Homeಗೌರಿ ಕಣ್ಣೋಟದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ದೈಹಿಕ ಸೌಂದರ್ಯದ ಬಗ್ಗೆ ಗಮನ ಕೊಡದೆ ನಾನು ನನ್ನ ಸಮಯವನ್ನು ಆಂತರ್ಯದ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ವ್ಯಯಿಸಿದರೆ ನಾನು ಈ ಜಗತ್ತಿನಲ್ಲಿ ನನ್ನ ಕೈಲಾದಷ್ಟು ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರಬಹುದೆನಿಸುತ್ತದೆ.

- Advertisement -
- Advertisement -

ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಯಾರೋ ಒಬ್ಬ ಓರ್ವ ಯುವತಿಯ ಫೋಟೊ ಒಂದನ್ನು ಹಾಕಿ “ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದೆಂದು ನನಗೆ ಗೊತ್ತಾಗಲಿಲ್ಲ’’ ಎಂದು ಅದರಡಿ ಬರೆದಿದ್ದ. ಆತನ ಗೊಂದಲಕ್ಕೆ ಕಾರಣ ಆ ಹುಡುಗಿಯ ಮುಖದ ಮೇಲಿದ್ದ ದಟ್ಟವಾದ ಕೂದಲು. ಸೌಂದರ್ಯ ಕುರಿತು ಸಾಮಾನ್ಯ ಜನರ ಅಭಿಪ್ರಾಯ ಮತ್ತು ಪುರುಷರ ನಿರೀಕ್ಷೆಗೆ ಬೆಲೆ ಕೊಡದ ಆ ಯುವತಿ ತನ್ನ ಸಿಖ್ ಧರ್ಮದ ನಂಬಿಕೆಯಂತೆ ತನ್ನ ಮುಖದ ಮೇಲಿರುವ ಕೂದಲನ್ನು ಬೋಳಿಸಿಕೊಂಡಿರಲಿಲ್ಲ. ಸಹಜವಾಗಿಯೇ ಇದು ಆ ವ್ಯಕ್ತಿಗೆ ವಿಚಿತ್ರವಾಗಿ ಕಂಡಿತ್ತು.

ಆತ ಈ ಫೋಟೋವನ್ನು ಹಾಕಿದ ನಂತರ ಅದರಲ್ಲಿರುವ ಯುವತಿಯ ಧಾರ್ಮಿಕ ನಂಬಿಕೆಯನ್ನು ಬೆಂಬಲಿಸುತ್ತ ಮತ್ತು ಅದನ್ನು ಲೇವಡಿ ಮಾಡಿದ ವ್ಯಕ್ತಿಯ ಅಸೂಕ್ಷ್ಮತೆಯನ್ನು ಖಂಡಿಸುತ್ತಾ ಹಲವಾರು ಪ್ರತಿಕ್ರಿಯೆಗಳು ಬಂದವು. ಹಾಗೆಯೇ ಆಕೆಯನ್ನು ತಮಾಷೆ ಮಾಡಿದವರಿಗೂ ಕೊರತೆ ಇರಲಿಲ್ಲ. ಆಕೆಯ ಸುತ್ತ ಎಲ್ಲ ತರಹದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗಲೇ ಆ ಯುವತಿಯೇ ತನ್ನ ಅಭಿಪ್ರಾಯವನ್ನು ದಾಖಲಿಸಿದಳು. ಆಕೆ ಅದೆಷ್ಟು ಸೂಕ್ಷ್ಮಮನಸ್ಸಿನ, ದೃಢ ನಂಬಿಕೆಯ, ಸಂವೇದನಾಶೀಲ ಯುವತಿ ಎಂದರೆ ಆಕೆಯನ್ನು ಎಲ್ಲರೂ ಹಾಡಿಹೊಗಳಿದರು.

ಆ ಯುವತಿಯ ಪ್ರತಿಕ್ರಿಯೆ ಹೀಗಿತ್ತು:

“ಹಾಯ್ ಗೆಳೆಯರೆ. ನಾನು ಬಲ್‌ಪ್ರೀತ್ ಕೌರ್. ಆ ಫೋಟೋದಲ್ಲಿರುವ ಹುಡುಗಿ. ನನ್ನ ಸ್ನೇಹಿತರು ಫೇಸ್ಸ್ಬುಕ್‌ನಲ್ಲಿ ಈ ಫೋಟೋದ ಬಗ್ಗೆ ನನ್ನ ಗಮನ ಸೆಳೆಯುವ ತನಕ ಈ ಕುರಿತು ನನಗೆ ಗೊತ್ತಿರಲಿಲ್ಲ. ಈ ನನ್ನ ಫೋಟೊವನ್ನು ತೆಗೆದವರು ನನ್ನನ್ನು ಕೇಳಿದ್ದರೆ ನಾನು ಸ್ಮೈಲ್‌ ಮಾಡಿ ಸಹಕರಿಸುತ್ತಿದ್ದೆ. ಈ ಫೋಟೋಗೆ ಬಂದಿರುವ ನಕಾರಾತ್ಮಕ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಓದಿ ನನಗೆ ಮುಜುಗರವಾಗಲಿ, ಅವಮಾನವಾಗಲಿ ಆಗಿಲ್ಲ. ಯಾಕೆಂದರೆ ನಾನು ಇರುವುದೇ ಹೀಗೆ. ಹೌದು, ನಾನು ಧರ್ಮದ ದೀಕ್ಷೆ ಪಡೆದಿರುವ, ಮುಖದ ಮೇಲೆ ಕೂದಲನ್ನು ಹೊಂದಿರುವ ಸಿಖ್ ಮಹಿಳೆ. ನಾನು ಇತರೆ ಮಹಿಳೆಯರಿಗಿಂತ ಭಿನ್ನವಾಗಿ ಕಾಣುವುದರಿಂದ ನನ್ನ ಲಿಂಗದ ಬಗ್ಗೆ ಹಲವರಿಗೆ ಅನುಮಾನ ಮೂಡುತ್ತದೆ ಎಂಬುದನ್ನು ನಾನು ಬಲ್ಲೆ. ಅದರೆ ಧರ್ಮಧೀಕ್ಷೆ ಪಡೆದಿರುವ ಸಿಖ್ಖರು ಈ ದೇಹವನ್ನು ದೇವರೇ ನಮಗೆ ಕೊಟ್ಟಿದ್ದೆಂದೂ, ಈ ದೇಹ ಪವಿತ್ರವೆಂದೂ (ಒಂದು ರೀತಿಯಲ್ಲಿ ಇದು ಲಿಂಗರಹಿತ ದೇಹ), ಇದನ್ನು ದೇವರು ಕೊಟ್ಟಂತೆಯೇ ಕಾಪಾಡಿಕೊಳ್ಳಬೇಕೆಂದೂ ನಂಬಿದ್ದೇವೆ. ಹೇಗೆ ಮಕ್ಕಳು ತಮಗೆ ಜನ್ಮ ನೀಡಿದ ತಂದೆ/ತಾಯಿಯನ್ನು ತಿರಸ್ಕರಿಸುವುದಿಲ್ಲವೋ, ಹಾಗೆಯೇ ಸಿಖ್ಖರು ದೇವರು ಕೊಟ್ಟಿರುವ ದೇಹವನ್ನು ತಿರಸ್ಕರಿಸುವುದಿಲ್ಲ. “ನಾನು, ನನ್ನದು’’ ಎಂಬ ಭಾವನೆಯಲ್ಲಿ ನಮ್ಮ ದೇಹವನ್ನು ಒಂದು ಪರಿಕರದಂತೆ ಬದಲಾಯಿಸುತ್ತಾ ಹೋದರೆ ನಾವು ನಮ್ಮ ಒಳಗೇ ನಮ್ಮ ಅಹಂ ಮತ್ತು ದೈವತ್ವದ ನಡುವೆ ಬಿರುಕನ್ನು ಮೂಡಿಸಿಕೊಳ್ಳುತ್ತೇವೆ. ಸೌಂದರ್ಯದ ಬಗ್ಗೆ ಸಮಾಜದ ಪರಿಕಲ್ಪನೆಯನ್ನು ಮೀರಿ ನಿಲ್ಲುವ ಮೂಲಕ ನಾನು ನನ್ನ ಕೃತ್ಯಗಳ ಬಗ್ಗೆ ಹೆಚ್ಚು ಗಮನಹರಿಸಲು ನನಗೆ ಸಾಧ್ಯ ಎಂದು ನಾನು ನಂಬಿದ್ದೇನೆ. ನನ್ನ ಚಿಂತನೆ, ವರ್ತನೆ ಮತ್ತು ಕೃತ್ಯಗಳು ನನ್ನ ಈ ದೇಹದ ವಿನ್ಯಾಸಕ್ಕಿಂತ ಮೌಲ್ಯಯುತವಾದದ್ದೆಂದು ಭಾವಿಸಿದ್ದೇನೆ”.

ಎಷ್ಟೇ ಆದರೂ ಕೊನೆಗೂ ಈ ದೇಹ ಬೂದಿ ಆಗುವುದರಿಂದ ಇದರ ಬಗ್ಗೆ ಯಾಕಷ್ಟು ಚಡಪಡಿಸಬೇಕು? ನಾನು ಸತ್ತ ನಂತರ ಯಾರೂ ನಾನು ಹೇಗಿದ್ದೆ ಎಂದು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಅಷ್ಟೇ ಯಾಕೆ, ನನ್ನ ಮಕ್ಕಳೂ, ನನ್ನ ದನಿಯನ್ನೂ ಮರೆತುಬಿಡುತ್ತಾರೆ. ಕಾಲಕ್ರಮೇಣ ನಮ್ಮ ಶಾರೀರಿಕ ನೆನಪುಗಳೂ ಅಳಿಸಿಹೋಗುತ್ತವೆ. ಬದಲಾಗಿ ನನ್ನ ಪ್ರಭಾವ ಮತ್ತು ನನ್ನ ಲೆಗಸಿ ಉಳಿದಿರುತ್ತದೆ. ದೈಹಿಕ ಸೌಂದರ್ಯದ ಬಗ್ಗೆ ಗಮನ ಕೊಡದೆ ನಾನು ನನ್ನ ಸಮಯವನ್ನು ಆಂತರ್ಯದ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ವ್ಯಯಿಸಿದರೆ ನಾನು ಈ ಜಗತ್ತಿನಲ್ಲಿ ನನ್ನ ಕೈಲಾದಷ್ಟು ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರಬಹುದೆನಿಸುತ್ತದೆ.

ಆದ್ದರಿಂದ ನನಗೆ ನನ್ನ ಮುಖ ಹೇಗಿದೆ ಎಂಬುದಕ್ಕಿಂತ ಆ ಮುಖದ ಹಿಂದೆ ಇರುವ ನಗೆ ಮುಖ್ಯವಾಗಿದೆ. ಮುಂದೆ ಯಾರದರೂ ನನ್ನನ್ನು ನೋಡಿದರೆ ದಯವಿಟ್ಟು ನನಗೆ ಹಲೋ ಹೇಳಿ ನನ್ನನ್ನು ಮಾತನಾಡಿಸಿ. ನನ್ನ ಈ ಫೋಟೋಗೆ ಬಂದಿರುವ ಪಾಸಿಟಿವ್ ಮತ್ತು ನೆಗಟಿವ್, ಎರಡೂ ರೀತಿಯ ಪ್ರತಿಕ್ರಿಯೆಗಳಿಂದ ನಾನು ನನ್ನನ್ನಲ್ಲದೆ ಇತರರನ್ನೂ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದ್ದರಿಂದ ನಾನು ಎಲ್ಲರಿಗೂ ಆಭಾರಿ ಆಗಿದ್ದೇನೆ.

ಅಂದಹಾಗೆ ನಾನು ಫೋಟೊದಲ್ಲಿ ತೊಟ್ಟಿರುವ ಯೋಗಾ ಪ್ಯಾಂಟ್‌ಗಳು ತುಂಬಾ ಆರಾಮಾಗಿರುತ್ತವೆ. ಹಾಗೆಯೇ ನಾನು ತೊಟ್ಟಿರುವ `ಬೆಟ್ಟರ್ ಟುಗೆದರ್’ ಎಂಬ ಬರಹ ಇರುವ ಟೀಶರ್ಟ್ ಒಂದು ಅಂತರ್‌ಧರ್ಮೀಯ ಯುವಕರ ಸಂಘಟನೆಯದ್ದು. ಕತೆಗಳನ್ನು ಹೇಳುವ ಮತ್ತು ಸಂವಾದಗಳನ್ನು ನಡೆಸುವ ಮೂಲಕ ವಿವಿಧ ಧರ್ಮಗಳ ನಡುವೆ ಸಾಮರಸ್ಯ ತರುವ ಉದ್ದೇಶ ಆ ಯುವ ಸಂಘಟನೆಯದ್ದು. ನನ್ನ ಬಗ್ಗೆ ಇದು ಇನ್ನಷ್ಟು ವಿವರಣೆ ನೀಡುತ್ತದೆಂದು ಇಲ್ಲಿ ಇದನ್ನು ಉಲ್ಲೇಖಿಸಿದ್ದೇನೆ.

“ನನ್ನ ಮಾತುಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ.’’

ಬಲ್‌ಪ್ರೀತ್ ಕೌರ್‌ಳ ಪ್ರತಿಕ್ರಿಯೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಗಲೇ ಆಕೆಯ ಫೋಟೋವನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ತಪ್ಪೊಪ್ಪಿಕೊಂಡ. ಆತ ಹೀಗೆ ಬರೆದ:

“ನಾನು ಬಲ್‌ಪ್ರೀತಳ ಫೋಟೊ ಹಾಕಿದ್ದು ತಮಾಷೆಯಾಗಿರಲಿಲ್ಲ ಎಂದು ನನಗೆ ಅರಿವಾಗಿದೆ. ನಾನು ಸಿಖ್ಖರ, ಬಲ್‌ಪ್ರೀತಳ ಮತ್ತು ಇತರರ ಕ್ಷಮೆ ಕೇಳುತ್ತೇನೆ. ಇತರರನ್ನು ಲೇವಡಿ ಮಾಡುವುದು ಹಲವರಿಗೆ ಸಂತೋಷ ಕೊಡಬಹುದು, ಆದರೆ ಆ ಲೇವಡಿಗೆ ಗುರಿಯಾಗುವವರನ್ನು ಅಗೌರವಿಸುತ್ತದೆ. ನಾನು ಮಾಡಿದ್ದು ಸಂಪೂರ್ಣವಾಗಿ ತಪ್ಪು ಎಂದು ನನಗೆ ಗೊತ್ತು.”

ಇದಾದ ನಂತರ ನಾನು ಸಿಖ್ಖ್ ಧರ್ಮದ ಬಗ್ಗೆ ಹೆಚ್ಚು ಓದಿಕೊಂಡಿದ್ದು ಅದು ನಿಜವಾಗಲೂ ಆಸಕ್ತಿದಾಯಕವಾಗಿದೆ. ಬಲ್‌ಪ್ರೀತ್ ಹೇಳುವಂತೆ ನಮ್ಮ ದೈಹಿಕ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುವುದಕ್ಕಿಂತ ನಾವೊಂದು ಉತ್ತಮವಾದ ಲೆಗಸಿಯನ್ನು ಬಿಟ್ಟುಹೋಗುವುದು ಮುಖ್ಯ.

ಬಲ್‌ಪ್ರೀತ್, ನಾನು ಈ ಕುರಿತು ಮುಕ್ತವಾಗಿ ಚಿಂತಿಸದ ವ್ಯಕ್ತಿಯಾಗಿದ್ದಕ್ಕೆ ನನ್ನನ್ನು ಕ್ಷಮಿಸು. ನೀನು ನನಗಿಂತ ಉತ್ತಮ ವ್ಯಕ್ತಿ ಅಗಿರುವೆ.

ಸಿಖ್ಖರೇ, ನಾನು ನಿಮ್ಮ ಜೀವನಕ್ರಮದ ಬಗ್ಗೆ ಮತ್ತು ನಿಮ್ಮ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡಿದ್ದಕ್ಕೆ ನಿಮ್ಮ ಕ್ಷಮೆ ಕೇಳುತ್ತೇನೆ. ಬಲ್‌ಪ್ರೀತ್ ತಾನು ನಂಬಿರುವ ಸಿದ್ಧಾಂತದಲ್ಲಿ ಇಟ್ಟುರುವ ನಂಬಿಕೆ ನನ್ನನ್ನು ಸ್ತಬ್ಧನನ್ನಾಗಿಸಿದೆ.

ಆತ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅಮೆರಿಕದ ಒಹೈಯೋ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ, ಮುಂದೆ ನ್ಯೂರೋ ಸರ್ಜನ್ ಆಗಬೇಕೆಂಬ ಗುರಿ ಹೊಂದಿರುವ ಬಲ್‌ಪ್ರೀತಳಿಗೆ ವೈಯಕ್ತಿಕವಾಗಿ ಈ ಮೇಲ್ ಮೂಲಕ ಕ್ಷಮೆ ಕೋರಿದ. ಅದನ್ನು ಓದಿ ಬಲ್‌ಪ್ರೀತ್ ಎಷ್ಟು ದಂಗಾದಳೆಂದರೆ “ಆತ ಪ್ರಾಮಾಣಿಕವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಿಜವಾಗಲೂ ಹೇಳಬೇಕೆಂದರೆ ನನಗೂ ಆ ರೀತಿ ಕ್ಷಮೆ ಕೇಳುವುದು ಕಷ್ಟವಾಗುತ್ತಿತ್ತೇನೋ’’ ಎಂದಿದ್ದಾಳೆ. ಹಾಗೆ ಹೇಳುವ ಮೂಲಕ ಬಲ್‌ಪ್ರೀತ್ ನಿಜವಾಗಲೂ ಎಷ್ಟು ಧಾರಾಳ ಮನಸ್ಸಿನವಳು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾಳೆ.

ಸದ್ಯದಲ್ಲೇ ಆತ ಓಹೈಯೋಗೆ ಬಂದು ಆಕೆಯನ್ನು ಮುಖತಃ ಭೇಟಿ ಆಗಿ ಕ್ಷಮೆ ಕೋರಲೂ ಸಿದ್ಧ ಎಂದಿದ್ದಾನೆ. ಅದಕ್ಕೆ ಬಲ್‌ಪ್ರೀತ್ “ಅದರ ಅಗತ್ಯವಿಲ್ಲ. ಆದರೆ ನಾವು ಭೇಟಿ ಆದರೆ ಈ ಬಾರಿ ಜೊತೆಯಾಗಿ ಫೋಟೋ ತೆಗೆಸಿಕೊಳ್ಳೋಣ’’ ಎಂದು ತಮಾಷೆ ಮಾಡಿದ್ದಾಳೆ!

ಇತರರ ಧಾರ್ಮಿಕ ನಂಬಿಕೆಯ ಬಗ್ಗೆ, ಉಡುಗೆತೊಡುಗೆಗಳ ಬಗ್ಗೆ, ದೈಹಿಕ ಸೌಂದರ್ಯದ ಬಗ್ಗೆ ಪೂರ್ವಾಗ್ರಹಗಳನ್ನು ಹೊಂದಿರುವವರು ಅವುಗಳನ್ನು ಲೇವಡಿ ಮಾಡುವುದು ಸಾಮಾನ್ಯ. ಆದರೆ ಬಲ್‌ಪ್ರೀತ್ ಎಂಬ ಯುವತಿ ತನ್ನ ತಾಳ್ಮೆ, ದಿಟ್ಟತನ ಮತ್ತು ಸೂಕ್ಷ್ಮತೆಯಿಂದ ಅಂತಹ ಪೂರ್ವಾಗ್ರಹಗಳನ್ನು ಮನಮುಟ್ಟುವಂತೆ ತೊಡೆದುಹಾಕಿದ್ದಾಳೆ. ಇದು ಇತರರಿಗೆ ಮೇಲುಪಂಕ್ತಿ ಆಗಲಿ ಎಂಬ ಆಶಯ ನನ್ನದು…

ಗೌರಿ ಲಂಕೇಶ್‌

ಅಕ್ಟೋಬರ್ 17, 2012


ಇದನ್ನೂ ಓದಿ: ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...