Homeಅಂಕಣಗಳುದಮನಿತರಿಗೆ ಶಿಕ್ಷಣಕ್ರಮ ಹೇಗಿರಬೇಕು?: ಪಾಲೊ ಫ್ರೇರಿಯ 'ಪೆಡಗಾಗಿ ಆಫ್ ದಿ ಅಪ್ರೆಸ್ಡ್'

ದಮನಿತರಿಗೆ ಶಿಕ್ಷಣಕ್ರಮ ಹೇಗಿರಬೇಕು?: ಪಾಲೊ ಫ್ರೇರಿಯ ‘ಪೆಡಗಾಗಿ ಆಫ್ ದಿ ಅಪ್ರೆಸ್ಡ್’

ಶಿಕ್ಷಣದ ಮೂಲಕವೇ ವ್ಯಕ್ತಿಯು ತಾರ್ಕಿಕವಾಗಿ, ಬೌದ್ಧಿಕವಾಗಿ ತನ್ನ ಬಿಡುಗಡೆಯ ದಾರಿಯನ್ನು ತುಳಿಯಬೇಕಾಗಿರುವ ಅಗತ್ಯತೆಯನ್ನು ಫ್ರೇರಿ ಈ ಪುಸ್ತಕದಲ್ಲಿ ಒತ್ತಿ ಹೇಳುತ್ತಾರೆ.

- Advertisement -
- Advertisement -

ಯಾವ ಶಿಕ್ಷಣ ವ್ಯವಸ್ಥೆಯು ವ್ಯಕ್ತಿಗಳನ್ನು ಪೋಷಿಸುವ ಬದಲು ಶೋಷಿಸುತ್ತದೆಯೋ, ಪ್ರೇರೇಪಿಸುವ ಬದಲು ಪಳಗಿಸುತ್ತದೆಯೋ, ಸಶಕ್ತಗೊಳಿಸುವ ಬದಲು ದುರ್ಬಲಗೊಳಿಸುತ್ತದೆಯೋ ಆಗ ಯಾವುದೋ ಒಂದು ವರ್ಗದ ಹಿತಾಸಕ್ತಿ ಮಾತ್ರ ಸಮಾಜದಲ್ಲಿ ಶಿಕ್ಷಣದ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸುತ್ತಿದೆ ಎಂದು ತಿಳಿಯಬೇಕು.

ಕಾರ್ಲ್ ಮಾರ್ಕ್ಸ್ ಒಂದೆಡೆ ದಾಖಲಿಸುವಂತೆ ‘ಆಳುವ ವರ್ಗದ ವಿಚಾರಗಳು ಆಳುವ ವಿಚಾರಗಳ ಸಮಯವನ್ನೇ ಸದಾ ಜೀವಂತವಾಗಿರಿಸಲು ಯತ್ನಿಸುತ್ತದೆ. ಅಂದರೆ, ಸಮಾಜವನ್ನು ಆಳುವ ಶಕ್ತಿಯಾಗಿರುವಂತ ವರ್ಗವು ತನ್ನದೇ ಬೌದ್ಧಿಕತೆಯನ್ನು ಜ್ಞಾನವನ್ನಾಗಿ ಮುಂದಿಡುತ್ತದೆ’ ಎನ್ನುತ್ತಾರೆ.

ಆಳುವ ವ್ಯವಸ್ಥೆಯು ತನಗೆ ಅನುಕೂಲಕರವಾದ ವಿಚಾರಗಳನ್ನೇ ಶಿಕ್ಷಣದ ಮುಖವಾಡದಲ್ಲಿ ಶಾಲೆಗಳಲ್ಲಿ ತರಬೇತಿ ನೀಡುವುದು. ಶಾಲೆಯಲ್ಲಿ ಕಲಿಕೆ ಎಂಬುದು ರಾಜಕೀಯ ವ್ಯವಸ್ಥೆಯ ಉದ್ದೇಶಪೂರ್ವಕವಾದ ಸಾಮಾಜಿಕ ತರಬೇತಿಯಾಗಿರುತ್ತದೆ. ರಾಜಕೀಯ ವ್ಯವಸ್ಥೆಯ ಸೂತ್ರವನ್ನು ಹಿಡಿದಿರುವ ವರ್ಗವು ತನಗೆ ಅನುಕೂಲಕರವಾದಂತಹ ಸಾಂಸ್ಕೃತಿಕ ಮತ್ತು ಸಾಮಾಜಿಕ ಉತ್ಪನ್ನಗಳನ್ನು ತಯಾರಿಸುವಂತಹ ಕಾರ್ಖಾನೆ ಈ ಶಾಲೆಗಳಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವ್ಯಕ್ತಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಮನಸ್ಸು ಮತ್ತು ವರ್ತನೆಗಳನ್ನು ಪಳಗಿಸುತ್ತಾ ಇಡೀ ಸಮಾಜವನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು. ಹೀಗೆ ವ್ಯಕ್ತಿಗಳ ಮೂಲಕ ಇಡೀ ಸಮಾಜವನ್ನು ಕೊಲ್ಲುವ ಯಂತ್ರವಾಗುವ ಈ ಶಿಕ್ಷಣವ್ಯವಸ್ಥೆಯು ಸಮಸಮಾಜದ ವಿರುದ್ಧವಾಗಿ ಪಿತೂರಿಯನ್ನು ಹೂಡುತ್ತದೆ.

ಫ್ರೇರಿ ಇಂತಹ ಪಿತೂರಿಯನ್ನು ಗಮನದಲ್ಲಿಟ್ಟುಕೊಂಡು Pedagogy of the Oppressed ಕೃತಿ ರಚನೆ ಮಾಡುತ್ತಾರೆ. ಅದರಲ್ಲಿ ಮುಕ್ತವಾದ ಮತ್ತು ಪ್ರಾಮಾಣಿಕವಾದ ಸಂವಾದ ನಡೆಸಲು ಸಾಧ್ಯತೆಯ ಶಿಕ್ಷಣವನ್ನು ಬಯಸುತ್ತಾರೆ. ಒತ್ತಡಕ್ಕೊಳಗಾಗಿ ದಮನಿತರಾಗುವ ಬದಲು ವ್ಯಕ್ತಿ, ಸಮುದಾಯಗಳು ಮತ್ತು ಸಮಾಜವು ಸ್ವಾತಂತ್ರ್ಯವನ್ನು ಪಡೆಯುವ ಗುರಿಯನ್ನು ಈ ಪರ್ಯಾಯ ಬೋಧನಾಕ್ರಮ ಅಥವಾ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದಿಡುತ್ತಾರೆ.

ಕೃತಿಯು ಬೌದ್ಧಿಕವಾಗಿ ಕ್ರಾಂತಿಕಾರಕ ವಿಷಯಗಳನ್ನು ಒಳಗೊಂಡಿದೆ ಎನ್ನುವುದಕ್ಕಿಂತ, 1960ರಲ್ಲಿ ದಕ್ಷಿಣ ಅಮೆರಿಕೆಯ ವಯಸ್ಕ ರೈತರಿಗೆ ಫ್ರೇರಿ ತಾವೇ ಪಾಠ ಮಾಡುವ ಅನುಭವದಲ್ಲಿ ಕಂಡುಕೊಂಡ ವಿಷಯಗಳಿವು. ಸಮಸ್ಯೆ ಮತ್ತು ಪರಿಹಾರಗಳನ್ನು ಕೃತಿಯಲ್ಲಿ ತರ್ಕಿಸುತ್ತಾರೆ.

ಕಾರ್ಲ್ ಮಾರ್ಕ್ಸ್ ಅವರ ಸಮಾಜವಾದ ಮತ್ತು ಬೈಬಲ್ಲಿನಲ್ಲಿರುವ ಬಿಡುಗಡೆಯ ಪ್ರಧಾನವಾದ ತಾತ್ವಿಕ ಅಂಶಗಳು ಹದವಾಗಿ ಬೆರೆಯುತ್ತಾ ತನ್ನ ವಿಚಾರಗಳನ್ನು ಸಂವಾದಿಸುತ್ತದೆ.

ಜಗತ್ತಿನ ಯಾವುದೇ ಮೂಲೆಯಲ್ಲಿ ದಮನಿತರು ಅವರ ದೇಶ, ಧರ್ಮ, ಸಂಸ್ಕೃತಿಗಳನ್ನು ಮೀರಿ ಬರಿಯ ಶೋಷಿತ ಜೀವಿಗಳಷ್ಟೇ ಆಗಿರುತ್ತಾರೆ. ಅವರನ್ನು ಆ ಭೌಗೋಳಿಕ ಪ್ರದೇಶದಲ್ಲಿ ದಮನಿಸಲು ಜನಾಂಗವನ್ನೋ, ವರ್ಣವನ್ನೋ, ವರ್ಗವನ್ನೋ, ಧರ್ಮವನ್ನೋ, ಸಂಸ್ಕೃತಿಯನ್ನೋ, ಜಾತಿಯನ್ನೋ ಕಾರಣವಾಗಿಸಿಕೊಳ್ಳಬಹುದು. ಆದರೆ, ಪರಿಣಾಮ ಮಾತ್ರ ಶೋಷಿತರ ನೋವು, ಸ್ವಾತಂತ್ರ್ಯಹರಣ, ಅಸಮಾನತೆಯ ಕಾರಣದ ಸಂಘರ್ಷ. ಹಾಗಾಗಿ ಯಾವುದೇ ದೇಶದಲ್ಲಿ ನಡೆಯುವ ದಮನಿತರ ಪರವಾದ ಹೋರಾಟಗಳು, ಸಿದ್ಧಾಂತಗಳು, ಪ್ರೇರಣೆಗಳು ಮತ್ತಿನ್ನಾವುದೇ ಜಗತ್ತಿನ ಮೂಲೆಗೆ ಅನ್ವಯವಾಗಬಹುದು. ಕಮ್ಯುನಿಸ್ಟರ ಸಿದ್ಧಾಂತಗಳು, ಫ್ರೆಂಚರ ಕ್ರಾಂತಿ, ಅಮೆರಿಕೆಯ ವರ್ಣಭೇದ ನೀತಿಯ ವಿರುದ್ಧದ ಹೋರಾಟ ನಮ್ಮ ಭಾರತಕ್ಕೆ ಹೊಂದುವುದಿಲ್ಲ ಎನ್ನಲಾಗದು. ಯಾವುದೇ ಜೀವಪರವಾಗಿರುವ ಮತ್ತು ಸಮಾಜಮುಖಿಯಾಗಿರುವ ಹೋರಾಟಗಳು ಮತ್ತು ಸಿದ್ಧಾಂತಗಳು ಪ್ರೇರಣೆಗಳನ್ನು ನೀಡಲು ಸಾಧ್ಯ. ಪರಿಕರಗಳು, ಸಂಗತಿಗಳು ಮತ್ತು ಸನ್ನಿವೇಶಗಳಷ್ಟೇ ಬೇರೆ ಇರುತ್ತವೆ. ಆದರೆ ಆಶಯ ಜೀವಪರವಾದ ಮತ್ತು ಸಮಸಮಾಜಕ್ಕೆ ಮಿಡಿಯುವಂತದ್ದೇ ಆಗಿರುತ್ತದೆ.

ಫ್ರೇರಿ ಬಹಳ ನಾಜೂಕಾಗಿ ವಿಜ್ಞಾನದ ಸಂಸ್ಕೃತಿ ಮತ್ತು ಬಿಡುಗಡೆಯ ಭೀತಿಯನ್ನು ಮುನ್ನೆಲೆಗೆ ತರುತ್ತಾ ದಮನಿತರು ಎಂದರೆ ಯಾರು? ಅವರಿಗೆ ತಾವು ದಮನಿತರು ಎಂದು ಏಕೆ ತಿಳಿಯುವುದಿಲ್ಲ ಅಥವಾ ತಿಳಿದರೂ ‘ಇದೇ ನಮ್ಮ ಹಣೆಬರಹ’ ಎಂಬಂತೆ ಯಥಾಸ್ಥಿತಿಯನ್ನು ಒಪ್ಪಿಕೊಂಡು ಏಕೆ ಮೂಲೆಗೆ ಸೇರುತ್ತಾರೆ ಎಂಬುದನ್ನು ವಿವರಿಸುತ್ತಾರೆ. ತಾರ್ಕಿಕ ಸಾಮರ್ಥ್ಯ ಮತ್ತು ಸಂವಾದಶೀಲ ಶಿಕ್ಷಣವು ‘ಮುಕ್ತತೆಯನ್ನು ತರಬೇತುಗೊಳಿಸುವ’ ಸಾಧನವಾಗಿದೆ ಎಂದು ಬಲವಾಗಿ ಸಮರ್ಥಿಸುತ್ತಾರೆ. ತಾರ್ಕಿಕ ಸಾಮರ್ಥ್ಯದಿಂದ ಶೂನ್ಯವಾಗಿರುವ ಶಿಕ್ಷಣವನ್ನು ಪಡೆಯುವುದರಿಂದ ಬರಿಯ ಧಾರ್ಮಿಕ ಮೌಢ್ಯವನ್ನಷ್ಟೇ ಅಲ್ಲದೇ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿಯೂ ವ್ಯಕ್ತಿಗಳು ಮತ್ತು ಸಮುದಾಯಗಳು ಮೂಢರಾಗುತ್ತಾರೆ. ಹೇರಿದ್ದನ್ನು ಹೊರುತ್ತಾರೆ. ಹಾಗಾಗಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡುವುದು ಚಿಂತಕರ ಕೆಲಸ, ಬುದ್ಧಿಜೀವಿಗಳ ಜವಾಬ್ದಾರಿ.

ಬುದ್ಧಿಜೀವಿ ಎಂದರೆ, ಒಂದು ವಿಷಯವನ್ನು ಏಕಪ್ರಕಾರವಾಗಿ ಪ್ರಸ್ತುತಪಡಿಸುವ ಅಥವಾ ಸಾಂಪ್ರದಾಯಿಕ ಮಂಡನೆಯ ಆಯಾಮಗಳ ಹೊರತಾಗಿ ಇತರ ಆಯಾಮಗಳಿಂದ ತಾರ್ಕಿಕವಾಗಿ ಯೋಚಿಸಬಲ್ಲವನು. ಹೊರಿಸಿದ್ದನ್ನು ಹೊತ್ತು ಸಾಗುವ ಬದಲಿಗೆ ಕಾರಣ, ಪರಿಣಾಮ, ಇತಿಹಾಸ ಮತ್ತು ದೂರದೃಷ್ಟಿಗಳೆಲ್ಲದರ ಮೂಸೆಯಲ್ಲಿ ಸಂಗತಿಯನ್ನು ಬೇಯಿಸುವವನು. ಬುದ್ಧಿಜೀವಿಯ ಗುರುತರವಾದ ಈ ಜವಾಬ್ದಾರಿಯನ್ನು ಅವನು ನಿಭಾಯಿಸಲು ಯಥಾಸ್ಥಿತಿವಾದಿಗಳು ಮತ್ತು ಸಂಪ್ರದಾಯಸ್ಥರು ಬಿಡುವುದಿಲ್ಲ. ಏಕೆಂದರೆ ಅವರ ವರ್ಗಾಸಕ್ತಿ, ವರ್ಣಾಸಕ್ತಿ, ಜನಾಂಗೀಯಾಸಕ್ತಿಗಳ ಪಿತೂರಿಗಳು ಬಯಲಾಗುತ್ತವೆ. ಬುದ್ಧಿಜೀವಿಗಳನ್ನು ಅವಹೇಳನ ಮಾಡುವ ಮೂಲಕ ವಿಷ ಕಾರುತ್ತಾರೆಯೇ ಹೊರತು ತಾರ್ಕಿಕವಾಗಿ ವಾದಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ತಾರ್ಕಿಕವಾಗಿ ಎದುರಿಸಲಾಗದಾಗ ಸೈದ್ಧಾಂತಿಕವಾಗಿ ಸೋಲುತ್ತೇವೆಂಬ ಭಯವೇ ಅವರನ್ನು ಕ್ರೋಧಾವಿಷ್ಟರನ್ನಾಗಿ ಮಾಡುವುದು.

ಹೀಗಾಗಿ ಶಿಕ್ಷಣದ ಮೂಲಕವೇ ವ್ಯಕ್ತಿಯು ತಾರ್ಕಿಕವಾಗಿ, ಬೌದ್ಧಿಕವಾಗಿ ತನ್ನ ಬಿಡುಗಡೆಯ ದಾರಿಯನ್ನು ತುಳಿಯಬೇಕಾಗಿರುವ ಅಗತ್ಯತೆಯನ್ನು ಫ್ರೇರಿ ಒತ್ತಿ ಹೇಳುತ್ತಾರೆ.

ಇದು ಆದಾಗ ಮಾಡೋಣ ಎಂಬಂತಹ ವಿಷಯವಲ್ಲ. ಅತಿ ತುರ್ತಾದ ಅಗತ್ಯವೆಂದು ಫ್ರೇರಿ ಒತ್ತಾಯಿಸುತ್ತಾರೆ. ಏಕೆಂದರೆ, ಶಿಕ್ಷಣ ವ್ಯವಸ್ಥೆಯು ತನ್ನ ಪಠ್ಯಕ್ರಮದಲ್ಲಿ, ಬೋಧನಾ ಕ್ರಮದಲ್ಲಿ ಮಾಡುವಂತಹ ಹಡಾವಿಡಿಗಳನ್ನು ಈಗ ಅದರಿಂದ ಶಿಕ್ಷಣ ಪಡೆದು ಹೋದ ವಿದ್ಯಾರ್ಥಿಗಳಲ್ಲಿ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಅವರೆಲ್ಲಾ ಸಮಾಜದಲ್ಲಿ ವಯಸ್ಕ ಪ್ರಜೆಗಳಾಗಿ ಬಹುಬೇಗ ರೂಪುಗೊಳ್ಳುತ್ತಾರೆ.

ಹಾಗಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಿಸಬಹುದಾದ ತುರ್ತಿನ ಕ್ರಮಗಳೇನು ಎಂಬುದನ್ನೂ ಅವರು ಚರ್ಚಿಸುತ್ತಾರೆ. ಏಕಮುಖಿ ಶಿಕ್ಷಣವನ್ನು ರೂಢಿಸಿಕೊಂಡಿರುವ ಶಿಕ್ಷಕ ತನ್ನ ಬೋಧನಾ ಕ್ರಮದಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಡುಗಳೇನು ಎಂಬುದನ್ನೂ ಕೂಡಾ ಫ್ರೇರಿ ಸೂಚಿಸುತ್ತಾರೆ.

ಮನುಷ್ಯನ ಆರ್ಥಿಕ ಸಬಲೀಕರಣಕ್ಕೆ ತಡೆಯಾಗಿರುವುದೇನು? ಅದನ್ನು ದಾಟಿ ಮಾಡಬೇಕಾಗಿರುವುದೇನು ಎಂದು ವಿವರವಾಗಿ ನೋಡಬೇಕೆಂದರೆ ದಮನಿತರಿಗಾಗಿ ಶಿಕ್ಷಣಕ್ರಮವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಓದಬೇಕು. ಇದರಿಂದ ಈಗ ಹೊಸ ಶಿಕ್ಷಣನೀತಿಯನ್ನು ಹೊಂದಿರುವ ಭಾರತದ ಸದ್ಯದ ಪರಿಸ್ಥಿತಿಗೆ ಸಿಗುವುದು ನಕಾಶೆಯಲ್ಲ. ಆದರೆ ಪ್ರೇರಣೆ. ಮತ್ತೊಂದು ಆಯಾಮದಿಂದ ವಿಚಾರ ಮಾಡಲು ಪ್ರಚೋದನೆ.


ಇದನ್ನೂ ಓದಿ: ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...