ಅಯೋಧ್ಯೆಯಲ್ಲಿ ನಿನ್ನೆ ರಾಮಮಂದಿರ ಉದ್ಘಾಟನೆಯಾಗಿದೆ. ದೇಶದ ವಿವಿಧೆಡೆಯಿಂದ ರಾಮನ ಭಕ್ತರ ದಂಡು ಅಯೋಧ್ಯೆಗೆ ತೆರಳಿದ್ದಾರೆ. ಇದೀಗ ರಾಮ ಮಂದಿರದಲ್ಲಿ ಭಕ್ತಾದಿಗಳ ಭಾರೀ ನೂಕುನುಗ್ಗಲಿನ ನಡುವೆ ಜೇಬುಗಳ್ಳರು ಸಕ್ರಿಯರಾಗಿರುವ ಬಗ್ಗೆ ಎನ್ಡಿಟಿವಿ ವರದಿ ಮಾಡಿದೆ.
ದೇವಸ್ಥಾನದ ದ್ವಾರಗಳಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಅದನ್ನೇ ಬಳಸಿಕೊಂಡ ಜೇಬುಗಳ್ಳರು, ಕೈಚೀಲ ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದಾರೆ.
ಇಂದು ರಾಮಮಂದಿರವನ್ನು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕೊಟ್ಟ ಹಿನ್ನೆಲೆ ಸಾವಿರಾರು ರಾಮಭಕ್ತರು ಅಯೋಧ್ಯೆಗೆ ತಲುಪಿದ್ದಾರೆ. ನಿನ್ನೆ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ನಡೆದಿತ್ತು. ಇಂದು ಬೆಳಗ್ಗೆ 7 ಗಂಟೆಯಿಂದ ಜನರಿಗೆ ರಾಮಮಂದಿರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಪೂರ್ಣಿಮಾ ಎಂಬವರು ಅಯೋಧ್ಯೆಗೆ ರಾಮಮಂದಿರ ವೀಕ್ಷಣೆಗೆ ಬಂದಿದ್ದರು. ಭಕ್ತಾದಿಗಳ ಸರತಿ ಸಾಲುಗಳ ಮೂಲಕ ಸಾಗುತ್ತಿದ್ದರು. ಆ ಬಳಿಕ ಅವರು ಚೀಲವನ್ನು ಪರಿಶೀಲಿಸಿದಾಗ ಬ್ಲೇಡ್ನಿಂದ ಬ್ಯಾಗ್ನ್ನು ಕತ್ತರಿಸಿ ನಗದು ಮತ್ತು ಇತರ ವಸ್ತುಗಳು ಕಳ್ಳತನ ಮಾಡಲಾಗಿತ್ತು. ಭಕ್ತರ ಭಾರೀ ನೂಕುನುಗ್ಗಲು ಹಿನ್ನೆಲೆ ನಿಯಂತ್ರಿಸಲು ಆಡಳಿತಕ್ಕೆ ಕಷ್ಟವಾಗಬಹುದು. ಆದರೆ ಕಳ್ಳರಿಂದ ಭಕ್ತರನ್ನು ಉಳಿಸಬೇಕು ಎಂದು ಅವರು ಹೇಳಿದ್ದಾರೆ. ತಮ್ಮ ಕೈಚೀಲದಲ್ಲಿ ಬಿರುಕು ಬಿಟ್ಟಿರುವುದನ್ನು ತೋರಿಸಿ ಜನರ ಗುಂಪಿನಲ್ಲಿ ಚೀಲವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದೆ, ಆದರೆ ಜೇಬುಗಳ್ಳರು ತಮ್ಮ ಕೆಲಸ ಮಾಡಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇದಲ್ಲದೆ ಅಹಮದಾಬಾದ್ ನಿವಾಸಿಯಾದ ಪ್ರಾಪ್ತಿ ಅಯೋಧ್ಯೆಗೆ ಬಂದಿದ್ದರು. ಆಕೆಯ ಬ್ಯಾಗ್ನ ಜಿಪ್ ತೆರೆದು ಆಕೆಯ ಆಧಾರ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಇತರೆ ದಾಖಲೆಗಳನ್ನು ಕದ್ದೊಯ್ದಿದ್ದಾರೆ. ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಹುದೆಂಬ ಭಯ ಈಗ ಆಕೆಗೆ ಕಾಡುತ್ತಿದೆ. ನಾನು ನನ್ನ ಬ್ಯಾಗ್ನ್ನು ಎಚ್ಚರಿಕೆಯಿಂದ ಹಿಡಿದುಕೊಂಡಿದ್ದೆ. ಅವರು ಜಿಪ್ ಹೇಗೆ ತೆರೆದು ದಾಖಲೆಗಳನ್ನು ತೆಗೆದುಕೊಂಡರು ಎಂಬುದರ ಬಗ್ಗೆ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಜೇಬುಗಳ್ಳರ ಕೆಂಗಣ್ಣಿಗೆ ಗುರಿಯಾಗಿ ಹಣ ಮತ್ತು ಇತರ ವಸ್ತುಗಳನ್ನು ಹಲವಾರು ಯಾತ್ರಾರ್ಥಿಗಳು ಕಳೆದುಕೊಂಡಿದ್ದಾರೆ. ನಗರದ ಹೊರಗಿನಿಂದ ಬಂದಿರುವ ಅಪರಾಧಿಗಳ ತಂಡ ಕಳ್ಳತನದ ಹಿಂದೆ ಇರಬಹುದೆಂದು ಸ್ಥಳೀಯ ನಿವಾಸಿಗಳು ಶಂಕಿಸಿದ್ದಾರೆ.
ನಾವು ಜನವರಿ 16ರಿಂದ ಅಯೋಧ್ಯೆಯಲ್ಲಿದ್ದೇವೆ. ಈ ಕಳ್ಳರು ಅಯೋಧ್ಯೆಯವರಲ್ಲ. ನಾವು ಇಲ್ಲಿ ಭೇಟಿಯಾದ ಆಟೋ ಚಾಲಕರು, ಬಸ್ ಚಾಲಕರು ಮತ್ತು ಕ್ಯಾಬ್ ಡ್ರೈವರ್ಗಳು ತುಂಬಾ ಪ್ರಾಮಾಣಿಕರು. ನಾವು ನಮ್ಮ ಲಗೇಜ್ಗಳನ್ನು ಸಹ ಅವರ ಬಳಿ ಬಿಟ್ಟು ಹೋಗಿದ್ದೆವು, ಆದರೆ ಯಾವುದೇ ವಸ್ತು ಕಾಣೆಯಾಗಲಿಲ್ಲ. ಜೇಬುಗಳ್ಳರು ಇಲ್ಲಿಂದ ಬಂದವರಲ್ಲ, ಭಕ್ತಾದಿಗಳು ಸರಿಯಾದ ಸರತಿ ಸಾಲಿನಲ್ಲಿ ದರ್ಶನಕ್ಕೆ ತೆರಳಲು ಮತ್ತು ಅಂತಹ ಘಟನೆಗಳನ್ನು ತಡೆಯಲು ದೇವಸ್ಥಾನದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕೆಂದು ಕೆಲವರು ಒತ್ತಾಯಿಸಿದ್ದಾರೆ.
ಆಂಧ್ರಪ್ರದೇಶದ ಕಲ್ಯಾಣ್ ಎಂಬಾತನ ಮೊಬೈಲ್ ಫೋನ್ ಕಳ್ಳತನ ಮಾಡಲಾಗಿದ್ದು, ರಾಮನ ದರ್ಶನಕ್ಕೆ ಬಂದವ ಮೊಬೈಲ್ ಕಳೆದುಕೊಂಡು ದೇವಸ್ಥಾನದ ಸಮೀಪವಿರುವ ಸೈಬರ್ ಸೆಂಟರ್ಗೆ ಭೇಟಿ ನೀಡಿ ಆನ್ಲೈನ್ ದೂರು ದಾಖಲಿಸಿದ್ದಾನೆ. ಕಳೆದ ಎರಡು ದಿನಗಳಿಂದ ಕಳ್ಳತನದ ದೂರುಗಳನ್ನು ದಾಖಲಿಸಲು ಕನಿಷ್ಠ 20 ಜನರು ತಮ್ಮ ಸೈಬರ್ಗೆ ಭೇಟಿ ನೀಡಿದ್ದಾರೆ ಎಂದು ಸೈಬರ್ ಮಾಲಕ ವಿನೋದ್ ತಿಳಿಸಿದ್ದಾರೆ. ನಗದು, ವ್ಯಾಲೆಟ್ಗಳು ಮತ್ತು ಸೆಲ್ಫೋನ್ಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳರ ತಂಡ ಜನರ ಗುಂಪನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಕೇರಳ: ರಾಮಮಂದಿರ ಉದ್ಘಾಟನೆ ದಿನ ಅನುಮತಿಯಿಲ್ಲದೆ ಶಾಲೆಗೆ ರಜೆ; ತನಿಖೆಗೆ ಆದೇಶ



Why you are not showing, Mumbai Meera road incident. Always against BJP. Why Karnataka CM openly telling Ten thousand crores for Muslims. Who’s Money he is giving. Why you are paper not comment