Homeಗೌರಿ ಕಣ್ಣೋಟದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ದೈಹಿಕ ಸೌಂದರ್ಯದ ಬಗ್ಗೆ ಗಮನ ಕೊಡದೆ ನಾನು ನನ್ನ ಸಮಯವನ್ನು ಆಂತರ್ಯದ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ವ್ಯಯಿಸಿದರೆ ನಾನು ಈ ಜಗತ್ತಿನಲ್ಲಿ ನನ್ನ ಕೈಲಾದಷ್ಟು ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರಬಹುದೆನಿಸುತ್ತದೆ.

- Advertisement -
- Advertisement -

ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಯಾರೋ ಒಬ್ಬ ಓರ್ವ ಯುವತಿಯ ಫೋಟೊ ಒಂದನ್ನು ಹಾಕಿ “ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದೆಂದು ನನಗೆ ಗೊತ್ತಾಗಲಿಲ್ಲ’’ ಎಂದು ಅದರಡಿ ಬರೆದಿದ್ದ. ಆತನ ಗೊಂದಲಕ್ಕೆ ಕಾರಣ ಆ ಹುಡುಗಿಯ ಮುಖದ ಮೇಲಿದ್ದ ದಟ್ಟವಾದ ಕೂದಲು. ಸೌಂದರ್ಯ ಕುರಿತು ಸಾಮಾನ್ಯ ಜನರ ಅಭಿಪ್ರಾಯ ಮತ್ತು ಪುರುಷರ ನಿರೀಕ್ಷೆಗೆ ಬೆಲೆ ಕೊಡದ ಆ ಯುವತಿ ತನ್ನ ಸಿಖ್ ಧರ್ಮದ ನಂಬಿಕೆಯಂತೆ ತನ್ನ ಮುಖದ ಮೇಲಿರುವ ಕೂದಲನ್ನು ಬೋಳಿಸಿಕೊಂಡಿರಲಿಲ್ಲ. ಸಹಜವಾಗಿಯೇ ಇದು ಆ ವ್ಯಕ್ತಿಗೆ ವಿಚಿತ್ರವಾಗಿ ಕಂಡಿತ್ತು.

ಆತ ಈ ಫೋಟೋವನ್ನು ಹಾಕಿದ ನಂತರ ಅದರಲ್ಲಿರುವ ಯುವತಿಯ ಧಾರ್ಮಿಕ ನಂಬಿಕೆಯನ್ನು ಬೆಂಬಲಿಸುತ್ತ ಮತ್ತು ಅದನ್ನು ಲೇವಡಿ ಮಾಡಿದ ವ್ಯಕ್ತಿಯ ಅಸೂಕ್ಷ್ಮತೆಯನ್ನು ಖಂಡಿಸುತ್ತಾ ಹಲವಾರು ಪ್ರತಿಕ್ರಿಯೆಗಳು ಬಂದವು. ಹಾಗೆಯೇ ಆಕೆಯನ್ನು ತಮಾಷೆ ಮಾಡಿದವರಿಗೂ ಕೊರತೆ ಇರಲಿಲ್ಲ. ಆಕೆಯ ಸುತ್ತ ಎಲ್ಲ ತರಹದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗಲೇ ಆ ಯುವತಿಯೇ ತನ್ನ ಅಭಿಪ್ರಾಯವನ್ನು ದಾಖಲಿಸಿದಳು. ಆಕೆ ಅದೆಷ್ಟು ಸೂಕ್ಷ್ಮಮನಸ್ಸಿನ, ದೃಢ ನಂಬಿಕೆಯ, ಸಂವೇದನಾಶೀಲ ಯುವತಿ ಎಂದರೆ ಆಕೆಯನ್ನು ಎಲ್ಲರೂ ಹಾಡಿಹೊಗಳಿದರು.

ಆ ಯುವತಿಯ ಪ್ರತಿಕ್ರಿಯೆ ಹೀಗಿತ್ತು:

“ಹಾಯ್ ಗೆಳೆಯರೆ. ನಾನು ಬಲ್‌ಪ್ರೀತ್ ಕೌರ್. ಆ ಫೋಟೋದಲ್ಲಿರುವ ಹುಡುಗಿ. ನನ್ನ ಸ್ನೇಹಿತರು ಫೇಸ್ಸ್ಬುಕ್‌ನಲ್ಲಿ ಈ ಫೋಟೋದ ಬಗ್ಗೆ ನನ್ನ ಗಮನ ಸೆಳೆಯುವ ತನಕ ಈ ಕುರಿತು ನನಗೆ ಗೊತ್ತಿರಲಿಲ್ಲ. ಈ ನನ್ನ ಫೋಟೊವನ್ನು ತೆಗೆದವರು ನನ್ನನ್ನು ಕೇಳಿದ್ದರೆ ನಾನು ಸ್ಮೈಲ್‌ ಮಾಡಿ ಸಹಕರಿಸುತ್ತಿದ್ದೆ. ಈ ಫೋಟೋಗೆ ಬಂದಿರುವ ನಕಾರಾತ್ಮಕ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಓದಿ ನನಗೆ ಮುಜುಗರವಾಗಲಿ, ಅವಮಾನವಾಗಲಿ ಆಗಿಲ್ಲ. ಯಾಕೆಂದರೆ ನಾನು ಇರುವುದೇ ಹೀಗೆ. ಹೌದು, ನಾನು ಧರ್ಮದ ದೀಕ್ಷೆ ಪಡೆದಿರುವ, ಮುಖದ ಮೇಲೆ ಕೂದಲನ್ನು ಹೊಂದಿರುವ ಸಿಖ್ ಮಹಿಳೆ. ನಾನು ಇತರೆ ಮಹಿಳೆಯರಿಗಿಂತ ಭಿನ್ನವಾಗಿ ಕಾಣುವುದರಿಂದ ನನ್ನ ಲಿಂಗದ ಬಗ್ಗೆ ಹಲವರಿಗೆ ಅನುಮಾನ ಮೂಡುತ್ತದೆ ಎಂಬುದನ್ನು ನಾನು ಬಲ್ಲೆ. ಅದರೆ ಧರ್ಮಧೀಕ್ಷೆ ಪಡೆದಿರುವ ಸಿಖ್ಖರು ಈ ದೇಹವನ್ನು ದೇವರೇ ನಮಗೆ ಕೊಟ್ಟಿದ್ದೆಂದೂ, ಈ ದೇಹ ಪವಿತ್ರವೆಂದೂ (ಒಂದು ರೀತಿಯಲ್ಲಿ ಇದು ಲಿಂಗರಹಿತ ದೇಹ), ಇದನ್ನು ದೇವರು ಕೊಟ್ಟಂತೆಯೇ ಕಾಪಾಡಿಕೊಳ್ಳಬೇಕೆಂದೂ ನಂಬಿದ್ದೇವೆ. ಹೇಗೆ ಮಕ್ಕಳು ತಮಗೆ ಜನ್ಮ ನೀಡಿದ ತಂದೆ/ತಾಯಿಯನ್ನು ತಿರಸ್ಕರಿಸುವುದಿಲ್ಲವೋ, ಹಾಗೆಯೇ ಸಿಖ್ಖರು ದೇವರು ಕೊಟ್ಟಿರುವ ದೇಹವನ್ನು ತಿರಸ್ಕರಿಸುವುದಿಲ್ಲ. “ನಾನು, ನನ್ನದು’’ ಎಂಬ ಭಾವನೆಯಲ್ಲಿ ನಮ್ಮ ದೇಹವನ್ನು ಒಂದು ಪರಿಕರದಂತೆ ಬದಲಾಯಿಸುತ್ತಾ ಹೋದರೆ ನಾವು ನಮ್ಮ ಒಳಗೇ ನಮ್ಮ ಅಹಂ ಮತ್ತು ದೈವತ್ವದ ನಡುವೆ ಬಿರುಕನ್ನು ಮೂಡಿಸಿಕೊಳ್ಳುತ್ತೇವೆ. ಸೌಂದರ್ಯದ ಬಗ್ಗೆ ಸಮಾಜದ ಪರಿಕಲ್ಪನೆಯನ್ನು ಮೀರಿ ನಿಲ್ಲುವ ಮೂಲಕ ನಾನು ನನ್ನ ಕೃತ್ಯಗಳ ಬಗ್ಗೆ ಹೆಚ್ಚು ಗಮನಹರಿಸಲು ನನಗೆ ಸಾಧ್ಯ ಎಂದು ನಾನು ನಂಬಿದ್ದೇನೆ. ನನ್ನ ಚಿಂತನೆ, ವರ್ತನೆ ಮತ್ತು ಕೃತ್ಯಗಳು ನನ್ನ ಈ ದೇಹದ ವಿನ್ಯಾಸಕ್ಕಿಂತ ಮೌಲ್ಯಯುತವಾದದ್ದೆಂದು ಭಾವಿಸಿದ್ದೇನೆ”.

ಎಷ್ಟೇ ಆದರೂ ಕೊನೆಗೂ ಈ ದೇಹ ಬೂದಿ ಆಗುವುದರಿಂದ ಇದರ ಬಗ್ಗೆ ಯಾಕಷ್ಟು ಚಡಪಡಿಸಬೇಕು? ನಾನು ಸತ್ತ ನಂತರ ಯಾರೂ ನಾನು ಹೇಗಿದ್ದೆ ಎಂದು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಅಷ್ಟೇ ಯಾಕೆ, ನನ್ನ ಮಕ್ಕಳೂ, ನನ್ನ ದನಿಯನ್ನೂ ಮರೆತುಬಿಡುತ್ತಾರೆ. ಕಾಲಕ್ರಮೇಣ ನಮ್ಮ ಶಾರೀರಿಕ ನೆನಪುಗಳೂ ಅಳಿಸಿಹೋಗುತ್ತವೆ. ಬದಲಾಗಿ ನನ್ನ ಪ್ರಭಾವ ಮತ್ತು ನನ್ನ ಲೆಗಸಿ ಉಳಿದಿರುತ್ತದೆ. ದೈಹಿಕ ಸೌಂದರ್ಯದ ಬಗ್ಗೆ ಗಮನ ಕೊಡದೆ ನಾನು ನನ್ನ ಸಮಯವನ್ನು ಆಂತರ್ಯದ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ವ್ಯಯಿಸಿದರೆ ನಾನು ಈ ಜಗತ್ತಿನಲ್ಲಿ ನನ್ನ ಕೈಲಾದಷ್ಟು ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರಬಹುದೆನಿಸುತ್ತದೆ.

ಆದ್ದರಿಂದ ನನಗೆ ನನ್ನ ಮುಖ ಹೇಗಿದೆ ಎಂಬುದಕ್ಕಿಂತ ಆ ಮುಖದ ಹಿಂದೆ ಇರುವ ನಗೆ ಮುಖ್ಯವಾಗಿದೆ. ಮುಂದೆ ಯಾರದರೂ ನನ್ನನ್ನು ನೋಡಿದರೆ ದಯವಿಟ್ಟು ನನಗೆ ಹಲೋ ಹೇಳಿ ನನ್ನನ್ನು ಮಾತನಾಡಿಸಿ. ನನ್ನ ಈ ಫೋಟೋಗೆ ಬಂದಿರುವ ಪಾಸಿಟಿವ್ ಮತ್ತು ನೆಗಟಿವ್, ಎರಡೂ ರೀತಿಯ ಪ್ರತಿಕ್ರಿಯೆಗಳಿಂದ ನಾನು ನನ್ನನ್ನಲ್ಲದೆ ಇತರರನ್ನೂ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದ್ದರಿಂದ ನಾನು ಎಲ್ಲರಿಗೂ ಆಭಾರಿ ಆಗಿದ್ದೇನೆ.

ಅಂದಹಾಗೆ ನಾನು ಫೋಟೊದಲ್ಲಿ ತೊಟ್ಟಿರುವ ಯೋಗಾ ಪ್ಯಾಂಟ್‌ಗಳು ತುಂಬಾ ಆರಾಮಾಗಿರುತ್ತವೆ. ಹಾಗೆಯೇ ನಾನು ತೊಟ್ಟಿರುವ `ಬೆಟ್ಟರ್ ಟುಗೆದರ್’ ಎಂಬ ಬರಹ ಇರುವ ಟೀಶರ್ಟ್ ಒಂದು ಅಂತರ್‌ಧರ್ಮೀಯ ಯುವಕರ ಸಂಘಟನೆಯದ್ದು. ಕತೆಗಳನ್ನು ಹೇಳುವ ಮತ್ತು ಸಂವಾದಗಳನ್ನು ನಡೆಸುವ ಮೂಲಕ ವಿವಿಧ ಧರ್ಮಗಳ ನಡುವೆ ಸಾಮರಸ್ಯ ತರುವ ಉದ್ದೇಶ ಆ ಯುವ ಸಂಘಟನೆಯದ್ದು. ನನ್ನ ಬಗ್ಗೆ ಇದು ಇನ್ನಷ್ಟು ವಿವರಣೆ ನೀಡುತ್ತದೆಂದು ಇಲ್ಲಿ ಇದನ್ನು ಉಲ್ಲೇಖಿಸಿದ್ದೇನೆ.

“ನನ್ನ ಮಾತುಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ.’’

ಬಲ್‌ಪ್ರೀತ್ ಕೌರ್‌ಳ ಪ್ರತಿಕ್ರಿಯೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಗಲೇ ಆಕೆಯ ಫೋಟೋವನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ತಪ್ಪೊಪ್ಪಿಕೊಂಡ. ಆತ ಹೀಗೆ ಬರೆದ:

“ನಾನು ಬಲ್‌ಪ್ರೀತಳ ಫೋಟೊ ಹಾಕಿದ್ದು ತಮಾಷೆಯಾಗಿರಲಿಲ್ಲ ಎಂದು ನನಗೆ ಅರಿವಾಗಿದೆ. ನಾನು ಸಿಖ್ಖರ, ಬಲ್‌ಪ್ರೀತಳ ಮತ್ತು ಇತರರ ಕ್ಷಮೆ ಕೇಳುತ್ತೇನೆ. ಇತರರನ್ನು ಲೇವಡಿ ಮಾಡುವುದು ಹಲವರಿಗೆ ಸಂತೋಷ ಕೊಡಬಹುದು, ಆದರೆ ಆ ಲೇವಡಿಗೆ ಗುರಿಯಾಗುವವರನ್ನು ಅಗೌರವಿಸುತ್ತದೆ. ನಾನು ಮಾಡಿದ್ದು ಸಂಪೂರ್ಣವಾಗಿ ತಪ್ಪು ಎಂದು ನನಗೆ ಗೊತ್ತು.”

ಇದಾದ ನಂತರ ನಾನು ಸಿಖ್ಖ್ ಧರ್ಮದ ಬಗ್ಗೆ ಹೆಚ್ಚು ಓದಿಕೊಂಡಿದ್ದು ಅದು ನಿಜವಾಗಲೂ ಆಸಕ್ತಿದಾಯಕವಾಗಿದೆ. ಬಲ್‌ಪ್ರೀತ್ ಹೇಳುವಂತೆ ನಮ್ಮ ದೈಹಿಕ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುವುದಕ್ಕಿಂತ ನಾವೊಂದು ಉತ್ತಮವಾದ ಲೆಗಸಿಯನ್ನು ಬಿಟ್ಟುಹೋಗುವುದು ಮುಖ್ಯ.

ಬಲ್‌ಪ್ರೀತ್, ನಾನು ಈ ಕುರಿತು ಮುಕ್ತವಾಗಿ ಚಿಂತಿಸದ ವ್ಯಕ್ತಿಯಾಗಿದ್ದಕ್ಕೆ ನನ್ನನ್ನು ಕ್ಷಮಿಸು. ನೀನು ನನಗಿಂತ ಉತ್ತಮ ವ್ಯಕ್ತಿ ಅಗಿರುವೆ.

ಸಿಖ್ಖರೇ, ನಾನು ನಿಮ್ಮ ಜೀವನಕ್ರಮದ ಬಗ್ಗೆ ಮತ್ತು ನಿಮ್ಮ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡಿದ್ದಕ್ಕೆ ನಿಮ್ಮ ಕ್ಷಮೆ ಕೇಳುತ್ತೇನೆ. ಬಲ್‌ಪ್ರೀತ್ ತಾನು ನಂಬಿರುವ ಸಿದ್ಧಾಂತದಲ್ಲಿ ಇಟ್ಟುರುವ ನಂಬಿಕೆ ನನ್ನನ್ನು ಸ್ತಬ್ಧನನ್ನಾಗಿಸಿದೆ.

ಆತ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅಮೆರಿಕದ ಒಹೈಯೋ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ, ಮುಂದೆ ನ್ಯೂರೋ ಸರ್ಜನ್ ಆಗಬೇಕೆಂಬ ಗುರಿ ಹೊಂದಿರುವ ಬಲ್‌ಪ್ರೀತಳಿಗೆ ವೈಯಕ್ತಿಕವಾಗಿ ಈ ಮೇಲ್ ಮೂಲಕ ಕ್ಷಮೆ ಕೋರಿದ. ಅದನ್ನು ಓದಿ ಬಲ್‌ಪ್ರೀತ್ ಎಷ್ಟು ದಂಗಾದಳೆಂದರೆ “ಆತ ಪ್ರಾಮಾಣಿಕವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಿಜವಾಗಲೂ ಹೇಳಬೇಕೆಂದರೆ ನನಗೂ ಆ ರೀತಿ ಕ್ಷಮೆ ಕೇಳುವುದು ಕಷ್ಟವಾಗುತ್ತಿತ್ತೇನೋ’’ ಎಂದಿದ್ದಾಳೆ. ಹಾಗೆ ಹೇಳುವ ಮೂಲಕ ಬಲ್‌ಪ್ರೀತ್ ನಿಜವಾಗಲೂ ಎಷ್ಟು ಧಾರಾಳ ಮನಸ್ಸಿನವಳು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾಳೆ.

ಸದ್ಯದಲ್ಲೇ ಆತ ಓಹೈಯೋಗೆ ಬಂದು ಆಕೆಯನ್ನು ಮುಖತಃ ಭೇಟಿ ಆಗಿ ಕ್ಷಮೆ ಕೋರಲೂ ಸಿದ್ಧ ಎಂದಿದ್ದಾನೆ. ಅದಕ್ಕೆ ಬಲ್‌ಪ್ರೀತ್ “ಅದರ ಅಗತ್ಯವಿಲ್ಲ. ಆದರೆ ನಾವು ಭೇಟಿ ಆದರೆ ಈ ಬಾರಿ ಜೊತೆಯಾಗಿ ಫೋಟೋ ತೆಗೆಸಿಕೊಳ್ಳೋಣ’’ ಎಂದು ತಮಾಷೆ ಮಾಡಿದ್ದಾಳೆ!

ಇತರರ ಧಾರ್ಮಿಕ ನಂಬಿಕೆಯ ಬಗ್ಗೆ, ಉಡುಗೆತೊಡುಗೆಗಳ ಬಗ್ಗೆ, ದೈಹಿಕ ಸೌಂದರ್ಯದ ಬಗ್ಗೆ ಪೂರ್ವಾಗ್ರಹಗಳನ್ನು ಹೊಂದಿರುವವರು ಅವುಗಳನ್ನು ಲೇವಡಿ ಮಾಡುವುದು ಸಾಮಾನ್ಯ. ಆದರೆ ಬಲ್‌ಪ್ರೀತ್ ಎಂಬ ಯುವತಿ ತನ್ನ ತಾಳ್ಮೆ, ದಿಟ್ಟತನ ಮತ್ತು ಸೂಕ್ಷ್ಮತೆಯಿಂದ ಅಂತಹ ಪೂರ್ವಾಗ್ರಹಗಳನ್ನು ಮನಮುಟ್ಟುವಂತೆ ತೊಡೆದುಹಾಕಿದ್ದಾಳೆ. ಇದು ಇತರರಿಗೆ ಮೇಲುಪಂಕ್ತಿ ಆಗಲಿ ಎಂಬ ಆಶಯ ನನ್ನದು…

ಗೌರಿ ಲಂಕೇಶ್‌

ಅಕ್ಟೋಬರ್ 17, 2012


ಇದನ್ನೂ ಓದಿ: ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...