್ದರೆ ಸರ್ಕಾರವೇ ಭೂಮಿಯನ್ನು ವಹಿಸಿಕೊಳ್ಳುವ ಕ್ರಮ. ಇದನ್ನು ವಿರೋಧಿಸಿ ರಾಜ್ಯ ರೈತ ಸಂಘ 1985ರಲ್ಲಿ ಬೆಳಗಾವಿಯಿಂದ ರೈತರ ಪಾದಯಾತ್ರೆ ಸಂಘಟಿಸಿತು. ಸರಿಸುಮಾರು ಒಂದು ತಿಂಗಳ ಕಾಲದ ಪಾದಯಾತ್ರೆ ಇದು. ಸರ್ಕಾರ ಈ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳುವುದರ ಮೂಲಕ ಹೋರಾಟ ಯಶಸ್ವಿಯಾಯಿತು.

ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ರೈತರಿಗೆ ಹೆಚ್ಚು ಸಾಲ ಕೊಡಬೇಕು ಎಂಬ ಒತ್ತಾಯ ಈ ಹೋರಾಟಗಳಲ್ಲಿ ಸೇರಿಲ್ಲ ಎಂಬುದು. ಖಾಸಗಿ ಬಡ್ಡಿ ಸಾಹುಕಾರರ ಸಾಲ ವಸೂಲಾತಿ, ಸುಲಿಗೆಗಳ ಪ್ರಶ್ನೆ ಇಲ್ಲ.

ಈ ಪ್ರಮುಖ ಪ್ರಶ್ನೆಗಳನ್ನು ಬಿಟ್ಟರೆ 80ರ ದಶಕದಲ್ಲಿ ರಾಜ್ಯ ರೈತ ಸಂಘ ನೀಲಗಿರಿ ನೆಡುವುದರ ವಿರುದ್ಧ, ಗ್ರಾನೈಟ್ ಕಲ್ಲು ಗಣಿಗಾರಿಕೆಯ ಅಕ್ರಮಗಳ ವಿರುದ್ಧ, ಸಾರಾಯಿ ವಿರುದ್ಧ, ರೈತರನ್ನು ಬಂಧಿಸುವುದರ ವಿರುದ್ಧ ಒಂದೆರಡು ತಾಲ್ಲೂಕುಗಳಿಗೆ ಸೀಮಿತವಾಗಿ ನಡೆದ ಹೋರಾಟಗಳಾಗಿವೆ.

ರೈತರ ಹಲವು ಒತ್ತಾಯಗಳ ಪಟ್ಟಿಯೊಂದನ್ನು ಮಂಡಿಸಿ ಅದರ ಬಗ್ಗೆ ನಡೆಸಿದ ಹೋರಾಟಗಳು 80ರ ದಶಕದಲ್ಲಿ ಬಹಳ ಮುಖ್ಯವಾದವು. ಅವು ರಾಜ್ಯ ರೈತ ಸಂಘ ಹಾಗೂ ನಂಜುಂಡಸ್ವಾಮಿಯವರಿಗೆ ರಾಜ್ಯದಲ್ಲೂ, ದೇಶದಲ್ಲೂ ಖ್ಯಾತಿಯನ್ನು ತಂದುಕೊಟ್ಟಿತು.

1982ರ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ನಡೆಸಿದ ಬೃಹತ್ ಬಹಿರಂಗ ಸಭೆ ಲಕ್ಷಗಟ್ಟಲೆ ರೈತರನ್ನು ಅಣಿನೆರೆಸಿತು. ರಾಜ್ಯದೆಲ್ಲೆಡೆಯಿಂದ ರೈತರು ವಾಹನಗಳಲ್ಲಿ ಬಂದು ಕಬ್ಬನ್ ಪಾರ್ಕನ್ನು ತುಂಬಿದರು.

1984ರ ಜನವರಿ 26ರಂದು ಆರಂಭದ ಚಳವಳಿ ಫೆ.2ರವರೆಗೆ ನಡೆದು, ರಸ್ತೆ, ರೈಲು ತಡೆ ಚಳುವಳಿಯಲ್ಲಿ 32 ಸಾವಿರಕ್ಕಿಂತ ಹೆಚ್ಚು ಜನ ಬಂಧನಕ್ಕೊಳಗಾದರು. ಜೈಲುಗಳಲ್ಲಿ ಜಾಗಗಳಿಲ್ಲದೆ ಶಾಲೆಗಳಲ್ಲಿ ಬಂಧನ. ಕೊನೆಗೆ, ಬಂಧಿಸಿದ ರೈತರನ್ನು ದೂರದ ಜಿಲ್ಲೆಗಳಲ್ಲಿ ಎಲ್ಲೆಲ್ಲೋ ಬಿಟ್ಟು ಬರುವುದು ಮೊದಲಾದ ಘಟನೆಗಳ ಮೂಲಕ ಕರ್ನಾಟಕ ಇಡೀ ದೇಶದ ಗಮನವನ್ನು ಸೆಳೆಯಿತು.

ಇವುಗಳ ಜೊತೆಗೆ 1987ರಲ್ಲಿ ಹಳಿಯಾಳದಲ್ಲಿ ಮಹಿಳಾ ರೈತರ ಸಮಾವೇಶ, ಹುಬ್ಬಳ್ಳಿಯಲ್ಲಿ ಪರ್ಯಾಯ ರಾಜಕೀಯ ಶಕ್ತಿ ಸಮಾವೇಶ, ಎರಡು ಜೈಲ್ ಭರೋ ಚಳುವಳಿಗಳನ್ನು ನಡೆಸಲಾಯಿತು.

ಮಹಾರಾಷ್ಟ್ರದ ಶೇತ್ಕರಿ ಸಂಘಟನೆ ಮತ್ತು ಶರದ್ ಜೋಷಿ

ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಗಳು ನಮಗೆ ಹೆಚ್ಚು ಪ್ರಸ್ತುತವೆಂದು ಸ್ವಲ್ಪ ವಿವರವಾಗಿ ಬರೆದಿದ್ದೇನೆ. ಅದೇ ತೆರನೆ ಇತರ ರೈತ ಸಂಘಗಳು ಕೈಗೆತ್ತಿಕೊಂಡ ಪ್ರಶ್ನೆಗಳು, ಅದರ ನಾಯಕರು ಪ್ರಸಿದ್ಧರಾದ ಬಗೆಯನ್ನು ಸಂಕ್ಷಿಪ್ತವಾಗಿ ನೀಡಲು ಪ್ರಯತ್ನಿಸುತ್ತೇನೆ.

ಶರದ್ ಜೋಷಿಯವರು 1979ರಲ್ಲಿ ಶೇತ್ಕರಿ ಸಂಘಟನೆ ಸ್ಥಾಪಿಸಿದ ಮೇಲೆ ಪುಣೆಯ ಬಳಿಯಿದ್ದ ತಮ್ಮ ಕೃಷಿ ಕ್ಷೇತ್ರದ ಪ್ರದೇಶದಲ್ಲಿಯೇ ರೈತರು ಬೆಳೆಯುತ್ತಿದ್ದ ಬೆಳೆಗಳ ಬೆಲೆಯಿಂದ ನಷ್ಟವಾಗುತ್ತಿರುವುದರ ವಿರುದ್ಧ ಹೋರಾಟ ಆರಂಭಿಸಿದರು. 1980ರಲ್ಲಿ ನರಗುಂದ, ನವಲಗುಂದ ರೈತ ಚಳವಳಿಯ ಸ್ಫೋಟದ ನಂತರ ನಿಪ್ಪಾಣಿಯಲ್ಲಿ ಬೀಡಿ ಹೊಗೆಸೊಪ್ಪು ಬೆಳೆಯುವ ರೈತರ ಹೋರಾಟದಲ್ಲಿ ಅವರು ಭಾಗವಹಿಸಿದರು.

ಅವರಿಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದು ನಾಸಿಕ್ ರಸ್ತೆ ತಡೆ ಹೋರಾಟ. ಈರುಳ್ಳಿ ಬೆಲೆ ಕುಸಿತದಿಂದಾಗಿ ಕಂಗೆಟ್ಟ ರೈತರಿಗೆ ನೇತೃತ್ವ ನೀಡಿ ಲಕ್ಷಗಟ್ಟಲೆ ರೈತರನ್ನು ವಾರಗಟ್ಟಲೆ ರಸ್ತೆಯ ಮೇಲೆ ಕೂಡಿಸಿ ದೊಡ್ಡ ಹೋರಾಟ ಮಾಡಿದರು. ಹತ್ತಿ, ಕಬ್ಬು ಮತ್ತಿತರ ಬೆಳೆಗಳ ಬೆಲೆ ಕುಸಿದಾಗಲೆಲ್ಲ ಅವರು ರೈತರ ಪ್ರಶ್ನೆಗಳನ್ನು ಕೈಗೆತ್ತಿಕೊಂಡರು.

ಹೀಗೆ ನಂಜುಂಡಸ್ವಾಮಿಯವರಂತೆಯೇ ಅವರ ಹೋರಾಟಗಳೆಲ್ಲ ಹೆಚ್ಚಾಗಿ ಕೇಂದ್ರೀಕೃತವಾಗಿದ್ದು ಬೆಳೆಗಳ ಬೆಲೆಗಳ ಸುತ್ತವೇ. ಆಹಾರ ಧಾನ್ಯಗಳ ಲೆವಿ, ಸಾಗಾಟ ನಿರ್ಬಂಧ, ವಿದ್ಯುತ್ ದರಗಳು, ಅದರ ಸರಬರಾಜು, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ, ಕಾನೂನುಗಳ ಹಿಡಿತ ಕೂಡಾ ಅವರು ಕೈಗೆತ್ತಿಕೊಂಡ ಇತರ ವಿಷಯಗಳು.

ಅವರ ಘೋಷಣೆಯೂ ಕೂಡಾ ನಂಜುಂಡಸ್ವಾಮಿಯವರಂತೆಯೇ: ’ರೈತರೇನೂ ಭಿಕ್ಷೆ ಕೇಳುತ್ತಿಲ್ಲ, ಅವರ ಬೆವರಿನ ಬೆಲೆ ಪಡೆಯುವುದು ಅವರ ಹಕ್ಕು’. ಬೆಲೆ ಸರಿಯಾಗಿ ನೀಡಿದರೆ ಯಾವ ಸಹಾಯಧನವೂ ಬೇಕಿಲ್ಲ. ಸಾಲಮನ್ನಾ ಕೂಡಾ ಕೇಳುವವರಲ್ಲ ರೈತರು. ಮಾರುಕಟ್ಟೆಯ ಮೇಲಿನ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಿ ಮಾರುಕಟ್ಟೆ ಮುಕ್ತ ಮಾಡಿ ಎಂಬುದು ಅವರ ನಿಲುವಾಗಿತ್ತು.

ಭಾರತೀಯ ಕಿಸಾನ್ ಯೂನಿಯನ್ ಮತ್ತು ಮಹೇಂದ್ರ ಟಿಕಾಯತ್

ಚರಣ್ ಸಿಂಗ್ ಸ್ಥಾಪಿಸಿ ನಂತರ ಕ್ರಿಯಾಶೀಲತೆ ಕಳೆದುಕೊಂಡಿದ್ದ ಭಾರತೀಯ ಕಿಸಾನ್ ಯೂನಿಯನ್‌ಅನ್ನು 1986ರಲ್ಲಿ ಪುನರ್ ಸಂಘಟಿಸಿದ ಟಿಕಾಯತ್, ತಮ್ಮ ಊರನ್ನೇ ಅದರ ಕೇಂದ್ರ ಕಚೇರಿ ಮಾಡಿ ವರ್ಗಾಯಿಸಿದರು.

1987ರಲ್ಲಿ ವಿಪರೀತವಾಗಿ ಏರಿಸಲಾಗಿದ್ದ ವಿದ್ಯುತ್ ದರಗಳು ಮತ್ತು ಅದರ ಸರಬರಾಜಿನ ಸಮಸ್ಯೆಗಳ ಬಗ್ಗೆ ಹೋರಾಟ ಆರಂಭಿಸಿದರು. 1988ರ ಜನವರಿ-ಫೆಬ್ರವರಿಯಲ್ಲಿ ಹಲವು ಹತ್ತು ಸಾವಿರ ರೈತರು ಮೀರತ್ ಜಿಲ್ಲಾಧಿಕಾರಿ ಕಚೆರಿಯನ್ನು ಮುತ್ತಿಗೆ ಹಾಕಿ ವಿದ್ಯುತ್ ಬಾಕಿ ಬಿಲ್ ವಜಾಕ್ಕೆ ಒತ್ತಾಯಿಸಿದರು. ಮೂರು ವಾರಗಳ ಕಾಲ ಅದರ ಕಾರ್ಯವನ್ನು ಬಂದ್ ಮಾಡಿದ ಹೋರಾಟದ ಮೂಲಕ ಟಿಕಾಯತ್ ಪ್ರಸಿದ್ಧರಾದರು. ನಂತರ ಒಂದು ದಶಕದ ಕಾಲ ಅವರ ಹೋರಾಟಗಳು ಉತ್ತುಂಗದಲ್ಲಿದ್ದವು.

ಮೀರತ್ ಹೋರಾಟದ ಯಶಸ್ಸಿನಿಂದ ಉತ್ತೇಜಿತರಾಗಿ 1988ರ ಅಕ್ಟೋಬರ್‌ನಲ್ಲಿ ದೆಹಲಿಯ ಬೋಟ್ ಕ್ಲಬ್‌ನ ವಿಶಾಲ ಮೈದಾನದಲ್ಲಿ ಲಕ್ಷಾಂತರ ರೈತರ ಬೃಹತ್ ಬಹಿರಂಗ ಸಭೆಯನ್ನು ಸಂಘಟಿಸಿದರು. ಶರದ್ ಜೋಷಿ ಮೊದಲಾದ ರೈತ ನಾಯಕರೂ ಇದರಲ್ಲಿ ಪಾಲ್ಗೊಂಡಿದ್ದರು.

ಈ ಸಭೆಯ ಸಂದರ್ಭದಲ್ಲಿ ದೆಹಲಿ ನಗರದಲ್ಲಿ ಹತ್ತಾರು ಕಿಮಿಗಳ ದೂರ ಎತ್ತಿನ ಬಂಡಿಗಳು, ಟ್ರ್ಯಾಕ್ಟರ್‌ಗಳು ನಿಂತು ಇಡೀ ದೆಹಲಿಯ ಸಂಚಾರವನ್ನೇ ಬಂದ್ ಮಾಡಿದುದನ್ನು ದೆಹಲಿಯ ನಾಗರಿಕರು ಇಂದೂ ನೆನಪಿಸಿಕೊಳ್ಳುವಂತಾಗಿದೆ.

ಅಂದಿನ ರಾಜೀವ್ ಗಾಂಧಿ ಸರ್ಕಾರ ಟಿಕಾಯತ್ ಸಲ್ಲಿಸಿದ 35 ಒತ್ತಾಯಗಳ ಮನವಿಯಲ್ಲಿ ಹಲವನ್ನು ಒಪ್ಪಿಕೊಳ್ಳಬೇಕಾಯಿತು. ಅದರಲ್ಲಿ ಕಬ್ಬಿನ ಬೆಲೆ, ವಿದ್ಯುತ್ ದರ ಬಾಕಿ ಮನ್ನಾ, ನೀರಿನ ದರ ಇಳಿಕೆ ಇತ್ಯಾದಿ ಇದ್ದವು. ಸಾಲ ಮನ್ನಾ ಮುಂದಿನ ದಿನಗಳಲ್ಲಿ ಮುಖ್ಯವಾಗಿ ಕೈಗೆತ್ತಿಕೊಂಡ ಮತ್ತೊಂದು ಮುಖ್ಯ ಸಮಸ್ಯೆಯಾಗಿತ್ತು.

ಮತ್ತೆ 1990, 92ರಲ್ಲಿ ಕೂಡಾ ಲಕ್ನೋದಲ್ಲಿ ಎರಡು ಮೂರು ಲಕ್ಷ ರೈತರ ಬೃಹತ್ ಹೋರಾಟಗಳನ್ನು ಸಂಘಟಿಸಿದರು. ಅವರೂ ಕೂಡಾ ನೀಡುತ್ತಿದ್ದ ಘೋಷಣೆ, ಮಾಡುತ್ತಿದ್ದ ಭಾಷಣಗಳು ನಮಗೆ ಬೇಕಾದ್ದು ’ಭಿಕ್ಷೆಯಲ್ಲ, ಬೆವರಿನ ಬೆಲೆ’ ಎಂದು.

ಹೀಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ನಂಜುಂಡಸ್ವಾಮಿಯವರು, ಶೇತ್ಕರಿ ಸಂಘಟನೆ ಮತ್ತು ಶರದ್ ಜೋಶಿಯವರು, ಭಾರತೀಯ ಕಿಸಾನ್ ಯೂನಿಯನ್ ಮತ್ತು ಮಹೇಂದ್ರ ಟಿಕಾಯತ್ ಎತ್ತಿಕೊಂಡ ಪ್ರಶ್ನೆಗಳು ಬೆಲೆಗಳ ಬೆಲೆಗಳು, ಸಾಲ, ಕೃಷಿ ಉತ್ಪಾದನೆಯ ಸಮಸ್ಯೆಗಳು, ಹೋರಾಟದ ವಿಧಾನಗಳು ಕೂಡಾ ಬಹಳಷ್ಟು ಸಾಮ್ಯ. ಬೃಹತ್ ಬಹಿರಂಗ ಸಭೆಗಳು, ಕಚೆರಿಗಳ ಮುತ್ತಿಗೆ, ರಸ್ತೆ ಬಂದ್ ಇತ್ಯಾದಿ ಹಾಗೂ ಪ್ರಸಿದ್ಧಿಗೆ ಬಂದ ರೀತಿಯೂ ಕೂಡಾ ಒಂದೇ ರೀತಿಯದು. ಬೃಹತ್ ರೈತ ಸಭೆಗಳ ಹೋರಾಟಗಳ ಮೂಲಕ ಮುನ್ನುಗ್ಗಿ ಜನರನ್ನು-ಸರ್ಕಾರಗಳನ್ನು ತಲುಪುತ್ತಿದ್ದುದು ವಿಶೇಷವಾಗಿತ್ತು.

ಹೀಗೆ 80ರ ದಶಕದಲ್ಲಿ ಉತ್ತುಂಗದಲ್ಲಿದ್ದ ಈ ರೈತ ಸಂಘಟನೆಗಳು 90ರ ದಶಕದಲ್ಲಿ ಇಳಿಮುಖವಾದವೇಕೆ? ಮುಂದಿನ ಸಂಚಿಕೆಯಲ್ಲಿ..

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ರೈತ ಹೋರಾಟ; 80-90ರ ದಶಕದ ಬೆಳವಣಿಗೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...